ನೆಲದನಿ
ನುಡಿಯ ಒಡಲು – 22 | ವಚನ ಸಾಹಿತ್ಯ : ನುಡಿಯೊಳಗಾಗಿ ನಡೆ
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ವಚನ ಸಾಹಿತ್ಯ ಕುರಿತು ಎಷ್ಟೋ ಸಾವಿರ ಪುಟಗಳ ಬರಹ ಈಗಾಗಲೇ ಬಂದಿದೆ. ಆ ಎಲ್ಲ ಬರಹವನ್ನು ಈಗ ಯಾವುದೇ ಬಗೆಯಲ್ಲಿ ಮತ್ತೆ ಇಲ್ಲಿ ಚರ್ಚಿಸುವ ಇರಾದೆ ನನ್ನದಲ್ಲ. ಇನ್ನೂ ಅದಕ್ಕೆ ಬದಲಾಗಿ ಏನೆಲ್ಲ ಬರೆಯಲು ಇಲ್ಲಿ ಅವಕಾಶವಿದೆ ಎಂಬುದನ್ನು ಮಾತ್ರ ಸೂಚಿಸಲು ಈ ಮಾತನ್ನು ಹೇಳಲಾಗಿದೆ. ಅಂದರೆ ಸಂಸ್ಕೃತಿಯೊಂದನ್ನು ಕುರಿತ ಇಲ್ಲವೇ ಆಯಾ ಸಂಸ್ಕೃತಿಯೊಳಗೆ ನಡೆದು ಹೋಗಿರುವ ಚಳವಳಿ, ಹೋರಾಟ, ಸಂಘರ್ಷಗಳನ್ನು ಕುರಿತು ಮತ್ತೆ ಮತ್ತೆ ಚಿಂತಿಸುವ ಜರೂರಿನ ಬಗೆಗೆ ವಾದಗಳು ಮುಂಚೂಣೆಗೆ ಬರುತ್ತವೆ.
ಇದಕ್ಕೆ ಬಲವಾದ ಕಾರಣಗಳಿರುತ್ತವೆ. ಅವುಗಳೆಂದರೆ, ಇಂತಹ ಚಳವಳಿಗಳು ಆಯಾ ಸಮುದಾಯಗಳ ಮೇಲೆ ಬೀರಿರುವ ಪರಿಣಾಮ, ಅದಕ್ಕೆ ಸಿಕ್ಕಿರುವ ಸಾಂಸ್ಕೃತಿಕ ಮಹತ್ವ, ಅದರಿಂದ ರೂಪುಗೊಳ್ಳುವ ಯಜಮಾನಿಕೆಯ ಪರ ಹಾಗೂ ವಿರೋಧ ನೆಲೆಗಳು ಎಂತಹವು ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸಬೇಕಾಗುತ್ತದೆ. ಆದರೆ ಇಂತಹ ಚರ್ಚೆಗೆ ಯಾವುದೇ ರೀತಿಯ ಕೊನೆಯಿರುವುದಿಲ್ಲ ಎಂಬುದು ಮಾತ್ರ ಗಮನಾರ್ಹ. ಆದರೆ ಯಾವ ನೆಲೆಯಿಂದ? ಏನನ್ನು? ಯಾರಿಗಾಗಿ? ಇಂತಹ ಚರ್ಚೆಗಳನ್ನು ಬೆಳಸಬೇಕು ಎಂಬ ಕೇಳ್ವಿಯನ್ನು ಎದುರಿಗಿಟ್ಟುಕೊಂಡೇ ಈ ವಚನ ಸಾಹಿತ್ಯದ ಬಗೆಗೆ ಯೋಚಿಸಬೇಕಾಗಿದೆ. ಆದರೆ ಇದೇ ಸನ್ನಿವೇಶದಲ್ಲಿ ಈ ವಚನ ಚಳವಳಿಯು ಮಂಡಿಸುತ್ತಿರುವ ತಿಳಿವು ಎಂತಹದು ಎಂಬುದನ್ನು ಅರಿಯಲು ನಾವು ಅನುಸರಿಸುವ ವಿಧಾನಗಳು ಯಾವವು ಎಂಬುದನ್ನೂ ಈಗಲೇ ತೀರ್ಮಾನಿಸುವ ಅಗತ್ಯವಿದೆ.
