ನೆಲದನಿ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ..?
- ರಂಗನಾಥ ಕಂಟನಕುಂಟೆ
“ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ, ಮನದಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲ ಸಂಗಮದೇವ.”
–ಬಸವಣ್ಣನವರ ವಚನಗಳು, ಬಸವರಾಜು ಎಲ್, ಪು.53
ಬಸವಣ್ಣನವರ ಈ ವಚನ ಬಹಳ ಜನಪ್ರಿಯ ಮತ್ತು ಬಹುಚರ್ಚಿತ. ಈ ವಚನವನ್ನು ‘ಮನುಶ್ಯತ್ವ’ದ ಇಲ್ಲವೇ ವ್ಯಕ್ತಿಯ ‘ಶುದ್ಧ’, ಐಡಿಯಲ್ ವ್ಯಕ್ತಿತ್ವದ ಅಭಾವದಲ್ಲಿ ‘ಮಾನವೀಯತೆ’ಯ ಹುಡುಕಾಟದ ಕುರುಹಾಗಿ ಚರ್ಚಿಸಲಾಗಿದೆ. ‘ಮನೆ’ ಎನ್ನುವುದನ್ನು ದೇಹವಾಚಿಯಾಗಿಸಿ ಅದರ ಒಳಹೊರಗೆ ಹುಲ್ಲು ರಜ ಹುಸಿ ವಿಶಯಗಳು ಬಿದ್ದಿರುವ ವಿವರಗಳ ಮೂಲಕ ಒಂದು ಪಾಳುಬಿದ್ದಿರುವ ಭಗ್ನಚಿತ್ರವನ್ನು ನೀಡಲಾಗಿದೆ.
ಮುಖ್ಯವಾಗಿ ಮನುಶ್ಯರ ಪ್ರಜ್ಞೆಯೊಳಗೆ ತುಂಬಿಕೊಂಡಿರುವ ಅಪಕಲ್ಪನೆಗಳು, ಕೇಡಿಗತನಗಳು, ಮೌಢ್ಯಗಳು, ಸ್ವಾರ್ಥ, ದ್ವೇಶ, ದುಶ್ಟತನ, ಭವಿತ್ವ ಮುಂತಾದ ಭಾವನೆಗಳಿಂದ ತುಂಬಿಹೋಗಿ ‘ಮನುಶ್ಯರು’ ಎಂದು ಕರೆದುಕೊಳ್ಳುವವರಲ್ಲಿ ‘ಮನುಶ್ಯತ್ವ’ವೇ ಇಲ್ಲದಿರುವ ಮೌಲ್ಯಹೀನ ಬದುಕಿನ ಬಗೆಯನ್ನು ಚರ್ಚಿಸಲು ಈ ವಚನವನ್ನು ಆಕರವಾಗಿ ಬಳಸಲಾಗಿದೆ. ದೇಹ ಮತ್ತು ಮನಸ್ಸುಗಳ ನಡುವಿನ ಬಿರುಕು; ಅಂತರಂಗ ಹಾಗೂ ಬಹಿರಂಗಗಳು ಗಬ್ಬೆದ್ದುಹೋಗಿರುವುದನ್ನು ಎತ್ತಿತೋರಿಸುವ ಬಗೆಯಾಗಿ ಓದಲಾಗಿದೆ.
ಅಲ್ಲದೆ ವ್ಯಕ್ತಿಯು ತನ್ನನ್ನು ತಾನು ಆತ್ಮಶೋಧನೆ ಮಾಡಿಕೊಳ್ಳುವ ಬಗೆಯಾಗಿಯೂ ವಿವರಿಸಿಕೊಳ್ಳಲಾಗಿದೆ. ಇದಕ್ಕೆ ವಚನದಲ್ಲಿಯೇ ಸೂಚನೆಯಿದೆ. ಮೊದಲ ಸಾಲಿನಲ್ಲಿ ‘ಮನೆ’ ಎಂದು ಸೂಚಿತವಾದುದು ನಾಲ್ಕನೆಯ ಸಾಲಿನಲ್ಲಿ ‘ತನು’ ಎಂದು ಸ್ಪಶ್ಟವಾಗುತ್ತದೆ. ಹಾಗಾಗಿಯೇ ಇದನ್ನು ದೇಹ ಮತ್ತು ಮನಸ್ಸುಗಳ ಆಂತರಿಕ ಸಂಬಂಧಗಳು ಮತ್ತು ಬಿರುಕುಗಳಿಗೆ, ಅಲ್ಲಿನ ಗಬ್ಬೆದ್ದುಹೋಗಿರುವ ಚಿತ್ರಕ್ಕೆ ಲಗತ್ತಿಸಿ ಚರ್ಚಿಸಲಾಗುತ್ತದೆ. ಇದನ್ನು ಸಮಸ್ಯೆ ಎಂದು ಭಾವಿಸಬೇಕಿಲ್ಲ.
