ನೆಲದನಿ

ನುಡಿಯ ಒಡಲು -04 | ಭಾಷಾ ವೈವಿಧ್ಯತೆಯನ್ನು ಕಾಪಾಡುವುದೆಂದರೇನು?

Published

on

Art : Sunny LA
  • ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಭಾಗ -02

ಭಾಷೆಯನ್ನು ಮನುಷ್ಯನ ಅಂತಸ್ಥ ಸ್ವಭಾವದ ಅಭಿವ್ಯಕ್ತಿಯನ್ನಾಗಿ ನೋಡುವ ತಾತ್ವಿಕತೆ ಇವತ್ತು ಪ್ರಬಲವಾಗಿದೆ. ಇದು ಭಾಷೆಯ ಗುಣವನ್ನು ಹೇಳುತ್ತದೆ ಹೊರತು ಯಾವುದೇ ನಿರ್ದಿಷ್ಟ ಭಾಷೆಗೆ ಮಾತ್ರ ಇದನ್ನು ಅನ್ವಯಿಸಿ ಹೇಳಿಲ್ಲ. ಎಲ್ಲ ಮಾನವ ಸಹಜ ಭಾಷೆಗಳು ವೈಶ್ವಿಕ ವ್ಯಾಕರಣವನ್ನೇ (ಯುನಿವರ್ಸಲ್ ಗ್ರ್ಯಾಮರ್) ನೆಲೆಯಾಗಿಸಿಕೊಂಡಿರುತ್ತವೆ. ಈ ಸಾಮಾನ್ಯ ಗ್ರಹಿಕೆಯನ್ನು ಭಾಷಿಕ ಪರಿಕಲ್ಪನೆಗಳು ಮತ್ತು ಭಾಷೆಯ ರಾಚನಿಕ ಸಂಕೀರ್ಣತೆಯ ಪ್ರಮಾಣವನ್ನಾಗಿ ನೋಡಲಾಗುತ್ತದೆ.

ಹಾಗಾದರೆ, ಭಾಷೆಯ ತಳಹದಿಯೇ ವಿಶ್ವಾತ್ಮಕತೆಯಾದರೆ, ಚಿಂತನೆಯ ತಳಹದಿಯೂ ವಿಶ್ವಾತ್ಮಕವೇ? ಎಂಬ ಸಹಜ ಪ್ರಶ್ನೆಯೊಂದು ಇಲ್ಲಿ ಎದುರಾಗುತ್ತದೆ. ಏಕೆಂದರೆ, ನಮ್ಮ ಚಿಂತನಾಧಾರೆಯನ್ನು ನಮ್ಮ ತಾಯ್ನುಡಿ ರೂಪಿಸುತ್ತದೆ ಎಂದು ಬಲವಾಗಿ ವಾದಿಸಲಾಗಿದೆ. ‘ಮನುಷ್ಯರೆಲ್ಲರೂ ಒಂದೇ ಬಗೆಯಲ್ಲಿ ಯೋಚಿಸಬಲ್ಲರು’ ಎನ್ನುವ ತಾತ್ವಿಕ ಅಭಿಪ್ರಾಯಕ್ಕೆ ವಿರುದ್ಧವಾದ ನಂಬಿಕೆ ಇದಾಗಿದೆ. ಇದಕ್ಕೆ ಕಾರಣವೇನೆಂದರೆ ಸಾಂಸ್ಕ್ರುತಿಕ ವ್ಯತ್ಯಾಸಗಳು ಅತ್ಯಂತ ಆಳವಾಗಿ ಭಾಷೆಯೊಳಗೆ ನೆಲೆಗೊಂಡಿರುತ್ತವೆ ಎನ್ನುವುದಾಗಿದೆ. ಈ ದೇಶಿ ರಾಜಕಾರಣವನ್ನು ನಮ್ಮ ಇಡೀ ಭಾಷಿಕ ಪರಿಸರದೊಳಗೆ ಹೇಗೆ ಒಂದು ಮಾರ್ಗಸೂಚಿಯನ್ನಾಗಿ ಅಳವಡಿಸಲಾಗುತ್ತದೇ? ಎನ್ನುವುದೇ ಈ ವಾದದ ಹಿಂದಿನ ಸವಾಲು.

