ಬಹಿರಂಗ
‘ಮಹಿಷಾಸುರ’ ರಾಕ್ಷಸನಲ್ಲ ; ರಕ್ಷಕ..!
ಮಹಿಷ ಎಮ್ಮೆಗಳ ರಾಜ. ಮೈಸೂರು ಭಾಗದ ಪ್ರಮುಖ ಯಾದವ ದೊರೆ. ಯಾದವರಿಗೆ ಎಮ್ಮೆಗಳನ್ನು ಮೇಯಿಸಲು ಬೇಕಿದ್ದದು ಅಪಾರವಾದ ಅರಣ್ಯ. ಅದು ಮೈಸೂರು ಭಾಗದಲ್ಲಿ ಅಪಾರ ಪ್ರಮಾಣದಲ್ಲಿತ್ತು. ಆದರೆ, ಉತ್ತರ ಭಾರತದ ಕಡೆಯಿಂದ ಬಂದ ಆರ್ಯರು ಕೃಷಿಕರನ್ನು ಜತೆ ಸೇರಿಸಿಕೊಂಡು ಕೃಷಿ ಮಾಡಲು ಬಯಲು ಹುಡುಕುತ್ತಿದ್ದರು. ಅದು ಸಾಲದಾದಾಗ ಅರಣ್ಯವನ್ನು ಕಡಿದು, ಬೆಂಕಿ ಹಾಕಿ ನಾಶ ಮಾಡಿ ಬಯಲಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಅದನ್ನು ವಿರೋಧಿಸಿದ ಮಹಿಷ ತನ್ನ ನಾಡನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದನು. ತಮ್ಮ ತಂತ್ರಗಾರಿಕೆಗೆ ವಿರೋಧ ತೋರಿದ ಮಹಿಷನನ್ನು ಆರ್ಯರು ರಾಕ್ಷಸನಂತೆ ಚಿತ್ರಿಸಿದರು.
ಈ ಭಾಗದ ಅತಿ ಸಾಮಾನ್ಯ ನಾಯಕಿಯಾಗಿದ್ದ ಚಾಮುಂಡಿಯನ್ನು ಮಹಿಷನ ವಿರುದ್ಧ ಆರ್ಯರು ಎತ್ತಿಕಟ್ಟಿದರು. ಅವಳಿಗೆ ಬೆಂಬಲಿಸಿ ಮಹಿಷನನ್ನು ಕುತಂತ್ರದಿಂದ ಕೊಂದರು. ಆ ನಂತರವೇ ಚಾಮುಂಡಿಯನ್ನು ದೇವತೆಯೆಂದೂ ಈ ಬೆಟ್ಟವನ್ನು ಚಾಮುಂಡಿ ಬೆಟ್ಟವೆಂದೂ ಹೆಸರಿಟ್ಟರು. ಅಲ್ಲಿಯವರೆಗೂ ಮಹಾಬಲಗಿರಿಯಾಗಿದ್ದ ಬೆಟ್ಟವು ಚಾಮುಂಡಿಬೆಟ್ಟವಾಯಿತು. ದೊರೆಯಾಗಿದ್ದ ಮಹಿಷನು ಮಹಿಷಾಸುರನಾದನು. ನಾಡನ್ನಾಳಿದ ಮಹಿಷ ಇಲ್ಲಿ ಬಿಸಿಲಿನಲ್ಲಿ ನಿಲ್ಲುವ ಅಗತ್ಯವಿರಲಿಲ್ಲ. ಆರ್ಯರ ತಂತ್ರ, ಜಾತಿ ಪದ್ಧತಿ, ಶೋಷಣೆಗಳಿಗೆ ಯಾರು ವಿರೋಧಿಸಿದರೊ ಅವರೆಲ್ಲ ಊರ ಆಚೆಗೆ ತಳ್ಳಲ್ಪಟ್ಟರು. ಹಾಗಾಗಿಯೇ ಹೊಲೆ–ಮಾದಿಗರು ಊರಿನ ಆಚೆಯೂ ಶೋಷಣೆಯನ್ನು ಒಪ್ಪಿಕೊಂಡ ಮೇಲ್ಜಾತಿಯವರು ಊರಿನ ಒಳಗೂ ವಾಸ ಮಾಡಿದರು.
ಅಶೋಕನ ಕಾಲದ ಶಾಸನಗಳಲ್ಲಿ ಮಹಿಷನ ಉಲ್ಲೇಖವಿದೆ. ಅಂದಿನ ಕಾಲದ ಶಾಸನಗಳಲ್ಲಿ ದಕ್ಷಿಣ ಭಾರತದ ಬೇರಾವ ರಾಜರ ಉಲ್ಲೇಖವೂ ಹೆಚ್ಚಾಗಿ ಇಲ್ಲದೇ ಇರುವುದೇ ಮಹಿಷನ ಶ್ರೇಷ್ಠತೆಗೆ ಹಿಡಿದ ಕನ್ನಡಿಯಾಗಿದೆ. ಇದನ್ನು ಅರ್ಥಮಾಡಿಕೊಂಡವರಿಗೆ ಮಹಿಷ ಇಲ್ಲಿನ ಬಹುಮುಖ್ಯ ಸ್ಥಳೀಯರ ದೊರೆಯಾಗಿದ್ದ ಎನ್ನುವುದು ಅರ್ಥವಾಗುತ್ತದೆ. ದಕ್ಷಿಣ ಪ್ರಾಂತ್ಯವನ್ನಾಳಿದ ಗಂಗರು, ಚೋಳರು, ಹೊಯ್ಸಳರ ಕಾಲಘಟ್ಟಗಳಲ್ಲಾಗಲಿ ಅಥವಾ ಅವರ ಹಿಂದಿನ ಕಾಲಘಟ್ಟಗಳಲ್ಲಾಗಲಿ ಚಾಮುಂಡಿ ಮತ್ತು ಮಹಿಷನ ನಡುವೆ ಯುದ್ಧವಾಗಿರುವ ಪ್ರಸಂಗವೇ ಉಲ್ಲೇಖವಾಗಿಲ್ಲ. ಅಂದಿನ ರಾಜಮನೆತನಗಳಿಗೆ ಯುದ್ಧದ ಕತೆ ತಿಳಿದಿದ್ದರೆ ಬಹುಶ: ಶಾಸನಗಳಲ್ಲಿ ಬರೆಸುತ್ತಿದ್ದರೇನೊ? ಎಂದೆನಿಸುತ್ತದೆ. ಅಂತಹ ಯಾವುದೇ ಶಾಸನಗಳು ಚಾಮುಂಡಿ ಬೆಟ್ಟದಲ್ಲಿ ಇದುವರೆವಿಗೂ ಪ್ರಾಚ್ಯಾವಸ್ತು ಸಂಶೊಧಕರ ಹುಡುಕಾಟಕ್ಕೆ ಸಿಕ್ಕಿರುವುದಿಲ್ಲ ಎಂದು ಲೇಖಕ ಅಶೋಕಪುರಂ ಸಿದ್ಧಸ್ವಾಮಿ ಅವರ ಕೃತಿಗಳಲ್ಲಿ ವಿವರಿಸಿದ್ದಾರೆ. ಹಾಗಾದರೆ ಇಲ್ಲಿ ರಾಜ ಮಹಿಷಾಸುರನಿಗು ಮತ್ತು ಚಾಮುಂಡೇಶ್ವರಿ ನಡುವೆಯೂ ಯುದ್ಧವೇ ನಡೆದಿಲ್ಲವೇ ಎಂಬ ಪ್ರಶ್ನೆ ಕೆಲವರಿಗೆ ಎದುರಾಗಬಹುದು. ಕುತೂಹಲವೆಂದರೆ ದಾಖಲಾತಿಗಳ ಪ್ರಕಾರ ಮಹಿಷಾಸುರನ ಆಡಳಿತ ಅವಧಿಯೇ ಬೇರೆ. ಚಾಮುಂಡೇಶ್ವರಿ ನಾಡದೇವತೆಯಾದ ಕಥೆಯ ಕಾಲಘಟ್ಟವೇ ಬೇರೆ ಎಂಬುದು ಇತಿಹಾಸಕಾರರ ವಿಶ್ಲೇಷಣೆಯಾಗಿದೆ.
