ಬಹಿರಂಗ

CAB ಮತ್ತು NRC ಯನ್ನು ಏಕೆ ವಿರೋಧಿಸಬೇಕು?

Published

on

ಇಂತಹದೊಂದು ಪ್ರಶ್ನೆ ಈ ದೇಶದ ಬಹುದೊಡ್ಡ ಜನಸಂಖ್ಯೆಯ ತಲೆಯಲ್ಲಿ ಗಿರಗಿರ ತಿರುಗುತ್ತಿದೆ. ಆದರೆ ನಿಜವಾಗಿಯೂ CAB ಯಾಕಾಗಿ ಜಾರಿ ಮಾಡಲಾಗಿದೆ ಎಂದು ಈವರೆಗೂ ಬಹುತೇಕರಿಗೆ ತಿಳಿದಿಲ್ಲ.

ಬನ್ನಿ ಈ ಬಗ್ಗೆ ಸವಿವರವಾಗಿ ತಿಳಿಯೋಣ…

CAB ಯ ಉದ್ದೇಶ ಅರಿಯಬೇಕಾದರೆ ಮೊದಲು NRC ಯನ್ನು ಸಂಕ್ಷಿಪ್ತವಾಗಿ ಅರಿಯೋಣ
CAB ಜಾರಿಗೊಳಿಸುವ ಮೊದಲು ಅಸ್ಸಾಂ ರಾಜ್ಯದಲ್ಲಿ NRC ಯನ್ನು ಜಾರಿಗೊಳಿಸಲಾಯಿತು. ಇದರ ಪ್ರಕಾರ 24 March 1971 ರ ನಂತರ ಭಾರತ ದೇಶದಲ್ಲಿ ಇರುವ/ ಇದ್ದ ಜನರು ತಾನು ಭಾರತೀಯ ಪ್ರಜೆ ಎಂಬುದನ್ನು ಸಾಬೀತು ಪಡಿಸಬೇಕಿದೆ. ಅದಕ್ಕೆ ಬೇಕಾದ ದಾಖಲೆಗಳನ್ನು ಪ್ರಸ್ತುತ ಪಡಿಸಬೇಕಿದೆ. ಸಧ್ಯ ಭಾರತದಲ್ಲಿ ಇರುವ ಜನರು ತಾನು ಭಾರತೀಯ ಎಂದು ಸಾಬೀತು ಪಡಿಸಲು ತಮ್ಮ ಅಜ್ಜ, ಮುತ್ತಜ್ಜರು 24 March 1971 ರ ಮೊದಲೇ ಈ ದೇಶದಲ್ಲಿ ಇದ್ದರು ಎಂಬುದನ್ನು ದಾಖಲೆ ಸಮೇತ ತೋರಿಸಬೇಕು. ಇದರಲ್ಲಿ ಇಂದು ಇರುವವರು ತಮ್ಮ ಮುತ್ತಜ್ಜರ ತನಕದ ದಾಖಲೆಗಳಲ್ಲಿ ಒಂದಕ್ಷರವೂ ಏರುಪೇರಾಗದೆ ಇದ್ದಲ್ಲಿ ಮಾತ್ರ, ಅಂತಹವರನ್ನು ಭಾರತೀಯ ನಾಗರೀಕರು ಎಂದು ಪರಿಗಣಿಸಲಾಗುವುದು.

ಆ ಕಾಲದಲ್ಲಿ ಓದು ಬರಹ ಬಾರದ ಸಮಯದಲ್ಲಿ ಹಾಗೂ ತಮ್ಮ ದಾಖಲೆಗಳ ಬಗ್ಗೆ ತಲೆಕೆಡಿಸಿಕೊಂಡಿರದ ನಮ್ಮ ಮುತ್ತಜ್ಜರ ದಾಖಲೆಗಳನ್ನು ಈಗ ಕಲೆ ಹಾಕಲು ಸಾಧ್ಯವಿದೆಯೇ? ಯುದ್ಧ ವಿಮಾನಗಳ ದಾಖಲೆಗಳೇ ಕೇಂದ್ರ ಸರಕಾರದ ಸುಪರ್ಧಿಯಿಂದ ನಾಪತ್ತೆಯಾಗುವ ಈ ಕಾಲದಲ್ಲಿ ನಮ್ಮ ತಾತ, ಮುತ್ತಾತರ ದಾಖಲೆಗಳು ಕೇಳುವುದು ಹಾಸ್ಯಾಸ್ಪದವೋ ಅಥವ ಉದ್ದೇಶಿತ ಬಾಲಿಶತನವೋ ನೀವೇ ನಿರ್ಧರಿಸಿ.