ಸದ್ಯ ಈ ವಚನದಲ್ಲಿ ಬಳಕೆಗೊಂಡಿರುವ ಭಾಶಿಕ ಸೂಚನೆಗಳನ್ನು ಬಳಸಿ ವಚನವನ್ನು ಬೇರೊಂದು ಬಗೆಯಲ್ಲಿ ಓದಲು ಸಾಧ್ಯವಿದೆ. ‘ಮನೆ’ಯನ್ನು ದೇಹ, ವ್ಯಕ್ತಿ, ಮನುಶ್ಯರು ಎಂದು ಮಾತ್ರವಲ್ಲದೆ ಅದನ್ನು ಲೋಕ, ವಿಶ್ವ, ಜಗತ್ತು, ಪ್ರಪಂಚ, ಯೂನಿವರ್ಸ್ ಎನ್ನುವ ರೀತಿಯಲ್ಲಿ ಓದಿದರೆ ಆಗ ಈ ವಚನ ಯಾವ ತಿರುಳನ್ನು ಧ್ವನಿಸುತ್ತದೆ? ಹಾಗೆಯೆ ‘ಒಡೆಯ’ ಎಂಬುದನ್ನು ಈ ಲೋಕವನ್ನು ಸೃಶ್ಟಿಸಿರುವ ‘ಅತೀಂದ್ರಿಯ ಶಕ್ತಿ’, ‘ದೇವರು’ ಎಂದು ಗ್ರಹಿಸಿದರೆ ಆಗ ಯಾವ ಅರ್ಥ ಧ್ವನಿಸುತ್ತದೆ? ‘ಮನೆಯೊಳಗೆ ಮನೆಯೊಡೆನಿದ್ದಾನೋ ಇಲ್ಲವೋ?
ಅಂದರೆ ಈ ಲೋಕದಲ್ಲಿ ದೇವರಿದ್ದಾನೋ? ಇಲ್ಲವೋ ಎನ್ನುವ ಮೂಲಕ ಅನುಮಾನ ಸಂದಿಗ್ಧತೆ ಹುಡುಕಾಟ ತಾಕಲಾಟಗಳನ್ನು ವ್ಯಕ್ತಪಡಿಸುವ ವಚನವಾಗಿದೆ. ಕೊನೆಯಲ್ಲಿ ‘ಮನೆಯೊಳಗೆ ಮನೆಯೊಡೆಯನಿಲ್ಲ!’ ಎನ್ನುತ್ತದೆ. ಈ ನಿರ್ಣಾಯಕ ಮಾತನ್ನು ವ್ಯಕ್ತಪಡಿಸಿದಾಗ ಈ ಲೋಕದಲ್ಲಿ ಸೃಶ್ಟಿಕರ್ತನೆಂದು ಭಾವಿಸಿ ನಂಬಲಾಗಿರುವ ‘ಅತೀಂದ್ರಿಯ ಶಕ್ತಿ’, ‘ದೇವರು’ ಇತ್ಯಾದಿ ಶಕ್ತಿ ‘ಇಲ್ಲ’ ಎಂಬ ಅರ್ಥವೂ ಧ್ವನಿಸಬಹುದಲ್ಲವೇ? ‘ಮನೆಯೊಡೆಯನಿಲ’್ಲ ಎಂಬ ಮಾತಿನಲ್ಲಿ ‘ದೇವರು’ ಇಲ್ಲ ಎಂದೂ ಧ್ವನಿಸಬಹುದಲ್ಲವೇ? ಅವನಿಲ್ಲದ ಕಾರಣಕ್ಕಾಗಿಯೇ ಮಾನವರ ಸಮಾಜ ಅತ್ಯಂತ ಹೆಚ್ಚು ಬರ್ಬರವಾಗಿದೆ ಎಂದೂ ವಾದಿಸಬಹುದು. ಪ್ರಾಣಿಜಗತ್ತಿನಲ್ಲಿ ಮಾನವರು ‘ಪ್ರಚ್ಚನ್ನ’ ಪ್ರಾಣಿಗಳಾಗಿ ಬೇರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ವ್ಯವಸ್ಥಿತವಾಗಿ ಉದ್ದೇಶಪೂರ್ವಕವಾಗಿ ಹಿಂಸೆ ಕ್ರೌರ್ಯ ದಮನ ನರಮೇಧ ಮೋಸ ವಂಚನೆಗಳನ್ನು ನಡೆಸಿದ್ದಾರೆ ಮತ್ತು ನಡೆಸುತ್ತಿದ್ದಾರೆ.
