ದಿನದ ಸುದ್ದಿ
ಮಾನವೀಯ ಮೌಲ್ಯ ಕಣ್ಮರೆ ; ಪ್ರಸಾದ ನೀಡುವ ಕೈಯಲ್ಲಿ ವಿಷ ಪ್ರಾಶನ ನೋವಿನ ಸಂಗತಿ : ತರಳಬಾಳು ಶ್ರೀ
ಸುದ್ದಿದಿನ,ಅರಸೀಕೆರೆ: ಆಧುನಿಕತೆಯ ನಾಗರಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.
ತಾಲೂಕು ಮಾಡಾಳು ಗ್ರಾಮದ ನಿರಂಜನ ಪೀಠದಲ್ಲಿ ಆಯೋಜಿಸಿದ್ದ ಲಿಂ. ಚಂದ್ರಶೇಖರ ಸ್ವಾಮೀಜಿಯವರ 12ನೇ ವರ್ಷದ ಪುಣ್ಯಸ್ಮರಣೆ ಹಾಗೂ 19ನೇ ವರ್ಷದ ಅರಿವಿನ ಜಾಗೃತಿ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಕೆಲವು ಮಠಾಧಿಪತಿಗಳು ಐಶ್ವರ್ಯ ಹಾಗೂ ಅಧಿಕಾರದ ವ್ಯಾಮೋಹಕ್ಕೆ ಒಳಗಾಗಿ ಪ್ರಸಾದ ನೀಡುವ ಕೈಯಲ್ಲಿ ವಿಷ ಪ್ರಾಷನ ಮಾಡಿ 19 ಮಂದಿ ಬಲಿ ತೆಗೆದುಕೊಂಡಿರುವುದು ತುಂಬಾ ನೋವಿನ ಸಂಗತಿ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ವೈಜ್ಞಾನಿಕವಾಗಿ ಬೆಳೆದಂತೆ ಆತನಲ್ಲಿ ಮಾನವೀಯ ಮೌಲ್ಯಗಳು ದೂರವಾಗು ತ್ತಿರುವ ಪರಿಣಾಮ ಸಮಾಜದ ನಡುವೆ ಕಂದಕ ಸೃಷ್ಟಿಯಾಗು ತ್ತಿದೆ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳು ಮಾಯವಾಗುತ್ತಿವೆ ಎಂದು ಹೇಳಿದರು.
ಅಶಾಂತಿಯ ವಾತಾವರಣ: ಮನುಷ್ಯ ಮಾನಸಿಕವಾಗಿ ಪ್ರಬುದ್ಧನಾಗಿ ಬೆಳೆದರೂ ಭೌತಿಕವಾಗಿ ಪ್ರಬುದ್ಧನಾಗಿ ಬೆಳೆಯದ ಕಾರಣ ಸಮಾಜದ ಎಲ್ಲೆಡೆಯಲ್ಲೂ ಅ ಶಾಂತಿಯ ಹೊಗೆಯಾಡುತ್ತಿದೆ ಎಂದು ವಿಷಾದಿಸಿದರು.
ಈ ಹಿಂದೆ ಧರ್ಮಪೀಠದಲ್ಲಿನ ಮಠಾಧೀಶರ ಬಗ್ಗೆ ಭಕ್ತಿ ಭಾವದಿಂದ ಭಕ್ತರ ಸಮೂಹ ನಡೆದುಕೊಳ್ಳುತ್ತಿತ್ತು. ಭಕ್ತ ಸಮೂಹದ ನಂಬಿಕೆಗೆ ಚ್ಯುತಿ ಬಾರದಂತೆ ಮಠಾಧೀಶರು ನಡೆಯುತ್ತಿದ್ದರು. ಆದರೆ ಪ್ರಸ್ತುತ ಬದಲಾದ ಕಾಲದಲ್ಲಿ ಅಂಜುವುದಿರಲಿ ಅನುಮಾನದಿಂದ ನೋಡುವಂತಹ ದುಸ್ಥಿತಿ ಯನ್ನು ನಾವುಗಳು ಕಾಣುತ್ತಿದ್ದೇವೆ ಎಂದರು.
ಇತ್ತೀಚೆಗೆ ಸುಳ್ವಾಡಿ ದೇವಾಲಯದಲ್ಲಿ ನಡೆದ ವಿಷ ಪ್ರಾಷನ ಕಹಿ ಘಟನೆ ಮಠಾಧೀಶರು ಹಾಗೂ ಸಾಧುಸಂತರನ್ನು ಅನು ಮಾನದಿಂದ ನೋಡುವಂತಾಗಿದ್ದು ಭಕ್ತ ಸಮೂಹವನ್ನು ಸನ್ಮಾರ್ಗದತ್ತ ಕರೆದೊಯ್ಯವ ಮಠಾಧೀಶರೇ ದೇವರ ಪ್ರಸಾದ ದಲ್ಲಿ ವಿಷ ಪ್ರಾಷನ ಮಾಡಿಸಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅವಿಭಕ್ತ ಕುಟುಂಬಗಳು ಕಣ್ಮರೆ: ಇತ್ತೀಚಿನ ದಿನಗಳಲ್ಲಿ ನಾನು, ನನ್ನದು ಎಂಬ ಅಹಂಕಾರದಿಂದ ಕುಟುಂಬಗಳು ಒಡೆಯು ತ್ತಿದ್ದು, ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಪ್ರಸ್ತುತ ಕೌಟುಂಬಿಕ ಜೀವನ ಸಹ ವ್ಯಾವಹಾರಿಕವಾಗಿದೆ. ಇಂತಹಾ ಆಧ್ಯಾತ್ಮಿಕತೆಯ ಅರಿವಿನ ಜಾಗೃತಿ ಸಮಾರಂಭಗಳು ಉತ್ತಮ ಸಂಸ್ಕೃತಿ ಹಾಗೂ ಗುರು ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿ ಪ್ರತಿಪಾದಿಸಿದರು.
ಸಂಸ್ಕೃತಿಯ ಅರಿವು ಮೂಡಿಸಿ: ಸಾನ್ನಿಧ್ಯ ವಹಿಸಿದ್ದ ಕೆರೆಗೋಡಿ ರಂಗಾಪುರ ಮಠದ ಗುರುಪರದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಆಚಾರ, ವಿಚಾರಗಳನ್ನು ಯುವ ಜನತೆಯಲ್ಲಿ ಬಿತ್ತುವ ಕಾರ್ಯವನ್ನು ಮಠಗಳು ಹಾಗೂ ಮಠಾಧೀಶರು ಪ್ರಸ್ತುತ ದಿನಗಳಲ್ಲಿ ಅತ್ಯಂತ ಅವಶ್ಯಕವಾಗಿ ಮಾಡಬೇಕಿದೆ ಎಂದರು.
ಸಮಾರಂಭದಲ್ಲಿ ಕೃಷಿಕರಾದ ಟಿ.ಜಿ ರುದ್ರಪ್ಪ,ಉದ್ಯಮಿ ಅರುಣ್ಕುಮಾರ್, ಡಾ.ಪೂರ್ಣಿಮಾ, ವೈದ್ಯ ಸಂಗಣ್ಣ ಶ್ಯಾಮಸುಂದರ್ ಅವರನ್ನು ಸನ್ಮಾನಿಸಲಾಯಿತು. ಸಮಾ ರಂಭದ ಅಧ್ಯಕ್ಷತೆಯನ್ನು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ವಹಿಸಿದ್ದರು. ಪಾಂಡೋಮಟ್ಟಿ ವಿರಕ್ತ ಮಠದ ಗುರು ಬಸವ ಸ್ವಾಮೀಜಿ, ಕಿರಿಕೊಡ್ಲಿಪೇಟೆಯ ಸದಾಶಿವ ಸ್ವಾಮೀಜಿ, ಸುಜಾತ ಮೇಲೇಗೌಡ ಮೊದಲಾದವರು ಮಾತನಾಡಿದರು.
ಕೊಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಕರಡಿಗವಿ ಮಠದ ಶಂಕರಾನಂದ ಸ್ವಾಮೀಜಿ, ಶಿವಬಸವ ಕುಮಾರಾಶ್ರಮದ ಅಭಿನವ ಶಿವಲಿಂಗ ಸ್ವಾಮೀಜಿ, ಡಿ.ಎಂ.ಕುರ್ಕೆ ವಿರಕ್ತ ಮಠದ ಶಶಿಶೇಖರ ಸಿದ್ದಬಸವಸ್ವಾಮೀಜಿ, ಜಿಪಂ ಸದಸ್ಯ ಮಾಡಾಳು ಎಂ.ಎಸ್.ವಿ. ಸ್ವಾಮಿ, ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಜಿ.ರೇವಣ್ಣ, ಎನ್. ಜಿ. ಮಧು, ಯುವ ಕಾಂಗ್ರೆಸ್ಮಾಜಿ ಅಧ್ಯಕ್ಷ ಅಣ್ಣಾಯಕನಹಳ್ಳಿ ವಿಜಯ್ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401