ದಿನದ ಸುದ್ದಿ

ಕೆರೆಯ ನೀರನ್ನು ಎಲ್ಲಾ ರೈತರು ಸಮನಾಗಿ ಹಂಚಿಕೊಳ್ಳಿ : ತರಳಬಾಳು ಶ್ರೀಗಳ ಕರೆ

Published

on

ಸುದ್ದಿದಿನ,ದಾವಣಗೆರೆ : ಇಲ್ಲಿಗೆ ಸಮೀಪದ ಬೋರಗುಂಡನಹಳ್ಳಿಯಲ್ಲಿರುವ ಕೆರೆಯಲ್ಲಿ ಒಂದು ಹನಿನೀರು ಇಲ್ಲದಿರುವ ಬಗ್ಗೆ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಆತಂಕ ವ್ಯಕ್ತ ಪಡಿಸಿದರು.

ಅವರು ಇಂದು ಬೋರಗೋಂಡನಹಳ್ಳಿಯಲ್ಲಿ ಶ್ರೀ ಹಾಲಸ್ವಾಮಿ,ಶ್ರೀ ಮರುಳಸಿದ್ದೇಶ್ವರ,ಶ್ರೀ ಚೌಡೇಶ್ವರಿ ದೇವಿಯ ಗೋಪುರಗಳ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಸವನಾಳ್ ಸಮೀಪದ ರಾಂಪುರ ಕೆರೆಯು ಕೋಡಿ ಹರಿದ ನೀರು ವ್ಯರ್ಥವಾಗಿ ಹರಿಯುತ್ತಿರುವುದನ್ನು ತಡೆಗಟ್ಟಲು ,ಇಲ್ಲಿ ಸಂಗ್ರಹಗೊಂಡ ನೀರಿನಿಂದ ಪೈಪ್ ಲೈನ್ ಮೂಲಕ ಬೋರಗುಂಡನಹಳ್ಳಿಯಲ್ಲಿ ಕೆರೆಯನ್ನು ತುಂಬಿಸುವ ಯೋಜನೆ ಕೈಗೊಳ್ಳಲಾಗಿತ್ತು.ಆದರೆ ರಾಂಪುರ ಕೆರೆಯಿಂದ ಸಂಗ್ರಹವಾದ ನೀರು
ಪೈಪ್ ಲೈನ್ ಮೂಲಕ ಹರಿಸಲು ಸಾಧ್ಯವಾಗುವಂತೆ.ಪಂಪ್ ಹೌಸ್ ನಿರ್ಮಾಣ ಮಾಡುವ ಉದ್ದೇಶವಿದ್ದು,ಈ ಕಾರ್ಯಕ್ಕೆ ರೈತರೊಬ್ಬರು ಅಡ್ಡಿಪಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದಾರೆ.ಈ ಬಗ್ಗೆ ಪರಿಶೀಲಿಸಿದ್ದು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ಶ್ರೀಗಳು
ತಿಳಿಸಿದರು.

22 ಕೆರೆಗಳ ಏತ ನೀರಾವರಿ ಸಮಿತಿ ಅಧ್ಯಕ್ಷ ಡಾ.ಮಂಜುನಾಥ್ ಗೌಡ್ರು,ಜಿ.ಪಂ ಸದಸ್ಯ ಬಸವಂತಪ್ಪ ಮತ್ತಿತರ ಮುಖಂಡರೊಡನೆ ತಾವು ಸ್ಥಳ ಪರಿಶೀಲನೆ ನಡೆಸಿದ್ದು ಎಲ್ಲರ ಸಲಹೆಗಳನ್ನು ಪಡೆಯುವುದಾಗಿ ಶ್ರೀಗಳು ತಿಳಿಸಿದರು.

ಭದ್ರಾ ಜಲಾಶಯದಿಂದ 127 ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ.ಆದರೆ ಕೆರೆಗಳಿಗೆ ತುಂಬಿಸಲು ಬೇಕಾಗಿರುವ 1 ಟಿಎಂಸಿ ನೀರನ್ನು ಪಡೆಯಲಾಗುತ್ತಿಲ್ಲ ಇದಕ್ಕೆ ತಾಂತ್ರಿಕ ದೋಷ ಹಾಗೂ ಪೈಪ್‌ಲೈನ್ ಹೋಗಿರುವ ಜಾಗದಲ್ಲಿನ ರೈತರ ಅಸಹಕಾರವೇ ಕಾರಣ ಎಂದು ವಿಷಾದಿಸಿದರು.