ಇದರಿಂದ ಮಾನವರ ಕುಲ ಬೇರೆ ಪ್ರಾಣಿಗಳಿಂದ ಅತ್ಯಂತ ಹೆಚ್ಚು ಹಿಂಸೆಯನ್ನು ಅನುಭವಿಸಿದೆ. ಅಂದರೆ ಮನೆಯೊಡೆಯನಾದ ಆ ಶಕ್ತಿ ಮತ್ತು ಆ ಶಕ್ತಿರೂಪಿಯಾಗಿರುವ ‘ಅರಿವು’ ಮನುಶ್ಯರ ಅಂತರಂಗ ಬಹಿರಂಗಗಳಲ್ಲಿ ಆಚರಣೆಯಲ್ಲಿ ಇಲ್ಲದಿರುವುದೇ ಇಶ್ಟೆಲ್ಲಾ ದುರಂತಗಳಿಗೆ ಕಾರಣ. ಈ ಬಗೆಯ ಅನುಮಾನ ಬಸವಣ್ಣನಿಗೆ ಕಾಡಿರಬಹುದೇ? ಲೋಕದಲ್ಲಿರುವ ಮನುಶ್ಯತ್ವದ ಅಭಾವವೇ ಬಸವಣ್ಣನ ಒಳಗಿನ ತುಮುಲಕ್ಕೆ ಕಾರಣ. ಅದೇ ಇಂತಹ ವಚನದ ಹಿಂದಿನ ಪ್ರೇರಣೆಯಾಗಿದೆ.
ಇಲ್ಲಿನ ಮುಖ್ಯ ಪ್ರಶ್ನೆಯೆಂದರೆ, ಬಸವಣ್ಣನಿಗೆ ಈ ಲೋಕದಲ್ಲಿ ಮನೆಯೊಡೆಯ ಇಲ್ಲವೇ ಅತೀಂದ್ರಿಯ ಶಕ್ತಿ ಇದೆಯೋ ಇಲ್ಲವೋ ಎಂಬ ಅನುಮಾನ ಹುಟ್ಟಿರುವ ಸಾಧ್ಯತೆ ಇದ್ದಂತಿದೆ. ಆ ಮೂಲಕ ನಿರಂತರವಾಗಿ ಒಂದು ‘ಶಕ್ತಿ’ಯನ್ನು ಕಲ್ಪಿಸಿಕೊಳ್ಳುವ, ಹುಡುಕಿಕೊಳ್ಳುವ, ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾನೆ ಎನ್ನಿಸುತ್ತದೆ. ಹಾಗಾಗಿಯೇ ದೇವರು ಗುಡಿಯಲ್ಲಿದ್ದಾನೆ/ಇದ್ದಾಳೆ ಎಂದು ನಂಬಿಸುವ ಪುರೋಹಿತಶಾಹಿ ಕಲ್ಪನೆಗಿಂತ ಭಿನ್ನವಾಗಿ, ಆ ‘ಶಕ್ತಿ’ ಎಲ್ಲಿಯೋ ಇಲ್ಲ ಮತ್ತು ಅದು ನಮಗೆ ಪ್ರತ್ಯಕ್ಶವಾಗುವುದಿಲ್ಲ. ಅದೇನಿದ್ದರೂ ನಮ್ಮೊಳಗೆ ನಾವೇ ಕಂಡು ಕೊಳ್ಳಬೇಕಾದ ‘ಸತ್ಯ’ ಎಂದು ಭಾವಿಸಿದಂತಿದೆ. ಅದಕ್ಕಾಗಿಯೇ ಬಸವಣ್ಣ ‘ದೇಹವೇ ದೇಗುಲ, ಕಾಯವೇ ಕೈಲಾಸ’ ಎಂದಿರುವಂತಿದೆ. ದೇಹ ಮತ್ತು ಕಾಯಕಗಳು ಕಣ್ಣೆದುರಿನ ವಾಸ್ತವಗಳು.
