ದಿನದ ಸುದ್ದಿ
ದಾವಣಗೆರೆ | ಹಸಿರ ಕೊಟ್ಟು ಉಸಿರು ಉಳಿಸಿಕೊಳ್ಳೋಣ ಜಾಗೃತಿ ; ಮಳೆಗಾಗಿ ಪ್ರಾರ್ಥನೆ
ಮಳೆಗಾಗಿ ಪ್ರಾರ್ಥಿಸಿ ಕುಟುಂಬ ಸಹಿತ ದೈವರಾಧಿಸಿದ ಆಟೋ ಮಾಲೀಕರು, ಚಾಲಕರು ಮತ್ತು 28ನೇ ವಾರ್ಡಿನ ನಾಗರಿಕರು
ಸುದ್ದಿದಿನ,ದಾವಣಗೆರೆ : ವರುಣನ ಸಮೃದ್ಧ ಕೃಪೆಗಾಗಿ ಆಟೋ ಮಾಲೀಕರು ಮತ್ತು ಚಾಲಕರು ಕುಟುಂಬ ಸಮೀತರಾಗಿ 28ನೇ ವಾರ್ಡಿನ ನಾಗರಿಕರೊಡಗೂಡಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳ ಮೂಲಕ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.
ಜೊತೆಗೆ ಹಸಿರೇ ಉಸಿರು ಎಂಬ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿ ಪರಿಸರ ಪ್ರೇಮವನ್ನು ಮೆರೆದರು.
ಜೈ ಕರುನಾಡ ವೇದಿಕೆಯ ಜಿಲ್ಲಾಧ್ಯಕ್ಷರು ಹಾಗೂ ಶ್ರೀಕೃಷ್ಣ ಸಾರಥಿ ಆಟೋ ಮತ್ತು ಮಾಲೀಕರ ಸಂಘದ ವತಿಯಿಂದ 28ನೇ ವಾರ್ಡಿನ ನಾಗರಿಕರ ಸಹಭಾಗಿತ್ವದಲ್ಲಿ ನಗರದ 28ನೇ ವಾರ್ಡಿನ ಭಗತ್ ಸಿಂಗ್ ನಗರದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ಶಿವಾಂಜನೇಯ ಸ್ವಾಮಿ ದೇವಸ್ಥಾನದಲ್ಲಿರುವ ಶಿವನಿಗೆ ಆಧ್ಯಾತ್ಮಿಕವಾಗಿ ರುದ್ರಾಭಿಷೇಕ, ಬಿಲ್ವಾಭಿಷೇಕ, ಪಂಚಾಮೃತ ಅಭಿಷೇಕವನ್ನು ನೆರವೇರಿಸಿ, ಶಿವನ ಮಸ್ತಕದಲ್ಲಿರುವ ಗಂಗಾಮಾತೆಯನ್ನು ಭುವಿಗೆ ಇಳಿಸುವಂತೆ ಶಿವನಿಗೆ ಆರಾಧಿಸಲಾಯಿತು.
28ನೇ ವಾರ್ಡಿನ ಸಮಸ್ತ ನಾಗರಿಕರಿಗೆ ಸಸಿಗಳನ್ನು ವಿತರಿಸಿ ಮನೆಗೆ ಒಂದು ಸಸಿ ನೆಟ್ಟು ಪರಿಸರ ಉಳಿಸಿ ಎಂದು ಪ್ರೇರಣೆ ನೀಡಲಾಯಿತು.
ಈ ಸಂದರ್ಭದಲ್ಲಿ ಜೈ ಕರುನಾಡ ವೇದಿಕೆಯ ಜಿಲ್ಲಾಧ್ಯಕ್ಷರು ಹಾಗೂ ಶ್ರೀಕೃಷ್ಣ ಸಾರಥಿ ಆಟೋ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಎಚ್ ಪರಶುರಾಮ್ ನಂದಿಗಾವಿ, ಮಂಜುನಾಥ್ ಬಾಳೆಕಾಯ್, ಪಂಚಾಕ್ಷರಿ ಜಿ ಕಳ್ಳಿಮಠ, ಸಂತೋಷ್ ಕುಮಾರ್, ವಿಜಯ್ ಕುಮಾರ್ ಎಂಆರ್, ಹಾಗೂ 28ನೇ ವಾರ್ಡಿನ ನಾಗರಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243