ನೆಲದನಿ
ನುಡಿಯ ಒಡಲು – 02 : ಕನ್ನಡವೇ ಸತ್ಯ ಕನ್ನಡವೇ ನಿತ್ಯ..?
- ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಮುನ್ನೋಟ
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬೀ ಕವಿಯ ಮಾತುಗಳು ಬಹುದಿನದಿಂದ ನನ್ನನ್ನು ಕಾಡುತ್ತಿರುವ ಮತ್ತು ಮತ್ತೆ ಮತ್ತೆ ಕೆದಕುತ್ತಿರುವ ಮಾತುಗಳಾಗಿವೆ. ಕನ್ನಡ ನುಡಿ, ಸಂಸ್ಕøತಿ ಕುರಿತು ಕುವೆಂಪು ಅವರಿಗೆ ಇರುವ ನಂಬಿಕೆಯ ಬಗೆಗೆ ನನಗೆ ಯಾವುದೇ ಅನುಮಾನವಿಲ್ಲ.
ಇಪ್ಪತ್ತನೇ ಶತಮಾನದಲ್ಲಿ ಕರ್ನಾಟಕದ ಸಮೂಹಗಳಲ್ಲಿ ಒಂದು ವೈಚಾರಿಕ ತಿರುವನ್ನು ಕಾಣುವುದಾದರೆ, ಅದು ಮೊದಲು ನೆಲೆ ಪಡೆದುಕೊಂಡಿದ್ದು ಕುವೆಂಪು ಅವರ ಬರಹಗಳಲ್ಲಿ ಮಾತ್ರ. ಆದರೆ ಅವರು ತಮ್ಮೀ ಹಾಡಿನಲ್ಲಿ ಬಳಸಿಕೊಂಡಿರುವ ಸತ್ಯ ಮತ್ತು ನಿತ್ಯ ಎಂಬೆರಡೂ ಪದಗಳು ನುಡಿಯರಿಮೆಯ ವಿದ್ಯಾರ್ಥಿಯೊಬ್ಬನನ್ನು ಏಕೆ ಕೆಣಕುತ್ತಿವೆ ಹಾಗೂ ಅಣಕಿಸುತ್ತವೆ ಎಂಬುದನ್ನು ಚರ್ಚಿಸಬೇಕಿದೆ.
ಹೌದು, ಈ ಪದಗಳ ಮೂಲಕ ಕನ್ನಡ ನುಡಿ ಮತ್ತು ಕನ್ನಡ ಮಾತ್ನಾಡುವ ಸಮೂಹಗಳ ನಡುವಣ ನಂಟಸ್ತಿಕೆಯ ದಿಟ ಚಹರೆಗಳನ್ನು ಕಂಡರಿಸುವ ಉದ್ದೇಶವನ್ನು ಕುವೆಂಪು ಅವರಲ್ಲಿ ಕಾಣುತ್ತೇವೆ. ಆದಾಗ್ಯೂ ಈ ಎರಡೂ ಪದಗಳ ಬಗೆಗಿರುವ ನನ್ನ ಅನುಮಾನದಲ್ಲಿ ಯಾವುದೇ ವ್ಯತ್ಯಾಸವನ್ನು ಇಲ್ಲಿ ಗುರುತಿಸಲು ಆಗುವುದಿಲ್ಲ.
ಏಕೆಂದರೆ ಸತ್ಯ ಮತ್ತು ನಿತ್ಯ ಎಂಬೀ ಪದಗಳು ಕನ್ನಡವನ್ನೇ ನಂಬಿ ಬದುಕಿತ್ತಿರುವ ಜನಸಮೂಹಗಳ ಪದಕೋಶದಲ್ಲಿ ನೆಲೆನಿಂತು, ಅವರ ಬದುಕಿನ ವಿನ್ಯಾಸಗಳನ್ನು ವಿವರಿಸುವ ಪರಿಕರಗಳಾಗಿ ಈ ಪದಗಳು ಯಾವ ಕಾಲಕ್ಕೂ ಬಳಕೆಯಾಗಿರುವುದನ್ನು ನೋಡಲು ಆಗುವುದಿಲ್ಲ. ಇರಲಿ ಕುವೆಂಪು ಅವರ ನುಡಿ ಬಗೆಗಿನ ನಿಲುವುಗಳನ್ನು ಕುರಿತು ಒಂದಿಷ್ಟು ಚರ್ಚೆಗಳನ್ನು ಬೆಳೆಸಿ, ನಂತರ ಸತ್ಯ ಮತ್ತು ನಿತ್ಯ ಪದಗಳ ಬಗೆಗಿನ ನನ್ನ ತಕರಾರುಗಳನ್ನು ಕುರಿತು ಮಾತ್ನಾಡುತ್ತೇನೆ.
