ಬಹಿರಂಗ
ಸಂವಿಧಾನ ರಚನೆಯಲ್ಲಿ ಡಾ. ಬಾಬೂ ಜಗಜೀವನ್ ರಾಮ್ ಅವರ ಪಾತ್ರ
- ಡಾ. ಷಕೀಬ್ ಎಸ್ ಕಣದ್ಮನೆ, ನವಿಲೇಹಾಳ್
ಭಾರತೀಯ ಇತಿಹಾಸದಲ್ಲಿ ವರ್ಣಬೇಧ ನೀತಿಯನ್ನು ತಲತಲಾಂತರದಿಂದ ಕಾಣಬಹುದು, ರಾಜಮಹರಾಜರ ಕಾಲದಲ್ಲಿಯೂ ಕ್ರೂರ ವರ್ತನೆಗಳು, ನೀತಿ ನಿಯಮಗಳು, ದಲಿತ ಬಲಿತ, ಮೇಲು ಕೀಳುಗಳೆಂಬ ಪರಿಕಲ್ಪನೆಗಳು ನಮ್ಮ ನಾಡಿನಲ್ಲಿ ಕಾಣಬಹುದು. ಇದು ಬರಿಯ ರಾಜರ ಕಾಲದಲ್ಲಿ ಅಷ್ಟೇ ಅಲ್ಲದೆ, ಬ್ರಿಟಿಷರ ಆಡಳಿತದ ಕಾಲಘಟ್ಟದಲ್ಲಿಯೂ ಸಹ ಅಷ್ಟೇ ಕ್ರೂರತನವನ್ನು ಮೀರಿತ್ತು.
ದಲಿತರು ಓಣಿಯಲ್ಲಿ ಓಡಾಡುವಂತಿರಲಿಲ್ಲ, ಅವರು ನಡೆದಾಡಿದ ಜಾಗದಲ್ಲಿ ದಲಿತರು ಬಂದರೆ ಮೈಲಿಗೆ ಎಂದು ಮಡಿ ಮೈಲಿಗೆಗಳ ಕಾನ್ಸೆಪ್ಟ್ಗಳ ಆಧಾರದಲ್ಲಿ ದಲಿತರನ್ನು ಕೀಳಾಗಿ ನೋಡುವ ಕಾಲಘಟ್ಟದಲ್ಲಿ ದಲಿತರಿಗೆ ಶಿಕ್ಷಣ ವ್ಯವಸ್ಥೆಯಂತೂ ಕನಸಿನ ಮಾತು. ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಅಕ್ಷರ ಜ್ಞಾನಕ್ಕಾಗಿ ಹೋರಾಡಿದ ಅನೇಕ ದಲಿತ ಮುಖಂಡರುಗಳಲ್ಲಿ ನಮಗೆ ತಟ್ಟನೆ ನೆನಪಿಗೆ ಬರುವುದು ಡಾ. ಬಿ.ಆರ್. ಅಂಬೇಡ್ಕರ್. ಇವರ ಹೋರಾಟ ಅಷ್ಟಿಷ್ಟಲ್ಲ, ಹಾಗೇ ಇವರ ಸಮಕಾಲೀನರಾದ ಬಿಹಾರ ಮೂಲದ ಡಾ. ಬಾಬೂ ಜಗಜೀವನ್ ರಾಮ್ ಎಂಬುವರು ಕೂಡ ದಲಿತರ ಧನಿಯಾಗಿ, ಧಮನೀತರ ಪರವಾಗಿ ಸೆಟೆದೆದ್ದು ನಿಂತ ಧೀಮಂತ ರಾಜಕಾರಣಿಗಳಲ್ಲಿ ಇವರು ಮೊದಲಿಗರು.
ಡಾ. ಬಾಬೂ ಜಗಜೀವನರಾಮರು ಬಿಹಾರದ ಚಾಂದ್ವಾ ಗ್ರಾಮದಲ್ಲಿ ಏಪ್ರಿಲ್ 5,1908 ರಂದು ಭಾರತೀಯ ಜಾತಿ ವ್ಯವಸ್ಥೆಯ ಚಮರ್ ಜಾತಿಯಲ್ಲಿ ಜನಿಸಿದರು. ಇವರಿಗೆ ಓರ್ವ ಹಿರಿಯ ಸಹೋದರ ಮತ್ತು ಮೂವರು ಸಹೋದರಿಯರು ಇದ್ದು, ಇವರ ತಂದೆ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ ಶೋಭಿರಾಮ್ ಮತ್ತು ತಾಯಿ ವಸಂತಿ ದೇವಿ ಆಗಿದ್ದರು.
