ಭಾವ ಭೈರಾಗಿ
“ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು” ಎಂದು ಹೇಳಿದ್ದ ಯೇಸು; ಆದರೆ ಇಂದು..!?
- ಹರ್ಷಕುಮಾರ್ ಕುಗ್ವೆ
“ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು” ಎಂದು ಯೇಸು ಹೇಳಿದ್ದ. ಆದರೆ ಇಂದು ನಾವು ಬದುಕಿರುವ ಸನ್ನಿವೇಶದಲ್ಲಿ ನಿಜವಾಗಿಯೂ ಅತ್ಯಂತ ಕಷ್ಟವಾಗಿರುವುದೇ ಇದು. ನಮಗೆ ನೆರೆಹೊರೆಯವರು ಮನುಷ್ಯರಾಗಿ ಕಾಣದೇ ಬೇರೆಯ ಧರ್ಮದವರಾಗಿ, ಬೇರೆಯ ಜಾತಿಯವರಾಗಿ, ಶತ್ರುಗಳಾಗಿ ಕಾಣುತ್ತಾರೆ. ಹೀಗಾಗಿ ಮನುಷ್ಯರನ್ನು ಮನುಷ್ಯರಾಗಿ ಪ್ರೀತಿಸುವ ಮನಸ್ಥಿತಿ ದಿನಕಳೆದಂತೆಯೂ ಕ್ಷೀಣವಾಗತೊಡಗಿದೆ. ಮಾನವೀಯತೆ ಎನ್ನುವುದೇ ದುಸ್ತರವಾಗಿದೆ.
ಈಗ ಸರ್ಕಾರ ಹೇಗಾದರೂ ಮಾಡಿ, ಮುಂಬಾಗಿಲಿನಿಂದ ಅಲ್ಲದಿದ್ದರೆ ಹಿಂಬಾಗಿಲಿನಿಂದಲಾದರೂ ಜಾರಿಗೊಳಿಸಲು ಉದ್ದೇಶಿಸಿರುವ “ಪೌರತ್ವ” ಕಾನೂನು “ನೆರೆಹೊರೆಯವರನ್ನು ದ್ವೇಷಿಸಿ” ಎನ್ನುತ್ತದೆ.
ಇವನು ಪಾಕಿಸ್ತಾನಿ ಇರಬಹುದೇ, ಬಾಂಗ್ಲಾದೇಶಿ ಇರಬಹುದೇ ಎಂಬ ಅನುಮಾನದಲ್ಲಿ ಭೀತಿಯಿಂದ ಬದುಕುವಂತೆ ಮಾಡುತ್ತದೆ. ಅಥವಾ ಇವನು ನನ್ನ ಧರ್ಮದ ಮೇಲೆ ಸವಾರಿ ಮಾಡುತ್ತಾನೆ ಎಂಬ ಶಾಶ್ವತ ಪೂರ್ವಗ್ರಹ ಬಿತ್ತಲಿದೆ.
ನಾವು ನಮ್ಮ ದೇಶದ ಸಂವಿಧಾನದ ಬಗ್ಗೆ ಅತ್ಯಂತ ಹೆಮ್ಮೆ ಪಡಲು ಇರುವ ಕಾರಣ ಎಂದರೆ ಅದು “ನೆರೆಹೊರೆಯವರನ್ನು ನಮ್ಮಂತೆಯೇ ಪ್ರೀತಿಸುವ” ತಾತ್ವಿಕತೆಯನ್ನು ಹೊಂದಿರುವುದು. ಅದರಲ್ಲಿರುವ ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯದ ಅಂಶಗಳು ಇದೇ ತತ್ವ ಹೊಂದಿರುವಂತವು.
ಯೇಸು, ಬುದ್ಧ, ಪೈಗಂಬರ್, ಬಸವ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ಪೆರಿಯಾರ್, ಫುಲೆ ದಂಪತಿಗಳು… ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಇದೇ ತತ್ವವನ್ನೇ ಬೋಧಿಸಿದರು. ಆದರೆ ಅವರೆಲ್ಲರ ಆಶಯಗಳ ಸಮಾಜ ಇನ್ನೂ ಸೃಷ್ಟಿಯಾಗಲೇ ಇಲ್ಲ.
ದ್ವೇಷವನ್ನು ಬಿತ್ತಿ ದ್ವೇಷ ಹೆಮ್ಮರವನ್ನು ಬೆಳೆದು ಮತ್ತಷ್ಟು ದ್ವೇಷದ ಫಸಲನ್ನು ತೆಗೆಯಲು ತೊಡಗಿರುವವರ ಮಧ್ಯೆ ಪ್ರೀತಿಯ ಮಾತುಗಳಿಗೆ ಬೆಲೆಯೇ ಇಲ್ಲವಾಗಿದೆ. ಹೀಗಾಗಿ ಯೇಸು ಕ್ರಿಸ್ತನ “ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು” ಎಂಬ ವಾಣಿ ಇಂದು ಅರ್ಥ ಕಳೆದುಕೊಂಡಿದೆ.
ಆದರೂ, ಕನಿಷ್ಟ ಪಕ್ಷ ನಮ್ಮ ನಮ್ಮ ಮಟ್ಟಿಗಾದರೂ ನೆರೆಹೊರೆಯವರನ್ನು ಜಾತಿ-ಧರ್ಮ ಭೇಧಗಳನ್ನು ಮೀರಿ ಪ್ರೀತಿಸುವ ಮೂಲಕ ಯೇಸುವಿನಂತಹ ದಾರ್ಶನಿಕ ವ್ಯಕ್ತಿಗೆ ಗೌರವ ಸಲ್ಲಿಸೋಣ.
ಎಲ್ಲರಿಗೂ ಕ್ರಿಸ್ ಮಸ್ ಶುಭಾಶಯಗಳು
ಸುದ್ದಿದಿನ.ಕಾಂ|ವಾಟ್ಸಾಪ್|9980346243