ದಿನದ ಸುದ್ದಿ

ಮಾರ್ಚ್ 20 ಗುಬ್ಬಿ ದಿನ ವಿಶೇಷ |ಚೀಂವ್ ಚೀಂವ್ ಗುಬ್ಬಚ್ಚಿಯ ನೆನೆಯುವ ಸಮಯ

Published

on

ಸುದ್ದಿದಿನ,ಚಿತ್ರದುರ್ಗ: ಜನರ ಕಿವಿಗೆ ಇಂಪು ನೀಡುವ ಧ್ವನಿ. ಪುಟ್ಟ ದೇಹವನ್ನುನಿಟ್ಟುಕೊಂಡು ಮರ ಗಿಡಗಳ ಮೇಲೆ ಯುಗಾದಿಯ ತಳಿರು ತೋರಣದಂತೆ ಕುಳಿತು ಸೂರ್ಯನ ಬರುವಿಕೆಗೆ ಸ್ವಾಗತಮಾಡುವ ಪುಟ್ಟ ದೇಹದ ದೊಡ್ಡ ಆಕರ್ಷಣೆಯೇ ಈ ಗುಬ್ಬಚ್ಚಿಗಳು.

ಗಾತ್ರದಲ್ಲಿ ಚಿಕ್ಕದಾದ ಜನರ ಮೆಚ್ಚುಗೆ ಗಳಿಸಿದ ಪಕ್ಷಿಯಿದು, ಸದಾ ಗುಂಪು ಗುಂಪಾಗಿ ತನ್ನ ಸಹಚರರೊಂದಿಗೆ ಎಲ್ಲಿ ನೋಡಿದರೂ ಕಣ್ಣಿಗೆ ಬೀಳುವ, ಯಾವಾಗಲೂ ಒಗ್ಗಟ್ಟಿನಿಂದ ಚೀಂವ್ ಚೀಂವ್ ಸದ್ದು ಮಾಡುತ್ತಾ, ಹೆಚ್ಚಾಗಿ ಜನರ ಮಧ್ಯೆಯೇ ಬದುಕುವ ಪುಟ್ಟ ಪಕ್ಷಿಯೇ ಈ ಗುಬ್ಬಚ್ಚಿ.

ಸೂರ್ಯ ಮೂಡುವ ಮೊದಲೇ ಎಚ್ಚರಗೊಂಡು ಚೀಂವ್ ಚೀಂವ್ ಎಂದು ಸದ್ದು ಮಾಡುತ್ತಾ ಮುಂಜಾನೆಯ ಶುಭಾಶಯ ಹೇಳುವ ಗುಬ್ಬಚ್ಚಿಯನ್ನು ನೆನೆಯುವ ದಿನವೇ ವಿಶ್ವ ಗುಬ್ಬಚ್ಚಿ ದಿನವಾಗಿದೆ. ಈ ಎಲ್ಲಾ ವಿಶೇಷತೆಯಿಂದ ಆಕರ್ಷಿತವಾದ ಗುಬ್ಬಿ ಇಂದು ಅಳಿವಿನಂಚಿನತ್ತ ಸಾಗುತ್ತಿದೆ. ಇದರ ಇರುವಿಕೆ, ಹಾಗೂ ಗುಬ್ಬಚ್ಚಿಯ ಪ್ರಾಮುಖ್ಯತೆ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಿ ದಿನ ಆಚರಿಸಲಾಗುತ್ತಿದೆ.

ಇದನ್ನೂ ಓದಿ | ‘ಭಾಶಾಹೀನರ ಸಂಗ ಅಭಿಮಾನ ಭಂಗ’ | ದ್ವೇಶದ ಭಾಶೆ ಮತ್ತು ಪ್ರತಿದ್ವೇಶದ ಭಾಶೆಯ ಅಪಾಯಗಳು