ಲೋಕವನ್ನು ಅರಿಯುವ, ಗ್ರಹಿಸುವ ಹಾಗೂ ಲೋಕದ ಕುರಿತು ಚಿಂತಿಸುವ ಬಗೆಗಳ ಮೇಲೆ ಭಾಷೆ ತನ್ನ ಪ್ರಭಾವವನ್ನು ಬೀರುತ್ತದೆ ಎನ್ನುವ ವಾದವನ್ನೂ ಇದು ಬಲಪಡಿಸುತ್ತದೆ. ಈ ಮೂಲಕ ಭಾಷೆ, ಸಂಸ್ಕ್ರುತಿ ಮತ್ತು ಚಿಂತನೆಗಳ ನಡುವೆ ಮಹತ್ವದ ನಂಟಸ್ತಿಕೆಯನ್ನು ಏರ್ಪಡಿಸಲಾಗಿದೆ. ಏಕೆಂದರೆ ಸಂಸ್ಕ್ರುತಿ ಪ್ರತಿದಿನದ ಬದುಕು ಎಂದಾದರೆ, ಭಾಷೆ ಪ್ರತಿದಿನದ ಮಾತು ಆಗಿರುತ್ತದೆ.

ಹಾಗಾಗಿ ಒಂದನ್ನೊಂದು ಪರಸ್ಪರ ಪ್ರಭಾವಿಸುವ ವಿನ್ಯಾಸವೊಂದು ರೂಪುಗೊಳ್ಳುತ್ತದೆ. ಆದರೆ ಸಾಂಸ್ಕ್ರುತಿಕ ಪ್ರಭಾವಗಳು ಅತ್ಯಂತ ಗಾಢವಾಗಿ ಎದ್ದು ಕಾಣುವುದು ಸಂಗೀತ ಅಭಿರುಚಿ, ಲೈಂಗಿಕತೆಯ ಬಗೆಗಿನ ಸಂವೇದನೆಗಳು ( ಮೋರ್ಸ್), ಉಡಿಗೆ ತೊಡಿಗೆಯ ವಿನ್ಯಾಸಗಳು ಎಂಬಿತ್ಯಾದಿ ಹೊರಮೈ ವಿನ್ಯಾಸಗಳಲ್ಲಿ ಮಾತ್ರ ನೋಡಲಾಗುತ್ತದೆ. ನುಡಿಯನ್ನೂ ಈ ವಿನ್ಯಾಸಗಳಲ್ಲಿ ಒಂದನ್ನಾಗಿ ಪರಿಗಣಿಸಬಹುದೇ? ಇಲ್ಲವೇ ನುಡಿಯನ್ನು ಇಡೀ ಸಂಸ್ಕ್ರುತಿಯ ನಿರ್ಮಿತಿಯನ್ನಾಗಿ (ಆರ್ಟಿಫ್ಯಾಕ್ಟ್) ನೋಡಬಹುದೇ? ಅಥವಾ ಇದೊಂದು ನಿಸರ್ಗದತ್ತವಾದ ನೆಲೆಯೇ? ಎಂಬ ಪ್ರಶ್ನೆಗಳೂ ಇಲ್ಲಿ ತಲೆಯೆತ್ತುತ್ತವೆ.

ಏಕೆಂದರೆ ‘ಜನಾಂಗೀಯ ಪ್ರಜ್ಞೆ’ (ಎತ್ನೋಗ್ರಾಫಿಕ್ ಸೆನ್ಸ್)ಯನ್ನು ರೂಪಿಸಲು ನುಡಿ ಮತ್ತು ಸಂಸ್ಕ್ರುತಿಯನ್ನು ಬಳಸಲಾಗುತ್ತದೆ. ಬಹುತೇಕ ಸನ್ನಿವೇಶದಲ್ಲಿ ಹೀಗೆ ಪ್ರಶ್ನಿಸುವ ಬಗೆಯೇ ಅಚ್ಚರಿಯ ಸಂಗತಿಯಾಗಿ ಕಾಣಬಹುದು. ಏಕೆಂದರೆ ಭಾಷೆ ಸಾಂಸ್ಕ್ರುತಿಕ ಆಚರಣೆಯೇ ಹೊರತು ಅದು ಸಾಂಸ್ಕ್ರುತಿಕ ಹುಸಿತನವಲ್ಲ ಎನ್ನುವ ನಂಬಿಕೆ ಬಲವಾಗಿರುತ್ತದೆ. ಇಲ್ಲಿ ಮತ್ತೊಂದು ಮಹತ್ವದ ಸಂಗತಿಯನ್ನು ನೋಡಬಹುದು ಅದೇನೆಂದರೆ, ಒಂದು ವೇಳೆ ಭಾಷೆಯನ್ನು ಮನಸ್ಸಿನ ಬಿಂಬವಾಗಿಯೇ ಪರಿಗಣಿಸಿದರೆ, ಅದರಲ್ಲಿ ನಾವು ಯಾವ ಪ್ರತಿಫಲನವನ್ನು ಕಾಣುತ್ತೇವೆ. ಅಂದರೆ ಮಾನವ ಸ್ವಭಾವವೋ? ಇಲ್ಲವೇ ನಮ್ಮ ಸಮೂಹಗಳ ಸಾಂಸ್ಕ್ರುತಿಕ ಆಚರಣೆಯೋ?