ಜನ ಬದುಕಲೆಂದೆ ಹಾಡು..!
“ಜನ ಬದುಕಲೆಂದೆ ಹಾಡು…..” ಎಂಬ ತತ್ವವನ್ನು ನಂಬಿ ಬರೆದ ಕುವೆಂಪು ಅವರು, ಈ ಎರಡೂ ಪದಗಳನ್ನು ಜನರ ಬದುಕಿನ ಸೂಚಕಗಳನ್ನಾಗಿ ಕಾಣಿಸುವ ಇರಾದೆಯಿಂದಲೇ ಬಳಸಿರುತ್ತಾರೆ. ಆದರೆ ಈ ಪದಗಳಿಗೆ ಅಂಟಿದ ಪರಂಪರೆಯ ಸೋಂಕಿನಿಂದ ಇವುಗಳಿಗೆ ಇವತ್ತಿಗೂ ಪಾರಾಗಲು ಸಾಧ್ಯವಾಗಿಲ್ಲ. ಅಂದರೆ ಈ ಪದಗಳ ಸೂಚಿತ ನೆಲೆಗಳು ಈ ಹೊತ್ತಿಗೂ ಸಾಮಾಜಿಕ ಬೇರೆತನವನ್ನೇ [ಸೋಶಿಯಲ್ ಏಲಿನೇಶನ್] ನೆಲೆಗೊಳಿಸುವ ಹುನ್ನಾರವನ್ನು ಮಾಡುತ್ತಿವೆ.
ಪದಗಳಲ್ಲಿ ಹೀಗೆ ಅಂತರ್ನಿತವಾಗಿರುವ ಆಯಾ ಪರಂಪರೆಯ ಸಾಮಾಜಿಕ ನಿಲುವುಗಳು ಸಮೂಹಗಳ ಸಾಂಸ್ಕøತಿಕ ಸೀಳುಗಳಿಗೆ ಕಾರಣವಾಗುತ್ತವೆ. ಅನಾದಿ ಕಾಲದಿಂದಲೂ ಸಮುದಾಯಗಳ ಒಳಗೆ ಹುದುಗಿರುವ ಇಂತಹ ಹುನ್ನಾರಗಳ ವಿನ್ಯಾಸವನ್ನು ಅತ್ಯಂತ ನಿಚ್ಚಳವಾಗಿ ತಮ್ಮ ಒಟ್ಟು ಬರಹಗಳಲ್ಲಿ ಕುವೆಂಪು ಅವರು ತೋರಿಸಿಕೊಟ್ಟಿರುವವರು. ಹಾಗಾಗಿ ನಿತ್ಯ ಮತ್ತು ಸತ್ಯ ಪದಗಳು ಪ್ರತಿನಿಧಿಸುವ ಯಾವುದೇ ಬಗೆಯ ಸಾಮಾಜಿಕ ಯಜಮಾನಿಕೆ ಮತ್ತು ಸಾಂಸ್ಕøತಿಕ ರಾಜಕೀಯ ಹುನ್ನಾರಕ್ಕೆ ಕುವೆಂಪು ಅವರು ಕಾರಣವಲ್ಲ.
ಇಂತಹ ವಿನ್ಯಾಸಗಳನ್ನು ನಿರಚನಗೊಳಿಸುವ ಬಗೆಯೇ ಕುವೆಂಪು ಅವರ ಸಾಹಿತ್ಯದ ಗುರಿಯಾಗಿದೆ. ಆದರೆ ಕನ್ನಡ ನುಡಿಯು ರೂಪಿಸಿಕೊಂಡ ಪದಕೋಶ ಹಾಗೂ ತಿರುಳಿನ ಸಾಮಾಜಿಕ ಚೌಕಟ್ಟುಗಳು ಮಾತ್ರ ಜನಪರವಾದ ನಿಲುವುಗಳನ್ನು ಯಾವತ್ತಿಗೂ ಪಡೆದುಕೊಳ್ಳಲಿಲ್ಲ. ಸಮೂಹಗಳ ಬಗೆಗೆ ಕಾಳಜಿಯನ್ನು ಹೊಂದಿರುವವರು, ಜನಪರವಾದ ತುಡಿತವನ್ನು ಮಾತ್ರ ನಟಿಸುವ ಹುನ್ನಾರವನ್ನು ಮಾಡಿದರೇ ಹೊರತು, ಕನ್ನಡದ ಅಸ್ತಿತ್ವದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುವುದು ಇವರಾರಿಗೂ ಮುಖ್ಯವಾಗಲಿಲ್ಲ.