ನೀರನ್ನು ಎಲ್ಲಾ ರೈತರು ಸಮನಾಗಿ ಹಂಚಿಕೊಂಡರೆ ಯಾವುದೇ ಸಮಸ್ಯೆಯು ಇರುವುದಿಲ್ಲ.ಆದರೆ ರೈತರು ಪರಸ್ಪರ ನಮಗೆ ಹೆಚ್ಚು ನೀರು ಎಂದು ಜಗಳವಾಡುತ್ತಿದ್ದರೆ,ಕೆರೆಗಳಿಗೆ ನೀರು ಬರುವುದು ಯಾವಾಗ ? ಕರೆಗಳಿಗೆ ನೀರು ಹೇಗೆ ತುಂಬುತ್ತದೆ ? ಎಂದು ಪ್ರಶ್ನಿಸಿದರು.

22 ಕೆರೆಗಳ ಯೋಜನೆಯ 2 ನೇ ಜಾಕ್ ವೆಲ್ ಇರುವ ಮಲ್ಲಶೆಟ್ಟಿಹಳ್ಳಿ ಬಳಿ ದೇವಸ್ಥಾನಕ್ಕೆ ಸೇರಿದ 16 ಎಕರೆ ಜಮೀನಿನ್ನು ಕೆರೆ ನಿರ್ಮಾಣ ಮಾಡಲು ಸಮ್ಮತಿಸಿದ್ದು,ಇದಕ್ಕಾಗಿ 5 ಕೋಟಿ ರೂಗಳನ್ನು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು
ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಮೊದಲನೇ ಜಾಕ್ ವೆಲ್ ಬಳಿ
ತಡೆಗೋಡೆಯನ್ನು ನಿರ್ಮಿಸಲು 5 ಕೋಟಿ ರೂಗಳನ್ನು ಸರ್ಕಾರದಿಂದ ಮಂಜೂರು ಮಾಡಿಸುವುದಾಗಿಯೂ ಹೇಳಿದ್ದಾರೆ.22 ಕೆರೆಗಳ ತಾಂತ್ರಿಕ ದೋಷ ಸರಿಪಡಿಸಲು ನಾವು ಶಿಫಾರಸ್ಸು ಮಾಡಿದ ಇಂಜಿನಿಯರ್ ನೇಮಕಕ್ಕೆ ಒಪ್ಪಿಗೆಯೂ ದೊರೆತಿರುವುದಾಗಿ ಶ್ರೀಗಳು ತಿಳಿಸಿದರು.

22 ಕೆರೆಗಳ ನ್ಯೂನತೆಯನ್ನು ಸರಿಪಡಿಸಲು ಜನಪ್ರತಿನಿದಿಗಳು ಒತ್ತಡ ತರಬೇಕು ಕೇವಲ ಹಾರ – ತುರಾಯಿ ಹಾಕಿಸಿಕೊಳ್ಳಲು ಸೀಮಿತರಾಗದೇ ಜನರ ಋಣದಲ್ಲಿ ನಾವಿದ್ದೇವೆ ಎಂಬ ಭಾವನೆ ಇರಬೇಕು ಎಂದು ಎಚ್ಚರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯ ಮುಖಂಡ ಬೇತೂರು ಬಸಪ್ಪ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಕೆ ಎಸ್. ಬಸವಂತಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಮೆಳ್ಳೇಕಟ್ಟೆ ಚಿದಾನಂದ ಐಗೂರು,22ಕೆರೆ ನೀರಾವರಿ ಸಮಿತಿಯ ಅಧ್ಯಕ್ಷ ಡಾ.ಮಂಜುನಾಥ ಗೌಡ್ರು,ತಾ.ಪಂ ಸದಸ್ಯ ಶ್ರೀಮತಿ ಲಲಿತಮ್ಮ ಆನಂಪ್ಪ ಸೇರಿದಂತೆ ಇತರ ಮುಖಂಡರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version