ಬಾಬೂಜಿಯವರು 1914ರಲ್ಲಿ ಶಾಲೆಗೆ ಪ್ರವೇಶ ಪಡೆಯುತ್ತಾರೆ, ಇಲ್ಲಿಂದ 1920 ರಲ್ಲಿ ರ್ಹಾ ನಗರದಲ್ಲಿನ ಅಗರ್ವಾಲ್ ಮಿಡಲ್ ಸ್ಕೂಲಿಗೆ ಸೇರುತ್ತಾರೆ, ಇಲ್ಲಿಯೇ ಇವರು ಮೊದಲ ಬಾರಿಗೆ ಇಂಗ್ಲೀಷ್ ಬೋಧನೆಯನ್ನು ಪಡೆದರು.1922 ರಲ್ಲಿ ಅದೇ ಪಟ್ಟಣದ ಟೌನ್ ಸ್ಕೂಲಿಗೆ ಸೇರುತ್ತಾರೆ. ಈ ಶಾಲೆಯಲ್ಲಿ ನಡೆದ ಒಂದು ಸಣ್ಣ ಘಟನೆ ಬಾಬೂಜಿಯವರ ಜೀವನದಲ್ಲಿ ಮಹತ್ತರವಾದ ಪರಿಣಾಮ ಬೀರಿತು.
ಆ ಘಟನೆ ಯಾವುದೆಂದರೆ ಟೌನ್ ಸ್ಕೂಲಿನಲ್ಲಿ ಕುಡಿಯುವ ನೀರಿಗಾಗಿ ಎರಡು ಕುಂಡಗಳನ್ನು ಇರಿಸಲಾಗಿತ್ತು, ಅದರಲ್ಲಿ ಒಂದು ಹಿಂದೂಗಳಿಗೆ ಮತ್ತೊಂದು ಮುಸ್ಲೀಮರಿಗೆ ಎಂದು ಪ್ರತ್ಯೇಕ ಮಾಡಲಾಗಿತ್ತು. ಇದರಲ್ಲಿ ಬಾಬೂಜಿಯವರು ಹಿಂದೂಗಳದ್ದಾಗಿದ್ದ ಕುಂಡದ ನೀರನ್ನು ಕುಡಿಯುತ್ತಾರೆ, ಇವರು ಅಸ್ಪೃಶ್ಯರಾಗಿದ್ದ ಕಾರಣ ಈ ವಿಷಯ ಶಾಲೆಯ ಮುಖ್ಯ ಶಿಕ್ಷಕರಿಗೆ ತಿಳಿಯುತ್ತದೆ, ಈ ವಿಷಯದಿಂದ ಬಾಬೂಜಿಯವರು ತಮ್ಮ ಜೀವನದಲ್ಲಿಯೇ ಮೊದಲ ಬಾರಿಗೆ ಜಾತಿ ತಾರತಮ್ಯವನ್ನು ಶಾಲಾ ಹಂತದಲ್ಲಿಯೇ ಎದುರಿಸಬೇಕಾಯಿತು.
ಆದರೂ ಅವರು ವಿಚಲಿತರಾಗದೆ ಶಾಲೆಯಲ್ಲಿ ಇಡುತ್ತಿದ್ದ ನೀರಿನ ಕುಂಡಗಳನ್ನು ಹೊಡೆದು ಹಾಕುತ್ತಿದ್ದರೂ, ಪದೇ ಪದೇ ನೀರಿನ ಕುಂಡಗಳು ಹೊಡೆಯುತ್ತಿದ್ದದ್ದನ್ನು ಗಮನಿಸಿದ ಶಾಲಾ ಆಡಳಿತ ಮಂಡಳಿ. ವಿಷಯದ ಆಳವನ್ನು ದಲಿತ ಸಮುದಾಯದ ವಿದ್ಯಾರ್ಥಿಗಳಿಗೂ ಸಹ ಒಂದು ಪ್ರತ್ಯೇಕ ನೀರಿನ ಕುಂಡಗಳನ್ನಿಡುವ ಪದ್ಧತಿಯನ್ನ ಅನುಸರಿಸಿತು. ಇದು ಇವರ ಮೊದಲ ಪ್ರತಿಭಟನೆ ಅಥವಾ ಹೋರಾಟ ಎಂದರೆ ತಪ್ಪಾಗಲಾರದು.
