ರಾಜಕೀಯ

ಬರಿದಾದ ಖಜಾನೆ-ಮೋದಿ ಸರ್ಕಾರದ ಬಳುವಳಿ

Published

on

  • ಮೋದಿ ಸರ್ಕಾರದ ಆಡಳಿತಾವಧಿಯ ಕಡೆಯ ವರ್ಷದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ ಕಮ್ಮಿಯೆಂದರೂ ರೂ. 1.75 ಲಕ್ಷ ಕೋಟಿಗಳಷ್ಟು ಕೊರತೆ ಉಂಟಾಗಿದೆ. ಇದು ಒಟ್ಟು ಜಿಡಿಪಿಯ ಶೇ. 1 ಕ್ಕೆ ಹತ್ತಿರ ಇದೆ. ಈ ಮೊತ್ತದ ಪ್ರಮಾಣ ಎಷ್ಟೆಂದರೆ ಇದರಿಂದ ಮೋದಿ ಸರಕಾರ ಕೊನೆಯ ಬಜೆಟಿನಲ್ಲಿ ಸಣ್ಣ ರೈತರಿಗೆಂದು ಪ್ರಕಟಿಸಿದ ವಾರ್ಷಿಕ 6000 ರೂ. ಆದಾಯ ಬೆಂಬಲವನ್ನು ಅವರಿಗೆ ಮಾತ್ರವಲ್ಲ ದೇಶದ ಎಲ್ಲ ಕುಟುಂಬಗಳಿಗೂ ಕೊಡಬಹುದು. ಅಥವ 15 ಕೋಟಿ ಕುಟುಂಬಗಳಿಗೆ ಅಂದರೆ ನಮ್ಮ ದೇಶದ ಜನ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಪ್ರತಿ ತಿಂಗಳು ರೂ.1000 ದಂತೆ ಒಂದಿಲ್ಲೊಂದು ರೀತಿಯಲ್ಲಿ ಆದಾಯ ಬೆಂಬಲ ಕೊಡಬಹುದಾಗಿತ್ತು ಈ ಹಿನ್ನೆಲೆಯಲ್ಲಿ ದೇಶದ ಮುಂದಿರುವ ಪ್ರಶ್ನೆ- ಮೇ ತಿಂಗಳ ಕೊನೆಯಲ್ಲಿ ಬಲಿಷ್ಟ ಹಿತಾಸಕ್ತಿಗಳನ್ನು ಎದುರಿಸಿ ನಿಲ್ಲಬಲ್ಲ ಮತ್ತು ಜನಪರವಾದ ಪರ್ಯಾಯವನ್ನು ದಿಟ್ಟತನದಿಂದ ಆಯ್ದುಕೊಳ್ಳಬಲ್ಲ ಒಂದು ಮಜಬೂತ್ ಸರಕಾರ ಬರುವುದೇ ಎಂಬುದು.

ಪ್ರೊ. ಸುರಜಿತ್ ಮಜುಂದಾರ್

1 ಏಪ್ರಿಲ್ 2019 ರಂದು ಹಣಕಾಸು ಸಚಿವಾಲಯ ಮಾರ್ಚ್ 2019 ರ ಜಿಎಸ್‌ಟಿ ಸಂಗ್ರಹದ ಬಗ್ಗೆ ಹೇಳಿಕೆ ನೀಡಿದ್ದು ಅದು ಪ್ರಸಕ್ತ ಹಣಕಾಸು ವರ್ಷದ ಕಡೆಯ ತಿಂಗಳು ಆಗಿದೆ. ಈ ಹೇಳಿಕೆ ಪ್ರಕಾರ ಮಾರ್ಚ್ ತಿಂಗಳಲ್ಲಿ ಸಂಗ್ರಹವಾದ ರೂ. 1,06,577 ಕೋಟಿ ಜಿಎಸ್‌ಟಿ ಕಾರ್ಯರೂಪಕ್ಕೆ ಬಂದನಂತರ ಗಳಿಸಿರುವ ಅತ್ಯದಿಕ ಮೊತ್ತವಾಗಿದೆ. ಆದರೆ ಈ ವಿಷಯದಲ್ಲಿ ಮರೆಮಾಚುತ್ತಿರುವ ಸಂಗತಿಯೆಂದರೆ ಫೆಬ್ರುವರಿ 1, 2019 ರಂದು ಮಂಡಿಸಿದ ಬಜೆಟ್‌ನಲ್ಲಿ ಪರಿಷ್ಕರಿಸಿದ ಜಿಎಸ್‌ಟಿ ಆದಾಯದ ಪುನರ್ ಅಂದಾಜಿಗಿಂತಲೂ ಬಹಳ ಕಡಿಮೆಯಿದೆ. ವಾಸ್ತವವಾಗಿ ಈ ಪರಿಷ್ಕೃತ ಅಂದಾಜೇ ಕಳೆದ ವರ್ಷದ ಬಜೆಟಿನಲ್ಲಿ ಇರಿಸಿಕೊಂಡಿದ್ದ ಗುರಿಗಿಂತ ಒಂದು ಲಕ್ಷ ಕೋಟಿ ರೂ. ಕಡಿಮೆಯಾಗಿದೆ.

