ದಿನದ ಸುದ್ದಿ
ನನ್ನದು ಮಾನವ ಧರ್ಮ: ಪ್ರಕಾಶ್ ರೈ
ಸುದ್ದಿದಿನ,ದಾವಣಗೆರೆ: ನಾನು ಮಾನವ ಧರ್ಮಕ್ಕೆ ಸೇರಿದವನೇ ಹೊರತು ಇನ್ಯಾವ ಯಾವ ಜಾತಿ,ಮತ, ಧರ್ಮಕ್ಕೆ ಸೇರಿದವನಲ್ಲ ಎಂದು ನಟ ಹಾಗೂ ಜಸ್ಟ್ ಆಸ್ಕಿಂಗ್ ಅಂದೋಲನದ ಸಂಸ್ಥಾಪಕ ಪ್ರಕಾಶ್ ರೈ(ಮೇ 5) ಸುದ್ದಿಗೋಷ್ಟಿಯಲ್ಲಿ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನನ್ನು ಬಿಜೆಪಿ ವಿರೋಧಿ, ಬಲಪಂಥೀಯ, ಎಡಪಂಥೀಯ ಎಂದು ಗುರುತಿಸುತ್ತಾರೆ. ಆದರೆ ಅದು ಶುದ್ಧ ಸುಳ್ಳು. ಬಿಜೆಪಿ ಸಿದ್ಧಾಂತ ನನಗೆ ಜೀವ ವಿರೋಧಿ ಸಿದ್ಧಾಂತವಾಗಿರುವುದರಿಂಧ ನಾನದನ್ನು ವಿರೋಧಿಸುತ್ತೇನೆ. ಹಾಗಂತ ನಾನು ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿನ ಉಳುಕುಗಳನ್ನು ಹಾಗೂ ನನಗೆ ಸರಿಕಾಣದ ಸಿದ್ಧಾಂತಗಳನ್ನು ಪ್ರಶ್ನಿಸದೇ ಇರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿ ಯಾವ ಪಕ್ಷದ ವಕ್ತಾರನೂ ನಾನಲ್ಲ, ಪ್ರಸ್ತುತ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೇರಿದಂತೆ ಕಾಂಗ್ರೆಸ್,ಜೆಡಿಎಸ್ ಇನ್ನಿತರೆ ಪಕ್ಷದಲ್ಲಿ ನಿಮಗೆ ಉತ್ತಮ ವ್ಯಕ್ತಿ, ಹಾಗೂ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ, ನೆರವಾಗುವಂತ ಸ್ಪರ್ಧಿ ಇದ್ದರೆ ಅವರಿಗೆ ನಿಮ್ಮ ಮತಹಾಕಿ ಚುನಾಯಿಸಿ. ಸ್ವಾರ್ಥ,ಪ್ರತಿಷ್ಟೆ, ಧರ್ಮಾಧಾರಿತ,ಜಾತಿಯಾಧಾರಿತ ರಾಜಕೀಯ ಇಡೀ ಸಮುದಾಯವನ್ನು ಕಲುಷಿತಗೊಳಿಸಿದೆ.ಜನರಲ್ಲಿ ದ್ವೇಷ,ಅಸೂಯೆ ತುಂಬುವಂತಹ ಕೆಲಸಗಳು ನಡೆಯುತ್ತಿವೆ. ಇಂತಹ ಅನಿಷ್ಟಗಳು ಹೊಡೆದೋಡಿಸುವ ಕೆಲಸ ಆಗಬೇಕಿದೆ. ಆದ್ದರಿಂದ ನಾವುಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ, ಜಾತ್ಯಾತೀತವಾಗಿ, ಜನಪರ ಕೆಲಸಮಾಡುವ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ತುರ್ತು ನಮಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷವಾದರೂ, ಇದುವರೆಗೆ ಆಡಳಿತ ನಡೆಸಿರುವ ಪಕ್ಷಗಳು ಒಂದಲ್ಲಾ ಒಂದು ರೀತಿ ಜನರಿಗೆ ಮೋಸ ಮಾಡುತ್ತಲೇ ಬಂದಿವೆ. ಅವರನ್ನು ಒಡೆದು ದ್ವೇಷ ತುಂಬುತ್ತ, ಅಮಾಯಕರನ್ನ ಬಲಿ ತೆಗೆದುಕೊಂಡಿವೆ. ಇವೆಲ್ಲವೂ ಇನ್ನಾದರೂ ಸರಿಯಾಗಬೇಕಿದೆ. ಅದಕ್ಕೆ ನಾವೆಲ್ಲಾ ಮಾನವ ಧರ್ಮದವರೆಂದು ತಿಳಿದು ಒಮ್ಮತದ ದನಿಎತ್ತಬೇಕಿದೆ. ಇಲ್ಲದಿದ್ದರೆ ನಮ್ಮ ಸಮಸ್ಯೆಗೆ ಪರಿಹಾವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ಜನಸಾಮಾನ್ಯನಲ್ಲೂ ಪ್ರಶ್ನಿಸುವ ಮನೋಭಾನೆ ಬರಬೇಕು. ತಪ್ಪು ಮಾಡುವ ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕು. ಅಂತಹದೊಂದು ಮನಸ್ಥಿತಿಯನ್ನು ಸಜ್ಜುಗೊಳಿಸುವಲ್ಲಿ ನಮ್ಮ ‘ಜಸ್ಟ್ ಆಸ್ಕಿಂಗ್’ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401