ಅಂತರಂಗ
‘ಭಾಶಾಹೀನರ ಸಂಗ ಅಭಿಮಾನ ಭಂಗ’ | ದ್ವೇಶದ ಭಾಶೆ ಮತ್ತು ಪ್ರತಿದ್ವೇಶದ ಭಾಶೆಯ ಅಪಾಯಗಳು
- ರಂಗನಾಥ ಕಂಟನಕುಂಟೆ
ಇದು ಬಹಳ ವಿಚಿತ್ರ ಸಂಗತಿಯಾದರೂ ವಾಸ್ತವದ ಸಂಗತಿ. ಅದೇನೆಂದರೆ ಆಧುನಿಕ ಭಾರತದಲ್ಲಿ ‘ಧರ್ಮ’ ಶಕ್ತಿರಾಜಕಾರಣದ ಕೇಂದ್ರಕ್ಕೆ ಬಂದ ನಂತರ ಸಾರ್ವಜನಿಕ ಭಾಶೆಯ ಸ್ವರೂಪವೇ ಬದಲಾಗಿ ಹೋಗಿದೆ. ಸದ್ಯದಲ್ಲಿ ಸಾರ್ವಜನಿಕ ಭಾಶೆ ಮುಕ್ತಮಾತುಕತೆಯ ಸಂವಾದದ ಚಹರೆಯನ್ನು ಕಳೆದುಕೊಂಡು ಆಕ್ರಮಣ ಮತ್ತು ಪ್ರತಿ ಆಕ್ರಮಣದ ಸ್ವರೂಪ ಪಡೆದುಕೊಂಡಿದೆ.
ಭಾಶೆಯನ್ನು ಬಳಸುವಾಗ ಸಹನೆ ಮತ್ತು ಲಜ್ಜೆಗಳ ಎಲ್ಲೆಯನ್ನು ಮೀರಲಾಗುತ್ತಿದೆ. ಅಲ್ಲದೆ ‘ಧರ್ಮ’ಗಳು ಬೋಧಿಸುವ ದಯೆ, ಕರುಣೆ, ಮಮತೆ, ಸಾಮರಸ್ಯ, ಸೌಹಾರ್ದತೆ, ಸಹಿಶ್ಣತೆಯ ಗುಣಗಳಿಗೆ ವಿರುದ್ಧವಾದ ‘ದ್ವೇಶದಭಾಶೆ’ ಮುಂಚೂಣಿಗೆ ಬಂದಿದೆ. ಇಲ್ಲಿನ ದುರಂತವೆಂದರೆ, ದ್ವೇಶದ ಭಾಶೆಯನ್ನು ಬಳಸುವ ಜನರನ್ನು ವಿರೋಧಿಸುವ ಭರದಲ್ಲಿ ಅವರ ವಿರೋಧಿಗಳು ಕೂಡ ‘ಆಕ್ರೋಶ ಮತ್ತು ಅಸಹನೆ’ಯ ಭಾಶೆಯನ್ನೇ ಬಳಸುತ್ತಿದ್ದಾರೆ. ದ್ವೇಶದ ಭಾಶೆಗೆ ಪ್ರತಿದ್ವೇಶದ ಭಾಶೆ ಬಳಕೆಯಾಗುತ್ತಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ದೇವರು ಮತ್ತು ಧರ್ಮಗಳು ಚರ್ಚೆಯ ಕೇಂದ್ರಕ್ಕೆ ಬಂದಾಗ ಅವುಗಳ ವಕ್ತಾರರ ಭಾಶೆ ಯಾವಾಗಲೂ ಒಂದು ಬಗೆಯ ಆಕ್ರಮಣಕಾರಿ ಗುಣವನ್ನೇ ಪಡೆದುಕೊಳ್ಳುವಂತೆ ಕಾಣುತ್ತದೆ. ಅದರಲ್ಲಿಯೂ ಏಕದೇವೋಪಾಸನೆಯನ್ನು ಪ್ರತಿಪಾದಿಸುವ ಎಲ್ಲ ಧಾರ್ಮಿಕ ಪಂಥಗಳು ಇಂತಹ ಆಕ್ರಮಣಕಾರಿ ಭಾಶೆಯನ್ನೇ ಬಳಸುವುದನ್ನು ಕಾಣಬಹುದು.
ಪುರಂದರದಾಸರು ತಮ್ಮದೊಂದು ಕೀರ್ತನೆಯಲ್ಲಿ, ‘ಮೂರ್ಖರಾದರು ಇವರು ಲೋಕದೊಳಗೆ ಏಕದೈವವ ಬಿಟ್ಟು ಕಾಕು ದೈವವ ಭಜಿಸಿ’ ಎನುತ್ತಾರೆ. ಇಲ್ಲಿ ತಾವು ನಂಬಿದ ದೈವ, ಧರ್ಮದ ವಿಚಾರಗಳ ಹೊರತಾಗಿರುವ ಜನರ ಬಗೆಗೆ ತಮ್ಮ ಭಿನ್ನಮತ ವ್ಯಕ್ತಪಡಿಸುವಾಗ ಅವರ ಭಾಶೆ ಕೊಂಚ ವ್ಯಂಗ್ಯ ಸೇರಿಕೊಂಡು ಒರಟಾಗುತ್ತದೆ. ಬಸವಣ್ಣ ಕೂಡ ಕೆಲವೊಮ್ಮೆ ಆಕ್ರಮಣಕಾರಿ ಭಾಶೆಯನ್ನೇ ಬಳಸುತ್ತಾನೆ.
ಭಕ್ತರ ಕಂಡರೆ ಬೋಳಪ್ಪಿರಯ್ಯ;
ಸವಣರ ಕಂಡರೆ ಬತ್ತಲೆಯಪ್ಪಿರಯ್ಯ,
ಹಾರುವರ ಕಂಡರೆ ಹರಿನಾಮವೆಂಬಿರಯ್ಯ
ಅವರವರ ಕಂಡರೆ ಅವರವರಂತೆ,
ಸೂಳೆಗೆ ಹುಟ್ಟಿದವರ ತೋರದಿರಯ್ಯ,
ಕೂಡಲಸಂಗಮಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ,
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯ –ಎಲ್ ಬಸವರಾಜು, ಪು.54
ಎನ್ನುತ್ತಾನೆ.
ಈ ವಚನದಲ್ಲಿ ‘ಸೂಳೆಗೆ ಹುಟ್ಟಿದವರ ತೋರದಿರಯ್ಯ’ ಎನ್ನುವಲ್ಲಿ ಒಂದು ಬಗೆಯ ಸಿಟ್ಟು ಆಕ್ರೋಶ ‘ಅಸಹನೆ’ ಎದ್ದು ಕಾಣಿಸುತ್ತದೆ. ಅವಕಾಶವಾದಿಗಳ ಹಾಗೆ ವರ್ತಿಸುವ ಭಕ್ತರ ಕಂಡು ವ್ಯಕ್ತಮಾಡುತ್ತಿರುವ ಸಿಟ್ಟು ಸಮಣರ, ಹಾರುವರ ಬಗೆಗಿನ ಸಿಟ್ಟು ಕೂಡ ಆಗಿದೆ. ಕೂಡಲಸಂಗಮನಲ್ಲದ ಇತರೆ ದೈವಗಳ ಬಗೆಗೆ ಆಸಕ್ತಿ ತೋರಿಸುವ ಜನರ ಬಗೆಗೆ ಇರುವ ಸಿಟ್ಟಿನ ಮೂಲದಲ್ಲಿ ದೇವರು ಮತ್ತು ಧರ್ಮ ಪರವಾದ ‘ಕಟ್ಟಾವಾದಿತನ’ ಎದ್ದು ಕಾಣಿಸುತ್ತದೆ.