ಇನ್ನು ಅಸ್ಸಾಂ ಬಗ್ಗೆ ಹೇಳುವುದಾದರೆ, ಅಲ್ಲಿನ ಜನರು ದಶಕಗಳಿಂದ ಇಂತಹ ಬೆದರಿಕೆಗಳೊಂದಿಗೆ ಜೀವಿಸುತ್ತಿದ್ದರು. ಇದೇ ಕಾರಣಕ್ಕಾಗಿ ದಶಕಗಳಿಂದ ತಮ್ಮ ದಾಖಲೆಗಳನ್ನು ಜೋಪಾನವಾಗಿ ಸಾಕಷ್ಟು ಸಂಖ್ಯೆಯಲ್ಲಿ ಇಟ್ಟು ಕೊಂಡಿದ್ದೂ ಕೂಡಾ 40 ಲಕ್ಷ ಮಂದಿ NRC ಪಟ್ಟಿಯಿಂದ ಹೊರಗುಳಿದರು. ತದ ನಂತರ ತಿದ್ದುಪಡಿಯೊಂದಿಗೆ, ಈ ಅಂಕೆಯು 19 ಲಕ್ಷಕ್ಕೆ ಇಳಿಯಿತು. ಈ 19 ಲಕ್ಷ ಮಂದಿಯಲ್ಲಿ ಅರ್ಧದಷ್ಟು ಮುಸ್ಲಿಮರಾಗಿದ್ದರೆ, ಇನ್ನರ್ಧ ಮಂದಿಯಲ್ಲಿ ಹಿಂದೂಗಳೂ ಸೇರಿದ್ದಾರೆ. ಇನ್ನಷ್ಟು ವಿಶೇಷತೆ ಎಂದರೆ, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ್ದ ಹಾಗೂ ಭಾರತೀಯ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದ ಮುಸ್ಲಿಂ ಆರ್ಮಿ ಜನರಲ್ ಸನಾವುಲ್ಲಾ ಎಂಬವರನ್ನೂ NRC ಪಟ್ಟಿಯಿಂದ ಹೊರಗೆ ಇಡಲಾಗಿತ್ತು. ಅಲ್ಲದೆ ಈ ಈ ಪಟ್ಟಿಯಲ್ಲಿ ಅರ್ಧದಷ್ಟು ಮಂದಿ ಮುಸ್ಲಿಮೇತರರು ಇರುವುದು ಮತ್ತು ಸಂಘ ಪರಿವಾರದ ವಿದ್ಯಾರ್ಥಿ ಅಂಗವಾಗಿರುವ ABVP ಕೂಡಾ ಈ ಬಗ್ಗೆ ಬೃಹತ್ ಪ್ರತಿಭಟನೆ ನಡೆಸಿರುವುದು ಕೇಂದ್ರ ಸರಕಾರಕ್ಕೆ ನುಂಗಲಾರದ ತುತ್ತಾಗಿತ್ತು.

