ದಿನದ ಸುದ್ದಿ
ರಾಜ್ಯ ಬಜೆಟ್-2021 ವಿಶ್ಲೇಷಣೆ | ಯಡ್ಡಿ ಬಜೆಟ್ – ಉತ್ಪ್ರೇಕ್ಷೆ, ತಾರತಮ್ಯ ಮತ್ತು ಸುಳ್ಳು ಅಂಕಿಅಂಶಗಳ ಕಣ್ಕಟ್ಟು..!
- ಶಿವಸುಂದರ್
ಆತ್ಮೀಯರೇ ,
ಬಜೆಟ್ಟಿನ ಬಗ್ಗೆ ಈಗಾಗಲೇ ಸಾಕಷ್ಟು ಅಭಿಪ್ರಾಯಗಳು ಬಂದಾಗಿವೆ. ಇತರ ಎಲ್ಲಾ ಕ್ಷೇತ್ರಗಳಿಗೂ ತೋರಿಕೆಯಲ್ಲಾದರೂ ಬಜೆಟ್ ಹೆಚ್ಚಳ ಮಾಡಿರುವ ಯಡ್ಡಿ ಸರ್ಕಾರ SCSP-STP ಯೋಜನೆಗಳಿಗೆ ಮಾತ್ರ ಕೋವಿಡ್ ಕಾರಣ ತೋರಿಸಿ ಈ ಬಾರಿ ಹೆಚ್ಚಳ ಮಾಡಲಾಗುವುದಿಲ್ಲವೆಂದು ಸ್ಪಷ್ಟವಾಗಿ ಘೋಷಿಸಿದೆ.
ಆದರೆ ಅದೇ ಸಮಯದಲ್ಲಿ ದಲಿತ-ಹಿಂದುಳಿದ ಸಮುದಾಯಗಳ ಎಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ಒಟ್ಟಾರೆಯಾಗಿ 500 ಕೋಟಿಗಳನ್ನು ಮಾತ್ರ ನೀಡಿದ್ದರೆ, ಲಿಂಗಾಯತ ಹಾಗು ಒಕ್ಕಲಿಗ ಮಂಡಳಿಗಳಿಗೆ ತಲಾ 500 ಕೋಟಿ ಘೋಷಿಸಲಾಗಿದೆ.ಮಾತ್ರವಲ್ಲದೆ ಬಸವಕಲ್ಯಾಣದಲ್ಲಿಯೇ ಆಧುನಿಕ ಅನುಭವ ಮಂಟಪಕ್ಕೆ 500ಕೋಟಿ ನೀಡಲಾಗಿದೆ.
ಈ ಸರ್ಕಾರ ಯಾರದ್ದು ಎಂಬುದನ್ನು ಅರ್ಥಮಾಡಿಕೊಳ್ಳಲು ಬಜೆಟ್ ವೆಚ್ಚದಲ್ಲಿರುವ ಈ ಆದ್ಯತೆಗಳು ಮತ್ತು ತಾರತಮ್ಯಗಳು ಸಾಕು. ಆದರೆ ನಾನು ಈಗ ಹೇಳಲು ಹೊರಟಿರುವುದು ಅದಲ್ಲ. ಇಡೀ ಬಜೆಟ್ಟಿನಲ್ಲಿ ಘೋಷಿಸಲಾಗಿರುವ ಆದಾಯ ಮತ್ತು ಹಾಗು ಅದನ್ನು ಆಧರಿಸಿದ ವೆಚ್ಚಗಳ ಬುನಾದಿಯಲ್ಲೆ ಉತ್ಪ್ರೇಕ್ಷೆ ಮತ್ತು ಕಣ್ಣುಕಟ್ಟಿದೆ. ಇದೆ ಸುಳ್ಳಾದರೆ ಉಳಿದವು ಸುಳ್ಳೇ ಆಗಿರುತ್ತಲ್ಲವೇ?
