ದಿನದ ಸುದ್ದಿ
ದಸರಾ-ಮೆರವಣಿಗೆ : ಹೀಗಿದೆ ನಿಗಧಿತ ಕಲಾತಂಡಗಳ ನಿಯೋಜನೆ
ಸುದ್ದಿದಿನ,ಮೈಸೂರು : ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಸರ್ಕಾರದ ವತಿಯಿಂದ ಈ ಬಾರಿ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ನಿಗಧಿತ ಕಲಾತಂಡಗಳನ್ನು ನಿಯೋಜಿಸಲಾಗಿದೆ.
ಅಕ್ಟೋಬರ್ 26 ರಂದು ವಿಜಯದಶಮಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳ ಕ್ರಮಾಂಕ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.ಮಧ್ಯಾಹ್ನ 2.59 ರಿಂದ 3.20 ರವರೆಗೆ ನಂದೀಧ್ವಜ ಪೂಜೆ, ಕೆ.ಎನ್.ಮಹೇಶ್ ಮತ್ತು ತಂಡದಿಂದ ವೀರಗಾಸೆ ಇರಲಿದೆ. ಮೆರವಣಿಗೆಯಲ್ಲಿ ಮಧ್ಯಾಹ್ನ 3.30 ರಿಂದ 3.40 ರವರೆಗೆ ನಿಶಾನೆ ಆನೆಗಳು, ನೌಪತ್ ಆನೆಗಳು, ಕೃಷ್ಣಮೂರ್ತಿ ವಿ ಮತ್ತು ತಂಡ ಹಾಗೂ ಪುಟ್ಟಸ್ವಾಮಿ ಎ ಮತ್ತು ತಂಡದಿಂದ ನಾದಸ್ವರ, ರಾಜಪ್ಪ ಮತ್ತು ತಂಡದಿಂದ ವೀರಗಾಸೆ ಇರಲಿದೆ.
ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸುರು ವತಿಯಿಂದ ಸ್ತಬ್ಧಚಿತ್ರ, ಶ್ರೀನಿವಾಸ್ ರಾವ್ ಮತ್ತು ತಂಡದಿಂದ ಚೆಂಡೆ ಮೇಳ, ಸಿದ್ದರಾಜು ಮತ್ತು ತಂಡದಿಂದ ಮರಗಾಲು ವೇಷ, ಟಿ.ಕೆ. ರಾಜೇಶಖರ್ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ ಇರಲಿದೆ.
ಮಧ್ಯಾಹ್ನ 3.50 ರಿಂದ 4.15 ಗಂಟೆಯವರೆಗೆ ಕರ್ನಾಟಕ ಪೊಲೀಸ್ ಬ್ಯಾಂಡ್ ವತಿಯಿಂದ ಆನೆ ಬಂಡಿ ಸ್ತಬ್ಧಚಿತ್ರ, ಬಳಿಕ ಪೊಲೀಸ್ ಅಶ್ವದಳ ಪ್ರಧಾನ ದಳಪತಿ, ಕೆ.ಎ.ಆರ್.ಪಿ ಮೌಂಟೆಡ್ ಕಂಪನಿ, ಮೈಸೂರು, ನಟರಾಜು ವಿ ಮತ್ತು ತಂಡದಿಂದ ಪಟ್ಟದ ನಾದಸ್ವರ ಇರಲಿದೆ.
ಮಧ್ಯಾಹ್ನ 3.40 ರಿಂದ 4.15 ಗಂಟೆಯವರೆಗೆ ಚಿನ್ನದ ಅಂಬಾರಿಯಲ್ಲಿರುವ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಕೆ, ಬಳಿಕ ಪೊಲೀಸ್ ಅಶ್ವದಳ-ಕೆ.ಎ.ಆರ್.ಪಿ ಮೌಂಟೆಡ್ ಕಂಪನಿ, ಮೈಸೂರು. ಬಳಿಕ ಫಿರಂಗಿ ಗಾಡಿಗಳು, ಅರಣ್ಯ ಇಲಾಖೆ ವೈದ್ಯರ ತಂಡ, ಅಗ್ನಿಶಾಮಕ ತಂಡ ಹಾಗೂ ತುರ್ತುಚಿಕಿತ್ಸಾ ವಾಹನ ಇರಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು, ದಸರಾ ಮಹೋತ್ಸವ 2020ರ ಮೆರವಣಿಗೆ ಉಪಸಮಿತಿಯ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243