1925ರಲ್ಲಿ ಬಾಬೂಜಿಯವರು ಮಾಡಿದ ಸ್ವಾಗತ ಭಾಷಣವೇ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಸೇರಲು ಕಾರಣವಾಯಿತು. ಮೆಟ್ರಿಕ್ಯುಲೇಷನ್ ಅನ್ನು ಮೊದಲ ವಿಭಾಗದಲ್ಲಿ ಉತ್ತೀರ್ಣರಾಗಿ 1927ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಇಲ್ಲಿ ಇವರಿಗೆ ಬಿರ್ಲಾ ವಿದ್ಯಾರ್ಥಿ ವೇತನವನ್ನು ನೀಡಲಾಯಿತು, ಇಲ್ಲಿಯೇ ಇವರು ಇಂಟರ್ ಸೈನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಹಿಂದೂ ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಇದ್ದಾಗ ಇವರು ಪರಿಶಿಷ್ಠ ಜಾತಿಗಳನ್ನು ಸಂಘಟಿಸಿ ಸಾಮಾಜಿಕ ತಾರತಮ್ಯದ ವಿರುದ್ಧ ಪ್ರತಿಭಟಿಸಿದರು. ನಂತರದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಂದುವರೆಸಿ 1931 ರಲ್ಲಿ ಬಿ.ಎಸ್ಸಿ ಪದವಿ ಪಡೆದರು.
ಬಾಬೂಜಿಯವರ ರಾಜಕೀಯ ಸಾಧನೆ
- ಸತತ 30 ವರ್ಷಗಳ ಕಾಲ ಕೇಂದ್ರ ವಿಧಾನ ಸಭೆಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದರು.
- ಇವರು ಭಾರತೀಯ ಕ್ಯಾಬಿನೆಟ್ನಲ್ಲಿ ಧೀರ್ಘಕಾಲ ಸೇವೆ ಸಲ್ಲಿಸಿದ ಕ್ಯಾಬಿನೆಟ್ ಮಂತ್ರಿ ಎಂಬ ದಾಖಲೆಯನ್ನು ಹೊಂದಿದ್ದಾರೆ.
ಕೇಂದ್ರ ಕಾರ್ಮಿಕ ಮಂತ್ರಿಯಾಗಿ 1946 ರಿಂದ 1952 ರ ವರೆಗೆ
- ಕೇಂದ್ರ ಸಂಪರ್ಕ ಸಚಿವರಾಗಿ 1952 ರಿಂದ 1956 ರ ವರೆಗೆ
- ಕೇಂದ್ರ ಸಾರಿಗೆ ಮತ್ತು ರೈಲ್ವೆ ಸಚಿವರಾಗಿ 1956 ರಿಂದ1962 ರ ವರೆಗೆ
- ಕೇಂದ್ರ ಸಾರಿಗೆ ಮತ್ತು ಸಂಪರ್ಕ ಸಚಿವರಾಗಿ 1962 ರಿಂದ 1963 ರ ವರೆಗೆ
- ಕೇಂದ್ರ ಕಾರ್ಮಿಕ ಉದ್ಯೋಗ ಮತ್ತು ಪುನರ್ವಸತಿ ಸಚಿವರಾಗಿ 1966ರಿಂದ 1967 ರ ವರೆಗೆ
- ಕೇಂದ್ರ ಆಹಾರ ಮತ್ತು ಕೃಷಿ ಸಚಿವರಾಗಿ1967 ರಿಂದ 1970 ರವರೆಗೆ
- ಕೇಂದ್ರ ರಕ್ಷಣಾ ಸಚಿವರಾಗಿ 1970 ರಿಂದ1974 ಮತ್ತು 1977-1979ರವರೆಗೆ ಎರಡು ಅವಧಿಯಲ್ಲಿ ಕಾಣಬಹುದು.
- ಕೇಂದ್ರ ಕೃಷಿ ಮತ್ತು ನೀರಾವರಿ ಸಚಿವರಾಗಿ1974 ರಿಂದ 1977ರ ವರೆಗೆ
- ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿನ ಅಧ್ಯಕ್ಷರಾಗಿ ಸೇವೆ
- ಕಾಂಗ್ರೇಸ್ ಫಾರ್ ಡೆಮಾಕ್ರಸಿ ಪಕ್ಷದ ಸ್ಥಾಪಕ ಸದಸ್ಯರಾಗಿದ್ದರು ಹಾಗೂ 1977ರಲ್ಲಿ ಜನತಾ ಪಕ್ಷದೊಂದಿಗೆ ಉತ್ತಮ ಹೊಂದಾಣಿಕೆ ಹೊಂದಿದ್ದರು.
