ದಿನದ ಸುದ್ದಿ

ಭಾರತದಲ್ಲಿ ಬ್ರಿಟನ್ ಕಂಪನಿಗಳ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿರುವುದು ಸ್ವಾಗತಾರ್ಹ ಸಂಗತಿ : ಪಿಎಂ ಮೋದಿ

Published

on

ಸುದ್ದಿದಿನ,ನವದೆಹಲಿ : ಮುಕ್ತ ವ್ಯಾಪಾರ ಒಪ್ಪಂದದ ಸ್ವರೂಪವನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲು ಭಾರತ ಮತ್ತು ಬ್ರಿಟನ್ ನಿರ್ಧರಿಸಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಎಫ್ಟಿಎ ಕುರಿತು ಉಭಯ ದೇಶಗಳ ತಂಡಗಳು ಕಾರ್ಯೋನ್ಮುಖವಾಗಿದ್ದು, ಸಂಧಾನ ಮಾತುಕತೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ ಎಂದು ಹೇಳಿದರು.

ಪ್ರಸಕ್ತ ದಶಕದಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಮಾರ್ಗದರ್ಶನ ನೀಡಲು ಭಾರತ ಮತ್ತು ಬ್ರಿಟನ್ 2020ರ ವರೆಗಿನ ಮಹತ್ವಾಕಾಂಕ್ಷಿ ನೀಲನಕ್ಷೆಯನ್ನು ರೂಪಿಸಿವೆ. ಈ ನೀಲನಕ್ಷೆಯ ಪ್ರಗತಿ ಪರಾಮರ್ಶಿಸಲಾಗಿದೆ. ಮತ್ತು ಭವಿಷ್ಯಕ್ಕೆ ಕೆಲವು ಗುರಿಗಳನ್ನೂ ನಿಗದಿಪಡಿಸಲಾಗಿದೆ ಎಂದರು.

ಭಾರತದಲ್ಲಿ ಜಾರಿಯಲ್ಲಿರುವ ಸಮಗ್ರ ಸುಧಾರಣೆಗಳು, ಮೂಲಸೌಕರ್ಯ ಆಧುನೀಕರಣ ಯೋಜನೆ ಹಾಗೂ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಕುರಿತಂತೆ ಈ ತಂಡಗಳು ಚರ್ಚೆ ನಡೆಸಿವೆ ಎಂದು ನರೇಂದ್ರ ಮೋದಿ ತಿಳಿಸಿದರು.

ಭಾರತದಲ್ಲಿ ಬ್ರಿಟನ್ ಕಂಪನಿಗಳು ಬಂಡವಾಳ ಹೂಡಿಕೆಯನ್ನು ಹೆಚ್ಚು ಮಾಡುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಹವಾಮಾನ ಮತ್ತು ಇಂಧನ ಪಾಲುದಾರಿಕೆಯನ್ನು ಮತ್ತಷ್ಟು ಬಲವರ್ಧನೆ ಮಾಡಲು ನಿರ್ಧರಿಸಲಾಗಿದೆ. ಭಾರತದ ರಾಷ್ಟ್ರೀಯ ಜಲಜನಕ ಆಂದೋಲನದಲ್ಲಿ ಭಾಗಿಯಾಗುವಂತೆ ಬ್ರಿಟನ್ಗೆ ಆಹ್ವಾನ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇಂಡೋ-ಫೆಸಿಫಿಕ್ ವಲಯದಲ್ಲಿ ಮುಕ್ತ ಎಲ್ಲವನ್ನೊಳಗೊಂಡ ಹಾಗೂ ಕಾನೂನು ಆಧಾರಿತ ರೀತಿಯಲ್ಲಿ ಸಂಬಂಧ ಬಲವರ್ಧನೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಉಕ್ರೇನ್ ಬಿಕ್ಕಟ್ಟು ಕುರಿತು ಉಭಯ ನಾಯಕರು ಚರ್ಚಿಸಲಾಗಿದ್ದು, ಸಂಧಾನ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ತಕ್ಷಣ ಕದನ ವಿರಾಮವನ್ನು ಘೋಷಿಸಬೇಕು. ಹಾಗೂ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯವೆಂದು ಪ್ರತಿಪಾದಿಸಿರುವುದಾಗಿ ಪ್ರಧಾನಮಂತ್ರಿ ತಿಳಿಸಿದ್ದಾರೆ.

ಪ್ರತ್ಯೇಕ ಹೇಳಿಕೆ ನೀಡಿರುವ ಬೋರಿಸ್ ಜಾನ್ಸನ್, ಭಾರತ ಮತ್ತು ಬ್ರಿಟನ್ ನಡುವಿನ ಪಾಲುದಾರಿಕೆ ಉಭಯ ದೇಶಗಳ ನಡುವಿನ ಸರ್ವಕಾಲೀನ ಸ್ನೇಹದ ಧ್ಯೋತಕವಾಗಿದೆ ಎಂದು ಬಣ್ಣಿಸಿದ್ದಾರೆ. ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಬೋರಿಸ್ ಜಾನ್ಸನ್ ನಿನ್ನೆ ಆಗಮಿಸಿದರು. ಶುಕ್ರವಾರ ಬೆಳಗ್ಗೆ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧ ಮತ್ತು ಗೆಳೆತನದ ಅತ್ಯಂತ ಅವಿಸ್ಮರಣೀಯ ಘಳಿಗೆಯಾಗಿದೆ ಎಂದು ಪ್ರತಿಕ್ರಿಯಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version