Connect with us

ನೆಲದನಿ

ಮಹಾಡ್: ದಲಿತರ ಚಾರಿತ್ರಿಕ ದಂಗೆಯ ಕಥನ

Published

on

  • ನಟರಾಜ್ ಹುಳಿಯಾರ್

ಕಾಲದ ಮುಖ್ಯ ಚಿಂತಕರಲ್ಲೊಬ್ಬರಾದ ಆನಂದ್ ತೇಲ್ ತುಂಬ್ಡೆ ನಾಲ್ಕೈದು ವರ್ಷಗಳಿಂದ ಬರೆಯುತ್ತಿದ್ದ ‘ಮಹಾಡ್: ದಿ ಮೇಕಿಂಗ್ ಆಫ್ ದಿ ಫಸ್ಟ್ ದಲಿತ್ ರಿವೋಲ್ಟ್’ (ಆಕಾರ್ ಬುಕ್ಸ್, ನವದೆಹಲಿ) ಪುಸ್ತಕ ಮೊನ್ನೆ ಬಂದಿದೆ. ‘ಇಂಡಿಯಾದ ದಲಿತ ಚಳವಳಿಯ ಜಾನಪದವೇ ಆಗಿಹೋಗಿರುವ’ 20 ಮಾರ್ಚ್ 1927ರ ಮಹಾಡ್ ಸಮ್ಮೇಳನವನ್ನು ಆನಂದ್ ‘ಜಗತ್ತಿನ ಮೊದಲ ಮುಖ್ಯ ನಾಗರಿಕ ಹಕ್ಕುಗಳ ಹೋರಾಟಗಳಲ್ಲಿ ಒಂದು’ ಎನ್ನುತ್ತಾರೆ.

ಆನಂತರ 25 ಡಿಸೆಂಬರ್ 1927ರಂದು ಬೃಹತ್ ಮಹಾಡ್ ಸತ್ಯಾಗ್ರಹವನ್ನು ಏರ್ಪಡಿಸಿದ ಅಂಬೇಡ್ಕರ್ ಅಲ್ಲಿ ಮನುಸ್ಮೃತಿಯನ್ನು ಸುಟ್ಟರು. ಈ ಎರಡು ಚಾರಿತ್ರಿಕ ಸಮ್ಮೇಳನಗಳನ್ನು ಕುರಿತು ಮರಾಠಿಯಲ್ಲಿರುವ ಅನೇಕ ದಾಖಲೆಗಳು, ವಸಾಹತು ಆಡಳಿತದ ಟಿಪ್ಪಣಿಗಳು, ಅಂಬೇಡ್ಕರರ ‘ಬಹಿಷ್ಕೃತ ಭಾರತ’ ಪತ್ರಿಕೆಯ ಸಂಪಾದಕೀಯಗಳನ್ನು ಆನಂದ್ ಮಂಡಿಸಿದ್ದಾರೆ; ಆಳವಾಗಿ ವಿಶ್ಲೇಷಿಸಿದ್ದಾರೆ.

ಮೊದಲ ಮಹಾಡ್ ಸಮ್ಮೇಳನದ ಮುಂಚೂಣಿ ಸಂಘಟಕರಾದ ರಾಮಚಂದ್ರ ಬಾಬಾಜಿ ಮೋರೆಯವರ ನಿರೂಪಣೆಯೂ ಇಲ್ಲಿದೆ. ಕೊಂಚ ಅನುಕೂಲಸ್ಥ ಮನೆತನದಿಂದ ಬಂದ ಬಾಲಕ ಮೋರೆ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಪ್ರೈಮರಿ ವಿದ್ಯಾಭ್ಯಾಸ ಮುಗಿಸಿ ಸ್ಕಾಲರ್‌ಶಿಪ್ ಪಡೆದಿದ್ದರೂ ಮಹರ್ ಎಂಬ ಕಾರಣಕ್ಕೆ ಅವನನ್ನು ಮಹಾಡ್ ಹೈಸ್ಕೂಲಿಗೆ ಸೇರಿಸಿಕೊಳ್ಳಲಿಲ್ಲ.

ಹನ್ನೊಂದರ ಹರೆಯದ ಮೋರೆ ಈ ಅನ್ಯಾಯದ ವಿರುದ್ಧ ಸರ್ಕಾರಕ್ಕೆ ಬಹಿರಂಗ ಪತ್ರವೊಂದನ್ನು ಬರೆದು ದಿನಪತ್ರಿಕೆಯೊಂದರಲ್ಲಿ ಪ್ರಕಟಿಸಿದ. ಸರ್ಕಾರದ ಅನುದಾನ ಕಳೆದುಕೊಂಡೇವೆಂಬ ಭಯಕ್ಕೆ ಸ್ಕೂಲಿನವರು ಮೋರೆಯನ್ನು ಸೇರಿಸಿಕೊಂಡರೂ ಅವನನ್ನು ತರಗತಿಯ ಹೊರಗೆ ಕೂರಿಸುತ್ತಿದ್ದರು. ಮುಂದೆ ಇಂಥ ಅವಮಾನಗಳ ವಿರುದ್ಧ ಬಂಡೆದ್ದ ತರುಣ ಮೋರೆ ದಲಿತ ಸಮುದಾಯವನ್ನು ಎಚ್ಚರಿಸುತ್ತಾ, ಅವರಿಗೆ ಆಗುತ್ತಿದ್ದ ಅವಮಾನಗಳ ವಿರುದ್ಧ ಹೋರಾಡತೊಡಗಿದರು.

ಆ ಹೊತ್ತಿಗಾಗಲೇ ಲಂಡನ್ ಹಾಗೂ ಕೊಲಂಬಿಯಾದಿಂದ ಎರಡು ಡಾಕ್ಟರೇಟ್ ಹಾಗೂ ಬಾರ್ ಅಟ್ ಲಾ ಪದವಿ ಪಡೆದು ಹಿಂದಿರುಗಿದ್ದ ಅಂಬೇಡ್ಕರ್ ಸಾಧನೆಯ ಬಗ್ಗೆ ಮೋರೆಗೆ ಅಪಾರ ಹೆಮ್ಮೆ ಹಾಗೂ ಗೌರವವಿತ್ತು. ಅಂಬೇಡ್ಕರರನ್ನು ಮಹಾಡ್‌ಗೆ ಕರೆಸಿ ಸನ್ಮಾನ ಮಾಡಿ, ದಲಿತ ಮಕ್ಕಳು ಅವರಂತೆ ಸಾಧನೆ ಮಾಡಲು ಸ್ಫೂರ್ತಿ ತುಂಬಬೇಕು; ದಲಿತರನ್ನು ಹೀನಾಯವಾಗಿ ಕಾಣುವ ಸವರ್ಣೀಯರು ಅಂಬೇಡ್ಕರ್ ಸಾಧನೆ ಕಂಡು ನಾಚಿಕೊಳ್ಳುವಂತೆ ಮಾಡಬೇಕು ಎಂಬ ಆಸೆಯಿಂದ ಅಂಬೇಡ್ಕರರನ್ನು ಕಂಡ ಮೋರೆ ಮಹಾಡಿನಲ್ಲಿ ದಲಿತ ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ಕೋರುತ್ತಾರೆ.

ತರುಣ ಮೋರೆಯ ಉತ್ಸಾಹ ಕಂಡ ಅಂಬೇಡ್ಕರ್ ಕೆಲವು ತಿಂಗಳ ನಂತರ ಮಹಾಡ್‌ನ ‘ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್’ ಸಿದ್ಧತೆಗಳನ್ನು ಪರಿಶೀಲಿಸಲು ತಮ್ಮ ಸಂಗಾತಿಗಳನ್ನು ಕಳಿಸುತ್ತಾರೆ. ಮುಂಬೈಯಲ್ಲಿಯೂ ಈ ಕುರಿತ ಸಭೆಗಳು ನಡೆಯುತ್ತವೆ. ಅಂಬೇಡ್ಕರ್ ಸಮ್ಮೇಳನಾಧ್ಯಕ್ಷರ ಭಾಷಣವನ್ನು ತರುಣ ಸಿ.ಬಿ. ಖೈರ್ಮೋಡೆಯವರಿಗೆ ಹೇಳಿ ಬರೆಸತೊಡಗುತ್ತಾರೆ (ಖೈರ್ಮೋಡೆ ಮುಂದೆ ಮರಾಠಿಯಲ್ಲಿ ಅಂಬೇಡ್ಕರ್ ಜೀವನಚರಿತ್ರೆಯ 12 ಸಂಪುಟಗಳನ್ನು ಬರೆದರು. ಮೊದಲ ಸಂಪುಟವನ್ನು ಅಂಬೇಡ್ಕರ್ ನೋಡಿದ್ದರು).

ಈ ಸಮ್ಮೇಳನ ನಡೆಸಲು ತಕ್ಕ ಜಾಗವೇ ಸಿಗದೆ, ಕೊನೆಗೂ ತಮಾಷಾ ನಾಟಕ ನಡೆಸುವ ಸ್ಥಳವೊಂದು ಸಿಕ್ಕುತ್ತದೆ. 1927ರ ಮಾರ್ಚ್ 19ರ ಹೊತ್ತಿಗೆ ಮಹಾರಾಷ್ಟ್ರದ ಅನೇಕ ದಿಕ್ಕುಗಳಿಂದ ತಮ್ಮ ಜಾತಿಯ ಸಂಕೇತವಾದ ಲಾಠಿ ಹಿಡಿದು ಮಹರ್ ಸಮುದಾಯದವರು ಅಲ್ಲಿ ಸೇರುತ್ತಾರೆ. ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಆ ಸುತ್ತಲಿನ ಅಸ್ಪೃಶ್ಯ ಸಮುದಾಯದವರು 19ನೆಯ ಶತಮಾನದಲ್ಲಿ ಮಿಲಿಟರಿ ಸೇರಿ ಉತ್ತಮ ಸ್ಥಿತಿಯಲ್ಲಿದ್ದುದನ್ನು, ಅವರ ಮಕ್ಕಳು ಮಿಲಿಟರಿ ಶಾಲೆಗಳಲ್ಲಿ ಕಲಿತು ವಿದ್ಯಾವಂತರಾಗುತ್ತಿದ್ದ ಕಾಲವನ್ನು ನೆನೆಸಿಕೊಳ್ಳುತ್ತಾರೆ.

ನಂತರ ಕೆಲವರ ಚಿತಾವಣೆಯಿಂದಾಗಿ ಮಿಲಿಟರಿ ಸೇವೆಯ ಬಾಗಿಲು ಮುಚ್ಚಿ, ದಲಿತರ ಪ್ರಗತಿ ಕುಸಿಯಿತು; ಆದ್ದರಿಂದ ಸರ್ಕಾರಿ ಸೇವೆಗೆ ತಕ್ಕ ಶಿಕ್ಷಣ ಹಾಗೂ ಕೃಷಿ ಎರಡನ್ನೂ ದಲಿತರು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕೆಂದು ಅಂಬೇಡ್ಕರ್ ಹೇಳುತ್ತಾರೆ. ಆನಂತರ ದಲಿತರನ್ನು ಬೆಂಬಲಿಸಿ ಮಾತಾಡಿದ ಸವರ್ಣೀಯ ಹಿಂದೂ ನಾಯಕ ಶೇಟ್ ‘ಮಹಾಡ್ ಮುನಿಸಿಪಾಲಿಟಿ ಈಚೆಗೆ ಚವ್ದಾರ್ (ಸಿಹಿನೀರು) ಕೆರೆಯ ನೀರನ್ನು ಅಸ್ಪೃಶ್ಯರೂ ಸೇರಿದಂತೆ ಎಲ್ಲರೂ ಬಳಸಿಕೊಳ್ಳಬಹುದು ಎಂಬ ನಿರ್ಣಯ ಮಾಡಿದೆ’ ಎಂಬುದನ್ನು ಸಭೆಯ ಗಮನಕ್ಕೆ ತರುತ್ತಾರೆ.

ಮಾರನೆಯ ದಿನ ಸಮ್ಮೇಳನದ ಬೆಂಬಲಿಗರಾದ ಟಿಪ್ನಿಸ್ ಮನೆಯಲ್ಲಿ ಅಂಬೇಡ್ಕರ್ ಮತ್ತು ಸಂಗಾತಿಗಳು ಈ ಕುರಿತು ಮಾತಾಡುತ್ತಿರುವಾಗ, ಅವತ್ತಿನ ಸಮಾವೇಶದ ನಂತರ ಎಲ್ಲರೂ ಚವ್ದಾರ್ ಕೆರೆಗೆ ಹೋಗಿ ಮುನಿಸಿಪಾಲಿಟಿ ನಿರ್ಣಯವನ್ನು ಜಾರಿಗೆ ತರಲು ತೀರ್ಮಾನಿಸಿದರು. ಸಮಾವೇಶದ ಕೊನೆಯಲ್ಲಿ ಸಂಘಟಕರಾದ ಭಾಯಿಚಿತ್ರೆ ಮುನಿಸಿಪಾಲಿಟಿಯ ನಿರ್ಣಯದಂತೆ ಚವ್ದಾರ್ ಕೆರೆಯ ನೀರನ್ನು ಕುಡಿಯಲು ಸಮ್ಮೇಳನಾಧ್ಯಕ್ಷರೊಂದಿಗೆ ಎಲ್ಲರೂ ಕೆರೆಯತ್ತ ನಡೆಯಬೇಕೆಂದು ಇದ್ದಕ್ಕಿದ್ದಂತೆ ಘೋಷಿಸಿದಾಗ ಸಭೆ ರೋಮಾಂಚನಗೊಂಡಿತು.

ಅಲ್ಲಿದ್ದ ಜನಸಮುದಾಯದ ಜೊತೆ ಚವ್ದಾರ್ ಕೆರೆಯತ್ತ ಹೆಜ್ಜೆ ಹಾಕಿದ ಅಂಬೇಡ್ಕರ್ ಬೊಗಸೆಯಲ್ಲಿ ಕೆರೆಯ ಸಿಹಿನೀರು ಕುಡಿದರು. ಸಾವಿರಾರು ವರ್ಷಗಳಿಂದ ಮಲೆತುಹೋಗಿದ್ದ ಇಂಡಿಯಾದ ಚರಿತ್ರೆ ಇದ್ದಕ್ಕಿದ್ದಂತೆ ಚಲಿಸಿತ್ತು. ಸಮಾವೇಶ ಮುಗಿಸಿ ಊರಿಗೆ ಹೊರಡುವ ಮುನ್ನ ಪ್ರತಿನಿಧಿಗಳು ಊಟ ಮಾಡತೊಡಗಿದರು. ಭದ್ರತೆಯ ಕಾರಣಕ್ಕಾಗಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿದ್ದ ಅಂಬೇಡ್ಕರ್ ಮತ್ತಿತರರು ಅಲ್ಲಿಗೆ ಮರಳಿದರು.

ಎರಡು ಗಂಟೆಯ ಹೊತ್ತಿಗೆ ವೀರೇಶ್ವರ ದೇವಾಲಯದ ಪೂಜಾರಿ ‘ಅಸ್ಪೃಶ್ಯರು ದೇವಾಲಯ ಪ್ರವೇಶಿಸುತ್ತಿದ್ದಾರೆ; ಕಾಪಾಡಿ, ಕಾಪಾಡಿ’ ಎಂದು ಊರ ತುಂಬಾ ಕೂಗುತ್ತಾ ಓಡತೊಡಗಿದ. ಇನ್ನು ಕೆಲವರು ‘ಮಹರ್ ಜನ ಚವ್ದಾರ್ ಕೆರೆಯ ನೀರನ್ನು ಅಪವಿತ್ರಗೊಳಿಸಿ ನಿಮ್ಮ ದೇವಾಲಯಗಳಿಗೆ ಹೋಗಲು ತಯಾರಾಗುತ್ತಿದ್ದಾರೆ’ ಎಂದು ಕುಣಬಿ ಸಮುದಾಯದವರನ್ನು ರೊಚ್ಚಿಗೆಬ್ಬಿಸಿದರು.

ಸವರ್ಣೀಯರು ಲಾಠಿ ಹಿಡಿದು ವೀರೇಶ್ವರ ದೇವಸ್ಥಾನದ ಬಳಿ ಬಂದು ಸೇರಿದರು. ಈ ನಡುವೆ ತಮ್ಮನ್ನು ಕಂಡ ಪೊಲೀಸ್ ಅಧಿಕಾರಿಗೆ ಅಂಬೇಡ್ಕರ್ ತಮ್ಮವರಿಗೆ ದೇವಾಲಯ ಪ್ರವೇಶಿಸುವ ಇರಾದೆಯೇ ಇಲ್ಲ ಎಂದು ಹೇಳಿದರು. ಅತ್ತ ಊರಿಗೆ ಹೊರಟ ದಲಿತರ ಮೇಲೆ ಸವರ್ಣೀಯ ಗೂಂಡಾಗಳು ಹಲ್ಲೆ ಮಾಡಿದರು. ಸಮ್ಮೇಳನದ ಅಡುಗೆಮನೆಗೆ ನುಗ್ಗಿ ಅಲ್ಲಿದ್ದ ಹೆಂಗಸರು ಮಕ್ಕಳನ್ನೂ ಹೊಡೆದರು. ಗೂಂಡಾಗಳಿಂದ ತಪ್ಪಿಸಿಕೊಂಡು ಓಡುತ್ತಾ ಆಸರೆ ಬೇಡುತ್ತಿದ್ದ ದಲಿತರನ್ನು ಮೇಲುಜಾತಿಯ ಬಹುತೇಕರು ಮನೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ.

