ನೆಲದನಿ
ಲಕ್ಷ್ಮಣ್ ಜೀ ; ನಮ್ಮ ನಡುವಿನ ಬುದ್ಧ..!
- ಪರಶುರಾಮ್. ಎ
ಕವಿ ಲಕ್ಷ್ಮಣ್ ಜೀ ನಮಗೆಲ್ಲ ಅಣ್ಣನಂತೆ, ಗುರುವಿನಂತೆ ಇದ್ದರು. ಅವರು ಎಂದಿಗೂ ನಾನೊಬ್ಬ ಪ್ರತಿಷ್ಟಿತ ಕವಿ, ಹೋರಾಟಗಾರ, ಜಾತಿ ವಿನಾಶ ವೇದಿಕೆಯ ಅಧ್ಯಕ್ಷನೆಂಬ ಅಹಂ ಅವರಿಗೆ ಕಿಂಚಿತ್ತು ಇರಲಿಲ್ಲ. ಕೇವಲ ಸಾಮಾನ್ಯನೊಳಗೊಬ್ಬ ಸಾಮಾನ್ಯನಂತೆ ಬದುಕಿದವರು.
ನಮಗೆಲ್ಲ ಆದರ್ಶವಾಗಿ ಉಳಿದರು. ಯಾವುದಾದರೂ ಸಾಮಾಜಿಕ ಹೋರಾಟ ಶಿಬಿರಗಳಿದ್ದಲ್ಲಿ ಮುಂಚೂಣಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ನಮಗೂ ಅಂತಹ ಕಾರ್ಯಕ್ರಮಗಳಿಗೆ ಬರಲು ತಿಳಿಸಿ, ಅಲ್ಲಿನ ವೇದಿಕೆಗಳಲ್ಲಿ ಮಾತನಾಡುವಂತೆ ಮೈಕ್ ನೀಡಿ ಅವಕಾಶ ಒದಗಿಸುತ್ತಿದ್ದರು.
ಇದಕ್ಕೆ ಉದಾಹರಣೆ ಆದಿಜಾಂಬವ ಸಂಘದಿಂದ ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪತ್ರಕರ್ತೆ ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹೋರಾಟ ಮಾಡುವಾಗ ಹಿಂದಿನ ಸಾಲಿನಲ್ಲಿದ್ದ ನಾನು ಮತ್ತು ಬಸವಣ್ಣ (ಬಸವರಾಜು)ನಿಗೆ ಕರೆದು ಮಾತನಾಡುವಂತೆ ಹೇಳಿದರು, ನಾವಿಬ್ಬರೂ ಅಂದು ಧೈರ್ಯವಾಗಿ ನಿಸ್ಸಂಕೋಚದಿಂದ ರಾಜ್ಯ ಸರ್ಕಾರದ ಈ ಕೇಸಿನ ನಿರ್ಲಕ್ಷ ಮತ್ತು ಪೋಲಿಸರು ನ್ಯಾಯಯುತವಾಗಿ ವಿಚಾರಣೆ ಮಾಡುವಂತೆ ಒತ್ತಾಯಿಸಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಮಾತನಾಡಿದೆವು.
ಮೈಕ್ ಹಿಂದಿರುಗಿಸುತ್ತಿದ್ದಂತೆ ಲಕ್ಷ್ಮಣ್ ಜೀ ನನ್ನ ಬಳಿ ಬಂದು ‘ಲೋ ಅಣ್ಣಾ ಚೆನ್ನಾಗೆ ಮಾತ್ನಾಡ್ತ್ಯಲ್ಲೋ, ವಿದ್ಯಾರ್ಥಿಗಳು ಮಾತನಾಡಬೇಕು ವೇದಿಕೆ ಸಿಕ್ಕಾಗ ಮಾತಾಡೋ’ ಅಂದ್ರು. ಆಯ್ತ್ ಸಾರ್ ಅಂದೆ, ‘ಇನ್ನು ಮುಂದೆ ನನ್ನ ಜೊತೆಯಲ್ಲಿ ಹೋರಾಟಕ್ಕೆ ಎಲ್ಲಿಯೇ ಬಂದರು ನಾನು ಮಾತನಾಡಿದ ಮೇಲೆ ನೀನು ಮಾತನಾಡಬೇಕು ತಿಳೀತಾ? ತಪ್ಪಿಸ್ಕಂಡ್ರೆ ನಿನ್ನ ನಾನು ಉಗಿತಿನಿ ನೋಡ್ಕಾ!!’ ಎಂದು ಷಹಬ್ಬಾಷ್ ಹೇಳಿ ಬೆನ್ನು ತಟ್ಟಿದ್ದರು. ಇದು ನನ್ನ ಹೋರಾಟದ ಮೊದಲ ಮಾತಿಗೆ ಲಕ್ಷ್ಮಣ್ ಜೀ ಅಭಿಮಾನದ ಮತ್ತು ಪ್ರೀತಿಯನ್ನು ಸೂಚಿಸಿದ ಪರಿ.
ಬಸವಣ್ಣನ ಮನೆಯ ಮೇಲೆ ಆಗಾಗ ಭಾನುವಾರವೋ ಅಥವಾ ಎಂದಾದರೂ ಒಂದು ದಿನ ಸ್ನೇಹಿತರೆಲ್ಲ ಸೇರಿ ಮಾಂಸದಡುಗೆಯ ಮಾಡಿ ಸ್ನೇಹಕೂಟ ಏರ್ಪಡಿಸುವುದು ನಮ್ಮ ಬಳಗದಲ್ಲಿ ಆಗಾಗ ಸಾಮಾನ್ಯ. ಒಮ್ಮೆ ಇಂತಹ ಮಾಂಸದಡುಗೆಯ ಸ್ನೇಹಕೂಟಕ್ಕೆ ಲಕ್ಷ್ಮಣ್ ಜೀ ವಿಶೇಷ ಆಹ್ವಾನಿತರು. ಅಂದಿನ ಸ್ಪೆಷಲ್ ಫೋರ್ಕ್ ಮತ್ತು ಭೀಫ್ ಮಾಂಸದಡುಗೆ. ಬೀಫ್ನ ಮನೆಯ ಮಾಂಸದಡುಗೆ ಎಂದರೆ ಲಕ್ಷ್ಮಣ್ರಿಗೆ ಅಷ್ಟೇ ಇಷ್ಟ ಕೂಡಾ.
ಆ ಸ್ನೇಹಕೂಟಕ್ಕೆ ಅಡುಗೆ ತಯಾರಾಗುವ ವೇಳೆಗೆ ಬಂದ ಇವರು ಸ್ನೇಹಿತರ ಬಳಗವನ್ನು ಕಂಡು ತುಂಬ ಸಂತಸಗೊಂಡು ಇಂತಹ ಕ್ಷಣಗಳನ್ನು ನೀವು ನನಗೆ ಮೊದಲಿನಿಂದಲೂ ನೀಡಬೇಕಿತ್ತು ಕಣೊ ಲೋ ಅಣ್ಣ ಎಂದರು. ಭೀಫ್ ಅಡುಗೆ, ಸ್ನೇಹಿತರ ಬಳಗ, ನಗುಕೇಕೆ, ವಿಚಾರ ವಿನಿಮಯಕ್ಕೆ ಪ್ರಾಶ್ಯಸ್ತ ಸ್ಥಳ, ನೆಮ್ಮದಿ ನೀಡುವ ತಾಣವಾಗಿ ಕಂಡ ಸಮಯವನ್ನು ಲಕ್ಷ್ಮಣ್ ಸಾರ್ ಅರೆಕಾಲ ಗದ್ಗದಿತರಾಗಿದ್ದರು.
ಅಡುಗೆ ಇನ್ನೇನು ಮುಗಿಯುತ್ತಿದ್ದಂತೆ ಜೇಬಿನಿಂದ ಪುಟ್ಟ ಬಾಟಲ್ ತೆಗೆದು ಅಣ್ಣಾ ಒಂದು ಗ್ಲಾಸ್ ಒಂದು ತಟ್ಟೆಗೆ ಸಾರು ಮಾಂಸದ ಪೀಸ್ ಒಂಚೂರು ಹಾಕ್ಕೊಂಡು ನೀರು ತಗೊಂಡ್ ಬಾರಣ್ಣಾ ಅಂದರು. ಅಷ್ಟನ್ನೂ ತಂದು ಕೊಟ್ಟೆ ಹೆಬ್ಬೆರಳಿನ ಗಾತ್ರದ ಆ ಪುಟ್ಟ ಬಾಟಲಿನಿಂದ ಅರ್ಧ ಗ್ಲಾಸಿಗೆ ಉಯ್ದು, ಇನ್ನರ್ಧ ಗ್ಲಾಸಿಗೆ ಕೊಂಚ ನೀರು ಬೆರೆಸಿ ಬಾಟಲಿನಲ್ಲಿ ಉಳಿದ ಅರ್ಧ ಯಾರಿಗಾದರು ಕೊಟ್ಟು ಬಿಡಿ ಎಂದು ಹೇಳುತ್ತಾ, ಮಾಂಸದ ತುಂಡು ಕೈಯಲ್ಲಿ ಹಿಡಿದು ಒಂದೊಂದೆ ಗುಟುಕು ಡ್ರಿಂಕ್ಸ್ ಹೀರುತ್ತಾ ಮಾಂಸ ನಾಲಿಗೆಗೆ ಸೋಕಿಸಿ ಚಪ್ಪರಿಸಿ ತಿನ್ನುತ್ತಾ, ಅಡುಗೆಗೆ ಒಳ್ಳೆ ರುಚಿಯಿದೆ, ಬಹಳ ಚೆನ್ನಾಗಿದೆ ಲೋ ಅಣ್ಣಂದಿರ ಅಡುಗೆಯೆಂದು ಅದನ್ನು ಖಾಲಿಮಾಡಿದರು.
ಅವರಿಗೆ ಒಂದೆರೆಡು ಬಾರಿ ಮಾಂಸ ಕೊಡಲು ನಾನು ಬರಿಗಾಲಲ್ಲಿ ಓಡಾಡುತ್ತಿದ್ದನ್ನು ಗಮನಿಸಿ ಬಾ ಇಲ್ಲಿ, ಬರಿಗಾಲಲ್ಲಿ ಓಡಾಡೋದು ಆರೋಗ್ಯಕ್ಕೆ ತುಂಬ ಒಳ್ಳೆದು ದಿನಕ್ಕೆ ಸ್ವಲ್ಪ ಸಮಯವಾದರೂ ಬರಿಗಾಲ್ಲಿ ಓಡಾಡು, ನಾನು ದ,ಕೊರಿಯಾ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿಯ ಜನ ಇಂತಹ ಅಭ್ಯಾಸ ಇಟ್ಟುಕೊಂಡಿದ್ದಾರೆ ಎಂದರು. ನಾನು ಅದಕ್ಕೆ ಉತ್ತರವೆಂಬಂತೆ ಅಣ್ಣಾ ನಮಗೆ ಅಭ್ಯಾಸ ಯಾಕೆ ಬೇಕು, ನಮಗೆಲ್ಲಾ ಚಿಕ್ಕ ವಯಸ್ಸಿನಲ್ಲಿ ಚಪ್ಪಲಿಯೇ ಇಲ್ಲದಂತೆ ಹಾಗೆ ಓಡಾಡಿಕೊಂಡಿದ್ದೇವಲ್ಲಾ ಇದಕ್ಕೆ ಅಭ್ಯಾಸವೇತಕೆ ಅಂದೆ.
ಅದಕ್ಕವರು ನಿಜ!! ನಿಜ!! ಅಣ್ಣಾ ಈ ಮಾತು! ನನ್ನ ಜೀವನಕ್ಕು ಈ ಮಾತು ಹೊಂದುವಂತದ್ದೇ ಎಂದು ಮನದೊಳಗೆ ಮಂದಸ್ಮಿತ ನಕ್ಕು ಬೀರಿ ಬಾಲ್ಯದಲ್ಲಿ ಚಪ್ಪಲಿಯಿಲ್ಲದೆ ಬದುಕಿದ ಸವಿಯಾದ ಗಾಯವೋ ದಿನಗಳೋ ಏನೋ ನೆನಸಿಕೊಂಡರು. ಕೊಂಚ ಸಮಯ ಕಳೆದು ನಾನು ಹೊರಡ್ತಿನಿ, ಹೋಗಿ ರೆಸ್ಟ್ ಮಾಡ್ತಿನಿ ಅಂದರು. ನಾನೇ ಅವರನ್ನು ಮನೆಯವರೆಗೂ ಬೈಕಿನಲ್ಲಿ ಡ್ರಾಪ್ ಮಾಡಿ ಬೀಳ್ಕೊಟ್ಟೆ. ಹಿಂದಿರುಗಿ ಬಂದು ಲೋ ಅಣ್ಣ ಇನ್ನೊಮ್ಮೆ ಅಂತಹ ಮಾಂಸದಡುಗೆ ಊಟಕ್ಕೆ ನನಗೆ ಮೊದಲೇ ತಿಳಿಸ್ರೋ ನಾನು ಬಂದೆ ಬರ್ತೀನಿ ಎಂದಿದ್ದರು.
ಅವರಿಗೆ ಆ ಒಂದು ಸ್ನೇಹಕೂಟದಲ್ಲಿ ಕಳೆದ ಸಂದರ್ಭ ಸಮಯವೆಲ್ಲಾ ಎಷ್ಟು ಆಪ್ತತೆಯನ್ನು ಬಯಸಿತ್ತು ಎಂದು ಅವರ ಈ ಮಾತುಗಳಲ್ಲಿ ವ್ಯಕ್ತವಾಗಿತ್ತು. ಅವರ ಮನಸ್ಸು ಸದಾ ಜಾಗೃತವಾಗಿ ನಮ್ಮ ಸ್ನೇಹಕೂಟವನ್ನು ಬಯಸಿದ್ದದ್ದನ್ನು ಕೇಳುತ್ತಿತ್ತು. ಇಂದು ನಮ್ಮ ಅವರ ಒಡನಾಟವೆಲ್ಲಾ ಸ್ಮøತಿಪಟಲದಲ್ಲಿ ಅಚ್ಚಾಗಿ ಆಗಾಗ ಅವರ ನೆನಪುಗಳು ಕಣ್ಣ ಮುಂದೆ ಬಂದು ತೇವಗೊಳಿಸುತ್ತದೆ.
ಅದ್ಯಾವುದೊ ಆತ್ಮೀಯತೆ ಲಕ್ಷ್ಮಣ್ ಜೀಗೆ ನನಗೆ ಹೆಚ್ಚಿತ್ತು, ಬಹುಶಃ ವಿಧ್ಯಾರ್ಥಿಯಂತಲೋ ಸಾಹಿತ್ಯದ ಓದುಗನಂತಲೋ ಎಂಬುದು ಸಹ ತಿಳಿಯದು. ಲೋ ಅಣ್ಣ ಸ್ಟೂಡೆಂಟ್ಗಳು ಅಂಬೇಡ್ಕರರ ಬಗ್ಗೆ ಓದಿ ತಿಳಿದು ಬರಿಬೇಕು. ನಿನಗೆ ಏನ್ ಅನ್ಸುತ್ತೊ ಅದ ಬರಿ ಅದ್ನಾ ನಾನೇ ತಿದ್ದಿ ನಂಗೊತ್ತಿರೊ ಯಾವ್ದಾದ್ರೂ ಪತ್ರಿಕೆಗೆ ನಂಗೊತ್ತಿರೋ ಹುಡ್ಗ ಬರ್ದಿರೋದು ಅಂತ ಹೇಳಿ ಹಾಕಿಸ್ತೀನಿ, ನೀನ್ ಬರಿಯೋ ಅಣ್ಣ ಅನ್ತಿದ್ರು.
ಅವರು ಲೋ ಅಣ್ಣ ಎಂದು ಸಂಬೋದಿಸುತ್ತಿದ್ದೆ ಹೆಚ್ಚು ಪ್ರಶ್ನೆಯಂತಿತ್ತು!. ಲೋ ಬಳಸೋದು ಯಾರಿಗೆ? ಚಿಕ್ಕವರಿಗೆ. ಅಣ್ಣ ಅನ್ನೋದು ಯಾರಿಗೆ ಬಳಸೋದು? ದೊಡ್ಡವರಿಗೆ. ಆದರೆ ಲಕ್ಷ್ಮಣ್ ಜೀ ಕಣ್ಣಲ್ಲಿ ಎಲ್ಲರೂ ಸಮಾನರಾಗಿ ಕಂಡದ್ದರಿಂದಲೇ ‘ಲೋ ಅಣ್ಣ’ ಎನ್ನುತ್ತಿದ್ದರೇನೋ? ಲಕ್ಷ್ಮಣ್ ಜೀ ಮಾತಿನಂತೆ ಒಂದು ಲೇಖನ ಬರೆದೆ, ಅದು ಸ್ಪರ್ಧಾ ಪರೀಕ್ಷೆಯಲ್ಲಿ ಓದಿಗೆ ತೊಡಗಿ ವಿಧ್ಯಾರ್ಥೀಗಳ ಮನಸ್ಥಿತಿ ತೊಳಲಾಟದ ಕುರಿತು.
ಅದು ಚಳುವಳಿ ಚಿಂತನೆ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಲಕ್ಷ್ಮಣ್ ಜೀಗೆ ತೋರಿಸುವ ಮುನ್ನವೇ ಅವರು ನಮ್ಮನ್ನು ಬಿಟ್ಟು ಅಗಲಿದರು. ನನಗೆ ಅವರಿಂದ ಲೇಖನದ ಅಭಿಪ್ರಾಯವನ್ನು ಕೇಳುವ ಭಾಗ್ಯವೇ ಇಲ್ಲವಾಗಿತ್ತು. ತಾಯಿ ಚೊಚ್ಚಲ ಮಗುವಿಗೆ ಜನ್ಮವಿತ್ತು, ಮಗುವಿನ ಮುಖ ನೋಡದೆ, ಮುದ್ದಿಸಿ ಆನಂದಿಸದೆ ಮಗುವನ್ನು ಬಿಟ್ಟು ಅವಳು ಹೋದಂತೆ ನನ್ನ ಪಾಲಿಗೆ ಆಗಿದ್ದು. ಮಗುವಿನ ಮುಖ ನೋಡದೆ ಅನಾಥವಾದಂತೆ ಮಾಡಿ ಹೋದ ಮಗುವಿನಂತೆ ಸದಾ ನನ್ನೆದೆಯಲ್ಲಿ ಅನಾಥ ಪ್ರಜ್ಞೆ ಕಾಡುವಂತೆ ಅವರ ಸಾವು ನನ್ನನ್ನು ದಿಗ್ಬ್ರಮೆಗೊಳಿಸಿತು ಈ ನೋವು ಶಾಶ್ವತವಾಗಿ ಉಳಿಯಿತು.
ಲಕ್ಷ್ಮಣ್ ಜೀ ಬಗ್ಗೆ ಅವರ ಒಡನಾಟದಲ್ಲಿದ್ದ ಅಷ್ಟು ದಿನಗಳ ನೆನಪುಗಳಲ್ಲಿ ಹಲವು ಅಲೆ ಅಲೆಯಾಗಿ ಮೇಲೆದ್ದು ಬರುತ್ತದೆ. ನೋಟು ಅಮಾನ್ಯೀಕರಣವಾದ ಕಾಲ ಜ್ಞಾನಮೂರ್ತಿ ಲಾಯರ್ ಬಾಲನ್ ಸಾರ್ ಇತರೆ ಒಡನಾಡಿಗಳೆಲ್ಲಾ ಸೇರಿ ಪ್ರಗತಿಪರ ವೇದಿಕೆಯಿಂದ ಆರ್ಬಿಐ ಮುತ್ತಿಗೆ ಹಾಕಬೇಕು ನೋಟು ಅಮಾನ್ಯೀಕರಣವನ್ನು ಪ್ರತಿಭಟಿಸಿ ಹೋರಾಟ ಮಾಡಬೇಕೆಂದು ನಿರ್ಧರಿಸಿದ್ದರು, ಇದರಲ್ಲಿ ಕವಿ ಲಕ್ಷ್ಮಣ್ ಜೀಯು ಕೂಡಾ ಇದ್ದರು.
ಹೋರಾಟದ ದಿನ ಮುತ್ತಿಗೆ ಹಾಕಬೇಕಾದಂತಹ ಸಂಧರ್ಭದಲ್ಲಿ ಎಲ್ಲರೂ ಆರ್ಭಟಿಸಿ ಧಿಕ್ಕಾರ ಕೂಗಿ ಪ್ರಗತಿಪರ ವೇದಿಕೆಯಿಂದ ಆರ್ಬಿಐ ಮುತ್ತಿಗೆಗೆ ಮುನ್ನುಗ್ಗಿದ್ದೆವು. ಪೋಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪೋಲಿಸ್ ವಾಹನಕ್ಕೆ ಬಲವಂತವಾಗಿ ತುಂಬುತ್ತಿದ್ದರು. ಈ ನಡುವೆ ಲಕ್ಷ್ಮಣ್ ಜೀ ಹಾಗೂ ಇನ್ನಿತರೆ ಹಿರಿಯ ಜೀವಗಳಿಗೆ ಎಂತಾದರೂ ಹಾನಿಯಾದರೆ ಎಂಬ ಭಯದಲ್ಲಿಯೆ ನಾನು ಜ್ಞಾನಮೂರ್ತಿ ‘ಲಕ್ಷ್ಮಣ್ ಜೀ ಲಕ್ಷ್ಮಣ್ ಜೀ’ ಎಂದು ಕೂಗುತ್ತಿದ್ದೆವು.
ಪೋಲಿಸರು ತಮ್ಮ ಹಿಡಿತವನ್ನು ಭಿಗಿಗೊಳಿಸಿ ವಾಹನಕ್ಕೆ ತುಂಬಿಸಿಯೇ ಬಿಟ್ಟರು. ನಮ್ಮನ್ನು ಒಟ್ಟು 2 ತಂಡಗಳಾಗಿ ವಿಂಗಡಿಸಿ 2 ವಾಹನಗಳಿಗೆ ಪ್ರತಿಭಟನಾಕಾರರನ್ನು ಅರೆಸ್ಟ್ ಮಾಡಿದರು. ನಾವಿದ್ದ ವಾಹನದ ಪ್ರತಿಭಟನಾಕಾರರಲ್ಲಿ ಲಕ್ಷ್ಮಣ್ ಜೀ ಇರಲಿಲ್ಲ. ಇನ್ನೊಂದು ವಾಹನವನ್ನು ಕಿಟಕಿಯಿಂದಲೇ ಸಂಪರ್ಕಿಸಿ ಅಲ್ಲಿನ ಗೆಳೆಯರೊಂದಿಗೆ ವಿಚಾರಿಸಿದರೆ ಆ ವಾಹನದಲ್ಲೂ ಅವರು ಬಂಧಿಯಾಗಿರಲಿಲ್ಲ. ನಮಗೆ ಗಾಬರಿ ಹೆಚ್ಚಾಯಿತು, ಆ ಹಿರಿಯ ಜೀವಕ್ಕೆ ಹೋರಾಟದ ಗಲಾಟೆ ಪೋಲೀಸರ ತಳ್ಳಾಟದ ನೂಕು ನುಗ್ಗಲಿನಲಿ ಏನಾದರೂ ಆಪತ್ತಾಯಿತೆ ಎಂದು ಗಲಿಬಿಲಿ ಗಾಬರಿ ಭಯದಿಂದ ಲಕ್ಷ್ಮಣ್ ಜೀಯನ್ನು ಸಂತೆಯಲ್ಲಿ ಕಳೆದು ಹೋದ ಅಮ್ಮನಂತೆ ಕಿಟಕಿಯಿಂದ ಪೋಲೀಸರ ಗುಂಪಿನತ್ತ ಕಣ್ಣು ಹಾಯಿಸಿದರೆ ಅಲ್ಲಿ ಮೂಲೆಯಲ್ಲಿ ನಿಂತು ಸಾವಧಾನವಾಗಿ ನಗು ಮುಖದಿಂದ ನಮಗೆ ಬೈ ಬೈ ಹೇಳಿ ನಮ್ಮತ್ತ ಕೈ ಬೀಸುತ್ತಿದ್ದರು.
ನಂತರ ಅವರ ಮೊಬೈಲ್ಗೆ ಕರೆ ಮಾಡಿದರೆ ನಾನು ಅರೆಸ್ಟ್ ಆಗಲಿಲ್ಲ, ಪೋಲಿಸರು ನನ್ನತ್ತ ಬರಲಿಲ್ಲವೆಂದು ನಗುತ್ತಾ ಹೇಳಿದರು. ಸರಿ ಪ್ರತಿಭಟನಾಕಾರರನ್ನು ಎಲ್ಲಿಗೆ ಸಾಗಿಸುತ್ತಾರೆಂದು ತಿಳಿದು ಸ್ಥಳವನ್ನು ಹೇಳಿ ನಾನು ಅಲ್ಲಿಗೆ ಬಂದು ಭೇಟಿಯಾಗುವೆ ಅಂದರು . ಬೇಡ ಬೇಡ ಸಾರ್ ನೀವು ಹುಷಾರಾಗಿರಿ ಇಲ್ಲಿನ ವಿಚಾರ ಸಂಜೆ ವೇಳೆಗೆ ನಾವೆ ಬಂದು ಭೇಟಿ ಮಾಡಿ ತಿಳಿಸುವೆವು, ನೀವು ಮನೆಯತ್ತ ಹೊರಡಿ ಎಂದಾಗ ಆ ಕರೆಯಲ್ಲಿ ನನ್ನ ಮೊದಲ ಹೋರಾಟದ ಮಾರ್ಗದರ್ಶಕನಾಗಿ ಲಕ್ಷ್ಮಣ್ ಜೀಯಾಗಿದ್ದರು. ಆಗ ಒಂದು ಎಚ್ಚರಿಕೆ ಮಾತು ಕೊಟ್ಟರು.
