ಬಹಿರಂಗ

ಹಿಂದೂ ಹೆಸರು ತಂದುಕೊಟ್ಟ ಸಿಂಧೂ ನದಿ

Published

on

ಸಿಂಧೂ ನದಿ

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರೊ. ಗ್ರೆಗೊರಿ ಪೊಸೆಲ್ ಕರಾವಳಿ ಕರ್ನಾಟಕದ ಸಣ್ಣ ಪುಟ್ಟ ಊರುಗಳನ್ನೆಲ್ಲ ಜಗತ್ತಿನ ಎಲ್ಲೆಲ್ಲಿಗೋ ಜೋಡಿಸಿ-‘ನಿನಗೆ ಗೊತ್ತಿಲ್ಲ, ನಿನ್ನೂರಿಗೆ ಕಡಲ ಸಂಪರ್ಕ ಜೋರಾಗಿತ್ತು’ ಅಂತ ಹೇಳಿ ನನ್ನನ್ನು ಬೆಚ್ಚಿ ಬೀಳಿಸುತ್ತಿದ್ದ. ಬಾರಕೂರನ್ನು ಮಧ್ಯ ಏಷಿಯಾದೊಡನೆ, ಮಲ್ಪೆ-ಭಟ್ಕಳಗಳನ್ನು ಗ್ರೀಸ್ನೊಡನೆ, ನೇತ್ರಾವತಿ ನದಿಯನ್ನು ಟೈಗ್ರಿಸ್- ನೈಲ್ ನದಿಗಳೊಡನೆ ಜೋಡಿಸಿದಾಗ ಆತನನ್ನು ಅಪ್ಪಿಕೊಳ್ಳುವಷ್ಟು ಖುಷಿಯಾಗುತ್ತಿತ್ತು.

ಆದರೆ ಗುಡಾಣ ಹೊಟ್ಟೆಯ, ಮುಖ ತುಂಬಾ ಗಡ್ಡದ, ರಸಿಕ ಶಿಖಾಮಣಿಯಾದ ಆತನನ್ನು ಅಪ್ಪಿಕೊಳ್ಳುವುದೂ ಅಸಾಧ್ಯವಾಗಿತ್ತು. ಪೊಸೆಲ್ ಒಮ್ಮೆ ನೇರವಾಗಿ ನನ್ನ ಕೊಠಡಿಗೆ ಬಂದು- ‘ನೀವು ಹಿಂದೂಗಳು, ನಿಮಗೆ ಹೆಸರು ತಂದುಕೊಟ್ಟ ಸಿಂಧೂ ನದಿಯನ್ನು ಎಂದಾದರೂ ನೋಡಿದ್ದೀರಾ? ನೋಡುವ ಕನಸಾದರೂ ಕಂಡಿದ್ದೀರಾ? ಅಂತ ಮುಖಕ್ಕೆ ತಿವಿಯುವಂತೆ ಕೇಳಿದ. ಸ್ವಲ್ಪ ಅವಮಾನವಾದರೂ ಬಿಡದೆ ನಾನಂದೆ- ನಾವು ಕುಳಿತಲ್ಲೇ ಹದಿನಾಲ್ಕು ಲೋಕಗಳನ್ನು , ಐವತ್ತಾರು ದೇಶಗಳನ್ನೂ ಕಾಣಬಲ್ಲೆವು, ಅದರೊಳಗೆ ಸಿಂಧೂ ನದಿಯೂ ಇರಬೇಕಲ್ಲ? ನೀವು ಯಕ್ಷಗಾನ ನೋಡಿದ್ದೀರಾ? ಅಂತ ಕೇಳಿದ.