ಉದಾಹರಣೆಗೆ: ರಾಜ್ಯದ 2021-22 ಸಾಲಿನ ವೆಚ್ಚವನ್ನು ರೂ. 2,46,207 ಕೋಟಿಯೆಂದು ನಿಗದಿ ಪಡಿಸಲಾಗಿದೆ. ಹಾಗು ರಾಜ್ಯದ ಸ್ವಂತ ಆದಾಯ 1,72,271 ಕೋಟಿ ಗಳಾಗಲಿದೆಎಂದು ಅಂದಾಜಿಸಲಾಗಿದೆ.
ಈ ಅಂದಾಜುಗಳನ್ನು ರಾಜ್ಯದ ಒಟ್ಟಾರೆ ರಾಜ್ಯ ಉತ್ಪನ್ನದ ಅಭಿವೃದ್ಧಿ ದರದ ಅಂದಾಜನ್ನು (Gross State Domestic Produce- GSDP) ಆಧರಿಸಿ ಮಾಡಲಾಗುತ್ತದೆ. GSDP ಯ ಅಂದಾಜು ಶೇ. 7ರಷ್ಟು ತೆರಿಗೆ ಸಂಗ್ರಹವಾಗಲಿದೆ ಎಂದು ಅಂದಾಜು ಮಾಡಲಾಗುತ್ತದೆ. ಕೇಂದ್ರದಲ್ಲಿ ಅದು 12-14% ಇರುತ್ತದೆ.
ಇದನ್ನೂ ಓದಿ |ರಾಜ್ಯ ಬಜೆಟ್ | 60 ಸಾವಿರ ಮಹಿಳೆಯರಿಗೆ ಉದ್ಯೋಗ : ಸಿಎಂ ಯಡಿಯೂರಪ್ಪ
ಸರ್ಕಾರದ ಪ್ರಕಾರ ರಾಜ್ಯದ GSDP ಯು 2019-20 ಕ್ಕೆ ಹೋಲಿಸಿದಲ್ಲಿ 2020-21ನೇ ಸಾಲಿನಲ್ಲಿ ಕೋವಿಡ್ ಕಾರಣಕ್ಕೆ ಶೇ. 2.6ರಷ್ಟು ಕುಸಿತವನ್ನು ಕಂಡಿದೆ. 2019-20 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ GSDP ಯು 16,98,685 ಕೋಟಿ ರೂಪಾಯಿಗಳು. ಇದು ಕೋವಿಡ್ ಕಾರಣಕ್ಕೆ 2020-21ನೇ ಸಾಲಿನಲ್ಲಿ ಶೇ. 2.6 ರಷ್ಟು ಕಡಿಮೆಯಾಗಿದೆ ಎಂದರೆ 16,65,320 ಕೋಟಿ ರೂಪಾಯಿಗಳಾಗಬೇಕು. ಹೀಗಾಗಿ ಎಲ್ಲಾ ತೆರಿಗೆ ಸಂಗ್ರಹ ಅಂದಾಜುಗಳನ್ನು ಇದರ ಆಧಾರದಲ್ಲಿ ಮಾಡಬೇಕು.
ಆದರೆ ಬಜೆಟ್ ದಸ್ತಾವೇಜಿನ ಜೊತೆ ಕಡ್ಡಾಯವಾಗಿ ಒದಗಿಸಬೇಕಿರುವ Mid Term Fiscal Plan-MTFP ದಸ್ತಾವೇಜಿನಲ್ಲಿ ಸರ್ಕಾರವು :
“Government of India had communicated a figure of Rs.18,03,609 Crore as State’s GSDP for FY 2020-21 and it has also directed that the same amount be used for evaluation of states fiscal parameters”
ಅಂದರೆ ” ಭಾರತ ಸರ್ಕಾರವು ಕರ್ನಾಟಕದ 2020-21 ನೆ ಸಾಲಿಗೆ ರಾಜ್ಯದ GSDP ಯು 18,03,609 ಕೋಟಿ ಎಂದು ತಿಳಿಸಿದ್ದು ಎಲ್ಲಾ ವಿತ್ತೀಯ ಲೆಕ್ಕಾಚಾರಗಳಿಗೂ ಅದೇ ಅಂಕಿಅಂಶವನ್ನೇ ಬಳಸಬೇಕೆಂದು ಎಂದು ನಿರ್ದೇಶಿಸಿದೆ ” ಎಂದು ಹೇಳಿಕೊಂಡಿದೆ.