ಕೇಂದ್ರ ಸರ್ಕಾರದ ಕಂಟ್ರೊಲರ್ ಜನರಲ್ ಆಫ್ ಅಕೌಂಟ್ಸ್ ಅವರ ವೆಬ್‌ಸೈಟ್‌ನಲ್ಲಿ ಫೆಬುವರಿ 2019 ರ ವರೆಗಿನ ಲೆಕ್ಕದ ವಿವರವನ್ನು ಪ್ರಕಟಿಸಲಾಗಿದೆ. ಇದರಂತೆ ಜಿಎಸ್‌ಟಿಯ ಎಲ್ಲಾ ಆದಾಯಗಳ ಮೊತ್ತ ಫೆಬ್ರವರಿ ೨೦೧೯ ಕ್ಕೆ ರೂ. 5,26,680 ಕೋಟಿ, ಈ ಬಜೆಟಿನ ಪರಿಷ್ಕೃತ ಅಂದಾಜು ರೂ. 6,43,900 ಕೋಟಿ, ಅಂದರೆ ಆದಾಯ ಗಳಿಕೆಯ ಗುರಿಗಿಂತ ರೂ.1,17,220 ಕೋಟಿ ಕಡಿಮೆ ಮತ್ತು ಕಳೆದ ಬಜೆಟ್‌ನಲ್ಲಿ ಮಂಡಿಸಿದ ಅಂದಾಜು ರೂ.7,43,900 ಕೋಟಿ.

ಅಂದರೆ ಒಟ್ಟು ಸಂಗ್ರಹವಾಗಿರುವ ಮೊತ್ತ ಪರಿಷ್ಕೃತ ಅಂದಾಜಿನ ಗುರಿ ಮುಟ್ಟಿರುವುದಿಲ್ಲ. ಮಾರ್ಚ್ ತಿಂಗಳಲ್ಲಿ ಸಂಗ್ರಹಿಸಿದ ದಾಖಲೆ ಆದಾಯದಲ್ಲಿ 51,209 ಕೋಟಿ ರೂ. ಗಳನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕಿದ್ದು ಮತ್ತು ಉಳಿದ ರೂ. 55,368 ಕೋಟಿ ಯಲ್ಲಿ ಜಿಎಸ್‌ಟಿ ಪರಿಹಾರಕ್ಕಾಗಿ ಇಟ್ಟಿರುವ ರೂ. 8000 ಕೋಟಿ ಸೇರಿರುತ್ತದೆ. ಈ ಎಲ್ಲವನ್ನೂ ಕೇಂದ್ರದ ಲೆಕ್ಕಕ್ಕೆ ಸೇರಿಸಿದರೂ ಮೊತ್ತ ರೂ5,82,048 ಕೋಟಿ ಆಗುತ್ತದಷ್ಟೇ. ಒಟ್ಟು ಕೇಂದ್ರ ಸರ್ಕಾರದ ಸಂಗ್ರಹಿಸಿರುವ ಜಿಎಸ್‌ಟಿ ತೆರಿಗೆ ಸಂಗ್ರಹ 5,82,048 ಕೋಟಿಯಾಗಿದ್ದು. ಇದು ಪರಿಷ್ಕೃತ ಬಜೆಟ್ ಅಂದಾಜಿಗಿಂತ ರೂ.61,852 ಕೋಟಿ ಕಡಿಮೆಯಾಗಿದ್ದರೆ, ಮೂಲ ಬಜೆಟ್‌ಗಿಂತ ರೂ. 1.62 ಲಕ್ಷ ಕೋಟಿ ಕಡಿಮೆಯಾಗಿದೆ.

ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿನ ತೀವ್ರ ಕೊರತೆ ಕೇಂದ್ರ ಸರ್ಕಾರದ ಅಪ್ರತ್ಯಕ್ಷ ತೆರಿಗೆ ಸಂಗ್ರಹವನ್ನು ತೀವ್ರವಾಗಿ ತಟ್ಟುತ್ತದೆ, ಏಕೆಂದರೆ ಇದು ಅಪ್ರತ್ಯಕ್ಷ ತೆರಿಗೆ ಆದಾಯಗಳ ಬಹುಮುಖ್ಯವಾದ ಭಾಗವಾಗಿದೆ. 2018-19ಪರಿಷ್ಕೃತ ಅಂದಾಜಿನ ಪ್ರಕಾರ ಜಿಎಸ್‌ಟಿ ಒಟ್ಟು ಅಪ್ರತ್ಯಕ್ಷ ತೆರಿಗೆ ಸಂಪನ್ಮೂಲದ ಶೇ. 60 ಭಾಗವಾಗಿದೆ. ಉಳಿದ ಅಪ್ರತ್ಯಕ್ಷ ತೆರಿಗೆ ಸಂಗ್ರಹವೂ ತೃಪ್ತಿಕರವಾಗಿಲ್ಲವೆಂದು ಕಂಡು ಬರುತ್ತಿದೆ.

ಎಪ್ರಿಲ್ 2018ರಿಂದ-ಫೆಬ್ರುವರಿ 2019ರ ಅಂಕಿಅಂಶಗಳನ್ನು ಗಮನಿಸಿದರೆ ನಾಮಿನಲ್ ಜಿಡಿಪಿ ಹಿಂದಿನ ಸಾಲಿಗಿಂತ ಶೇ. 11.5 ಹೆಚ್ಚಳ ಸಾಧಿಸಿದ್ದರೂ, ಈ 11 ತಿಂಗಳ ಅವಧಿಯಲ್ಲಿ (ಏಪ್ರಿಲ್- ಫೆಬ್ರವರಿ) ಹಿಂದಿನ ಹಣಕಾಸು ವರ್ಷದ ಅದೇ 11ತಿಂಗಳ ಆದಾಯದೊಂದಿಗೆ ಹೋಲಿಸಿದರೆ ಅಪ್ರತ್ಯಕ್ಷ ತೆರಿಗೆ ಹೆಚ್ಚಳ ಕೇವಲ ಶೇ2%ಆಗಿದೆ. ಆದ್ದರಿಂದ ಮಾರ್ಚ್ 2019ರ ಈ ‘ಬೃಹತ್’ ಹೆಚ್ಚಳ ಸಹಾ ಒಟ್ಟಾರೆ ಕೊರತೆಯನ್ನು ಕಡಿಮೆ ಮಾಡುವುದಿಲ್ಲ. ಮಾರ್ಚ್ ತಿಂಗಳಿನಲ್ಲಿ ಅಪ್ರತ್ಯಕ್ಷ ತೆರಿಗೆಗಳ ಸಂಗ್ರಹದಲ್ಲಿ 20% ಆಗಿದ್ದರೂ ಕೂಡ, ಒಟ್ಟಾರೆ ಕೊರತೆ 1 ಲಕ್ಷ ಕೋಟಿ ರೂ. ಮೀರಲಿದೆ ಮತ್ತು ಮೂಲ ಬಜೆಟ್‌ಗಿಂತ 2 ಲಕ್ಷ ಕೋಟಿಗಳಿಗಿಂತ ಹೆಚ್ಚಾಗಲಿದೆ.