ಮುಸಲ್ಮಾನರು ಅವರ ರಕ್ಷಣೆಗೆ ಬರದಿದ್ದರೆ ಅವರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿರುತ್ತಿತ್ತು. ಮುಸಲ್ಮಾನರು ಮತ್ತು ಕಾಯಸ್ಥ ಜಾತಿಯವರು ಮಾತ್ರ ಅವರ ನೆರವಿಗೆ ಬಂದರು. ಜನರನ್ನು ಸಂತೈಸುತ್ತಾ, ‘ಏನೇ ಆಗಲಿ ಶಾಂತಿಯಿಂದ ಇರಿ’ ಎಂದು ಅಂಬೇಡ್ಕರ್ ಕೇಳಿಕೊಂಡರು. ಅಲ್ಲಿ ಸೇರಿದ್ದ, ಮಿಲಿಟರಿ ಸೇವೆಯಿಂದ ನಿವೃತ್ತರಾಗಿದ್ದ ದೃಢಕಾಯ ದಲಿತರಿಗೇನಾದರೂ ಅಂಬೇಡ್ಕರ್ ‘ಹೂಂ’ ಎಂದಿದ್ದರೆ ಕತೆಯೇ ಬೇರೆಯಾಗುತ್ತಿತ್ತು ಎಂದು ತೇಳ್‌ತುಂಬ್ಡೆ ಬರೆಯುತ್ತಾರೆ. ಆನಂತರ ಕೆರೆಯ ಸಿಹಿನೀರನ್ನು ಪುರೋಹಿತರು ಸಗಣಿ, ಗಂಜಲ ಹಾಕಿ ‘ಶುದ್ಧಿ’ ಮಾಡಿದ ಕತೆಯೂ ಕೆಲವು ಪುಸ್ತಕಗಳಲ್ಲಿದೆ.

ಮಹಾಡ್‌ನಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಕೆಲವರಿಗೆ ನಂತರ ಶಿಕ್ಷೆಯಾಯಿತು. ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಪೂರ್ಣ ಪ್ರಮಾಣದ ಮಹಾಡ್ ಸತ್ಯಾಗ್ರಹಕ್ಕಾಗಿ ಅಂಬೇಡ್ಕರ್ ವ್ಯಾಪಕ ಸಿದ್ಧತೆ ಶುರು ಮಾಡಿದರು. ಇದೆಲ್ಲದರ ಮಧ್ಯೆ, ತಾವೂ ಮಹಾಡ್ ಸತ್ಯಾಗ್ರಹವನ್ನು ಬೆಂಬಲಿಸುತ್ತೇವೆಂದು ಬಂದ ದಲಿತ ಸಾಧುಗಳು ಅಂಬೇಡ್ಕರ್ ‘ಅರೆ ರುದ್ರಾವತಾರಿ’ ಎಂದು ಪ್ರತಿಪಾದಿಸತೊಡಗಿದರು! ಇದನ್ನು ಕೇಳಿ ಮೊದಲು ನಕ್ಕ ಅಂಬೇಡ್ಕರ್, ನಂತರ ಗಂಭೀರವಾಗಿ ಹೇಳಿದರು: ‘ಇಂಥ ಕಲ್ಪನೆಗಳಿಂದಲೇ ಬ್ರಾಹ್ಮಣರು ಸಮಾಜವನ್ನು ನಾಶ ಮಾಡಿರುವುದು. ಇಂಥದ್ದನ್ನೆಲ್ಲಾ ಎಂದೂ ಸಮುದಾಯದಲ್ಲಿ ಹಬ್ಬಿಸಬಾರದು’.

ಈ ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿರುವಾಗಲೇ ಮಹಾಡ್ ಮುನಿಸಿಪಾಲಿಟಿ ಚವ್ದಾರ್ ಕೆರೆಯ ನೀರನ್ನು ಎಲ್ಲರೂ ಬಳಸಬಹುದು ಎಂಬ ನಿರ್ಣಯವನ್ನು ವಾಪಸ್ ತೆಗೆದುಕೊಂಡಿತು. ದಲಿತರು ಈ ಕೆರೆಯ ನೀರನ್ನು ಬಳಸಬಾರದೆಂದು ಸವರ್ಣೀಯರು ಕೋರ್ಟಿನಿಂದ ತಡೆಯಾಜ್ಞೆ ತಂದರು; ಸಮ್ಮೇಳನಕ್ಕೆ ಜಾಗವೇ ಸಿಗದಂತೆ ಮಾಡಿದ್ದೇವೆಂದು ಗುಜಾರ್ ಬ್ರಾಹ್ಮಣರು ಹಿಗ್ಗಿನಲ್ಲಿದ್ದರು.

ಆದರೆ ಫತೇಹ್ ಖಾನ್ ಎಂಬಾತ ಸಂತೋಷದಿಂದ ಸಮ್ಮೇಳನಕ್ಕೆ ಜಾಗ ಕೊಟ್ಟ. ಗುಜಾರ್ ಬ್ರಾಹ್ಮಣರ ಒತ್ತಡಕ್ಕೆ ಫತೇಹ್ ಖಾನ್ ಮಣಿಯಲಿಲ್ಲ; ಅವನ ಹೊಲದಲ್ಲಿ ಹಾಕಿದ ದೊಡ್ಡ ಪೆಂಡಾಲಿನಲ್ಲಿ, 25 ಡಿಸೆಂಬರ್ 1927ರಂದು ಹತ್ತು ಸಾವಿರ ಪ್ರತಿನಿಧಿಗಳ ಸತ್ಯಾಗ್ರಹ ಸಮ್ಮೇಳನ ಶುರುವಾಯಿತು. ಕೆಲವು ದಲಿತೇತರ ನಾಯಕರೂ ಸಮ್ಮೇಳನದಲ್ಲಿ ಮಾತಾಡಿದರು.

ಅಂಬೇಡ್ಕರರ ಚಾರಿತ್ರಿಕ ಭಾಷಣದ ನಂತರ ಜಾತಿಪದ್ಧತಿಯ ಬೇರುಗಳಿಗೆ ಮಾರಣಾಂತಿಕ ಹೊಡೆತ ಕೊಡಲು ಮನುಸ್ಮೃತಿಯನ್ನು ಸುಡಲಾಯಿತು. ಚವ್ದಾರ್ ಕೆರೆಯ ನೀರನ್ನು ಬಳಸುವ ವಿಚಾರದಲ್ಲಿ ಮುಂದೊಮ್ಮೆ ಕಾನೂನಿನ ಸಮರವನ್ನು ಗೆಲ್ಲುವ ಛಲದಿಂದ ಅಂಬೇಡ್ಕರ್ ಸಾವಿರಾರು ಅನುಯಾಯಿಗಳೊಡನೆ ಮಹಾಡಿನ ಬೀದಿಗಳಲ್ಲಿ ಮೆರವಣಿಗೆ ಹೊರಟು ನಾಲ್ಕೂ ದಿಕ್ಕುಗಳಿಂದ ಕೆರೆಯ ಸುತ್ತ ಸೇರಿ ಕಾರ್ಯಕ್ರಮ ಮುಗಿಸಿದರು.

ಮರುದಿನ ಚಮ್ಮಾರರ ಸಭೆಗಳನ್ನು ಉದ್ದೇಶಿಸಿ ಅಂಬೇಡ್ಕರ್ ಮಾತಾಡಿದರು. ಈ ನಡುವೆ ಅಕ್ಕಪಕ್ಕದ ಊರುಗಳಿಂದ ಆತಂಕಗೊಂಡು ಮಹಾಡಿಗೆ ಓಡಿ ಬಂದ ಹೆಂಗಸರು ಬಾಬಾಸಾಹೇಬರನ್ನು ನೋಡಿ ನೆಮ್ಮದಿಗೊಂಡರು; ಕಾರಣ, ಅಂಬೇಡ್ಕರರ ಹತ್ಯೆಯಾಗಿದೆಯೆಂದು ಪುಕಾರು ಹಬ್ಬಿತ್ತು. ಮಹರ್ ಮಹಿಳೆಯರು ಬಟ್ಟೆ ತೊಡುವ ಕ್ರಮದಲ್ಲಿ ಇದ್ದ ಜಾತಿದೈನ್ಯತೆಯನ್ನು ಮೊದಲು ಬಿಡಬೇಕೆಂದು ಅಂಬೇಡ್ಕರ್ ಹೇಳಿದರು. ಸಮ್ಮೇಳನದ ನಂತರ ಊರಿಗೆ ಹೊರಟ ಮಹಿಳೆಯರು ತಮ್ಮ ಉಡುಪಿನ ಶೈಲಿಯನ್ನು ಬದಲಿಸಿಕೊಂಡಿದ್ದರು.

ಮಹಾಡ್ ಮುನಿಸಿಪಾಲಿಟಿಯ ಸ್ವೀಪರುಗಳು ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದರು. ಮಹಾಡ್ ಸಮ್ಮೇಳನಗಳ ಅನುಭವ ಬಾಬಾಸಾಹೇಬರಿಗೆ ದಲಿತರ ಸಂಘಟನೆ-ಹೋರಾಟದ ಸಾಧ್ಯತೆಗಳ ಬಗ್ಗೆ ಅಪಾರ ಭರವಸೆ ಮೂಡಿಸಿತು. ಮಹಾಡ್ ತೋರಿದ ಹಕ್ಕಿನ ಪ್ರತಿಪಾದನೆಯ ಅರ್ಥಪೂರ್ಣತೆಯನ್ನು ಇವತ್ತಿಗೂ ದಲಿತ ಸಂಘಟನೆಗಳು ನೆನೆಯುತ್ತವೆ. ಅಂಬೇಡ್ಕರ್ ಬದುಕಿರುವವರೆಗೂ ಮನುಸ್ಮೃತಿ ಸುಟ್ಟ ದಿನವನ್ನು ಆಚರಿಸುತ್ತಿದ್ದರು.

ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆಗಳಲ್ಲಿ ಈ ಆಚರಣೆ ಇವತ್ತಿಗೂ ಮುಂದುವರಿದಿದೆ. ಸ್ವಾತಂತ್ರ್ಯಾನಂತರ ಮಹಾಡ್ ಹೋರಾಟ ಚರಿತ್ರೆಗೆ ಸಂದಿದೆಯೆಂದು ಭಾವಿಸಲಾಗದು; ಕಳೆದ ವರ್ಷವಷ್ಟೇ ಚೆನ್ನರಾಯಪಟ್ಟಣದ ಕುರುವಂಕದಲ್ಲಿ ಕಲ್ಯಾಣಿಯೊಂದರ ನೀರು ಬಳಸಲು ದಲಿತರು ಹೋರಾಡಬೇಕಾಗಿ ಬಂದಿತ್ತು. ಆದ್ದರಿಂದಲೇ ಮಹಾಡ್ ಇವತ್ತಿಗೂ ದಲಿತರ ನಿರಂತರ ಹೋರಾಟದ ದಿಟ್ಟ ಸಂಕೇತದಂತಿದೆ.

ಕೊನೆ ಟಿಪ್ಪಣಿ: ಸಿಹಿನೀರಿಗಾಗಿ ಸುದೀರ್ಘ ಹೋರಾಟ
‘ಚವ್ದಾರ್ ಕೆರೆ ಸಾರ್ವಜನಿಕ ಕೆರೆಯಲ್ಲ; ಅದು ‘ಚೌಧರಿ’ ಎಂಬುವವರು ಕಟ್ಟಿಸಿದ ಖಾಸಗಿ ಕೆರೆ’ ಎಂದು ಸವರ್ಣೀಯರು ಸುಳ್ಳುವಾದ ಹೂಡಿ, ದಲಿತರು ಕೆರೆಯ ನೀರನ್ನು ಮುಟ್ಟದಂತೆ ಕೋರ್ಟಿನಿಂದ ತಡೆಯಾಜ್ಞೆತಂದಿದ್ದರು.

‘ಚವ್ದಾರ್ ಕೆರೆಯ ನೀರನ್ನು ಮುಟ್ಟಿ ನಾನು ಜೈಲಿಗೆ ಹೋಗಲು ಸಿದ್ಧ; ನಿಮ್ಮಲ್ಲಿ ಎಷ್ಟು ಜನ ಜೈಲಿಗೆ ಹೋಗಲು ಸಿದ್ಧರಿದ್ದೀರಿ, ಹೆಸರು ಕೊಡಿ’ ಎಂದು ಅಂಬೇಡ್ಕರ್ ಸತ್ಯಾಗ್ರಹ ಸಮ್ಮೇಳನದಲ್ಲಿ ಕೇಳಿದರು; ಹೆಸರು ಬರೆಸಿದವರ ಸಂಖ್ಯೆ ಮೂರು ಸಾವಿರ ದಾಟತೊಡಗಿತು; ಸಮ್ಮೇಳನದಲ್ಲಿದ್ದ ಬಹುತೇಕರು ಜೈಲಿಗೆ ಹೋಗಲು ಸಿದ್ಧರಿದ್ದರು.

ಸತ್ಯಾಗ್ರಹಕ್ಕೆ ಹೊರಡುವ ಕೆಲವು ಮಹರ್ ಗಂಡಸರು ತಮ್ಮ ಹೆಂಡತಿಯರ ಕುಂಕುಮವನ್ನು ಅಳಿಸಿ ಯುದ್ಧಭೂಮಿಗೆ ಹೊರಡುವಂತೆ ಮಹಾಡಿಗೆ ಬಂದಿದ್ದರು. ಅವರು ಹಿಂದೆ ಸರಿವ ಪ್ರಶ್ನೆಯೇ ಇರಲಿಲ್ಲ. ಮುಂದೆ ಕೋರ್ಟಿನಿಂದ ಕೋರ್ಟಿಗೆ ದಾಟಿದ ಈ ಕೇಸನ್ನು ಅಂಬೇಡ್ಕರ್ ಗೆದ್ದದ್ದು 1937ರಲ್ಲಿ. ಆದರೆ ಅಂಬೇಡ್ಕರ್ ಅಷ್ಟುಹೊತ್ತಿಗಾಗಲೇ ದಲಿತರನ್ನು ಬಹುದೂರ ಕರೆದೊಯ್ದಿದ್ದರು. ಜೊತೆಗೆ, ದಲಿತರ ಬಿಡುಗಡೆಗೆ ಕಾನೂನು ಹಾಗೂ ಹೋರಾಟಗಳೆರಡೂ ಮುಖ್ಯವೆಂಬುದನ್ನೂ ತೋರಿಸಿದ್ದರು.

ಕೃಪೆ: –ಪ್ರಜಾವಾಣಿಯ ‘ಕನ್ನಡಿ’ ಅಂಕಣದಲ್ಲಿ ಪ್ರಕಟಗೊಂಡಿದ್ದ ಬರಹ (ಮಾರ್ಚ್ 16, 2016)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ

Published

on

  • ರುದ್ರಪ್ಪ ಹನಗವಾಡಿ

ಅಪ್ಪ ಮೊದಲಿನಿಂದಲೂ ಎಲೆ ತೋಟ ಮಾಡಿಕೊಂಡು ಬರುತ್ತಿದ್ದ ಬಗ್ಗೆ ಆಗಲೇ ಬರೆದಿದ್ದೇನೆ. ಅದರಿಂದಲೇ ನಮ್ಮೆಲ್ಲರ ಜೀವನ ಕೊರತೆ ಕಾಣದಂತೆ ನಡೆಯುತ್ತಿತ್ತು. ನಮಗೆ ಸ್ವಂತ ತೋಟದ ಜಮೀನು ಇಲ್ಲದ್ದರಿಂದ ಕಪ್ಪಲಿ ಮಾಡಿ ಬೇರೆಯವರ ಜಮೀನನ್ನು ಕೋರಿಗೆ ಮಾಡುತ್ತಿದ್ದರು.

ಕರ್ನಾಟಕದಲ್ಲಿ ಈ ಪದ್ಧತಿ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿರುವುದನ್ನು ನೋಡುತ್ತೇವೆ. ಭೂಮಾಲೀಕನು ಮತ್ತು ಅದರಲ್ಲಿ ದುಡಿಯುವವ, ಬರುವ ಒಟ್ಟು ಆದಾಯದಲ್ಲಿ ಸಮನಾಗಿ ಹಂಚಿಕೊಳ್ಳುವ ವ್ಯವಸ್ಥೆ ಇರುತ್ತಿತ್ತು. ಹೀಗೆ ಕೋರಿಗೆ ಮಾಡಿಕೊಳ್ಳುತ್ತಿದ್ದ ಮಾಲೀಕ ಮತ್ತು ಶ್ರಮಿಕರಿಬ್ಬರಲ್ಲಿ ನನ್ನ ಬಾಲ್ಯದ ದಿನಗಳಲ್ಲಿ ಅನ್ಯೋನ್ಯ ಸಂಬಂಧಗಳಿರುತ್ತಿದ್ದವು. ಹಬ್ಬ ಹರಿದಿನ, ಮದುವೆ ಮುಂಜಿಗಳಲ್ಲಿ, ಸಾವು ನೋವುಗಳಲ್ಲಿ ಬಂಧುಗಳಂತೆ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು.

