ದಿನದ ಸುದ್ದಿ

ದಾವಣಗೆರೆ | ಟೊಮೆಟೊ ಬೆಳೆಗೆ ಬೆಂಕಿರೋಗ : ಕೈಗೆ ಬಂದ ಬೆಳೆ, ಮಾರ್ಕೇಟ್ ಗೆ ಬರಲಿಲ್ಲ…!? ಯುವ ರೈತನ ಅಳಲು

Published

on

ಯುವ ರೈತ ಪ್ರದೀಪ್
  • ವಿಶೇಷ ವರದಿ: ಪ್ರೀತಿ. ಟಿ.ಎಸ್

ಸುದ್ದಿದಿನ,ದಾವಣಗೆರೆ : ಸ್ನಾತಕೋತ್ತರ ಪದವಿ ಮುಗಿಯಿತು. ಕೆಲಸ ಅರಸಿ ಅಲೆದಾಡಿ ಸೋತು ಟೊಮೋಟೊ ಬೆಳೆಯಲು ಮುಂದಾದ ಯುವಕನಿಗೆ ಇನ್ನೇನೂ ಫಸಲು ಕೈಗೆ ಬರುವ ವೇಳೆಗೆ ಬೆಂಕಿ ರೋಗ ಅಂಟಿಕೊಂಡು ನಷ್ಟವಾಗಿರುವ ಘಟನೆ ಸೀಗೆಹಳ್ಳಿ ಗ್ರಾಮದ ಪ್ರದೀಪ್ ಎಂಬುವವರ ಜಮೀನಿನಲ್ಲಿ ನಡೆದಿದೆ.

ವಿದ್ಯಾಭ್ಯಾಸ ಮುಗಿಸಿ ಮುಂದೇನು ಎಂದು ಯೋಚಿಸುವಾಗ, ತನಗಿದ್ದ ಒಂದು ಎಕರೆ ಭೂಮಿಯಲ್ಲಿ ಟಮೋಟೊ ಬೆಳೆಯೋಣ ಎಂಬ ಆಲೋಚನೆ ಮಾಡಿದ ಪ್ರದೀಪನಿಗೆ, ಪರಿಚಿತರೆಲ್ಲಾ ಸೇರಿ ಒಂದು ಎಕರೆ ಜಮೀನಿನಲ್ಲಿ ಟಮೋಟೊ ಬೆಳೆ ಬೆಳೆಯಲು 70 ರಿಂದ 80 ಸಾವಿರ ರೂ. ವೆಚ್ಚ ತಗುಲುತ್ತದೆ. ಭೂಮಿ ಉಳುಮೆ, ಕೊಟ್ಟಿಗೆ, ರಸಗೊಬ್ಬರ, ಹಸಿ ನಾಟಿ ಸೇರಿದಂತೆ ಔಷಧ ಸಿಂಪಡಣೆಯೊಂದಿಗೆ ಫಸಲು ಪ್ರಾರಂಭದವರೆಗೆ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಮಾಡಲು ಬೇರೆ ಕೆಲಸ ಇಲ್ಲ. ಕೈಯಲ್ಲಿ ದುಡ್ಡಿಲ್ಲ. ಸುಮ್ಮನೆ ಕೂತ್ತರೆ ಜೀವನ ಸಾಗುವುದಿಲ್ಲ. ಅಲ್ಲಿ ಇಲ್ಲಿ ಪೇಚಾಡಿ ಸಾಲ ಸೂಲ ಮಾಡಿ ಒಂದು ಎಕರೆ ಜಮೀನಿನಲ್ಲಿ ಟಮೋಟೊ ಬೆಳೆ ಬೆಳೆಯಲು ಮುಂದಾದ ಪ್ರದೀಪ್ ಗೆ ಮೊದಮೊದಲು ಕಷ್ಟವಾದರೂ ತುಂಬಾ ಇಷ್ಟ ಪಟ್ಟು ಬೆಳೆಯಲಾರಂಭಿಸಿದರು. ಇನ್ನೆನ್ನು ಫಸಲು ಕೈಗೆ ಬರುವುದರೊಳಗೆ ಟಮೋಟೊಗೆ ಬೆಂಕಿ ರೋಗ ಅಂಟಿಕೊಂಡು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿರುವ ಸ್ಥಿತಿ ಬಂದೆರಗಿದೆ.

ಈ ಕುರಿತು ತಮ್ಮ ಬೇಸರವನ್ನು ಹಂಚಿಕೊಂಡ ಪ್ರದೀಪ್, ಕಳೆದ ವರ್ಷ ಮಳೆ ಚೆನ್ನಾಗಿಯಾದ್ದರಿಂದ ನೀರಿನ ಸಮಸ್ಯೆ ಇಲ್ಲ. ಫಸಲು ಬಂದಾಗ ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ಸಿಗುವುದಿಲ್ಲ. ಹಲವು ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇದ್ದರೆ ಫಸಲು ಇರುವುದಿಲ್ಲ. ಇದೀಗ ಮಾರುಕಟ್ಟೆಯಲ್ಲಿ ಉತ್ತಮ ತಳಿಯ ಒಂದು ಬಾಕ್ಸ್ ಟಮೋಟೊ ಗೆ 150 ರಿಂದ 200 ರೂಪಾಯಿಯಿದೆ. ಇದರ ಮಧ್ಯೆ ಪರಿಸರ ವೈಪರಿತ್ಯ ಹಾಗೂ ಬೆಂಕಿ ರೋಗದಿಂದ ಬೆಳೆ ನಾಶವಾಗುತ್ತಿದೆ.

ಬೆಂಕಿರೋಗ ತಗುಲಿರುವ ಟೊಮೆಟೊ ಬೆಳೆ

ಕಾಯಿ ಕಚ್ಚಿ ಹಣ್ಣಾಗುವ ಸಮಯ ತಲುಪಿರುವ ವೇಳೆ ಗಿಡಗಳಿಗೆ ರೋಗ ಬಂದಿದ್ದು ಸಾಕಷ್ಟು ಸಸಿಗಳು ಸತ್ತು ಹೋಗಿವೆ. ಈ ವರೆಗೂ ಹಾಕಿರುವ ಬಂಡವಾಳದೊಂದಿಗೆ ಅಂಟಿಕೊಂಡಿರುವ ರೋಗ ನಾಶ ಪಡಿಸಲು ಸುಮಾರು 10 ರಿಂದ 15 ಸಾವಿರದಷ್ಟು ಔಷಧಿ ಸಿಂಪಡಿಸಿದ್ದೇನೆ. ಸಸ್ಯ ವೈದ್ಯರ ಸಲಹೆಗಳನ್ನು ತೆಗೆದುಕೊಂಡು, ಸಸಿ ಪೋಷಣೆ ಮಾಡುತ್ತಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹತೋಟಿಗೆ ಬರುತ್ತಿಲ್ಲ

ಟೊಮೋಟೊ ಬೆಳೆಗೆ ವಿವಿಧ ಕೀಟನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಕೀಟನಾಶಕ ಸಿಂಪಡಿಸಿ ಮುರ್ನಾಲ್ಕು ದಿನ ಕಳೆಯುವಷ್ಟರಲ್ಲಿ ಬೆಳೆಯಲ್ಲಿ ಪುನಃ ರೋಗ ಕಾಣಿಸಿಕೊಳ್ಳುತ್ತದೆ. ಅಕ್ಕಪಕ್ಕದ ಜಮೀನುಗಳ ಟೊಮೋಟೊ ಬೆಳೆಗೂ ರೋಗ ಹಬ್ಬುತ್ತದೆ. ಇದರೊಂದಿಗೆ ಮೋಡ ಮುಸುಕಿದ ವಾತಾವರಣ ಹಾಗೂ ಬೀಳುವ ಇಬ್ಬನಿಯಿಂದ ಈ ಅಂಗಮಾರಿ ರೋಗ ಮತ್ತಷ್ಟು ಉಲ್ಭಣಗೊಳ್ಳುತ್ತಿದೆ.

ಹಾಗಾದರೆ ಪರಿಹಾರ ಏನು?

ಇದು ಒಬ್ಬ ರೈತನ ಸಮಸ್ಯೆಯಲ್ಲ. ನೂರಾರು ರೈತರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಫಸಲು ಬರುವ ವೇಳೆ ಯಾವುದೇ ರೀತಿಯ ರೋಗಗಳು ಬೆಳೆಗೆ ಬಾರದಂತಹ ಔಷಧಗಳನ್ನು ರೈತರಿಗೆ ತಲುಪಿಸಲು, ವಾಣಿಜ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ಪ್ರತಿ ಗ್ರಾಮಗಳಲ್ಲೂ ಹೆಚ್ಚಾಗಿ ನಡೆಯಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version