ಇಂತಹ ವಿಧಾನಗಳು ಅನುಭವ ಹಾಗೂ ನುಡಿಯೊಳಗಿನ ನಡೆಗಳ ನಡುವಣ ನಂಟನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ನೆಮ್ಮಿಕೊಂಡಿರುತ್ತವೆ.
ನುಡಿಯೊಳಗೆಯೇ ಸಂಸ್ಕೃತಿಗಳ ಚಹರೆಗಳು ಹೇಗೆ ಮೈಪಡೆದಿರುತ್ತವೆ. ಹಾಗೂ ಅವುಗಳು ನುಡಿಯ ಯಾವ ಆಯಾಮದಿಂದ ಇಂತಹವೊಂದು ನೆಲೆಯನ್ನು ತಲುಪಿರುತ್ತವೆ.
ಸಂಸ್ಕೃತಿಗಳು ಈಗಾಗಲೇ ಮೈಗೂಡಿಸಿಕೊಂಡಿರುವ ನಿಗದಿತ ಆಲೋಚನೆಯ ಮಾದರಿಗಳನ್ನು ಒಡೆದು ಕಟ್ಟಲು ಮತ್ತು ಅಂತಹ ಮಾದರಿಗಳಲ್ಲಿ ಸಾಂಸ್ಕೃತಿಕ ಪಲ್ಲಟವನ್ನುಂಟು ಮಾಡಲು, ಆಯಾ ಸಾಂಸ್ಕೃತಿಕ ಸಮೂಹಗಳನ್ನು ಪ್ರತಿನಿಧಿಸುವ ನುಡಿಯೊಂದು ತನ್ನೊಳಗೆಯೇ ಏನೆಲ್ಲ ನಡೆಗಳನ್ನು ನೆಲೆಗೊಳಿಸಬೇಕಾಗುತ್ತದೆ ಎಂಬುದನ್ನು ಅರಿಯಬೇಕಾಗಿರುವುದು ಇವತ್ತು ಅತ್ಯಂತ ಮಹತ್ವದ ಸಂಗತಿಯಾಗಿದೆ.
ಇಂತಹ ನಡೆಗಳು ಆಯಾ ಸಮುದಾಯಗಳ ಮೂಲ ತತ್ವಗಳನ್ನೇ ಬದಲಾಯಿಸುವ ಬಗೆಗಳಾಗಿರುತ್ತವೋ? ಇಲ್ಲವೇ ಅಂತಹ ಮೂಲತತ್ವಗಳಿಗೆ ಬದಲಿಯಾದ ತತ್ವಗಳನ್ನು ರೂಪಿಸುವ ಇರಾದೆಯನ್ನು ಹೊಂದಿರುತ್ತವೋ? ಎಂಬ ಮೆಥಾಡಾಲಜಿಯ ಇಕ್ಕಟ್ಟುಗಳನ್ನು ಕುರಿತು ಚರ್ಚಿಸಬೇಕಾಗುತ್ತದೆ. ಏಕೆಂದರೆ ಈ ಬದಲಾವಣೆ ಕೇವಲ ನುಡಿ ನಿರೂಪಣೆಗಳಲ್ಲಿ ಉಂಟಾಗುವ ಬದಲಾವಣೆ ಮಾತ್ರವಾಗದೇ, ಆಯಾ ಸಮೂಹಗಳ ಗ್ರಹಿಕೆ ಹಾಗೂ ಅಭಿವ್ಯಕ್ತಿಯ ಮಾದರಿಗಳನ್ನು ಹೊಸದಾಗಿ ಕಟ್ಟುವ ನಿಲುವುಗಳೇ ಆಗಿರುತ್ತವೆಂದು ಹೇಳಬೇಕಾಗುತ್ತದೆ.
ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ಒಂದು ಹಿರಿಮೆಯ ಜಾಗವನ್ನು ಕೊಡಲಾಗಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಇಂತಹ ಕಾರಣಗಳನ್ನು ಕೇವಲ ಜಾತಿ, ಧರ್ಮ, ಸಾಮಾಜಿಕ ಸಮಾನತೆ, ಮಾತಿನ ಸ್ವಾತಂತ್ರ್ಯ, ಲಿಂಗ ಸಮಾನತೆಗೆ ಪೂರಕವಾದ ಭಾಷಿಕ ನಿರೂಪಣೆಗಳ ಆಧಾರದ ಮೇಲೆ ಇಲ್ಲವೇ ಎಷ್ಟು ಪ್ರತಿಶತದಲ್ಲಿ ಇಂತಹ ಸಂಗತಿಗಳು ವಚನ ಸಾಹಿತ್ಯದಲ್ಲಿ ಸಿಗುತ್ತವೆ ಅನ್ನುವ ಕಾರಣಕ್ಕೆ ಮಾತ್ರ ಇವತ್ತಿನ ಚರ್ಚೆಗಳನ್ನು ಸೀಮಿತಗೊಳಿ ನೋಡಲು ಸಾಧ್ಯವಿಲ್ಲ. ವಚನ ಸಾಹಿತ್ಯ ಆಂದೋಲನದ ಒಟ್ಟು ಕ್ರಿಯಾವರ್ತುಲದಲ್ಲಿ ಏನೆಲ್ಲ ಅಜೆಂಡಗಳು ಅಡಕವಾಗಿದ್ದವು ಅನ್ನುವ ಸಂಗತಿಯನ್ನೇ ಈ ಚರ್ಚೆಗಳು ಮರೆಮಾಚುತ್ತವೆ. ಹಾಗೂ ವಚನ ಚಳವಳಿ ಎಷ್ಟರಮಟ್ಟಿಗೆ ಸೋಲು ಇಲ್ಲವೇ ಗೆಲವು ಕಂಡಿದೆ ಎನ್ನುವ ಕಾರಣಕ್ಕಾಗಿಯೂ ವಚನ ಚಳವಳಿಗೆ ಈಗಾಗಲೇ ಕನ್ನಡ ಪರಂಪರೆಯಲ್ಲಿ ಸಿಕ್ಕಿರುವ ಈ ಜಾಗವನ್ನು ಯಾರಿಂದಲೂ ಕದಲಿಸಲು ಆಗುವುದಿಲ್ಲ.
ಏಕೆಂದರೆ ವಚನ ಸಾಹಿತ್ಯ ಪರಂಪರೆ ಪೂರ್ವವಾಸನೆಯ ಜಾಡನ್ನು ಬದಲಿಸಿಕೊಂಡು, ನಡೆ-ನುಡಿಗಳ ನಡುವಣ ನೈತಿಕತೆಯ ಹೊಂದಾಣಿಕೆಯನ್ನು ಮರುಮಂಡಿಸುವ ಅಭಿವ್ಯಕ್ತಿಯೇ ಈ ವಚನ ಸಾಹಿತ್ಯದ ಉದ್ದೇಶವಾಗಿದೆ.
ವಚನ, ಮಾತು ಹಾಗೂ ಭಾಷೆ ಈ ಮೂರು ಅರಿಮೆ ಪದಗಳು ಕನ್ನಡ ಸಂಸ್ಕೃತಿಯೊಳಗೆ ಒಂದು ಹೆಚ್ಚುಗಾರಿಕೆಯನ್ನು ಪಡೆದಿವೆ. ಅಂದರೆ ಈ ಮೂರು ಪದಗಳು ವ್ಯಕ್ತಿಗಳಿಗೆ ಇರುವ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆಯನ್ನು ಸೂಚಿಸುತ್ತವೆ. ಪ್ರತಿ ಸಮುದಾಯದ ತಳಹದಿಯಾಗಿರುವುದು ಮಾತು. ಮಾತಿನ ನಂಬಿಕೆಗೆ ಮತ್ತು ಹೊಣೆಗಾರಿಕೆಗೆ ಬಿಕ್ಕಟ್ಟು ಎದುರಾದರೆ, ಇಡೀ ಸಾಮಾಜಿಕತೆ, ನೈತಿಕತೆ ಹಾಗೂ ತಾತ್ವಿಕತೆಗಳ ವಿನ್ಯಾಸಗಳ ಬಗೆಗೆ ಅಪನಂಬಿಕೆ ಮೂಡುತ್ತದೆ.
