ದಿನದ ಸುದ್ದಿ
ಹೆಚ್.ಐ.ವಿ/ಏಡ್ಸ್ ಜಾಗೃತಿ ಅಭಿಯಾನಕ್ಕೆ ಚಾಲನೆ | ಮಾರಕ ಖಾಯಿಲೆಯಿಂದ ಜಾಗೃತರಾಗಿ : ಪ್ರಾಂಶುಪಾಲ ಡಾ.ಸಿ.ಕೆ. ಕೊಟ್ರಪ್ಪ ಸಲಹೆ
ಸುದ್ದಿದಿನ, ದಾವಣಗೆರೆ : ವಿ.ಬಿ.ಪಿ ಫೌಂಡೇಶನ್ ಹಾಗೂ ಏಕಾಂತಗಿರಿ ಟ್ರಸ್ಟ್ ದಾವಣಗೆರೆ ಇವರ ಸಹಯೋಗದಲ್ಲಿ ಹೆಚ್.ಐ.ವಿ/ಏಡ್ಸ್ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ನಗರದ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೊಟ್ರಪ್ಪ ಸಿ.ಕೆ ಇವರು ಅಭಿಯಾನಕ್ಕೆ ಚಾಲನೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಂಶುಪಾಲರಾದ ಡಾ.ಕೊಟ್ರಪ್ಪನವರು ಹೆಚ್.ಐ.ವಿ ಇಂದು ಜಗತ್ತಿನಾದ್ಯಂತ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಇದರ ಬಗೆಗಿನ ಅರಿವು ಅತ್ಯಗತ್ಯ ಎಂಬುದಾಗಿ ತಿಳಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಹೆಚ್.ಗಿರಿಸ್ವಾಮಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಹೆಚ್.ಐ.ವಿ/ಏಡ್ಸ್ ಎಂಬುದು ಅತೀಸೂಕ್ಷö್ಮ ಹಾಗೂ ಅತೀ ಗಂಭೀರವಾದ ಖಾಯಿಲೆಯಾಗಿದ್ದು ವಿದ್ಯಾರ್ಥಿಗಳು ಇದರ ಬಗ್ಗೆ ಜಾಗೃತರಾಗಿರಬೇಕು ಎಂಬುದಾಗಿ ತಿಳಿಸಿದರು.
ವಿ.ಬಿ.ಪಿ ಫೌಂಡೆಶನ್ ಸಂಸ್ಥಾಪಕರಾದ ಶಿವಕುಮಾರ್ ಮೇಗಳಮನೆ ಅವರು ಹೆಚ್.ಐ.ವಿ/ಏಡ್ಸ್ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರವಾಗಿ ಮಾಹಿತಿ ನೀಡಿ, ಈ ಮಾರಕ ಖಾಯಿಲೆಯಿಂದ ಸಂರಕ್ಷಿಸಿಕೊಳ್ಳಲು ಇವರು ವೈಜ್ಞಾನಿಕ ಕ್ರಮಗಳ ಬಗ್ಗೆ ತಿಳಿಸಿದರು. ಹಾಗೆಯೇ ಹೆಚ್.ಐ.ವಿ/ಏಡ್ಸ್ ಇದು ಅಂಟು ರೋಗವಲ್ಲ. ಆದ್ದರಿಂದ ಹೆಚ್.ಐ.ವಿ ಬಾಧಿತರನ್ನು ಕೀಳಾಗಿ ನೋಡದಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಏಕಾಂತಗಿರಿ ಟ್ರಸ್ಟ್ನ ಕಾರ್ಯದರ್ಶಿಗಳಾದ ಡಾ.ಕೆ.ಎ.ಓಬಳೇಶ್, ಕಾಲೇಜಿನ ಸಿಬ್ಬಂದಿಗಳಾದ ಹಾಲೇಶ್.ಕೆ.ಎಂ, ಹೇಮಾವತಿ, ಉಷಾ, ಸವಿತಾ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243