ಅಂತರಂಗ

ಭಾರತದ ಸಂವಿಧಾನ : ಪ್ರಜೆಗಳ ಓದು

Published

on

  • ಡಾ. ಬಿ.ಎಂ. ಪುಟ್ಟಯ್ಯ

ಭಾರತದ ಸಂವಿಧಾನವನ್ನು ಯಾಕೆ ಓದಬೇಕು ಮತ್ತು ಅದನ್ನು ಕುರಿತು ಯಾಕೆ ಚರ್ಚೆ ಮಾಡಬೇಕು ಎಂಬುದು ಮೊದಲನೆಯ ಮುಖ್ಯ ಪ್ರಶ್ನೆ. ಅನೇಕರು ಹೇಳುತ್ತಾರೆ: ಇದು ಜನರನ್ನು ಜಾಗೃತಗೊಳಿಸಲು, ಅವರಿಗೆ ಸಂವಿಧಾನದ ಬಗೆಗೆ ಹಾಗೂ ಕಾನೂನುಗಳ ಬಗೆಗೆ ಅರಿವು ಮೂಡಿಸಲು ಎಂದು. ನನಗೆ ಯಾಕೋ ಈ ಉತ್ತರ ತೃಪ್ತಿಕರ ಎನಿಸುತ್ತಿಲ್ಲ.

ಹಾಗಾಗಿ ಈ ಬಗೆಗೆ ನನಗೆ ಏನು ಅನಿಸುತ್ತದೆ ಅಂದರೆ ಸಂವಿಧಾನವನ್ನು ಓದುವುದು ಮತ್ತು ಅದರ ಬಗೆಗೆ ಚರ್ಚೆ ಸಂವಾದ ಮಾಡುವುದು ನಮ್ಮನ್ನು ನಾವೇ ಆತ್ಮ ವಿಮರ್ಶೆ ಮಾಡಿಕೊಳ್ಳಲು ಮತ್ತು ಸ್ವ ವಿಮರ್ಶೆ ಮಾಡಿಕೊಳ್ಳಲು ಓದಬೇಕು ಹಾಗೂ ಮಾತನಾಡಬೇಕು ಅಂತ ನನಗೆ ಅನಿಸಿದೆ.

ಭಾರತದ ಸಂವಿಧಾನದ ರಚನೆಯ ಕಾಲವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಬೇಕು. ಈ ಅವಲೋಕನವು ಭಾರತದ ಪರಿಸ್ಥಿತಿ ಹಾಗೂ ಜಾಗತಿಕ ಪರಿಸ್ಥಿತಿಗಳನ್ನು ಆಧರಿಸಿರಬೇಕು. ನನ್ನ ಆಲೋಚನೆಯ ಪ್ರಕಾರ ಅದು ರಾಷ್ಟ್ರ ಮಟ್ಟದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಒಂದು ತೀವ್ರವಾದ ಆತಂಕದ ಕಾಲವಾಗಿತ್ತು. ಅದನ್ನು ಅರ್ಥಮಾಡಿಕೊಳ್ಳುತ್ತಲೇ ಅಂತಹ ಆತಂಕಗಳಿಂದ ಮುಕ್ತರಾಗುವುದು ಹೇಗೆ ಎಂಬ ದೊಡ್ಡ ಸವಾಲುಗಳು ಸಂವಿಧಾನದ ರಚನೆಯ ಮುಂದಿದ್ದವು.

ಆಗ ಎರಡನೇ ಪ್ರಪಂಚ ಯುದ್ಧ ಮುಗಿಯುತ್ತಿದ್ದ ಕಾಲ. ಜಾಗತಿಕ ಮಟ್ಟದಲ್ಲಿ ಸಾಮ್ರಾಜ್ಯಶಾಹಿ ತನ್ನ ಸುಲಿಗೆಯ ವಿಧಾನ ಮತ್ತು ತಂತ್ರಗಳನ್ನು ಬದಲಾಯಿಸಿಕೊಳ್ಳಲು ಕುತಂತ್ರ ಹುಡುಕುತ್ತಿದ್ದ ಕಾಲ. ಎರಡನೇ ಪ್ರಪಂಚ ಯುದ್ಧದಲ್ಲಿ ಅಮೇರಿಕ ನೇತೃತ್ವದ ರಾಷ್ಟçಗಳಿಗೆ ಬಂದೊದಗಿದ ಬಿಕ್ಕಟ್ಟುಗಳನ್ನು ಎದುರಿಸುವ ಸಲುವಾಗಿ ತನ್ನ ಸುಲಿಗೆಯ ನೀತಿಗಳನ್ನು ಬದಲಾಯಿಸಿಕೊಂಡಿತು.