ಅಂದರೆ ಧಾರ್ಮಿಕವಾದ ಭಾವನೆಯಲ್ಲಿ ಕಟ್ಟಾವಾದಿತನ ದೃಢವಾಗುವ ಹೊತ್ತಿನಲ್ಲಿ ಭಾಶೆ ವ್ಯಗ್ರ ಸ್ವರೂಪವನ್ನು ಪಡೆಯುವುದು ಅಚ್ಚರಿಯ ಸಂಗತಿ. ಜನಪದ ದೈವಗಳನ್ನು ಟೀಕಿಸುವ ಉತ್ಸಾಹದಲ್ಲಿ ಮಡಕೆ ದೈವ ಮೊರ ದೈವ ಕಲ್ಲು ದೈವಗಳೆಂದು ಬಸವಣ್ಣ ಜರಿಯುತ್ತಾನೆ. ಹಾಗೆಯೇ ವೈದಿಕ ಪರಂಪರೆಯನ್ನು ಟೀಕಿಸುವ ಉಮೇದಿನಲ್ಲಿ ಅಲ್ಲಮ ಕೂಡ ‘ಪುರಾಣವೆಂಬುದು ಪುಂಡರಗೋಶಿ’್ಟ ಎಂದುಬಿಡುತ್ತಾನೆ! ಅಕ್ಕಮಹಾದೇವಿ ತನ್ನದೊಂದು ವಚನದಲ್ಲಿ ‘ಗೋವಿಂದನ ನಯನ ತನ್ನ ಉಂಗುಶ್ಟದ ಮೇಲಿಪ್ಪುದು’ ಎನ್ನುತ್ತಾಳೆ. ಕನಕದಾಸ ವಿಶ್ಣು ಮತ್ತು ಶಿವರ ನಡುವೆ ಸಾಮರಸ್ಯ ಮೂಡಿಸಲು ಪ್ರಯತ್ನಿಸುತ್ತಾನೆ.
ಇದನ್ನೂ ಓದಿ |ಮಹಾಡ್: ದಲಿತರ ಚಾರಿತ್ರಿಕ ದಂಗೆಯ ಕಥನ
ಆದರೂ ಅವನಲ್ಲಿಯೂ ನಾರಾಯಣನಿಶ್ಟೆ ಉಗ್ರವಾಗಿ ವ್ಯಕ್ತವಾಗುವಾಗ ಅವನ ಭಾಶೆಯು ಆಕ್ರಮಣಕಾರಿಯಾಗುತ್ತದೆ. “ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದವರ ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು” ಎನ್ನುತ್ತಾನೆ. ಇಲ್ಲಿ ಕನಕ ಜನಪದ ದೈವಗಳನ್ನು ನಿರಾಕರಿಸುವಾಗ ವ್ಯಕ್ತಪಡಿಸಿರುವ ಮಾತಿನಲ್ಲಿ ಅಸಹನೆ, ಆಕ್ರೋಶವಿದೆ ಎನ್ನಿಸುತ್ತದೆ. ಠಕ್ಕು ದೇವರು ಎಂದು ಜರಿಯುವ, ವ್ಯಂಗ್ಯವಾಡುವ ಬಗೆಯಿದೆ. ‘ಜಡ ದೈವಗಳ ಪೂಜೆ ಬೇಡಿರೋ’ ಎಂದು ಕೊನೆಗೆ ಕರೆ ಕೊಡುತ್ತಾನೆ.
ಜನಪದ ದೈವಗಳು ಠಕ್ಕು ಮತ್ತು ಜಡದೇವರಾದರೆ ನಾರಾಯಣನೂ ಅಂತಹ ಠಕ್ಕಿನ ಮತ್ತು ಜಡದೇವರೇ ಅಲ್ಲವೇ? ಅಂದರೆ ತಮ್ಮ ದೇವರು ಧರ್ಮಗಳನ್ನು ಸಮರ್ಥಿಸಿಕೊಳ್ಳುವ ವಿಚಾರಕ್ಕೆ ಬಂದಾಗ ವಿರಾಗಿಗಳ ಸಂತರ ಭಾಶೆಯೂ ಸ್ವಲ್ಪ ಲಯ ತಪ್ಪಿ ಒರಟಾಗುತ್ತದೆ. ಅವರೂ ಅಸಹನೆಯ ಆಕ್ರೋಶದ ಭಾಶೆಯನ್ನೇ ಬಳಸಿರುವುದನ್ನು ಗಮನಿಸಬಹುದು. ಹಾಗೆಯೇ ಕೆಲವು ಜೈನ, ಶೈವ ಧರ್ಮೀಯ ಕವಿಗಳಲ್ಲಿಯೂ ಇಂತಹದೇ ಭಾಶೆ ಢಾಳಾಗಿ ಕಾಣಿಸುತ್ತದೆ. ನಮ್ಮ ಪರಂಪರೆಯಲ್ಲಿ ಧಾರ್ಮಿಕ ನಿಶ್ಟೆಯನ್ನು ಆತ್ಯಂತಿಕವಾಗಿ ವ್ಯಕ್ತಪಡಿಸುವ ಉತ್ಸಾಹದಲ್ಲಿ ‘ಅನ್ಯ’ವಾದುದು ಇಲ್ಲವೇ ತನ್ನ ‘ಎದುರಾಳಿ’ಗಳಿಗೆ ಸಂಬಂಧಿಸಿದ ವಿಚಾರಗಳನ್ನು ಅಲ್ಲಗಳೆಯುವ ಹೊತ್ತಿನಲ್ಲಿ ಆಕ್ರಮಣಕಾರಿಯಾದ ಭಾಶೆ ಬಳಸಿರುವುದನ್ನು ಕಾಣಬಹುದು
ಹೀಗೆ ವ್ಯಕ್ತಮಾಡಿರುವವರು ಮೂಲತಃ ಅನುಭಾವಿಗಳು, ಜ್ಞಾನಿಗಳು, ವಿರಾಗಿಗಳು, ಕವಿಗಳು ಮತ್ತು ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಮಹಾತ್ಮರು. ತಮ್ಮ ಆರಾಧ್ಯ ದೈವವನ್ನು ಪ್ರಾಮಾಣಿಕವಾಗಿ ನಂಬಿರುವ ನಿಜವಾದ ಭಕ್ತರು ಮತ್ತು ನಿಸ್ವಾರ್ಥಿಗಳು. ಇವರೂ ಕೂಡ ಅನ್ಯರ ಧಾರ್ಮಿಕ ನಿಶ್ಟೆ ಮತ್ತು ಎದುರಾಳಿಗಳ ವಿಚಾರವನ್ನು ಖಂಡಿಸುವ ಹೊತ್ತಿನಲ್ಲಿ ‘ದ್ವೇಶದ ಭಾಶೆ’ ಬಳಸಿದ್ದಾರೆ ಎನ್ನಲು ಬಾರದಿದ್ದರೂ, ಭಾವಾವೇಶದ, ಆಕ್ರೋಶದ ಭಾಶೆ ಬಳಸಿದ್ದಾರೆ ಎನ್ನಬಹುದು. ಇವರು ಬೇರೆಯವರನ್ನು ವಿಮರ್ಶೆ ಮಾಡಿದಶ್ಟು ತೀವ್ರವಾಗಿಯೇ ತಮ್ಮನ್ನೂ ವಿಮರ್ಶೆ ಮಾಡಿಕೊಂಡಿರುವುದು ತಿಳಿದು ಬರುತ್ತದೆ. ಇದು ಅವರ ಭಾಶೆಯನ್ನು ದ್ವೇಶದ ಭಾಶೆಯಾಗುವ ಅಪಾಯದಿಂದ ತಪ್ಪಿಸಿದೆ.