ಅರೆಸ್ಟ್ ಆದ ಬಳಿಕ ನಿನ್ನ ವಿವರ ಪೋಲಿಸರು ಕೇಳುವರು ಆಗ ಯಾವುದನ್ನು ಸತ್ಯ ಹೇಳಬೇಡ ಸುಳ್ಳು ಹೆಸರು ವಿಳಾಸ ಬರೆಸು, ನೀನಿನ್ನು ವಿದ್ಯಾರ್ಥಿಯಿದ್ದಿಯಾ ಯಾವುದೇ ಕೇಸು ಬೀಳದಂತೆ ಎಚ್ಚರವಾಗಿರು ಭವಿಷ್ಯಕ್ಕೆ ತೊಂದರೆ ಆಗದಂತೆ ಹೆಸರು ವಿಳಾಸ ಕೊಡು. ಎಂದರು ಹಾಗೆ ಮಾತು ಮುಂದುವರೆಸಿ ಊಟ ತರಿಸಿ ಎಂದು ಪೋಲಿಸರಿಗೆ ಗತ್ತಾಗಿಯೇ ಕೇಳು ನಿನಗೇನು ಊಟ ಬೇಕೊ ಕೇಳು ಅನ್ನುವಾಗ ಮಾತಿನ ಮದ್ಯೆ ನಾನು ಊಟ ಕೇಳಿದರೆ ಏಟು ಕೊಟ್ಟರೆ? ಅನ್ನುತ್ತಿದ್ದಾಗಲೇ ಹೋರಾಟಗಾರರಿಗೆ,ಪ್ರತಿಭಟನಾಕಾರರಿಗೆ ಪೋಲಿಸರು ಹೆದರುತ್ತಾರೆ,ಅದರಲ್ಲೂ ನೀನು ವಿದ್ಯಾರ್ಥಿ ವಿಚಾರವಂತನಿದ್ದೀಯಾ ಕೇಳು ಪರ್ವಾಗಿಲ್ಲ.
ಇದಕ್ಕಾಗಿಯೇ ಅವರಿಗೆ ಸರ್ಕಾರದಿಂದ ಹಣ ಬರುತ್ತದೆ ಭಯಬೇಡ ಎಂದರು ನಾನು ಸರಿ ಸಾರ್ ಎಂದು ಮಾತು ಮುಗಿಸಿದೆ. ನಾನು ಕೂಡಾ ಅದರಂತೆ ಆ ದಿನವನ್ನು ಕಳೆದು ಹೇಗೊ ಹೊರಬಂದೆ, ಎರಡು ದಿನ ಕಳೆದು ಲಕ್ಷ್ಮಣ್ ಸಾರ್ನ ನಂದಿನಿ ಬಡಾವಣೆಯ ಗ್ರಂಥಾಲಯದಲ್ಲಿ ಭೇಟಿಯಾದೆ, ಅವರು ನಗುತ್ತ ಇದೇ ಮೊದಲ ಹೋರಾಟದ ಫಲ ಮುಂದೆ ಮುಂದಿನ ಹೋರಾಟಗಳಲ್ಲಿ ಎಚ್ಚರ. ನಾನು ಅರೆಸ್ಟ್ ಆಗಲಿಲ್ಲವೆಂದು ಮೌನದಿಂದಲೇ ನಗುತ್ತಿದ್ದರು. ಆ ನಗು ನನ್ನ ಹೋರಾಟದ ದಾರಿದೀಪವಾಗಿದೆ. ಮಾರ್ಗದರ್ಶನಕ್ಕೆ ಅವರಿರುವರು ಎಂಬ ಧೈರ್ಯ ನನ್ನಲಿದೆ. ಒಟ್ಟಾರೆ “ ಲಕ್ಷ್ಮಣ್ ಜೀ ಎಂದರೆ ನಮ್ಮ ನಡುವಿನ ಬುದ್ಧನೇ ಸರಿ.”
ಸುದ್ದಿದಿನ.ಕಾಂ|ವಾಟ್ಸಾಪ್|9980346243