ದಿನದ ಸುದ್ದಿ
ಯಶಸ್ವಿಯಾಗದ 22 ಕೆರೆಗಳ ಏತ ನೀರಾವರಿಯ ಯೋಜನೆ : ತರಳಬಾಳು ಶ್ರೀ ಬೇಸರ
ಸುದ್ದಿದಿನ,ಹರಿಹರ : 22 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯು ಹಲವು ಲೋಪದೋಷಗಳಿಂದಾಗಿ ಪರಿಣಾಮಕಾರಿಯಾಗಿ ಯಶಸ್ವಿಯಾಗದೇ ಇರುವುದು ಅತ್ಯಂತ ಬೇಸರ ತಂದಿದೆ ಎಂದು ತರಳಬಾಳು ಜಗದ್ಗುರು ಡಾ .ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿಷಾದ ವ್ಯಕ್ತ ಪಡಿಸಿದರು.
ಹರಿಹರ ನಗರದ ಹೊರವಲಯದಲ್ಲಿರುವ ಜಾಕ್ ವೆಲ್ ಬಳಿ ಯೋಜನೆಯ ಕಾಮಗಾರಿ ಪರಿಶೀಲಿಸಿ ಶ್ರೀಗಳು ಮಾತನಾಡಿದರು.ಪ್ರಾಕೃತಿಕ, ತಾಂತ್ರಿಕ ಹಾಗೂ ಮನುಷ್ಯರ ಸಮಸ್ಯೆಗಳು ಒಟ್ಟಾಗಿ ಸೇರಿಕೊಂಡು 22 ಕೆರೆಗಳ ಏತ ನೀರಾವರಿಯ ಯೋಜನೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಬೇಸರ ಹೊರಹಾಕಿದರು.
ನದಿಯಲ್ಲಿ ನೀರಿದ್ದರು ಜಾಕ್ ವೆಲ್ ಮೂಲಕ ನೀರು ಬರುತ್ತಿಲ್ಲ. ಕಳೆದ ಬಾರಿ ಮೂರು ಮೋಟರ್ ಅಳವಡಿಸಿದ್ದರಿಂದ ನೀರು ತಕ್ಕಮಟ್ಟಿಗೆ ನೀರು ಕೆರೆಗಳಿಗೆ ಹರಿದಿದೆ. ಆದರೆ ಇದು ಶಾಶ್ವತ ಪರಿಹಾರದ ಕೆಲಸ ಅಲ್ಲ.
ಶಾಶ್ವತ ಪರಿಹಾರ ದೊರಕಬೇಕಾದರೆ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದರು.
ತಾಂತ್ರಿಕ ತೊಂದರೆ ಸರಿಯಾದಗ ನದಿಯಲ್ಲಿ ನೀರಿನ ಕೊರತೆ ಕಂಡು ಬರುತ್ತದೆ.ಆದ್ದರಿಂದ ಈ ಸ್ಥಳದಲ್ಲಿ ಕೆರೆ ನಿರ್ಮಾಣ ಮಾಡಿದರೆ ಸ್ವತಂತ್ರವಾಗಿ ನೀರು ಎರಡನೇ ಜಾಕ್ ವೆಲ್ ನಲ್ಲಿ ಇರುವಂತಹ ಮೋಟರ್ ಸರಿಯಾಗಿ ಕೆಲಸ ಮಾಡುತ್ತದೆಯೋ , ಇಲ್ಲವೋ ಎಂದು ತಿಳಿಯುತ್ತದೆ. ಈ ಬಗ್ಗೆ ಅಧಿಕಾರಿಗಳ ಬಳಿ ಚರ್ಚಿಸಿದಾಗ ತಾಂತ್ರಿಕ ತೊಂದರೆ ಇದೆ ಎಂಬುದು ಗೊತ್ತಾಗಿದೆ ಎಂದರು. ಈ ಯೋಜನೆಗೆ ಮಾಯಕೊಂಡ ಶಾಸಕರಾದ ಪ್ರೋ.ಲಿಂಗಣ್ಣನವರು 1 ಕೋಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಗುಂಗೆಯವರು ಸುಮಾರು 4 ರಿಂದ 5 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಬಹುದು. ಅದನ್ನು ಅವರೇ ಮಾಡಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದು ಶ್ರೀಗಳು ಮಾಹಿತಿ ನೀಡಿದರು .