ಆದರೆ ಇಂದು ದೇವರು ಧರ್ಮಗಳ ಹೆಸರಿನಲ್ಲಿ ಮೂಲಭೂತವಾದಿಗಳಾಗಿ ಬದಲಾಗಿರುವ ‘ದೇಶಭಕ್ತರು’ ಬೇರೆಯವರ ಮೇಲೆ ದಾಳಿ ಮಾಡುವ ‘ದ್ವೇಶಭಕ್ತ’ರಾಗಿದ್ದಾರೆಯೇ ಹೊರತು ತಮ್ಮ ಧರ್ಮ, ಆಚರಣೆ ಮತ್ತು ವ್ಯಕ್ತಿಗತ ನಡತೆಗಳನ್ನು ವಿಮರ್ಶೆ ಮಾಡಿಕೊಳ್ಳುವುದೇ ಇಲ್ಲ. ಹಾಗಾಗಿ ಅಲ್ಲಿ ದ್ವೇಶದ ಭಾಶೆಯು ಹುಲುಸಾಗಿ ಬೆಳೆಯುತ್ತದೆ. ಅವರಿಂದ ಮತ್ತಾವುದೇ ಬಗೆಯ ಹೊಸ ಅರಿವು ಸೃಶ್ಟಿಯಾಗುವುದಿಲ್ಲ. ಅವರು ಕಿಚ್ಚಿನ ಬೊಂಬೆಗಳಂತಿದ್ದು ಬೇರೆಯವರನ್ನು ಸುಟ್ಟು ತಾವೂ ದಹಿಸಿಹೋಗುತ್ತಾರೆ. ಆತ್ಮವಿಮರ್ಶೆಯಿಲ್ಲದ ಮತ್ತು ಜ್ಞಾನದ ಗಂಧಗಾಳಿಯೂ ಇಲ್ಲದ ಅಜ್ಞಾನ-ಮೌಢ್ಯಗಳ ಮೂರ್ತ ರೂಪವಾಗಿರುವ ಧಾರ್ಮಿಕ ಮೂಲಭೂತವಾದಿಗಳು ಎಂದಿಗೂ ಯಾವುದೇ ಜ್ಞಾನವನ್ನು ಸೃಶ್ಟಿಸುವುದಿಲ್ಲ.
ಅವರು ದೇಶಕ್ಕೆ, ಮನುಕುಲಕ್ಕೆ ಅವರು ಕಂಟಕವಾಗಿರುತ್ತಾರೆಯೇ ಹೊರತು ಅವರು ಪರಿಹಾರವಾಗಿರುವುದಿಲ್ಲ. ಈ ಮೂಲಭೂತವಾದಿಗಳು/ಕೋಮುವಾದಿಗಳು ದೇವರು ಮತ್ತು ಧಾರ್ಮಿಕ ವಿಚಾರಗಳನ್ನು ಸ್ವಾರ್ಥ, ದ್ವೇಶದ ರಾಜಕಾರಣಕ್ಕೆ ಬಳಸುತ್ತಾರೆ. ಹಾಗಾಗಿಯೇ ಅವರ ಭಾಶೆ ದ್ವೇಶದ ಲೇಪನ ಪಡೆದುಕೊಂಡು ಬಳಕೆಯಾಗುತ್ತದೆ.
ಅಲ್ಲಮ ಬಸವಣ್ಣ ಕನಕ ಮುಂತಾದವರು ಆಳವಾದ ಜ್ಞಾನದೊಂದಿಗೆ ವೈಚಾರಿಕವಾಗಿ ಎದುರಾಳಿಗಳ ಚಿಂತನೆಯನ್ನು ಗೆಲ್ಲುವ ಹಠದಲ್ಲಿ ಕೊಂಚ ಆವೇಶದ ಭಾಶೆಯನ್ನು ಬಳಸುತ್ತಾರೆ. ಮತ್ತು ಹೊಸ ತಿಳಿವನ್ನು ಸೃಶ್ಟಿಸುತ್ತಾರೆ. ಆದರೆ ವೈಚಾರಿಕತೆ ಜ್ಞಾನಗಳ ಶತ್ರುಗಳಾಗಿರುವ ಎಲ್ಲ ಧರ್ಮಗಳ ಮೂಲಭೂತವಾದಿಗಳು ಮತಾಂಧರು ತಮ್ಮ ಅಜ್ಞಾನವನ್ನು ಮರೆಮಾಚಲೆಂದೇ ಸಂವಾದದ ಬದಲಿಗೆ ದ್ವೇಶದ ಭಾಶೆಗೆ ಮೊರೆಹೋಗುತ್ತಾರೆ.
ಅಂದರೆ ತಮ್ಮ ಸ್ವಾರ್ಥ, ದುಶ್ಟತನ, ಅವೈಚಾರಿಕತೆ, ಅಜ್ಞಾನ, ಟೊಳ್ಳುತನಗಳನ್ನು ಮುಚ್ಚಿಕೊಳ್ಳಲು ದ್ವೇಶದ ಭಾಶೆಯ ಮೊರೆಹೋಗುತ್ತಾರೆ. ‘ಬಾಯಿದ್ದವರು ಬರದಲ್ಲಿಯೂ ಬದುಕಿದರು’ ಎಂಬಂತೆ ವೈಚಾರಿಕತೆ ಮತ್ತು ಸತ್ಯ ಸಂಗತಿಗಳ ಆಧಾರದ ಮೇಲೆ ಜ್ಞಾನದ ಮೂಲಕ ಎದುರಾಳಿಗಳನ್ನು ಗೆಲ್ಲಲಾಗದ ಹೊತ್ತಿನಲ್ಲಿ ಗಂಟಲುಮಾರಿತನದಿಂದ ದ್ವೇಶದ ವಾಗ್ದಾಳಿಗಳಿಂದ ಗೆಲ್ಲಲು ಪ್ರಯತ್ನಿಸಲಾಗುತ್ತದೆ. ಇದೂ ಸಾಲದಾದಾಗ ನೇರವಾಗಿ ದೈಹಿಕವಾಗಿ ಹಲ್ಲೆ ಮಾಡುವ ಮಟ್ಟಕ್ಕಿಳಿಯುತ್ತಾರೆ.
ವಿಚಾರದ ಮೂಲಕ ಗೆಲ್ಲಲು ಸಾಧ್ಯವಾಗದೇ ಇದ್ದಾಗ ದ್ವೇಶದ ಭಾಶೆಯನ್ನು ಬಳಸಲಾಗುತ್ತದೆ. ಇಂತಹ ಭಾಶೆಯ ಮೂಲಕವೇ ಎದುರಾಳಿಗಳಲ್ಲಿ ಭಯೋತ್ಪಾದನೆ ಮೂಡಿಸಲಾಗುತ್ತದೆ. ಇಂತಹ ಭಯೋತ್ಪಾದನೆ ಮತ್ತು ದ್ವೇಶದ ಭಾಶೆಯ ಮೂಲಕವೇ ಜನರ ಮನಸ್ಸನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ.
ವ್ಯಂಗ್ಯವೆಂದರೆ ಇಂತಹ ದ್ವೇಶ ಮತ್ತು ಭಯೋತ್ಪಾದನೆಯ ಭಾಶೆಯ ಹಿಂದಿರುವ ಸಾರ್ವಜನಿಕ ವಂಚನೆಯನ್ನು ಅರ್ಥಮಾಡಿಕೊಳ್ಳದೆ ಅದಕ್ಕೆ ಬಲಿಯಾಗುವ ಜನರ ಸಂಖ್ಯೆ ದೇಶದಲ್ಲಿ ಹೆಚ್ಚಿದೆ. ಇದು ಈ ಕಾಲದ ದೊಡ್ಡ ದುರಂತ. ಹೀಗೆ ಮುಗ್ಧ ಮನಸ್ಸುಗಳನ್ನು ವಶಪಡಿಸಿಕೊಳ್ಳುವವರಿಗೆ ಬಲಿಯಾಗಿ ದ್ವೇಶ ಭಾಶೆಯನ್ನೇ ಅಭಿವ್ಯಕ್ತಿಯ ಮಾಧ್ಯಮವಾಗಿಸಿಕೊಂಡಿದ್ದಾರೆ.