ಮಾತುಗಳು ಅಪಾರ್ಥದ ಮೂಲಗಳಾದರೆ ಇಡೀ ಬದುಕಿನ ಮುನ್ನೋಟವೇ ದಾರಿ ತಪ್ಪುತ್ತದೆ. ಹಾಗಾಗಿ ಮಾತನ್ನು ಒಂದು ಅಸ್ತ್ರವನ್ನಾಗಿ, ತಿಳಿವಿನ ನೆಲೆಯಾಗಿ ಮತ್ತು ಸಾಮಾಜಿಕ-ರಾಜಕೀಯ ಮೇಲಾಟದ ಮಾಧ್ಯಮವನ್ನಾಗಿ ರೂಪಿಸಲಾಗಿದೆ. ಮಾತನ್ನು ಶಾಪವನ್ನಾಗಿಯೂ, ಮಂತ್ರವನ್ನಾಗಿಯೂ ಬಳಸುತ್ತಲೇ ಬಂದಿದ್ದೇವೆ. ಹಾಗೂ ತಿಳುವಳಿಕೆಯ ಅನುಭವ ಮತ್ತು ಅನುಭವದ ತಿಳುವಳಿಕೆ ನಮಗೆ ದೊರಕುವುದು ಕೂಡ ಮಾತಿನ ಮೂಲಕವೇ.
ಅನುಭವ ಮತ್ತು ತಿಳಿವು ಎರಡೂ ಒಟ್ಟಿಗೆ ಮೂಡುವುದಿಲ್ಲ. ಒಂದು ಇನ್ನೊಂದನ್ನು ಅರಿಯುವುದಕ್ಕೆ ಭಾಷೆ ಹೇಗೆ ಪೂರಕವಾಗಿ ಕೆಲಸ ಮಾಡುತ್ತದೆ ಎನ್ನುವುದು ವಿಶೇಷ. ಆಲೋಚನೆಯ ಇಡೀ ಸ್ವರೂಪವು ಒಡಮೂಡುವುದು ಕೂಡ ನುಡಿಯೊಳಗೆ ಮಾತ್ರ. ಪ್ರತಿಯೊಂದು ಸಂಸ್ಕೃತಿಯು ವಿಕಾಸಗೊಳ್ಳುವಾಗ ತನ್ನದೇ ನುಡಿಯೊಂದನ್ನು ಗುರುತಿಸಿಕೊಳ್ಳುತ್ತದೆ. ಈ ನುಡಿಯ ಮೂಲಕವೇ ತನ್ನ ಬದುಕಿನ ಅಂತಸತ್ವವನ್ನು, ಬದುಕಿನ ಸಾಕ್ಷಾತ್ಕಾರವನ್ನು ಕಂಡರಿಸುವ ದಾರಿಗಳನ್ನು ಕಂಡುಕೊಳ್ಳುತ್ತದೆ.
ಪರಂಪರೆ ರೂಪುಗೊಳ್ಳುವಾಗ ಸಾಂಸ್ಕೃತಿಕ ಚಹರೆಗಳು ಮೈದಾಳುತ್ತವೆ. ಈ ಚಹರೆಗಳು ಬೇರೆ ಬೇರೆ ಸ್ವರೂಪದಲ್ಲಿ ಗೋಚರಿಸುತ್ತವೆ. ವಚನ ಸಾಹಿತ್ಯ ಕನ್ನಡನುಡಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಚಹರೆಯಾಗಿದೆ. ಬದುಕಿನ ಎಲ್ಲ ವಿದ್ಯಮಾನಗಳು ನುಡಿಯೊಳಗೆ ಏರ್ಪಡುವ ಅರ್ಥಗಳ ಮೂಲಕ ನಮ್ಮೊಂದಿಗೆ ನಂಟನ್ನು ಪಡೆದುಕೊಳ್ಳುತ್ತವೆ. ವಾಸ್ತವವನ್ನು ನಿರ್ವಚಿಸುವ ನೆಲೆಗಳಿಗೂ ನಾವು ನುಡಿಯನ್ನು ಬಳಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ನುಡಿಯ ಮೂಲಕವೇ ಬದುಕಿನ ಸತ್ಯವನ್ನು ಕಾಣುತ್ತೇವೆ ಎನ್ನುವ ನಂಬಿಕೆ ಬಲವಾಗಿದೆ.
ಈ ನಂಬಿಕೆಯನ್ನು ಸಾಬೀತುಪಡಿಸುವ ಪರಿಕರವಾಗಿ ವಚನಗಳನ್ನು ಪರಿಗಣಿಸಲಾಗಿದೆ. ಬದುಕಿನ ಸತ್ಯ ಮತ್ತು ಶಾಬ್ದಿಕ ಸತ್ಯಗಳ ನಡುವಣ ಹೊಂದಾಣಿಕೆಯನ್ನು ವಚನ ಸಾಹಿತ್ಯ ಗಟ್ಟಿಗೊಳಿಸಿದೆ. ಆದ್ದರಿಂದ ಮಾತು ಇಲ್ಲವೇ ನುಡಿಯನ್ನು ಕುರಿತ ವಚನಗಳನ್ನು ಮಾತ್ರವಷ್ಟೇ ಅಲ್ಲದೇ ಬದುಕಿನ ನಂಬಿಕೆ ಮತ್ತು ಅಪನಂಬಿಕೆಗಳ ಸ್ವರೂಪವನ್ನು ವಿವರಿಸುವುದಕ್ಕೂ ವಚನಗಳನ್ನು ಉಲ್ಲೇಖ ಮಾಡಲಾಗುತ್ತದೆ. ಬದುಕಿನ ಅರ್ಥಗಳನ್ನು ವಚನಗಳ ಭಾಷೆಯ ಮೂಲಕ ಸಾಕ್ಷಾತ್ಕಾರಗೊಳಿಸುವ ಬಗೆಯಂತೆ, ಭಾಷೆಯ ಸಾಕ್ಷಾತ್ಕಾರವನ್ನು ವಚನಗಳಲ್ಲಿ ಕಾಣುವುದನ್ನು ನೋಡುತ್ತೇವೆ. ಭಾಷೆಯನ್ನೇ ಇಲ್ಲಿ ಪ್ರಮಾಣವಾಗಿ ಗ್ರಹಿಸಲಾಗಿದೆ.
ಈ ಇಡೀ ತಾತ್ವಿಕ ವಿನ್ಯಾಸವನ್ನು ಭಾಷಾಶಾಸ್ತ್ರೀಯ ನೆಲೆಯಿಂದ ಅರಿಯಲು ನಮಗೆ ಸಾಕಷ್ಟು ಗೊಂದಲಗಳು ಎದುರಾಗುತ್ತವೆ. ಆದರೆ ಸಂಸ್ಕ್ರುತಿಯೊಳಗೆಯೇ ನೆಲೆಪಡೆಯುವ ವಿಚಾರ ಸ್ವರೂಪದ ಬಗೆಗಿನ ಚರ್ಚೆಗಳನ್ನು ತೀರಾ ಭಿನ್ನವಾಗಿ ನಿರ್ವಚಿಸಲಾಗಿದೆ. ಇದೊಂದು ರೀತಿಯಲ್ಲಿ ದೀಪ ಮತ್ತು ಬೆಳಕಿನ ಸಂಬಂಧವನ್ನು ಸೂಚಿಸುವಂತಿದೆ. ಅಂದರೆ ದೀಪದ ಬೆಳಕಿನಲ್ಲಿಯೇ ದೀಪವೂ ಕಾಣುವಂತೆ (ಕೆವಿಎನ್ ಅವರ ಮಾತು) ಭಾಷೆಯ ಬೆಳಕಿನಲ್ಲಿ ಸಂಸ್ಕ್ರುತಿ ಗೋಚರಿಸುತ್ತದೆ. ವಚನ ಮತ್ತು ಭಾಷೆಯ ಸಂಬಂಧವನ್ನು ಈ ರೂಪಕದ ಮೂಲಕ ನೋಡಿದರೆ ಸ್ಪಷ್ಟವಾಗುತ್ತದೆ.
ಆದ್ದರಿಂದ ವಚನ ಸಾಹಿತ್ಯ ಕೇವಲ ಸಾಹಿತ್ಯವಾಗಿ ಮಾತ್ರ ಕಾಣದೇ, ಅದೊಂದು ಸಮೂಹಗಳ ಬದುಕಿನ ಪ್ರಮಾಣ ಭಾಷೆಯಾಗಿ ಒಪ್ಪಿಗೆಯನ್ನು ಪಡೆದಿದೆ. ಜಾತಿ, ಲಿಂಗ ಹಾಗೂ ಆಹಾರಭೇದದ ವಿಷಮತೆಯ ತೀವ್ರತೆಯನ್ನು ಟೀಕಿಸುವ ವಚನಗಳು ನಮ್ಮ ಆತ್ಮವಿಶ್ವಾದ ಮಾತುಗಳಾಗಿ ಹಾಗೂ ಬದುಕಿನ ಸ್ಥಿರತೆಯನ್ನು ಕಲ್ಪಿಸುವ ಭರವಸೆಯ ಪ್ರಮಾಣದ ‘ಭಾಷೆಯಾಗಿಯೂ ಒಡಮೂಡಿವೆ. ವಚನ ಭಾಷೆಯಾಗುವಂತೆ, ಭಾಷೆಯೂ ವಚನವಾಗುತ್ತದೆ. ಈ ಆಗುವಿಕೆಯಲ್ಲಿ ವೈಚಾರಿಕ ನಿಲುಗಳನ್ನು ವಚನ ಸಾಹಿತ್ಯ ಹೇಗೆ ಅನುಸಂಧಾನಗೊಳ್ಳುತ್ತದೆ ಅನ್ನುವುದನ್ನು ಕಾಣಬಹುದು.
ನೈತಿಕ ವ್ಯಕ್ತಿತ್ವವನ್ನು ವಚನಗಳು ಪ್ರತಿನಿಧಿಸುತ್ತವೆ. ಧರ್ಮ ಮತ್ತು ನೀತಿ, ವ್ಯಕ್ತಿ ಮತ್ತು ನೈತಿಕತೆ, ಸಮೂಹ ಮತ್ತು ಲೋಕಾನುಭವ ಇವುಗಳು ಒಂದರಿಂದೊಂದು ಬೇರೆಯಲ್ಲ. ಈ ನಿಲುವು ವಚನಗಳಿಂದ ಒಡಮೂಡುವ ದಾರ್ಶಿನಿಕತೆಯಾಗಿದೆ. ಮಾತು ಬದುಕಿನ ಯಾವ ಆಯಾಮವನ್ನು ಶಾಶ್ವತಗೊಳಿಸುತ್ತದೆ ಎಂಬ ವಾಸ್ತವವನ್ನು ವಚನಗಳಲ್ಲಿ ಕಾಣುತ್ತೇವೆ. ಮಾತು ಮಾಣಿಕ್ಯ, ಮಾತು ಜೋತಿರ್ಲಿಂಗ, ಮಾತು ಸ್ಫಟಿಕವಾಗುವ ಪ್ರಕ್ರಿಯೆ ಶಬ್ದ ಮತ್ತು ಅರ್ಥಗಳ ನಡುವಣ ನಂಟನ್ನು ಬೆಸೆಯುವ ನೆಲೆ ಮಾತ್ರವಲ್ಲ. ಬದಲಾಗಿ ನಡೆ ಮತ್ತು ನುಡಿಗಳ ನಡುವೆ ಏರ್ಪಡುವ ಸತ್ಯದ ಸಾಕ್ಷಾತ್ಕಾರವಾಗಿದೆ.
ಅದಕ್ಕೆ ಅಲ್ಲಮನ ನಡೆಯಿಂದ ನುಡಿಗೆಟ್ಟು, ನುಡಿಯಿಂದ ನಡೆಗೆಟ್ಟು ಎಂಬೀ ಮಾತು ಜೋತಿರ್ಲಿಂಗವಾಗುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ವಚನಗಳಲ್ಲಿ ಮಾತು ಮತ್ತು ಅರ್ಥಗಳ ಗುರಿ ನಿಜಾನುಭವದ ದರ್ಶನವಾಗಿದೆ. ಅದಕ್ಕಾಗಿಯೇ ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ಶರಣ ನಡೆದರೆ ನಿರ್ಗಮನಿ, ನುಡಿದರೆ ನಿಶ್ಯಬ್ದ ಎಂಬೆಲ್ಲ ಮಾತುಗಳ ಪರಿಣಾಮವಾಗಿ ಭಾಷೆಯನ್ನು ಅರಿವಿನ ವಾಸ್ತವವನ್ನಾಗಿ ಪರಿವರ್ತಿಸುವ ಇರಾದೆಯನ್ನು ವಚನಗಳಲ್ಲಿ ಕಾಣುತ್ತೇವೆ.
ಹಾಗಾಗಿ ಅರಿವೇ ಗುರು ಎಂಬ ಮಾತು ಭಾಷೆಯ ಪರಧಿಯನ್ನು ಮೀರಿದ ನೆಲೆಯನ್ನು ಸೂಚಿಸುತ್ತದೆ. ಭಾಷೆಯ ಪರಧಿಯನ್ನು ಮೀರುವುದೆಂದರೆ, ಭಾಷೆಯನ್ನೇ ಮೀರುವುದೆಂದಲ್ಲ ಬದಲಾಗಿ ಮಾತನ್ನು ನಡೆಯಾಗಿ, ಆಲೋಚನೆಯಾಗಿ, ನೈತಿಕ ನೆಲೆಯನ್ನಾಗಿ ಅರಿಯುವ ಬಗೆಯಾಗಿದೆ. ಅಂದರೆ ವ್ಯಾಕರಣದ ಸಾಂಪ್ರದಾಯಿಕ ನಿಯಮಗಳ ಚೌಕಟ್ಟನ್ನು ಮೀರುವ ಬಗೆಯಾಗಿ ಇದನ್ನು ನೋಡಬೇಕು. ಅದಕ್ಕಾಗಿಯೇ ಶಬ್ದಸಂದಣಿಯ ಮಾತು ಸಯವಲ್ಲ ನೋಡಾ ಪ್ರಭು ಎಂಬ ಮಾತನ್ನು ಮುಕ್ತಾಯಕ್ಕ ಅಲ್ಲಮನಿಗೆ ಹೇಳುತ್ತಾಳೆ.
ಮಾತುಗಳು ಕೇವಲ ಭಾಷಿಕ ಸೂಚಕಗಳಾಗುವ ಅಪಾಯದ ಎಚ್ಚರವನ್ನು ಮುಕ್ತಾಯಕ್ಕನ ಈ ಮಾತುಗಳಲ್ಲಿ ಕಾಣುತ್ತೇವೆ. ಅಲ್ಲಮ, ಬಸವ, ಮುಕ್ತಾಯಕ್ಕ, ಅಕ್ಕ ಮೊದಲಾದವರ ವಚನಗಳನ್ನು ತಲಸ್ಪರ್ಶಿಯಾಗಿ ಓದಿದರೆ, ನುಡಿಯೊಳಗಣ ನಿಶ್ಯಬ್ದ ಹಾಗೂ ನುಡಿಯೊಳಗಣ ಅರ್ಥ ಇವುಗಳ ನಡುವಿನ ವ್ಯತ್ಯಾಸ ಭಾಷಿಕ ಸೂಕ್ಷ್ಮಗಳನ್ನೇ ಪ್ರತಿನಿಧಿಸುತ್ತವೆ ಎಂಬುದು ಗಮನಾರ್ಹ.
ಅನುಭಾವದ ಅಮೂರ್ತತೆಯನ್ನು ಮೀರಿ ಅನುಭವದ ವಿನ್ಯಾಸಗಳನ್ನು ಆಧರಿಸಿಕೊಂಡು ಸಮೂಹಗಳ ನಡೆ-ನುಡಿಗಳ ನಡುವಣ ನೈತಿಕತೆಯನ್ನು ನಿರೂಪಿಸುವ ಈ ವಚನ ಸಾಹಿತ್ಯ ವಿಮೋಚನೆಯ ಭಾಷೆಯಾಗಿದೆ. ಈ ವಿಮೋಚನೆ ಎನ್ನುವುದು ಭಾವ ಬಂಧನಗಳನ್ನು ಮಾತ್ರ ಮೀರುವುದಲ್ಲ. ವೇದ ಮತ್ತು ಆಗಮಗಳು ಸಾಮಾಜಿಕ-ಸಾಂಸ್ಕೃತಿಕವಾಗಿ ಹೇರಿದ ನಿರ್ಬಂಧಗಳನ್ನೂ ಮೀರುವ ಬಗೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243