ಅದಕ್ಕಾಗಿಯೇ, ಕನ್ನಡ ನುಡಿಯ ಪದಕೋಶ ಮತ್ತು ಸಮುದಾಯಗಳ ನಡುವಣ ಬಿಕ್ಕಟ್ಟುಗಳನ್ನು ಬಗೆಹರಿಸುವ ತುಡಿತದಿಂದ ಕುವೆಂಪು ಅವರು ಭಾಷಿಕ ಎಲ್ಲೆಗಳನ್ನು ಮೀರಿ ಹೊಸಗನ್ನಡದ ಪದಕೋಶವನ್ನು ರೂಪಿಸಿರುವುದನ್ನು ನೋಡಬಹುದು. ಇಂತಹ ಭಾಷಿಕ ಪ್ರಕ್ರಿಯೆಯಲ್ಲಿ ಕುವೆಂಪು ಅವರ ನಿಗಾಯಿರುವುದು ಕೇವಲ ಕನ್ನಡನುಡಿ ಚಹರೆಗಳನ್ನು ನೆಲೆಗೊಳ್ಳಿಸುವುದು ಮಾತ್ರವಲ್ಲ.
ಬದಲಾಗಿ ಕನ್ನಡ ನುಡಿ ಸಮೂಹಗಳಿಗೆ ಬೇಕಿರುವ ಜ್ಞಾನಶಿಸ್ತೀಯ [ಎಪಿಸ್ಟಿಮಾಲಜಿ] ನೆಲೆಗಳನ್ನು ಕನ್ನಡದ ಮೂಲಕವೇ ಸಜ್ಜುಗೊಳಿಸುವ ಬಗೆಗಳನ್ನು ಹುಟ್ಟು ಹಾಕುವುದಾಗಿತ್ತು. ಹಾಗಾಗಿಯೇ ಇವರು ತಮ್ಮ ಸಾಹಿತ್ಯದ ನಿರೂಪಣೆಯಲ್ಲಿ ಹಲವು ಬಗೆಯ ಪರಿಭಾಷೆಗಳನ್ನು [ರೆಜಿಸ್ಟರ್ಸ್] ರೂಪಿಸಿಕೊಂಡು ಬಳಸಿದರು. ಕಾಲ ದೇಶಗಳ ಹಂಗು ಮೀರಿದ ಕನ್ನಡದ ಪದಕೋಶ ಮತ್ತು ಪದಕಟ್ಟೋಣವನ್ನು ಕುವೆಂಪು ಅವರಲ್ಲಿ ಕಾಣಬಹುದು.
ಹಾಗಾಗಿ ಹಳಗನ್ನಡ, ಒಳನುಡಿ, ಕನ್ನಡ ರಚನೆಯೊಳಗೆ ಸಂಸ್ಕøತ ರೂಪಗಳನ್ನು ಬಳಸಿಕೊಂಡದ್ದು [ಇಂತಹ ಪ್ರಯೋಗಗಳನ್ನು ಸಂಸ್ಕ್ರುತಭೂವಿಷ್ಠವೆಂದೂ ಆರೋಪಿಸಲಾಗುತ್ತದೆ] ಮುಂತಾದ ಬಗೆಗಳಲ್ಲಿ ಇವರ ನುಡಿ ನಿರೂಪಣೆಗಳಲ್ಲಿ ನೋಡಬಹುದು. ಇದು ಕೇವಲ ಸಾಹಿತ್ಯ ಸೃಷ್ಟಿಯಲ್ಲಿ ನಡೆದ ಪ್ರಾಯೋಗಿಕ ನೆಲೆ ಮಾತ್ರವಲ್ಲ. ನುಡಿಯೊಂದರ ದಿಟ ಕಸುವನ್ನು ಬಳಸಿಕೊಂಡು ಜ್ಞಾನಶಿಸ್ತುಗಳನ್ನು ಕಟ್ಟುವ ಬಗೆಗಳನ್ನು ರುಜುಪಡಿಸುವ ರೀತಿಯಾಗಿದೆ.
ಕುವೆಂಪು ಅವರಿಗೆ ಪದಗಳು ಕೇವಲ ಪದಗಳಲ್ಲ, ಅವುಗಳನ್ನು ಪರಿಕಲ್ಪನೆಗಳನ್ನಾಗಿ ಹಾಗೂ ಸಾಂಸ್ಕøತಿಕ ವಿದ್ಯಮಾನದ ಸೂಚಕಗಳನ್ನಾಗಿ ಬಳಸುತ್ತಾರೆ. ಭಾವೋಪಯೋಗಿ ಮತ್ತು ಲೋಕೋಪಯೋಗಿ ಎಂಬ ಕುವೆಂಪು ಅವರ ಭಾಷಿಕ ಪರಿಕಲ್ಪನೆಗಳೇ ಇದಕ್ಕೆ ಸಾಕ್ಷಿಯಾಗಿವೆ.
ಕುವೆಂಪು ಅವರ ಕನ್ನಡತನ
ಕುವೆಂಪು ಅವರ ಕಣ್ನೋಟದಲ್ಲಿ ಕನ್ನಡತನ ಎಂಬುದು ಕೇವಲ ನುಡಿ ಬಗೆಗಿನ ಒಲವು ಮಾತ್ರವಲ್ಲ. ದೇಶ ಕಾಲಗಳ ಹಂಗು ಮೀರಿ ಕರ್ನಾಟಕದ ಸಮೂಹಗಳ ಬದುಕಿನ ಒಟ್ಟು ವಿನ್ಯಾಸವನ್ನು ನಿರಂತರಗೊಳಿಸುವ ಬಗೆಯೇ ಕನ್ನಡತನವಾಗಿದೆ. ಬದುಕಿನ ಎಲ್ಲಾ ವಲಯಗಳಲ್ಲಿ ನಡೆಯುವ ಕ್ರಿಯೆ ಮತ್ತು ಪ್ರಕ್ರಿಯೆಗಳು ಕನ್ನಡದ ಮೂಲಕ ನೆಲೆಪಡೆಯುವ ಬಗೆಯೂ ಇದಾಗಿರುತ್ತದೆ.
ಅಂದರೆ ಸಾಮಾಜಿಕ-ಮಾನಸಿಕ ಗ್ರಹಿಕೆಯ ಮಾದರಿಗಳು ರೂಪುಗೊಳ್ಳುವುದು ನುಡಿಯ ಮೂಲಕ. ಕನ್ನಡವನ್ನೆ ನೆಮ್ಮಿ ಬದುಕುವ ಕರ್ನಾಟಕದ ಸಮೂಹಗಳ ಈ ಮಾದರಿಗಳು ಕನ್ನಡದ ಮೂಲಕವೇ ಅಸ್ತಿತ್ವಕ್ಕೆ ಬರುತ್ತವೆ. ಬದುಕು ಮತ್ತು ನುಡಿಯ ನಡುವಣ ಹೊಂದಾಣಿಕೆಯ ಈ ವಿನ್ಯಾಸಗಳನ್ನೇ ಕನ್ನಡತನ ಎಂದು ಹೇಳಬಹುದು. ಈ ಬಗೆಯ ಕನ್ನಡತನದ ಚಹರೆಗಳು ನೆಲೆನಿಲ್ಲುವ ಸ್ವರೂಪವನ್ನು ಕುವೆಂಪು ಅವರು ಸತ್ಯ ಮತ್ತು ನಿತ್ಯ ಎಂಬ ಪರಿಕಲ್ಪನೆಗಳ ಮೂಲಕ ನಿಚ್ಚಳಗೊಳಿಸಿದ್ದಾರೆ.
ಇಪ್ಪತ್ತನೆಯ ಶತಮಾನದಲ್ಲಿ ಕನ್ನಡವನ್ನು ಒಂದು ಸಾಂಸ್ಕøತಿಕ ವಿದ್ಯಮಾನವನ್ನಾಗಿ ರೂಪಿಸುವಲ್ಲಿ ಕುವೆಂಪು ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೆ ಕನ್ನಡ ಜಗತ್ತನ್ನು ಮುನ್ನೆಡೆಸುವ ಹೊಣೆಯನ್ನು ಹೊತ್ತವರು, ಕುವೆಂಪು ಅವರು ನಿಲುವುಗಳನ್ನು ಪರಿಗಣಿಸಲೆಯಿಲ್ಲ. ನುಡಿ ಬಗೆಗಿನ ಕುವೆಂಪು ಅವರ ನಿಲುವುಗಳನ್ನು ಕೇವಲ ಸಾಹಿತ್ಯಕ ಪ್ರಯೋಗಗಳನ್ನಾಗಿ ಗುರುತಿಸಲಾಗಿದೆ. ಇಂತಹ ಪ್ರಯೋಗಗಳನ್ನು ಬಹುತೇಕವಾಗಿ ನೆಗಟಿವ್ ನಿಲುವುಗಳನ್ನಾಗಿಯೇ ಆ ಹೊತ್ತಿನ ಕನ್ನಡ ತಿಳಿವಿನ ಲೋಕ ಪರಿಗಣಿಸಿರುವುದನ್ನು ಇಲ್ಲಿ ಗಮನಿಸಬಹುದು.