ನಿಚ್ಚಳವಾಗಿ ಜಿಎಸ್‌ಟಿ ಮೂಲಕ ಅಪ್ರತ್ಯಕ್ಷ ತೆರಿಗೆ ಆದಾಯ ಹೆಚ್ಚುವುದೆಂಬ ಆಶಯ ಕುಸಿಯುತ್ತಿದೆ. ಇದೇ ಸಂದರ್ಭದಲ್ಲಿ ನೇರ ತೆರಿಗೆ ಸಂಗ್ರಹವೂ ಹೆಚ್ಚಾಗಿರುವುದಿಲ್ಲ. ಕಾರ್ಪೋರೇಟ್ ತೆರಿಗೆ ಸಂಗ್ರಹ ಪರಿಷ್ಕೃತ ಬಜೆಟ್ ಅಂದಾಜಿನಂತೆ ಇರಬೇಕಾದರೆ ಮಾರ್ಚ್ 2018 ಗಿಂತ ಮಾರ್ಚ್ 2019 ರಲ್ಲಿ 22.74% ಹೆಚ್ಚಳ ಕಾಣಬೇಕಿದೆ. ಎಪರಿಲ್-ಫೆಬ್ರುವರಿ ಅವಧಿಯಲ್ಲಿ ಕಾಣ ಬಂದಿರುವ ಹೆಚ್ಚಳದ ಪ್ರಮಾಣ ೧೫.೪೩, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಣೆ ಆಗಬೇಕಿದೆ.

ವೈಯುಕ್ತಿಕ ವರಮಾನ ತೆರಿಗೆ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷದ ಬಜೆಟ್ ಬಹಳ ಆಶಾದಾಯಕ ಅಂದಾಜು ಮಾಡಿತ್ತು, ಇದನ್ನು ಈ ಬಾರಿಯ ಪರಿಷ್ಕೃತ ಅಂದಾಜಿನಲ್ಲೂ ಉಳಿಸಿಕೊಳ್ಳಲಾಗಿದೆ. ಆದರೆ ನೋಟ್‌ರದ್ಧತಿಯ ನಂತರ ಸತತವಾಗಿ ಎರಡನೇಯ ವರ್ಷವೂ ಈ ಬಾಬ್ತಿನ ಸಂಪನಮೂಲ ಸಂಗ್ರಹ ಮೂಲ ಬಜೆಟ್/ ಪರಿಷ್ಕೃತ ಅಂದಾಜಿನ ಹತ್ತಿರವೂ ಬರುವಂತಿಲ್ಲ. ಎಪ್ರಿಲ್-ಫೆಬ್ರವರಿ 11 ತಿಂಗಳ ಅವಧಿಯಲ್ಲಿನ ಸಂಗ್ರಹವನ್ನು ಗಮನಿಸಿದರೆ, ಕನಿಷ್ಠ ರೂ. 50,000 ಕೋಟಿ ಕೊರತೆ ತೋರಿಸಲಿದೆ. ಇದರ ಫಲಿತಾಂಶವೆಂದರೆ, ಒಟ್ಟು ವರಮಾನ ತೆರಿಗೆ ಜಿಡಿಪಿಯ ಕೇವಲ 2.5% ಮಾತ್ರ ಆಗಬಹುದು. ಅಂದರೆ ಅದೇ ನಿಧಾನಗತಿಯ ಏರಿಕೆ.

ತೆರಿಗೆ ತೆರಬೇಕಾದ ಶ್ರೀಮಂತ ವಿಭಾಗಗಳ ಆದಾಯಗಳಲ್ಲಿ ತ್ವರಿತ ಹೆಚ್ಚಳವಾಗಿದ್ದರೂ, ನೊಟುರದ್ಧತಿಯ ನಂತರವೂ ವರಮಾನ ತೆರಿಗೆಯ ಆದಾಯದ ಸಂಗ್ರಹದ ಏರಿಕೆಯ ಗತಿ ಮಾತ್ರ ಹಿಂದಿನಂತೆಯೇ ನಿಧಾನವಾಗಿಯೇ ಇದೆ.

