ದಿನದ ಸುದ್ದಿ
ಕನ್ನಡ ವಿಶ್ವವಿದ್ಯಾಲಯದ 30ನೇ ನುಡಿಹಬ್ಬ/ಘಟಿಕೋತ್ಸವ | ಗೋರುಚ,ಭಾಷ್ಯಂ,ವೆಂಕಟಾಚಲಶಾಸ್ತ್ರಿಗೆ ನಾಡೋಜ ಪದವಿ ಪ್ರದಾನ : ಮಾನವೀಯತೆ ಮೈಗೂಡಿಸಿಕೊಳ್ಳಲು ಯುವಜನತೆಗೆ ರಾಜ್ಯಪಾಲ ಗೆಹ್ಲೋಟ್ ಕರೆ
ಸುದ್ದಿದಿನ,ಹೊಸಪೇಟೆ(ವಿಜಯನಗರ): ಯುವಜನತೆ ದೇಶದ ಆಧಾರಸ್ತಂಭವಾಗಿದ್ದು, ದೇಶದ ಹಿತಕ್ಕಾಗಿ ಮತ್ತು ಜನರ ಹಿತಕ್ಕಾಗಿ ಪದವಿ ಬಳಿಕ ಆಚಾರ,ವಿಚಾರ ಮತ್ತು ಸಂಸ್ಕøತಿಯಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್ಚಂದ್ ಗೆಹ್ಲೋಟ್ ಅವರು ಯುವಜನತೆಗೆ ಕರೆ ನೀಡಿದರು.
ಕನ್ನಡ ವಿಶ್ವವಿದ್ಯಾಲಯದ ನವರಂಗ ಬಯಲುರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಯ 30ನೇ ನುಡಿಹಬ್ಬ/ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮದು ಯುವಕರ ದೇಶ; ಈ ದೇಶಕ್ಕೆ ಯುವಜನತೆಯೇ ಆಧಾರವಾಗಿದ್ದಾರೆ. ಶೇ.60ರಷ್ಟು 35 ವರ್ಷದೊಳಗಿನ ಯುವಜನರು ನಮ್ಮ ದೇಶದಲ್ಲಿದ್ದಾರೆ. ಕಠಿಣ ಪರಿಶ್ರಮ ಮೈಗೂಡಿಸಿಕೊಳ್ಳುವುದರ ಜೊತೆಗೆ ಸನ್ಮಾರ್ಗದಲ್ಲಿ ನಡೆಯಬೇಕು. ಏಕಾಗ್ರತೆಯಿಂದ ಕೆಲಸ ಮಾಡಿದಲ್ಲಿ ಫಲ ಸಿಗುತ್ತದೆ ಎಂದು ಅವರು ವಿವರಿಸಿದರು.
ಇತ್ತೀಚೆಗೆ ಜಾರಿಗೆ ಬಂದ ನೂತನ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಕಲಿಕೆಗೆ ಒತ್ತು ನೀಡಲಾಗಿದೆ. ಸ್ಥಳೀಯ ಭಾಷೆಯಲ್ಲಿ ಸರಳವಾಗಿ ಓದುವ ಮತ್ತು ವಿಷಯದ ಮೇಲೆ ಹಿಡಿತ ಸಾಧಿಸಬಹುದಾಗಿದೆ ಎಂದು ವಿವರಿಸಿದ ರಾಜ್ಯಪಾಲ ಗೆಹ್ಲೋಟ್ ಅವರು ಪ್ರಾದೇಶಿಕ ಭಾಷೆಗಳಲ್ಲಿ ಸಮರ್ಪಕ ಶಿಕ್ಷಣ ನೀಡುವುದರ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.
ತಂತ್ರಜ್ಞಾನ,ವೈಜ್ಞಾನಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಜಪಾನ್,ಚೀನಾ,ಜರ್ಮನಿ,ಪ್ರಾನ್ಸ್ನಂತ ರಾಷ್ಟ್ರಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿರುವ ಮತ್ತು ಅವರವರ ಭಾಷೆಯಲ್ಲಿಯೇ ಶಿಕ್ಷಣಕ್ಕೆ ಆದ್ಯತೆ ನೀಡಿರುವುದನ್ನು ಪ್ರಸ್ತಾಪಿಸಿದರು.
ಕನ್ನಡ ವಿವಿ ಕಳೆದ ಮೂವತ್ತು ವರ್ಷಗಳಿಂದ ಕನ್ನಡ ಮತ್ತು ಕನ್ನಡ ಅಸ್ಮೀತೆ ವಿಷಯದಲ್ಲಿ ಶ್ಲಾಘನೀಯವಾದ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಪ್ರಸಿದ್ಧ,ಐತಿಹಾಸಿಕ ನಗರಿ ಹಂಪಿಗೆ ಹಾಗೂ ಕನ್ನಡ ವಿವಿಗೆ ಭೇಟಿ ನೀಡಿರುವುದು ಅತ್ಯಂತ ಸಂತಸವಾಗಿದೆ ಎಂದು ಹೇಳಿದ ರಾಜ್ಯಪಾಲರು ಪದವಿ ಪಡೆದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.
ಸರಕಾರದ ವಿವಿಧ ಯೋಜನೆಗಳ ಯಶಸ್ವಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯ;ಅಂದಾಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ.ವಿವಿಧ ಯೋಜನೆಗಳ ಲಾಭ ಪಡೆದುಕೊಂಡು ಆತ್ಮನಿರ್ಭರ್ ಭಾರತ ಕಟ್ಟುವ ಕೆಲಸ ಮಾಡಬೇಕಿದೆ ಎಂದರು.
ಘಟಿಕೋತ್ಸವ ಭಾಷಣ ಮಾಡಿದ ಡಾ.ತೇಜಸ್ವಿ ಕಟ್ಟಿಮನಿ ಅವರು ಕನ್ನಡ ಭಾಷೆ, ವಿದ್ಯೆ, ಸಂಶೋಧನೆ, ಕನ್ನಡ ನೆಲ-ಜಲದ ರಕ್ಷಣೆ, ಸಂವರ್ಧನೆಗೋಸ್ಕರ ನಿರ್ಮಾಣವಾಗಿರುವ ಕನ್ನಡ ವಿಶ್ವವಿದ್ಯಾಲಯ ತನ್ನ ಪಾತ್ರವನ್ನು ಇಲ್ಲಿಯವರೆಗೆ ಸಮರ್ಪಕವಾಗಿ ನಿರ್ವಹಿಸಿಕೊಂಡು ಬಂದಿದೆ ಎಂದರು.
ಕನ್ನಡ ಭಾಷಿಕರು ಮತ್ತು ಕನ್ನಡ ಭಾಷೆ ಮತ್ತು ಭಾರತೀಯ ಭಾಷೆಗಳ ಮಧ್ಯೆ ನಡುಗಡ್ಡೆ ನಿರ್ಮಿಸಿಕೊಂಡು ಯಾರೂ ಬದುಕಲು, ಬೆಳೆಯಲು ಸಾಧ್ಯವಿಲ್ಲ. ಎಲ್ಲ ಭಾರತೀಯ ಭಾಷೆಗಳಿಗೂ ಈ ಮಾತು ಸಲ್ಲುತ್ತದೆ. ಕನ್ನಡ ಮತ್ತು ಇತರ ಭಾಷೆಗಳ ಮಧ್ಯೆ ಕೊಡುಕೊಳ್ಳುವಿಕೆ ಏರ್ಪಡಿಸುವುದರಿಂದ ಕನ್ನಡದಲ್ಲಿ ಹೊಸ ಹೊಸ ಜ್ಞಾನಶಾಖೆಗಳ ಪ್ರವೇಶವಾಗಲು ಸಾಧ್ಯವಿದೆ. ಹೊಸ ತಂತ್ರಜ್ಞಾನಗಳನ್ನು ಸ್ವೀಕರಿಸುವ ಮೂಲಕ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಅಪಾರ ಶಕ್ತಿಯನ್ನು ಇನ್ನಷ್ಟ್ಟು ಗಟ್ಟಿಗೊಳಿಸಬೇಕು.
ನಮ್ಮ ಭಾಷಾ ಗ್ರಹಿಕೆಯನ್ನು, ಭಾಷಾ ಸೀಮೆಯನ್ನು ವಿಸ್ತ್ತರಿಸುವ ಮೂಲಕ ನಾವು ಭಾರತೀಯ ಭಾಷೆಗಳಲ್ಲಿರುವ ಪರಸ್ಪರ ಅಪನಂಬಿಕೆಯನ್ನು ಹೋಗಲಾಡಿಸಿ, ಪರಸ್ಪರ ಬೆಳೆಯಲು ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಸಾಧ್ಯವಿದೆ ಎಂದರು. ಇದು ಭಾರತೀಯ ಭಾಷೆಗಳ ಉಳಿಯುವಿಕೆಯ ಪ್ರಶ್ನೆಯೂ ಹೌದು ಎಂದು ಅವರು ಹೇಳಿದರು.
ನಮ್ಮ ಆಸುಪಾಸಿನ ಬದುಕಿನ ಕುರಿತು ತಲಸ್ಪರ್ಶಿ ಸಂಶೋಧನೆ ಮಾಡುವ ಮೂಲಕ ಶೈಕ್ಷಣಿಕ ವಲಯ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟ ಡಾ.ತೇಜಸ್ವಿನಿ ಕಟ್ಟಿಮನಿ ಅವರು ಉತ್ತರ ಕರ್ನಾಟಕದ ಅನೇಕ ಹಳ್ಳಿಗಳು ಇಂದಿಗೂ ಖಾಯಂ ಬರಗಾಲದಿಂದ ನರಳುತ್ತಿವೆ. ನಮ್ಮ ಸಂಶೋಧನೆಗಳು-ಬರಗಾಲ ಕುರಿತ ತಳಮಟ್ಟದ ಅಧ್ಯಯನ, ನಂಬಲರ್ಹ ಅಂಕಿಸಂಖ್ಯೆಯ ಕ್ರೋಡೀಕರಣ ಹಾಗೂ ಸೂಕ್ತ ಪರಿಹಾರದ ಉಪಾಯಗಳನ್ನು ನೀಡಲು ಸಾಧ್ಯವಾದರೆ, ಯೋಗ್ಯ ಪರಿಹಾರ ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಸಾಧ್ಯವಾಗಬಲ್ಲದು ಎಂದರು. ಹೀಗೆ ಕನ್ನಡ ವಿಶ್ವವಿದ್ಯಾಲಯ ರಾಜ್ಯದ ಪ್ರಗತಿಯ ಜೊತೆಗಾರನಾಗಲು ಸಾಧ್ಯವಿದೆ ಎಂದು ಹೇಳಿದರು.
ಅಕಾಡೆಮಿಕ್ ವಲಯ ಮೌನ ಕ್ಷೇಮವಲ್ಲ
ಕೊಪ್ಪಳ ಜಿಲ್ಲೆ, ಯಾದಗಿರಿ ಜಿಲ್ಲೆಯ ಬಡವರು ಅನ್ನಮೂಲ ಅರಸುತ್ತ ಗುಳೆ ಹೋಗುವುದು, ಅವರ ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೇ ನಿಲ್ಲುವುದು, ಅವರ ಯುವ ಮಗಳು, ಸೊಸೆ ಕಾಣೆಯಾಗುವುದು ನಿತ್ಯದ ಪಾಡಾದರೂ, ನಮ್ಮ ಅಕಾಡೆಮಿಕ್ ವಲಯ ಈ ಕುರಿತು ಮೌನವಹಿಸಿರುವುದು ಕ್ಷೇಮವಲ್ಲ ಎಂದು ಅವರು ಹೇಳಿದರು.
ಸೂಕ್ತ ಡಾಟಾ ನಿರ್ಮಾಣ, ಕಾರಣಗಳ ದಾಖಲೀಕರಣ, ನಮ್ಮ ಓದಿನ ಅರಿವಿನಲ್ಲಿ ಕಾಣುವ ಪರಿಹಾರ, ಸರಕಾರಕ್ಕೆ ತಕ್ಷಣದ ನಿರ್ಣಯ ಕೈಗೊಳ್ಳಲು ಸಹಾಯಕವಾಗಬಲ್ಲದು. ಗಣಿಗಾರಿಕೆಯ ನಂತರದ ಪುನರ್ವಸತಿ, ಕಾಡಿನ ಮರುಹುಟ್ಟು, ಜಲಮೂಲಗಳ ಸಂರಕ್ಷಣೆ, ಕನ್ನಡ ವಿಶ್ವವಿದ್ಯಾಲಯದ ಕೋರ್ಸುಗಳ ಅವಿಭಾಜ್ಯ ಅಂಗವಾದಾಗ, ಸಮಾಜ ಮತ್ತು ವಿಶ್ವವಿದ್ಯಾಲಯದ ಮಧ್ಯೆ ಇರುವ ಅಂತರ ಕಡಿಮೆಯಾಗಲು ಸಾಧ್ಯ ಎಂದು ಅವರು ಹೇಳಿದರು.
ಹೊಸ ಯುಗಕ್ಕೆ ಬೇಕಾದ ಶಾಸ್ತ್ರ, ಟೆಕ್ನಾಲಜಿಯಲ್ಲಿ ನಾವು ಶಿಕ್ಷಕರು ತರಬೇತಿ ಪಡೆದು, ಯುವ ಪೀಳಿಗೆಯನ್ನು ಸಜ್ಜುಗೊಳಿಸುವುದು ತುರ್ತು ಅವಶ್ಯಕತೆ ಇದೆ. ಜಾಗತಿಕ ಹಕೀಕತ್ತು ಎಂಬುದನ್ನು ನಾವು ತುರ್ತಾಗಿ ತಿಳಿದುಕೊಂಡಷ್ಟೂ ನಮ್ಮ ಭವಿಷ್ಯದ ದಾರಿ ಸ್ಪಷ್ಟವಾಗಲಿದೆ ಎಂದರು.
ವಿಶ್ಲೇಷಣಾತ್ಮಕ ಚಿಂತನೆ ಮತ್ತು ಸಮಾಚಾರ, ಸಕ್ರಿಯ ಕಲಿಕೆ ಮತ್ತು ಕಲಿಕಾ ತಂತ್ರಗಳು,ಸಂಶ್ಲ್ಲಿಷ್ಟ(ಸಂಕೀರ್ಣ) ಸಮಸ್ಯೆ-ಪರಿಹಾರ, ವಿಮರ್ಶಾತ್ಮಕ ಚಿಂತನೆ ಮತ್ತು ವಿಶ್ಲೇಷಣೆ, ಸೃಜನಶೀಲತೆ, ಅಸಲೀತನ, ಜವಾಬ್ದಾರಿ ತೆಗೆದುಕೊಳ್ಳುವ ಛಾತಿ,ಮುಂದಾಳುತನ ಮತ್ತು ಸಾಮಾಜಿಕ ಪ್ರಭಾವ,ತಂತ್ರಜ್ಞಾನದ ಉಪಯೋಗ, ಅದರ ಬಲವರ್ಧನೆ ಮತ್ತು ನಿಯಂತ್ರಣ,ತಾಂತ್ರಿಕ ಡಿಸೈನ್ ಮತ್ತು ಪ್ರೋಗ್ರಾಮಿಂಗ್, ಸ್ಥಿತಿಸ್ಥಾಪಕತ್ವ, ಒತ್ತಡ ಸಹಿಸುವಿಕೆ ಮತ್ತು ಹೊಂದಾಣಿಕೆ,ತಾರ್ಕಿಕತೆ, ಸಮಸ್ಯೆ, ಸಮಾಧಾನ ಮತ್ತು ಕಲ್ಪನಾಶಕ್ತಿಯಂತ ಕೌಶಲ್ಯಗಳನ್ನು ನಮ್ಮ ವಿಶ್ವವಿದ್ಯಾಲಯ ಗಂಭೀರವಾಗಿ ಅಧ್ಯಯನ ಮಾಡಬೇಕು ಎಂದರು.
ಜಾಗತಿಕ ಆರ್ಥಿಕ ಪೋರಂ ಗುರುತಿಸಿದ ಭವಿಷ್ಯದ ಕೌಶಲ್ಯಗಳನ್ನು ಅಳವಡಿಸಿಕೊಂಡು ನಮ್ಮ ಪಠ್ಯಕ್ರಮಗಳು ನಿರ್ಮಾಣಗೊಂಡಿದ್ದೇ ಆದರೆ, ಕನ್ನಡ ಮಾಧ್ಯಮದಲ್ಲಿ ಓದುವ, ಕನ್ನಡ ವಿಷಯವನ್ನು ಅಭ್ಯಸಿಸುವ ಮಕ್ಕಳು ಆತ್ಮವಿಶ್ವಾಸದಿಂದ ಜಾಗತಿಕ ಸ್ಪರ್ಧೆಯಲ್ಲಿ ಭಾಗವಹಿಸಬಲ್ಲರು ಎಂದರು.
ಕುಲಪತಿಗಳಾದ ಡಾ.ಸ.ಚಿ.ರಮೇಶ ಅವರು ಸ್ವಾಗತ ಭಾಷಣ ಮಾಡಿದರು. ಕನ್ನಡ ನಾಡು-ನುಡಿಗೆ ಅನುಪಮ ಸೇವೆ ಸಲ್ಲಿಸಿರುವ ಗೋ.ರು.ಚನ್ನಬಸಪ್ಪ,ಡಾ.ಭಾಷ್ಯಂಸ್ವಾಮಿ ಮತ್ತು ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ಅವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ನಾಡೋಜ ಪದವಿ ನೀಡಿ ಗೌರವಿಸಿದರು.
ಈ ನುಡಿಹಬ್ಬದಲ್ಲಿ 1380 ವಿದ್ಯಾರ್ಥಿಗಳಿಗೆ ಪದವಿ ಪಡೆದರು. ಚಿತ್ರದುರ್ಗದ ಶಿವಮೂರ್ತಿ ಮುರುಘಾಶರಣರು(ವಚನ ಸಂಸ್ಕøತಿಯ ಸಮುದಾಯ ತತ್ವ ಮತ್ತು ಸಮಕಾಲೀನ ಸಂದರ್ಭ), ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ(ಮುದ್ರಣ ಮಾಧ್ಯಮ:ಸಮಕಾಲೀನ ವಿದ್ಯಮಾನಗಳು), ಕಲ್ಕುಳಿ ವಿಠಲ್ ಹೆಗ್ಗಡೆ(ಮಳೆನಾಡು ಅಧ್ಯಯನ), ಬಿ.ಎಸ್.ಪುಟ್ಟಸ್ವಾಮಿ(ಹಳೇ ಮೈಸೂರಿನ ಒಕ್ಕಲಿಗರ ಸ್ಥಿತ್ಯಂತರಗಳು) ಅವರಿಗೆ ಡಿ.ಲಿಟ್ ಪದವಿ,100 ಜನರಿಗೆ ಪಿಎಚ್ಡಿ ಪದವಿಗಳನ್ನು ಇದೇ ಸಂದರ್ಭದಲ್ಲಿ ರಾಜ್ಯಪಾಲರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ, ವಿವಿಯ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ನಿಕಾಯಗಳ ಡೀನರು ಸೇರಿದಂತೆ ಅನೇಕರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243