ದಿನದ ಸುದ್ದಿ
ಮರ ಕಡಿಯಲು ಬಂದರೆ, ಮರದ ಬಳಿಯೇ ಮಲಗುತ್ತೇವೆ : ಸಾಲುಮರದ ತಿಮ್ಮಕ್ಕ
ಸುದ್ದಿದಿನ,ಬೆಂಗಳೂರು: ಮಾಗಡಿ ತಾಲೂಕಿನ ಹುಲಿಕಲ್ಲು ಬಳಿ ರಸ್ತೆ ಅಗಲೀಕರಣಕ್ಕಾಗಿ, ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ನೆಟ್ಟಿದ್ದ ಮರಗಳನ್ನ ಕಡಿಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಲು ಮರದ ತಿಮ್ಮಕ್ಕ ಇಂದು ಸಿಎಂ ಹಾಗೂ ಡಿಸಿಎಂ ರನ್ನ ಭೇಟಿಯಾಗಿ ಮರಗಳನ್ನ ಕಡಿಯದಂತೆ ಮನವಿ ಮಾಡಿದ್ದಾರೆ.
ನೂರಾರು ಮರಗಳನ್ನ ನೆಟ್ಟು ಮಕ್ಕಳಂತೆ ಬೆಳೆಸಿದ್ದೇನೆ. ಆದ್ರೆ ಇದೀಗ ಹೆದ್ದಾರಿ ಅಭಿವೃದ್ಧಿಗಾಗಿ ಆ ಮರಗಳಿಗೆ ಕೊಡಲಿ ಹಾಕಲು ಮುಂದಾಗಿದ್ದಾರೆ. ದಯವಿಟ್ಟು ಮರಗಳನ್ನ ಕಡಿಯಬೇಡಿ ಅಂತಾ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಬಳಿ ಮನವಿ ಮಾಡಿದ್ದಾರೆ.
ಭೇಟಿ ಬಳಿಕ ಮಾತನಾಡಿದ ತಿಮ್ಮಕ್ಕ, ನಾವು ಯಾವ ಕಾರಣಕ್ಕೂ ಮರಗಳನ್ನ ಕಡಿಯಲು ಬಿಡುವುದಿಲ್ಲ. ಕಡಿಯಲು ಬಂದ್ರೆ ನಾನು, ನನ್ನ ಮಗ ಮರದ ಬಳಿಯೇ ಮಲಗುತ್ತೇವೆ. ಮರ ಕಡಿಯೋಕೆ ಬಂದ್ರೆ ಸುಮ್ಮನಿರಲ್ಲ. ಸಿಎಂ, ಡಿಸಿಎಂ ಕೂಡಾ ಮರಗಳನ್ನ ಕಡಿಸುವುದಿಲ್ಲ ಅಂತ ಭರವಸೆ ನೀಡಿದ್ದಾರೆ
ಇನ್ನು ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿರುವ ಸಿಎಂ ಕುಮಾರಸ್ವಾಮಿ, ತಕ್ಷಣವೇ ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ರಸ್ತೆ ಬದಿಯ ಮರಗಳನ್ನು ಕಡಿಯದಂತೆ ಸೂಚನೆ ನೀಡಿದ್ದಾರೆ. ಅಗತ್ಯ ಬಿದ್ದಲ್ಲಿ ರಸ್ತೆ ಮಾರ್ಗವನ್ನೇ ಬದಲಿಸುವಂತೆ ಸೂಚಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243