ನೋಟುರದ್ಧತಿ ಕ್ರಮದಿಂದಾಗಿ ತೆರಿಗೆ ರಿಟರ್ನ್ ಸಲ್ಲಿಸುವರ ಸಂಖ್ಯೆ ಹೆಚ್ಚಾಗಿದೆ ಎಂದು ಸರಕಾರೀ ಪ್ರಚಾರಯಂತ್ರ ಸಾರುತ್ತಿದೆ. ವಾಸ್ತವವಾಗಿ ಈ ಪ್ರವೃತ್ತಿ ನೋಟುರದ್ಧತಿಯ ಮೊದಲೇ ಕಂಡು ಬಂದಿತ್ತು. ಈಗ ಇದೇ ರೀತಿಯ ಕತೆಯನ್ನು ಜಿಎಸ್‌ಟಿ ಬಗ್ಗೆಯೂ ಹೇಳಲಾಗುತ್ತಿದೆ. ಈ ಅಂಕಿ ಅಂಶಗಳು ಮರೆಮಾಚುತ್ತಿರುವ ಸಂಗತಿಯೆಂದರೆ, ತೆರಿಗೆ ಬಲೆಯಲ್ಲಿನ ಸಂಖ್ಯೆಗಳಿಗೂ ಮತ್ತು ತೆರಿಗೆ ಆದಾಯಕ್ಕೂ ಯಾವುದೇ ನೇರ ಸಂಬಂಧವಿಲ್ಲವೆಂಬುದು.

ವರಮಾನ ತೆರಿಗೆ ರಿಟರ್ನ್ ಸಲ್ಲಿಸುವ ಶೇ. 90 ರಷ್ಟು ಜನ ಯಾವ ತೆರಿಗೆಯನ್ನು ಕಟ್ಟಿರುವುದಿಲ್ಲ ಅಥವಾ ಬಹಳ ಕಡಿಮೆ ತೆರಿಗೆ ಕಟ್ಟುತ್ತಾರೆ ಮತ್ತು 57% ತೆರಿಗೆ ಮೊತ್ತ ಸಂಬಳಗಳ ಮೂಲದಿಂದ ಬರುತ್ತಿದೆ, ವ್ಯಾಪಾರ-ವ್ಯವಹಾರಗಳ ಮೂಲದಿಂದ ಬರುವ ತೆರಿಗೆ ಆದಾಯಗಳ ಪ್ರಮಾಣ ಇದರ ಅರ್ಧದಷ್ಟು ಮಾತ್ರ. ಈ ಅಂಶಗಳನ್ನು ಗಮನಿಸಿ- ಆದಾಯ ತೆರಿಗೆ ಇಲಾಖೆ ಡಿಸೆಂಬರ್ 2018ರ ವರೆಗೆ 37 ಕೋಟಿ ವ್ಯಕ್ತಿಗಳಿಗೆ ವ್ಯಕ್ತಿಗಳಿಗೆ ಪಾನ್ ಕಾರ್ಡ್ ಅಂದರೆ ತೆರಿಗೆದಾರರ ಶಾಶ್ವತ ಅಕೌಂಟ್ ಸಂಖ್ಯೆ ನೀಡಿದೆ.

ಇದು ತೆರಿಗೆ ರಿಟರ್ನ್ ಸಲ್ಲಿಸುವವರ ಸಂಖ್ಯೆಯ 5 ಪಟ್ಟಿಗಿಂತಲೂ ಹೆಚ್ಚು ಮತ್ತು ದೇಶದ ಒಟ್ಟು ದುಡಿಮೆಗಾರರ 75% ದಷ್ಟು!ಆದ್ದರಿಂದ ಮೋದಿ ಸರ್ಕಾರದ ಆಡಳಿತಾವಧಿಯ ಕಡೆಯ ವರ್ಷದಲ್ಲಿ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ತೆರಿಗೆ ಸಂಗ್ರಹದಲ್ಲಿ ರೂ. 1.5 ಲಕ್ಷ ಕೋಟಿ ಕೊರತೆಯಿರುವುದು ಕೇವಲ ಎರಡು ತಿಂಗಳ ಹಿಂದಿನ ಪರಿಷ್ಕೃತ ಅಂದಾಜಿನಲ್ಲಿ ವ್ಯಕ್ತವಾಗಿದೆ. ಈ ಪರಿಷ್ಕೃತ ಅಂದಾಜು ಈ ಹಣಕಾಸು ವರ್ಷಧ ಆರಂಭದ ಅಂದಾಜಿಗಿಂತ 23,000 ಕೋಟಿ ರೂ.ಗಳಷ್ಟು ಕಡಿಮೆಯಿರುವುದರಿಂದ ಒಟ್ಟು ತೆರಿಗೆ ಆದಾಯ ಸಂಗ್ರಹಣೆಯಲ್ಲಿ ಒಟ್ಟು ಕೊರತೆ ಕಮ್ಮಿಯೆಂದರೂ ರೂ. 1.75 ಲಕ್ಷ ಕೋಟಿಗಳಷ್ಟಾಗುತ್ತದೆ.