ಹೀಗೆ ಹೆಚ್ಚಿನ ಜಮೀನುಗಳು ಇದ್ದ ಮನೆತನದವರು ಕೋರಿಗೆ ನೀಡಿದ ಜನರೊಡನೆ ಅನೇಕ ತಲೆಮಾರುಗಳಿಂದ ಕೋರಿನ ವ್ಯವಸ್ಥೆಯಲ್ಲಿ ತೋಟ, ಹೊಲಗಳನ್ನು ಮಾಡಿಕೊಂಡು ಬರುತ್ತಿದ್ದರು. ಕೆಲವು ಭೂಮಾಲೀಕರು, ತೋಟದಲ್ಲಿ ದುಡಿಯುತ್ತಿದ್ದ ಕೋರಿನವರಿಗೆ ಬರುವ ಆದಾಯದಲ್ಲಿ ಸರಿಯಾಗಿ ಹಂಚಿಕೊಡದೆ ಮೋಸ ಕೂಡ ಮಾಡುತ್ತಿರುವ ವಿಚಾರಗಳನ್ನು ಕೂಡ ಊರಲ್ಲಿ ಜನರು ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದರು. ಏಕೆಂದರೆ ಬೆಳೆದ ಎಲೆ ಪೆಂಡಿಗಳನ್ನು ಹುಬ್ಬಳ್ಳಿ, ಧಾರವಾಡ, ಹೊಸಪೇಟೆ, ಕಂಪ್ಲಿಗಳಿಗೆ ಭೂಮಾಲೀಕರುಗಳೇ ಮಾರಾಟ ಮಾಡಲು ಹೋಗುತ್ತಿದ್ದರು.

ಅಲ್ಲಿನ ದಲಾಲರು ಹರಾಜು ಹಾಕಿ ನೀಡಿದ ಪಟ್ಟಿಯನ್ನು ಕೋರಿನವರಿಗೆ ಸರಿಯಾಗಿ ತೋರಿಸದೆ ಮತ್ತು ಓದಲು ಬಾರದೆ ಇರುವ ಕೋರಿನವರಿಗೆ ಮೋಸ ಮಾಡುತ್ತಿದ್ದರು. ಆದರೆ ಅಪ್ಪ ಮಾಡಿಕೊಂಡು ಬರುತ್ತಿದ್ದ ಕೋರಿನ ತೋಟದ ಯಜಮಾನರುಗಳು ನಾನು ಚಿಕ್ಕಂದಿನಿಂದಲೂ ನೋಡಿದ ದೊಡ್ಡಮನಿ ಬಸಣ್ಣ, ಸಣ್ಣಮನಿ ರುದ್ರಜ್ಜ, ಬಣಕಾರ್ ನಾಗಪ್ಪ ಎಂಬ ಭೂಮಾಲೀಕರುಗಳು ಎಂದೂ ಆ ರೀತಿ ಮಾಡಿದವರಲ್ಲ.

ದೊಡ್ಡಮನಿ ಬಸಣ್ಣನದು ವರ್ಣರಂಜಿತ ವ್ಯಕ್ತಿತ್ವ. ಇವರ ಹಿಂದಿನ ವಂಶಕ್ಕೆ ಹೋದರೆ ಶಿವಪ್ಪಜ್ಜ ಎಂಬ ಹಿರಿಯ, ಅಪ್ಪನನ್ನು `ಹನುಮಂತು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನಾನು 13-14ನೇ ವಯಸ್ಸಿನಲ್ಲಿ ಇದ್ದಾಗ ಅಪ್ಪನನ್ನು ಹಾಗೆ ಕರೆಯುತ್ತಿದ್ದವರನ್ನು ನಾನು ಎಲ್ಲೂ ಕೇಳಿರಲಿಲ್ಲ. ಶಿವಪ್ಪಜ್ಜನ ತಂಗಿಯಾಗಿದ್ದ ಸಿದ್ದಜ್ಜಿ ತನ್ನ ಗಂಡನ ಕಾಲಾನಂತರ ತವರು ಮನೆಗೆ ಬಂದು ಅಣ್ಣ ಶಿವಪ್ಪಜ್ಜನ ಮನೆಯಲ್ಲೇ ಇದ್ದು ತೋಟ ಮನೆಗಳಲ್ಲಿ ಎರಡಾಳಿನ ಕೆಲಸ ಮಾಡುತ್ತಿದ್ದರು. ಶಿವಪ್ಪಜ್ಜನ ಅಣ್ಣ ತಮ್ಮಂದಿರು ದೊಡ್ಡ ಮನೆತನ ಮತ್ತು ದೊಡ್ಡ ನಡವಳಿಕೆ ಕೂಡ.

ಊರಲ್ಲಿನ ದೇವರ ಕೆಲಸವಾಗಲೀ, ಮದುವೆ ಮುಂಜಿಗಳಲ್ಲಿ ಅವರಿಲ್ಲದೆ ನಡೆಯುತ್ತಿರಲಿಲ್ಲ. ಅದೇನೋ ಮಕ್ಕಳಾಗಲಿಲ್ಲ ಎಂದು ಒಂದೆರಡು ಮದುವೆಯಾಗಿ ಕೊನೆಯಲ್ಲಿ ಚಿಕ್ಕ ಹೆಂಡತಿಗೆ ಗಂಡು ಮಕ್ಕಳಾಗದೇ ಒಂದು ಹೆಣ್ಣು ಮಗಳಿದ್ದು, ಅವರು ನಮ್ಮ ದೊಡ್ಡಕ್ಕ ಕೊಟ್ರಕ್ಕನ ಸಹಪಾಠಿಯಾಗಿ ಶಾಲೆಗೆ ಹೋಗುತ್ತಿದ್ದುದನ್ನು ಅಕ್ಕ ಈಗಲೂ ನೆನಸಿಕೊಳ್ಳುತ್ತಾಳೆ. ಅಪ್ಪ ಇವರ ತೋಟ ಮಾಡುತ್ತಿದ್ದ ಸಮಯದಲ್ಲಿ ನಾನು ತೋಟಕ್ಕೆ ಬುತ್ತಿ ತೆಗೆದುಕೊಂಡು ಹೋಗುತ್ತಿದ್ದೆ. ಎಲ್ಲಾ ಒಟ್ಟಿಗೆ ಕೂತು ಉಣ್ಣುವಾಗ, ಶಿವಪ್ಪಜ್ಜ, ಸಿದ್ದಜ್ಜಿ ಅಪ್ಪನೊಡನೆ ಆತ್ಮೀಯರಾಗಿ ಮಾತಾಡುತ್ತಿದ್ದು ಅವರ ಮನೆತನದಲ್ಲಿನ ಬಂಗಾರದ ಹಂಚಿಕೆಯಲ್ಲಿ ಆಗಿರುವ ತಾರತಮ್ಯಗಳನ್ನು ಮಾತಾಡುತ್ತಿದ್ದರೆ ನಾನೂ ಕೇಳಿಸಿಕೊಳ್ಳುತ್ತಿದ್ದೆ. ಅಪ್ಪನ ಜೊತೆ ಶಿವಪ್ಪಜ್ಜ, ಸಿದ್ದಜ್ಜಿ ಅವರ ಸಂಬಂಧಗಳು ತುಂಬಾ ಆತ್ಮೀಯವಾಗಿರುತ್ತಿದ್ದವು. ಇಂತಹ ಮನೆತನದ ಕುಡಿಯಾಗಿದ್ದ ಬಸಣ್ಣ ಚಿಕ್ಕ ವಯಸ್ಸಿನವರಾಗಿದ್ದು ಅವರ ಪಾಲಿನ ತೋಟದಲ್ಲಿ ಅಪ್ಪ ಕೋರಿಗೆ ಮಾಡುತ್ತಿದ್ದ.

ಅಪ್ಪನನ್ನು ಆತ ಅಣ್ಣಾ ಎಂದು ಯಾವಾಗಲೂ ಕೂಗಿ ಕರೆಯುತ್ತಿದ್ದ. ಎಂದೂ ಏಕವಚನದಲ್ಲಿ ಮಾತಾಡಿದ್ದು ನಾನು ಕೇಳಿರಲಿಲ್ಲ. ಮತ್ತು ಬೆಳೆದ ಬೆಲೆಯಲ್ಲಿ ಸಮಾನ ಹಂಚಿಕೆಯಲ್ಲೂ ಏನೂ ಮೋಸ ಇರುತ್ತಿರಲಿಲ್ಲ. ಆದರೆ ಆತ ಹೊಸ ತಲೆಮಾರಿನ ಶೋಕಿಗೆ ಮಾರುಹೋಗಿದ್ದ. ಊರಿನಲ್ಲಿ ಮೊದಲು ರ‍್ಯಾಲಿ ಬೈಸಿಕಲ್ ನಂತರ ಸೈಕಲ್ ಮೋಟಾರ್ ತಂದು ಓಡಾಡಿಸಿದ! ಲಿಂಗಾಯತರಲ್ಲಿ ನಿಷಿದ್ಧವಾದ ಕುಡಿತ ಮತ್ತು ಮಾಂಸಾಹಾರವನ್ನು ಯಥೇಚ್ಛವಾಗಿ ಸೇವಿಸುತ್ತಿದ್ದ. ಅದಕ್ಕಾಗಿ ಯಾರಿಗೂ ಕೇರ್ ಮಾಡುತ್ತಿರಲಿಲ್ಲ. ಆದರೂ ಅವರಿವರು ಅವನ ಹಿಂದು ಮುಂದೆ ಮಾತಾಡಿಕೊಳ್ಳುವುದನ್ನು ಬಾಲಕನಾಗಿದ್ದ ನಾನು ಕೇಳಿಸಿಕೊಳ್ಳುತ್ತಿದ್ದೆ. ಯಾವಾಗಲಾದರೂ ನಮ್ಮ ಮನೆ ಕಡೆಗೆ ಬಂದಾಗ ಹೊರಕಟ್ಟೆಯಲ್ಲಿ ಕೂತು ಅವನ ಮೂಗಿಗೆ ಮಾಂಸದ ಸಾರಿನದೋ, ಕೋಳಿ ಸಾರಿನದೋ ಘಂ ವಾಸನೆ ಬಡಿದರೆ, ಎದ್ದು ಹೋಗದೆ ತಡರಾತ್ರಿವರೆಗೆ ಕೂತು ಅಪ್ಪನೊಟ್ಟಿಗೆ ಪಾರ್ಟಿ ಮಾಡಿಕೊಂಡು ಹೋಗುತ್ತಿದ್ದ.

ಹೀಗಿದ್ದ ಬಸಣ್ಣನಿಗೆ ಊರಲ್ಲಿದ್ದ ಸುಂದರಿಯೊಬ್ಬಳ ಸಹವಾಸವಾಗಿ ಆಕೆ ನಾವು ಮಾಡುತ್ತಿದ್ದ ಕೋರಿನ ತೋಟಕ್ಕೆ ಬರುತ್ತಿದ್ದಳು. ಅದ್ಯಾವ ವಿಷಯದಲ್ಲಿ ವಿವಾದವಾಯಿತೋ ಅಪ್ಪ ಬೆಳೆದು ನಿಂತಿದ್ದ ತೋಟವನ್ನು ನಿಂತ ಕಾಲಲ್ಲಿ ಬಿಟ್ಟು ಹೊರ ಬಂದು, ಬಣಕಾರ ನಾಗಪ್ಪ ಎನ್ನುವವರ ಬೇರೊಂದು ಕೋರಿನ ತೋಟವನ್ನು ಹಿಡಿದಿದ್ದ. ಇಲ್ಲಿ ಕಪ್ಪಲಿಯನ್ನು ಹೂಡಿ ನೀರು ಹಾಯಿಸುವುದು, ಅದರಿಂದ ಶ್ರಮ ಜಾಸ್ತಿಯಾಗಿರುತ್ತಿತ್ತೇ ಹೊರತು ಆದಾಯದಲ್ಲಿ ಅಂತಹದೇನೂ ಹೆಚ್ಚುವರಿ ಕಾಣುತ್ತಿರಲಿಲ್ಲ. ಆಗ ನಾನು ನೀರು ಹಾಯಿಸುವ, ಎಲೆ ಕೊಯ್ಯುವ, ಬಳ್ಳಿಯನ್ನು ಬೆಳೆದ ಮುಂಡಗಳಿಗೆ ಕಟ್ಟುವ ಕೆಲಸವನ್ನು ಅಪ್ಪ, ಅಣ್ಣನ ಜೊತೆ ಸೇರಿ ಮಾಡುತ್ತಿದ್ದೆ. ಆಗ ಏಳನೆ ತರಗತಿ ಪಾಸುಮಾಡಿ ಸಾಗರದಲ್ಲಿ ಹೈಸ್ಕೂಲಿಗೆ ಸೇರಿದ್ದೆ. ಕೋರಿನ ತೋಟದ ಮಾಲೀಕರಾಗಿದ್ದ ಬಣಕಾರ್ ನಾಗಪ್ಪ ಅವರ ಮಗ ಜಯಣ್ಣ ನನ್ನ ಕಿರಿಯ ಸಹಪಾಠಿಯಾಗಿ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ.

ನಾಗಪ್ಪಜ್ಜನೂ ದೊಡ್ಡ ಮನುಷ್ಯ. ಆಸೆಯವನಾಗಿರಲಿಲ್ಲ. ಬಂದ ಹಣವನ್ನು ಸರಿಯಾಗಿ ಹಂಚಿ ಕೊಡುತ್ತಿದ್ದ. ಅವರ ಮನೆಯವರೆಲ್ಲ ಇಂದಿಗೂ ಅದೇ ಆತ್ಮೀಯತೆಯನ್ನು ತೋರುವ ಬಂಧುಗಳಾಗಿದ್ದಾರೆ. ನಾಗಜ್ಜನ ಹೆಂಡತಿ ಗಿರಿಜಕ್ಕ, ತಾಯಿ ಹೃದಯದವರು. ನಾನು ಯಾವುದೇ ಕೆಲಸಕ್ಕೆ ಅವರ ಮನೆಗೆ ಹೋದಾಗ ರೊಟ್ಟಿ ಉಣ್ಣೆಂದು ಜುಲುಮೆ ಮಾಡಿ ಉಣಿಸುತ್ತಿದ್ದರು. ಅದೇಕೋ ಕಪ್ಪಲಿಯಿಂದ ದುಡಿಮೆ ಉಚಾಯಿಸದ ಕಾರಣ ಅಪ್ಪ ಬೇರೊಬ್ಬ ಭೂಮಾಲೀಕರಾದ ಸಣ್ಣಮನಿ ರುದ್ರಜ್ಜ, ಹಾಲಸಿದ್ದಪ್ಪ ಎಂಬುವರು ಹರಾಜಿನಲ್ಲಿ ಎಂಟು ವರ್ಷಗಳಿಗೆ ಹಣ ಗುತ್ತಿಗೆ ಪಡೆದ ಊರ ದೇವರ ಜಮೀನನ್ನು, ಕೋರಿಗೆ ಮಾಡಲು ಅಪ್ಪ ತೀರ್ಮಾನಿಸಿದ್ದರು.

ಅದೇನು ಅದೃಷ್ಟವೋ ಎಂಬಂತೆ ತೋಟವೊಂದು ನಂದನವನದಂತೆ ಬೆಳೆದು ಸಾಕಷ್ಟು ಆದಾಯ ಬರುತ್ತಿತ್ತು. ಈ ಸಂದರ್ಭದಲ್ಲಿಯೇ ಅಪ್ಪ ಇಡೀ ಉತ್ಪನ್ನವನ್ನು ನಾಲ್ಕು ಸಾವಿರ ರೂಪಾಯಿಗಳಿಗೆ ಗುತ್ತಿಗೆಗೆ ಒಪ್ಪಿಕೊಂಡು 100 ರೂಗಳಿಗೆ ಏಳೂವರೆ ಪೆಂಡಿಯಂತೆ ಎಲೆ ಪೆಂಡಿ ನೀಡಬೇಕಾಗಿದ್ದ ಕರಾರಿಗೆ ಒಪ್ಪಿ ಕೊಟ್ಟಿದ್ದರು.