ಮೈಸೂರಿಗೆ ಮೂಲ ಹೆಸರು ಬಂದಿರುವುದೇ ಮಹಿಷಾಸುರನಿಂದ. ಪ್ರಾಚೀನ ಕಾಲದಲ್ಲಿ ಮಹಿಸೂರನ್ನು ಮಹಿಷಾ ಮಂಡಲ, ಮಹಿಸೂರ ನಾಡು, ಮಹಿಷಾಪುರ ಎಂಬ ಹೆಸರುಗಳಿದ್ದವು. ಮಹಾಭಾರತ ಗ್ರಂಥದಲ್ಲಿ ಮಹಿಷಾ ಮಂಡಲದ ಪ್ರಸ್ತಾಪವಿದೆ. ಬೌದ್ಧ ಸಾಹಿತ್ಯಗಳಲ್ಲಿ ಮಹಿಷಾ ಮಂಡಲಕ್ಕೆ ವಿಶೇಷ ಸ್ಥಾನಮಾನವಿತ್ತೆಂಬುದು ದೃಢೀಕರಿಸುತ್ತದೆ. 8ನೇ ಶತಮಾನದÉ ಗಂಗರ ಕಾಲದಲ್ಲಿ ಮಹಾಬಲೇಶ್ವರ ದೇವಾಲಯವನ್ನು ಇಂದಿನ ಚಾಮುಂಡಿ ಬೆಟ್ಟದಲ್ಲಿ ಪುನರ್ ನಿರ್ಮಾಣಗೊಳಿಸಲಾಯಿತು. ನಂತರದ ವಿಷ್ಣುವರ್ಧನ ಕಾಲದ 1128ರ ಶಿಲಾ ಶಾಸನಗಳಲ್ಲಿ ಚಾಮುಂಡಿ ಬೆಟ್ಟವನ್ನು “ಸ್ವಸ್ತ ಶ್ರೀ ಮಹಾಬಲ ತೀರ್ಥ” ಎಂದು ಕೆತ್ತಲಾಗಿದೆ. 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಕಾಲಘಟ್ಟದಲ್ಲಿಯೂ ಈ ಬೆಟ್ಟವನ್ನು ಮಹಾಬಲಗಿರಿ ಎಂದೇ ಪ್ರಖ್ಯಾತವಾಗಿತ್ತು. ಅಷ್ಟೇ ಯಾಕೆ? ಕ್ರಿ.ಶ. 1399ರಲ್ಲಿ ಪ್ರಾರಂಭವಾದ ಯಧುವಂಶದ ಯದುಕೃಷ್ಣ ಓಡೆಯರ್ ಕಾಲದಲ್ಲಿಯೂ ಮಹಾಬಲಗಿರಿ ಬೆಟ್ಟ ಎಂದೇ ಸಂಭೋಧಿಸುತ್ತಿದ್ದರು. ಈ ಎಲ್ಲಾ ಮೂಲಾಧಾರಗಳ ಅರಿವಿದ್ದ ದೊಡ್ಡ ದೇವರಾಜ ಓಡೆಯರ್ 1659 ರಲ್ಲಿ ಚಾಮುಂಡಿ ಬೆಟ್ಟದಲ್ಲಿ ರಾಜ ಮಹಿಷಾಸುರನ ಬೃಹತ್ ಪ್ರತಿಮೆಯನ್ನು ಸ್ಥಾಪಿಸಿದ್ದು ಇಂದು ಮೂಲನಿವಾಸಿಗಳು ಅವರನ್ನು ಸ್ಮರಿಸಬೇಕಿದೆ.