ದಿಟ, ಜಗತ್ತಿನಾದ್ಯಂತ ಭಾಷೆಗಳು ಭಿನ್ನಪ್ರಭೇದಗಳಿಂದ ಕೂಡಿರುತ್ತವೆ. ಹಾಗಂತ ಪ್ರತಿಯೊಂದು ಮಗುವೂ ಆಯಾ ಭಾಷೆಗೆ ಅನುಗುಣವಾದ ಕಸುವನ್ನು ಹೊಂದಿರಲಾರದು. ಪ್ರತೀ ಮಗು ಆಕಸ್ಮತ್ತಾಗಿ ಆಯಾ ಸಮುದಾಯದ ನುಡಿಯನ್ನು ಪಡೆದುಕೊಳ್ಳುತ್ತದೆ/ಕಲಿಯುತ್ತದಯೇ ಹೊರತು ಆಯಾ ನುಡಿ ಸಮುದಾಯದ ವಂಶವಾಹಿನಿಯನ್ನು ಅದು ಹುಟ್ಟಿನಿಂದ ಪಡೆದಿರುವುದಿಲ್ಲ. ಮಗುವಿನಲ್ಲಿ ಜೈವಿಕವಾಗಿ ಅಂತಸ್ಥವಾಗಿರುವುದು ನುಡಿ ಕಸುವು ಮಾತ್ರ. ಅದು ಯಾವುದೇ ನಿರ್ದಿಷ್ಟ ನುಡಿಗೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ.

ಹಾಗಾಗಿ ವೈಶ್ವಿಕ ವ್ಯಾಕರಣ ಎನ್ನುವುದು ಸಾರ್ವತ್ರಿಕ ಕಲ್ಪನೆಯಾಗಿದೆ. ಇದಕ್ಕೆ ಪ್ರಾದೇಶಿಕತೆ ಪ್ರಾಪ್ತವಾಗುವುದು ಭಾಷಿಕ ಭಿನ್ನಪ್ರಭೇದಗಳಿಂದ ಮಾತ್ರ. ಭಾಷೆಗಳ ನಡುವಣ ವ್ಯತ್ಯಾಸಗಳು ಎರಡು ನೆಲೆಯಲ್ಲಿ ಏರ್ಪಡುತ್ತವೆ. ಒಂದು ಬಳಕೆಗೆ ಸಂಬಂಧಿಸಿದರೆ, ಮತ್ತೊಂದು ರಚನೆಗೆ ಸಂಬಂಧಿಸಿದ ಬಗೆಯಾಗಿದೆ. ನುಡಿಗಳ ನಡುವಣ ರಾಚನಿಕ ಭಿನ್ನತೆಗಳನ್ನು ವಿಕಲ್ಪಗಳೆಂದು ಮತ್ತು ಬಳಕೆಗೆ ಸಂಬಂಧಿಸಿದ ಸಂಗತಿಗಳು ಸಾಂಸ್ಕ್ರುತಿಕವೂ ಹಾಗೂ ಪ್ರ್ಯಾಗ್ಮಾಟಿಕ್ ಆಯಾಮದಿಂದಲೂ ಕೂಡಿರುತ್ತವೆ.

ಹಾಗಾಗಿ ಪರಿಕಲ್ಪನೆಗಳಿಗೆ ಭಿನ್ನ ಹೆಸರು, ಸೂಚಕಗಳನ್ನು ಆಯಾ ಭಾಷಿಕರು ಆಯ್ಕೆ ಮಾಡಿಕೊಳ್ಳುವ ವಿಧಾನವನ್ನೇ, ನುಡಿಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನಾಗಿ ಗುರುತಿಸಲಾಗುತ್ತದೆ. ಈ ಒಂದೊಂದು ಸೂಚಕ ಇಲ್ಲವೇ ಹೆಸರು ಆಯಾ ಸಾಂಸ್ಕ್ರುತಿಕ ಅನಕೂಲತೆಗಳಿಗೆ ಹೊರತಾದ ಯಾವುದೇ ಬಗೆಯ ಕ್ಲೇಮ್ ಈ ಇಡೀ ಭಾಷಿಕ ಪ್ರಕ್ರಿಯೆಯೊಳಗೆ ಇರುವುದಿಲ್ಲ. ಮೇಲಾಗಿ ಈ ಯಾವುದೇ ಸೂಚಕ ಇಲ್ಲವೇ ಹೆಸರು ಆಯಾ ಸಂಸ್ಕ್ರುತಿಯೊಳಗೆಯೇ ನಿಚ್ಚಳವಾಗಿ ರೂಪುಗೊಂಡಿರುತ್ತದೆ ಹೊರತು, ಆಯಾ ವಸ್ತುವಿನ ಸ್ವರೂಪ/ಸ್ವಭಾವವನ್ನು ಯಥೇಚ್ಛವಾಗಿ ಸೂಚಿಸುವುದಿಲ್ಲ. ವಸ್ತುಗಳು ದಿಟದಲ್ಲಿ ಒಂದೇ ಬಗೆಯಲ್ಲಿರುತ್ತವೆ. ಕೊನೆಪಕ್ಷ, ಆಯಾ ವಾಸ್ತವದ ಗ್ರಹಿಕೆಯಲ್ಲಾದರೂ ಒಂದೇ ಬಗೆಯಲ್ಲಿರುತ್ತವೆ.

ಪ್ರತಿಯೊಂದು ಸಂಸ್ಕ್ರುತಿಯು ತಾನು ಬಯಸಿದಂತೆ, ತನ್ನದೇ ನುಡಿಯೊಳಗೆ ಪರಿಕಲ್ಪನೆಗಳನ್ನು ನೆಲೆಗೊಳಿಸಿಕೊಳ್ಳಲು ಮುಕ್ತವಾಗಿರುತ್ತದೆ. ಆದರೆ ಈ ಪರಿಕಲ್ಪನೆಗಳನ್ನು ರೂಪಿಸಿದ ಸೂಚಕಗಳ ಹಿಂದೆ ಅವುಗಳನ್ನು ರೂಪಿಸಿದವರ ಧೋರಣೆಗಳಿರುತ್ತವೆ. ಉದಾ.ಗೆ ಸಾಮಾಜಿಕ ತಾರತಮ್ಯವನ್ನು ಸೂಚಿಸುವ ಎಷ್ಟೊಂದು ಪದಗಳು ನಮ್ಮ ನುಡಿಯೊಳಗೆ ನೆಲೆನಿಂತಿವೆ. ಇದಕ್ಕೆ ಹೊರತಾಗಿಯೂ, ಒಂದೊಂದು ನುಡಿಯಲ್ಲಿಯೂ ತನ್ನದೇ ವಿಶೇಷ ಪದಕೋಶ ಮತ್ತು ಪದಸೂಚಕಗಳು ಇರುತ್ತವೆ.

ಉದಾ.ಗೆ ಜರ್ಮನ್ ಮತ್ತು ಫ್ರೆಂಚ್ ನುಡಿಗಳಲ್ಲಿ ಇಂಗ್ಲಿಶಿನ ‘ಮೈಂಡ್’ ಎಂಬ ಪದಕ್ಕೆ ಸಾಟಿಯಾದ ಪದವಿಲ್ಲ. ಹಾಗಂತ ಈ ಪರಿಕಲ್ಪನೆಯೇ ಈ ನುಡಿಗಳಲ್ಲಿ ಇಲ್ಲವೆಂದಲ್ಲ. ಹಾಗೂ ಝೆಫ್ಟಿಶ್ ಎನ್ನುವ ನುಡಿಯಲ್ಲಿ ಇಂಗ್ಲಿಶಿನ ಬಹುವಚನ ಸರ್ವನಾಮ ‘ವೀ’ ಎಂಬುದಕ್ಕೆ ಸಮನಾದ ಸರ್ವನಾಮವಿಲ್ಲ. ಆದರೆ ಈ ಕಲ್ಪನೆಯನ್ನು ಸೂಚಿಸುವ ವಿಭಿನ್ನ ಸರ್ವನಾಮ ರೂಪಗಳು ಈ ನುಡಿಯಲ್ಲಿವೆ. ‘ವೀ’ಗೆ ಸಂವಾದಿಯಾಗಿ ‘ಕಿತ’ (ಟು ಆಫ್ ಅಸ್ ಎಂದು ಅರ್ಥ. ಅಂದರೆ, ಮೀ ಆ್ಯಂಡ್ ಯು ಎಂದು), ‘ಕಿಮಿ’ (ಮೀ ಆ್ಯಂಡ್ ಸಮ್‍ಒನ್‍ಎಲ್ಸ್ ಬಟ್ ನಾಟ್ ಯು ಎಂದು ಅರ್ಥ) ಹಾಗೂ ‘ಟಯೋ’ (ಮೀ ಆ್ಯಂಡ್ ಯು ಆ್ಯಂಡ್ ಸಮ್‍ಒನ್‍ಎಲ್ಸ್ ಎಂದು ಅರ್ಥ) ಎಂಬ ಮೂರು ಭಿನ್ನ ರೂಪಗಳಿವೆ. ಈ ‘ವೀ’ ಎಂಬ ಸರ್ವನಾಮಕ್ಕೆ ತಮಿಳಿನಲ್ಲಿ ‘ನಮ್ಮ್’ ಮತ್ತು ‘ನಾಂಗ್’ ಎನ್ನುವ ಎರಡು ರೂಪಗಳಿವೆ. ಆದರೆ ಕನ್ನಡದಲ್ಲಿ ‘ನಾವು’ ಎನ್ನುವ ಒಂದೇ ರೂಪ ಇವತ್ತು ಬಳಕೆಯಲ್ಲಿದೆ.

