ರಾಜಕೀಯ
ಮಂಡ್ಯ ಲೋಕಸಭಾ ಉಪಚುನಾವಣೆ : ವಿಕಲಚೇತನರಿಗೆ ಮತದಾನ ಮಾಡಲು ವಾಹನ ಸೌಲಭ್ಯ
ಸುದ್ದಿದಿನ,ಮಂಡ್ಯ : ನವೆಂಬರ್ 3 ರಂದು ನಡೆಯುವ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ವಿಕಲಚೇತನರು ಮತದಾನದಲ್ಲಿ ಭಾಗಿಯಾಗಲು ಪ್ರತಿ ಗ್ರಾಮಪಂಚಾಯತಿಗಳಿಂದ ವಾಹನ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 1609, ಪಾಂಡವಪುರ ತಾಲ್ಲೂಕಿನಲ್ಲಿ 307, ನಾಗಮಂಗಲ ತಾಲ್ಲೂಕಿನಲ್ಲಿ 343, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 1976, ಮಂಡ್ಯ ತಾಲ್ಲೂಕಿನಲ್ಲಿ 851, ಮದ್ದೂರು ತಾಲ್ಲೂಕಿನಲ್ಲಿ 491, ಮಳವಳ್ಳಿ ತಾಲ್ಲೂಕಿನಲ್ಲಿ 572 ಹಾಗೂ ಕೆ.ಆರ್.ನಗರ ತಾಲ್ಲೂಕಿನಲ್ಲಿ 2318 ವಿಕಲಚೇತನರು ಮಂಡ್ಯ ಲೋಕಸಭಾ ಉಪಚುನಾವಣೆಯ ಮತದಾನದಲ್ಲಿ ಭಾಗಿಯಾಗುತ್ತಿದ್ದು, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕ ಕಲ್ಯಾಣಾಧಿಕಾರಿಗಳ ಸಮನ್ವಯದೊಂದಿಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಮತ್ತು ಯೋಜನಾಧಿಕಾರಿಗಳು ಅಗತ್ಯಕ್ಕೆ ಅನುಗುಣವಾಗಿ ವಿಕಲಚೇತನರಿಗೆ ಬೇಕಾದಂತಹ ವಾಹನ ಸೌಲಭ್ಯದ ವ್ಯವಸ್ಥೆಯ ಮೇಲುಸ್ತುವಾರಿ ಮಾಡುವರು ಎಂದು ಅವರು ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ 22 ಗ್ರಾಮಪಂಚಾಯತಿಗಳಿಗೆ, ಪಾಂಡವಪುರ ತಾಲ್ಲೂಕಿನ 24 ಗ್ರಾಮಪಂಚಾಯತಿಗಳಿಗೆ, ನಾಗಮಂಗಲ ತಾಲ್ಲೂಕಿನ 27 ಗ್ರಾಮಪಂಚಾಯತಿಗಳಿಗೆ, ಕೆ.ಆರ್.ಪೇಟೆ ತಾಲ್ಲೂಕಿನ 35 ಗ್ರಾಮಪಂಚಾಯತಿಗಳಿಗೆ, ಮಂಡ್ಯ ತಾಲ್ಲೂಕಿನ 43 ಗ್ರಾಮಪಂಚಾಯಿತಿಗಳಿಗೆ, ಮದ್ದೂರು ತಾಲ್ಲೂಕಿನ 42 ಗ್ರಾಮಪಂಚಾಯತಿಗಳಿಗೆ, ಮಳವಳ್ಳಿ ತಾಲ್ಲೂಕಿನ 39 ಗ್ರಾಮಪಂಚಾಯಿತಿಗಳಿಗೆ, ಕೆ.ಆರ್.ನಗರ ತಾಲ್ಲೂಕಿನ 33 ಗ್ರಾಮಪಂಚಾಯತಿಗಳಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲ ಪಡಿಸಲು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ವಿಕಲಚೇತನರ ಮನೆ ಬಾಗಿಲಿಗೆ ಸೌಲಭ್ಯ ನೀಡಲಾಗಿದ್ದು, ವಿಕಲಚೇತನರಾದವರು ಮತದಾನದ ದಿನದಂದು ಮನೆಯಿಂದ ಕರೆದುಕೊಂಡು ಹೋಗುವ ಹಾಗೂ ಬಿಡುವ (ಪಿಕ್ಅಪ್ ಅಂಡ್ ಡ್ರಾಫ್) ಸೇವೆಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ “chunavana” ಹೆಸರಿನ ಆಪ್ ಅನ್ನು ಅಭಿವೃದ್ಧಿ ಪಡಿಸುವ ಮೂಲಕ ವಿಕಲಚೇತನರ ಮತದಾನದ ಹಕ್ಕಿಗೆ ವಿಶೇಷ ಮಾನ್ಯತೆ ನೀಡಲಾಗಿದೆ. “chunavana” ಆ್ಯಪ್ನಲ್ಲಿ ನೋಂದಣಿ ಮಾಡುವ ಮೂಲಕ ನವೆಂಬರ್ 3 ರಂದು ಮನೆ ಬಾಗಿಲಿಗೆ ಸಾರಿಗೆ ಸೌಲಭ್ಯವನ್ನು ಪಡೆಯಬಹುದು. ಅಕ್ಟೋಬರ್ 29 ರಿಂದ ನವೆಂಬರ್ 1 ರ ರಾತ್ರಿ 11.59 ಗಂಟೆಯವರೆಗೆ ನೊಂದಣಿ ಮಾಡಿಕೊಳ್ಳಲು ಸಮಯಾವಕಾಶವಿರುತ್ತದೆ. ಈ ಸೌಲಭ್ಯವನ್ನು ವಿಕಲಚೇತನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 1795 ಮತಗಟ್ಟೆ ಕೇಂದ್ರಗಳಿದ್ದು, ಗಾಲಿಕುರ್ಚಿಗಳ ಅವಶ್ಯವಿರುವ 1297 ಮತಗಟ್ಟೆ ಕೇಂದ್ರಗಳಿಗೆ 1297 ಗಾಲಿಕುರ್ಚಿಗಳನ್ನು ಖರೀದಿಸಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401