ದಿನದ ಸುದ್ದಿ

ನೇರ ಪಾವತಿ ಮಾಡಿ,ಟೆಂಡರ್ ಬೇಡ‌ : ಚಿಗಟೇರಿ ಆಸ್ಪತ್ರೆ ಗುತ್ತಿಗೆ ನೌಕರರ ಒತ್ತಾಯ

Published

on

ಸುದ್ದಿದಿನ,ದಾವಣಗೆರೆ : ಖಾಸಗಿ ಟೆಂಡರುದಾರರು ಸಂಬಳ ಪಾವತಿಯಲ್ಲಿ ವಿಳಂಬ ಹಾಗೂ ತೊಂದರೆ ಮಾಡುವ ಕಾರಣ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿರುವಂತೆ ನೇರ ಪಾವತಿ ಮಾಡಲು ಸಹಾಯ ಮಾಡಿ ಎಂದು ಸಿ.ಜಿ.ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರೆದುರು ತಮ್ಮ ಅಳಲು ತೋಡಿಕೊಂಡರು.

ನಗರದ ಸಿ.ಜೆ.ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣ ಅವರು ಕಾರ್ಮಿಕರ ಕುಂದು ಕೊರತೆ ಆಲಿಸಲು ಆಯೋಜಿಸಲಾಗಿದ್ದ ಸಭೆಯಲ್ಲಿ ಕೆಲ ಪುರುಷ ಕಾರ್ಮಿಕರು ಮನವಿ ಮಾಡಿ ಪ್ರತಿವರ್ಷ ಗುತ್ತಿಗೆದಾರರು ಬದಲಾಗುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ.

ನ್ಯಾಯ ಕೇಳಿದರೆ ಅಂತಹವರನ್ನು ಮುಂದಿನ ವರ್ಷ ಮುಂದುವರೆಸುವುದಿಲ್ಲ ಹಾಗೂ ವೇತನ ನೀಡಿಕೆಯಲ್ಲಿಯೂ ಬಹಳ ಸತಾಯಿಸುತ್ತಾರೆ.ಸದ್ಯ 3 ತಿಂಗಳ ವೇತನ ಪಾವತಿಯಾಗಿಲ್ಲ,ವೇತನ ಕೇಳಿದರೆ ಕೆಲಸದಿಂದ ಕೈ ಬಿಡುವುದಾಗಿ ಹೆದರಿಸುತ್ತಾರೆಂದರು.

ಸಫಾಯಿ ಕರ್ಮಚಾರಿಗಳೆಂದು ನೀಡಿರುವ ಗುರುತಿನ ಪತ್ರಗಳು ಉಪಯೋಗಕ್ಕೆ ಬರುತ್ತಿಲ್ಲ,ಮಹಾನಗರ ಪಾಲಿಕೆಯಲ್ಲಿ ಕೇಳಿದರೆ ಈ ಕಾರ್ಡ್ ಗಳು ರಿಜಿಸ್ಟರ್ ಆಗಿಲ್ಲ ಎನ್ನುತ್ತಾರೆ ಮತ್ತು ಆಯುಕ್ತರ ಸಹಿಯೇ ಫೋರ್ಜರಿ ಆಗಿದೆ ಎನ್ನುತ್ತಾರೆ ಹಾಗಾಗಿ ಈ ಕಾರ್ಡ್ ಗಳು ಇದ್ದರೂ ಉಪಯೋಗಕ್ಕೆ ಬರದಂತಾಗಿವೆ ಎಂದು ದೂರಿದರು.

ಆದರೆ ಕೆಲವು ಮಹಿಳಾ ಕಾರ್ಮಿಕರು ಇದಕ್ಕೆ ವ್ಯತಿರಿಕ್ತವಾಗಿ ವೇತನ ಸರಿಯಾದ ಸಮಯಕ್ಕೆ ಸಿಗುತ್ತಿದೆ, ಎಲ್ಲಾ ಸೌಲಭ್ಯ ದೊರೆಯುತ್ತವೆ ಎಂದರು.

ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣ ಅವರು ಮಾತನಾಡಿ ಇಲ್ಲಿನ ಗುತ್ತಿಗೆದಾರರು ನೌಕರರಿಗೆ ನೇರ ಪಾವತಿ ವ್ಯವಸ್ಥೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು.ಅಲ್ಲಿಯವರಗೆ ಗುತ್ತಿಗೆದಾರರು ನೌಕರರಿಗೆ ಪ್ರತಿ ತಿಂಗಳು ವೇತನ ರಶೀದಿ ನೀಡಬೇಕು ಇದರಿಂದ ನೌಕರರಿಗೆ ತಮ್ಮ ವೇತನ,ಕಡಿತಗೊಂಡಿರುವ ಮಾಹಿತಿ ದೊರೆಯುತ್ತದೆ.

ಗುತ್ತಿಗೆದಾರರು ಸರಿಯಾದ ಸಮಯಕ್ಕೆ ವೇತನ ಪಾವತಿಸಬೇಕು,ಅವರ ಕಡಿತವಾಗುವ ಹಣದ ಮಾಹಿತಿ ಸರಿಯಾಗಿ ಸಿಗಬೇಕು,ಈ ಹಿಂದಿನ ಭೇಟಿಯಲ್ಲಿಯೇ ಈ ಬಗ್ಗೆ ಎಚ್ಚರಿಸಲಾಗಿದೆ ಈ ಕುರಿತು ಆಸ್ಪತ್ರೆ ಮಂಡಳಿ,ಕಾರ್ಮಿಕ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಪರಿಶೀಲಿಸಿ ಪ್ರತಿ ತಿಂಗಳು 10 ನೇ ತಾರೀಕಿನೊಳಗೆ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕೆಂದರು.

ಮುಂದಿನ ತಿಂಗಳು ಮುಖ್ಯಮಂತ್ರಿಗಳೊಂದಿಗೆ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಬಗ್ಗೆ ಸಭೆ ಇದ್ದು ಹೊರಗುತ್ತಿಗೆ ಏಜನ್ಸಿಗಳ ರದ್ದು ಮಾಡಿ ಎಂದು ಆಗ್ರಹಿಸಲಾಗುವುದೆಂದರು.

ಸಭೆಯಲ್ಲಿ ಆಯೋಗದ ಕಾರ್ಯದರ್ಶಿ ರಮಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮ ಕೌಸರ್,ಡಿ.ಹೆಚ್.ಓ.ನಾಗರಾಜ್,ಸಿ.ಜಿ.ಆಸ್ಪತ್ರೆ ಅಧೀಕ್ಷಕ ಜಯಪ್ರಕಾಶ್ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version