ಆದರೆ ಅವೆರಡರ ನಡುವಿನ ವ್ಯತ್ಯಾಸವನ್ನೇನು ಕೇಂದ್ರ ಸರ್ಕಾರ ಭರಿಸುತ್ತಿಲ್ಲ. ಅಷ್ಟೇ ಅಲ್ಲ. ಕೇಂದ್ರದಿಂದ ಸಿಗುವ GST ಪರಿಹಾರ, ಅನುದಾನ ಮತ್ತು ತೆರಿಗೆ ಪಾಲು ಎಲ್ಲವನ್ನು ಕರ್ನಾಟಕಕ್ಕೇ ಕಡಿಮೆ ಮಾಡಲಾಗಿದೆ. ಆದರೂ ಲೆಕ್ಕಾಚಾರವನ್ನು ಮಾತ್ರ ಇರುವುದಕ್ಕಿಂತ ಒಂದು ಲಕ್ಷ ಕೋಟಿ ಹೆಚ್ಚಿಗೆಸೇರಿಸಿ ಮಾಡಬೇಕೆಂದು ಆದೇಶಿಸಿದೆ!! ಹೀಗಾಗಿ ಬಜೆಟ್ಟಿನಲ್ಲಿ ಹೇಳಲಾಗಿರುವ ಪರಿಷ್ಕೃತ ಅಂದಾಜುಗಳಲ್ಲೇ ದೋಷವಿದೆ. ದೊಡ್ಡ ಸುಳ್ಳಿದೆ.
ಎರಡನೆಯದಾಗಿ, ಬಜೆಟ್ಟಿನ ಜೊತೆಗೆ ಒದಗಿಸಲಾಗಿರುವ MTFP – Mid Term Fiscal Plan -ಪ್ರಕಾರ ಹಾಗು 15ನೇ ಹಣಕಾಸು ಆಯೋಗದ ಅಂದಾಜಿನ ಪ್ರಕಾರ ೨೦೨೧-೨೨ ರ ಸಾಲಿನಲ್ಲಿ ಕರ್ನಾಟದ GSDP ಯು 17,02,227 ಕೋಟಿ ರೂ. ಗಳಿಗೆ ಇಳಿಯಲಿದೆ.
ಅಂದರೆ 2020-21 ನೇ ಸಾಲಿಗಿಂತ ಒಂದು ಲಕ್ಷ ಕೋಟಿ ಕಡಿಮೆಯಾಗಲಿದೆ. ಹಾಗಿದ್ದಲ್ಲಿ ಅದೇ ಪ್ರಮಾಣದಲ್ಲಿ ರಾಜ್ಯದ ಸ್ವಂತ ತೆರಿಗೆ ಸಂಗ್ರಹ ಮತ್ತು ಆದಾಯಗಳು ಕಡಿಮೆಯಾಗಬೇಕಲ್ಲವೇ? ಆದರೆ ಬಜೆಟ್ಟಿನ ಲೆಕ್ಕಾಚಾರದ ಪ್ರಕಾರ 2021-22 ನೇ ಸಾಲಿನಲ್ಲಿ ಸ್ವಂತ ತೆರಿಗೆ ರಾಜಸ್ವವು 1,24,202 ಕೋಟಿ ರು.ಗಳಾಗಲಿದೆಯಂತೆ!
ಆದರೆ ಹೆಚ್ಚು ಕಡಿಮೆ ಇಷ್ಟೇ GSDP ಇದ್ದ 2019-20ನೇ ಸಾಲಿನಲ್ಲಿ ಸ್ವಂತ ರಾಜಸ್ವವು 1,16, 860 ಕೋಟಿ ರೂಪಾಯಿಗಳು ಮಾತ್ರ…ಆದರೆ 2021-22ನೇ ಸಾಲಿನಲ್ಲಿ, ಇನ್ನು ಕೋವಿಡ್ ದಾಳಿಯಿಂದಾಗಿ ಭಾರತವು 2019ರ ಅಭಿವೃದ್ಧಿ ದರವನ್ನು ಸಾಧಿಸಲಾಗದು ಎಂಬುದು ಸ್ಪಷವಾಗಿರುವಾಗಲೂ, ಯಡ್ಡಿ ಸರ್ಕಾರ ಮಾತ್ರ ಅಂದಾಜು 8000 ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ಸಂಗ್ರಹಿಸಲಿದೆಯೆಂದು ಅಂದಾಜಿಸಲಾಗಿದೆ!
ಇದಲ್ಲದೆ, 15ನೇ ಹಣಕಾಸು ಆಯೋಗದ ವರದಿ 2021-22ರಿಂದ ಜಾರಿಗೆ ಬರಲಿದ್ದು ಕರ್ನಾಟಕದ ಪಾಲು 30,000 ಕೋಟಿ ಕಡಿಮೆಯಾಗಲಿದೆ. ಅದನ್ನು ಈ ಬಜೆಟ್ ಲೆಕ್ಕಾಚಾರಗಳಲ್ಲಿ ಸಂಪೂರ್ಣವಾಗಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.
ಜೊತೆಗೆ 2018 ರಿಂದಾಚೆಗೆ ಒಂದು ವರ್ಷವೂ ಕರ್ನಾಟಕಕ್ಕೇ ಸಂಪೂರ್ಣ GST ಪರಿಹಾರ ದೊರೆತಿಲ್ಲ. ಕಳೆದ ವರ್ಷವಂತೂ ಕೇವಲ ಶೇ. 53 ರಷ್ಟು ಪಾಲು ಮಾತ್ರ ಕರ್ನಾಟಕಕ್ಕೇ ಸಂದಿದೆ. ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ನೋಡಿದಾಗ ಬಜೆಟ್ಟಿನಲ್ಲಿ ಸರ್ಕಾರ ಘೋಷಿರುವ ಸ್ವೀಕೃತಿಗಿಂತ ವಾಸ್ತವದಲ್ಲಿ ಶೇ. 20ರಷ್ಟು ಅಂದರೆ 40-50 ಸಾವಿರ ಕೋಟಿ ಹಣ ಕೊರತೆ ಬೀಳಲಿದೆ.
ಇದು ಬಜೆಟ್ಟಿನಲ್ಲಿ ತೋರಿಸಿರುವ ಕೊರತೆಯ ಜೊತೆ ಹೆಚ್ಚುವರಿಯಾಗಿ ಆಗಲಿರುವ ಕೊರತೆಯಾಗಿದೆ. ಹೀಗಾಗಿ ವೆಚ್ಚದಲ್ಲೂ ಅದೇ ಪ್ರಮಾಣದಲ್ಲೂ ಕೊರತೆ ಬೀಳಲಿದೆ. ಆಗ ಸರ್ಕಾರದ ಆದ್ಯತೆಗಳೇನಾಗಲಿದೆ ಎಂಬುದನ್ನು ಯಡ್ಡಿ ಸರ್ಕಾರ ಈಗಾಗಲೇ ಬಜೆಟ್ ಭಾಷಣದಲ್ಲಿ ಘೋಷಿಸಲಾದ ತಾರತಮ್ಯ ಮತ್ತು ಆದ್ಯತೆಗಳಲ್ಲಿ ಸ್ಪಷ್ಟಪಡಿಸಿದೆ. ಅಲ್ಲವೇ?
ಸುದ್ದಿದಿನ.ಕಾಂ|ವಾಟ್ಸಾಪ್|9980346243