ಇವರು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿದ್ದು ದ್ವೇಶದ ಸಂದೇಶಗಳನ್ನು ಹೆಚ್ಚೆಚ್ಚು ಪ್ರಸಾರ ಮಾಡುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ದ್ವೇಶದ ಭಾಶೆ ಮತ್ತು ಸಂದೇಶಗಳ ಪ್ರಸಾರದ ಸುನಾಮಿಯೇ ಬುಗಿಲೆದ್ದಿದೆ. ಆದ್ದರಿಂದಲೇ ಎಲ್ಲೆಡೆ ದ್ವೇಶದ ಭಾಶಣಗಳು ಸಂದೇಶಗಳು ಅನುರಣಿಸುತ್ತಿವೆ. ಈ ಪ್ರವಾಹದಲ್ಲಿ ಕೊಚ್ಚಿಹೋಗುವವರ ಸಂಖ್ಯೆ ವಿಪರೀತವಾಗಿದೆ. ಇಂದು ‘ದ್ವೇಶಭಾಶೆ’ ಪ್ರಸಾರಕ್ಕೆ ಮುಖ್ಯವಾಹಿನಿಯ ಮಾಧ್ಯಮಗಳೇ ಟೊಂಕ ಕಟ್ಟಿ ನಿಂತಿವೆ. ಅಂದರೆ ಬಹುತೇಕ ಪ್ರಭಾವಿ ಮಾಧ್ಯಮಗಳ ಭಾಶೆಯೇ ದ್ವೇಶಭಾಶೆಯಾಗಿಬಿಟ್ಟಿದೆ. ಇದು ಬಹಳ ಅಪಾಯಕಾರಿ ವಿದ್ಯಮಾನ.
ಶತ್ರುಹತ್ಯೆ ಮತ್ತು ಸ್ವ-ಹತ್ಯೆ
ಇಂತಹ ವಿದ್ಯಮಾನದ ಬೆಳವಣಿಗೆಗೆ ಬಹುಸಂಖ್ಯಾತರ ಧಾರ್ಮಿಕ ಮೂಲಭೂತವಾದ, ಕೋಮುವಾದ ಮತ್ತು ಉಗ್ರರಾಶ್ಟ್ರೀಯವಾದಗಳು ಕಾರಣವಾಗಿವೆ. ದ್ವೇಶದ ಭಾಶೆಗೆ ಧರ್ಮ ಮತ್ತು ರಾಶ್ಟ್ರೀಯತೆಗಳು ಇಂಬು ನೀಡಿರುವುದರಿಂದ ಈ ವಿಚಾರಗಳ ಬೆಂಬಲಿಗರು ತಮ್ಮ ಎದುರಾಳಿಗಳ ಮೇಲೆ ಅತ್ಯಂತ ಹೀನವಾದ ಭಾಶೆ ಬಳಸಿ ಆಕ್ರಮಣ ಮಾಡುತ್ತಿದ್ದಾರೆ.
ಧರ್ಮದ ಹೆಸರಿನಲ್ಲಿ ಹಾದಿಬೀದಿಗಳಲ್ಲಿ ಗುಂಪುದಾಳಿ ಮಾಡಿ ದಾಂಧಲೆ ಸೃಶ್ಟಿಸುವುದು ಒಂದು ಬಗೆಯಾದರೆ ನಿತ್ಯವೂ ವಿದ್ಯುನ್ಮಾನ ಮಾಧ್ಯಮಗಳು; ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್ಆಫ್ ಮತ್ತು ಫೇಸ್ಬುಕ್ಗಳ ಮೂಲಕ ತಮ್ಮ ಎದುರಾಳಿಗಳ ಮೇಲೆ ಮುಗಿಬೀಳಲಾಗುತ್ತಿದೆ. ಹೀಗೆ ಮುಗಿಬೀಳುವ ವೇಳೆ ಅತ್ಯಂತ ಅಸಹ್ಯಕರ ಮತ್ತು ನೀಚಮಟ್ಟದ ಭಾಶೆ ಬಳಸಲಾಗುತ್ತದೆ. ತಮ್ಮ ಎದುರಾಳಿಗಳ ಮೇಲೆ ದಾಳಿ ಆರೋಪ ಮಾಡುವಾಗ ಸಂವಾದದ ಭಾಶೆಯನ್ನು ಬಳಸುವುದಿಲ್ಲ. ಬದಲಿಗೆ ತಮ್ಮ ಸೈದ್ಧಾಂತಿಕ ಎದುರಾಳಿಗಳ ವ್ಯಕ್ತಿತ್ವವನ್ನು ಹೀನಗೊಳಿಸುವಂತಹ ಭಾಶೆಯನ್ನು ಬಳಸಲಾಗುತ್ತದೆ.
ಆ ಮೂಲಕ ಅವರ ವ್ಯಕ್ತಿತ್ವವನ್ನು ವಿಕೃತಗೊಳಿಸಲಾಗುತ್ತದೆ. ಸಮಾಜದಲ್ಲಿ ಅವರ ಬಗೆಗೆ ಅಪನಂಬಿಕೆಯನ್ನು ಸೃಶ್ಟಿಸಲಾಗುತ್ತದೆ. ಇಂತಹ ಅಪಪ್ರಚಾರವನ್ನು ಸುಳ್ಳು ಸಂದೇಶಗಳನ್ನು ನಂಬುವಂತಹ ಜನಸಮೂಹವನ್ನು ವ್ಯವಸ್ಥಿತವಾಗಿ ಸೃಶ್ಟಿಸಿಕೊಳ್ಳಲಾಗಿದೆ. ಇದೇ ಫ್ಯಾಸಿಸಂನಮ ನಿಜವಾದ ಉದ್ದೇಶ ಕೂಡ ಆಗಿರುತ್ತದೆ. ಇಲ್ಲಿ ನಿಜವಾದ ಧರ್ಮ, ಭಾಶೆ ಮತ್ತು ಮೌಲ್ಯಗಳು ಎಲ್ಲವೂ ಅವಸಾನಗೊಳ್ಳುತ್ತವೆ ಇಲ್ಲವೇ ಅನರ್ಥ ಪಡೆದುಕೊಳ್ಳುತ್ತವೆ. ಅಂದರೆ ಧರ್ಮದ ಹೆಸರಿಯಲ್ಲಿಯೇ ಧರ್ಮದ ನೈಜ ಮೌಲ್ಯಗಳನ್ನು ನಾಶ ಮಾಡಲಾಗುತ್ತದೆ.
ಹೀಗೆ ತಮ್ಮ ‘ಸೈದ್ಧಾಂತಿಕ ಎದುರಾಳಿ’ಗಳ ಮೇಲೆ ದಾಳಿ ಮಾಡಲು ಬಳಸುವ ಭಾಶೆ ಅದು ಎದುರಾಳಿಗಳನ್ನು ಮಾತ್ರ ನಾಶ ಮಾಡುವುದಿಲ್ಲ. ಬದಲಿಗೆ ಮೊದಲು ‘ದ್ವೇಶಭಾಶೆ’ ಬಳಸುವವರನ್ನೇ ನಾಶಮಾಡಿರುತ್ತದೆ. ಯಾಕೆಂದರೆ ಅವರು ಮೊದಲು ತಮ್ಮ ವ್ಯಕ್ತಿತ್ವವನ್ನು ಕೊಂದುಕೊಂಡು ಅಮಾನುಶರಾಗಿ ಬದಲಾಗಿರುತ್ತಾರೆ. ಯಾವುದೇ ಬಗೆಯ ವೈಚಾರಿಕತೆ ಮತ್ತು ನೈಜವಾದ ಧಾರ್ಮಿಕ ಮೌಲ್ಯಗಳಲ್ಲಿ ನಂಬಿಕೆಯಿಟ್ಟಿರುವುದಿಲ್ಲ.
ಇವುಗಳ ಬಗೆಗೆ ವಚನಕಾರರಂತೆ ಪ್ರಾಮಾಣಿಕವಾಗಿ ಶೋಧನೆಯನ್ನೂ ಮಾಡುವುದಿಲ್ಲ. ಅವುಗಳ ನಿಜನೆಲೆಯನ್ನು ಅರಿವ ತುಡಿತವಿರುವುದಿಲ್ಲ. ಅವನ್ನು ಕುರುಡಾಗಿ ಭಾವಿಸಿ ಧರ್ಮದ, ದೇಶದ ಮತ್ತು ಸಂಸ್ಕøತಿ ರಕ್ಶಣೆಯ ಹೆಸರಿನಲ್ಲಿ ದ್ವೇಶದ ಭಾಶೆಯೊಂದಿಗೆ ದಾಳಿ ನಡೆಸಲಾಗುತ್ತದೆ. ಅಲ್ಲದೆ ಅವರ ಭಾಶೆ ವೈಚಾರಿಕವೂ ಚಿಂತನಶೀಲವೂ ಆದ ಸೃಜನಶೀಲ ಭಾಶೆಯಲ್ಲ. ಅದು ಯಾವುದೇ ಹೊಸ ವಿಚಾರವನ್ನೂ ಹುಟ್ಟಿಸುವುದಿಲ್ಲ. ಅದು ಒಂದು ಬಗೆಯ ಕಿಚ್ಚಿನ ಭಾಶೆ. ಕಿಚ್ಚು ಎಲ್ಲವನ್ನೂ ದಹಿಸುವಂತೆ ಕಿಚ್ಚಿನ ಭಾಶೆ ಬಳಸುವ ವ್ಯಕ್ತಿಗಳನ್ನು, ಅವರು ನಂಬಿರುವ ಧರ್ಮ ಮತ್ತು ಸಂಸ್ಕøತಿಯ ಉದಾತ್ತ ಮೌಲ್ಯಗಳನ್ನೂ ನಾಶ ಮಾಡುತ್ತಿರುತ್ತವೆ. ಅಲ್ಲದೆ ಈ ಭಾಶೆ ಸೃಜನಶೀಲತೆ ವಿರೋಧಿಯಾಗಿದ್ದು ವಿದ್ವಂಸಕಾರಿಯಾಗಿರುತ್ತದೆ. ಹಾಗಾಗಿ ಇಲ್ಲಿ ನಡೆಯುವುದು ಶತ್ರುಹತ್ಯೆಯಲ್ಲ! ಸ್ವಹತ್ಯೆ ಇಲ್ಲವೇ ಆತ್ಮಹತ್ಯೆ.
ದುರಂತವೆಂದರೆ ಇಂತಹ ವಿದ್ವಂಸಕಾರಿಯಾದ ಭಾಶೆಯೇ ಇಂದಿನ ಮುಖ್ಯವಾಹಿನಿ ಮಾಧ್ಯಮಗಳ ಭಾಶೆಯಾಗಿಬಿಟ್ಟಿದೆ. ಇಂದಿನ ಮುಖ್ಯವಾಹಿನಿಯ ಮಾಧ್ಯಮಗಳು, ಅಧಿಕಾರಶಕ್ತಿಗಳು, ಧರ್ಮರಕ್ಶಕರು, ವಿದ್ವಂಸಕಾರಿ ಭಾಶೆಯನ್ನು ಬಳಸುತ್ತಿರುವ ಕಾರಣ ದ್ವೇಶದ ವಿಚಾರಗಳನ್ನು ಹೊರತುಪಡಿಸಿ ಹೊಸ ವಿಚಾರದ ಕೊಡುಗೆ ನೀಡುವುದಿಲ್ಲ. ದೇಶಭಕ್ತಿ ದ್ವೇಶಭಕ್ತಿಯಾಗಿ ಕೆಲಸ ಮಾಡುತ್ತಿರುತ್ತದೆ. ಆದರೆ ಬಸವಣ್ಣ, ಅಲ್ಲಮ ಅಕ್ಕ ಕನಕನಂತಹವರು ಸಿಟ್ಟಿನ ಆವೇಶದ ಆಕ್ರೋಶದ ಭಾಶೆಯನ್ನು ಬಳಸಿದರೂ ಅವರು ತಮ್ಮೊಳಗೆ ದ್ವೇಶದ ಭಾವನೆ ಹೊಂದಿರುವುದಿಲ್ಲ.
ತಮ್ಮ ತಮ್ಮ ಅಂತರಂಗದಲ್ಲಿರುವ ಅಜ್ಞಾನ, ಸ್ವಾರ್ಥ ದ್ವೇಶದ ಭಾವನೆಗಳನ್ನು ಖಾಲಿಮಾಡಿಕೊಂಡ ನಂತರವೇ ಅವರು ಮಾತನಾಡುತ್ತಿದ್ದಾರೆ. ಅವರ ವಿಡಂಭನೆಯ ಭಾಶೆ ಆಳವಾದ ಜ್ಞಾನದಿಂದ ಹುಟ್ಟಿರುವುದರಿಂದ ಅದರಲ್ಲಿ ದ್ವೇಶವಿರುವುದಿಲ್ಲ. ಬದಲಿಗೆ ಅದು ದಪ್ಪ ಚರ್ಮದ ಜನರನ್ನು ತಿವಿದು ಎಚ್ಚರಿಸುತ್ತದೆ. ಆದರೆ ಇಂದು ದ್ವೇಶದ ಭಾಶೆಯನ್ನು ಬಳಸುವ ಜನರು ತಮ್ಮೊಳಗಿನ ಅಜ್ಞಾನದ ಕೊಡವನ್ನು ಖಾಲಿ ಮಾಡದೆ ಅದಕ್ಕೆ ಇನ್ನಶ್ಟು ಮೌಢ್ಯಗಳನ್ನು ದುಶ್ಟತನವನ್ನು ತುಂಬಿಕೊಳ್ಳಲು ದ್ವೇಶದ ಲೇಪನ ಮಾಡಿ ಅದನ್ನು ಅಲಗಾಗಿಸಿ ಎದುರಾಳಿಗಳ ಮೇಲೆ ದಾಳಿ ಮಾಡುತ್ತಾರೆ.
ಇದು ಅವರನ್ನು ಮತ್ತು ಜನರನ್ನು ನಾಶ ಮಾಡುತ್ತದೆ. ಪುರಂದರದಾಸರು ‘ವಿಚಾರವಿಲ್ಲದೆ ಪರರ ದೂಶಿಸುವುದಕ್ಕೆ ಚಾಚಿಕೊಂಡಿರುವಂತೇ ಇರುವ ನಾಲಿಗೆ’ಗಳು ಎನ್ನುತ್ತಾರೆ. ಅಂದರೆ ವಿಚಾರಹೀನತೆಯೇ ದ್ವೇಶದ ಭಾಶೆ ಬಳಸುವುದರ ಮೂಲ. ಅಂತಹವರೇ ನಾಲಗೆಗಳನ್ನು ಆಯುಧವಾಗಿಸಿ ದಾಳಿ ಮಾಡುತ್ತ ಅರಿವಿನ ಶತ್ರುಗಳಾಗಿ ಬೆಳೆಯುತ್ತಾರೆ. ಪುರಂದರ ದಾಸರು ‘ಭಾಶಾಹೀನರ ಸಂಗ ಅಭಿಮಾನ ಭಂಗ’ ಎನ್ನುತ್ತಾರೆ. ಅಂದರೆ ದ್ವೇಶಭಾಶೆ ಭಾಶಾಹೀನತೆಯ ದ್ಯೋತಕವೂ ಹೌದು. ಸಾಮಾಜಿಕ ಸೌಖ್ಯದಲ್ಲಿ ಭಾಶೆಯ ಪಾತ್ರ ಬಹಳ ಮಹತ್ವದ್ದು. ಹಾಗಾಗಿ ದ್ವೇಶಭಾಶೆಯಿಂದ ನಿಡುಗಾಲದಲ್ಲಿ ಸಾಮಾಜಿಕ ಸೌಖ್ಯದದ ಮೇಲೆ ಆಗುವ ಪರಿಣಾಮಗಳೇನು? ಎಂಬುದನ್ನು ಊಹಿಸಿದರೆ ಆತಂಕವಾಗುತ್ತದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಸಂಗತಿಯೆಂದರೆ ಇಂತಹ ದ್ವೇಶಭಾಶೆಯನ್ನು ವಿರೋಧಿಸುವ ಒಂದು ವಿದ್ಯಮಾನವೂ ಇಂದು ಭಾರತದಲ್ಲಿ ಪ್ರಬಲವಾಗಿಯೇ ಬೆಳೆದಿದೆ. ಆದರೆ ಇದರಲ್ಲಿ ಒಂದು ವರ್ಗ ದ್ವೇಶಭಕ್ತಿಗೆ ಪದಲಿಯಾಗಿ ಪ್ರತಿದ್ವೇಶಭಕ್ತಿ ಭಾಶೆಯನ್ನು ಬಳಸುತ್ತಿದೆ. ಅಂದರೆ ಮತೀಯವಾದಿಗಳ ನೀಚಭಾಶೆಯನ್ನು ಖಂಡಿಸಲು ಅಂತಹದೇ ಭಾಶೆಯನ್ನು ಅದನ್ನು ವಿರೋಧಿಸುವ ಜನರು ಬಳಸುತ್ತಿದ್ದಾರೆ. ಇಂತಹ ಕಡೆ ಬಲಪಂಥೀಯರಲ್ಲಿ ಕಾಣುವಂತಹ ಅಸಹನೆ ಅಸಹಿಶ್ಣತೆಯ ಭಾವಗಳೇ ವಿರೋಧಿಸುವವರ ಭಾಶೆಯಲ್ಲಿ ಎದ್ದು ಕಾಣಿಸುತ್ತಿರುತ್ತದೆ. ಇದು ಅನೌಪಚಾರಿಕ ವಲಯದಲ್ಲಿ ಹೆಚ್ಚು.
ವಿಶೇಶವಾಗಿ ಫೇಸ್ಬುಕ್ನಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಟ್ರೊಲ್ ಭಾಶೆಯೇ ಇಲ್ಲಿ ಪ್ರಧಾನ. ಬಲಪಂಥೀಯರು ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಖಂಡಿಸಲು ವಿರೋಧಿಸಲು ಗೇಲಿ ವ್ಯಂಗ್ಯ ಅಸಹ್ಯ ಬೈಗುಳ ಇತ್ಯಾದಿ ಎಲ್ಲವನ್ನೂ ಬಳಸುತ್ತಾರೆ. ಇಂತಹ ಭಾಶೆಯನ್ನು ಬಳಸಿ ಸಂವಾದ ನಡೆಸುವಾಗ ಅಲ್ಲಿ ಕೇಳುಗರ ಇಲ್ಲವೇ ಯಾರನ್ನು ಉದ್ದೇಶಿಸಿ ಬರೆಯಲಾಗಿರುತ್ತದೆಯೋ ಅವರಲ್ಲಿ ಯಾವ ಬದಲಾವಣೆಯೂ ಕಾಣಿಸುವುದಿಲ್ಲ. ವಿಚಾರ ಪ್ರಚೋದಕವೂ ಆಗಿರುವುದಿಲ್ಲ. ಅಂತಹ ಕಡೆ ಬಳಕೆಯಾಗಿರುವ ಭಾಶೆ ಕೇಳುಗರಲ್ಲಿಯೇ ಬೇರೆ ಬಗೆಯ ಅಸಹನೆ ಸೃಶ್ಟಿಸುವ ಸಾಧ್ಯತೆಗಳೇ ಹೆಚ್ಚು. ಅಂದರೆ ನೀಚ ಭಾಶೆಗೆ ಮತ್ತೊಂದು ಬಗೆಯ ನೀಚ ಭಾಶೆ ಮದ್ದಲ್ಲ. ದ್ವೇಶದ ಭಾಶೆಗೆ ಪ್ರತಿದ್ವೇಶದ ಭಾಶೆ ಮದ್ದಲ್ಲ. ಅಂತಹ ಕಡೆ ಸೌಹಾರ್ದದ ಪ್ರೀತಿಯ ಭಾಶೆಯೇ ಮದ್ದಾಗಿರುತ್ತದೆ.
ಆವೇಶದ ಆಕ್ರೋಶದ ಭಾಶೆಗೆ ಮೆಲುದನಿಯ ಮೃದುತ್ವದ ‘ಬುದ್ಧಭಾಶೆ’ಯೇ ಮದ್ದಾಗಿರುತ್ತದೆ. ಆದರೆ ಇದನ್ನು ಅರಿತುಕೊಳ್ಳದ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದ್ವೇಶದ ಭಾಶೆಯನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಇಂತಹ ಪ್ರತಿದ್ವೇಶದ ಭಾಶೆ ಕೇಳುಗರಲ್ಲಿ ಯಾವುದೇ ಚಿಂತನೆಯನ್ನು ಎಚ್ಚರವನ್ನೂ ಮೂಡಿಸುವುದಿಲ್ಲ. ಬದಲಿಗೆ ಮತ್ತಶ್ಟು ಅಕರಾಳ ವಿಕರಾಳಗಳ ಭಾವನೆಗಳನ್ನೇ ಸೃಶ್ಟಿಸುತ್ತದೆ. ಸಾರ್ವಜನಿಕ ಭಾಶೆ ಅಕರಾಳ ವಿಕರಾಳ ಆದಶ್ಟೂ ಅದು ಒಟ್ಟು ದೇಶದ ವೈಚಾರಿಕ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ದ್ವೇಶದ ನುಡಿಗೆ ಪ್ರತಿದ್ವೇಶದ ನುಡಿಯನ್ನು ಬಳಸದೆ ಪ್ರೀತಿಯ ನುಡಿಯನ್ನು ಬಳಸಬೇಕಾಗಿರುತ್ತದೆ. ಅಜ್ಞಾನದಿಂದ, ದುಶ್ಟತನದಿಂದ ಮಾಡುವ ಉದ್ದೇಶಪೂರ್ವಕ ದಾಳಿಗೆ ಎದುರಾಳಿಯ ಮನಸ್ಸಿನಲ್ಲಿಯೂ ವಿಚಾರದ ಹಣತೆ ಹಚ್ಚುವಂತಹ ಭಾಶೆಯನ್ನು ಬಳಸಬೇಕಾಗುತ್ತದೆ. ಇದೇ ಇಂದಿನ ಅಗತ್ಯ.
