ದಿನದ ಸುದ್ದಿ
ನಮನಾ ಸತ್ತರೂ ಆಕೆ ಹೃದಯ ಇನ್ನು ಜೀವಂತ
ಸುದ್ದಿದಿನ ಡೆಸ್ಕ್: ಚಾಮುಂಡಿ ಬೆಟ್ಟದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾಗಿದ್ದ ನಮನಾಳ ಹೃದಯ ಇನ್ನು ಜೀವಂತವಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಕೆ ಬದುಕುಳಿಯುವ ಸಾಧ್ಯತೆ ಇಲ್ಲದ ಕಾರಣ ಆಕೆಯ ಹೃದಯವನ್ನು ಬೆಂಗಳೂರಿನಲ್ಲಿದ್ದ ರೋಗಿಯೊಬ್ಬರಿಗೆ ಅಳವಡಿಸಲಾಯಿತು.
ಮೈಸೂರಿನ ಅಪೊಲೊ ಆಸ್ಪತ್ರೆಯಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಜೀರೊ ಟ್ರಾಫಿಕ್ ಮೂಲಕ ಹೃದಯವನ್ನು
ಆಂಬುಲೆನ್ಸ್ ಮೂಲಕ ಸಾಗಿಸಲಾಯಿತು.
ಆಕೆಯ ಜತೆಯಲ್ಲಿದ್ದ ಎಂಬಿಎ ವಿದ್ಯಾರ್ಥಿ ಅರವಿಂದರಾವ್(21) ಕೂಡ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಚಾಮುಂಡಿ ಬೆಟ್ಟದ ಹೈ ವಾಚ್ ಟವರ್ಸ್ ಜಂಕ್ಷನ್ ಬಳಿ ಬೈಕ್ಗೆ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು.
ತುರ್ತು ರವಾನೆ ಏಕೆ?
ರೋಗಿ ಸಾವಿಗೀಡಾದ ಕೆಲವೇ ಗಂಟೆಗಳ ಕಾಲ ಅವರ ಹೃದಯ, ಕಿಡ್ನಿ, ಕಣ್ಣುಗಳು ಮೊದಲಾದ ಅಂಗಗಳು ಜೀವಂತವಾಗಿರುತ್ತವೆ. ಅವನ್ನು ಮೃತರಿಂದ ತೆಗೆದ ಕೆಲವೇ ಗಂಟೆಗಳಲ್ಲಿ ಮತ್ತೊಬ್ಬರಿಗೆ ಅಳವಡಿಸಲಾಗುತ್ತದೆ. ಇದನ್ನು ತ್ವರಿತವಾಗಿ ಮತ್ತೊಬ್ಬರಿಗೆ ಅಳವಡಿಸಬೇಕು.
ಏನಿದು ಜೀರೊ ಟ್ರಾಫಿಕ್?
ಆಂಬುಲೆನ್ಸ್ ಮೊದಲಾದ ತುರ್ತು ವಾಹನಗಳು ತ್ವರಿತವಾಗಿ ಸ್ಥಳ ತಲುಪಬೇಕಿರುವ ಕಾರಣ ಸಾರ್ವಜನಿಕರ ವಾಹನಗಳನ್ನು ತಡೆಹಿಡಿದು ತುರ್ತು ವಾಹನಗಳನ್ನು ಮಾತ್ರ ಓಡಾಡಲು ಜಾಗಮಾಡಿಕೊಡಲಾಗುತ್ತದೆ. ಇದನ್ನು ಜೀರೊ ಟ್ರಾಫಿಕ್ ಎನ್ನುತ್ತಾರೆ.
ಸಿನಿಮಾ ಆಗಿತ್ತು
ಹೃದಯ ರವಾನೆ ಒಂದು ಗಂಭೀರ ವಿಷಯ ಈ ಕುರಿತು ಮಲಯಾಳಂನಲ್ಲಿ ಟ್ರಾಫಿಕ್ ಎಂಬ ಸಿನಿಮಾ ತೆರೆಕಂಡಿತ್ತು. ಈ ವಿಷಯದ ಮೂಲಕ ಭಾರತದ ಸಂಚಾರ ವ್ಯವಸ್ಥೆ ಮೇಲೂ ಬೆಳಕು ಚೆಲ್ಲಲಾಗಿತ್ತು. ಈ ಸಿನಿಮಾ ಕನ್ನಡಕ್ಕೂ ರೀಮೇಕ್ ಆಗಿದೆ.