ಈ ರೀತಿ ಎಲೆ ಕೊಯ್ದುಕೊಂಡು ಹೋಗುತ್ತಿದ್ದ ಕೇಣಿದಾರರು ಉಳಿಯುತ್ತಿದ್ದ ಅರ್ಧ ಅಥವಾ ಕಾಲು ಪೆಂಡಿಯ ಎಲೆಯನ್ನು ತೆಗೆದುಕೊಳ್ಳದೆ ತೋಟದವರಿಗೆ ಬಿಟ್ಟುಬಿಡುತ್ತಿದ್ದರು. ಅದನ್ನು ಸಾಮಾನ್ಯವಾಗಿ ಕೋರಿಗೆ ಮಾಡಿದವರೇ ಕೊಯ್ದುಕೊಂಡು ಮಾರಿ ಕೊಳ್ಳುತ್ತಿದ್ದರು. ಅದು ತೋಟದ ಮಾಲೀಕನಿಗೆ ಗೊತ್ತಿದ್ದರೂ ಸಾಮಾನ್ಯವಾಗಿ ಕೇಳುತ್ತಿರಲಿಲ್ಲ.ಇಂತಹದೊಂದು ಎಲೆ ಕೊಯ್ಯುವ ಸಮಯದಲ್ಲಿ ಕರಾರುದಾರನಿಗೆ ಕೊಟ್ಟು ಉಳಿದ ಸುಮಾರು ಕಾಲು ಪೆಂಡಿಯಷ್ಟು ಎಲೆ ಉಳಿದಿತ್ತು. ನಾನೇ ಕೊಯ್ದೆನೋ ನಮ್ಮ ಅಣ್ಣ ಹೇಳಿದನೋ ಅಪ್ಪನಿಗೆ ಗೊತ್ತಿಲ್ಲದಂತೆ ನಾನು ಬಂದು ಬೆಳಿಗ್ಗೇನೆ ಎಲೆ ಕೊಯ್ಯುತ್ತಿದ್ದೆ. ಆಗ ಒಳ್ಳೆಯ ರೇಟು ಬೇರೆ ಇದ್ದುದರಿಂದ ಮಾರಿದ ನಂತರ ಖರ್ಚಿಗೆ ದುಡ್ಡು ಸಿಗುವುದೆಂಬ ಯೋಚನೆಯಲ್ಲಿದ್ದೆ. ಆಗ ಬಹುಶಃ ನಾನು ಆಗಷ್ಟೇ ಹೈಸ್ಕೂಲಿಗೆ ಸೇರಿ ರಜೆಯಲ್ಲಿ ಊರಿಗೆ ಬಂದಿದ್ದೆ.

ನನ್ನ ಪಾಡಿಗೆ ನಾನು ಎಲೆ ಕೊಯ್ಯುವ ಸಮಯಕ್ಕೆ ಮಾಲೀಕ ರುದ್ರಪ್ಪಜ್ಜನ ತಮ್ಮ ಹಾಲಸಿದ್ದಪ್ಪ ಬಂದವನೇ ನಾನು ಎಲೆ ಕೊಯ್ಯುತ್ತಿರುವುದನ್ನ ನೋಡಿ, ಇದೇನು ಕಳ್ಳತನದಿಂದ ಎಲೆ ಕೊಯ್ಯುತ್ತಿಯಲ್ಲ ಎಂದು ಪ್ರಾರಂಭಿಸಿದವ ನಾನೊಂದು ಮಹಾಪರಾಧ ಮಾಡಿರುವುದಾಗಿ ಬೈಯುತ್ತಾ ನನ್ನ ಮೇಲೆ ಕಳ್ಳತನದ ಆರೋಪ ಹೊರಿಸಿ ಎಲೆ ಕೊಯ್ಯು ವುದನ್ನ ನಿಲ್ಲಿಸಿದ. ಆಗ ಅದೇನೇನೊ ಮಾತಾಡಿದವನೋ ನನಗಂತೂ ಸಹಿಸಿಕೊಳ್ಳಲಾಗದೆ ಅವಮಾನದಲ್ಲಿ ಕುಸಿದು ಹೋಗಿದ್ದೆ. ಬಡತನದ ಕ್ರೌರ್ಯವೆಂದರೆ ಏನೆಂಬುದನ್ನ ಅವನ ಬೈಗುಳಗಳಲ್ಲಿ ದಾಖಲಿಸುತ್ತಾ, ಕೊಯ್ದಿದ್ದ ಎಲೆ ಬುಟ್ಟಿಯನ್ನು ನನ್ನ ಮೇಲೆ ಹೊರಿಸಿಕೊಂಡು ಊರಲ್ಲಿ ಪಂಚಾಯ್ತಿ ಮಾಡಬೇಕೆಂದು ಉದ್ದಕ್ಕೂ ಬೈಯುತ್ತಾ ಊರ ವೀರಭದ್ರ ದೇವರ ಗುಡಿಗೆ ತಂದಿರಿಸಿದ್ದ.

ನಾನು ಅವಮಾನದಲ್ಲಿ ಕುಸಿದು ಹೋಗಿದ್ದೆ. ಅದ್ಯರ‍್ಯಾರು ಪಂಚಾಯ್ತಿ ಸೇರಿದ್ದಾರೋ ವಿವರ ಮರೆತು ಹೋಗಿದೆ. ನನ್ನ ಹೆಸರಿನವರೇ ಆಗಿದ್ದ ಬಣಕಾರ್ ರುದ್ರಜ್ಜ `ಇದೇನು ದೊಡ್ಡ ವಿಷ್ಯಾ ಅಂತ ಇಲ್ಲಿಗೆ ತಂದಿದಿಯಾ’ ಕೋರಿನ ತೋಟ ಮಾಡೋ ಹುಡುಗ, ಉಳಿದ ಎಲೆ ಕೊಯ್ಯತಾನ, ಅದೇನು ಅಪರಾಧನಾ ಎಂದು ಅವನಿಗೆ ಗದರಿಸಿದರು. ಕಡೆಗೆ `ಉಳಿದ ಎಲೆಯಲ್ಲೂ ಪಾಲು ಬೇಕಂತೆ ಕೊಡಪ್ಪ’ ಅವನಿಗೆ ಎಂದು ತೀರ್ಮಾನ ಹೇಳಿ ಮುಗಿಸಿದ್ದರು. ಅಲ್ಲಿ ಅಪ್ಪ ಮತ್ತು ಅಣ್ಣ ಇದ್ದರೋ ಇಲ್ಲವೋ ಗೊತ್ತಿಲ್ಲ. ಕೋರಿನ ತೋಟದಲ್ಲಿ ಬೆಳೆದ ಎಲ್ಲದರಲ್ಲೂ ನಮ್ಮ ದುಡಿಮೆಯ ಅರ್ಧ ಭಾಗ ಇರುತ್ತದೆ. ಇನ್ನರ್ಧಕ್ಕೆ ಯಾಕೆ ನಾವು ಬೇಡುವ ಕೆಲಸ ಮಾಡಬೇಕು.

ಇನ್ನು ಮೇಲೆ ಏನೇ ಉಳಿದರೂ ನಮ್ಮದೆಂದು ಆಸೆ ಪಡಬಾರದೆಂದು ಅಪ್ಪ ಹೇಳಿದ ಮಾತು ಇಂದಿಗೂ ಮರೆತಿಲ್ಲ. ತೋಟದಿಂದ ಗುಡಿವರೆಗೆ ಎಲೆಪುಟ್ಟಿಯ ಹೊತ್ತು ತಂದು ಪಂಚಾಯ್ತಿ ನಡೆಸಿದ ದಿನವನ್ನು ನನಗೆ ಈಗಲೂ ಮರೆಯಲಾಗುತ್ತಿಲ್ಲ. ಸದ್ಯ ಪಂಚಾಯಿತಿಯವರ ದೃಷ್ಟಿಯಲ್ಲಾದರೂ ಅದೊಂದು ದೊಡ್ಡ ಅಪರಾಧವಲ್ಲವೆಂಬಂತೆ ಮಾತಾಡಿದ್ದು ನನಗೆ ಸಮಾಧಾನ ತಂದಿತ್ತು. ನಂತರ ರಜೆ ಮುಗಿದ ಮೇಲೆ ಸಾಗರಕ್ಕೆ ಹೋಗಿ, ನನ್ನ ಅಭ್ಯಾಸ ಮುಂದುವರಿಸಿದೆ.

ಅಕ್ಕ ಭಾವ ನನ್ನ ಓದು ಬರಹಕ್ಕೆ ಸಹಕಾರಿಯಾಗಿದ್ದರು. ಸರಿಯಾದ ಕುಟುಂಬ ಯೋಜನೆಯ ಅರಿವು ಇರದೆ, ನಾನು ಸಾಗರಕ್ಕೆ ಬಂದಾಗ ಇದ್ದ ಒಬ್ಬಳೇ ಮಗಳ ಜೊತೆ ಮತ್ತೆ ಮೂರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಜನಿಸಿ ಅವರ ಕುಟುಂಬ ಹಿಗ್ಗುತ್ತಾ ಹೋಯಿತು. ನಾನು ಮನೆಯವನಾಗಿ ಸಾಮಾನ್ಯ ಕೆಲಸಗಳಾದ ನೀರು ತರುವುದು, ಕಸ ಗುಡಿಸುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು, ಅಂಗಡಿಯಿAದ ಮನೆಗೆ ಬೇಕಾದ ದಿನಸಿ ತರುವುದು ಎಲ್ಲ ಕೆಲಸ ಮಾಡುತ್ತಿದ್ದೆ. ಅದಕ್ಕಾಗಿ ಒಮ್ಮೊಮ್ಮೆ ಅಕ್ಕ ನನಗೆ ಬಕ್ಷೀಸು ಸಹ ನೀಡುತ್ತಿದ್ದಳು.

ಹೈಸ್ಕೂಲು ಅಭ್ಯಾಸ ಮಾಡುತ್ತಾ ಎಸ್.ಎಸ್.ಎಲ್.ಸಿ.ಗೆ ಬಂದಾಗ ಮನೆಯಲ್ಲಿ ಮಕ್ಕಳ ಗಲಾಟೆಯಿಂದ ಓದಲು ಕಷ್ಟ ಎನ್ನೋ ಕಾರಣದಿಂದ ಸಾಗರದಲ್ಲಿನ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುತ್ತಿದ್ದ ಹಾಸ್ಟೆಲ್‌ಗೆ ಸೇರಿಕೊಂಡೆ. ಆಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಹಾಸ್ಟೆಲ್‌ನಿಂದ ರ‍್ಮ ಶೇಖರ್ ಮತ್ತು ಅವರ ಅಣ್ಣ ಹನುಮಂತಪ್ಪ ಹಾಗೂ ಯಶವಂತಪ್ಪ ಒಟ್ಟು ನಾಲ್ಕು ಜನ ಎಸ್‌ಎಸ್‌ಎಲ್‌ಸಿ ತರಗತಿಗೆ ಹೋಗುತ್ತಿದ್ದೆವು. ಪರೀಕ್ಷೆ ಮುಗಿದು ರಿಸಲ್ಟ್ ಬಂದಾಗ ಸಾರ್ವಜನಿಕ ಹಾಸ್ಟೆಲ್‌ನಿಂದ ಪರೀಕ್ಷೆ ಬರೆದವರಲ್ಲಿ ನಾನೊಬ್ಬ ಮಾತ್ರ ಪಾಸಾಗಿದ್ದೆ. ಉಳಿದವರು ಒಂದೊಂದು ವಿಷಯದಲ್ಲಿ ಫೇಲಾಗಿದ್ದರು. ಮುನಿಸಿಪಲ್ ಹೈಸ್ಕೂಲಿನಲ್ಲಿ ಹಾಸ್ಟೆಲ್‌ನಿಂದ ಬರುತ್ತಿದ್ದ ಹುಡುಗರಲ್ಲಿ ನಾನೊಬ್ಬ ಪಾಸಾಗಿರುವ ಬಗ್ಗೆ ತಿಳಿದು ಸಂಸ್ಕೃತ ಅಧ್ಯಾಪಕರು ನನಗೆ ಕರೆದು ಪ್ರೋತ್ಸಾಹದ ಮಾತಾಡಿದ್ದನ್ನು ನಾನಿನ್ನೂ ಕೂಡ ಮರೆತಿಲ್ಲ.

ನಾನು ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಬಂದಾಗ ಊರಿನಲ್ಲಿದ್ದೆ. ನನ್ನ ರಿಜಿಸ್ಟ್ರೇಷನ್ ನಂ. 64960. ಆಗ ಫಲಿತಾಂಶಗಳು ದಿನಪತ್ರಿಕೆಗಳಲ್ಲಿ ಬರುತ್ತಿದ್ದವು. ಅಣ್ಣ ತಿಪ್ಪಣ್ಣ ಬೆಳಗಿನ ಜಾವ ಹೊಸಪೇಟೆಗೆ ವೀಳ್ಯದೆಲೆ ಮಾರಾಟ ಮಾಡಲು ಹೋಗುತ್ತಿದ್ದವನು ಹರಿಹರದಲ್ಲಿ ಪ್ರಜಾವಾಣಿ ಪೇಪರ್‌ನಲ್ಲಿ ನನ್ನ ಫಲಿತಾಂಶವನ್ನು ನೋಡಿ, ನನ್ನ ನಂಬರನ್ನು ಗುರ್ತು ಮಾಡಿ ನನ್ನೂರಿಗೆ ದಿನವೂ ಬರುತ್ತಿದ್ದ ಕ್ಷೌರಿಕ ನರಸಿಂಹಣ್ಣನ ಮುಖಾಂತರ ಪೇಪರ್ ಕಳಿಸಿದ್ದ. ನಾನು ಪೇಪರ್ ನೋಡಲು ಹರಿಹರಕ್ಕೆ ಹೋಗೋ ದಾರಿಯಲ್ಲಿ ನರಸಿಂಹಣ್ಣ ಸಿಕ್ಕು ನಾನು ಪಾಸಾಗಿರುವ ಬಗ್ಗೆ ನನ್ನ ಅಣ್ಣ ತಿಪ್ಪಣ್ಣ ನಂಬರ್ ಗುರ್ತು ಮಾಡಿ ಕೊಟ್ಟದ್ದನ್ನು ನನಗೆ ತೋರಿಸಿ ಸಂತೋಷಪಟ್ಟಿದ್ದ.

ಹನಗವಾಡಿಯಲ್ಲೇ ಹಲವು ವರ್ಷಗಳಿಂದ ಎಸ್.ಎಸ್.ಎಲ್.ಸಿಯಲ್ಲಿ ಸಂಶೋಧನೆ ಮಾಡುತ್ತಾ ಉಳಿದಿದ್ದ ಸ್ನೇಹಿತರೊಡನೆ ನಾನು ಎಸ್.ಎಸ್.ಎಲ್.ಸಿ. ಪರೀಕ್ಷೆ ಪಾಸಾದ ವಿಷಯ ಹೇಳಿದೆ. ಅರ‍್ಯಾರಿಗೂ ನಾನು ಪಾಸಾದ ಬಗ್ಗೆ ನಂಬಿಕೆ ಬರಲಿಲ್ಲ. ಅದರಲ್ಲಿ ಈಗಾಗಲೇ ನಾಲ್ಕು ವರ್ಷಗಳಿಂದ ಎಸ್.ಎಸ್.ಎಲ್.ಸಿ.ಯಲ್ಲೇ ಉಳಿದಿದ್ದ ಹಿರಿಯ ಮಿತ್ರರಲ್ಲೊಬ್ಬ `ಇಲ್ಲಪ್ಪಾ, ಪೇರ‍್ನಲ್ಲಿ ಬಂದಿರೋದು ನಂಬಕ್ಕಾಗಲ್ಲ, ಫಲಿತಾಂಶ ಸ್ಕೂಲಿಗೆ ಬರೋ ತನಕ ಏನು ಹೇಳುವುದಕ್ಕಾಗಲ್ಲ’ ಎಂದು ಬಾಣ ಬಿಟ್ಟು – ಪಾಸಾಗಿದ್ದೇನೆ ಎಂಬ ಅಸಾಧ್ಯ ಸಂತೋಷದ ಮೂಡಿನಲ್ಲಿದ್ದ ನನಗೆ ಅನುಮಾನದ ಕಿಚ್ಚು ಹಚ್ಚಿದ್ದ. ಆದರೂ ಇದ್ದ ಐದು ಮನೆಯ ಚಲುವಾದಿಗರ ಜೊತೆ ಊರ ಅನೇಕ ಜನರಿಗೆ ನಾನು ಎಸ್.ಎಸ್.ಎಲ್.ಸಿ. ಪಾಸಾದ ಸುದ್ದಿ ಸಂತೋಷ ನೀಡಿತ್ತು.