ಮಿತ್ರಹತ್ಯೆ ಮತ್ತು ಸ್ವ-ಹತ್ಯೆ
ಸಾಮಾಜಿಕ ಮಾಧ್ಯಮಗಳ ಮೂಲಕ ‘ಮುಖೇಡಿ’ ಚರ್ಚೆಯನ್ನು ಮಾಡಲು ಮುಂದಾದ ನಂತರ ಮಿತ್ರಸಂವಾದವೂ ಶತ್ರುಸಂವಾದದಂತೆ ಬದಲಾಗಿದೆ. ಇದು ಇನ್ನೊಂದು ದೊಡ್ಡ ದುರಂತ. ಖಾಸಗಿಯಾಗಿ ನಡೆಯಬೇಕಾದ ಚರ್ಚೆಗಳು ಸಾರ್ವಜನಿಕವಾಗಿ ನಡೆಯುತ್ತವೆ. ಸಾರ್ವಜನಿಕವಾಗಿ ನಡೆಯಬೇಕಾದ ಚರ್ಚೆಗಳು ಕಣ್ಮರೆಯಾಗುತ್ತಿವೆ. ಎದುರಾಬದುರು ನಡೆಯುವ ಮಾತುಕತೆಯಲ್ಲಿ ಬಳಕೆಯಾಗುವ ಭಾಶೆಯ ಬಗೆಯೇ ಬೇರೆ. ಅಲ್ಲಿ ಮಾತು ಯಾವುದೇ ವ್ಯಕ್ತಿಯ ಎದುರು ನಿಲ್ಲದೆ ಮರೆಯಲ್ಲಿ ನಿಂತು ಮಾತನಾಡುವಾಗ ವಿಚಿತ್ರವಾದ ‘ಪೌರುಶ’ ಬಂದುಬಿಡುತ್ತದೆ.
ಇಲ್ಲಿ ವಿಶ್ವಾಸಗಳಿಗಿಂತ ಅಸಹನೆ ಮತ್ತು ನಂಜಿನ ಭಾವನೆಗಳು ಕಿಡಿಯಾಡುತ್ತಲೇ ಇರುತ್ತವೆ. ಈ ಕಿಡಿಗಳು ಅಲ್ಲಿಯೇ ನಂದಿಹೋಗುವ ಬದಲು ಅವು ಬಾಳಿನುದ್ದಕ್ಕೂ ಮುಂದುವರೆಯುವ ಸಾಧ್ಯತೆಗಳಿರುತ್ತವೆ. ಇದು ನಂಬಿಕೆಗಿಂತ ಅಪನಂಬಿಕೆಯ ಬೆಳೆಯನ್ನೇ ಹೆಚ್ಚು ಬೆಳೆಯುತ್ತಿದೆ. ಇಲ್ಲಿ ಮಾತು ಮನಸ್ಸುಗಳನ್ನು ಬೆಸೆಯುವುದಕ್ಕಿಂತ ಬೇರ್ಪಡಿಸುವ ಕೆಲಸವನ್ನೇ ಹೆಚ್ಚು ಮಾಡುತ್ತಿರುತ್ತದೆ. ಅಲ್ಲದೆ ಇಂತಹ ಸಮಯದಲ್ಲಿ ಮಿತ್ರಹತ್ಯೆ ಮತ್ತು ಸ್ವಹತ್ಯೆಗಳು ಹೆಚ್ಚು ನಡೆಯುತ್ತಿರುತ್ತವೆ. ತಮಗಿಂತ ಭಿನ್ನವಾದ ಅಭಿಪ್ರಾಯ ಮಂಡಿಸುವವರ ಮೇಲೆ ದಂಡೆತ್ತಿ ಹೋಗುವ ಭರದಲ್ಲಿ ಸಂವಾದ ಚೌಕಟ್ಟು ಮೀರಿದ ಭಾಶೆಯನ್ನು ಬಳಸಲಾಗುತ್ತದೆ.
ಇಂತಹ ಸಂದರ್ಭದಲ್ಲಿ ವಿಚಾರವನ್ನು ತಮ್ಮೆದುರು ಇರುವವರಿಗೆ ಮನನ ಮಾಡಿಸುವ ಬದಲಿಗೆ ಆರೋಪ ಮಾಡುವ ಇಲ್ಲವೇ ದೂರುವ ಕೆಲಸ ಮಾಡಲಾಗುತ್ತದೆ. ಇದು ಒಂದು ಬಗೆಯ ಅಸಹನೆ ಮತ್ತು ದ್ವೇಶದ ಭಾವನೆಯನ್ನೇ ಅಂತರಂಗದಲ್ಲಿ ಹೊಂದಿರುವುದನ್ನು ಗಮನಿಸಬಹುದು. ಇವು ಕೆಲವೊಮ್ಮೆ ಅತಿರೇಕ ಮುಟ್ಟಿರುವುದೂ ಉಂಟು. ನಿಜವೆಂದರೆ ಇಲ್ಲಿನ ಎಶ್ಟೋ ಸಂಗತಿಗಳು ಸಾರ್ವಜನಿಕವಾಗಿ ಚರ್ಚಿಸ ತಕ್ಕ ವಿಚಾರಗಳೇ ಆಗಿರುವುದಿಲ್ಲ. ಮುಕ್ತವಾಗಿ ಚರ್ಚಿಸತಕ್ಕ ವಿಚಾರಗಳು ಮತ್ತು ಖಾಸಗಿಯಾಗಿ ಚರ್ಚಿಸಬೇಕಾದ ವಿಚಾರಗಳು ಬೇರೆ ಬೇರೆ.
ಆದರೆ ಅದನ್ನು ಮರೆತು ಪರಸ್ಪರ ಕೆಸರೆರೆಚಿಕೊಳ್ಳುವ ಕೆಲಸವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡಲಾಗುತ್ತಿದೆ. ಇದರಿಂದ ಒಂದುಗೂಡಬೇಕಾದ ಜನರು ಚಿದ್ರಗೊಳ್ಳುತ್ತಿದ್ದಾರೆ. ಕೂಡುವ ಮನಸ್ಸುಗಳು ಮುರಿದು ಬೀಳುತ್ತಿವೆ. ಇಂತಹ ಅಪಾಯಕಾರಿ ವಿದ್ಯಮಾನಕ್ಕೆ ವೇದಿಕೆ ರೂಪಿಸಿರುವುದು ಸಾಮಾಜಿಕ ಮಾಧ್ಯಮಗಳು. ಇದರಿಂದ ಜನವಿರೋಧಿ ಆಳುವ ವರ್ಗಗಳು ಮತ್ತು ಪ್ರತಿಗಾಮಿ ಪುರೋಹಿತಶಾಹಿ ಶಕ್ತಿಗಳೇ ಹೆಚ್ಚು ಪ್ರಯೋಜನ ಪಡೆಯುತ್ತಿವೆ. ಆದರೆ ಜನರು ಒಗ್ಗೂಡಲು ಬಳಸಿಕೊಳ್ಳಬೇಕಾದ ವೇದಿಕೆಗಳನ್ನು ವಿಘಟನೆಗೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ಇದು ಭಾಶೆಯ ಸಮಸ್ಯೆಯೋ ಇಲ್ಲವೇ ಅದನ್ನು ಅರಿತು ಬಳಸದೇ ಇರುವವರ ಸಮಸ್ಯೆಯೋ? ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.