- ಜನವರಿ24,1979 ರಿಂದ ಜುಲೈ 28,1979 ರ ವರೆಗೆ ಭಾರತದ ಉಪಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
- 1976ಸಪ್ಟೆಂಬರ್ ನಿಂದ ಏಪ್ರಿಲ್ 1983ರ ವರೆಗೆ ಸ್ಕೌಟ್ ಅಂಡ್ ಗೈಡ್ಸ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸಂವಿಧಾನ ರಚನೆಯಲ್ಲಿ ಬಾಬೂಜಿಯವರ ಪಾತ್ರ
ಕಾರ್ಮಿಕ ಇಲಾಖೆಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸುತ್ತಿರುವಾಗಲೇ ಅವರೊಬ್ಬ ಭವಿಷ್ಯದ ಮೇರು ಸಂಸದೀಯ ಪಟು ಎಂಬ ಕುರುಹುಗಳನ್ನು ಪರಿಚಯಿಸಿದರು. ಇಂತಹ ಸಮಯದಲ್ಲಿ ದೇಶಕ್ಕೆ ಕ್ಯಾಬಿನೆಟ್ ಆಯೋಗದ ಆಗಮನವು ಸ್ವಾತಂತ್ರ್ಯದ ಆಶಾಕಿರಣವನ್ನು ಮೂಡಿಸತೊಡಗಿತ್ತು. ಇದನ್ನು ಗಳಿಸುವುದರ ಜೊತೆಗೆ ಮಧ್ಯಾಂತರ ಸರ್ಕಾರ ದೇಶೀಯ ಸಂವಿಧಾನವೊAದನ್ನು ರಚಿಸಲು ಮುಂದಾಯಿತು.
ಈ ಮಹತ್ವದ ಕಾರ್ಯವನ್ನು ನೆರವೇರಿಸಲು ವಿವಿಧ ಪ್ರಾಂತ್ಯಗಳಿಂದ ಸಂವಿಧಾನ ಶಾಸಕಾಂಗ ಸಭೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಆವಾಗ ಬಾಬೂಜಿ ಬಿಹಾರದಲ್ಲಿ ಸ್ಪರ್ಧಿಸಿ ಚುನಾಯಿತರಾದರೆ, ಬಾಂಬೆಯಲ್ಲಿ ಸ್ಪರ್ಧಿಸಿದ ಅಂಬೇಡ್ಕರ್ಗೆ ಬಿ.ಜಿ ಖೇರ್ ಎಸಗಿದ ದ್ರೋಹದಿಂದ ಸೋಲಾಯಿತು. ಮಂಡಲ ಎಂಬ ಬಂಗಾಳದ ದಲಿತ ಪ್ರತಿನಿಧಿ ರಾಜಿನಾಮೆ ನೀಡಿ ಅವರನ್ನು ಅಲ್ಲಿಂದ ಸ್ಪರ್ಧಿಸಿ ಆಯ್ಕೆಗೊಳ್ಳುವಂತೆ ಅವಕಾಶ ಕಲ್ಪಿಸಿದರು.
ಬಂಗಾಳದ ವಿಭಜನೆಯ ತರುವಾಯ ಅಂಬೇಡ್ಕರ್ ಸದಸ್ಯತ್ವವನ್ನು ಕಳೆದುಕೊಂಡರು. ಅಂಬೇಡ್ಕರಿಲ್ಲದ ಸಂವಿಧಾನ ಶಾಸಕಾಂಗ ಸಭೆ ಅಪ್ರಯೋಜಕವೆಂದು ಭಾವಿಸಿದ ಮಧ್ಯಾಂತರ ಸರ್ಕಾರ ವಿಧಿಯಿಲ್ಲದೆ ಚುನಾಯಿಸಿ ಬರಮಾಡಿಕೊಂಡಿತು. ಕೇವಲ ಸದಸ್ಯರಾಗಿದ್ದುಕೊಂಡು ದಲಿತರ ಮತ್ತು ಇತರ ಶೋಷಿತರ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗಿದ್ದ ಅವರಿಗೆ ದೇಶದ ಸಮಗ್ರತೆಯನ್ನು ಪ್ರತಿಬಿಂಬಿಸುವ ಮಹತ್ವದ ಹೊರೆ ಅವರ ಹೆಗಲ ಮೇಲಿತ್ತು.
28 ಜನ ದಲಿತ ಪ್ರತಿನಿಧಿಗಳ ಪೈಕಿ ಡಾ. ಬಾಬೂ ಜಗಜೀವನರಾಮ್ ಕೂಡ ಅಗ್ರಮಾನ್ಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದವರು. ಅವರು ಸಂವಿಧಾನದ ಐದು ಪ್ರಮುಖ ಸ್ಥಾಯಿ ಸಮಿತಿಗಳ ಸದಸ್ಯರಾಗಿ ತಮ್ಮ ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದರು.
ಡಾ. ಬಾಬೂ ಜಗಜೀವನ್ ರಾಮ್ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ರವರು ಸದಸ್ಯರಾಗಿದ್ದ ಸಂವಿಧಾನ ರಚನಾ ಸ್ಥಾಯಿ ಸಮಿತಿಗಳು
ಡಾ. ಬಾಬೂ ಜಗಜೀವನ್ ರಾಮ್ ಸದಸ್ಯರಾಗಿ ಆಯ್ಕೆಯಾಗಿದ್ದ ರಾಜ್ಯಾಂಗ ಸಭೆಯ ಸದನ ಸ್ಥಾಯಿ ಸಮಿತಿಗಳು
- ಕಾನೂನುಗಳ ನಿಯಮಾವಳಿ ಸಮಿತಿ
- ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಹಾಗೂ ಬುಡಕಟ್ಟು ಮತ್ತು ಹೊರತುಪಡಿಸಿದ ಸಲಹಾ ಸಮಿತಿ
- ಸಲಹಾ ಸಮಿತಿಯ ಉಪ ಸಮಿತಿ; ಅಲ್ಪಸಂಖ್ಯಾತರ ಸಮಿತಿ
- ಸಂಯುಕ್ತ ರಾಜ್ಯಾಂಗ ಸಮಿತಿ
- ಹೊರತು ಪಡಿಸಿದ ಮತ್ತು ಭಾಗಶಃ ಹೊರತುಪಡಿಸಿದ ಪ್ರದೇಶಗಳ ಉಪಸಮಿತಿ
- ಡಾ. ಬಿ.ಆರ್ ಅಂಬೇಡ್ಕರ್ ಸದಸ್ಯರಾಗಿ ಆಯ್ಕೆಯಾಗಿದ್ದ ರಾಜ್ಯಾಂಗ ಸಭೆಯ ಸದನ ಸ್ಥಾಯಿ ಸಮಿತಿಗಳು
- ರಾಜ್ಯಾಂಗ ಸಭೆಯ ಮೇಲಿನ ಕಾರ್ಯಗಳ ಸಮಿತಿ
- ರಾಷ್ಟ್ರೀಯ ಧ್ವಜ ಹಂಗಾಮಿ ಸಮಿತಿ
- ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಹಾಗೂ ಬುಡಕಟ್ಟು ಮತ್ತು ಹೊರತುಪಡಿಸಿದ ಸಲಹಾ ಸಮಿತಿ
- ಮೂಲಭೂತ ಹಕ್ಕುಗಳ ಉಪಸಮಿತಿ
- ಸಲಹಾ ಸಮಿತಿಯ ಉಪ ಸಮಿತಿ; ಅಲ್ಪಸಂಖ್ಯಾತರ ಸಮಿತಿ
- ಸಂಯುಕ್ತ ರಾಜ್ಯಾಂಗ ಸಮಿತಿ
- ಶ್ರೇಷ್ಠ ನ್ಯಾಯಾಲಯದ ಹಂಗಾಮಿ ಸಮಿತಿ.
ಬಾಬೂಜಿ ಗಾಂಧೀವಾದವನ್ನು ಎಂದೂ ಕುರುಡಾಗಿ ಆರಾಧಿಸಿದವರಲ್ಲ. ಅಸ್ಪೃಶ್ಯತೆಯ ಆಚರಣೆಯ ವಿಚಾರದಲ್ಲಿ ಅವರೆಂದೂ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡವರಲ್ಲ. ಒಮ್ಮೆ ಅವರು ಹಿಂದೂ ಮಹಾಸಭಾದ ಬಿಹಾರದ ಘಟಕ ಅಸ್ಪೃಶ್ಯತಾ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅವರ ನೆಚ್ಚಿನ ರಾಜಕೀಯ ಗುರುವಾಗಿದ್ದ ಡಾ. ರಾಜೇಂದ್ರ ಪ್ರಸಾದರು ಸ್ವತಃ ಭಾಗವಹಿಸಿದ್ದರು. ಆ ಸಮಯದಲ್ಲಿ ಸಂಪ್ರದಾಯವಾದಿ ಹಿಂದೂಗಳೆಲ್ಲಾ ಬೆಚ್ಚಿ ಬೀಳುವಂತಹ ಮಾತುಗಳನ್ನಾಡಿ ಬಿಟ್ಟರು. ಅದೇನೆಂದರೆ ‘ನಿಮ್ಮ ಈ ನಯವಂಚಕತನದಿಂದ ಅಸ್ಪೃಶ್ಯತೆಯ ಕಳಂಕವನ್ನು ತೊಡೆಯಲಾರಿರಿ. ನಿಮ್ಮಲ್ಲಿ ಸವರ್ಣೀಯತೆ ಎಲ್ಲಿಯವರೆಗೆ ಜಾಗೃತವಾಗಿರುತ್ತದೆಯೋ ಅಲ್ಲಿಯವರೆಗೂ ಅಸ್ಪೃಶ್ಯತೆಯನ್ನು ಉಚ್ಛಾಟಿಸಲು ಸಾಧ್ಯವಿಲ್ಲ.
ನಿಮ್ಮಲ್ಲಿ ಒಬ್ಬರಾದರೂ ನಿದರ್ಶನ ಪೂರಕವಾಗಿಯಾದರೂ, ಅಸ್ಪೃಶ್ಯತೆಯನ್ನು ತೊಲಗಿಸಲು ಯಾವುದಾದರೊಂದು ಕ್ರಮ ಕೈಗೊಂಡಿರುವಿರಾ ಎಂದು ಕೇಳುತ್ತೇನೆ. ಈಗಿನ್ನೂ ಉಪದೇಶ, ಭಾಷಣ, ವ್ಯಾಖ್ಯಾನ ಸಾಕು. ನಿಮ್ಮ ವೈಯಕ್ತಿಕ ಹಾಗೂ ಸಾಮೂಹಿಕ ವರ್ತನೆಯಿಂದ ಅಸ್ಪೃಶ್ಯತೆಯ ನಿರ್ಮೂಲನಾ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಿ ತೋರಿಸಿರಿ’. ಎಂದು ತಮ್ಮ ನೇರನುಡಿಗಳಿಂದ ಚುಚ್ಚಿ ಹಿಂದೂ ಸಮಾಜವನ್ನು ಎಚ್ಚರಿಸಿದರು.
ಅವರು ಸಂವಿಧಾನದ ಅಲ್ಪಸಂಖ್ಯಾತರ ಉಪಸಮಿತಿಗೆ ಸದಸ್ಯರಾಗಿದ್ದುಕೊಂಡು ಸಂವಿಧಾನದಲ್ಲಿ ಸೇರ್ಪಡೆಯಾಗಬೇಕಿದ್ದಂತಹ ಅವಕಾಶ ಮತ್ತು ರಕ್ಷಣಾ ಸ್ವರೂಪಗಳ ಬಗ್ಗೆ ಸುಧೀರ್ಘವಾದ ಲಿಖಿತ ಮನವಿಯೊಂದನ್ನು ಸಮರ್ಪಿಸಿದರು. ಇದರಲ್ಲಿ ದಲಿತರು ಮತ್ತು ಇತರ ಶೋಷಿತರು ಪಡೆದುಕೊಳ್ಳಬೇಕಾದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ನ್ಯಾಯಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಬಗೆಗೆ ಸವಿವರವಾಗಿ ಚರ್ಚಿಸಿ ಉಲ್ಲೇಖಿಸಿದರು.
ಅವರು ಶಾಸಕಾಂಗ ಸಭೆಯಲ್ಲಿ ಅಸ್ಪೃಶ್ಯತೆಯ ಕುರಿತು ಮಂಡಿಸಿದಾಗ ಕೇವಲ ಹಿಂದೂ ಧರ್ಮೀಯರು ಮಾತ್ರ ಆಚರಿಸುವ ಅಸ್ಪೃಶ್ಯತೆಗೆ ಕಡಿವಾಣ ಹಾಕುವುದರ ಬದಲು ಭಾರತೀಯರೆಲ್ಲರೂ ಆಚರಿಸುವ ಭಿನ್ನ ಬಗೆಯ ಅಸ್ಪೃಶ್ಯತೆಯನ್ನು ತೊಡೆದುಹಾಕಲು ಆಗ್ರಹಿಸಿದರು. ಈ ಉದ್ದೇಶಕ್ಕಾಗಿ ಅವರು ಮೂರು ನಿರ್ಣಾಯಕಗಳನ್ನು ವಿಧಿಸಲು ಕೋರಿದ್ದರು. ಅವುಗಳೆಂದರೆ;
- ಯಾವುದೇ ಭಿನ್ನತೆ ಅಥವಾ ತಾರತಮ್ಯವಿಲ್ಲದೆ ಹಿಂದೂ ಸಮಾಜದ ಎಲ್ಲಾ ಜಾತಿಗಳಿಗೆ ಎಲ್ಲಾ ಹಿಂದೂ ದೇವಾಲಯಗಳು ತೆರೆದಿರಬೇಕು(ಪ್ರವೇಶವಿರಬೇಕು)
- ಯಾವುದೇ ಜಾತಿಯವರಿಗೆ ಸೇರಿದ ನೀರು ಅಥವಾ ಆಹಾರಗಳು ಹಿಂದೂ ಸಮಾಜದ ಯಾವುದೇ ಇತರ ಜಾತಿಯವರು ಮುಟ್ಟಿದ ಮಾತ್ರಕ್ಕೆ ಮೈಲಿಗೆಯಾಗತಕ್ಕದ್ದಲ್ಲ.