ಇದು ಒಟ್ಟು ಜಿಡಿಪಿಯ ಶೇ. 1 ಕ್ಕೆ ಹತ್ತಿರ ಇದೆ. ಈ ಮೊತ್ತದ ಪ್ರಮಾಣ ಎಷ್ಟೆಂದರೆ ಇದರಿಂದ ಮೋದಿ ಸರಕಾರ ಅದರ ಕೊನೆಯ ಬಜೆಟಿನಲ್ಲಿ ಸಣ್ಣ ರೈತರಿಗೆಂದು ಪ್ರಕಟಿಸಿದ ವಾರ್ಷಿಕ 6000 ರೂ. ಆದಾಯ ಬೆಂಬಲವನ್ನು ಅವರಿಗೆ ಮಾತ್ರವಲ್ಲ ದೇಶದ ಎಲ್ಲ ಕುಟುಂಬಗಳಿಗೂ ಕೊಡಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ೧೫ ಕೋಟಿ ಕುಟುಂಬಗಳಿಗೆ ಅಂದರೆ ನಮ್ಮ ದೇಶದ ಜನ ಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರಿಗೆ ಪ್ರತಿ ತಿಂಗಳು ರೂ. 1000 ದಂತೆ ಒಂದಿಲ್ಲೊಂದು ರೀತಿಯಲ್ಲಿ ಆದಾಯ ಬೆಂಬಲ ಕೊಡಬಹುದಾಗಿತ್ತು. ಕಡಿಮೆ ತೆರಿಗೆ ಸಂಗ್ರಹದಿಂದ ರಾಜ್ಯಗಳ ಪಾಲು ಸಹಿತ ಕಡಿತಗೊಳ್ಳಲಿದೆ. ಇದರೊಂದಿಗೆ ಜಿಎಸ್‌ಟಿ ತೆರಿಗೆ ಸಂಗ್ರಹದ ಕೊರತೆ ರಾಜ್ಯ ಸರ್ಕಾರಗಳಿಗೆ ತೀವ್ರ ಹೊಡೆತ ನೀಡಲಿದೆ.

2018-19 ರ ತೆರಿಗೆ ಸಂಗ್ರಹದಲ್ಲಿ ಕೊರತೆ ಉಂಟಾಗಿರುವುದರ ಅರ್ಥ, ವಿತ್ತೀಯ ಕೊರತೆ ಅಂದಾಜಿಗಿಂತ ಬಹಳ ಹೆಚ್ಚಿದೆ ಅಥವಾ ಮಾರ್ಚ್ ತಿಂಗಳಲ್ಲಿ ತೀವ್ರ ವೆಚ್ಚಗಳನ್ನು ತೀವ್ರವಾಗಿ ಕಡಿತ ಮಾಡಲಾಗಿದೆ ಎಂದೇ ಆಗುತ್ತದೆ. ಫೆಬ್ರವರಿ ತಿಂಗಳ ವರೆಗಿನ ಆದಾಯ ಮತ್ತು ಖರ್ಚಿನ ಪ್ರವೃತ್ತಿಯನ್ನು ನೋಡಿದಾಗ, ಹಣಕಾಸು ವರ್ಷ ಮುಗಿಯುವ ಒಂದು ತಿಂಗಳ ಹಿಂದೆಯೇ ಬಜೆಟ್ ಅಂದಾಜಿಗಿಂತ ೩೪% ಹೆಚ್ಚಾಗಿರುವುದು, ಅಥವ ಜಿಡಿಪಿಯ 4.5% ರಷ್ಟು ಆಗಿರುವುದು ಕಂಡು ಬರುತ್ತದೆ.