ಭಾಶೆಯ ಲೋಕಪಯೋಗಿ ಕಾರ್ಯ
ಕುವೆಂಪು ಅವರು ಭಾಶೆಯನ್ನು ಭಾವೋಪಯೋಗಿ ಮತ್ತು ಲೋಕೋಪಯೋಗಿ ಎಂದು ಎರಡು ನೆಲೆಯಲ್ಲಿ ಗುರುತಿಸುತ್ತಾರೆ. ಲೋಕೋಪಯೋಗಿ ಭಾಶೆ ಸಾರ್ವಜನಿಕ ಸಂವಹನದ ಮೂಲಕ ಮನಸ್ಸುಗಳನ್ನು ಬೆಸೆಯಬೇಕು. ಹಾಗೆಯೇ ಭಾವೋಪಯೋಗಿ ಗುಣದ ಮೂಲಕ ಮಾನವರು ಭಾಶೆಯನ್ನು ತಮ್ಮ ಅಂತರಂಗದ ವಿಕಾಸಕ್ಕೆ ಬಳಸಿಕೊಳ್ಳಬೇಕಿರುತ್ತದೆ. ಆದರೆ ದ್ವೇಶ ಮತ್ತು ಪ್ರತಿದ್ವೇಶಗಳ ಭಾಶೆ ಸಾಮಾಜಿಕ ನೆಲೆಯಲ್ಲಿ ಅದು ಸಮಾಜವನ್ನು ಭಿನ್ನ ವರ್ಗಗಳನ್ನು ಒಗ್ಗೂಡಿಸುವುದಿಲ್ಲ; ಬದಲಿಗೆ ವಿಭಜಿಸುತ್ತದೆ. ಹಾಗೆಯೇ ದ್ವೇಶ ಪ್ರತಿದ್ವೇಶಗಳ ಭಾಶೆ ಕೂಡ ಅಂತರಂಗವನ್ನು ಬೆಳಗುವುದಿಲ್ಲ. ಮತ್ತು ಅದು ಸೃಜಶೀಲವಾದ ಕಾರ್ಯಗಳಿಗೂ ಒದಗಿಬರುವುದಿಲ್ಲ. ಅಂತಹ ದ್ವೇಶ ಮತ್ತು ಪ್ರತಿದ್ವೇಶಗಳ ಭಾಶೆಯಿಂದ ಯಾವುದೋ ಹೊಸ ಚಿಂತನೆಯನ್ನು ಮನಸ್ಸುಗಳನ್ನು ಹುಟ್ಟಿಸಲು ಸಾಧ್ಯವಿಲ್ಲ.
‘ಕಾಂತಾಸಂಹಿತೆ’ಯಂತಹ ಪ್ರೇಮದಭಾಶೆ ಮಾತ್ರವೇ ಹೊಸವಿಚಾರ ಮಂಡಿಸಲು ಪ್ರಯೋಜನಕ್ಕೆ ಬರುತ್ತದೆ; ದ್ವೇಶದ ಭಾಶೆಯಲ್ಲ. ದ್ವೇಶದ ಭಾಶೆ-ಭಾಶಣಗಳು ಒಂದು ಸಮಾಜದ ರೋಗವನ್ನು ಎತ್ತಿತೋರಿಸುತ್ತವೆಯೇ ಹೊರತು ಅದು ಸಮಾಜದ ಅತ್ಯುನ್ನತ ಸಾಧನೆಯನ್ನು ಬಿಂಬಿಸುವುದಿಲ್ಲ.
ಕಾಡ್ಗಿಚ್ಚಿನ ಎದುರು ‘ನೀರು’ ಮಹತ್ವ ಪಡೆಯುವಂತೆ ದ್ವೇಶದ ಭಾಶೆಯ ಎದುರು ಬುದ್ಧನ ಕಾರುಣ್ಯದ ಭಾಶೆ ಮಹತ್ವ ಪಡೆಯುತ್ತದೆ. ಅಂಗುಲಿಮಾಲನಂತಹ ಭಯಹುಟ್ಟಿಸುವ ವ್ಯಕ್ತಿಯ ಎದುರು ಬುದ್ಧ ನಿಲ್ಲಲು ಸಾಧ್ಯವಾಗಿದ್ದು ಕಾರುಣ್ಯ ಭಾಶೆಯ ಮೂಲಕವೇ. ಗಾಂಧೀಜಿ ಬ್ರಿಟಿಶರನ್ನು ಎದುರಿಸಿದ್ದು ಇಂತಹ ಪ್ರೇಮದ ಭಾಶೆಯ ಮೂಲಕವೇ ಆಗಿತ್ತು. ಇದುವರೆಗಿನ ಚರಿತ್ರೆಯ ಅನುಭವದಿಂದ ಕಲಿತಿರುವ ಪಾಠಗಳನ್ನು ಗಮನಿಸಿದರೆ ಕ್ರೌರ್ಯಕ್ಕೆ ಎದುರಾಗಿ ನಿಂತು ಗೆದ್ದಿರುವುದು ಕ್ರೌರ್ಯವಲ್ಲ; ಬದಲಿಗೆ ಪ್ರೇಮ ಕರುಣೆ ದಯೆ ಮತ್ತು ಸಹನೆಯ ಮೌಲ್ಯಗಳು ಮಾತ್ರವೇ ಆಗಿದೆ.
ಇಂದಿನ ಅಗತ್ಯವೂ ಕೂಡ ಸಹನೆಯ ಮತ್ತು ಕರುಣೆಯ ಭಾಶೆಯೇ ಆಗಿದೆ. ಆದರೆ ಇಂದು ಕ್ರೌರ್ಯವನ್ನು ಎದುರುಗೊಳ್ಳುವ ದಿಟ್ಟತೆ ತೋರುತ್ತಿರುವ ಜನರೂ ಕೂಡ ಕೆಲವೊಮ್ಮೆ ಸಹನೆ ಕಳೆದುಕೊಂಡು ಪ್ರತಿಕ್ರಿಯಿಸುವುದು ಎದ್ದು ಕಾಣಿಸುತ್ತದೆ. ಕೆಲವೊಮ್ಮೆ ದ್ವೇಶಭಾಶೆಯ ಅತಿರೇಕದ ವರ್ತನೆಗಳನ್ನು ಕಂಡಾಗ ಆವೇಶ ಆಕ್ರೋಶಗಳು ಹುಟ್ಟಬಹುದು. ಆದರೆ ಅಂತಹ ಆವೇಶ ಆಕ್ರೋಶಗಳನ್ನು ತಮ್ಮ ಎದುರಾಳಿಗಳಂತೆ ಮೈದುಂಬಿಕೊಂಡಾಗ ವಿಚಾರ ಮತ್ತು ಚರ್ಚೆಗಳು ದಾರಿ ತಪ್ಪುತ್ತವೆ. ಭಾಶೆ ಹದಗೆಡುತ್ತದೆ. ಸಾಮಾಜಿಕ ಆರೋಗ್ಯ ಮತ್ತಶ್ಟು ನಾಶವಾಗುತ್ತದೆ.
ಹಾಗಾಗಿ ಬದಲಾವಣೆ ಬಯಸುವ ಮನಸ್ಸುಗಳು ತಮ್ಮ ಉದಾತ್ತ ಚಿಂತನೆಗಳಿಗೆ ತಕ್ಕುನಾದ ಕಾರುಣ್ಯದ ಭಾಶೆಯನ್ನೇ ಬಳಸಬೇಕಾಗುತ್ತದೆ. ಅತಿರೇಕದ ಭಾಶೆಯನ್ನು ಬಳಸಿದರೆ ಅದು ವಿಚಾರ ಸಂವಹನ ನಡೆಸದೆ ಹಾದಿತಪ್ಪಿರುವ ಮನಸ್ಸುಗಳನ್ನು ಪರಿವರ್ತಿಸುವ ಬದಲು ಮತ್ತಶ್ಟು ಕೆರಳಿಸುವ ಅಪಾಯವಿರುತ್ತದೆ. ಈ ಬಗೆಗೆ ಎಚ್ಚರಿಕೆ ಅಗತ್ಯವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ3 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ1 day agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್