ಗುಬ್ಬಚ್ಚಿಗಳು ಯಾವಾಗಲೂ ಜೊತೆಯಾಗಿದ್ದು ಕಂದು ಬಣ್ಣದಲ್ಲಿರುತ್ತವೆ. ಬೆನ್ನಿನ ಮೇಲೆ ಬಿಳಿ ಮತ್ತು ಕಪ್ಪು ಬಣ್ಣಗಳಿಂದ ಕೂಡಿರುತ್ತದೆ. ಈ ಗುಬ್ಬಚ್ಚಿಗಳು ವರ್ಷದಲ್ಲಿ ಮೂರ್ನಾಲ್ಕು ಬಾರಿ ಮೊಟ್ಟೆಗಳನ್ನು ಇಡುತ್ತವೆ. ಆದರೆ ಪ್ರಸ್ತುತ ಈ ಪಕ್ಷಿಗಳನ್ನು ನಾವು ಹುಡುಕಿಕೊಂಡು ಹೋಗಿ ನೋಡುವಂತಹ ಪರಿಸ್ಥಿತಿ ಬಂದಿದೆ.

ಮನೆಯ ಅಂಗಳದಲ್ಲಿ ಆಡುವ ಗುಬ್ಬಚ್ಚಿಗಳು ಜನರ ನಡುವೆ ವಾಸಿಸುವಂತಹುಗಳು. ಅತ್ಯಂತ ಸೂಕ್ಷ್ಮ ಸ್ವಭಾವದ ಜೀವಿಯಾಗಿರುವ ಗುಬ್ಬಿ. ಅಕ್ಕಿ, ರಾಗಿ, ಜೋಳ, ಸಣ್ಣ ಪುಟ್ಟ ಗೆದ್ದಲು ಹುಳುಗಳನ್ನು ತಿಂದು ಬದುಕುತ್ತದೆ. ಮನೆಯ ಅಂಗಳದಲ್ಲಿ ಸದಾ ಚಿಲಿ ಪಿಲಿ ಅನ್ನುವ ಈ ಗುಬ್ಬಚ್ಚಿಗಳ ಸಂತತಿ ಪ್ರಸ್ತುತ ದಿನಗಳಲ್ಲಿ ಅಳುವಿನ ಹಂಚಿಗೆ ಬಂದು ತಲುಪಿದೆ, ಅದಕ್ಕಾಗಿಯೇ ಈ ಆಚರಣೆಯನ್ನು ಆಚರಿಸಲಾಗುತ್ತದೆ.

ಗುಬ್ಬಿಗಳು ಈ ನಡುವೆ ಕಣ್ಮರೆಯಾಗಲು ಅನೇಕ ಕಾರಣಗಳಿವೆ. ಅಭಿವೃದ್ಧಿ ನೆಪದಲ್ಲಿ ಗಿಡ ಮರಗಳನ್ನು ಕಡಿಯಲಾಗುತ್ತಿದೆ. ಮರಗಳಿದ್ದ ಜಾಗದಲ್ಲಿ ಬಹುಮಹಡಿಯುಳ್ಳ ಕಟ್ಟಡಗಳು ತಲೆ ಎತ್ತುತ್ತಿವೆ. ಇದರಿಂದ ಗುಬ್ಬಚ್ಚಿಗಳಿಗೆ ಅಷ್ಟು ಎತ್ತರ ಹೋಗಿ, ಗೂಡು ಕಟ್ಟಲು ಕಷ್ಟವಾಗುತ್ತದೆ. ಅಲ್ಲದೇ ಇಂದಿನ ದಿನಮಾನಗಳಲ್ಲಿ ಫೋನ್ ಟವರ್‍ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಟವರ್ ಕಂಬದಿಂದ ಹೊರಬರುವ ವಿಕಿರಣಗಳಿಗೆ ಗುಬ್ಬಿ ಸಿಲುಕಿ, ನಾಶವಾಗುತ್ತಿವೆ ಎನ್ನಲಾಗುತ್ತಿದೆ.

ರೈತರ ಜಮೀನಿನಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದ್ದು, ಹೊಲಗಳಲ್ಲಿ ಗುಬ್ಬಿಗಳಿಗೆ ಆಹಾರವಾಗಿದ್ದ, ಸಣ್ಣ ಪುಟ್ಟ ಹುಳುಗಳು ಕಣ್ಮರೆಯಾಗಿದ್ದು, ಗುಬ್ಬಿಗಳಿಗೆ ಆಹಾರ ದೊರೆಯದಂತಾಗಿದೆ.

ಆಹಾರ ಕೊರತೆ ನೀಗಿಸೋಣ, ಗೂಡು ಕಟ್ಟಲು ಅವಕಾಶ ಕಲ್ಪಿಸೋಣ: ಅಗಾಧವಾಗಿ ಕಾಣಸಿಗುತ್ತಿದ್ದ ಗುಬ್ಬಿ ಇಂದು ಮಾನವನ ಅತಿಯಾದ ಆಧುನೀಕರಣದ ಪ್ರಭಾವದಿಂದ ಕಣ್ಮರೆಯಾಗಿವೆ. ಇಂದು ಬೆರಳೆಣಿಕೆಯಷ್ಟು ಗುಬ್ಬಿಗಳು ಕಾಣುತ್ತಿದ್ದು, ನಾವು ಅವುಗಳ ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ಬಳುವಳಿ ನೀಡಬೇಕಾಗಿದೆ. ಆದ ಕಾರಣ ನಾವು ನಮ್ಮ ಮನೆಯ ಮೇಲೆ ಅಥವಾ ಅಕ್ಕ ಪಕ್ಕದಲ್ಲಿ ಧಾನ್ಯಗಳನ್ನು ಹಾಗೂ ನೀರನ್ನು ನೀಡುವುದರ ಮೂಲಕ ಅವುಗಳ ಆಹಾರ ಕೊರತೆಯನ್ನು ಸ್ವಲ್ಪ ನೀಗಿಸೋಣ ಹಾಗೂ ಗುಬ್ಬಿ ಗೂಡು ಕಟ್ಟಲು ಸ್ಥಳಾವಕಾಶ ಕಲ್ಪಿಸೋಣ.

ಗುಬ್ಬಿಗಳ ಉಳಿವಿಗೆ ಜಾಗೃತಿ ಅಗತ್ಯ

ಚೀಂವ್ ಚೀಂವ್ ಎಂದು ಮುಂಜಾನೆಯಿಂದ ಸಂಜೆವರೆಗೂ ಮನೆಯ ಅಟ್ಟದಲ್ಲಿ ಮನೆಮಾಡಿಕೊಂಡಿದ್ದ ಈ ಪುಟ್ಟ ಹಕ್ಕಿ ಆಧುನಿಕ ನಾಗರೀಕತೆಯಿಂದ ಕಣ್ಮರೆಯಾಗುತ್ತಿದೆ. ಈ ಪುಟ್ಟ ಹಕ್ಕಿಯನ್ನು ನಮ್ಮ ಮುಂದಿನ ಪೀಳಿಗೆಗೆ ಚಿತ್ರದಲ್ಲಿ ತೋರಿಸುವ ಬದಲು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ. ಈ ನಿಟ್ಟಿನಲ್ಲಿ ಗುಬ್ಬಿಗಳ ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.

ಹೀಗೆಯೇ ಮನುಷ್ಯ ಸ್ವಾರ್ಥ ಜೀವನ ಮುಂದುವರಿಸುತ್ತಾ ಹೋದರೆ ಮುಂಬರುವ ಪೀಳಿಗೆಗಳು ಗುಬ್ಬಿಗಳನ್ನು ಅಥವಾ ಇತರೆ ಪಕ್ಷಿಗಳನ್ನು ಮೊಬೈಲ್‍ಗಳಲ್ಲಿ ತೋರಿಸುವ ಸಂದರ್ಭ ಬರಬಹುದು. ಈ ಪ್ರಕೃತಿಯಲ್ಲಿ ಮಾನವ ಜೀವಿಸಲು ಎಷ್ಟು ಹಕ್ಕಿದೆಯೂ ಪಕ್ಷಿ ಸಂಕುಲಕ್ಕೂ ಜೀವಿಸುವ ಹಕ್ಕಿದೆ ಅವುಗಳ ಇರುವಿಕೆಯನ್ನು ಮರೆಯದಿರಲಿ.

ಸಿ.ಶಶಿಕಲ, ಅಪ್ರೆಂಟಿಸ್ ತರಬೇತಾರ್ಥಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version