ನಮ್ಮೂರ ಹಿರಿಯ ರಾಜಕಾರಣಿ ಹೆಚ್. ಸಿದ್ದವೀರಪ್ಪ ನವರ ನಂತರ ಎಸ್.ಎಸ್.ಎಲ್.ಸಿ.ಯಲ್ಲಿ ಮೊದಲನೇ ಅಟೆಂಪ್ಟ್ನಲ್ಲಿ ಪಾಸಾದವನು ನಾನೇ ಎಂದು ಮಾತಾಡಿ ಕೊಳ್ಳುತ್ತಿದ್ದರು. ನಮ್ಮ ಚಿಕ್ಕಪ್ಪ ಮಹದೇವಪ್ಪನಂತೂ ತಮ್ಮ ಎರಡೂ ಕೈಮುಗಿದುಕೊಂಡು ‘ವಾಲಗದ ಸಮೇತ ವೀರಭದ್ರ ದೇವರಿಗೆ ಹಣ್ಣುಕಾಯಿ ಮಾಡಿಸೋಣ’ ಎಂದು ಸಂತೋಷದಲ್ಲಿ ಹೇಳಿದನಾದರೂ ಹಾಗೇನು ನಾನು ಮಾಡಲಿಲ್ಲ. ನನ್ನ ಎಸ್.ಎಸ್.ಎಲ್.ಸಿ. ವರೆಗಿನ ಓದಿನ ಜೊತೆ ಊರಲ್ಲಿ ರಜಾ ದಿನಗಳಲ್ಲಿ ಹಲವು ಕೆಲಸ ಮಾಡುತ್ತಿದ್ದೆ. ಚಲುವಾದಿಗಳಿಗೆ ವಿಶೇಷವಾದ ಬ್ಯಾಂಡ್‌ಸೆಟ್‌ವೊಂದನ್ನು ರೂಪಿಸಿಕೊಂಡಿದ್ದರು. ಊರ ದೇವರ ಚಾಕರಿಗೆಂದು ಅಪ್ಪ ಚಿಕ್ಕಪ್ಪಂದಿರು ಹಳೆಯ ಮೇಳ ಹೊಂದಿದ್ದರು. ಮೇಳದಲ್ಲಿ ಸುತಿ, (ಶ್ರುತಿ) ಸೊನಾಯಿ, (ಶಹನಾಯಿ) ಸಮಾಳ ಹಾಗೂ ಚೌಗಡ (ಚರ್ಮದ ವಾದ್ಯ) ಊರ ದೇವರ ಚಾಕರಿ ಜೊತೆಗೆ ಊರಲ್ಲಿನ ಮದುವೆ ಮತ್ತು ಸಾವುಗಳ ಸಮಯದಲ್ಲಿ ವಾದ್ಯಮಾಡಿ ಹಣ ಸಂಪಾದಿಸುತ್ತಿದ್ದರು. ಈ ಮ್ಯಾಳದಲ್ಲಿ ಹೋಗುವ ಸಂದರ್ಭದಲ್ಲಿ ಸಾಮೂಹಿಕವಾಗಿ ಎಲ್ಲರೂ ಶುಭ್ರವಾದ ಅಂಗಿ ಪಂಚೆ ಮತ್ತೊಂದು ಟವಲ್ ಜೊತೆಗೆ ತಮ್ಮ ಮ್ಯಾಳದ ಸಾಮಾನು ಮುಚ್ಚಲು ಬೇಕಾದ ಚೀಲಗಳನ್ನು ಅಚ್ಚುಕಟ್ಟಾಗಿ ಶುಚಿಗೊಳಿಸಿಕೊಂಡು ಹೋಗುತ್ತಿದ್ದರು. ಮದುವೆ ಸಮಯಗಳಲ್ಲಿ ಸಂಪಾದನೆ ಜೊತೆಗೆ ಖುಷಿಗಾಗಿ ಕೆಲವರು ನೀಡುವ ಹಣದ ರೂಪದ ಶಭಾಷ್‌ಗಿರಿಯಿಂದಾಗಿ ಸಾಮಾನ್ಯವಾಗಿ ಬಿರುಸಿನ ಹೊಲಮನಿ ಕೆಲಸಗಳು ರುಚಿಸುತ್ತಿರಲಿಲ್ಲ. ಆದರೆ ನಮ್ಮ ಊರಿನವರು ಇದಕ್ಕೆ ಅಪವಾದವೆಂಬಂತೆ ಹೊಲ ಮತ್ತು ತೋಟಗಳಲ್ಲಿ ಮುತುವರ್ಜಿಯಿಂದ ದುಡಿಯುತ್ತಿದ್ದರು. ಆದರೂ ನಮ್ಮ ಅಪ್ಪ ಅಗಾಗ `ಅರಿಶಿಣ ಕೂಳಿಗೋಗಿ ವರ್ಷದ ಕೂಳು ಕಳೆದು ಕೊಳ್ಳಬೇಡಿರೆಂದು’ ಎಚ್ಚರಿಸುತ್ತಿದ್ದರು.

ಊರಿನಲ್ಲಿ ಅಪ್ಪ ಚಿಕ್ಕಪ್ಪಂದಿರ ಮ್ಯಾಳ ಹಳೆಯದಾಯಿತೆಂದು ನಮ್ಮಣ್ಣನೂ ಸೇರಿದಂತೆ ಹೊಸಬರನ್ನು ಸೇರಿಸಿಕೊಂಡು ಹೊಸ ಬ್ಯಾಂಡ್ ಸೆಟ್ ತರಿಸಿ, ಅದಕ್ಕೊಬ್ಬ ಬ್ಯಾಂಡ್ ಮಾಸ್ತರರನ್ನು ನೇಮಿಸಿಕೊಂಡಿದ್ದರು. ಬರಿ ಐದಾರು ಜನರಿದ್ದ ಮ್ಯಾಳವು ಹೊಸ ಹುಡುಗರನ್ನೆಲ್ಲಾ ಸೇರಿಸಿ ಹತ್ತು ಜನರ ಗುಂಪೇ ಆಯಿತು. ನಾನು ಕೂಡ ತರಬೇತಿ ನೀಡುವ ಸಮಯದಲ್ಲಿ ಡೋಲು ಬಾರಿಸಲು ಪ್ರಯತ್ನಪಟ್ಟೆ. ಆದರೆ ಅದು ಯಾಕೋ ನನಗೆ ಕರಗತವಾಗಲಿಲ್ಲ. ಅದೇ ಸಮಯದಲ್ಲಿ ಅಪ್ಪ `ಏನು ಕಲಿತು ಏನು ಬಾರಿಸಿದರೂ ಕೆರ ಬಿಡುವಲ್ಲಿ ಕೂಳು ತಿನ್ನೋ ವಿದ್ಯೆ ಇದು. ನಿನಗೆ ಯಾಕೆ ಬೇಕು ಮಗನೇ’ ಎಂದು ನನ್ನ ಉತ್ಸಾಹಕ್ಕೆ ನೀರೆರಚಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಹಿಂದಿರುಗಿ ನೋಡುತ್ತಾಽ……

Published

on

  • ರುದ್ರಪ್ಪ ಹನಗವಾಡಿ

ಮ್ಮೂರು ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ಹನಗವಾಡಿ ಗ್ರಾಮ. ಈಗ ಸುಮಾರು 5000 ಜನಸಂಖ್ಯೆ ಇದ್ದು, ಲಿಂಗಾಯತರು, ಕುರುಬರು, ಬಾರಿಕರು, ತಳವಾರರು, ಬೋವಿಗಳು, ಚಲುವಾದಿಗಳು, ಮಾದಿಗರು ಹಾಗೂ ಮುಸ್ಲಿಮರು ಇದ್ದಾರೆ.

ಲಿಂಗಾಯತರೇ ಬಹುಸಂಖ್ಯಾತರಿರುವ ಈ ಊರಿನಲ್ಲಿ ವೀರಭದ್ರ ದೇವರು, ಹನುಮಂತ ದೇವರು ಮತ್ತು ಗುರಪ್ಪ ದೇವರ ಗುಡಿಗಳು ಇವೆ. ಊರಿಂದಾಚೆ ಉಡಸಲಾಂಭಿಕೆ ಮತ್ತು ಬೇವಿನ ಮರದ ಹತ್ತಿರ ತುಂಬಿದ ಕುಡಿಕೆ ಇಟ್ಟು ಪೂಜಿಸುವ ಹಲವಾರು ದೇವರಿಗೆ `ಅಜ್ಜಿ’, `ಅಜ್ಜಿ ಹಬ್ಬ’ದ ದೇವರು ಎಂದು ಕರೆಯುತ್ತಿದ್ದುದು ನೆನಪು.

ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ವೀರಭದ್ರ ದೇವರ ರಥೋತ್ಸವ. ಆಗ ಊರವರೆಲ್ಲ ತಮ್ಮ ಬಂಧು-ಬಳಗದವರನ್ನೆಲ್ಲಾ ಕರೆದು ಎರಡು ಮೂರು ದಿನಗಳು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ದಿನಗಳಲ್ಲಿ ಪ್ರತಿ ಜಾತಿಕರೂ ತಮ್ಮತಮ್ಮ ಕೆಲಸ ಅಂದರೆ ಚಲುವಾದಿಗಳು ಮ್ಯಾಳ ಮಾಡುವುದು, ಅಗಸರು ಮಡಿ ಹಾಸುವುದು, ತಳವಾರರರು ಊರಿನ ಇತರೆಲ್ಲರನ್ನೂ, ಕರೆದು ಕಳಿಸುವವರನ್ನು ನೋಡಿಕೊಳ್ಳುವುದು ಮಾಡುತ್ತಾರೆ. ಲಿಂಗಾಯತರು ಗರ್ಭಗುಡಿಯ ದೇವರ ಪೂಜೆ, ಪಲ್ಲಕ್ಕಿ ಹೊರುವುದು, ಬೇರೆ ಊರಿಂದ ದೇವರನ್ನು ಹೊತ್ತು ತರುವವರನ್ನು ಇದಿರುಗೊಂಡು ಪುನಃ ಹಬ್ಬ ಮುಗಿದು ಕಳಿಸುವವರೆಗೆ ನೋಡಿಕೊಳ್ಳುವುದು ಇವೇ ಮೊದಲಾದ ಕೆಲಸ ಅವರದಾಗಿತ್ತು.

ಹೀಗೆ ಹಬ್ಬ ನಡೆಯುವುದರ ಜೊತೆಗೆ ಆಸಕ್ತರೆಲ್ಲ ಸೇರಿ ಪೌರಾಣಿಕ ನಾಟಕಗಳಾದ ಕುರುಕ್ಷೇತ್ರ, ರಕ್ತ ರಾತ್ರಿ, ಜಗಜ್ಯೋತಿ ಬಸವೇಶ್ವರ ಮತ್ತು ಖಾದಿ ಸೀರೆ ಹೀಗೆ ಅನೇಕ ಸಾಮಾಜಿಕ ನಾಟಕಗಳನ್ನೂ ಆಡುತ್ತಿದ್ದರು. ಊರ ಜನರೂ ಶಕ್ತಾನುಸಾರ ಪಟ್ಟಿ ನೀಡಿ ಕಲಿಸಿದ ಮಾಸ್ತರನಿಗೂ, ಭಾಗವಹಿಸಿದ ಕಲಾವಿದರಿಗೆ, ವಾದ್ಯಗೋಷ್ಠಿಯವರಿಗೆ ಯಥೋಚಿತ ಸನ್ಮಾನ ಮಾಡುತ್ತಿದ್ದರು. ಇದಕ್ಕೆಲ್ಲ ಪ್ರೋತ್ಸಾಹದ ಮೀಟುಗೋಲಾಗಿ ನಮ್ಮೂರಿನವರೇ ಆಗಿದ್ದ ಕ್ಯಾತನಹಳ್ಳಿ ರುದ್ರಪ್ಪ ಮಾಸ್ತರು ಕಾರಣರಾಗಿದ್ದರು. ಅವರೀಗ ತೀರಿ ಹೋಗಿ, ಟಿ.ವಿ. ಭರಾಟೆಯಲ್ಲಿ ನಾಟಕಗಳ ಗೀಳು ಕಡಿಮೆಯಾಗಿದ್ದರೂ, ನಮ್ಮೂರಲ್ಲಿ ಪ್ರತಿವರ್ಷದಲ್ಲಿ ಎರಡು ಮೂರು ನಾಟಕಗಳನ್ನು ಆಡುವುದು ಮಾತ್ರ ನಿಂತಿಲ್ಲ.
ನಮ್ಮೂರ ಸುತ್ತಮುತ್ತೆಲ್ಲಾ ವೀಳ್ಯದ ಎಲೆ ತೋಟಗಳೇ ತುಂಬಿಕೊಂಡಿವೆ.

ಈ ಊರಲ್ಲೇ ನಮ್ಮ ಅಪ್ಪ ಅವ್ವ ಕೂಡ ಒಂದು ಕೋರಿನ ತೋಟ ಮಾಡಿಕೊಂಡಿದ್ದರು. ಕೋರಿನ ತೋಟವೆಂದರೆ ಭೂಮಾಲೀಕನೊಬ್ಬನಿಂದ ಭೂಮಿ ಪಡೆದು, ಅದರಲ್ಲಿ ವೀಳ್ಯದೆಲೆಯೋ, ಇನ್ನಿತರ ಬೆಳೆಯನ್ನೋ ತೆಗೆದರೆ ಅದರ ಉತ್ಪನ್ನದ ಲಾಭವನ್ನು ಸಮನಾಗಿ ಹಂಚಿಕೊಳ್ಳುವುದು. ಅಂತಹದೊಂದು ತೋಟದಲ್ಲಿ ಅಪ್ಪ ಅವ್ವ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಅಪ್ಪ ಅವ್ವನಿಗೆ ನಾವು ಆರು ಜನ ಮಕ್ಕಳು. ನಮ್ಮೊಟ್ಟಿಗೆ ಇರಬೇಕಾಗಿದ್ದ ಇನ್ನೂ 3-4 ಮಕ್ಕಳು ನಮ್ಮವ್ವನಿಗೆ ಉಳಿದಿರಲಿಲ್ಲ.

ಅಪ್ಪನಿಗೆ ನಮ್ಮವ್ವನನ್ನು ಮದುವೆಯಾಗುವ ಮುಂಚೆಯೇ ಮೊದಲೊಂದು ಮದುವೆಯಾಗಿದ್ದು, ಅವರಿಗೂ 5-6 ಮಕ್ಕಳು ಹುಟ್ಟಿ ಮಕ್ಕಳ್ಯಾರು ಬದುಕದೆ ಕೊನೆ ಹೆರಿಗೆಯಲ್ಲಿ ಮಗು ಮತ್ತು ಬಾಣಂತಿ ಇಬ್ಬರೂ ನಿಧನರಾದರೆಂದೂ, ಆನಂತರ ಅಪ್ಪ ಮರು ಮದುವೆಯ ಮಾತು ಬಂದಾಗ ಆಸಕ್ತಿ ತೋರದೆ ತನ್ನ ಅಣ್ಣನ ಮಗನನ್ನೇ ತನ್ನ ಮಗನೆಂದು ಕಕ್ಕುಲತೆಯಲ್ಲಿ ಮದುವೆಯಾಗುವ ಬಗ್ಗೆ ಚಿಂತಿಸದೆ ತೋಟ ಹೊಲಮನೆಗಳಲ್ಲಿ ದುಡಿಯುತ್ತಾ ಬದುಕು ಸಾಗಿಸುತ್ತಿದ್ದನಂತೆ.

ಇಂತಿಪ್ಪ ಸಂದರ್ಭದಲ್ಲಿ ನಮ್ಮವ್ವನ ಚಿಕ್ಕಪ್ಪ ಮುರಿಗೆಪ್ಪಜ್ಜ ಶಿವಮೊಗ್ಗ ಜಿಲ್ಲೆ, ಚನ್ನಗಿರಿ ತಾಲ್ಲೂಕು ಕತ್ತಲಗೆರೆ ಗ್ರಾಮದಿಂದ ಯಾವುದೋ ಕಾರಣಕ್ಕೆ ನಮ್ಮ ಊರಿಗೆ ಬಂದಾಗ ನಮ್ಮಪ್ಪನ ಶ್ರಮ ಮತ್ತು ವಾಗತ್ಯದ ಬದುಕು ನೋಡಿ, ಮಾರುಹೋಗಿ ಅಣ್ಣನ ಮಗಳನ್ನು ಈತನಿಗೆ ಕೊಟ್ಟು ಮದುವೆ ಮಾಡಬೇಕೆಂದು ಚಿಂತಿಸಿ, ತನ್ನ ಊರಿಗೆ ಹೋದ ಮೇಲೆ ಅವರಣ್ಣನಿಗೆ ಒಪ್ಪಿಸಿ ನಮ್ಮಪ್ಪನೊಡನೆ ಎರಡನೇ ಸಂಬಂಧವಾಗಿ ಅವ್ವನನ್ನು ಕೊಟ್ಟು ಮದುವೆಯಾಗುವಂತೆ ಮಾಡಿದನೆಂದು ಅವರಿಂದಾಗಿಯೇ ಅಪ್ಪನ ಎರಡನೇ ಮದುವೆ ಆಯಿತೆಂದು ಆಗಾಗ ಮಾತಾಡಿಕೊಳ್ಳುತ್ತಿದ್ದರು.

ನಾನು 1951ರ ಮಾರ್ಚ್ 15ರಂದು ಹುಟ್ಟಿದ್ದೆಂದು ಸರ್ಕಾರಿ ದಾಖಲೆಯಲ್ಲಿದೆ. ಅವ್ವ ನಾನು ಹುಟ್ಟಿದ ಬಗ್ಗೆ ಕೇಳಿದರೆ ಯುಗಾದಿ ಹಬ್ಬ ಮುಂದೆ ಒಂದು ವಾರವೋ ಏನೋ ಇರುವಾಗ ಬ್ರೇಸ್ತವಾರ (ಗುರುವಾರ) ಹುಟ್ಟಿದ್ದೆಂದು ಹೇಳುತ್ತಿದ್ದಳು. ಅಂತೂ ಅದು ಸರಿ ಸುಮಾರು ಮಾರ್ಚ್ ತಿಂಗಳು ಎಂಬುದಾಗಿ ನನ್ನ ಶಾಲಾ ದಾಖಲೆಯಲ್ಲಿರುವುದು ಹುಟ್ಟಿದ ದಿನಕ್ಕೆ ತೀರಾ ದೂರವಾಗಿಲ್ಲವೆನಿಸುತ್ತದೆ.

ನಮ್ಮೂರ ಸಾಮಾಜಿಕ ಸಂಬಂಧಗಳು 1950ರ ದಶಕದಲ್ಲಿನ ನನ್ನ ಬಾಲ್ಯದ ದಿನಗಳಿಂದಲೂ ಅಸಮಾನತೆಯ ಸಂಬಂಧಗಳು ಎಲ್ಲರಿಂದ ಒಪ್ಪಿತವಾಗಿಯೇ ಬಂದವುಗಳು. ಜಾತಿಯ ತಾರತಮ್ಯ ನೀತಿಗಳನ್ನು ಯಾರೂ ಪ್ರಶ್ನಿಸುವ ಪ್ರಶ್ನೆಯೇ ಬರುತ್ತಿರಲಿಲ್ಲ! ಹಳ್ಳಿಯೇ ಒಂದು ಸರ್ಕಾರದಂತೆ ಇದ್ದು ಅಲ್ಲಿನ ಕೊಡುಕೊಳ್ಳುವ ಪ್ರಕ್ರಿಯೆಯು ಸಾಮಾಜಿಕ ಕಟ್ಟುಪಾಡುಗಳಲ್ಲಿಯೇ ನಡೆಯುತ್ತಿದ್ದವು.

ನಮ್ಮೂರಿನ ಚಲುವಾದಿಗಳ ಐದು ಕುಟುಂಬಗಳು ಒಬ್ಬರಿಗೊಬ್ಬರು ಸಂಬಂಧಿಕರಾಗಿದ್ದರು. ಅವರೆಲ್ಲರಿಗೂ ನಮ್ಮ ಅಪ್ಪನೇ ಯಜಮಾನನಾಗಿದ್ದ. ಅದ್ಯಾವುದೋ ಮಾಯದಲ್ಲಿ ಅಪ್ಪ ಅಕ್ಷರಸ್ಥನಾಗಿ ಓದಲು ಬರೆಯಲು ಕಲಿತು ಸಾಮಾನ್ಯ ಲೆಕ್ಕದ ಜ್ಞಾನ ಅವನಿಗಿತ್ತು. ಈ ಕುಟುಂಬದ ಐದೂ ಜನರು ಸೇರಿ ಊರ ಚಾಕರಿ (ಮ್ಯಾಳ) ಮಾಡುತ್ತಿದ್ದರು. ಪ್ರತಿ ಮಂಗಳವಾರ ವೀರಭದ್ರನ ಗುಡಿಗೆ ಹೋಗಿ ಮ್ಯಾಳ ಮಾಡುವುದು. ಅದಕ್ಕೆಲ್ಲ ಪ್ರತಿಯಾಗಿ ಊರ ದೇವಸ್ಥಾನದ ಯಜಮಾನರು, ಕಲ್ಲ ಮರಡಿಯಂತಿದ್ದ ದೇವರ ಹೆಸರಿನಲ್ಲಿದ್ದ ಜಮೀನನ್ನು ಐದೂ ಜನರಿಗೂ ಸುಮಾರು 17 ಎಕರೆ ಹಂಚಿಕೊಟ್ಟಿದ್ದರು. ಅದರಲ್ಲಿ ಮುಕ್ಕಾಲು ಭಾಗ ಉಳುಮೆ ಮಾಡಲು ಮಾತ್ರ ಸಾಧ್ಯವಾಗಿತ್ತು. ಉಳಿದದ್ದು ಕಲ್ಲು ಮರಡಿಯಾಗಿದ್ದು ಕೇವಲ ದನ ಮೇಯಿಸುತ್ತಿದ್ದೆವು. ಅಪ್ಪ ನಮ್ಮ ಪಾಲಿನ ಮೂರು ಎಕರೆಯಷ್ಟನ್ನು ಉಳುಮೆ ಮಾಡಿಕೊಂಡು ಜೋಳ, ಅಲಸಂದೆ, ಸಜ್ಜೆ, ನವಣೆ, ಮೆಣಸಿನಕಾಯಿ, ಟಮೋಟ, ಹುರಳಿ ಇತ್ಯಾದಿಗಳನ್ನು ಒಂದು ಜೊತೆ ಸಣ್ಣ ಎತ್ತಿನ ಜೋಡಿ ಇಟ್ಟುಕೊಂಡು ವ್ಯವಸಾಯ ಮಾಡುತ್ತಿದ್ದನು. ಮನೆಯಲ್ಲಿ ಎಮ್ಮೆ ಕಟ್ಟಿದ್ದನು. ಬಾಲ್ಯದಲ್ಲಿ ನಮಗೆ ಹಾಲು ಮೊಸರಿನ ಊಟ ಇರುತ್ತಿತ್ತು. ಯಾವಾಗಲಾದರೂ ಎಮ್ಮೆ ಗಬ್ಬಾದರೆ (ಗರ್ಭ ಧರಿಸಿದರೆ) ಹಾಲಿನ ಕೊರತೆಯಾಗದಿರಲೆಂದು ಅಪ್ಪ ಆಡುಗಳನ್ನು ಕೂಡ ಸಾಕಿದ್ದನು. ಅವುಗಳ ಹಾಲನ್ನು ದಿನ ಬೆಳಿಗ್ಗೆ ಚಾ ಮಾಡಲು ಮತ್ತು ಉಳಿದದ್ದು ಮೊಸರು ಮಾಡಿ ಉಣ್ಣುತ್ತಿದ್ದೆವು.
ಸ್ವಂತಕ್ಕಿದ್ದ ಸ್ವಲ್ಪ ಒಣಭೂಮಿಯ ಜೊತೆಗೆ ಊರಲ್ಲಿ ಕೋರಿನ ತೋಟ ಮಾಡಿಕೊಂಡು ನಮ್ಮನ್ನೆಲ್ಲ ಹಸಿವಿನ ಬಾಧೆ ತಟ್ಟದಂತೆ ಬೆಳಸುತ್ತಿದ್ದನು. ಜೊತೆಗೆ ಸರ್ಕಾರ 1934ರಲ್ಲಿಯೇ ನಮ್ಮೂರಲ್ಲಿ ಸ್ಥಾಪಿಸಿದ್ದ ಶಾಲೆಗೆ ಮಕ್ಕಳೆಲ್ಲರನ್ನು ಹಾಕಿದ್ದನು.
ಅವ್ವ ನಮ್ಮೂರಿಗೆ ಬಂದು ಅಪ್ಪನೊಂದಿಗೆ ಹೊಂದಿಕೊಳ್ಳಲು ಕಷ್ಟ
ಪಡಬೇಕಾಯಿತು. ಅವ್ವನದು ಅಪ್ಪನಿಗಿಂತ ಸ್ವಲ್ವ ಹೆಚ್ಚು ಅನುಕೂಲವಿದ್ದ ಕುಟುಂಬ. ಅವ್ವನಿಗೆ ಹೊಲ, ಮನಿ, ಕಣ, ಎತ್ತು ಬಂಡಿಗಳಿದ್ದ ಮನೆತನ. ಅವ್ವನ ಅಪ್ಪ ಆಗಿನ ಈಚಲು ಹೆಂಡ ಕುಡಿಯುತ್ತಾ ಪ್ರತಿ ಸಂಜೆ ಜಬರದಸ್ತ್ ಅಡಿಗೆಗಳನ್ನು ಮಾಡಿಸಿಕೊಂಡು ಉಣ್ಣುತ್ತಿದ್ದ ಎಂದು ಅವ್ವ ತೌರಮನೆಯ ಶ್ರೀಮಂತಿಕೆಯನ್ನು ಕೊಚ್ಚುತ್ತಾ ಆಗಾಗ ಮನೆಯಲ್ಲಿ ಜಂಭ ಕೊಚ್ಚಿಕೊಳ್ಳುತ್ತಿದ್ದಳು.

ಅವ್ವ ಮದುವೆಯಾಗಿ ನಮ್ಮೂರಿಗೆ ಬಂದಾಗ ಅಪ್ಪನ ಜೊತೆ ಅಪ್ಪನ ಅಣ್ಣ ರಂಗಪ್ಪಜ್ಜನ ಮಗ ಹಾಲಣ್ಣನಿದ್ದ. ಅಪ್ಪನ ಸಾಂಸಾರಿಕ ನೋವುಗಳ ಸಮಯದಲ್ಲಿ ಮದುವೆ ಬೇಡ, ಅಣ್ಣನ ಮಗನೇ ತನ್ನ ಮಗನೆಂದು ಅವನೊಟ್ಟಿಗೆ ಇದ್ದ. ಮದುವೆಯ ನಂತರ ಹಾಲಣ್ಣನಿಗೂ ಮದುವೆಯಾಗಿದ್ದರಿಂದ ಹೊಂದಾಣಿಕೆ ಕಷ್ಟವಾಗಿರಬೇಕು. ಅಪ್ಪ ಇದ್ದ ಮನೆಯನ್ನು ಹಾಲಣ್ಣನಿಗೆ ಬಿಟ್ಟು, ಓಬಜ್ಜನೆಂಬ ದೂರದ ಸಂಬಂಧಿ ನಮ್ಮೆಲ್ಲರ ಅಚ್ಚುಮೆಚ್ಚಿನ ಅಜ್ಜನ ಮನೆಗೆ ಬಂದಿದ್ದಾರೆ. ಅವಾಗ ಏನೇನು ನಡೆಯಿತೋ ಅಂತೂ ಓಬಜ್ಜನ ಮಾಳಿಗೆ ಮನೆ ನಮ್ಮ ಮನೆಯೆಂಬಂತೆ ಅಪ್ಪ ಅವ್ವ ಜೀವನ ಮಾಡಿ ನಮ್ಮಕ್ಕ ಕೊಟ್ರಮ್ಮ, ಅಣ್ಣ ತಿಪ್ಪಣ್ಣ ಇನ್ನುಳಿದ ತಂಗಿಯರಾದ ರೇವಕ್ಕ, ರತ್ನಕ್ಕ ಮತ್ತು ಮಂಜಕ್ಕ ಇವರು ನನ್ನೊಡನೆ ಹುಟ್ಟಿದವರು. ನನಗೀಗ 70 ವರ್ಷಗಳಾಗಿದ್ದು ಅವರೆಲ್ಲರೂ ಅಲ್ಲಿಂದ ಬೆಳೆದು ಅವರವರ ಗಂಡನ ಮನೆಯಲ್ಲಿ ಹಲವು ಟಿಸಿಲುಗಳಾಗಿ ಬೆಳೆದಿದ್ದಾರೆ. ಅಣ್ಣ ತಿಪ್ಪಣ್ಣ ಊರಿನಲ್ಲಿ ತನ್ನ ಮೂರು ಮಕ್ಕಳು ಮತ್ತು ಮೊಮ್ಮಕ್ಕಳೊಡನೆ ಇದ್ದಾನೆ. ನಾನೂ ಊರನ್ನು 10ನೇ ವಯಸ್ಸಿನಲ್ಲಿಯೇ ಓದಿನ ಕಾರಣದಿಂದ ಬಿಟ್ಟಿದ್ದರೂ ಇಂದಿಗೂ ಅಳಿಸಲಾಗದ ನಂಟಾಗಿ ಉಳಿದುಕೊಂಡು ಬಂದಿದೆ. ಊರ ಎಲೆ ಬಳ್ಳಿ ತೋಟ, ಜೊತೆಗೆ ಬಾಲ್ಯದ ಗೆಳೆಯರ ಒಡನಾಟ ಮತ್ತು ನಾನಲ್ಲಿ ಸ್ಥಾಪಿಸಿರುವ ಕೃಷ್ಣಪ್ಪ ಟ್ರಸ್ಟ್, ನನ್ನೆಲ್ಲಾ ಚಟುವಟಿಕೆಗಳನ್ನು ಊರಿನಿಂದ ರಾಜ್ಯವ್ಯಾಪಿ ವಿಸ್ತಾರಗೊಳಿಸಿದೆ.
ನನ್ನ ಬಾಲ್ಯದಲ್ಲಿನ ನೆನಪುಗಳನ್ನು ಕೆದಕಿದರೆ ನಾನು ನಾಲ್ಕನೇ ತರಗತಿಯವರೆಗೆ ಹನಗವಾಡಿಯಲ್ಲಿಯೇ ಇದ್ದ ಪ್ರಾಥಮಿಕ ಶಾಲೆಯಲ್ಲಿ ಓದಿದೆ. ಆಗಿನ ಅಧ್ಯಾಪಕರುಗಳ ಹೆಸರು ಮತ್ತು ಅವರು ತೋರುತ್ತಿದ್ದ ಪ್ರೀತಿ ಇನ್ನೂ ನನಗೆ ಹಸಿರಾಗಿದೆ. ನಮ್ಮೂರಿನ ಪಕ್ಕದ ಊರು ಬಿಳಸನೂರಿನಿಂದ ಬರುತ್ತಿದ್ದ ಹಾಲಪ್ಪ ಮಾಸ್ತರು, ಬೆಳ್ಳೂಡಿಯಿಂದ ಬರುತ್ತಿದ್ದ ಗುಡ್ಡೆಪ್ಪ ಮಾಸ್ತರು, ಇನ್ನೊಬ್ಬರು ರಾಮತೀರ್ಥದಿಂದ ಬರುತ್ತಿದ್ದ ರಾಮಶೇಷ ಮತ್ತು ಹರಿಹರ ಟೌನ್‌ನಿಂದ ಬರುತ್ತಿದ್ದ ವೆಂಕೋಬರಾವ್ ಅವರುಗಳು ನಮ್ಮ ಬಾಲ್ಯದ ಅಭಿಮಾನದ ಮಾಸ್ತರುಗಳು. ಅವರು ತೊಡುತ್ತಿದ್ದ ಶುಭ್ರವಾದ ಕಚ್ಚೆ ಪಂಚೆ ಮತ್ತು ಅಂಗಿಗಳು ನಮಗೆ ಅಸಾಮಾನ್ಯವಾಗಿ ಕಾಣುತ್ತಿದ್ದವು. ಮಗ್ಗಿ ಹೇಳುವುದು, ತಪ್ಪಿಲ್ಲದೇ ಉಕ್ತ ಲೇಖನ ಬರೆಯುವುದು, ಇವುಗಳಲ್ಲೆಲ್ಲಾ ನಾನು ಸ್ವಲ್ಪ ಚುರುಕಾಗಿದ್ದರಿಂದಲೇ ಏನೋ ಏಟು ತಿನ್ನದೆ, ತಪ್ಪು ಮಾಡಿದ ನನ್ನ ಸಹಪಾಟಿಗಳಿಗೆ ಕಪಾಳಕ್ಕೆ ನನ್ನಿಂದ ಹೊಡೆಸುತ್ತಿದ್ದರು. ನಾನು ಸ್ವಲ್ಪ ಚೌಕಾಸಿಯಿಂದ ಮೆತ್ತಗೆ ಹೊಡೆದಾಗ, ಆಗ ಅವರು ಕಪಾಳಕ್ಕೆ ನನಗೇ ಬಾರಿಸಿ ತೋರಿಸಿದ ಕಾರಣ ಮುಂದಿನವರಿಗೆ ಜೋರಾಗಿ ಏಟು ಕೊಟ್ಟು ಅವರ ಮೂಗಿನಿಂದ ರಕ್ತ ಒಸರಿ ಭಯವಾದ ನೆನಪು ಈಗಲೂ ಹಸಿರಾಗಿದೆ.

ಓದಿನ ಜೊತೆಗೆ ಶಾಲೆಯ ಆವರಣದಲ್ಲಿದ್ದ ಜಾಗದಲ್ಲಿ ಮಡಿಗಳನ್ನು ಮಾಡಿ, ಹತ್ತಿರದಲ್ಲಿದ್ದ ನಮ್ಮೂರ ಹೊಂಡದಿAದ ನೀರು ತಂದು ಸೊಪ್ಪು, ಮೂಲಂಗಿ ಮತ್ತಿತರ ತರಕಾರಿ ಬೆಳೆಯುತ್ತಿದ್ದೆವು. ಅವುಗಳನ್ನು ಕಿತ್ತು ಊರಲ್ಲಿ ಮಾರಿ ಬಂದ ಹಣದಲ್ಲಿ ಶಾಲೆಗೆ ಬೇಕಾದ ಅಟ್ಲಾಸ್, ಗೆರೆ ಹಾಕಲು ಬೇಕಾಗುವ ರೂಲು ದೊಣ್ಣೆ ಮತ್ತು ಶಾಲೆಗೆ ಬೇಕಾದ ವಸ್ತುಗಳನ್ನು ಅಧ್ಯಾಪಕರು ತರುತ್ತಿದ್ದರು. ನಮ್ಮಲ್ಲೆ ಎರಡು ಗುಂಪು ಮಾಡಿ, ಯಾರು ಚೆನ್ನಾಗಿ ತರಕಾರಿ ಬೆಳೆಯುತ್ತಾರೆ ಎಂಬ ಸ್ಪರ್ಧೆ ಕೂಡಾ ಇರುತ್ತಿತ್ತು. ಆಗಿನ ಮೇಷ್ಟರನ್ನು ನೆನಪಿಸಿಕೊಂಡರೆ, ಕೃತಜ್ಞತೆಯ ಭಾವ ಒಸರುತ್ತದೆ. ಶಾಲೆಗೆ ಬರುವ ಮುನ್ನ ಸ್ವಚ್ಛತೆಯ ಬಗ್ಗೆ ಅವರು ನೀಡುತ್ತಿದ್ದ ಆಜ್ಞೆಗಳನ್ನು ಉಲ್ಲಂಘಿಸಿದರೆ ಏಟು ಬೀಳುತ್ತಿದ್ದವು. ಕೈ ಬೆರಳಿನ ಉಗುರು, ಮುಖ ತೊಳೆದು ವಿಭೂತಿ ಧರಿಸುವುದು, ತಲೆ ಮೇಲೆ ಸ್ವಚ್ಚವಾದ ಟೋಪಿ ಇವೆಲ್ಲದರ ಬಗ್ಗೆ ಗಮನಿಸುತ್ತಿದ್ದರು. ಬೆಳಿಗ್ಗೆ 8 ರಿಂದ 10 ಘಂಟೆಯವರೆಗೆ ಮತ್ತೆ ಮಧ್ಯಾಹ್ನ
3 ರಿಂದ ನಡೆಯುತ್ತಿದ್ದ ತರಗತಿಯ ಮಧ್ಯೆ ನಮ್ಮೂರ ಹತ್ತಿರದಲ್ಲಿಯೇ ಹರಿಯುತ್ತಿದ್ದ ಸೂಳೆಕೆರೆ ಹಳ್ಳದಲ್ಲಿ ಗುಂಪಾಗಿ ಹೋಗಿ ಈಜುತ್ತಿದ್ದೆವು. ಮತ್ತೆ ದಂಡೆಯಲ್ಲಿರುತ್ತಿದ್ದ ಬಿಸಿ ಮರಳಲ್ಲಿಗೆ ಬಂದು ಎದೆಗೆ ಮರಳವಚಿಕೊಂಡು ಕಾಲ ಕಳೆಯುತ್ತಿದ್ದೆವು. ಈ ರೀತಿಯಲ್ಲಿ ದಿನವೂ ಹಳ್ಳದಲ್ಲಿ ನಮಗೆ ಈಜಾಡುವುದರ ಬಗ್ಗೆ ಆಕ್ಷೇಪ ಮಾಡುತ್ತಿದ್ದ ಕೆಲವು ಮಕ್ಕಳ ತಂದೆ ತಾಯಂದಿರು ಶಾಲಾ ಮಾಸ್ತರಿಗೆ ಹೇಳಿ ಗದರಿಸಲು ಹೇಳಿದ ಕಾರಣ ನಾವು ದಿನವೂ ಹಾರಾಡುತ್ತಿದ್ದ ಹಳ್ಳದಲ್ಲಿನ ಆಟಗಳಿಗೆ ಮೇಷ್ಟರಿಂದಲೇ ಆಗಾಗ ಕಡಿವಾಣ ಬೀಳುತ್ತಿತ್ತು.

ಹೀಗೆ ನಡೆದ ಪ್ರಾಥಮಿಕ ಶಿಕ್ಷಣದಲ್ಲಿ ನನ್ನ ಸಹಪಾಠಿಗಳಾಗಿದ್ದ ಕಾಯಕದ ರುದ್ರಪ್ಪ, ಶಿವನಳ್ಳಿ ಗಂಗಾಧರ, ಹಲಸಬಾಳು ಜಟ್ಟಪ್ಪ, ದಾವಣಗೆರೆ ನಾಗರಾಜ, ಸಣ್ಣಮನಿ ಜಟ್ಟಪ್ಪ, ಜೋಗಪ್ಪರ ತಿಪ್ಪಣ್ಣ, ಪೂಜಾರ ರುದ್ರಪ್ಪ ಮತ್ತು ಹಾಗೇ ಮೂರು ನಾಲ್ಕು ಹೆಣ್ಣು ಮಕ್ಕಳಿದ್ದರು. ಅವರಲ್ಲಿ ನಮ್ಮೂರಿನವರನ್ನೇ ಮದುವೆಯಾಗಿ ಉಳಿದಿರುವ ದೊಡ್ಡಮನೆ ರ‍್ಯಾವಕ್ಕನನ್ನ ಬಿಟ್ಟರೆ ಉಳಿದವರು ಬೇರೆ ಊರುಗಳಿಗೆ ಮದುವೆಯಾಗಿ ಹೋಗಿ ಮತ್ತೆ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ನನ್ನ ಸಹಪಾಠಿಗಳಲ್ಲಿ ನನ್ನ ಹೆಸರಿನ ಒಬ್ಬ ಕಾಯಕದ ರುದ್ರಪ್ಪ ಮಾತ್ರ ನನ್ನ ಜೊತೆ ವಿಶೇಷ ಸ್ನೇಹ ಬೆಳೆದಿತ್ತು. ಅವನೂ ನಾನು ಒಟ್ಟಿಗೆ ಪ್ರಾಥಮಿಕ ಶಾಲೆ ಮುಗಿಸಿದ ನಂತರವೂ ಸ್ನೇಹಿತರಾಗಿ ಉಳಿದಿದ್ದೆವು.

ಕಾಯಕದ ರುದ್ರಪ್ಪ ಮತ್ತು ನಾನು ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಗಳಾಗಿದ್ದರೂ ಅವನು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಎರಡು ವರ್ಷಗಳ ಹಿಂದೆ ಬಿದ್ದುದರಿಂದ, ನಾನು ಎಂ.ಎ. ಮಾಡುವಾಗ ಆತನ ಬಿ.ಎ. ಪದವಿಯಲ್ಲಿನ ಒಂದೆರಡು ವಿಷಯಗಳನ್ನು ಇನ್ನೂ ಪೂರ್ಣಗೊಳಿಸಬೇಕಿತ್ತು. ಅವನ ಶ್ರಮ ಮತ್ತು ಶ್ರದ್ಧೆಗಳೆಷ್ಟೇ ಇದ್ದರೂ ಊರಲ್ಲಿದ್ದುಕೊಂಡು ಬಿ.ಎ. ಪೂರ್ಣಗೊಳಿಸಲು ಆಗಿರಲಿಲ್ಲ. ಊರಿಗೆ ಹೋದಾಗ ಅವನನ್ನು ಮೈಸೂರಿಗೆ ಕರೆ ತಂದು ಫೇಲಾದ ವಿಷಯಗಳಿಗೆ ಮನೆ ಪಾಠ ಹೇಳಿಸಿಕೊಂಡು ಪಾಸು ಮಾಡುವ ಬಗ್ಗೆ ಯೋಚಿಸಿದೆ. ಆದರೆ ಅವನನ್ನು ಮೈಸೂರಿಗೆ ಕರೆ ತಂದು ಉಳಿದುಕೊಳ್ಳುವ ವ್ಯವಸ್ಥೆ ಮತ್ತು ಅದಕ್ಕಾಗಿ ಖರ್ಚಾಗುವ ಹಣವನ್ನು ಅವನಿಂದ ಭರಿಸಲು ಆಗದ ಮಾತಾಗಿತ್ತು. ಈ ಸಮಸ್ಯೆಯನ್ನು ಪರ‍್ವತಕ್ಕನ ಬಳಿ ಚರ್ಚಿಸಿದಾಗ ಅವರು ಒಂದು ಸಹಾಯದ ಹಸ್ತ ನೀಡಿದರು. ನನ್ನ ಸ್ನೇಹಿತನಿಗೆ ತಿಂಗಳಿಗೆ 300 ರೂಗಳ ಸಂಬಳದಂತೆ ಅವರ ಸಮಾಜಶಾಸ್ತ್ರ ವಿಭಾಗದಲ್ಲಿನ ಪ್ರಾಜೆಕ್ಟ್ನಲ್ಲಿ ಸಹಾಯಕನನ್ನಾಗಿ ನೇಮಿಸಿಕೊಳ್ಳಲು ಒಪ್ಪಿದರು.

ಅದೇನು ಅಷ್ಟು ಹೊರೆಯಾದ ಕೆಲಸವಲ್ಲದ ಕಾರಣ ಅದರ ಜೊತೆಗೆ ಇವರು ಬಿ.ಎ.ಯಲ್ಲಿ ಉಳಿದ ವಿಷಯಗಳ ಬಗ್ಗೆ ತಯಾರಿ ಮಾಡಿಕೊಳ್ಳುವುದು ಎಂದು ತೀರ್ಮಾನಿಸಿ ಅವನನ್ನು ಮೈಸೂರಿಗೆ ಪರ‍್ವತಕ್ಕನ ಮನೆಯ ಹತ್ತಿರದಲ್ಲೇ ರೂಂ ಮಾಡಿ ಉಳಿಸಿದೆನು. ಬಿಡುವಿನ ವೇಳೆಯಲ್ಲಿ ಪರ‍್ವತಕ್ಕನ ಮನೆಯಲ್ಲಿನ ಸಣ್ಣಪುಟ್ಟ ಕೆಲಸ ಕೂಡ ಮಾಡುತ್ತಾ ಪರೀಕ್ಷೆಗೆ ತಯಾರಿ ಮಾಡಿಕೊಂಡು ಫೇಲಾದ ವಿಷಯಗಳನ್ನು ಬರೆದು ಪಾಸು ಮಾಡಿದ. ನನಗೂ ಬಸವಣ್ಯಪ್ಪನಿಗೂ ಪ್ರಾರಂಭದ ದಿನಗಳಲ್ಲಿ ಪರ‍್ವತಕ್ಕನವರ ಮನೆಯಲ್ಲಿ ಹೊಂದಿಕೊಳ್ಳಲು ಹೆಣಗಾಡಿದಂತೆಯೇ ಈ ರುದ್ರಪ್ಪನಿಗೂ ದಿಗಿಲು ಮಾಡಿಕೊಂಡಿದ್ದ ಅವನಿಗೆ `ನಿನ್ನ ಪರೀಕ್ಷೆ ಮುಗಿಯುವ ತನಕ ಇದೆಲ್ಲ ಸಹಿಸಿಕೊಂಡು ಇರಬೇಕು’ ಎಂದು ಸಮಾಧಾನ ಹೇಳುತ್ತಿದ್ದೆ. ಅದರಂತೆ ಮೈಸೂರಲ್ಲಿ ಉಳಿದು ಪರೀಕ್ಷೆ ಬರೆದು ಊರಿಗೆ ಹೋದ.

ನಾನಿನ್ನೂ ನನ್ನ ಅಂತಿಮ ಎಂ.ಎ. ನಲ್ಲಿರುವಾಗಲೇ ಕಾಯಕದ ರುದ್ರಪ್ಪನನ್ನು ಬಿ.ಎ.ಯನ್ನಾದರೂ ಮುಗಿಸಿಕೊಳ್ಳಲಿ ಎಂಬ ಆಸೆ ನನ್ನಲ್ಲಿ ಮೂಡಿತ್ತು. ನಮ್ಮಿಬ್ಬರ ಶಾಲಾ ರಜಾ ದಿನಗಳಲ್ಲಿ ಊರಿನಲ್ಲಿರುವಾಗ ಇಬ್ಬರೂ ಒಟ್ಟಿಗೆ ಇದ್ದು ಅವರಿವರ ತೋಟಗಳಲ್ಲಿ ಕೆಲಸ ಮಾಡುವುದು ನಮಗೆ ಅಭ್ಯಾಸವಾಗಿತ್ತು. ಅದಕ್ಕೆಲ್ಲ ಅವನೇ ನನ್ನ ಗುರುವಾಗಿದ್ದ. ಎಲೆ ಕೊಯ್ಯುವುದು, ಬಳ್ಳಿಕಟ್ಟುವ ಕೆಲಸಗಳಿಗೆ ಮೊದಲಿನಿಂದಲೂ ನಮ್ಮೂರಿನಲ್ಲಿ ಬಹು ಬೇಡಿಕೆಯ ಕೆಲಸಗಳಾಗಿದ್ದವು. ಈಗ್ಯೆ 45-50 ವರ್ಷಗಳ ಹಿಂದೆ ನಾನು ಮತ್ತು ರುದ್ರಪ್ಪ ಇಬ್ಬರೂ ಬೆಳಿಗ್ಗೆ 7 ಘಂಟೆಗೆ ತೋಟಕ್ಕೆ ಹೋಗಿ 10 ಗಂಟೆಯ ವರೆಗೆ ಎಲೆ ಕೊಯ್ದು ಇಬ್ಬರೂ 3 ರೂಗಳನ್ನು ಸಂಪಾದಿಸಿ ನಂತರ 10 ರಿಂದ 5 ರವರೆಗೆ ಬಳ್ಳಿ ಕಟ್ಟಿ ಇಬ್ಬರೂ ತಲಾ 2 ರೂಗಳನ್ನು ಸಂಪಾದಿಸಿ ನಂತರ ಸಂಜೆ ತೆರೆದ ಬಾವಿಯಲ್ಲಿ ಈಜಾಡಿ, ಇಬ್ಬರಲ್ಲೂ ಇದ್ದ ಸೈಕಲ್ ಏರಿ ಮೂರು ಮೈಲು ದೂರದ ಹರಿಹರಕ್ಕೆ ಹೋಗಿ ಕಾರ ಮಂಡಕ್ಕಿ ತಿನ್ನುತ್ತಿದ್ದೆವು. ಅಲ್ಲಿಗೆ ನಮಗೆ ನಾಟಕ ಕಲಿಸುತ್ತಿದ್ದ ರುದ್ರಪ್ಪ ಮಾಸ್ತರು ಕೂಡ ಬರುತ್ತಿದ್ದರು. ಅವರಿಗೆ ನಾವಿಬ್ಬರೂ ಮತ್ತು ಅವರೊಡನೆ ಇದ್ದವರಿಗೆ ಚಾ ಕುಡಿಸಿ ಎಲೆ ಅಡಿಕೆ ಕೊಡಿಸಿ ಕಳಿಸಿದ ನಂತರ ಸಂಜೆ ನಾಟಕ ಕಲಿಯಲು ಊಟ ಮಾಡಿ ಸೇರುತ್ತಿದ್ದೆವು. ಬಹು ಶ್ರಮದಿಂದ ಕಲಿತ ನಾಟಕವನ್ನು ಹೆಚ್.ಎನ್. ಹೂಗಾರ್ ಅವರ `ಕೊಂಡು ತಂದ ಗಂಡ’ವನ್ನು ತಿಂಗಳಾನುಗಟ್ಟಲೆ ಅಭ್ಯಾಸ ಮಾಡಿದ್ದನ್ನು ಬಿಟ್ಟರೆ ಅದನ್ನು ಬಣ್ಣ ಹಚ್ಚಿ ಪ್ರದರ್ಶನ ಮಾಡಲಾಗಲಿಲ್ಲ. ಅದಕ್ಕೆ ಪ್ರಮುಖ ಹೆಣ್ಣು ಪಾತ್ರದಲ್ಲಿದ್ದ ಕೆ. ರುದ್ರಪ್ಪ ಮೈಸೂರಿನಿಂದ ಬಂದು ರಜೆಯಲ್ಲಿ ಊರಲ್ಲಿರುವಾಗಲೇ ಅದಾವ ಮಾಯದ ಕಾಯಿಲೆಯೋ ಬಂದು 2-3 ದಿನಗಳಲ್ಲಿ ತೀರಿಹೋಗಿದ್ದ.

ಬಾಲ್ಯದ ನನ್ನೂರ ಸ್ನೇಹಿತರಲ್ಲಿ ಕಾಯಕದ ರುದ್ರಪ್ಪ ನನಗೆ ಅನೇಕ ವಿಷಯಗಳಲ್ಲಿ ಗುರುವಾಗಿದ್ದ. ಅವನು ತೀರಿಹೋಗಿ 50 ವರ್ಷಗಳೇ ಕಳೆದಿದ್ದರೂ ಅವನೊಡನೆ ಶಾಲೆಯಲ್ಲಿ, ತೋಟಗಳಲ್ಲಿ, ಈಜಾಡುವ ಹಳ್ಳದಲ್ಲಿ ಜೊತೆಗೆ ಇಬ್ಬರೂ ಸೇರಿ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಸ್ವಂತ ಖರ್ಚಿಗಾಗಿ ಬೇರೆಯವರ ತೋಟದಲ್ಲಿ, ಕೂಲಿ ಮಾಡುತ್ತ ಇದ್ದೆವು. ಶಾಲೆಯ ಅವಧಿ ಮುಗಿದು ಬಿಡುವಿನ ಸಮಯದಲ್ಲಿ ಸಗಣಿ ಗುಡ್ಡೆ ಹಾಕಿ, ಸಣ್ಣ ತಿಪ್ಪೆ ಮಾಡಿ ನಂತರ ಬೇರೆಯವರಿಗೆ ಅದನ್ನು ಮಾರಿ ಹಣ ಗಿಟ್ಟಿಸುತ್ತಿದ್ದೆವು. ಇದೆಲ್ಲ ನಾವು ಮುಂದೆ ಹೈಸ್ಕೂಲಿನ ನಂತರ ಓದಿನವರೆಗೆ ಹಾಗೆಯೇ ಮುಂದುವರಿದಿತ್ತು.
ಕಾಯಕದ ರುದ್ರಪ್ಪನ ಬಗ್ಗೆ ನನ್ನ ಮನಸ್ಸಿನಲ್ಲಿ ಆಗಾಗ ಮರೆಯಲಾಗದ ಘಟನೆಗಳು ಮರುಕಳಿಸಿ ಆ ಕಾಲಮಾನಕ್ಕೆ ಹೊತ್ತೊಗೆಯುತ್ತಿರುತ್ತದೆ. ಅವನ ಜಾತಿ ಲಿಂಗಾಯತರಲ್ಲಿನ ಕ್ಷೌರಿಕರದು. ನಮ್ಮೂರಲ್ಲಿಯೇ ಕ್ಷೌರಿಕ ವೃತ್ತಿ ಮಾಡುತ್ತಾ ಅವರ ತಂದೆತಾಯಿ ಮತ್ತು ಸಹೋದರರು ಹಾಯಾಗಿದ್ದವರು. ಅದ್ಯಾವುದೋ ಕಾಲಘಟ್ಟದಲ್ಲಿ ಲಿಂಗಾಯತರಲ್ಲಿನ ಒಳ ಪಂಗಡಗಳ ಜಗಳ ಶುರುವಾಗಿ ಇವನ ತಂದೆ ಮತ್ತು ಹಿರಿಯ ಅಣ್ಣಂದಿರನ್ನು ನಮ್ಮೂರಿನ ಕ್ಷೌರಿಕ ಕೆಲಸದಿಂದ ಬಿಡಿಸಿಬಿಟ್ಟರು. ಆಗ ಅವರ ತಂದೆ ಮತ್ತು ಇಬ್ಬರು ಹಿರಿಯ ಅಣ್ಣಂದಿರು ಪಕ್ಕದ ಊರುಗಳಿಗೆ ಕ್ಷೌರಿಕ ಕೆಲಸ ಮಾಡಲು ಬೆಳಗಿನ ಜಾವದಲ್ಲಿ ಎದ್ದು ಹೋಗುತ್ತಿದ್ದರು. ಊರ ಕೆಲಸ ಮಾಡಿಕೊಂಡು ಹಾಯಾಗಿದ್ದ ಅವರಿಗೆ ಆರ್ಥಿಕ ಮುಗ್ಗಟ್ಟು ಬಂದು ಅವರ ತಾಯಿ ಮತ್ತು ಅಕ್ಕ ತಂಗಿಯರೂ ದಿನ ಕೂಲಿ ಕೆಲಸ ಮಾಡುವಂತಾಗಿತ್ತು. ನನ್ನ ಬಾಲ್ಯದ ಸಹಪಾಠಿ ಅನೇಕರಲ್ಲಿ ಕಾಯಕದ ರುದ್ರಪ್ಪ ಮಾತ್ರ ಪ್ರೈಮರಿಯ ನಂತರವೂ, ನಾನು ಬೇರೆ ಬೇರೆ ಊರುಗಳಲ್ಲಿ ಅಭ್ಯಾಸ ಮಾಡುತ್ತಿದ್ದರೂ ಊರಿಗೆ ಬಂದಾಕ್ಷಣ ಸೇರಿಕೊಂಡು ಊರಿನಲ್ಲಿಯೇ ಕಬಡ್ಡಿ, ಕೀಳಾಪಟ್ಟಿ ಮತ್ತಿತರ ಆಟಗಳಲ್ಲಿ ಊರ ಇತರೆ ಹುಡುಗರ ಜೊತೆ ಆಡುತ್ತಿದ್ದೆವು. ಕಬಡ್ಡಿ ಆಡುವ ಸಮಯದಲ್ಲಿ ಆಡುತ್ತಾ ನಾನು ಕಾಲಿನಿಂದ ಲಿಂಗಾಯತರ ಹುಡುಗನಿಗೆ ತಾಗಿಸಿದ್ದಕ್ಕೆ ಚಲುವಾದಿಯವನು ಲಿಂಗಾಯತ ಹುಡುಗನಿಗೆ ಕಾಲು ತಾಗಿಸಬಹುದೆ ಎಂಬ ತಗಾದೆ ಶುರುವಾಗಿ ಗುಡಿ ಮುಂದೆ ಸಣ್ಣ ಜಗಳವಾಗಿತ್ತು. ಆಗ ಅಪ್ಪ ಬಂದು ಊರ ಮುಂದಿನ ಲಿಂಗಾಯತರ ಜೊತೆ ಆಟವಾಡಲು ಹೋಗಬೇಡವೆಂದೂ ಬೇರೆ ಊರುಗಳಲ್ಲಿ ಎಲ್ಲರ ಜೊತೆ ಇದ್ದಂತೆ ನಮ್ಮ ಊರುಗಳಲ್ಲಿ ಇರಲಾಗುವುದಿಲ್ಲ ಎಂದು ತಿಳಿ ಹೇಳಿದ್ದರು. ಆಗ ನನಗೆ ನನ್ನ ಜಾತಿಯ ಹಿನ್ನೆಲೆ ಅರ್ಥವಾಗುತ್ತಾ ಹೋಯಿತು. ಆದರೂ ನನಗೆ ನಾಲ್ಕನೇ ತರಗತಿಯವರೆಗೆ ಊರಿನಲ್ಲಿಯೇ ಓದಿದ್ದರೂ ನನ್ನ ಸಹಪಾಠಿಗಳೆಲ್ಲರೂ ಲಿಂಗಾಯತರಾಗಿದ್ದು, ಅವರಿಗೂ ಅಂತಹ ತಾರತಮ್ಯ ಬದುಕು ಇನ್ನೂ ಅರ್ಥವಾಗದ ದಿನಗಳಾಗಿದ್ದವು.

ನನ್ನ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಹರಿಹರದ ಸರ್ಕಾರಿ ಕನ್ನಡ ಬಾಲಕರ ಮಾಧ್ಯಮಿಕ ಶಾಲೆಯಲ್ಲಿ ಐದನೇ ತರಗತಿಗೆ ಸೇರಿದೆ. ನನ್ನ ಇತರೆ ಸಹಪಾಠಿಗಳಲ್ಲಿ ಕೆಲವರು ಪಕ್ಕದ ಗ್ರಾಮ ಬೆಳ್ಳೂಡಿಗೂ ಉಳಿದ ಒಂದಿಬ್ಬರು ಹರಿಹರದಲ್ಲಿ ಇತರೆ ಖಾಸಗಿ ಶಾಲೆಗಳಿಗೆ ಸೇರಿಕೊಂಡಿದ್ದರು. ನನ್ನ ಮಾಧ್ಯಮಿಕ ಶಾಲೆಯ ಓದಿನ ಕಾರಣಕ್ಕಾಗಿ ಊರಿನಿಂದ ಹರಿಹರಕ್ಕೆ ದಿನವೂ ಮೂರು ಮೈಲುಗಳ ಓಡಾಟ ಶುರುವಾಯಿತು. ಹರಿಹರದಲ್ಲಿದ್ದ ಸರ್ಕಾರಿ ಹಾಸ್ಟೆಲ್‌ಗೆ ನಾನು ಹತ್ತಿರದ ಊರಿನವನು ಎನ್ನುವ ಕಾರಣದಿಂದ ಮೊದಲು ಸೀಟು ಸಿಗಲಿಲ್ಲ. ಹಾಗಾಗಿ ದಿನವೂ ರೊಟ್ಟಿಯನ್ನು ಕಟ್ಟಿಕೊಂಡು ಐದನೇ ತರಗತಿಗೆ ಊರಿನಿಂದ ಸುಮಾರು ಮೂರು ತಿಂಗಳು ಓಡಾಡುತ್ತಿದ್ದೆ. ಇದೇ ಸಮಯಕ್ಕೆ ನನ್ನ ಅಕ್ಕನ ಗಂಡ ಭಾವ ಕೆಂಚಪ್ಪನವರಿಗೆ ದಾವಣಗೆರೆಯಲ್ಲಿ ಎರಡನೇ ದರ್ಜೆ ಗುಮಾಸ್ತನ ಕೆಲಸ ಸಿಕ್ಕಿತ್ತು. ಅವರು ಹರಿಹರದವರೇ ಆಗಿದ್ದ, ಮಾಜಿ ಸಚಿವರಾದ ಬಿ. ಬಸವಲಿಂಗಪ್ಪನವರ ಸಹೋದರ. ಹರಿಹರ ಪುರಸಭೆಯ ಕೌನ್ಸಿಲರ್ ಆಗಿದ್ದ ಗುರುಬಸಪ್ಪನವರ ಶಿಫಾರಸಿನಿಂದ ನನಗೆ ಹಾಸ್ಟೆಲ್‌ಗೆ ಸೀಟು ಸಿಕ್ಕಿತ್ತು. ಹಾಸ್ಟೆಲ್ ಜೀವನ ನನಗೆ ಹೊಸ ಪ್ರಪಂಚವನ್ನೇ ತೆರೆದಿಟ್ಟಂತಾಗಿತ್ತು.

ಹರಿಹರದಲ್ಲಿನ ಐದನೇ ತರಗತಿಯ ಓದು ಜೊತೆಗೆ ಅಪ್ಪ ಅವ್ವ ಅಣ್ಣ ತಂಗಿಯರ ಬಿಟ್ಟು ಜೊತೆಗೆ ಊರ ಸಂಪರ್ಕವಿಲ್ಲದೆ ಅಪರಿಚಿತ ಹುಡುಗರ ಜೊತೆ ಒಬ್ಬನೇ ಇರುವುದನ್ನು ನೆನಸಿಕೊಂಡು ಆಗ ಅಳು ಬರುವಂತಾಗಿತ್ತು. ಅದೇನೋ ಅಪ್ಪನ ಪ್ರೀತಿಯ ಮಾತುಗಳು ಓದಿನ ಬಗ್ಗೆ ಅವನಿಗಿದ್ದ ಆಸಕ್ತಿ ನನ್ನನ್ನು ಹಾಸ್ಟೆಲ್‌ನಲ್ಲಿ ಇರುವಂತೆ ಮಾಡಿತ್ತು. ಎಷ್ಟೋ ದೂರದ ಹುಡುಗರೆಲ್ಲ ಇದ್ದಾರೆ. ನಿನಗೆ ಹತ್ತಿರದ ನಮ್ಮೂರೇನು ದೂರವೇ ಎಂದು ಅಪ್ಪ ಸಮಾಧಾನ ಹೇಳಿದ್ದ.

ಆಗ ಹಾಸ್ಟೆಲ್‌ನಲ್ಲಿ ಎರಡೊತ್ತಿನ ಊಟ ಬಿಟ್ಟರೆ ಬೇರೇನೂ ವ್ಯವಸ್ಥೆ ಇರಲಿಲ್ಲ. ಅಲ್ಲಿನ ಅಡಿಗೆ ಭಟ್ಟರಾಗಿದ್ದ ವೆಂಕಣ್ಣನ ಪರಿಚಯವನ್ನು ಅಪ್ಪ ಮಾಡಿಕೊಂಡು ನನ್ನ ಬಗ್ಗೆ `ದೇಕರಿಕೆ’ ಮಾಡಲು ಅವರನ್ನು ಕೋರಿದ್ದ. ವೆಂಕಣ್ಣ ಸೊಗಸಾಗಿ ಅಡುಗೆ ಮಾಡುವುದರ ಜೊತೆ ಅಸಾಧ್ಯ ಎಲೆ ಅಡಿಕೆ ಪ್ರಿಯ. ಅಪ್ಪ ಬಂದಾಗಲೆಲ್ಲ ಎರಡು ಮೂರು ಕವಳಿಗೆ ಸೊಗಸಾದ ಎಲೆ ತಂದು ಕೊಡುತ್ತಿದ್ದ. ನನ್ನ ಖರ್ಚಿಗಾಗಿ ಮೂರು ನಾಲ್ಕು ರೂಪಾಯಿಗಳನ್ನು ಅಡಿಗೆ ವೆಂಕಣ್ಣನಿಗೆ ಕೈಗೆ ಕೊಟ್ಟು ಹಸಿವಾದಾಗ ಏನಾದರು ಕೊಂಡು ತಿನ್ನಲು ನನಗೆ ಕೊಡಲು ಹೇಳಿದ್ದ. ಬೆಳಿಗ್ಗೆ 9ಕ್ಕೆ ಉಂಡು ಶಾಲೆಗೆ ಹೋದರೆ ಸಾಯಂಕಾಲ ನಾಲ್ಕಕ್ಕೆ ವಾಪಸ್ ಬಂದಾಗ ಹಸಿವು ಕಾಡುತ್ತಿತ್ತು. ಆಗ ವೆಂಕಣ್ಣನ ಬಳಿ ಚಿಲ್ಲರೆ ಕಾಸನ್ನು ಪಡೆದು ಕಡ್ಲೆ ಬೆಲ್ಲ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ವೆಂಕಣ್ಣ ಅಪ್ಪ ಕೊಟ್ಟ ಹಣವನ್ನು ಬಳಸಿಕೊಂಡು ದುಡ್ಡಿಲ್ಲದಿದ್ದಾಗ ಹಣ ಕೇಳಿದರೆ ನಾಲ್ಕು ಐದು ಗಂಟೆಗೇನೆ ಅಡುಗೆ ಮಾಡಿಟ್ಟಿದ್ದ ಅವನು ‘ಅನ್ನಸಾರು ಹಾಕಿ ಕೊಡುವೆ, ಅಡುಗೆ ಮನೆಯಲ್ಲಿಯೇ ಕೂತು ಉಣ್ಣು’ ಎಂದು ಹೇಳುತ್ತಿದ್ದ. ಒಂದೆರಡು ಬಾರಿ ಊಟ ಮಾಡಿದ ನಂತರ ನನಗೆ ಎಲ್ಲರ ಕಣ್ಣು ತಪ್ಪಿಸಿ ಉಣ್ಣೋ ಊಟದ ಬಗ್ಗೆ ನನಗೆ ಬೇಸರವಾಗಿ ಅಪ್ಪನಲ್ಲಿ ಹೇಳಿಕೊಂಡೆ. ಆಗ ಅಪ್ಪ ಊರಿನಿಂದ ರೊಟ್ಟಿ ಚಟ್ನಿಪುಡಿಗಳನ್ನು ಗಂಟು ಕಟ್ಟಿ ತಂದು ಕೊಡುತ್ತಿದ್ದ. ತಂದು ಕೊಟ್ಟ ರೊಟ್ಟಿಯಲ್ಲಿ ತಿಂದುಳಿದದ್ದನ್ನು ನನ್ನ ಟ್ರಂಕಿನಲ್ಲಿಟ್ಟರೆ ಹಸಿದ ಹೆಬ್ಬುಲಿಯಂತಿದ್ದ ನನ್ನ ಹಿರಿಯ ಸಹಪಾಠಿಗಳು ಒಂದೇ ದಿನದಲ್ಲಿ ಖಾಲಿ ಮಾಡುತ್ತಿದ್ದರು. ಹಾಗೂ ಹೀಗೂ ಮಾಡಿ ಐದನೇ ತರಗತಿ ಪೂರೈಸೋ ಸಮಯಕ್ಕೆ ನನ್ನ ಅಕ್ಕ ಭಾವ ದಾವಣಗೆರೆಯಲ್ಲಿ ಸರ್ಕಾರಿ ನೌಕರಿಯಲ್ಲಿದ್ದವರಿಗೆ ಶಿವಮೊಗ್ಗ ಜಿಲ್ಲೆ ಸಾಗರಕ್ಕೆ ವರ್ಗವಾಗಿತ್ತು. ಅವರಿಗೂ ಮದುವೆಯಾಗಿ ಆಗಷ್ಟೆ ಒಬ್ಬ ಮಗಳು ಹುಟ್ಟಿದ್ದಳು. ಅದು ಯರ‍್ಯಾರು ತೀರ್ಮಾನಿಸಿದರೋ ಅಂತು ನಾನು ನನ್ನ ಆರನೇ ತರಗತಿಯ ಓದು ಮುಂದುವರೆಸಲು ಸಾಗರದಲ್ಲಿನ ಮಾಧ್ಯಮಿಕ ಶಾಲೆಗೆ ಸೇರಿಕೊಂಡೆ. ಅಕ್ಕ ಭಾವನ ಮನೆಯಲ್ಲಿ ಮಾಧ್ಯಮಿಕ, ಹೈಸ್ಕೂಲ್, ಪಿಯುಸಿ ಮತ್ತು ಪ್ರಥಮ ಬಿ.ಎ. ವರೆಗೆ ಅಂದರೆ ಸುದೀರ್ಘ 8 ವರ್ಷಗಳವರೆಗೆ ಸಾಗರದಲ್ಲಿ ಅಕ್ಕನ ಮನೆಯಲ್ಲಿ ನನ್ನ ಓದು ಸರಾಗವಾಗಿ ಮುಂದುವರೆದಿತ್ತು.

ಮುಂದುವರಿಯುವುದು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending