ಬಹಿರಂಗ

ಮತ್ತೆ ಮತ್ತೆ ಪ್ರಶ್ನೆ ! ಎಡಪಂಥ ಎಂದರೇನು ? ಯಾರು ಎಡ ಪಂಥೀಯರು ?

Published

on

ಭಾರತದ ಮೊದಲ ಎಡಪಂಥೀಯ ನಾಯಕರು ಸುಭಾಷ್ ಚಂದ್ರ ಬೋಸ್, ನೆಹರೂ, ಮುಜಾಫರ್ ಅಹಮದ್, ಜೆಪಿ, ಅಂಬೇಡ್ಕರ್,ಕವಿ ನಜರುಲ್ ಇಸ್ಲಾಂ, ಇ.ಎಂ.ಎಸ್ ನಂಬೂದರಿಪಾದ್ ಮೊದಲಾದವರು ಎಂಬುದು ಗೊತ್ತೆ ? ಅಂಬೇಡ್ಕರ್‌ರವರು ಜಾತಿ ವ್ಯವಸ್ಥೆಯ ವಿರುದ್ಧ ಸ್ವತಂತ್ರ ಹೋರಾಟ ಸಾಗಿಸುತ್ತಿದ್ದ ಎಡ ಪಂಥೀಯ ಹೋರಾಟಗಾರ , ಮತ್ತು ಅಸಾಮಾನ್ಯ ಎಡ ಚಿಂತಕರಾಗಿದ್ದರು.

ಎಡಪಂಥ, ಎಡ ಪಕ್ಷ ಎಂಬ ಮೊದಲ ಹೆಸರು ಬಂದದ್ದು ಫ್ರೆಂಚ್ ರಾಜ ಸಭೆಯಲ್ಲಿ . ರಾಜಪ್ರಭುತ್ವದ ಪರ ಇದ್ದ ಸಾಮಂತರು, ನೊಬಲ್‌ಗಳು ಪ್ರಜಾಪ್ರಭುತ್ವದ ಪರ ಇದ್ದ ಸಾಮಾನ್ಯ ಜನರ ಭಾಷೆ , ವರ್ತನೆ ಒರಟು.ಪ್ರಜಾಪ್ರಭುತ್ವ ಬೇಕು ಎಂದು ಅರಚಾಡುತ್ತಾರೆ . ಅವರ ಜೊತೆ ಕುಳಿತುಕೊಳ್ಳುವುದಾಗಲ್ಲ ಎಂದು ರಾಜನ ಬಲಗಡೆ ಕುಳಿತುಕೊಳ್ಳಲಾರಂಭಿಸಿದರು, ಹೀಗಾಗಿ ಸಾಮಾನ್ಯ ಜನರು,ಪ್ರಜಾಪ್ರಭುತ್ವ ಬೇಕೆನ್ನುವವರಿಗೆ ಉಳಿದದ್ದು ಎಡ ಭಾಗ ಮಾತ್ರ. ಹೀಗೆ ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ದನಿ ಎತ್ತುವವರು, ಅದನ್ನು ಬದಲಾಯಿಸಬೇಕೆನ್ನುವವರು ಎಡ ಪಕ್ಷವಾದರು.

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಇನ್ನೂ ಆರೆಸ್ಸೆಸ್ ಬಗ್ಗೆ ಜನಕ್ಕೆ ತಿಳಿಯುವ ಮೊದಲೇ , ಕಾಂಗ್ರೆಸ್‌ನೊಳಗೇ ಧಾರ್ಮಿಕ ಮೌಲ್ಯಗಳನ್ನು, ವರ್ಣ- ಜಾತಿ ವ್ಯವಸ್ಥೆಯನ್ನು , ಪಾಳೆಯಗಾರಿ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಬಲ ಪಂಥ ರೂಪುಗೊಂಡಿದ್ದವು. ಕಾಂಗ್ರೆಸ್‌ನ ಒಳಗೇ ಇದ್ದು ಹಿಂದೂ ಮಹಾ ಸಭಾದ ನಾಯಕರಾಗಿದ್ದ ಮದನ ಮೋಹನ ಮಾಳವೀಯ, ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕರ ಹಿಂಬಾಲಕರು , ಸರ್ದಾರ್ ವಲ್ಲಭಬಾಯ್ ಪಟೇಲ್, ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮೊದಲಾದವರು ಈ ಬಲಪಂಥದವರು. ಗಾಂಧೀಜಿ ಇದರ ನಾಯಕರು.

ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕು;
ವರ್ಣ-_ಜಾತಿ ವ್ಯವಸ್ಥೆ , ಪಾಳೆಯಗಾರೀ ಮೌಲ್ಯಗಳು , ದೊಡ್ಡ ಭೂಮಾಲಕರ ಹಿಡಿತ ವ್ಯವಸ್ಥೆ ತೊಲಗಬೇಕು ,
ಪ್ರಜಾಪ್ರಭುತ್ವ, ಗಣರಾಜ್ಯ ಅಸ್ತಿತ್ವಕ್ಕೆ ಬರಬೇಕು ಎಂಬ ಪ್ರಮುಖ ತತ್ವಗಳಿಗೆ ಈ ಬಲಪಂಥೀಯರ ವಿರೋಧ.

ಇಂತಹ ನಿಲುವುಗಳನ್ನು ಒಪ್ಪದವರು ಕಾಂಗ್ರೆಸ್‌ನ ಒಳಗೇ ಎಡಪಂಥದವರಾದರು. ಮೇಲೆ ಹೇಳಿದಂತೆ ಬೋಸ್, ನೆಹರೂ ಇದರ ಮೊದಲ ನಾಯಕರು. ನಂತರ ಜೆಪಿ, ಇಎಂಎಸ್ ಸೇರಿ ಕಾಂಗ್ರೆಸ್‌ನೊಳಗೇ ಕಾಂಗ್ರೆಸ್ ಸಮಾಜವಾದಿ ಪಕ್ಷ ಕಟ್ಟಿಕೊಂಡರು. ಹಲವು ರಾಜ್ಯಗಳಲ್ಲಿ ಇದು ಬೆಳೆಯಿತು.
ಕಾಂಗ್ರೆಸ್‌ನ ಒಳಗೆ ಮತ್ತು ಹೊರಗೆ ರೈತ,ಕಾರ್ಮಿಕ ಚಳುವಳಿಗಳನ್ನು ಬೆಳೆಸುತ್ತಿದ್ದ ಕಮ್ಯೂನಿಸ್ಟ್ ಪಕ್ಷ ಕೂಡಾ ಈ ಎಡ ಪಂಥದ ಅಂಗವಾಯಿತು.

ಈ ಎಲ್ಲರನ್ನೂ ಒಳಗೊಂಡ ಎಡಪಂಥ ಗಾಂಧೀಜಿಯವರನ್ನೇ ಹಿಮ್ಮೆಟ್ಟಿಸುವ, ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಗಾಂಧೀಜಿಯವರ ಅಭ್ಯರ್ಥಿಯನ್ನೇ ಸೋಲಿಸಿ 1936ರಲ್ಲಿ ಸುಭಾಷರನ್ನು ಗೆಲ್ಲಿಸುವ ಶಕ್ತಿ ಪಡೆಯಿತು.
ಆಗ ಗಾಂಧೀಜಿ ಎಡಪಂಥದವರ ಮೇಲೆ ಸಮರ ಸಾರಿದರು. ಬಲಪಂಥೀಯರೆಲ್ಲರೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿ ಸುಭಾಷರ ಅಧ್ಯಕ್ಷತೆಯನ್ನು ನಿಷ್ಕ್ರಿಯಗೊಳಿಸಿದರು. ನೆಹರೂರವರನ್ನು ತಮ್ಮೆಡೆಗೆ ಸೆಳೆದುಕೊಂಡರು.
ಆಗಲೇ ಸುಭಾಷರು ಕಾಂಗ್ರೆಸ್ ತ್ಯಜಿಸಿ ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಎಡ ಪಕ್ಷವನ್ನು ಕಟ್ಟಿದರು.

ನಂತರ ಭಾರತದಲ್ಲಿ ಎಡ ಪಂಥೀಯರೆಂದರೆ ಕಾಂಗ್ರೆಸ್‌ನ ಎಡ ಪಂಥ, ಲೋಹಿಯಾ, ಕೃಪಲಾನಿ ಸೇರಿದಂತೆ ಸಮಾಜವಾದಿ ಪಕ್ಷದ ಹಲವು ಬಣಗಳು, ಅಂಬೇಡ್ಕರ್‌ರವರ ರಿಪಬ್ಲಿಕನ್ ಪಕ್ಷ, ಕಮ್ಯೂನಿಸ್ಟ್ ಪಕ್ಷ , ಮುಂದೆ ಅದರ ಎರಡು ವಿಭಜಿತ ಅಂಗಗಳಾದ ಸಿಪಿಎಂ, ಸಿಪಿಐ ಪಕ್ಷಗಳು, ಫಾರ್ವರ್ಡ್ ಬ್ಲಾಕ್ ಮುಂತಾದವುಗಳು ಎಡಪಂಥೀಯ ಪಕ್ಷಗಳೆಂದು ಪರಿಗಣಿತವಾಗಿದ್ದವು.

ನಕ್ಸಲೀಯರು ಎಡ ಪಂಥೀಯ ಎಂದು ಪರಿಗಣಿತವಾಗಿರಲಿಲ್ಲ. ಕೆಲ ಕಾಲಾನಂತರ ಸಶಸ್ತ್ರ ಕ್ರಾಂತಿಯ ದಾರಿಯನ್ನು ತ್ಯಜಿಸಿ ಜನ ಚಳುವಳಿಯ ಹಾದಿಗೆ ಮರಳಿದ ಒಂದೆರಡು ಬಣಗಳು ಮಾತ್ರ ಇಂದು ಎಡ ಪಂಥೀಯ ಚಳುವಳಿಯ ಭಾಗವಾಗಿವೆ.

ಒಟ್ಟುನಲ್ಲಿ ಪಾಳೆಯಗಾರಿ ವ್ಯವಸ್ಥೆ, ಅದರ ಭಾಗವಾದ ವರ್ಣ- ಜಾತಿ ಬೇಧ, ವಸಾಹತುಶಾಹಿ, ಅಮೇರಿಕ ನೇತೃತ್ವದ ಸಾಮ್ರಾಜ್ಯಶಾಹಿ
ವಿರುದ್ಧ ಮತ್ತು ಪ್ರಜಾಪ್ರಭುತ್ವ, ಸಮಾನತೆಯ ಪರ ಇರುವವರೆಲ್ಲರೂ ಎಡ ಪಂಥ ಎಂಬುದು ಅದರ ವಿವರಣೆಯ ಭಾಗ.
ಆದರೆ ವಿವಿಧ ಹಂತಗಳಲ್ಲಿ ಸಮಾಜವಾದಿ ಪಕ್ಷದ ವಿವಿಧ ಬಣಗಳು ತಮ್ಮ ಸ್ವತಂತ್ರ ಅಸ್ತಿತ್ವ ಕಳೆದುಕೊಂಡು ಕಾಂಗ್ರೆಸ್ ಅಥವಾ ಬಿಜೆಪಿ ಸೇರಿದವು. ಕಾಂಗ್ರೆಸ್‌ನ ಒಳಗಡೆಯ ಎಡ ಪಂಥ ಚಂದ್ರಶೇಖರ್ ನಾಯಕತ್ವದಲ್ಲಿ ಹೊರಬಂದು ಜನತಾ ದಳ ಸೇರಿತು.

ಈಗ ಎಡ ಪಕ್ಷಗಳೆಂದರೆ ಎರಡು ಕಮ್ಯೂನಿಸ್ಟ್ ಪಕ್ಷಗಳು, ಫಾರ್ವರ್ಡ್ ಬ್ಲಾಕ್ , ರೆವಲ್ಯೂಷನರಿ ಸಮಾಜವಾದಿ ಪಕ್ಷ, ಎಸ್‌ಯುಸಿಐ, ಸಶಸ್ತ್ರ ಕ್ರಾಂತಿ ತ್ಯಜಿಸಿದ ಎರಡು ನಕ್ಸಲೀಯ ಬಣಗಳು.‌ಹೀಗಾಗಿ ಎಡ ಪಕ್ಷಗಳೆಂದರೆ ಕಮ್ಯೂನಿಸ್ಟ್ ಎಂದಾಗಿರುವುದು ವಿಷಾದನೀಯ ಸ್ಥಿತಿ.
ರಾಜಕೀಯ ಪಕ್ಷಗಳ ಹೊರಗೆ ಸಮಾಜವಾದಿ ಚಿಂತಕರು, ವಿಶಾಲ ಎಡಪಂಥದ ಭಾಗವಾಗಿರುವ ಅಕಾಡೆಮಿಕ್ ,ಸಾಹಿತಿ, ಕಲಾವಿದರು, ದಲಿತ, ಮಹಿಳಾ, ಆದಿವಾಸಿ ಸಾಮಾಜಿಕ ಚಳುವಳಿಗಾರರು ಇದ್ದಾರೆ. ಆದರೆ ಒಂದು ಒಗ್ಗಟ್ಟನ್ನು ರೂಪಿಸಿಕೊಂಡಿಲ್ಲ.
ಇದು ಭಾರತದ ಎಡಪಂಥದ ಸಂಕ್ಷಿಪ್ತ ಚರಿತ್ರೆ.

  • ಕೃಪೆ : ಫೇಸ್‌ಬುಕ್‌ ಪೋಸ್ಟ್

ಜಿ.ಎನ್. ನಾಗರಾಜ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version