ಸಮುದಾಯಗಳ ಸಂಸ್ಕ್ರುತಿಯ ಮೂಲಭೂತ ವಿನ್ಯಾಸಗಳನ್ನಾಗಿ ಇಂತಹ ಕೆಲವು ಕೋರ್ ವ್ಯಾಲ್ಯೂಗಳನ್ನು ಗುರುತಿಸಲಾಗುತ್ತದೆ. ಈ ಮೌಲ್ಯಗಳನ್ನು ಪ್ರತೀ ಸಮುದಾಯದ ಸಂಸ್ಕ್ರುತಿಯನ್ನು ಬಿಂಬಿಸುವ ಮೂಲಭೂತ ಅಂಶಗಳಲ್ಲಿ ಒಂದೆಂದು ಮಾನ್ಯಮಾಡಲಾಗುತ್ತದೆ.

ಮತ್ತು ಆಯಾ ಸಮೂಹಗಳ ಸಾಂಕೇತಿಕ ಪ್ರಾತಿನಿಧ್ಯತೆ ಹಾಗೂ ಸದಸ್ಯತ್ವವನ್ನು ಪಡೆದುಕೊಳ್ಳಲೂ ಈ ಮೌಲ್ಯಗಳನ್ನು ಪರಿಗಣಿಸಲಾಗುತ್ತದೆ (ಸ್ಮೋಲಿಕ್ಜ್ ಜೆ, 1981:76). ಏಕೆಂದರೆ, ಈ ಕೋರ್ ಮೌಲ್ಯಗಳ ಸಿದ್ಧಾಂತವು ಸಮೂಹಗಳನ್ನು ವಿಶಷ್ಟ, ಜನಾಂಗೀಯ, ಧಾರ್ಮಿಕ, ಸಾಂಸ್ಕ್ರುತಿಕ ಸಮುದಾಯಗಳನ್ನಾಗಿ ಬಲಪಡಿಸಲು ಒತ್ತಾಸೆಯಾಗುತ್ತದೆ ಎಂಬ ವಾದವನ್ನು ಸಮಾಜಶಾಸ್ತ್ರಜ್ಞ ಸೋಲ್ಮಿಕ್ಜ್. ಜೆ (1999) ಅತ್ಯಂತ ಬಲವಾಗಿ ಮಂಡಿಸುತ್ತಾನೆ. ಸಮೂಹಗಳ ಅಸ್ಮಿತೆಯನ್ನು ಗುರುತಿಸುವಲ್ಲಿ ಸಾಂಸ್ಕ್ರುತಿಕ ವಿನ್ಯಾಸಗಳು ಅತ್ಯಂತ ನಿರ್ಣಾಯಕ ಮತ್ತು ವಿಶಿಷ್ಟವೆಂದು ಪರಿಗಣಿಸಿದಾಗಲೆಲ್ಲಾ ಈ ವಾದವು ನೆರವಾಗುತ್ತದೆ.