ಬನ್ನಿ CAB ಯ ಉದ್ದೇಶ ಅರಿಯೋಣ…
ಇದೇ ಕಾರಣಕ್ಕಾಗಿ ಕೇವಲ ಮುಸ್ಲಿಮರನ್ನು ಗುರಿಯಾಗಿಸುವ ಕಾರಣಕ್ಕಾಗಿ CAB ಯನ್ನು ಜಾರಿಗೊಳಿಸಲಾಯಿತು. ಇದನ್ನು ಜಾರಿಗೊಳಿಸುವ ಸಮಯದಲ್ಲಿ ದೇಶದ ಗೃಹ ಮಂತ್ರಿ ಅಮಿತ್ ಶಾ ರವರು ಸಂಸತ್ ನಲ್ಲಿ ಈ ಬಿಲ್ ನ ಒಂದು ಮಗ್ಗುಲನ್ನು ಮಾತ್ರ ತೋರಿಸಿ ದೇಶದ ಜನರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕಾಗಿ ಬಹುತೇಕ ಜನರು CAB ಯನ್ನು ಯಾಕಾಗಿ ವಿರೋಧಿಸಬೇಕು ಎಂದು ಪ್ರಶ್ನಿಸುತ್ತಿದ್ದಾರೆ.

ಅಸ್ಸಾಂ ನಲ್ಲಿ ಲಕ್ಷಾಂತರ ಮಂದಿ ಹಿಂದೂಗಳು ತಮ್ಮ ಭಾರತೀಯ ನಾಗರೀಕತೆಯನ್ನು ದಾಖಲೆಗಳ ಮೂಲಕ ಸಾಬೀತು ಪಡಿಸಲು ವಿಫಲರಾಗಿರುವ ಕಾರಣ, ಇನ್ನು ದೇಶಾದ್ಯಂತ ಕೋಟ್ಯಾಂತರ ಹಿಂದೂಗಳು ಮತ್ತೆ NRC ಪಟ್ಟಿಯಿಂದ ಹೊರಗುಳಿಯುತ್ತಾರೆ ಎಂದು ಅರಿತ ಕಾರಣ, ಕೇಂದ್ರ ಸರಕಾರವು CAB ಯನ್ನು ಪರಿಚಯಿಸಿದೆ. ಇದರ ಪ್ರಕಾರ ಮುಸ್ಲಿಮರ ಹೊರತು ಇನ್ಯಾವುದೇ ಧರ್ಮದವರು ಯಾವುದೇ ದಾಖಲೆಗಳಿಲ್ಲದೆ ಭಾರತೀಯ ಪೌರತ್ವಕ್ಕೆ ಅರ್ಹರಾಗುತ್ತಾರೆ. ಆದರೆ ಗೃಹಮಂತ್ರಿ ಅಮಿತ್ ಶಾ ಹೇಳಿರುವಂತೆ ಇದು ಕೇವಲ ಬಾಂಗ್ಲಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ನೀಡುವುದು ಇದರ ಮುಖ್ಯ ಉದ್ದೇಶವಲ್ಲ. ಬದಲಾಗಿ ಆ ಶರಣಾರ್ಥಿಗಳನ್ನು ತೋರಿಸಿ ದೇಶದ ಒಳಗೆ ಸಧ್ಯ ಇರುವ ಹಿಂದೂಗಳನ್ನು ಯಾವುದೇ ದಾಖಲೆಗಳಿದ್ದರೂ ಕೂಡಾ ಯಾವುದೇ ಅಡ್ಡಿ ಆತಂಕಗಳಿಲ್ಲದೆ NRC ಪಟ್ಟಿಯಿಂದ ಹೊರಗುಳಿಯುವುದನ್ನು ತಪ್ಪಿಸುವ ಸಲುವಾಗಿ ಈ CAB ಮಸೂದೆ ಜಾರಿಗೊಳಿಸಲಾಗಿದೆ.

