ದಿನದ ಸುದ್ದಿ
ದಾವಣಗೆರೆಯಲ್ಲಿಂದು ತರಳಬಾಳು ಶ್ರೀಗಳ ಶ್ರದ್ದಾಂಜಲಿ ನಿಮಿತ್ತ ಅಕ್ಕಿ ಸಮರ್ಪಣೆ
ಸುದ್ದಿದಿನ, ದಾವಣಗೆರೆ : ಲೋಕದ ತರಳರ ಬಾಳಿನ ಆರಾಧ್ಯ ದೈವವಾದ ತರಳಬಾಳು ಗುರು ಪರಂಪರೆಯ 20 ನೇ ಪೀಠದ ಅಧಿಪತಿಗಳಾಗಿ ಪೀಠವು ಸಮಾಜದ ಸೇವೆಯ ಸಾಧನ ಎಂಬಂತೆ ಸಮಾಜದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಂಗಗಳ ಸರ್ವತೋಮುಖ ಅಭಿವೃದ್ಧಿಗೆ ನಾಲ್ಕು ದಶಕಗಳ ಅಹರ್ನಿಶಿ ತಪೋನಿಷ್ಟರಂತೆ ಕಾರ್ಯಮಗ್ನರಾಗಿ ಬಿದ್ದ ಸಮಾಜವನ್ನೇ ಎದ್ದು ನಿಲ್ಲಿಸಿದ ಮಹಾಬೆಳಗಾಗಿ ಅಸಂಖ್ಯಾತ ಶಿಷ್ಯರ ಹೃದಯದ ನಿತ್ಯ ಪೂಜನೀಯ ಸಿಂಹಸಾನಾಧೀಶರಾಗಿ ವಿರಾಜಮಾನರಾಗಿರುವ ಸ್ಮರಣೀಯ ಪರಮಪೂಜನೀಯ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 26 ನೇ ಶ್ರದ್ಧಾಂಜಲಿಯ ಸಮಾರಂಭ ಇದೇ 20 ರಿಂದ 24 ರವರೆಗೆ ಸಿರಿಗೆರೆಯಲ್ಲಿ ಜರುಗಲಿದೆ.
ನಾಡಿನ ಮುಖ್ಯಮಂತ್ರಿಗಳು,ಮಾಜಿ ಮುಖ್ಯ ಮಂತ್ರಿಗಳು, ಹಾಲಿ ಮತ್ತು ಮಾಜಿ ಸಚಿವರು,ಸಂಸದರು, ಶಾಸಕರು, ಸಾಹಿತಿಗಳು,ವಿದ್ವಾಂಸರು ಸಿರಿಗೆರೆಯಲ್ಲಿ ಜರುಗುವ ಮಹಾಗುರುವಿನ ಪುಣ್ಯ ಸ್ಮರಣೆಯಲ್ಲಿ ನುಡಿನಮನ ಸಲ್ಲಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಲಕ್ಷಾಂತರ ಶಿಷ್ಯರ ದಾಸೋಹ ಪ್ರಸಾದ ಸೇವೆಗೆ ಶ್ರೀ ಮಠದ ಅಭಿಮಾನಿ ಶಿಷ್ಯ ಸಮಾಜ ತನು-ಮನ-ಧನ-ದವಸ-ಧಾನ್ಯ ಅರ್ಪಿಸುವ ಪ್ರತೀತಿ,ಸಂಪ್ರದಾಯವೆಂಬಂತೆ ಕಳೆದ ಇಪ್ಪತ್ತೈದು ವರ್ಷಗಳಿಂದಲೂ ನಡೆಯುತ್ತಿದೆ. ಈ ವರ್ಷದ ಶ್ರದ್ಧಾಂಜಲಿಯ ಸಮಾರಂಭಕ್ಕೆ ಈಗಾಗಲೇ ಭದ್ರಾವತಿ, ಹರಿಹರ, ಹಾವೇರಿ, ಹೊನ್ನಾಳಿ ತಾಲ್ಲೂಕಿನ ಶ್ರದ್ದಾಳು ಶಿಷ್ಯರು ಭಕ್ತಿಯ ಸೇವೆಯನ್ನು ಶ್ರೀಮಠಕ್ಕೆ ಅರ್ಪಿಸಿದ್ದಾರೆ.
ಭಕ್ತ ಸಮುದಾಯ ಪುಣ್ಯ ಸ್ಮರಣೆಯ ತನ್ನಿಮಿತ್ತ ತನು,ಮನ,ಧನ,ಧವಸ,ಧಾನ್ಯವನ್ನು ಶ್ರೀ ಪೀಠಕ್ಕೆ ಅರ್ಪಿಸುವ ಪರಿಪಾಠದ ಸಂಪ್ರದಾಯ ಇದೆ.
ಅದರ ಮುಂದುವರಿದ ಭಾಗವಾಗಿ ಈ ವರ್ಷವೂ ಸಹ ದಾವಣಗೆರೆ ಜಿಲ್ಲೆಯ ಶರಣ ಬಂಧುಗಳು ನೂರಾರು ಕ್ವಿಂಟಲ್ ಅಕ್ಕಿ ಸೇರಿದಂತೆ ಅನೇಕ ಸೇವೆಗಳನ್ನು ದಾಸೋಹ ಕೈಂಕರ್ಯಕ್ಕೆ ಅರ್ಪಿಸಲಿದ್ದಾರೆ.
ಲಿಂ.ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳ ಶ್ರದ್ದಾಂಜಲಿ ಸ್ಮರಣಾರ್ಥ ಅಕ್ಕಿ ಸಮರ್ಪಣಾ ಸಮಾರಂಭ ಇಂದು ದಾವಣಗೆರೆಯಲ್ಲಿ ಸಂಜೆ 4: 30 ಕ್ಕೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಿ ಜರುಗಲಿದೆ.
ದಿವ್ಯಸಾನ್ನಿಧ್ಯವನ್ನು ಪರಮಪೂಜನೀಯ : ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸುವರು.
ಅಧ್ಯಕ್ಷತೆ : ಶರಣ ಕೆ ಆರ್ ಜಯದೇವಪ್ಪ ಮಾಜಿ ಸಂಸದರು,ಅಧ್ಯಕ್ಷರು ಶ್ರೀ ಮದ್ ಸಾಧು ಸದ್ದರ್ಮ ಸಮಾಜ ದಾವಣಗೆರೆ ಇವರು ವಹಿಸಲಿದ್ದು . ಸಮಾಜದ ಅನೇಕ ಮುಖಂಡರು,ಸರ್ವ ಶರಣ ಶರಣೆಯರು ಪಾಲ್ಗೊಳ್ಳಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401