ಈ ಹಿನ್ನೆಲೆಯಲ್ಲಿ, ಮೇ ತಿಂಗಳ ಕೊನೆಯಲ್ಲಿ ಬರಲಿರುವ ಹೊಸ ಸರ್ಕಾರದ ಮುಂದಿರುವ ಸವಾಲೆಂದರೆ ವಿತ್ತೀಯ ಕೊರತೆಯನ್ನು ಜಿಡಿಪಿಯ 3% ಮಿತಿಯಲ್ಲಿಡಬೇಕು ಎಂಬ ಎಫ್‌ಆರ್‌ಬಿಎಂ ಕಾಯ್ದೆ ಹೇರಿರುವ ವಿಚಾರಹೀನ ಗೀಳನ್ನು ತ್ಯಜಿಸುವುದು, ಮತ್ತು ಶ್ರೀಮಂತರಿಂದ, ಸಂಪತ್ತುಳ್ಳವರಿಂದ ಹಾಗೂ ಬೃಹತ್ ಉದ್ದಿಮೆಗಳಿಂದ ಮುಲಾಜಿಲ್ಲದೆ ತೆರಿಗೆ ಸಂಗ್ರಹಿಸುವುದು. ಈ ಮೂಲಕ, ತೆರಿಗೆಗಳ್ಳತನ ತಮ್ಮ ದಿಂಬುಗಳ ಅಡಿಯಲ್ಲಿ ನೋಟಿನ ಕಂತೆಗಳನ್ನು ಬಚ್ಚಿಟ್ಟರಿಗಿಂತ ಹೆಚ್ಚಾಗಿ, ಬಹುಪಾಲು ತೆರಿಗೆ ಬಲೆಯಲ್ಲಿರುವವರಿಂದಲೇ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಳ್ಳ ಬೇಕಾಗುತ್ತದೆ. ಆದಾಯ ತೆರಿಗೆ ಮತ್ತು ಜಿಎಸ್‌ಟ್ ಸಂಗ್ರಹದಲ್ಲಿ ಕಂಡು ಬಂದಿರುವ ಪ್ರವೃತ್ತಿ ಕೂಡ ಇಂತಹುದೇ.

ಇದರ ಬದಲಾಗಿ ಹೊಸ ಸರಕಾರಕ್ಕೆ ಇರುವ ಏಕೈಕ ದಾರಿಯೆಂದರೆ, ಒಂದು ತೀವ್ರತರದ ಮಿತವ್ಯಯ ಎಂದು ಹೇಳುವ ದಾರಿ. ಅಂದರೆ ಜನಸಾಮಾನ್ಯರಿಗಾಗಿ ಮಾಡುವ ವೆಚ್ಚಗಳನ್ನು ಕಡಿತಗೊಳಿಸುವುದು. ಕಳೆದ ಒಂದು ದಶಕದಲ್ಲಿ ಬಂದ ಸರಕಾರಗಳು ಇದನ್ನೇ ಅನುಸರಿಸಿವೆ. ಇದು ಜನಸಾಮಾನ್ಯರ ಬದುಕನ್ನು ನರಕಗೊಳಿಸಿರುವ ದಾರಿ. ಮೋದಿ ಸರ್ಕಾರ ಮತ್ತೆ ಬಂದರೆ ಇದೇ ದಾರಿಯನ್ನು ಮುಂದುವರೆಸುತ್ತದೆ ಎಂಬುದು ಖಡಾಖಂಡಿತ.

ಆದ್ದರಿಂದಲೇ, ಜನಸಾಮಾನ್ಯರ ಮೇಲೆ ಇನ್ನೂ ಹೆಚ್ಚಿನ ದಾಳಿಯನ್ನು ತಪ್ಪಿಸಬೇಕಾದರೆ ಈ ಮೋದಿ ಸರ್ಕಾರವನ್ನು ಸೋಲಿಸುವುದು ಆದ್ಯ ಕರ್ತವ್ಯವಾಗಬೇಕು. ಆದರೆ ಪ್ರಶ್ನೆಯಿರುವುದು-ದೇಶಕ್ಕೆ ಒಂದು ನಿಜವಾಗಿಯೂ ಹೊಸ ಸರ್ಕಾರ ಬರುವುದೇ, ಬಲಿಷ್ಟ ಹಿತಾಸಕ್ತಿಗಳನ್ನು ಎದುರಿಸಿ ನಿಲ್ಲಬಲ್ಲ ಮತ್ತು ಜನಪರವಾದ ಒಂದು ಧೀರ ಪರ್ಯಾಯವನ್ನು ಆಯ್ದುಕೊಳ್ಳಬಲ್ಲ ಒಂದು ಮಜಬೂತ್ ಸರಕಾರ ಬರುವುದೇ ಎಂಬುದು.

(ಕೃಪೆ-ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಅನುವಾದ : ಎಂ.ಜಿ.ವೆಂಕಟೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version