ಜಗಳೂರು ತಾಲ್ಲೂಕಿನ 53 ಹಾಗೂ ಭರಮಸಾಗರ ಸುತ್ತಮುತ್ತಲಿನ 41 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು 500 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು, ತದ ನಂತರ ಈಗಿನ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು
ಸ್ಪಂದಿಸುವುದಾಗಿ ಹೇಳಿದ್ದಾರೆಂದರು.ಸಂಸದರಾದ ಜಿ.ಎಂ ಸಿದ್ದೇಶ್ವರ್ ಮಾತನಾಡಿ ಮಳೆಗಾಲದಲ್ಲಿ 120 ಟಿ ಎಂ ಸಿ ನೀರು
ತುಂಗಭದ್ರಾ ನದಿಯ ಮೂಲಕ ಸಮುದ್ರ ಪಾಲಾಗಿದೆ. ನಮ್ಮ ಈ ಏತ ನೀರಾವರಿ ಯೋಜನೆಗೆ ಬೇಕಾಗಿರುವುದು 1 ಟಿ ಎಂ ಸಿ ನೀರು ಮಾತ್ರ. ಸಾಕಷ್ಟು ನೀರು ಪೋಲಾಗಿರುವುದು ನೋವು ತಂದಿದೆ ಎಂದರು. ಶ್ರೀಗಳು ಏತ ನೀರಾವರಿ ಯೋಜನೆಯ ಅನುಷ್ಠಾನ ವಿಚಾರದಲ್ಲಿ ಅತ್ಯಂತ ಕಾಳಜಿ ಹೊಂದಿದ್ದಾರೆ. ಶ್ರೀಗಳ ಆಶಯದಂತೆ ಜಗಳೂರು ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 330 ಕೋಟಿ ಹಾಗೂ ಭರಮಸಾಗರ ಮತ್ತು ಚಿತ್ರದುರ್ಗ ಎಲ್ಲಾ ತಾಲೂಕುಗಳ ಕೆರೆ ತುಂಬಿಸುವ ಯೋಜನೆಗೆ 600 ಕೋಟಿ ರೂ ಅನುದಾನಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಸಮಗ್ರ ವರದಿ ತಯಾರಾಗಿದ್ದು ,ಶ್ರೀಗಳ ಸೂಚನೆಯ ಮೇರೆಗೆ ಈ ಯೋಜನೆಯಡಿ ಕೆಲವು ಸಣ್ಣ ಪುಟ್ಟ ಮಾರ್ಪಾಡುಗಳು ಆಗಬೇಕಿದೆ ಎಂದು ಹೇಳಿದರು.
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಜೆ ಮಲ್ಲಿಕಾರ್ಜುನ್ ಗುಂಗೆ ಮಾತನಾಡಿ ಈ ಯೋಜನೆಯಲ್ಲಿ ವೆಲ್ಡಿಂಗ್ ಮತ್ತು ವಿದ್ಯುತ್ ವ್ಯತ್ಯಯದಿಂದ
ಲೋಪದೋಷಗಳು ಹುಟ್ಟಿಕೊಂಡಿವೆ.ಇದಕ್ಕೆ ಸ್ಥಳದಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಮಾಡಿ,ನೀರು ಸರಾಗವಾಗಿ ಜಾಕ್ ವೆಲ್ ಗೆ ಬಂದು ಸೇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಇದಕ್ಕೆ ಬೇಕಾಗುವ 4 ರಿಂದ 5 ಕೋಟಿ ಹಣವನ್ನು ಬಳಕೆ ಮಾಡಲು ಯಾವುದೇ ತೊಂದರೆ ಬರುವುದಿಲ್ಲ.ಆದರೆ ಟೆಂಡರ್ ಹಂತ ಮಾತ್ರ ನಮ್ಮ ವ್ಯಾಪ್ತಿಗೆ ವ್ಯಾಪ್ತಿಗೆ ಬರುತ್ತದೆ.ಆದರೆ ಹಣ ಬಿಡುಗಡೆ ಮಾಡಲಿಕ್ಕೆ ಸಿ ಎಂ ಬಳಿ ಚರ್ಚೆ ಮಾಡಿ ಶೀಘ್ರವೇ ಕೆಲಸ ಮಾಡಿಸಿಕೊಡುವುದಾಗಾ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ವಿ.ರಾಮಚಂದ್ರ ,ಪ್ರೊ.ಲಿಂಗಣ್ಣ, ಮುಖ್ಯ ಎಂಜಿನಿಯರ್ ಯತೀಶ್ ಚಂದ್ರನ್, ಅಧೀಕ್ಷಕ ಎಂಜಿನಿಯರ್ ದಿವಾಕರ್ ನಾಯಕ್,ಕಾರ್ಯಪಾಲಕ ಎಂಜಿನಿಯರ್ ಜಿ.ಆರ್ ಕೊಟ್ರೇಶ್ ,ಗಂಗಪ್ಪ,ವಿಕಾಸ್ ನಿಂಬಣ್ಣ,ನಾಗರಾಜಪ್ಪ ಕರೆ ನೀರಾವರಿ ಯೋಜನೆಯ ಅಧ್ಯಕ್ಷರಾದ ಡಾ.ಮಂಜುನಾಥ್ ಗೌಡ,ಸುಭಾಷ್ ಚಂದ್ರ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401