ಆದರೆ ಅಂತಹ ಒಂದು ಶಕ್ತಿಯಿಲ್ಲದೆ ಈ ಜಗತ್ತು ಸೃಶ್ಟಿಗೊಳ್ಳಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯೂ ಕಾಡಿರುವಂತಿದೆ. ಅಂತಹ ಕಾಡುವಿಕೆಯಿಂದಲೇ ‘ಶಕ್ತಿ’ಯಾದ ಕೂಡಲಸಂಗಮನ ಹುಡುಕಾಟ ಮಾಡಲಾಗಿದೆ. ಎಲ್ಲ ವಚನಕಾರರು ಸಂತರು ಇದನ್ನೇ ಮಾಡಿದ್ದಾರೆ. ಅಕ್ಕ ಪ್ರಿಯಕರ ಮಲ್ಲಿಕಾರ್ಜುನನನ್ನು ಹುಡುಕುವ ಪರಿಯನ್ನು ಗಮನಿಸಿದರೆ ಇದರ ತೀವ್ರತೆಯ ಅರಿವಾಗುತ್ತದೆ. ಬಸವಣ್ಣನಲ್ಲಿ ‘ಶಕ್ತಿ’ಯ ನಿರಂತರ ಹುಡುಕಾಟವಿದೆಯೇ ಹೊರತು ಆತ್ಯಂತಿಕ ನಿರ್ಣಯವಿಲ್ಲ.
ಇಂತಹ ಹುಡುಕಾಟದಲ್ಲಿಯೇ ‘ದೇವರು’ ಜೀವಂತವಾಗಿ ಕಾಣಿಸಿಕೊಂಡಿದ್ದಾನೆ. ಇಂತಹ ಹುಟುಕಾಟ ನಡೆಸಿದ ಬುದ್ಧ ಕೊನೆಗೆ ಮೌನವಹಿಸುತ್ತಾನೆ. ದೇವರನ್ನು ಜಡಶಿಲೆಗೊಳಿಸಿರುವ ಕಡೆಗಳಲ್ಲಿ ದೇವರು ಪ್ರಚ್ಚನ್ನ ಮೌಢ್ಯದ ಅವತಾರವೆತ್ತಿದ್ದಾನೆ. ಅಲ್ಲಿ ಹಿಂಸಾಮಯಿ ಕೂಡ ಆಗಿರುವುದನ್ನು ಕಾಣಬಹುದು. ಉಳಿದೆಡೆ ಚಲನಶೀಲತೆಯ ಅರಿವಿನ ಸ್ವರೂಪವಾಗಿ ಕಾಣಿಸುತ್ತದೆ.
ಆದರೆ ಇಂದು ಬಸವಾನುಯಾಯಿಗಳಲ್ಲಿ, ಮಠಾಧೀಶರಲ್ಲಿ, ಸ್ವಾಮೀಜಿಗಳಲ್ಲಿ, ಪಾದ್ರಿಗಳು ಮುಲ್ಲಾಗಳು ಹಾಗೂ ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಅನುಯಾಯಿಗಳಲ್ಲಿ ಆ ಶಕ್ತಿಯಿದೆ ಎಂಬ ಆತ್ಯಂತಿಕ ನಿಲುವಿದೆ. ಅಂತಹ ನಂಬಿಕೆಯನ್ನು ಬಲವಾಗಿ ಬೆಳೆಸಲಾಗಿದೆ. ಅಲ್ಲಿ ಯಾವುದೇ ಹುಡುಕಾಟವಿರುವುದಿಲ್ಲ. ಬಸವಣ್ಣನಿಗಿರುವಂತೆ ಆ ‘ಶಕ್ತಿ’ ಇದೆಯೋ ಇಲ್ಲವೋ ಎಂಬ ಅನುಮಾನ ಸಂಶಯ ಸಂದಿಗ್ಧತೆಗಳೇ ಕಾಡುವುದಿಲ್ಲ. ಆ ಶಕ್ತಿಯನ್ನು ಕಾಣಬೇಕು ಎಂಬ ತವಕ ತಲ್ಲಣ ಅಚಲ ಅದಮ್ಯ ಬಯಕೆಗಳೂ ಇರುವುದಿಲ್ಲ.
ಅದೇನಿದ್ದರೂ ಕೇವಲ ಕುರುಡು ನಂಬಿಕೆ ಮಾತ್ರ. ಆ ನಂಬಿಕೆಯಾಚೆಗೆ ಆ ಶಕ್ತಿಗೆ ಯಾವ ಅಸಿತ್ವವೂ ಇಲ್ಲ. ಅರ್ಥವೂ ಇಲ್ಲ. ಆ ಶಕ್ತಿಯ ಬಗೆಗೆ ಪ್ರಾಮಾಣಿಕ ಜಿಜ್ಞಾಸೆಯೂ ಇರುವುದಿಲ್ಲ. ಮತೀಯ ಕುರುಡುತನದ ನಂಬಿಕೆಗಳ ಹುದುಲಿನಲ್ಲಿ ಆ ‘ಶಕ್ತಿ’ಯನ್ನು ಹೂತುಹಾಕಿ ಅದರ ಮೇಲೆ ಸಾಮ್ರಾಜ್ಯಗಳನ್ನು, ಧರ್ಮಗಳನ್ನು ದಂತಗೋಪುರಗಳನ್ನು ಕಟ್ಟಲಾಗಿದೆ.
ಇವೆಲ್ಲವೂ ಅಕ್ರಮ ಮತ್ತು ಅನೈತಿಕ ನೆಲೆಯ ಮೇಲೆಯೇ ಸ್ಥಾಪನೆಗೊಂಡಿವೆ. ಇವುಗಳ ಸ್ಥಾಪಕರಿಗೆ ದೇವರು ಒಂದು ಸಂಕೇತನಾಮ ಮಾತ್ರ. ಅಂತಹ ಸಂಕೇತನಾಮವನ್ನು ಭರ್ಜರಿಯಾಗಿ ವ್ಯಾಪಾರ ಮಾಡಲಾಗುತ್ತದೆ. ಎಲ್ಲ ಧರ್ಮಗಳು ಇಂತಹ ವ್ಯಾಪಾರದಲ್ಲಿ ತೊಡಗಿವೆ. ಅವು ಮಾನವರ ಅಂತರಂಗವನ್ನು ಶುದ್ಧಗೊಳಿಸುತ್ತಿಲ್ಲ. ಮತ್ತಶ್ಟು ಕಲುಶಿತಗೊಳಿಸುತ್ತಿವೆ. ಮತ್ತು ಅಂತಹ ಶಕ್ತಿಯನ್ನು ಒಂದು ಅನುಭವವಾಗಿ, ಅರಿವಾಗಿ ಅಂತರಂಗಕ್ಕೆ ತೆಗೆದುಕೊಳ್ಳುವುದಿಲ್ಲ. ಬಹಿರಂಗದಲ್ಲಿ ಜೀವನ ಮೌಲ್ಯವಾಗಿ ಯಾವ ಧರ್ಮೀಯರೂ ಆಚರಿಸುವುದಿಲ್ಲ. ಆ ಮೂಲಕ ಲೋಕವನ್ನು ಶುಚಿಯಾಗಿಡುವುದಿಲ್ಲ.
ಬದಲಿಗೆ ಶಿಲುಬೆ, ಲಿಂಗ, ಹಸ್ತ-ನಕ್ಶತ್ರ, ಓಂ ಇತ್ಯಾದಿಗಳನ್ನು ಸಂಕೇತಗಳಾಗಿ ಬಳಸಲಾಗುತ್ತದೆ. ಗುಡಿ ಚರ್ಚು ಮಸೀದಿ ಮಂದಿರಗಳನ್ನು ಕಟ್ಟಲಾಗುತ್ತದೆ. ಅವುಗಳನ್ನು ಜನರ ಎದೆಯ ಮೇಲೆ ಹೊರಿಸಿ ಅರಿವನ್ನು ನಾಶ ಮಾಡಲಾಗುತ್ತದೆ. ನಂಬಿಕೆಯ ಕೋಟೆಯ ಸುತ್ತ ಕುರುಡುತನ, ಮೌಢ್ಯದ ಆಚರಣೆಗಳ ಬೇಲಿ ನಿರ್ಮಿಸಲಾಗುತ್ತದೆ. ಅಲ್ಲಿ ಅವೈಚಾರಿಕತೆ ಹುಟ್ಟಿಕೊಳ್ಳುವುದೇ ಹೊರತು ಯಾವುದೇ ಅರಿವು ಹುಟ್ಟುವುದಿಲ್ಲ. ಹಾಗಾಗಿಯೇ ಬಸವಣ್ಣ ಹೇಳಿರುವಂತೆ ಲೋಕದ ಅಂತರಂಗ ಬಹಿರಂಗಗಳಲ್ಲಿ ಹುಸಿ ರಜ ವಿಶಯಗಳು ತುಂಬಿ ಈ ಜಗತ್ತು ಭಗ್ನಗೊಂಡಿದೆ ಇಲ್ಲವೇ ಪಾಳುಬಿದ್ದಂತಿದೆ. ‘ಪ್ರಚ್ಛನ್ನ ಪಶುತ್ವ’ದ ಕ್ರೌರ್ಯ ಅನಾವರಣಗೊಳ್ಳುತ್ತಲೇ ಇದೆ.
ದೇವರ ಇರುವಿಕೆಯ ಬಗೆಗೆ ಅನುಮಾನ ವ್ಯಕ್ತಪಡಿಸಿ ಅದನ್ನು ಕಾಣುವ ತವಕ ತಲ್ಲಣಗಳಿಂದ ಬೆಂದ ಭಕ್ತರಲ್ಲಿ ಸಂತರಲ್ಲಿ ಮಾತ್ರ ದೇವರು ಮತ್ತೆ ಮತ್ತೆ ಹುಟ್ಟಿದ್ದಾನೆ. ಅಲ್ಲಿಯೇ ಇಂದಿಗೂ ಆ ಶಕ್ತಿ ಜೀವಂತವಾಗಿರುವುದು. ಮತ್ತು ಅಂತಹ ಕಡೆಯಲ್ಲಿ ಹೊಸ ತಿಳುವಳಿಕೆ ಹುಟ್ಟಿದೆ. ಇದಕ್ಕೆ ಸ್ವತಃ ಬಸವಣ್ಣನೇ ಉದಾಹರಣೆ. ನಂತರ ಅಲ್ಲಮ ಅಕ್ಕ ಕಬೀರ ಮೀರಾ ಕುವೆಂಪು ಇತ್ಯಾದಿ. ಅಂತಹ ಕಡೆಗೆ ಮಾತ್ರ ಮಾನವರು ತಮ್ಮ ಬದುಕನ್ನು ಹಸನಾಗಿಡುವ ಮೂಲಕ ಜೀವನದ ಪಥವನ್ನು ಶುದ್ಧವಾಗಿಟ್ಟುಕೊಳ್ಳುವ ಪಾರದರ್ಶಕ ನುಡಿಯನ್ನು ರೂಪಿಸುವ ಕೆಲಸ ಮಾಡಿದ್ದಾರೆ.
ಬಸವಣ್ಣನ ಈ ವಚನವನ್ನು ಬ್ರೆಕ್ಟನ ಕವಿತೆಯ ಜೊತೆಗೆ ಓದಬಹುದೆನಿಸುತ್ತದೆ. ಬ್ರೆಕ್ಟ್ ಹೇಳುವಂತೆ, ‘ಹಂದಿಗಳು ತಾವು ಮಲಗುವ ಜಾಗವನ್ನು ಹೇಲು ಉಚ್ಚೆಗಳಿಂದ ಅಧ್ವಾನಗೊಳಿಸಿಕೊಂಡಂತೆ ಜರ್ಮನಿ ತನ್ನ ನಾಡನ್ನು ಮಲಿನ ಮಾಡಿಕೊಂಡಿದೆ’ ಎನ್ನುತ್ತಾನೆ. ಅವನ ಮತ್ತು ಬಸವಣ್ಣನ ಮಾತನ್ನು ಸಮೀಕರಿಸಿ ಹೇಳುವುದಾದರೆ, ‘ಮಾನವರು’ ತಮ್ಮ ಇಡೀ ಮನುಕುಲವನ್ನು ದ್ವೇಶ, ಹಿಂಸೆ, ಕೊಲೆ, ಸುಲಿಗೆ, ಕ್ರೌರ್ಯ, ಸ್ವಾರ್ಥ, ಅಧಿಕಾರದ ಮದ ಮತ್ತು ಭ್ರಶ್ಟ ಗುಣಗಳಿಂದ ಇಡೀ ಭೂಮಂಡಲವನ್ನು ಸ್ಮಶಾನದಂತೆ, ಕಸಾಯಿಖಾನೆಯಂತೆ ಮಾಡಿದ್ದಾರೆ. ಇಲ್ಲಿ ಆಗಿಹೋಗಿರುವ ಜನಾಂಗಿಯ ಕಲಹಗಳು, ಯುದ್ಧಗಳು, ಧಾರ್ಮಿಕ ಸಂಘರ್ಶಗಳು ವರ್ಣ ಜಾತಿ ದ್ವೇಶದ ಕಗ್ಗೊಲೆಗಳನ್ನು ಗಮನಿಸಿದರೆ ಇದರ ಭೀಕರತೆ ತೀವ್ರತೆಗಳು ಅರ್ಥವಾಗುತ್ತವೆ. ಇದರಿಂದ ನದಿಗಳಲ್ಲಿ ನೀರಿಗಿಂತಲೂ ಹೆಚ್ಚು ರಕ್ತಹರಿದಿದೆ. ಚರಿತ್ರೆಯ ಪುಟಗಳೇ ಇದನ್ನೇ ಸಾಬೀತುಪಡಿಸುತ್ತಿದೆ. ಹಿಟ್ಲರನ ಜರ್ಮನಿ ಇಡೀ ಜಗತ್ತನ್ನು ರಕ್ತಸಿಕ್ಕಗೊಳಿಸಿತ್ತು. ಕಲ್ಯಾಣವೂ ಕೂಡ ನೆತ್ತರಿನಲ್ಲಿ ನೆಂದೇ ನಾಶವಾಗಿದ್ದು ಸುಳ್ಳಲ್ಲ.
ಇಂದು ಜಗತ್ತಿನ ಕೆಲವು ದೇಶಗಳು ಈ ದಾರಿಯಲ್ಲಿ ಹೆಜ್ಜೆಹಾಕುತ್ತಿವೆಯೇ ಎಂಬ ಭಯ ಮೂಡುತ್ತಿದೆ. ಈಗಾಗಲೇ ಅದರ ದಟ್ಟ ವಾಸನೆ ವಿಶ್ವದಲ್ಲಿರುವ ಜಾಗೃತ ಮೂಗುಗಳಿಗೆ ಬಡಿಯುತ್ತಿದೆ. ಬಂಡವಾಳಶಾಹಿ ಸಾಮ್ರಾಜ್ಯಗಳನ್ನು ಕಟ್ಟಲು, ಧರ್ಮವನ್ನು ಸ್ಥಾಪಿಸಲು ಮತ್ತು ಜಾತಿ ವರ್ಣಗಳ ಭದ್ರಕೋಟೆಗಳನ್ನು ಸ್ಥಾಪಿಸಲು ಕೋಟ್ಯಂತರ ಜನರನ್ನು ಬಲಿಕೊಡಲಾಗಿದೆ. ಅದರ ಮುಂದುವರಿದ ಅಧ್ಯಾಯ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಆರಂಭವಾಗಿರುವಂತೆ ಕಾಣುತ್ತದೆ.
ಹೀಗೇ ತಮ್ಮದೇ ಸಂತತಿಯವರನ್ನು ಬಲಿಕೊಟ್ಟು ಸಾಮ್ರಾಜ್ಯವನ್ನು ಧರ್ಮಗಳನ್ನು ಸ್ಥಾಪಿಸಿದ ‘ಪ್ರಾಣಿ’ ಪ್ರಪಂಚವಿಲ್ಲ. ಅಂದರೆ ಬ್ರೆಕ್ಟ್ ಹೇಳಿದ ಮಾತು ಕೇವಲ ಜರ್ಮನಿಗೆ ಸೀಮಿತವಲ್ಲ. ಬಸವಣ್ಣ ಹೇಳಿದ ಹುಸಿ ವಿಚಾರಗಳು ಕೇವಲ ವ್ಯಕ್ತಿಗೆ, ಕಲ್ಯಾಣಕ್ಕೆ ಸಂಬಂಧಿಸಿದವು ಮಾತ್ರವಲ್ಲ. ಅವು ಇಡೀ ಮಾನವರ ಕುಲವನ್ನು ಕುರಿತ ವಿಚಾರಗಳು. ಅಂದರೆ ಅವರಿಬ್ಬರ ಮಾತುಗಳು ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾಗಿ ಕಾಣಿಸುತ್ತಿವೆ.
ಇದನ್ನು ಗಮನಿಸಿದರೆ ಈ ಲೋಕದಲ್ಲಿ ಆ ‘ಒಡೆಯ’ನಿಲ್ಲ ಎಂಬ ಅನುಮಾನ ಮೂಡುತ್ತದೆ. ಅದರ/ಅವನ/ಅವಳ ಗೈರುಹಾಜರಿ ಎದ್ದುಕಾಣಿಸುತ್ತದೆ. ಇಂತಹದೇ ಅನುಮಾನವನ್ನು ಬಸವಣ್ಣ ಈ ವಚನದಲ್ಲಿ ವ್ಯಕ್ತಪಡಿಸಿರುವಂತೆ ಅನ್ನಿಸುತ್ತದೆ. ಆ ಶಕ್ತಿಯಿದ್ದಿದ್ದರೆ ಇಶ್ಟೊಂದು ರಕ್ತಪಾತ, ಮೋಸ, ವಂಚನೆ ದುಶ್ಟಕೂಟಗಳ ಅಟ್ಟಹಾಸ ನಡೆಯುತ್ತಿರಲಿಲ್ಲ. ಅದರ ಸಹಸ್ರಬಾಹುಗಳು ತಡೆಯುತ್ತಿದ್ದವೇನೋ? ಆ ಶಕ್ತಿಯ ಸಂಕೇತಗಳಲ್ಲಿ ಪ್ರಾಮಾಣಿಕ ನಂಬಿಕೆಯಿಟ್ಟವರೂ ಕ್ರೌರ್ಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ದೇವರ ಹೆಸರು ದುರ್ಬಳಕೆಯಾಗುತ್ತಿರಲಿಲ್ಲ.
ಇಂದು ದೇವರ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಲೋಕವನ್ನು ವಂಚಿಸುವ ಮಟ್ಟಿಗೆ ಹುಸಿತನಗಳು ವಿಶಯಗಳು ಹುಲ್ಲು ರಜಗಳು ಜನರಲ್ಲಿ ಮತ್ತು ಆಳುವವರಲ್ಲಿ ಹುಟ್ಟಿವೆ. ಅಂದರೆ ಆ ‘ಒಡೆಯ’ನಲ್ಲಿ ನಂಬಿಕೆಯಿಟ್ಟವರೂ ಕ್ರೌರ್ಯದಲ್ಲಿ ವಂಚನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲವೇ ಕುರುಡಾಗಿ ಆ ಶಕ್ತಿಯನ್ನು ನಂಬಿ ತಮ್ಮ ಎಲ್ಲ ಹೀನ ಕೃತ್ಯಗಳನ್ನು ಎಸಗಲಾಗುತ್ತಿದೆ. ಮಾನವರು ಸೃಶ್ಟಿಸಿಕೊಂಡಿರುವ ಈ ಸಮಸ್ಯೆಗಳಿಗೆ ಯಾವುದೇ ‘ದೈವನ್ಯಾಯ’ ದೊರೆತ ಉದಾಹರಣೆಗಳಿಲ್ಲ. ಆದರೆ ಜನರು ಮಾತ್ರ ಆ ದೇವರು ನೋಡಿಕೊಳ್ಳುತ್ತಾನೆ. ಅವನಲ್ಲಿ ಎಲ್ಲ ಲೆಕ್ಕವಿರುತ್ತದೆ ಎಂದು ಸಮಾಧಾನ ಮಾಡಿಕೊಳ್ಳುತ್ತಾರೆಯಶ್ಟೇ.
ಇದನ್ನು ಚನ್ನಾಗಿ ಬಲ್ಲ ಲೋಕದ ಪುರೋಹಿತಶಾಹಿ ವ್ಯವಸ್ಥೆ ಜನರನ್ನು ವ್ಯವಸ್ಥಿತವಾಗಿ ವಂಚಿಸಿ ಸಮಾಜದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ದುರಂತವೆಂದರೆ ಈ ಬಗೆಯ ವಂಚನೆಯನ್ನು ಜನರು ಅರಿಯುವಲ್ಲಿ ಸೋಲುತ್ತಿದ್ದಾರೆ. ಅವರೂ ಕೂಡ ಅರಿವುಗೇಡಿಗಳಾಗಿ ಬಹಳ ಸುಲಭವಾಗಿ ವಂಚಕರಿಗೆ ಬಲಿಯಾಗಿ ಪುರೋಹಿತಶಾಹಿಯ ಸೇವೆ ಮಾಡಲು ಮುಂದಾಗುತ್ತಾರೆ.
ಅಂದರೆ ಜಿಂಕೆಗಳೆಲ್ಲವೂ ಸೇರಿ ಹುಲಿಯನ್ನು ಸ್ತುತಿಸಿದಂತೆ, ಪೂಜಿಸಿದಂತೆ ನಿತ್ಯ ಅದರ ಪಾದಕ್ಕೆರಗಿ ನಮಸ್ಕರಿಸುವಂತೆ ