ದಿನದ ಸುದ್ದಿ
ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೆ ಮಹಿಳೆಗೆ ನೇಣು ಬಿಗಿದು ಹತ್ಯೆ
ಸುದ್ದಿದಿನ, ಕೆ.ಆರ್.ಪೇಟೆ : ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿಯನ್ನು ನೇಣು ಬಿಗಿದು ಹತ್ಯೆ ಮಾಡಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ನಡೆದಿದೆ. ಬೂಕನಕೆರೆ ಗ್ರಾಮದ ಅಶೋಕನ ಪತ್ನಿ ಗಾನಶ್ರೀ(28) ಹತ್ಯೆಯಾಗಿರುವ ಗೃಹಿಣಿ,ಬೂಕನಕೆರೆ ಗ್ರಾಮದ ಕುಳ್ಳನಂಜೇಗೌಡನ ಮಗ ನಂಜೇಗೌಡ, ಈತನ ಪತ್ನಿ ಜಯಮ್ಮ, ಪುತ್ರ ಅಶೋಕ, ಮಗಳು ಆಶಾ ಕೊಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಘಟನೆ ವಿವರ
ಕಳೆದ ಎಂಟು ವರ್ಷಗಳ ಹಿಂದೆ ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ಪರಶಿವಮೂರ್ತಿ ಅವರ ಅವರ ಪುತ್ರಿ ಗಾನಶ್ರೀ ಅನ್ನು ಬೂಕನಕೆರೆಯ ನಂಜೇಗೌಡನ ಮಗ ಅಶೋಕನಿಗೆ ಸಾಕಷ್ಟು ವರೋಪಚಾರ ನೀಡಿ ವಿವಾಹ ಮಾಡಿಕೊಡಲಾಗಿತ್ತು. ವಿವಾಹವಾದ ಮೂರು ವರ್ಷಗಳ ಕಾಲ ನೆಮ್ಮದಿಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು ಆದರೆ ಮೃತ ಗೃಹಿಣಿ ಆಶಾ ಪತಿ ಮಧ್ಯಪಾನ, ಮತ್ತಿತರ ಚಟಗಳಿಗೆ ದಾಸನಾಗಿ ಪತ್ನಿ ಗಾನಶ್ರೀಗೆ ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದನು ಇದಕ್ಕೆ ಆಕೆಯ ಮಾವ ನಂಜೇಗೌಡ, ಅತ್ತೆ ಜಯಮ್ಮ, ನಾದನಿ ಆಶಾ ಅವರು ಸಹ ದೈಹಿಕ, ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಇನ್ನಷ್ಟು ವರದಕ್ಷಿಣೆ ತರುವಂತೆ ಸಾದಾ ಕಿರುಕುಳ ನೀಡುತ್ತಿದ್ದರು.
ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿದ್ದರೂ ಸಹ ಆರೋಪಿಗಳು ಬದಲಾಗದೇ ಕಿರುಕುಳ ಮುಂದುವರೆಸಿದ್ದರು. ಈ ನಡುವೆ ಸೆ. 30 ರಂದು ಗಾನಶ್ರೀ ಗೆ ಹಲ್ಲೆ ನಡೆಸಿ ನೇಣು ಬಿಗಿದು ಹತ್ಯೆ ಮಾಡಿದ್ದಾರೆ ಎಂದು ಮೃತ ಗೃಹಿಣಿಯ ತಂದೆ ಪರಶಿವಮೂರ್ತಿ ಅವರು ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ಸಂಬಂಧ ಮೃತಳ ಮಾವ ನಂಜೇಗೌಡ, ಅತ್ತೆ ಜಯಮ್ಮ, ನಾದನಿ ಆಶಾ ಅವರನ್ನು ಪೋಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಗಂಡ ಅಶೋಕನಿಗೆ ಶೋಧ ಕೈಗೊಂಡಿದ್ದಾರೆ.
ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಶಯ್ಯ, ಎಸ್.ಪಿ. ಆನಂದ್ ಗೌಡ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಳ ಬಂಧುಗಳ ರೋಧನ ಮುಗಿಲು ಮುಟ್ಟಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401