ಕನ್ನಡದ ಬೆಳವಣಿಗೆ ಇಲ್ಲವೇ ಏಳ್ಗೆ ಎಂಬುದನ್ನು ಒಂದು ಭಾವನಾತ್ಮಕ ನೆಲೆಯನ್ನಾಗಿಸುವುದೇ ಕನ್ನಡತನದ ನಿಲುವಾಗಿತ್ತು. ಕನ್ನಡತನವೆನ್ನುವುದು ಭಾವನೆಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ ಅದು ಬದುಕಿಗೆ ಸಂಬಂಧಿಸಿದ ವಿದ್ಯಮಾನವಾಗಿದೆ. ಅಂದರೆ ಬದುಕನ್ನು ನಿರ್ವಹಿಸುವ ಬಗೆಗಗಳು ಆಯಾ ಸಮುದಾಯದ ಒಡಲಲ್ಲಿ ಹುದುಗಿರುತ್ತವೆ. ಇಂತಹ ರಾಚನಿಕ ಸಂಗತಿಗಳನ್ನು ಅಯಾ ಸಮೂಹಗಳ ನುಡಿಯು ಜೋಪಾನ ಮಾಡಿಕೊಂಡು ಬಂದಿರುತ್ತದೆ. ಆಯಾ ಸಮುದಾಯಗಳ ನುಡಿ ಬೆಳವಣಿಗೆಯೇ, ಅವರವರ ಬದುಕಿನ ಏಳ್ಗೆಯನ್ನು ಸೂಚಿಸುವ ಸೂಚಕವಾಗಿರುತ್ತದೆ.
ಕನ್ನಡ ನುಡಿಯು ಹಲವು ಶತಮಾನಗಳಿಂದ ಎಷ್ಟೊಂದು ತಲೆಮಾರುಗಳ ಬದುಕುಗಳನ್ನು ನಿರ್ವಹಿಸಿಕೊಂಡು ಬಂದಿದೆ ಎಂಬುದನ್ನು ನೆನಪಿಸಿಕೊಂಡರೆ, ಕನ್ನಡ ಜಗತ್ತಿನ ವಿವೇಕದ ಹರವು ನಮ್ಮ ಗಮನಕ್ಕೆ ಬರುತ್ತದೆ. ಇಂತಹ ವಿವೇಕದ ನಿರಂತರತೆ, ಬೆಳವಣಿಗೆ ಮತ್ತು ಬದುಕಿನ ಬಹುಳತೆಯ ಮಾದರಿಗಳನ್ನು ಮುನ್ನೆಡೆಸಿಕೊಂಡು, ಆಯಾ ಹೊತ್ತಿನ ಬಾಳಿಗೆ ಬೇಕಾಗುವ ಎಲ್ಲ ರೀತಿಯ ಅಗತ್ಯಗಳನ್ನು ಪೊರೈಸಿಕೊಳ್ಳುವುದೆ ಕನ್ನಡತನವಾಗಿದೆ.
ಜನರ ಇಂತಹ ನಿಲುವುಗಳನ್ನೆ ಸಾಕಾರಗೊಳಿಸುವ ನುಡಿಯಾಗಿರುವ ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯವೆಂದು ಕುವೆಂಪು ಅವರು ಹೇಳಿರುವರು. ಇದನ್ನು ಕೇವಲ ಒಂದು ರಾಜಕೀಯ ಸ್ಲೋಗನ್ನಿನ ನೆಲೆಗೆ ತಂದಿರಿಸಲಾಗಿದೆ. ಇದೊಂದು ಚಾರಿತ್ರಿಕ ವಿಪರ್ಯಾಸವೇ ಸರಿ. ಕುವೆಂಪು ಮಂಡಿಸುವ ಕನ್ನಡತನದ ಈ ನಿಲುವುಗಳನ್ನು ಬರೀ ಹುಸಿಕಲ್ಪನೆಗಳನ್ನಾಗಿ ಬಿಂಬಿಸಲಾಗಿದೆ. ಹಾಗಾಗಿಯೇ ಇಂಗ್ಲಿಶು ಮತ್ತು ಸಂಸ್ಕøತ ನುಡಿಗಳು ಕನ್ನಡ ನುಡಿ ಸಮುದಾಯದೊಳಗೆ ಹೆಚ್ಚು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತವೆ.
ಈ ನುಡಿಗಳ ಎದುರಿಗೆ ಕನ್ನಡದ ಕಸುವು ಮತ್ತು ಚಲನಶೀಲತೆಯನ್ನು ಕುಂದಿಸುವ ಹುನ್ನಾರವು ಇದಾಗಿದೆ. ಕನ್ನಡವೆಂದರೆ ಅದೊಂದು ಪಾಳುಬಿದ್ದ ನೆಲ ಎನ್ನುವ ಧೋರಣೆಗೂ ಈ ಹುನ್ನಾರವು ಕಾರಣವಾಗುತ್ತದೆ. ಕನ್ನಡವನ್ನೇ ನೆಮ್ಮಿದ ಸಮೂಹಗಳು ಒಂದು ಬಗೆಯ ಅತಂತ್ರ ನೆಲೆಗೆ ಸಿಕ್ಕುಬಿದ್ದು ನರಳುತ್ತವೆ. ಶಿಕ್ಷಣ ಮಾಧ್ಯಮ ಕುರಿತಾದ ನಿಲುವುಗಳನ್ನು ನಿಗಾಯಿಟ್ಟು ಪತ್ತೆಹಚ್ಚಿದರೆ ಇಂತಹವೇ ಕಾರಣಗಳು ಅಲ್ಲಿ ಮುಂಚೂಣೆಯಲ್ಲಿರುತ್ತವೆ. ಏಕೆಂದರೆ ಕನ್ನಡದ ಬಗೆಗಿನ ಅಪನಂಬಿಕೆಯನ್ನು ಈ ನಿಲುವುಗಳು ಮತ್ತಷ್ಟು ತೀವ್ರಗೊಳಿಸುತ್ತವೆ.
ಆದ್ದರಿಂದ ಕನ್ನಡಿಗರಿಗೆ ಮಾಧ್ಯಮದ ಪ್ರಶ್ನೆ ಎದುರಾದಗೆಲ್ಲ, ಕನ್ನಡ ಮತ್ತು ಇಂಗ್ಲಿಶು ನುಡಿಗಳ ನಡುವೆ ಹೋಲಿಕೆ ಇರುತ್ತದೆ. ಈ ಹೋಲಿಕೆಯಲ್ಲಿ ಇಂಗ್ಲಿಶು ಯಾವತ್ತಿಗೂ ಗೆಲ್ಲುವ ಕುದುರೆಯಾಗಿಯೇ ಕಾಣುತ್ತದೆ. ಸಹಜವಾಗಿ ಕನ್ನಡವೆಂದರೆ ಅದೊಂದು ಊನಗೊಂಡ ಕುದುರೆಯಾಗಿ ತೋರುತ್ತದೆ. ಈ ಕಾರಣಗಳಿಗಾಗಿಯೇ ಕನ್ನಡವೆನ್ನುವುದು ನಮ್ಮ ಸಮೂಹಗಳ ಬದುಕಿಗೆ ಹೊರೆಯಾಗಿ ಪರಿಣಮಿಸುತ್ತದೆ.
ತನ್ನ ಮತ್ತು ಬೇರೆತನದ ಡೈಕಾಟಮಿ
ಮತ್ತೊಂದು ಬಗೆಯ ಹುನ್ನಾರದ ಮಾದರಿ ಯಾವುದೆಂದರೆ, ಕನ್ನಡದ ಗುರುತು ಇಲ್ಲವೇ ಅಸ್ಮಿತೆಯನ್ನು ನೆಲೆಗೊಳಿಸಲು, ಅಧಿಕಾರ ಮತ್ತು ನೈತಿಕತೆಯ ಸವಾಲುಗಳನ್ನು ಎದುರಿಗೆ ಇಡಲಾಗುತ್ತದೆ. ಕನ್ನಡ ತನಗಿರುವ ಅಧಿಕಾರದ ನೆಲೆಗಳನ್ನು ತನ್ನ [ಸೆಲ್ಫ್] ಮತ್ತು ಬೇರೆ [ಅದರ್] ಎಂಬ ವಿಂಗಡನೆಯ ಮೂಲಕ ತನ್ನ ನುಡಿ ಸಮುದಾಯವನ್ನು ನಿರೂಪಿಸುತ್ತದೆ.
ಈ ಅಧಿಕಾರವನ್ನು ಮರುಸಂಪಾದಿಸಲು ಗಡಿಗಳು ಮತ್ತು ಸಮುದಾಯಗಳ ಗಾತ್ರವನ್ನು ವ್ಯಾಖ್ಯಾನಿಸುತ್ತಲೇ ಇರುತ್ತದೆ. ಪರಿಣಾಮವಾಗಿ ಆಯಿಕಟ್ಟಿನ ಜಾಗಗಳನ್ನು [ಸ್ಟ್ರ್ಯಾಟಜಿಕ್ ಲೋಕೇಶನ್ಸ್] ಗೊತ್ತುಪಡಿಸಿಕೊಂಡು, ಅವುಗಳನ್ನೇ ಕನ್ನಡದ ಗುರುತುಗಳನ್ನಾಗಿ ರೂಪಿಸಲಾಗುತ್ತದೆ. ಆಯಾ ನುಡಿ ಸಮುದಾಯದೊಳಗಿರುವ ಕೆಲವು ಪ್ರಬಲ ಸಮೂಹಗಳು ಕನ್ನಡದ ನೈತಿಕತೆಯ ಸವಾಲುಗಳನ್ನು ಹುಟ್ಟುಹಾಕುತ್ತವೆ. ಕಾರಣವೇನೆಂದರೆ ಇಂತಹ ನಿಲುವುಗಳ ಮೂಲಕ ಕನ್ನಡದ ಬಗೆಗಿನ ತಮ್ಮ ಹುಸಿ ಅಭಿಮಾನವನ್ನು ಗಟ್ಟಿಗೊಳಿಸುವ ಹುನ್ನಾವಾಗಿರುತ್ತದೆ.
ಹಾಗಾಗಿ ಈ ಸವಾಲುಗಳನ್ನು ಹೊರ ಮತ್ತು ಒಳ ನುಡಿಗುಂಪುಗಳಿಂದ ನೈತಿಕ ಅನುಕಂಪ [ಮಾರಲ್ ಸಿಂಪಥಿ]ವನ್ನು ಪ್ರಚುರಪಡಿಸುವ ಮೂಲಕ ತಮ್ಮೀ ಹುನ್ನಾರವನ್ನು ಮುಂಚೂಣೆಗೆ ತರುತ್ತವೆ. ಇಂತಹ ಹುನ್ನಾರದ ತುಡಿತವೇನೆಂದರೆ, ನುಡಿಯೊಂದಕ್ಕೆ ಹುಸಿಮನ್ನಣೆಯನ್ನು ರೂಪಿಸುವುದಾಗಿರುತ್ತದೆ. ಇದನ್ನು ಸಾಕಾರಗೊಳಿಸಲು ಮಾನವ ಹಕ್ಕಿನ ಪ್ರಶ್ನೆಯನ್ನು ಮುಂದಿಡಲಾಗುತ್ತದೆ. ಈ ಮಾನವ ಹಕ್ಕುಗಳ ಸವಾಲು ಇಲ್ಲಿ ಎದುರಾಗುವುದು ಬದುಕಿನ ಆಶೋತ್ತರಗಳನ್ನು ಈಡೇರಿಸುವ ಇರಾದೆಯಿಂದಲ್ಲ. ಬದಲಾಗಿ ಹುಸಿಕನ್ನಡತನದ ಸ್ಥಿತಿಯನ್ನು ಎಚ್ಚರಿಸುವ ನೆಪ ಮಾತ್ರವಾಗಿರುತ್ತದೆ.
ಈ ಹಕ್ಕುಗಳ ಸ್ವರೂಪವನ್ನು ಮನಗಾಣುವ ಯಾವುದೇ ಉದ್ದೇಶ ಇಲ್ಲವೇ ಗುರಿಯನ್ನೂ ಇಲ್ಲಿ ಕಾಣಲು ಸಾಧ್ಯವಿಲ್ಲ. ಅಂದರೆ ಹಕ್ಕುವೆಂಬುದು ನಮ್ಮೊಳಗೆಯೇ ಅಂತರ್ಗತ [ಇನ್ಹೆರೆಂಟ್ ರೈಟ್ಸ್]ವಾಗಿದೋ? ಇಲ್ಲವೇ ಅದನ್ನು ಹೊರಗಿನ ಮೂಲಗಳಿಂದ ಪಡೆಯ [ಅರ್ನೆಡ್ ರೈಟ್ಸ್]ಬಹುದಾಗಿದೋ? ಎಂಬುದು ಕೂಡ ನುಡಿ ಬಗೆಗಿನ ತೀರ್ಮಾನಗಳಲ್ಲಿ ಗೊಂದಲವನ್ನುಂಟು ಮಾಡುತ್ತದೆ.
ಹಾಗಾಗಿ ಕನ್ನಡ ನುಡಿ ಕುರಿತಾದ ಯಾವುದೇ ನಿಲುವು ರಾಜಕೀಯೇತರವಾದದ್ದಲ್ಲ. ಆದ್ದರಿಂದ ಕುವೆಂಪು ಅವರ ನಿಲುವುಗಳು ಇಂತಹ ರಾಜಕೀಯ ಪ್ರೇರಿತವಾದ ನಂಬಿಕೆಗಳನ್ನು ಹುಸಿಗೊಳಿಸಿ, ದಿಟ ಕನ್ನಡತನವನ್ನು ನೆಲೆಗೊಳಿಸುವ ಕಾರಣ ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯವೆಂಬ ಮೂಲತತ್ವವನ್ನು ಇವರು ಹುಟ್ಟುಹಾಕಿರುತ್ತಾರೆ.
ಸಾಮಾಜಿಕ ಒಡಕಿನ ಬಗೆಗಳು
ಸಮೂಹಗಳ ಬದುಕಿನ ನಂಟಿನ ನೆಲೆಗಳನ್ನು ಹಾಗೂ ನಂಬಿಕೆಯ ನಿಲುವುಗಳನ್ನು ಗಟ್ಟಿಗೊಳಿಸುವ ಬದಲಾಗಿ, ಅವುಗಳನ್ನು ಹುಸಿಗೊಳಿಸುವ ಬಗೆಯಾಗಿ ಪದವೊಂದು ಅಂತಸ್ಥಗೊಂಡರೆ, ಅದರಿಂದ ಸಾಮಾಜಿಕ ಒಡಕು ಇನ್ನಷ್ಟು ಬಿಗಡಾಯಿಸುತ್ತದೆ ಎಂಬುದನ್ನು ಈ ಮೇಲಿನ ಚರ್ಚೆಗಳು ತಿಳಿಸುತ್ತವೆ. ಕನ್ನಡ ಜನಪರ ನಂಬಿಕೆಯ ಲೋಕದೊಳಗೆ ಸತ್ಯ ಮತ್ತು ನಿತ್ಯ ಪದಗಳು ನೆಲೆ ಪಡೆಯಲಿಲ್ಲ.
ಹೊಸಗಾಲದ ಕನ್ನಡವನ್ನು ಮುನ್ನೆಡೆಸುವ ಮುಂದಾಳುಗಳು ಕನ್ನಡದ್ದೇ ಜನಪರ ನಂಬಿಕೆಯ ಲೋಕವನ್ನು ಬೆಳೆಸುವ ಇಲ್ಲವೇ ಈಗಾಗಲೇ ನೆಲೆನಿಂತ ಕನ್ನಡೇತರ ಪರಂಪರೆಗೆ ಪರ್ಯಾಯ ಪರಂಪರೆಯೊಂದನ್ನು ಕಟ್ಟುವ ನಿಟ್ಟಿನಲ್ಲಿ ಇವರು ನಿಗಾವಹಿಸಲಿಲ್ಲ. ಹಾಗಾಗಿ ಕನ್ನಡ ನುಡಿಯ ಸಾಮಾಜಿಕ ನೆಲೆಗಳನ್ನು ಅನ್ಯಗೊಳಿಸುವ ತುಡಿತವೇ ಇಲ್ಲಿ ಮೇಲುಗೈ ಪಡೆದಿರುವುದನ್ನು ನೋಡಬಹುದು.
ಕುವೆಂಪು ಅವರು ಪರನುಡಿಗಳಿಂದ ಪದಗಳನ್ನು ಕಡ ತಂದರೂ, ಕನ್ನಡ ನುಡಿ ಸಮುದಾಯಗಳ ಏಳ್ಗೆಗೆ ಬೇಕಾಗುವ ದಾರಿಗಳನ್ನು ಕಟ್ಟುವ ಬಗೆಯಾಗಿರುತ್ತದೆ. ಕನ್ನಡವೇ ಸತ್ಯ ಮತ್ತು ಕನ್ನಡವೇ ನಿತ್ಯ ಎಂಬುದು ಕೇವಲ ಮಂತ್ರಪಠಣವಾಗದೇ, ಬದುಕಿನ ನಂಬಿಕೆಯಾಗಬೇಕಿದೆ. ಕನ್ನಡದ ಮುಂದಾಳುತನವನ್ನು ವಹಿಸುವವರು ಕುವೆಂಪು ಅವರು ರೂಪಿಸಿದ ನುಡಿತತ್ವಗಳನ್ನು ಆಚರಣೆಗೆ ತರುವ ಅನಿವಾರ್ಯವನ್ನು ಅರಿಯಬೇಕಿದೆ. ಕನ್ನಡತನ ಎನ್ನುವುದು ಅದು ಬರೀ ಹಕ್ಕಲ್ಲ, ಮಂತ್ರವು ಅಲ್ಲ, ತಂತ್ರವೂ ಅಲ್ಲ. ಅದು ಬದುಕು ಹಾಗೂ ಬದುಕಿಗೆ ಬೇಕಾಗುವ ಅಪ್ಪಟ ನಂಬಿಕೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243