ನುಡಿ ಮತ್ತು ಜನಾಂಗಗಳ ನಡುವಿನ ನಂಟಸ್ತಿಕೆಯನ್ನು ವಿವರಿಸಲು ಸ್ಮೋಲಿಕ್ಜ್ ವಿಭಿನ್ನ ಜನಾಂಗಗಳ ಮಾದರಿಗಳನ್ನು ಉಲ್ಲೇಖಿಸುತ್ತಾನೆ (1981:76-81). ಯಾವುದೇ ಜನಾಂಗೀಯತೆಯ ಸಾಮಾಜಿಕ ಅಂತಸ್ತನ್ನು ಸೂಚಿಸಲು ಈ ಕೋರ್ ಮೌಲ್ಯವನ್ನು ಸಂಸ್ಕ್ರುತಿಯ ಅತ್ಯಂತ ಮಹತ್ವದ ಗುಣವೆಂದು ಬಣ್ಣಿಸಲಾಗುತ್ತದೆ. ಮುಖ್ಯವಾಗಿ ತಾಯ್ನುಡಿಯ ಪರಿಕಲ್ಪನೆಯನ್ನು ಬಲಪಡಿಸುವಲ್ಲಿ ಇಂತಹ ತಾತ್ವಿಕ ಚೌಕಟ್ಟುಗಳು ಪುಷ್ಟಿ ನೀಡುತ್ತವೆ.

ಅಂದರೆ, ಸಂಸ್ಕ್ರುತಿಯನ್ನು ನುಡಿಯೊಂದರ ಸಾಂಕೇತಿಕ ವಿನ್ಯಾಸವನ್ನಾಗಿ ಇದನ್ನು ಮುಂಚೂಣೆಗೆ ತರಲಾಗುತ್ತದೆ. ನುಡಿಕೇಂದ್ರಿತ ಆರಾಧನೆಯ ಮಾದರಿಯನ್ನು ಇಲ್ಲಿ ನಿಚ್ಚಳವಾಗಿ ಕಾಣುತ್ತೇವೆ. ನುಡಿಯೊಂದನ್ನು ಜ್ಞಾನ ಪ್ರಸಾರಣದ ನೆಲೆಯನ್ನಾಗಿ ರೂಪಿಸುವ ಬದಲು ಭಾವನಾತ್ಮಕ ವಿದ್ಯಮಾನವಾಗಿ ಕಲ್ಪಿಸಲಾಗುತ್ತದೆ. ನುಡಿ ಬೆಳವಣಿಗೆ ಎಂಬುದು ಆಯಾ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ರೂಪಿಸಲು ಹೇಗೆ ಮತ್ತು ಎಷ್ಟು ನೆರವಾಗುತ್ತದೆ ಅನ್ನುವುದನ್ನು ಆಧರಿಸುತ್ತದೆ.

ಹಾಗಾಗಿ ಅಸ್ಮಿತೆ ಎನ್ನುವುದು ಕೇವಲ ಸಂವಹನ ಮಾಧ್ಯಮಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ಅದು ನಮ್ಮ ಬದುಕಿನ ಅನುಭವಗಳು, ನಮ್ಮ ಹಾಗೂ ಮುಂದಿನ ತಲೆಮಾರುಗಳ ಸ್ವಾಯತ್ತ ಬದುಕಿನ ದಾರಿಗಳನ್ನು ರೂಪಿಸುವ ಬಗೆಯೂ ಆಗಿರುತ್ತದೆ. ಈ ಚಹರೆಗಳು ಮತ್ತು ತಿಳಿವಿನ ವಿನ್ಯಾಸಗಳು ಆಯಾ ಸಮುದಾಯದ ನುಡಿಯೊಡನೆ ಬೆರೆತುಗೊಂಡಿರುತ್ತವೆ. ಇವುಗಳು ಆಯಾ ನುಡಿಯಲ್ಲಿಯೇ ಅಂತಸ್ಥವಾಗಿರುತ್ತವೆ ಎಂದು ನಾನು ಹೇಳಲಾರೆ.

ಆದರೆ ಸಮೂಹಗಳ ವಿಮೋಚನೆ, ನಿಯಂತ್ರಣ ಹಾಗೂ ಸ್ವಾಯತ್ತತೆಯ ರಚನೆಗಳು ಆಯಾ ನುಡಿಯಲ್ಲಿ ನೆಲೆಗೊಂಡಿರುತ್ತವೆ. ಆದ್ದರಿಂದ ನುಡಿ ಒಂದು ಹಕ್ಕಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾಯತ್ತತೆಯನ್ನು ಪಡೆದಿರುತ್ತದೆ. ಸಬಾಳ್ವೆಯನ್ನು ವಿರೋಧಿಸುವ, ಪ್ರತಿಪಾದಿಸುವ ಮತ್ತು ಕಂಡರಿಸುವ ವಿದ್ಯಮಾನವಾಗಿರುತ್ತದೆ. ಕನ್ನಡ ಸಮುದಾಯಗಳಲ್ಲಿ ಶೋಷಣೆಗೆ ಒಳಗಾಗಿರುವ ಸಮೂಹಗಳು ಬೇರೊಂದು ನುಡಿಯ ಮೂಲಕ ತಮ್ಮ ಸರ್ವಸ್ವತಂತ್ರ ಅಸ್ಮಿತೆಯನ್ನು ಪಡೆಯಲು ಹೇಗೆ ಸಾಧ್ಯ? ಇಂತಹದೊಂದು ವಿದ್ಯಮಾನ ಇದುವರೆಗೂ ಜರಿಗಿರುವುದಿಲ್ಲ. ಮಾನವರ ಅದಮ್ಯ ಚೈತನ್ಯ ಒಂದು ಪ್ರತ್ಯೇಕ ನೆಲೆಯಲ್ಲ.