- ಹಿಂದೂಗಳು ಯಾವುದೇ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಎಲ್ಲಾ ಜತಿಯ ಹಿಂದೂಗಳು ಯಾವುದೇ ಭೇದವಿಲ್ಲದೆ ಭಾಗವಹಿಸುವಂತಾಗಬೇಕು.
ಬಹುಶಃ ಈ ಮೂರು ಅಂಶಗಳ ಮೇಲೆ ಬಾಬೂಜಿಯವರು ಅಸ್ಪೃಶ್ಯತೆಯ ನಿರ್ಮೂಲನೆಯ ವಿಚಾರದಲ್ಲಿ ಅಂಬೇಡ್ಕರ್ರಂತೆಯೇ ತಮ್ಮ ಭಾವನೆಗಳನ್ನು ಘನೀಕರಿಸಿಕೊಂಡಿದ್ದವರು. ಅವರು ಅತ್ಯಂತ ಪ್ರಾಯೋಗಿಕವಾಗಿದ್ದಂತಹ ಅನುಭವದ ವಿಚಾರಗಳನ್ನು ಸಂವಿಧಾನದ ರಚನಾ ಸಂದರ್ಭದಲ್ಲಿ ಧಾರೆಯೆರೆದರು. ಅನೇಕ ಸಂಧರ್ಬದಲ್ಲಿ ಬಾಬೂಜಿ ಅಂಬೇಡ್ಕರ್ ನಿರಂತರ ಹೋರಾಟಗಳಿಗೆ ಮೌನ ಬೆಂಬಲಿಗರಾಗಿದ್ದರು.ಉದ್ಯೋಗ ಮೀಸಲಾತಿಯಲ್ಲಿ ಬಡ್ತಿಯನ್ನು ದೊರಕಿಸಿಕೊಟ್ಟರು .
ಮೀಸಲಾತಿ ಮೇಲಿನ ಚರ್ಚೆಗಳು ಸಂವಿಧಾನ ರಚನಾ ಸಂದರ್ಭದಲ್ಲಿ ಬಂದಾಗ ಅನೇಕ ಸವರ್ಣೀಯರು ಇದರ ಅಳವಡಿಕೆಯನ್ನು ವಿರೋಧಿಸಿದರು. ಮತ್ತೆ ಕೆಲವರು ಇದನ್ನು ಸಂವಿಧಾನದ ಅಳವಡಿಕೆಯ ನಂತರ ಕೇವಲ ಆಡಳಿತಾತ್ಮಕ ಕಾನೂನುಗಳಿಂದ ದೊರಕಿಸಿಕೊಡಬಹುದೆಂಬ ಸಲಹೆಗಳನ್ನು ನೀಡಿದರು. ಆದರೆ ಅಲ್ಪಸಂಖ್ಯಾತರ ಉಪಸಮಿತಿಯ ಸದಸ್ಯರಾಗಿದ್ದ ಬಾಬೂಜಿ ಇದನ್ನು ಬಲವಾಗಿ ತಿರಸ್ಕರಿಸಿದರು.
ಇದರ ಬದಲು ಮೀಸಲಾತಿಯನ್ನು 40 ವರ್ಷಗಳ ಕಾಲಾವಧಿಗೆ ನಿಗಧಿಪಡಿಸಬೇಕೆಂದು ಸಭೆಯ ಮುಂದೆ ಸೂಚಿಸಿದರು. ಇದರ ಬದಲು ಅಂಬೇಡ್ಕರ್ ಪ್ರತಿ 10 ವರ್ಷಕ್ಕೊಮ್ಮೆ ನವೀಕರಿಸಿಕೊಳ್ಳಬೇಕೆಂಬ ಸಲಹೆಯನ್ನು ನೀಡಿದರು. ಇದರ ಒಳ ಮರ್ಮವನ್ನು ಅರಿ ಬಾಬೂಜಿ ದಲಿತರ ಸಂಘಟನಾ ಶಕ್ತಿ ಇಮ್ಮಡಿಗೊಳಿಸುತ್ತದೆಂಬ ಆಶಾಭಾವನೆಯನ್ನು ಹೊಂದಿದ್ದರು.