ಅಮಿತ್ ಶಾ ರವರು ಈ ಕಾಯ್ದೆಯು ದೇಶದ ಹೊರಗಿನವರಿಗೆ ಮಾತ್ರ, ದೇಶದ ಒಳಗಿರುವವರಿಗೆ ಯಾವುದೇ ಆತಂಕ ಬೇಡ ಎಂದು ಹೇಳುತ್ತಾರೆ. ಈ ಮಾತನ್ನು ಸ್ವಲ್ಪ ಗಮನವಿಟ್ಟು ಆಲೋಚಿಸಿ. ಇದರ ಅರ್ಥ ಇದು ಭಾರತದ ಒಳಗಿನವರು ತಮ್ಮ ಮುತ್ತಜ್ಜರ ಸಹಿತ ಎಲ್ಲಾ ದಾಖಲೆಗಳನ್ನು ಸಾಬೀತು ಪಡಿಸಿದರೆ ನೀವು ಭಾರತೀಯರು ಹಾಗೂ ನಿಮಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ನೀವು ದಾಖಲೆಗಳನ್ನು ತೋರಿಸಲು ವಿಫಲರಾದರೆ ನೀವು ಪರದೇಸಿಗಳು ಎಂದರ್ಥ. ಆವಾಗ ಕೇವಲ ಮುಸ್ಲಿಮರು ಮಾತ್ರ ಪರದೇಸಿಗಳಾಗುತಾರೆ ವಿನಃ ಇತರ ಧರ್ಮೀಯರಲ್ಲ. ಏಕೆಂದರೆ ಯಾವುದೇ ದಾಖಲೆಗಳಿಲ್ಲದ ಇತರ ಧರ್ಮೀಯರು ಅದಾಗಲೇ CAB ಮಸೂದೆಯ ಪ್ರಕಾರ ಭಾರತೀಯ ಪೌರತ್ವ ಪಡೆದಿರುತ್ತಾರೆ. ಹಾಗಾಗಿ ಈ ಕರಾಳ ಕಾನೂನು ಕೇವಲ, ಇನ್ನೊಮ್ಮೆ ಹೇಳುತ್ತೇನೆ ಕೇವಲ ದೇಶದ ಒಳಗಿರುವ ಹಾಗೂ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾಗಿರುವವರ ಮುಸ್ಲಿಮರ ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳಿಗಾಗಿ ಮಾತ್ರವಾಗಿದೆ.

ಹಿಂದೂಗಳಿಗೆ ಯಾವುದೇ ದೇಶ ಇಲ್ಲ, ಮುಸ್ಲಿಮರಿಗೆ ಹಲವು ದೇಶಗಳಿವೆ ಎಂದು ಹೇಳುತ್ತಾರೆ. ಆದರೆ ನಿಜಾಂಶ ಎಂದರೆ ಯಾವುದೇ ಭಾರತೀಯ ಮುಸ್ಲಿಮನು ಭಾರತ ಬಿಟ್ಟು ಹೋಗಲು ಯಾವ ಕಾರಣಕ್ಕೂ ಸಿದ್ಧನಿಲ್ಲ. ಜೀವಿಸುವುದಾದರೆ ಭಾರತದಲ್ಲೆ, ಇಲ್ಲವಾದರೆ ಭಾರತದ ಮಣ್ಣಲ್ಲೇ ಮಣ್ಣಾಗಿ ಹೋಗುತ್ತೇವೆ ಎಂದು ಹೇಳುತ್ತಾರೆ. NRC ಪಟ್ಟಿಯಿಂದ ಹೊರಗುಳಿಯುವವರನ್ನು ಪಾಕಿಸ್ತಾನಕ್ಕೋ, ಬಾಂಗ್ಲಾದೇಶಕ್ಕೋ ಕಳುಹಿಸಲಾಗುವುದು ವೈಭವೀಕರಿಸಲಾಗುತ್ತಿದೆ. ಆದರೆ ಅಂತಹವರನ್ನು ಎಲ್ಲೂ ಕಳುಹಿಸುವುದಿಲ್ಲ ಬದಲಾಗಿ Detantion Camp ಗಳಲ್ಲಿ ಹಾಕಲಾಗುತ್ತದೆ. ಅವರ ಜೀವನ ಪೂರ್ತಿ ಖರ್ಚುಗಳನ್ನು ಸರಕಾರ ನೋಡಿಕೊಳ್ಳುತ್ತದೆ. ಇಂದಿನ ವರದಿ ಪ್ರಕಾರ ಭಾರತದ GDP 4.5 ರಿಂದ ಕುಸಿದು 4.3 ಇಳಿದಿದೆ. ಮತ್ತೆ ಈ ಖರ್ಚುಗಳು ತಲೆ ಮೇಲೆ ಬಿದ್ದರೆ ಭಾರತದ ಆರ್ಥಿಕತೆ ಊಹಿಸಲೂ ಅಸಾಧ್ಯವಾಗಿದೆ. ಇಂದು CAB & NRC ಯನ್ನು ಸಂಭ್ರಮಿಸುವವರು ನಾಳೆ ಸ್ವತಃ NRC ಪಟ್ಟಿಯಲ್ಲಿದ್ದುಕೊಂಡೇ (ಎಲ್ಲಾ ಧರ್ಮೀಯರು) ನಿಮ್ಮ ಮಕ್ಕಳ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವಿರಿ. ಇನ್ನು ದಾಖಲೆಗಳನ್ನು ಸಂಗ್ರಹಿಸುವಲ್ಲಿ ಯಾರಾದರೂ ಬೆರಳೆಣಿಕೆಯ ಮುಸ್ಲಿಮರು ಸಫಲಾರದೂ ಕೂಡಾ, ನಿಮ್ಮನ್ನು ಯಾವುದೇ ಹಕ್ಕುಗಳಿಲ್ಲದೆ ಎರಡನೇ ದರ್ಜೆಯ ಪ್ರಜೆಗಳಂತೆ (ಗುಲಾಮರಂತೆ) ನಡೆಸಿಕೊಳ್ಳುವರು.