ಪ್ರಸ್ತುತದಲ್ಲಿ ಮಹಿಷಾ ಮಂಡಲದಲ್ಲಿ ನೆಲೆಸಿದ್ದ ಪ್ರಜೆಗಳೆಲ್ಲಾ ನಾಗವಂಶಕ್ಕೆ ಸೇರಿದವರು. ಇವರು ಮೂಲತಹ ಬೌದ್ಧರು ಎಂಬ ಚರ್ಚೆಗೆ ಗ್ರಾಸವಾಗಿದೆ. 1970 ರಲ್ಲಿ ಕರ್ನಾಟಕ ಸರ್ಕಾರಿ ಪ್ರಕಾಶನ ಮಂದಿರ (ನಿಯಮಿತ) ವತಿಯಿಂದ ಪ್ರಕಟವಾದ ಡಾ.ಎಂ.ವಿ.ಕೃಷ್ಣರಾವ್ ಮತ್ತು ಎಂ.ಎಂ.ಕೇಶವ ಭಟ್ಟರ ಕರ್ನಾಟಕದ ಇತಿಹಾಸ ದರ್ಶನ ಕೃತಿಯಲ್ಲಿ “ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯಾದ ಅಶೋಕನು ರಕ್ಕತ ಎಂಬ ಬೌದ್ಧ ಭಿಕ್ಕುವನ್ನು ಬನವಾಸಿಗೂ ಹಾಗೂ ಮಹಾದೇವ ಎಂಬ ಭಿಕ್ಕುವನ್ನು ಮಹಿಷಾ ಮಂಡಲಕ್ಕೂ(ಮೈಸೂರು) ಬೌದ್ಧ ಮತ ಪ್ರಚಾರಕ್ಕಾಗಿ ಕಳುಹಿಸಿಕೊಟ್ಟಿದ್ದಾನೆಂದು ಬೌದ್ಧ ಗ್ರಂಥಗಳು ತಿಳಿಸುತ್ತದೆ”. ಎಂದು ದಾಖಲಿಸುತ್ತಾರೆ. ಇನ್ನು ಮುಂದುವರೆದು 1979 ರಲ್ಲಿ ಮೈಸೂರು ವಿವಿಯಲ್ಲಿ ಪ್ರಕಟವಾದ ಕನ್ನಡ ವಿಶ್ವಕೋಶ ಪುಟ ಸಂಖ್ಯೆ 34 ರಲ್ಲೂ ಸಹ ಮುಗ್ಗಲಿ ಪುತ್ರ ತಿಸ್ನ ಎಂಬ ಬೌದ್ಧ ಮಹಾಸಭೆ ಅಧ್ಯಕ್ಷನೂ ತೇರಾ ಮಹಾದೇವನೆಂಬ ಬೌದ್ಧ ಭಿಕ್ಕನ್ನು ಮಹಿಷಾ ಮಂಡಲಕ್ಕೆ ಬಂದಿದ್ದನೆಂದು ಉಲ್ಲೇಖವಿದೆ”.
ಇಷ್ಟೆಲ್ಲಾ ಐತಿಹಾಸಿಕ ದಾಖಲೆಗಳಿರುವ ಮಹಿಷಾ ಮಂಡಲದ ದೊರೆ ಮಹಿಷಾಸುರನನ್ನು ವೈದಿಕರು ನರಭಕ್ಷಕನಂತೆ ಬಿಂಬಿಸಿದ್ದು ಮಾತ್ರ ಯಾರು ತಳ್ಳಿ ಹಾಕುವಂತಿಲ್ಲ. ಇಂದು ಎಲ್ಲವೂ ಬದಲಾಗಿದೆ. ಮಹಿಷಾಸುರ ರಾಕ್ಷಕನಾಗಿರಲಿಲ್ಲ. ಆತನೊಬ್ಬ ಸತ್ಯ, ಪ್ರೀತಿ, ಅಹಿಂಸೆ, ಸಮಾನತೆ ಮತ್ತು ಭಾತೃತ್ವದಲ್ಲಿ ನಂಬಿಕೆಯನ್ನಿಟ್ಟು ತನ್ನ ನಾಡು ಮತ್ತು ಪ್ರಜೆಗಳನ್ನು ಮಮತೆಯಿಂದ ಕಾಣುತಿದ್ದ ಮಾತೃ ಹೃದಯಿಯಾಗಿದ್ದನು ಎಂದು ಐತಿಹಾಸಿಕ ದಾಖಲೆಗಳು ಬಹಿರಂಗ ಪಡಿಸಿವೆ. ಮಹಿಷಾಸುರನು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಅಪಾರವಾದ ಗೌರವವನ್ನಿಟ್ಟು ಪಿತೃಪಕ್ಷ (ಪೂರ್ವಿಕರ ನೆನೆಯುವ ದಿನ) ಎಂಬ ಆಚರಣೆಗೆ ಬುನಾದಿ ಹಾಕಿಕೊಟ್ಟಿದ್ದನು. ಅದನ್ನು ಪಾಲಿಸುತ್ತಿರುವ ಮೂಲನಿವಾಸಿಗಳು ಮೈಸೂರು ದಸರಾ ಪ್ರಾರಂಭವಾಗುವ ಮುನ್ನ ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಕೆಲ ಗ್ರಾಮೀಣ ಭಾಗಗಳಿಂದ ಬಂದು ಮಹಿಷಾಸುರನಿಗೆ ತಮ್ಮದೇ ರೀತಿಯ ಗೌರವ ಸಲ್ಲಿಸುತ್ತಿರುವುದು ಇಂದಿಗೂ ಜೀವಂತವಾಗಿದೆ. ಸಾವಿರಾರು ವರ್ಷಗಳಿಂದ ಮಹಿಷಾ ಮಂಡಲದ ದೊರೆ ಮಹಿಷಾಸುರನನ್ನು ಮರೆತಿದ್ದ ಇಲ್ಲಿನ ಮೂಲನಿವಾಸಿಗಳು ಇಂದು ಮತ್ತೆ ಆತನನ್ನು ಸ್ಮರಿಸುತ್ತಿರುವುದು ಪ್ರಶಂಸನೀಯ. ಇವರ ಈ ಆಚರಣೆ ನಾಡದೇವತೆ ಚಾಮುಂಡೇಶ್ವರಿ ನಂಬಿರುವವರ ವಿರುದ್ಧವಾಗಲಿ ಅಥವಾ ಪರ್ಯಾಯ ದಸರಾವೆಂದು ಯಾರು ಭಾವಿಸಬೇಕಿಲ್ಲ. ಮಹಿಷಾ ದಸರಾದ ಮೂಲಕ ತಮ್ಮ ಮೂಲ ಸಂಸ್ಕøತಿಯನ್ನು ಪುನರ್ ಆಚರಿಸುತ್ತಿರುವುದನ್ನು ಪ್ರಜಾಪ್ರಭುತ್ವದಲ್ಲಿ ಸಮಸ್ತ ನಾಡಿನ ಜನತೆ ಸಕಾರಾತ್ಮಕವಾಗಿ ಸ್ವೀಕರಿಸಿ ಗೌರವಿಸಬೇಕಿದೆ. ಅಕ್ಟೋಬರ್ 07, 2018 (ನಿನ್ನೆ) ರಂದು ಮೈಸೂರಿನ ಮಹಿಷಾ ದಸರಾ ಅನುಷ್ಠಾನ ಸಮಿತಿ ಆಯೋಜಿಸುತ್ತಿರುವ ಮಹಿಷಾ ದಸರಾವನ್ನು ಮುಂದಿನ ದಿನಗಳಲ್ಲಿ ಸರ್ಕಾರವೇ “ಮಹಿಷಾ ಮಂಡಲ ಪ್ರಾಧಿಕಾರ” ವನ್ನು ರಚಿಸಿ ಸರ್ಕಾರದ ವತಿಯಿಂದಲೇ ಆಚರಿಸಿದರೆ ನಮ್ಮ ಮೂಲಸಂಸ್ಕøತಿಯನ್ನು ಜಗತ್ತಿಗೆ ಸಾರಿದಂತಾಗುತ್ತದೆ.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಹಾಗು ಡಾ. ದಿಲೀಪ್ ನರಸಯ್ಯ ಅವರ ಅಭಿಮತದ ಆಯ್ದ ಸಾಲುಗಳು.