ದಿಟ, ಬದುಕಿನ ಆಚರಣೆಗಳಿಗೂ ನುಡಿಗೂ ಯಾವುದೇ ಸಾವಯವ ನಂಟಸ್ತಿಕೆ ಇಲ್ಲವಾದರೂ ಅವುಗಳು ಒಂದು ಮತ್ತೊಂದನ್ನು ನೆಮ್ಮಿಕೊಂಡಿರುತ್ತದೆ. ಹಾಗಾಗಿ ನುಡಿಯೊಳಗಿನ ಬಹುತ್ವ ಅದು ಸಾಂಸ್ಕ್ರುತಿಕ ಬಹುತ್ವವಾಗಿ ತೋರುತ್ತದೆ. ನುಡಿ ಚೈತನ್ಯ, ನುಡಿ ಮಾನ್ಯತೆ ಮತ್ತು ನುಡಿ ಅಸ್ಮಿತೆಗಳು ಏರ್ಪಡುವುದು ಕೇವಲ ಸಮೂಹಗಳ ಚೈತನ್ಯವಾಗಿ ಮೈದಾಳುತ್ತವೆ. ಒಂದುವೇಳೆ, ಇಂತಹ ಸಮುದಾಯ ತನ್ನದೇ ನುಡಿ ಜಾಯಮಾನಗಳಿಂದ ಕಳಚಿಕೊಂಡು, ಬೆರೊಂದು ನುಡಿ ಸಮುದಾಯದಲ್ಲಿ ಐಕ್ಯವಾದರೆ, ಆ ಸಮುದಾಯದ ಅಸ್ಮಿತೆಯ ರಚನೆಗಳು ಯಾವವು? ಏಕೆಂದರೆ, ಆ ಸಮುದಾಯದ ಸಾಂಸ್ಕ್ರುತಿಕ ಕುರುಹುಗಳು ಇಲ್ಲವೇ ಆಚರಣೆಗಳು, ಈಗಾಗಲೇ ಇದು ಐಕ್ಯಗೊಂಡ ನುಡಿಯ ವ್ಯಾಪ್ತಿಯೊಳಗೆ ಸೇರಿಕೊಳ್ಳಲು ಸಾಧ್ಯವಿಲ್ಲ.

ಸಾಮಾಜಿಕ ಆಚರಣೆಗಳು ಮತ್ತು ಸಂವಹನ ಮಾದರಿಗಳು ಪ್ರತ್ಯೇಕವಾಗಿ ವ್ಯವಹರಿಸುತ್ತವೆಯೇ? ಅಂದರೆ ಸಮುದಾಯಗಳ ನೆನಪು ಹಾಗೂ ಲೋಕಗ್ರಹಿಕೆಗಳು ಅವರ ತಿಳಿವಿನ ಮಾದರಿಗಳಾಗದೇ ಹೋದರೆ, ಆ ಸಮೂಹಗಳ ಅಸ್ತಿತ್ವ, ಅಸ್ಮಿತೆ, ಪ್ರಜ್ಞೆಯ ಚಹರೆಗಳು ಹೇಗೆ ಮೈಪಡೆಯುತ್ತವೆ? ಜನಾಂಗಗಳಿಗೆ ತಮ್ಮ ಬೇರುಗಳನ್ನು ನೆಲೆಗೊಳಿಸುವುದಕ್ಕೆ ತಮ್ಮದೇ ನುಡಿಯ ಅವಶ್ಯಕತೆ ಇರುತ್ತದೆ. ಸಮುದಾಯವೊಂದು ನುಡಿರಹಿತ ಅಸ್ತಿತ್ವವನ್ನು ಹೊಂದಿದ ಕಡೆಯಲ್ಲ ಪರಾಧೀನವಾಗಿರುತ್ತದೆ.