ಆದರೆ ಆತ ಬಿಡಲಿಲ್ಲ. ‘ನಾವೆಲ್ಲ ಸಿಂಧೂ ನದಿ ದಡಕ್ಕೆ ಹೋಗೋಣ, ಹರಪ್ಪಾ ಮೊಹೆಂಜೊದಾರೋಗಳ ನಗರ ಸಂಸ್ಕøತಿಯನ್ನು ನಾನು ನಿಮಗೆ ವಿವರಿಸಬಲ್ಲೆ’ ಅಂದ. ಹರಪ್ಪಾ ಸಂಸ್ಕೃತಿಯ ಮೇಲೆ ಅಗಾಧ ಸಂಶೋಧನೆ ನಡೆಸಿ, ಬೃಹತ್ ಪುಸ್ತಕಗಳನ್ನು ಪ್ರಕಟಿಸಿದ ಪೊಸೆಲ್ನೊಡನೆ ನಾವು ಕೆಲವರು ಸಿಂಧೂ ನದಿ ನೋಡಲು ಹೊರಟಿದ್ದೆವು. ಅದೊಂದು ಅಸಾಮಾನ್ಯ ಅನುಭವ. ದೇಶ ವಿಭಜನೆಯ ಸಂದರ್ಭದಲ್ಲಿ ವಿಶಾಲ ಭಾರತದ ಭಾಗವಾಗಿದ್ದ ಸಿಂಧೂ ನದಿ ಮತ್ತು ಅದರ ಜೊತೆ ಸೇರಿಕೊಂಡಿದ್ದ ಸುಮಾರು ಐದು ಸಾವಿರವರ್ಷಗಳ ಇತಿಹಾಸ ಪಾಕಿಸ್ಥಾನದ ಪಾಲಾಯಿತು.

ಈಗ ಸಿಂಧೂ ನದಿಯು ಗಂಗಾ ಯಮುನೆಯರ ಹಾಗೆ ಭಾರತೀಯರ ನೆನಪಿನ ಭಾಗವಾಗಿಲ್ಲ, ಶ್ರದ್ಧೆಯ ಕೇಂದ್ರವಾಗಿಯೂ ಉಳಿದಿಲ್ಲ. ಅದಕ್ಕೊಂದು ಮೂರ್ತಿಯೂ ಇಲ್ಲ. ಪಾಕಿಸ್ಥಾನದ ಉತ್ತರ ದಿಕ್ಕಿನಲ್ಲಿರುವ ಕಾರಕೋರಂ ಬೆಟ್ಟಗಳವರೆಗೂ ಹಿಂದೊಮ್ಮೆ ಕಡಲು ಚಾಚಿಕೊಂಡಿತ್ತಂತೆ. ಕಾಲಾಂತರದಲ್ಲಿ ಕಡಲು ಹಿಂದೆ ಸರಿದಾಗ ಸಿಂಧೂ ನದಿಯೂ ಅದರ ಉಪನದಿಗಳೂ ಕಾಣಿಸಿಕೊಂಡು ಜನವಾಸಕ್ಕೆ ಯೋಗ್ಯವಾದ ವಾತಾವರಣ ನಿರ್ಮಾಣವಾಯಿತಂತೆ. ಸಿಂಧೂ ನದಿಯು ಮಾನಸ ಸರೋವರದ ಪರಿಸರದಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು, ಕಾರಕೋರಂ ಪರ್ವತ ಶ್ರೇಣಿಯ ಹಿಮವತ್ಪರ್ವತಗಳ ಎಡೆಯಿಂದ ಹೊರಬಂದು, ವಿಶಾಲವಾಗಿ ಹರಡಿಕೊಂಡು ಬಹು ಪ್ರಾಚೀನವಾದ ಸಂಸ್ಕøತಿಯೊಂದಕ್ಕೆ ಕಾರಣವಾಗಿ, ಕರಾಚಿಯ ಬಳಿ ಕಡಲನ್ನು ಸೇರುತ್ತದೆ. ಈ ನದಿಯು ಇದೀಗ ಪುರಾತನ ಮತ್ತು ಬೃಹತ್ ರಾಷ್ಟ್ರವೊಂದರ ( ಹಿಂದೂಸ್ಥಾನ, ಇಂಡಿಯಾ) ಪರ್ಯಾಯ ಹೆಸರು. ಜಗತ್ತಿನ ಅತಿ ದೊಡ್ಡ ಧರ್ಮಗಳಲ್ಲಿ ಒಂದಾದ ಹಿಂದೂ ಧರ್ಮಕ್ಕೆ ಅದರ ಹೆಸರಿನ ಬಲ.

ಮೂಲತಹ ಸಿಂಧೂ ಅಂದರೆ ‘ನೀರಿನ ಪ್ರವಾಹ’ ಎಂದಷ್ಟೇ ಅರ್ಥ. ಆ ನದಿಯನ್ನು ಸಪ್ತ ಸಿಂಧೂ ಎಂದು ಕರೆದರೂ ಅದರ ಐದು ಉಪನದಿಗಳಾದ ಝೇಲಂ, ಚೆನಾಬ್, ರಾವಿ, ಸಟ್ಲೆಜ್ ಮತ್ತು ಬಿಯಾಸ್ಗಳು ಮಾತ್ರ ಹೆಸರುವಾಸಿಯಾಗಿವೆ. ಸರಸ್ವತಿ ಮತ್ತು ಸಿಂಧೂಗಳನ್ನು ಉಳಿದೆರಡು ನದಿಗಳೆಂದು ಊಹಿಸಲಾಗಿದೆ. ಇದೂ ಒಂದು ಪೌರಾಣಿಕ ಕಲ್ಪನೆಯೇ ಹೊರತು ವಾಸ್ತವವಲ್ಲ ಎಂದೂ ವಾದಿಸುವವರೂ ಇದ್ದಾರೆ.

ಸಿಂಧೂ ನದಿಯ ಬಗ್ಗೆ ಋಗ್ವೇದ ಅತಿ ಗೌರವವನ್ನು ಪ್ರಕಟಿಸಿದೆ. ಅದರಲ್ಲಿ 176 ಬಾರಿ ಸಿಂಧೂ ನದಿಯ ಉಲ್ಲೇಖ ಬಂದಿದೆಯಂತೆ. ಸಿಂಧೂ ಪದವೇ ಮುಂದೆ ಪರ್ಶಿಯನ್ ಭಾಷೆಯಲ್ಲಿ ‘ಹಿಂದೂ’ ಆಗಿ, ಗ್ರೀಕರ ಬರೆಹಗಳಲ್ಲಿ ಇಂಡೋಸ್ ಆಗಿ, ಲ್ಯಾಟನ್ ಭಾಷೆಯಲ್ಲಿ ಇಂಡಸ್ ರೂಪವನ್ನು ಪಡೆದುಕೊಂಡಿತು. ಸಿಂಧೂ ನದಿಯ ದಂಡೆಗಳಲ್ಲಿ ಓಡಾಡಿದ ಗ್ರೀಕ್ ದೊರೆ ಅಲೆಕ್ಸಾಂಡರನು ಇಲ್ಲಿಯ ಜನರನ್ನು ‘ ಸಿಂಥೋಸ್’ ಎಂದು ಕರೆದ. ಇದುವೇ ಮುಂದೆ ‘ಹಿಂದೂಸ್’ ಆಗಿ ಕೊನೆಗೊಂಡಿತು. ಅರಬ್ ವ್ಯಾಪಾರಿಗಳು ಹಿಂದೂಸ್ ಇರುವ ಜಾಗವನ್ನು ‘ಹಿಂದೂಸ್ತಾನ್’ ಎಂದು ಕರೆದರು.

1920ರ ದಶಕದಲ್ಲಿ ಜಾನ್ ಮಾರ್ಶಲನು ಸಿಂಧು ಪ್ರಾಂತ್ಯದಲ್ಲಿ ಸಂಶೋಧನೆ ನಡೆಸುವವರೆಗೆ ಈ ನದಿ ನಿರ್ಮಾಣ ಮಾಡಿದ್ದ ಬಹು ದೊಡ್ಡ ಸಂಸ್ಕೃತಿಯೊಂದರ ಬಗೆಗೆ ನಮಗೆ ತಿಳಿದೇ ಇರಲಿಲ್ಲ. ಮಾರ್ಶಲನು ಅಲ್ಲಿಯ ಸ್ಥಳೀಯರೊಡನೆ ಮಾತಾಡುತ್ತಿದ್ದಾಗ ಅವರು ‘ಮೊಯೆಂಜೋದಾರೋ’ ಎಂಬ ಪದವನ್ನು ಬಳಸಿ ಸ್ಥಳವೊಂದನ್ನು ತೋರಿಸುತ್ತಾರೆ. ಆ ಪದಕ್ಕೆ ‘ಸತ್ತವರ ಸ್ಥಳ’ ಎಂದು ಅರ್ಥ.

ಅಲ್ಲಿ ಮಾರ್ಶಲನು ತನ್ನ ಉತ್ಖನನವನ್ನು ಮುಂದುವರಿಸಿದಾಗ ಕ್ರಿಸ್ತ ಶಕ ಪೂರ್ವ ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದಿನ, ಮತ್ತು ಸುಮಾರು ಎರಡು ಸಾವಿರ ವರ್ಷಗಳವರೆಗೆ ಬಾಳಿದ ಜಗತ್ತಿನ ಅತ್ಯಂತ ಪ್ರಾಚೀನ ಮತ್ತು ಸುದೀರ್ಘ ಸಂಸ್ಕೃತಿಯೊಂದು ಬೆಳಕಿಗೆ ಬಂತು.ಮೊಹೆಂಜಾದಾರೋದ ಪ್ರಖ್ಯಾತ ಉತ್ಖನನ ಸ್ಥಳದಲ್ಲಿ ನಿಂತಿದ್ದಾಗ ಪೊಸೆಲ್ ನನ್ನತ್ತ ನೋಡಿ ‘ನಿನ್ನ ಹಿರಿಯರು, ಅಂದರೆ ದ್ರಾವಿಡರು ಕಟ್ಟಿದ ಸಂಸ್ಕೃತಿಯಿದು’ ಎಂದು ಹೇಳಿ ನಕ್ಕರು, ನನಗೆ ನಗಲಾಗಲಿಲ್ಲ. ಅಲ್ಲಿದ್ದ ಮಾತೃ ಮೂಲೀಯ ಆಚರಣೆಗಳು, ಹರಪ್ಪಾ ಪರಿಸರದಲ್ಲಿ ಈಗಲೂ ಕೇಳಲು ಸಿಗುವ ಬ್ರಾಹುಈ ಭಾಷೆ ಮತ್ತಿತರ ವಿಷಯಗಳು ಸಿಂಧೂ ನದಿ ಸಂಸ್ಕೃತಿಯನ್ನು ದ್ರಾವಿಡರೊಂದಿಗೆ ಜೋಡಿಸುತ್ತವೆ. ಆದರೆ ಹರಪ್ಪಾ ಮೊಹೆಂಜೊದಾರೋ ಸಂಸ್ಕೃತಿಯು ಏಕರೂಪದಲ್ಲಿ ಎಂದೂ ಇರಲಿಲ್ಲ.

ಕಾಲಾಂತರದಲ್ಲಿ ಮಧ್ಯ ಏಷಿಯಾದಿಂದ ವಲಸೆ ಬಂದು ನೆಲೆಸಿದ ಹಲವು ಸಮುದಾಯಗಳು ಇವನ್ನು ಕಟ್ಟಿವೆ. ಅದರಲ್ಲಿ ದ್ರಾವಿಡರು ಮತ್ತು ಆರ್ಯರು ಬಹಳ ಮುಖ್ಯರು. ಆರ್ಯರು ಅಂದಾಗ ಅದನ್ನು ಸರಳೀಕರಿಸಿ ‘ಒಂದು ಗುಂಪು’ ಎಂದು ಭಾವಿಸಬೇಕಾಗಿಲ್ಲ. ಅದರಲ್ಲಿ ಮೂಲತಹ ಕಕೇಶಿಯನ್ ಬುಡಕಟ್ಟಿಗೆ ಸೇರಿದ ಪರ್ಷಿಯನರು ( ಉದಾಹರಣೆಗೆ ಪರ್ಷಿಯಾದ ಪ್ರಖ್ಯಾತ ಅರಸನಾದ ಡೇರಿಯಸ್ಸನ ಸಮಾಧಿಯಲ್ಲಿ- ಪರ್ಷಿಯನ್, ಪರ್ಷಿಯಾದ ಪುತ್ರ, ಆರ್ಯ ಮೂಲದ ಆರ್ಯ’ ಎಂದು ಕೆತ್ತಲಾಗಿದೆ), ಸಿಥಿಯನ್ನರು, ಹೂಣರು-ಹೀಗೆ ಅನೇಕ ಸಮುದಾಯಗಳು ಸೇರಿವೆ. ಅಂಥ ವಿವಿಧ ಸಮುದಾಯಗಳ ನಿರಂತರ ಆಕ್ರಮಣ ಮತ್ತು ಹೊಂದಾಣಿಕೆಯ ಫಲವಾಗಿ ರೂಪುಗೊಂಡ ಸಮ್ಮಿಶ್ರ ಸಂಸ್ಕ್ರತಿಯೊಂದನ್ನು ಸಿಂಧೂ ಸಂಸ್ಕೃತಿಯೆಂದು ಗುರುತಿಸಲಾಗಿದೆ.

ಕ್ರಿಸ್ತ ಶಕ ಏಳನೇ ಶತಮಾನದ ಆನಂತರ ಈ ಭಾಗವನ್ನು ಮುಸ್ಲಿಂ ಅರಸರು ಆಳಿದರು.
ಹೀಗೆ ಸಿಂಧೂ ನದಿ ದಂಡೆಯು, ಭೌಗೋಳಿಕವಾದ, ಸಾಮಾಜಿಕವಾದ, ಮಾನವಶಾಸ್ತ್ರೀಯವಾದ ಧಾರ್ಮಿಕವಾದ ಮತ್ತು ಭಾಷಿಕವಾದ ಒಂದು ಸಮ್ಮಿಶ್ರ ಸಂಸ್ಕೃತಿಯ ಉಗಮ ಸ್ಥಳ. ಆ ನದಿ ಈಗ ಭಾರತದಲ್ಲಿ ಬಹುತೇಕ ಇಲ್ಲ, ಆದರೆ ಅದರ ದಡದಲ್ಲಿದ್ದ ಸಮ್ಮಿಶ್ರ ಜೀವನ ಕ್ರಮ ನಮ್ಮಲ್ಲಿನ್ನೂ ಉಳಿದುಕೊಂಡಿದೆ.
ಸಿಂಧೂ ನದಿಯನ್ನು ತೋರಿಸಿದ ಗ್ರೆಗ್ 2011 ರಲ್ಲಿ ತೀರಿಕೊಂಡ. ಆತ ತೋರಿಸಿದ ಸಿಂಧೂ ನದಿ ದಂಡೆಯಲ್ಲಿ ಎಂದೋ ಒಮ್ಮೆ ನಾನು ಬದುಕಿದ್ದೆ ಅಂತನ್ನಿಸುವ ಹಾಗೆ ಮಾಡಿ ಆತ ಹೊರಟು ಹೋಗಿದ್ದ.

ಪುರುಷೋತ್ತಮ ಬಿಳಿಮಲೆ

(ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಪುಸ್ತಕದಲ್ಲಿನ ( ಅಹರ್ನಿಶಿ ಪ್ರಕಾಶನ, ಶಿವಮೊಗ್ಗ) ‘ನದಿಗಳ ಕಥನ’ ಲೇಖನದ ಪುಟ್ಟ ಭಾಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version