ಅಂಬೇಡ್ಕರ್ ಪರಿನಿರ್ವಾಣದ ನಂತರ ಅವರ ಸಂವಿಧಾನವನ್ನು ಕಾಯಬೇಕಾದ ಜವಬ್ದಾರಿ ಮತ್ತು ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯು ಬಾಬೂಜಿಯವರ ಮೇಲಿತ್ತು. ಉದ್ಯೋಗದಲ್ಲಿ ಪರಿಶಿಷ್ಠರಿಗೆ ಮೀಸಲಾತಿಯ ಅವಕಾಶವಿದ್ದರೂ ಅದರೊಳಗೆ ಬಡ್ತಿಗೆ ಅವಕಾಶವಿರಲಿಲ್ಲ. ಅವರು 1962 ರಲ್ಲಿ ರೈಲ್ವೆ ಮಂತ್ರಿಗಳಾಗಿದ್ದಾಗ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲೇರಿತು. ಕೆ. ರಂಗಾಚಾರಿಯೆದುರು ರೈಲ್ವೆ ಜನರಲ್ ಮ್ಯಾನೇಜರ್ ತೀರ್ಪಿನಡಿ ಬಾಬೂಜಿ ಇಡೀ ಸಮಸ್ತ ದಲಿತ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಂಸತ್ತಿನ ಒಳಗೆ ಮತ್ತು ಹೊರಗೆ ಸಂಘಟನಾತ್ಮಕ ಹೋರಾಟ ಆರಂಭಿಸಿದರು.
ಇವರ ತುಡಿತವನ್ನರಿತ ಅಂದಿನ ಕಾಂಗ್ರೇಸ್ ಸರ್ಕಾರ ಉದ್ಯೋಗ ಮೀಸಲಾಯಿತಿಯಲ್ಲಿ ಬಡ್ತಿಯನ್ನು ನೀಡುವ ಸಲುವಾಗಿ ಸಂವಿಧಾನದ ಅದರ ಪರಿಚ್ಛೇದಗಳಿಗೆ ಅಗತ್ಯ ತಿದ್ದುಪಡಿಯನ್ನು ತರಲು ಮುಂದಾಯಿತು. ಬಹುಶಃ ಇಂತಹ ಅವಕಾಶವನ್ನೇನಾದರೂ ಬಾಬೂಜಿ ಸದುಪಯೋಗಪಡಿಸಿಕೊಳ್ಳದೆ ಹೋಗಿದ್ದರೆ ಮೀಸಲಾತಿ ಪಡೆಯುತ್ತಿರುವ ಎಲ್ಲಾ ಜಾತಿಯ ಉದ್ಯೋಗಸ್ಥರಿಂದು ಮುಂಬಡ್ತಿ ಮಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವರ ಸಮಯೋಚಿತ ನಿರ್ಧಾರದ ಫಲವಾಗಿ ಇಂದು ದಲಿತರು ಮತ್ತು ಹಿಂದುಳಿದವರು ಮೀಸಲಾಯಿತಿಯ ಹೆಚ್ಚಿನ ಫಲಗಳನ್ನು ಅನುಭವಿಸುವಂತಾಗಿದೆ.
ಗ್ರಂಥ ಋಣ
- ಬಾಬು ಜಗಜೀವನರಾಮ್ – ಪ್ರೊ.ಟಿ.ಯಲ್ಲಪ್ಪ ಬೂತಯ್ಯ
- ಬಾಬೂಜಿ ಚಿಂತನ ಮಂಥನ – ಸಂಪಾದಕ ಮೈಲಹಳ್ಳಿ ರೇವಣ್ಣ- ಪ್ರಸಾರಾಂಗ, ಮೈಸೂರು 2010
- ಡಾ.ಬಾಬುಜಗಜೀವನರಾಮ್ ಸಾಮಾಜಿಕ ಬದಲಾವಣೆಯ ಸಂಕೇತ ಮತ್ತು ಒಂದು ಕಾಲಘಟ್ಟದ ವ್ಯಕ್ತಿ – ಸಂಪಾದಕ ಅಥವಾ ಹೆಚ್. ವೆಂಕಟೇಶ್ ಇಳಾ ಮುದ್ರಣ, ಬೆಂಗಳೂರು 2009
- ಭಾರತದ ಜಾತಿ ಪದ್ಧತಿಯ ಸವಾಲುಗಳು – ಪ್ರೊ.ಗೌರಮ್ಮ, ಪ್ರೊ. ಯಲ್ಲಪ್ಪ ಬೂತಯ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243