ಚರಿತ್ರೆ, ರಾಷ್ಟ್ರೀಯತೆ ಹಾಗೂ ರಾಜಕೀಯ ಅಧಿಕಾರದಂತಹ ನಿಲುವುಗಳನ್ನು ಕುರಿತು ನಾನು ಮಾತ್ನಾಡುತ್ತಿಲ್ಲ. ಬದಲಾಗಿ ಬದುಕಿನ ಅರಿವು-ತಿಳಿವುಗಳನ್ನು ಪ್ರಮಾಣಗೊಳಿಸುವ ಮಾನದಂಡಗಳನ್ನು ನಮ್ಮದೇ ನುಡಿಯ ಮೂಲಕ ಪಡೆಯಲು ಸಾಧ್ಯವೇ ಹೊರತು ಈ ವಿನ್ಯಾಸಗಳನ್ನು, ಬೇರೊಂದು ನುಡಿಯಲ್ಲಿ ಸಂಚಿತವಾಗಿರುವ ತಿಳಿವಿನಿಂದಲ್ಲ. ಪದಗಳ ಎರವಲು ಇಲ್ಲವೇ ಅನುಭವಗಳ ಅನುವಾದದಿಂದ ನುಡಿಯೊಂದು ಬೆಳೆಯುತ್ತದೆ ಎನ್ನುವ ಕಲ್ಪನೆಯೇ ಅತ್ಯಂತ ಸಂಕುಚಿತ ಕಣ್ನೋಟದಿಂದ ಕೂಡಿದೆ.

ಹೌದು, ಇಂಗ್ಲಿಶು ನುಡಿ ಮುನ್ನೂರ ಅರವತ್ತಕ್ಕೂ ಹೆಚ್ಚು ನುಡಿಗಳಿಂದ ಪದಗಳನ್ನು ಎರವಲು ಪಡೆದಿದೆ. ಹಾಗಂತ, ಅದು ತನ್ನ ಜಾಯಮಾನವನ್ನೇ ಕಳಿಚಿಕೊಂಡು, ಈ ಎಲ್ಲ ನುಡಿಗಳ ಜಾಯಮಾನಕ್ಕೆ ಒಗ್ಗಿಕೊಂಡಿದೆ ಎಂದಲ್ಲ. ಬೇರೆ ನುಡಿಗಳ ತಾತ್ವಿಕ ಮತ್ತು ಜ್ಞಾನ ಮೀಮಾಂಸೆಗಳನ್ನು ಇಂಗ್ಲಿಶಿಗೆ ಅನುವಾದ ಮಾಡುವುದರ ಹಿಂದಿನ ಉದ್ದೇಶ ಕೇವಲ ಆ ನುಡಿಯ ಬೆಳವಣಿಗೆಗೆ ಸೀಮಿತವಾಗಿಲ್ಲ.

ಇದು ಜಿಯೋ-ಪಾಲಿಟಿಕ್ಸ್‍ಗೆ ಸಂಬಂಧಿಸಿದ ಇಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ವಿಧಾನ ಮಾತ್ರ. ಅಂತರ್ರಾಷ್ಟ್ರೀಯ ಸಂವಹನ ಮಾಧ್ಯಮವಾಗಿ ಇಂಗ್ಲಿಶು ವ್ಯವಹರಿಸುವುದರಿಂದ ಈ ಎರವಲು ಮತ್ತು ಅನುವಾದ ಪ್ರಕ್ರಿಯೆಗಳು ಯಥೇಚ್ಛವಾಗಿ ನಡೆಯುತ್ತವೆ.

ಇದನ್ನು ಸಾರಸಗಟಾಗಿ ಕನ್ನಡ ನುಡಿಯ ಪ್ರಗತಿ ಮತ್ತು ಜ್ಞಾನ ಮೀಮಾಂಸೆಗಳ ಬೆಳವಣಿಗೆಯ ಸೂಚಕವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ. ಗ್ರೀಕ್, ಸಂಸ್ಕ್ರುತ, ಪರ್ಶಿಯನ್ ಮೊದಲಾದ ನುಡಿಗಳಲ್ಲಿ ಮೈದಾಳಿದ ಪುರಾಣ, ಶಾಸ್ತ್ರಗಳು ಮತ್ತು ಮೀಮಾಂಸೆಗಳನ್ನು ಎಲ್ಲಿಂದ ಎರವಲು ಪಡೆಯಲಾಯಿತು ಮತ್ತು ಯಾವ ನುಡಿಗಳಿಂದ ಅನುವಾದ ಮಾಡಲಾಯಿತು ಎಂಬುದೆಲ್ಲ ವಿಸ್ಮಯವೇ ಸರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version