ದಿನದ ಸುದ್ದಿ

ದಾವಣಗೆರೆ | ರೈಲ್ವೇ ರಿಸರ್ವೇಷನ್ ಕೌಂಟರ್ ಆರಂಭ

Published

on

ಸುದ್ದಿದಿನ,ದಾವಣಗೆರೆ: ಟಿಕೆಟ್‍ಗಳನ್ನು ಪಡೆದುಕೊಳ್ಳಲು ರಿಸರ್ವೇಷನ್ ಕೌಂಟರ್‍ಗಳನ್ನು ಹಂತ ಹಂತವಾಗಿ ತೆರೆಯಲು ರೈಲ್ವೆಯು ನಿರ್ಧರಿಸಿದ್ದು, ಮೊದಲಿಗೆ ಪ್ರಮುಖ ನಿಲ್ದಾಣಗಳಲ್ಲಿನ ಕೌಂಟರ್‍ಗಳನ್ನು ಮೇ 22 ರಿಂದ ತೆರೆಯಲಾಗಿದೆ.

ಜೂನ್ 1 ರಿಂದ ಪ್ರಾರಂಭವಾಗುವ 100 ಜೋಡಿ ರೈಲು ಸೇವೆಗಳಿಗೆ ಕಾಯ್ದಿರಿಸಿದ ಟಿಕೆಟ್ ಬುಕ್ ಮಾಡಲು ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಪಿಆರ್‍ಎಸ್ ಕೌಂಟರ್‍ಗಳು ಮೈಸೂರು, ದಾವಣಗೆರೆ, ಶಿವಮೊಗ್ಗ ಟೌನ್ ಮತ್ತು ಹಾಸನ ನಿಲ್ದಾಣಗಳಲ್ಲಿ ಮೇ 22 ರಿಂದ ಕಾರ್ಯ ನಿರ್ವಹಿಸುತ್ತಿವೆ.

ದೇಶದಲ್ಲಿ ಲಾಕ್‍ಡೌನ್ ಸಂದರ್ಭದಲ್ಲಿ ರದ್ದುಪಡಿಸಲಾಗಿದ್ದ ರೈಲು ಗಾಡಿಗಳಲ್ಲಿ ಟಿಕೆಟ್ ಹೊಂದಿದ್ದ ಪ್ರಯಾಣಿಕರ ಹಣ ಮರುಪಾವತಿಯ ಸೌಲಭ್ಯವನ್ನು ಸಹ ಈ ಕೌಂಟರ್‍ಗಳಲ್ಲಿ ಮೇ 25 ರಿಂದ ಪಡೆಯಬಹುದು.

ಈ ಮೊದಲು ತಿಳಿಸಿದಂತೆ ರಾಜ್ಯದೊಳಗೆ 2 ಜೋಡಿ ಅಂತರ್ ಜಿಲ್ಲಾ ರೈಲುಗಳು ಬೆಂಗಳೂರಿನಿಂದ ಬೆಳಗಾವಿಗೆ (ವಾರದಲ್ಲಿ ಮೂರು ದಿನ) ಎಕ್ಸ್‍ಪ್ರೆಸ್ ವಿಶೇಷ ರೈಲು ಮತ್ತು ಬೆಂಗಳೂರಿನಿಂದ ಮೈಸೂರಿಗೆ (ಭಾನುವಾರ ಹೊರತುಪಡಿಸಿ ವಾರದಲ್ಲಿ ಆರುದಿನ) ಎಕ್ಸ್‍ಪ್ರೆಸ್ ವಿಶೇಷ ರೈಲು ಇಂದಿನಿಂದಲೇ ಪ್ರಾರಂಭಿಸಲಾಗಿದೆ.

ಸಾಮಾಜಿಕ ಅಂತರ ಮತ್ತು ಇತರೆ ನಿಗದಿತ ಕೋವಿಡ್ -19 ಕ್ರಮ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಬುಕಿಂಗ್ ಕಚೇರಿಗಳು ಸೇರಿದಂತೆ ರೈಲ್ವೆಯ ಆವರಣದಲ್ಲಿ ಸ್ವಚ್ಚತೆ/ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಲು ರೈಲ್ವೆಹರ ಸಹಕಾರ ನೀಡಲು ಗ್ರಾಹಕರಲ್ಲಿ ಕೋರಲಾಗಿದೆ.

ಎಸ್‍ಆರ್ ಬೆಂಗಳೂರು ಎಕ್ಸ್‍ಪ್ರೆಸ್ ವಿಶೇಷ ರೈಲಿನ ಮೊದಲ ಸೇವೆಯು ಇಂದು ಮೈಸೂರಿನಿಂದ ನಿಗದಿತ ಸಮಯವಾದ 13:45 ಗಂಟೆಗೆ ಹೊರಟಿದೆ ಎಂದು ನೈರುತ್ಯ ರೈಲ್ವೆ ವಿಭಾಗ, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version