ದಿನದ ಸುದ್ದಿ

ಕಾರ್ಮಿಕ ಇಲಾಖೆ ತಂಡದಿಂದ ಹೋಟೆಲ್ ಗಳ ಮೇಲೆ ದಾಳಿ : ಬಾಲಕಾರ್ಮಿಕರ ಪತ್ತೆ ; ಕೆಲಸದಿಂದ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ದುಡಿಯುವ ಮಕ್ಕಳನ್ನು ಪತ್ತೆ ಹಚ್ಚಲು ಕಾರ್ಮಿಕ ಇಲಾಖೆಯ ಸಹಯೋಗದ ತಂಡಗಳು ಜ.29 ಮತ್ತು 30 ರಂದು ನಗರದ ಪೂಜಾ ಹೋಟೆಲ್, ಚಾಮರಾಜಪೇಟೆ, ಪಿ.ಬಿ.ರಸ್ತೆ ಹಾಗೂ ಶ್ರೀಗಂಧ ಹೋಟೆಲ್ ಹತ್ತಿರದಲ್ಲಿ ದಾಳಿ ಮಾಡಿ ದುಡಿಯುವ 4 ಗಂಡು ಮಕ್ಕಳನ್ನು ಪತ್ತೆ ಹಚ್ಚಿ ಕೆಲಸದಿಂದ ಬಿಡುಗಡೆ ಮಾಡಲಾಯಿತು.

ಜಿಲ್ಲಾಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶದಲ್ಲಿ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ 2 ತಂಡಗಳು ಈ ಕಾರ್ಯ ಕೈಗೊಂಡು, ಮಕ್ಕಳನ್ನು ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಯಿತು.

ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಕಾರ್ಮಿಕ ನಿರೀಕ್ಷಕರು, 1,2,3 ನೇ ವೃತ್ತ ರಾಜಶೇಖರ್ ಹಿರೇಮಠ, ನಾಗೇಶ್ ಆರ್, ರಾಜಪ್ಪ ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಅಧಿಕಾರಿ ಕವಿತಕುಮಾರಿ, ಎನ್.ಸಿ.ಎಲ್.ಪಿ. ಯೋಜನಾ ನಿರ್ದೇಶಕರು ಪ್ರಸನ್ನ ಇ.ಎನ್ ಹಾಗೂ ಪೊಲೀಸ್ ಸಿಬ್ಬಂದಿ ತಂಡದಲ್ಲಿದ್ದರು.

14 ರಿಂದ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಾಲೀಕರು 14 ರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಂಡಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098, ಕಾರ್ಮಿಕ ಇಲಾಖೆ ದೂರವಾಣಿ ಸಂಖ್ಯೆ. 08192-237332,230094 ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆಯ ದೂರವಾಣಿ ಸಂಖ್ಯೆ.08192-256626 ಗೆ ಕರೆಮಾಡಿ, ಹಾಗೂ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಲು ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version