ಇದರ ಪರಿಣಾಮದಿಂದಾಗಿ ಪ್ರಪಂಚದ ಬೇರೆ ಬೇರೆ ಭಾಗದಲ್ಲಿ ರಾಷ್ಟ್ರ ವೀಮೋಚನೆಗಾಗಿ ಹೋರಾಟ ಮಾಡುತ್ತಿದ್ದ ರಾಷ್ಟçಗಳಿಗೆ ಅಧಿಕಾರವನ್ನು ಹಸ್ತಾಂತರಿಸುವುದು ಅನಿವಾರ್ಯವಾಯಿತು. ಈ ಉದ್ದೇಶದಿಂದ ಚರ್ಚಿಲ್ ಒಪ್ಪಂದವನ್ನು ರೂಪಿಸಲಾಯಿತು. ಅಂತರರಾಷ್ಟಿçಯ ಮಟ್ಟದಲ್ಲಿ ಇದು ಅತ್ಯಂತ ಗುರುತರವಾದ ಆತಂಕದ ಪರಿಸ್ಥಿತಿಯನ್ನು ನಮಗೆ ಸೂಚಿಸುತ್ತದೆ. ಇನ್ನು ನಿರ್ದಿಷ್ಟವಾಗಿ ಭಾರತದಲ್ಲಿ ಏನಾಗುತ್ತಿತ್ತು ಎಂಬುದರತ್ತ ಗಮನ ಹರಿಸೋಣ.
ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿತ್ತು.

ಆ ಹೋರಾಟ ಹಲವು ರೂಪಗಳಲ್ಲಿ ಕವಲೊಡೆದಿತ್ತು.
ಭಾರತದಲ್ಲಿ ಮುಸ್ಲಿಂ ಲೀಗ್ ಮುಸ್ಲಿಮರ ಬಗೆಗೆ ಕೆಲವು ಹಕ್ಕೊತ್ತಾಯವನ್ನು ಮಂಡಿಸಿತ್ತು. ಹಿಂದೂ ಮಹಾಸಭಾ ಹಿಂದೂ ಸಂಸ್ಕೃತಿಯ ಪುನರುತ್ಥಾನಕ್ಕೆ ಇಳಿದಿತ್ತು. ಕೆಲವು ಪಾಶ್ಚಾತ್ಯರು ಭಾರತದಲ್ಲಿ ಸಾಮಾಜಿಕ ಸುಧಾರಣಾ ಚಳುವಳಿಗಳನ್ನು ಮಾಡುತ್ತಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡುತ್ತಿತ್ತು. ಇದರ ಅಡಿಯಲ್ಲಿ ಭಾರೀ ಭೂಮಾಲೀಕರ ಮತ್ತು ಭಾರೀ ಬಂಡವಾಳಶಾಹಿಗಳ ವರ್ಗಹಿತಾಸಕ್ತಿಗಳು ಮೇಲುಗೈ ಸಾಧಿಸಿದ್ದವು. ಡಾ. ಅಂಬೇಡ್ಕರ್ ನೇತೃತ್ವದಲ್ಲಿ ಕೆಳವರ್ಗ, ಕೆಳಜಾತಿ ಮತ್ತು ಮಹಿಳೆಯರ ಸಬಲೀಕರಣ ಮಾಡುವುದು ಹೇಗೆ ಎಂಬ ಆಲೋಚನೆ ಮತ್ತು ಹೋರಾಟಗಳು ನಡೆದಿದ್ದವು.

ಭಾರತದ ಮೂಲೆ ಮೂಲೆಯಲ್ಲಿ ಇದ್ದ ಆದಿವಾಸಿಗಳು, ಅಲೆಮಾರಿಗಳು, ಬುಡಕಟ್ಟು ಜನರು, ಅಸ್ಪೃಶ್ಯರು, ಮಹಿಳೆಯರು ಬಿಟ್ಟಿ ದುಡಿಮೆಗಾರರು ಮತ್ತು ಕಾರ್ಮಿಕರು ಅನ್ನ ವಸತಿಗಾಗಿ ಪರಿತಪಿಸುತ್ತಿದ್ದರು. ಅವರು ಒಂದು ಕಡೆ ಸ್ಥಳೀಯ ಭೂಮಾಲೀಕರ ವಿರುದ್ಧವೂ; ಮತ್ತೊಂದು ಕಡೆ ಬ್ರಿಟೀಶರ ವಿರುದ್ಧವೂ ರಾಜಿರಹಿತವಾದ ಸಮರ ಸಾರಿದ್ದರು. 540ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇದ್ದ ಸಂಸ್ಥಾನಗಳು ಮತ್ತು ಮಹಾಸಂಸ್ಥಾನಗಳು ಬ್ರಿಟೀಷರ ಪರವಾಗಿ ಇದ್ದುಕೊಂಡು ಸ್ವಾತಂತ್ರö್ಯವನ್ನು ಘೋಷಣೆ ಮಾಡುವ ರೀತಿಯಲ್ಲಿ ಇರಲಿಲ್ಲ. ಅಂದರೆ, ಅತ್ಯಂತ ತೀವ್ರವಾದ ಆತಂಕವು ಇಡೀ ಭಾರತವನ್ನು ಆವರಿಸಿಕೊಂಡಿತ್ತು.

ಭಾರತದೊಳಗಿನ ವರ್ಗ, ಜಾತಿ, ಧರ್ಮ ಸಂಸ್ಕೃತಿ, ಭಾಷೆ, ಲಿಂಗ ಇವುಗಳ ಶ್ರೇಣೀಕೃತ ಅಸಮಾನತೆ ಕುದಿಯುವುದಕ್ಕೆ ಶುರುವಾಗಿತ್ತು. ಬಲಾಢ್ಯರು ಇವುಗಳ ಉಪಯೋಗ ಪಡೆಯಲು ಮುಂದಾಗಿದ್ದರು. ಅಸಹಾಯಕರನ್ನು ಅಂಚಿಗೆ ತಳ್ಳುವ ಸಂಚು ಮುಂದುವರೆದಿತ್ತು. ಹೀಗಾಗಿ ಭಾರತದೊಳಗಿನ ಹಲವು ಆತಂಕಗಳು ತೀವ್ರವಾಗಿದ್ದವು. ಅಂದರೆ ಭಾರತದಲ್ಲಿ ಸಂವಿಧಾನವನ್ನು ರಚನೆ ಮಾಡುವಾಗ ಭಾರತದ ಸಾಮಾಜಿಕ ಪರಿಸ್ಥಿತಿ ಮತ್ತು ಜಾಗತಿಕ ಮಟ್ಟದ ರಾಜಕೀಯ ಪರಿಸ್ಥಿತಿ ತಿಳಿಯಾಗಿ ಇರಲಿಲ್ಲ. ಅವು ಅತ್ಯಂತ ಏರಿಳಿತಗಳಿಂದ ಹಾಗೂ ಆತಂಕಗಳಿಂದ ಕೂಡಿದ್ದವು.

ಪರಿಸ್ಥಿತಿಯು ಸಮಾಧಾನವಾಗಿದ್ದಾಗ ಸಂವಿಧಾನ ರಚನೆ ಮಾಡುವುದಕ್ಕೂ ಮತ್ತು ಪರಿಸ್ಥಿತಿಯು ಆತಂಕದ ಸ್ಥಿತಿಯಲ್ಲಿ ಇದ್ದಾಗ ಸಂವಿಧಾನ ರಚನೆ ಮಾಡುವುದಕ್ಕೂ ಬಹಳ ವ್ಯತ್ಯಾಸ ಇರುತ್ತದೆ. ಇದನ್ನು ಬಹಳ ಸ್ಮೂಕ್ಷ್ಮವಾಗಿ ಮತ್ತು ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು.

ಇಂತಹ ಚಾರಿತ್ರಿಕ ಸಂದರ್ಭದಲ್ಲಿ, ಭಾರತ ದೇಶವು ಆದಿ ಕಾಲದಿಂದ ವಿವಿಧ ರಾಜ್ಯಭಾರಗಳು, ವಿವಿಧ ಆಡಳಿತಗಳು, ವಿವಿಧ ಸಂಸ್ಕೃತಿಗಳು, ವಿವಿಧ ಧರ್ಮಗಳು, ವಿವಿಧ ಪರಂಪರೆಗಳಿಂದ ಸಾಗಿ ಬಂದಿದ್ದ ಅನುಭವ ಮತ್ತು ಅರಿವು ಸಂವಿಧಾನ ರಚನೆಕಾರರ ಮುಂದಿದ್ದವು. ಭಾರತ ರಾಷ್ಟçವನ್ನು ಬ್ರಿಟೀಶರ ಆಳ್ವಿಕೆಯಿಂದ ಮುಕ್ತಗೊಳಿಸಿದ ನಂತರದಲ್ಲಿ, ಮತ್ತೆ ಅಂತಹ ಪರಿಸ್ಥಿತಿಗಳಿಗೆ ಅವಕಾಶ ಕೊಡದಂತೆ ಹೊಸದಾಗಿ ಕಟ್ಟುವುದು ಹೇಗೆ, ತುಳಿಯುವ ಮತ್ತು ತುಳಿತವನ್ನು ಅನುಭವಿಸುತ್ತಿರುವ ಎಲ್ಲ ಪ್ರಜೆಗಳ ಭೌತಿಕ ಪರಿಸ್ಥಿತಿಯನ್ನು ಬದಲಾಯಿಸುವುದು ಹೇಗೆ, ಈ ಎರಡೂ ವರ್ಗಗಳ ಅಂತರಂಗವನ್ನು, ಗುಣಸ್ವಭಾವಗಳನ್ನು ಪರಿವರ್ತನೆ ಮಾಡುವುದು ಹೇಗೆ, ವಿವಿಧ ಸಂಸ್ಕೃತಿಗಳು, ಪರಂಪರೆಗಳು, ಧರ್ಮಗಳು, ಭಾಷೆಗಳು ಇವನ್ನು ಶೋಷಣಾಮುಕ್ತ ಮಾಡುವುದು ಹೇಗೆ ಎಂಬ ಬಹಳ ದೊಡ್ಡ ಸವಾಲುಗಳು ಸಂವಿಧಾನ ರಚನೆಕಾರರ ಮುಂದಿದ್ದವು.

ಆಧುನಿಕ ಕಾಲದಲ್ಲಿ ರಾಷ್ಟ್ರಗಳು ಹಾಗೂ ಅದರ ಪ್ರಜೆಗಳು ಎಂತಹ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು, ಆಗ ರಾಷ್ಟç ಜೀವನವನ್ನೂ ಹಾಗೂ ಪ್ರಜೆಗಳ ಬದುಕನ್ನೂ ಹೇಗೆ ಸಮತೋಲನದಿಂದ ಪರಿವರ್ತನೆ ಮಾಡಬೇಕಾಗುತ್ತದೆ ಎಂಬಂತಹ ಅತ್ಯಂತ ದೂರಗಾಮಿ ಸವಾಲುಗಳು ಇವರ ಮುಂದೆ ಇದ್ದವು. ಆಸ್ತಿ, ಸಂಪತ್ತು, ಅಧಿಕಾರಗಳ ಖಾಸಗೀ ಒಡೆತನವನ್ನು ಬದಲಾಯಿಸುವುದು ಹೇಗೆ, ಇವುಗಳ ಅಸಮಾನತೆಯ ಹಂಚಿಕೆಯ ಕರಾಣದಿಂದ ಉಂಟಾಗಿರುವ ಆರ್ಥಿಕ-ಸಾಮಾಜಿಕ ಅಸಮಾನತೆಯನ್ನು ಸಮಾನತೆಯ ಸ್ಥಿತಿಗೆ ಪರಿವರ್ತಿಸುವುದು ಹೇಗೆ, ಭಾರತದ ಪರಂಪರೆಯಲ್ಲಿ ಮಹಿಳೆಯರನ್ನು, ಅಸ್ಪೃಶ್ಯರನ್ನು ಹೀನಾಯಾಗಿ ಕಾಣುತ್ತಿರುವ ಭೌತಿಕ ಮತ್ತು ಅಂತರಂಗದ ಪರಿಸ್ಥಿತಿಯನ್ನು ದಲಾಯಿಸುವುದು ಹೇಗೆ, ಎಂಬ ನೂರಾರು ಸವಾಲುಗಳು ಇವರ ಮುಂದೆ ಇದ್ದವು. ಸಂವಿಧಾನದ ರಚನೆಯ ಒಂದೊಂದು ಪದ ಸಂಯೋಜನೆಯಲ್ಲೂ ಇವು ಮತ್ತೆ ಮತ್ತೆ ಇವರನ್ನು ಕಾಡುತ್ತಿದ್ದವು.

1946ಜುಲೈ ತಿಂಗಳಲ್ಲಿ ಚುನಾವಣೆಯ ಮೂಲಕ ಸಂವಿಧಾನ ರಚನೆಯ ಸಮಿತಿಗೆ 296 ಸದಸ್ಯರನ್ನು ನೇಮಕ ಮಾಡಲಾಯಿತು. ಮುಸ್ಲಿಂ ಲೀಗ್‌ನ ಸದಸ್ಯರು ಸಂವಿಧಾನ ರಚನೆಯ ಸಭೆಗಳಲ್ಲಿ ಭಾಗವಹಿಸಲಿಲ್ಲ. ಉಳಿದ 272ಸದಸ್ಯರು 1946ರ ಡಿಸೆಂಬರ್ 9ರಂದು ಸಂವಿಧಾನ ರಚನೆಯ ಕೆಲಸವನ್ನು ಪ್ರಾರಂಭಿಸಿದರು. ಒಂದು ವರ್ಷ, 2 ತಿಂಗಳ ಅವಧಿಯಲ್ಲಿ ಸಂವಿಧಾನದ ಕರಡನ್ನು ಪೂರ್ಣಗೊಳಿಸಿದರು. 1948ರ ಫೆಬ್ರವರಿ 21ರಂದು ಇದನ್ನು ಪ್ರಜೆಗಳ ಮುಂದೆ ಪ್ರತಿಕ್ರಿಯೆಗೆ ಇಡಲಾಯಿತು. ಪ್ರಜೆಗಳು ಇದಕ್ಕೆ ಒಟ್ಟು 7,635 ತಿದ್ದುಪಡಿಗಳನ್ನು ಸೂಚಿಸಿದರು.

ಈ ತಿದ್ದುಪಡಿಗಳನ್ನು ಪರಿಶೀಲಿಸಿ ಸೂಕ್ತವಾದವುಗಳನ್ನು ಕರಡಿಗೆ ಸೇರಿಸಿ, 1949ನವೆಂಬರ್ 26ರಂದು ಅಂತಿಮ ಕರಡನ್ನು ಭಾರತದ ಪಾರ್ಲಿಮೆಂಟಿನಲ್ಲಿ ಮಂಡಿಸಲಾಯಿತು. ಭಾರತ ಸಂವಿಧಾನದ ಕರಡು ತಯಾರು ಮಾಡಲು ಒಟ್ಟು 2 ವರ್ಷ, 11 ತಿಂಗಳು, 17 ದಿನಗಳ ಕಾಲ ಎಡಬಿಡದೆ ಕೆಲಸ ಮಾಡಲಾಯಿತು.

ಸಂವಿಧಾನದ ಬಗೆಗೆ ಮಾತನಾಡುವುದು, ಚರ್ಚೆ ಮಾಡುವುದು ನನ್ನ ಪ್ರಕಾರ ಎರಡು ರೀತಿಯಲ್ಲಿ ನಡೆಯುತ್ತದೆ. ಒಂದು: ದೇಶವನ್ನು ಆಳ್ವಿಕೆ ಮಾಡಲು ಸಂವಿಧಾನವನ್ನು ಹೇಗೆ ಜಾರಿಗೊಳಿಸಬೇಕು ಎಂಬ ನೆಲೆ. ಎರಡು: ರಾಷ್ಟ್ರವನ್ನು ಕಟ್ಟಲು ಸಂವಿಧಾನದಿಂದ ಹೇಗೆ ಸ್ಫೂರ್ತಿ ಪಡೆಯಬೇಕು ಎಂಬ ನೆಲೆ ಅಥವಾ ಸಂವಿಧಾನದ ಆಶಯವನ್ನು ಅನುಸರಿಸಿ ದೇಶವನ್ನು ಹೇಗೆ ಕಟ್ಟಬೇಕು ಎಂಬ ನೆಲೆ.

ಸಂವಿಧಾನವು ಪ್ರಪಂಚದ ಯಾವ ಯಾವ ಸಂವಿಧಾನಗಳಿಂದ, ಯಾವ ಯಾವ ಅಂಶಗಳನ್ನು ಪಡೆದಿದೆ, ಅದರ ಅಗತ್ಯ ಎಷ್ಟು ಇತ್ತು, ಯಾಕೆ ಇತ್ತು ಎಂಬುದರ ಬಗೆಗೆ ಕೆಲವು ಮಾಹಿತಿಗಳನ್ನು ಆಧರಿಸಿ ಮಾತನಾಡುವ ಒಂದು ಕ್ರಮ ಇದೆ. ಇದರ ಮುಂದುವರೆದ ಭಾಗವಾಗಿ ಸಂವಿಧಾನದಲ್ಲಿ ಅಧ್ಯಾಯಗಳಿವೆ, ಎಷ್ಟು ಭಾಗಗಳಿವೆ, ಎಷ್ಟು ಅನುಚ್ಛೇದಗಳಿವೆ, ಒಂದೊಂದು ಅನುಚ್ಚೇದವು ಏನನ್ನು ಹೇಳುತ್ತದೆ ಎಂದು ಪರಿಚಯಾತ್ಮಕವಾಗಿ ಮಾತನಾಡುವ ಇನ್ನೊಂದು ಕ್ರಮ ಇದೆ.

ಇವತ್ತಿನ ನನ್ನ ಮಾತುಗಳ ಸ್ವರೂಪ ಈ ಎರಡೂ ಅಲ್ಲ. ಈ ಆಯಾಮ ನನಗೆ ಮುಖ್ಯವಲ್ಲ. ಇದಕ್ಕಿಂತ ಮುಖ್ಯವಾದ ಇನ್ನೊಂದು ಆಯಾಮ ನನಗೆ ಅತ್ಯಂತ ಮಹತ್ವದ್ದು. ಅದು ಯಾವುದು ಎಂದರೆ, ಅದನ್ನು ನಾನು ಕನ್ನಡದ ಸ್ಥಳೀಯ ನುಡಿಗಟ್ಟನ್ನು ಬಳಸಿ ಹೇಳುವುದಾದರೆ ಅದನ್ನು ನಾನು ಹದ ಎಂದು ಕರೆಯುತ್ತೇನೆ. ಹದ ಎಂದರೆ ಏನು? ಉದಾಹರಣೆಗೆ, ಟೀ ಮಾಡುವ ಕ್ರಮ ನಮಗೆಲ್ಲ ಪರಿಚಿತ. ಅದಕ್ಕೆ ಬೇಕಾಗುವ ವಸ್ತುಗಳು ಪರಿಚಿತ. ಆದರೆ ಒಬ್ಬರು ಮಾಡುವ ಟೀಯ ರುಚಿ ಮತ್ತೊಬ್ಬರು ಮಾಡಿದಂತೆ ಇರುವುದಿಲ್ಲ.

ಯಾಕೆಂದರೆ ಟೀಯನ್ನು ತಯಾರು ಮಾಡುವ ಕ್ರಮದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಹದವಿರುತ್ತದೆ. ಆ ಹದವನ್ನು ಅವಲಂಬಿಸಿ ಟೀ ರುಚಿ, ಸ್ವಾದ ಬದಲಾಗುತ್ತಾ ಹೋಗುತ್ತದೆ. ಇದು ಯಾಕೆ? ಇದು ನನಗೆ ಮುಖ್ಯವಾದ ಪ್ರಶ್ನೆ. ಇದು ಪಾಕಶಾಸ್ತçದ ಪ್ರಾವೀಣ್ಯತೆಯ ಪ್ರಶ್ನೆಯಲ್ಲ. ಈ ಮಾತನ್ನು ಮತ್ತೆ ನಾನು ವಿವರಿಸಲು ಹೋಗುವುದಿಲ್ಲ.

ಸಂವಿಧಾನವನ್ನು ಒಕ್ಕೊರಲಿನಿಂದ ಕಾನೂನುಗಳ ಗ್ರಂಥ ಎಂದು ಕರೆಯಲಾಗಿದೆ. ಈ ಕಾರಣದಿಂದ ಭಾರತದ ಸಂವಿಧಾನವನ್ನು ರಾಜ್ಯಶಾಸ್ತçದ ಪಂಡಿತರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಓದಬೇಕು ಎಂಬ ಅಭಿಪ್ರಾಯವನ್ನು ರೂಪಿಸಲಾಗಿದೆ. ಜೊತೆಗೆ ಸಂವಿಧಾನವನ್ನು ವಕೀಲರು ಮತ್ತು ನ್ಯಾಯಾಧೀಶರು ಓದಬೇಕು ಹಾಗೂ ಅದನ್ನು ಕೋರ್ಟುಗಳ ವ್ಯಾಜ್ಯಗಳಿಗೆ ಆಧಾರವಾಗಿ ಬಳಸಬೇಕು ಎಂಬ ಬದಲಾಗದ ನಿಯಮವನ್ನು ಸೃಷ್ಟಿಸಲಾಗಿದೆ. ವಸ್ತುಸ್ಥಿತಿಯು ಕೂಡ ಅದೇ ರೀತಿಯಲ್ಲಿ ಮುಂದುವರಿದಿದೆ. ಈ ಕಾರಣದಿಂದ ರಾಜ್ಯಶಾಸ್ತ್ರ ಔಪಚಾರಿಕ ವಲಯದವರು ಹಾಗೂ ನ್ಯಾಯಾಂಗ ವ್ಯವಸ್ಥೆಯ ವೃತ್ತಿಪರ ಕೆಲಸಗಾರರು ಮಾತ್ರ ಸಂವಿಧಾನವನ್ನು ಪರಿಚಯಿಸಿಕೊಂಡಿದ್ದಾರೆ.

ಅಗತ್ಯವಿದ್ದಷ್ಟು ಅದರ ಅನುಚ್ಚೇದಗಳನ್ನು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಈ ಎರಡು ನಿರ್ದಿಷ್ಟ ವಲಯದವರನ್ನು ಬಿಟ್ಟರೆ ಉಳಿದ ವಲಯದವರು ಸಂವಿಧಾನ ಎಂಬ ಪುಸ್ತಕದ ಮುಖ ಪುಟವನ್ನು ಸಹ ನೋಡುವ ಗೋಜಿಗೆ ಹೋದಂತೆ ಕಾಣುವುದಿಲ್ಲ. ಯಾಕೆಂದರೆ ಅವರಿಗೆ ಅದರ ಅಗತ್ಯ ಇಲ್ಲ ಎಂಬ ಅಭಿಪ್ರಾಯವನ್ನು ರೂಪಿಸಲಾಗಿದೆ. ಈ ಮೂಲಕ ಸಂವಿಧಾನವನ್ನು ಓದಬಹುದಾಗಿದ್ದ ದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗೆ ಬಂದ್ ಮಾಡಿರುವ ಬಾಗಿಲುಗಳನ್ನು ನಾವು ಇವತ್ತು ತೆರೆಯಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಎನ್.ಆರ್.ಸಿ. ಮತ್ತು ಸಿ.ಎ.ಎ.ಗಳ ಬಗ್ಗೆ ಒಂದು ಮಟ್ಟದ ಚರ್ಚೆಯಾಗುತ್ತಿದೆ.

ಭಾರತದ ಯಾವ ಸಮುದಾಯಗಳು ಇದುವರೆಗೆ ಸಂವಿಧಾನದ ಹೆಸರನ್ನು ಮತ್ತು ಡಾ. ಅಂಬೇಡ್ಕರರ ಹೆಸರನ್ನು ಹೇಳಿರಲಿಲ್ಲವೋ, ಆ ಸಮುದಾಯಗಳ ಕೆಲವು ನಾಯಕರು ಇವತ್ತು ಸಂವಿಧಾನ ಮತ್ತು ಅಂಬೇಡ್ಕರ್ ಎಂಬ ಎರಡು ಪದಗಳನ್ನಾದರೂ ಹೇಳುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ ಭಾರತದಲ್ಲಿ ಇದು ಬಹಳ ದೊಡ್ಡ ಬೆಳವಣಿಗೆ.

ಭಾರತದ ಸಂವಿಧಾನವನ್ನು ಕೇವಲ ಕಾನೂನುಗಳ ಗ್ರಂಥವೆಂದು ಪರಿಗಣಿಸಿದಾಗ, ಸಂವಿಧಾನದ ಪ್ರತಿಯೊಂದು ಅನುಚ್ಛೇದದಲ್ಲಿ ಏನು ಇದೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಅದನ್ನುIn the Article, by the Aricle, through the Aricle, ಕ್ರಮದಲ್ಲಿ ಓದುವುದು ಮತ್ತು ಚರ್ಚಿಸುವುದು ಮುಖ್ಯವಾಗುತ್ತದೆ. ಈ ಏಕಮಾದರಿಯ ಓದು ನಮ್ಮನ್ನು ಸ್ವಲ್ಪವೂ ಆ ಕಡೆ ಈ ಕಡೆ ನೋಡಲು ಬಿಡುವುದಿಲ್ಲ; ಬಿಟ್ಟಿಲ್ಲ. ಹಾಗಾಗಿ ಕಾನೂನುಗಳಲ್ಲಿ ಏನಿದೆ ಎಂಬುದು ಮುಖ್ಯವಾಗಿ; ಕಾನೂನುಗಳ ಹಿಂದಿರುವ ಒಂದು ಹದ, ಒಂದು ಮಾನವೀಯತೆ ಏನಿದೆ ಅದನ್ನು ಗ್ರಹಿಸಲಾರದಂತೆ ಆಗಿದೆ. ಆದ್ದರಿಂದ ನಾವೀಗ Beyond the Aricle ಎಂಬ ನೆಲೆಯಲ್ಲಿ ಭಾರತದ ಸಂವಿಧಾನವನ್ನು ಗ್ರಹಿಸಬೇಕಾದ ಅಗತ್ಯವಿದೆ ಎಂದು ನಾನು ಭಾವಿಸಿದ್ದೇನೆ.

ಅಂದರೆ ಸಂವಿಧಾನವನ್ನು ಕಾನೂನುಗಳ ಒಂದು ಕಟ್ಟು ಎಂದು ಪರಿಭಾವಿಸಿ ಅದನ್ನು ಮಾಹಿತಿ ಪ್ರಧಾನವಾಗಿ ಓದಲಾಗಿದೆ. ಆದರೆ ಭಾರತದ ಸಂವಿಧಾನಕ್ಕೆ ಬಹಳ ದೊಡ್ಡ ಒಂದು ದರ್ಶನ ಇದೆ. ಅದಕ್ಕೆ ಪ್ರಜೆಗಳ ಅಂತರಂಗ ಮತ್ತು ಬಹಿರಂಗವನ್ನು ಶುದ್ಧೀಕರಿಸುವ, ಪವಿತ್ರೀಕರಿಸುವ, ಕಟ್ಟುವ, ಸೃಷ್ಟಿಸುವ, ನಿರ್ಮಿಸುವ ಆ ಮೂಲಕ ಇಡೀ ದೇಶವನ್ನು ಕಟ್ಟುವ, ಹೊಸ ರಾಷ್ಟçವನ್ನು ಸೃಷ್ಟಿಸುವ ಬಹಳ ದೊಡ್ಡ ದರ್ಶನ ಇದೆ. ಈ ದೃಷ್ಟಿಯಲ್ಲಿ ನಾವೀಗ ಭಾರತದ ಸಂವಿಧಾನವನ್ನು ಓದಬೇಕಾಗಿದೆ; ಗ್ರಹಿಸಬೇಕಾಗಿದೆ.

ಇದುವರೆಗೆ ಸಂವಿಧಾನವನ್ನು ಓದಿರುವ ಮತ್ತು ಅದನ್ನು ಬಳಸಿರುವ ಕ್ರಮದ ಬಗೆಗೆ ನನಗೆ ಬಹಳ ದೊಡ್ಡ ತಕರಾರು ಇದೆ. ನನ್ನ ಈ ಮಾತುಗಳಿಗೆ ಒಂದು ಖಚಿತವಾದ ವ್ಯಾಖ್ಯಾನವನ್ನು ಮಾಡುವುದಾದರೆ, ಆಳುವವರು ಸಂವಿಧಾನವನ್ನು ಓದುವ ಬಗೆ ಮತ್ತು ಪ್ರಜೆಗಳು ಸಂವಿಧಾನವನ್ನು ಓದುವ ಬಗೆ ಎಂದು ಎರಡು ನೆಲೆಗಳನ್ನಾಗಿ ನಾನು ವಿಂಗಡಿಸುತ್ತೇನೆ. ಇದನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ ಆಳುವ ವರ್ಗದ ಸಂವಿಧಾನದ ಓದು ಮತ್ತು ಪ್ರಜೆಗಳ ಸಂವಿಧಾನದ ಓದು ಎಂದು ನಾನು ಹೇಳುತ್ತೇನೆ. ಆಳುವವರು ರಾಷ್ಟ್ರವನ್ನು ಆಳುವುದಕ್ಕಾಗಿ; ಪ್ರಜೆಗಳನ್ನು ಆಳುವುದಕ್ಕಾಗಿ ಸಂವಿಧಾನವನ್ನು ಓದುತ್ತಾರೆ; ಗ್ರಹಿಸುತ್ತಾರೆ ಮತ್ತು ಬಳಸುತ್ತಾರೆ.

ಆದರೆ ಆಳುವ ಜನ ಅಲ್ಲದ ನಾವು; ಭಾರತದ ಪ್ರಜೆಗಳಾದ ನಾವು ಹೊಸ ಪ್ರಜೆಗಳನ್ನು ರೂಪಿಸುವುದಕ್ಕಾಗಿ, ನಾವೇ ಹೊಸ ಪ್ರಜೆಗಳಾಗಿ ರೂಪುಗೊಳ್ಳುವುದಕ್ಕಾಗಿ, ಹೊಸ ರಾಷ್ಟçವನ್ನು ಕಟ್ಟುವುದಕ್ಕಾಗಿ ಸಂವಿಧಾನವನ್ನು ಓದಬೇಕು; ಗ್ರಹಿಸಬೇಕು; ಚರ್ಚೆ ಮಾಡಬೇಕು. “ಸಂವಿಧಾನದ ಓದು’’, “ಸಂವಿಧಾನ ಕುರಿತ ವಿಚಾರ ಸಂಕಿರಣ’’ ಈ ಮುಂತಾದ ಸಂದರ್ಭಗಳಲ್ಲಿ ನಾವು ಮೂಲಭೂತವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ; ದೇಶವನ್ನು ಆಳುವುದಕ್ಕಾಗಿ ಸಂವಿಧಾನದ ಚರ್ಚೆಯೊ ಅಥವಾ ಹೊಸ ರಾಷ್ಟçವನ್ನು ಕಟ್ಟುವುದಕ್ಕಾಗಿ ಸಂವಿಧಾನದ ಚರ್ಚೆಯೊ ಎಂಬ ಮುಖ್ಯ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.

ಸಂವಿಧಾನವನ್ನು ಇದುವರೆಗೆ ಎಲ್ಲಿ ಓದಲಾಗಿದೆ ಮತ್ತು ಹೇಗೆ ಓದಲಾಗಿದೆ ಎಂಬುದು ನಮಗೆಲ್ಲ ಚಿರಪರಿಚಿತ. ನಾನು ಆಗಲೆ ಹೇಳಿದಂತೆ ಕೋರ್ಟುಗಳು ಮತ್ತು ಸಾಂಪ್ರದಾಯಿಕ ರಾಜ್ಯಶಾಸ್ತçದ ಅಧ್ಯಾಪಕರು ಅದರ ಬಳಕೆದಾರರಾಗಿದ್ದಾರೆ. ಅವರೆಲ್ಲರೂ ಅದನ್ನು ಕಾನೂನುಗಳ ಗ್ರಂಥ ಮತ್ತು ಕೇವಲ ಕಾನೂನುಗಳ ಗ್ರಂಥ ಎಂದು ಓದಿದ್ದಾರೆ.

ಇದರ ಪರಿಣಾಮವಾಗಿ ಭಾರತದ ಸಂವಿಧಾನವನ್ನು ಹೀಗೆ ಆಳುವವರ ಕೈಪಿಡಿಯಾಗಿ ಮತ್ತು ಅವರ ಮಾರ್ಗದರ್ಶಿ ಸೂತ್ರವಾಗಿ ಸಂಕುಚಿತಗೊಳಿಸಲಾಗಿದೆ. ಇದು ಸರಿಯಲ್ಲ. ಭಾರತದ ಸಂವಿಧಾನವನ್ನು ಇಡೀ ಭಾರತದ ಅಧೋಲೋಕದ ಪರಿಸ್ಥಿತಿಯು ಬದಲಾಗಿರುವ ಮತ್ತು ಬದಲಾಗುತ್ತಿರುವ ಸಂಕೀರ್ಣವಾದ ಒಡಲಿನಲ್ಲಿ ಇಟ್ಟು ಓದಬೇಕು ಮತ್ತು ಅದರಿಂದ ನಾವು ಕಲಿಯಬೇಕು. ಭಾರತೀಯ ಸಮಾಜವನ್ನು ಪ್ರಭಾವಿಸುತ್ತಿರುವ ಮತ್ತು ನಿಯಂತ್ರಿಸುತ್ತಿರುವ ಧರ್ಮ ಗ್ರಂಥಗಳ ಜೊತೆಗೆ ಭಾರತದ ಸಂವಿಧಾನವನ್ನು ಇಟ್ಟು ಓದಬೇಕು. ಅಂಬೇಡ್ಕರ್ ಅವರು ಬುದ್ಧನನ್ನು ಕಾರ್ಲ್ಮಾರ್ಕ್ಸ್ನ ಜೊತೆಗೆ ಇಟ್ಟು ಓದಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version