ಇನ್ನೊಂದು ವಿಚಾರ…
ಇವತ್ತು ಇದು ಮುಸ್ಲಿಮರಿಗೆ ಮಾತ್ರ, ನನಗೆ ಯಾವುದೇ ತೊಂದರೆ ಇಲ್ಲ ಎಂದು ಭಾವಿಸುವವರು ತಿಳಿಯಿರಿ…
ಭಾರತದಲ್ಲಿ ಹಿಂದೂಗಳ ನಂತರ ಎರಡನೇ ದೊಡ್ಡ ಸಂಖ್ಯೆಯಲ್ಲಿ ಇರುವುದು ಮುಸ್ಲಿಮರು. ಅವರನ್ನು ಬೇರ್ಪಡಿಸಲು ಪ್ರಯತ್ನಿಸುವಾಗ ಇತರ ಹಿಂದೂಯೇತರರು ತಿರುಗಿ ಬೀಳಬಾರದು ಎಂಬ ಏಕೈಕ ಕಾರಣಕ್ಕಾಗಿ, ದಲಿತರು, ಕ್ರಿಶ್ಚಿಯನ್ನರು, ಜೈನರು ಇತ್ಯಾದಿ ಸಮುದಾಯಕ್ಕೆ ಸುರಕ್ಷತೆಯ ಪೊಳ್ಳು ಭರವಸೆ ನೀಡುತ್ತಿದ್ದಾರೆ. ನಾಳೆ ನಿಮ್ಮನ್ನೂ ಕೂಡಾ ಇದೇ ರೀತಿ ನಿರ್ಗತಿಕರನ್ನಾಗಿಸುವುದು ಬೆಳಕಿನಷ್ಟೇ ಸತ್ಯ. ಆ ಸಮಯದಲ್ಲಿ ಕಣ್ಣೀರು ಸುರಿಸಿ ಯಾವುದೇ ಫಲವಿಲ್ಲ. ರೈಲು ಹೊರಟ ಮೇಲೆ ಟಿಕೇಟು ಪಡೆದು ಪ್ರಯೋಜನವಿಲ್ಲ.

ವಿ.ಸೂ: ಈ ವಿಷಯ ಬರೆಯಲು ಕಾರಣ, ಬಹಳಷ್ಟು ನನ್ನ ಮುಗ್ದ ಹಿಂದೂ ಗೆಳೆಯರು ನನ್ನಲ್ಲಿ ಪ್ರಶ್ನಿಸಿದ್ದರು. ಅಲ್ಲದೆ ಚಿಂತೆ ಮಾಡಬೇಡ ಮಾರಾಯ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಪಾಪ ಅವರಿಗೇನು ಗೊತ್ತು ಈ ಷಡ್ಯಂತ್ರ ಹಿಂದಿರುವ ಭಯಾನಕತೆ…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version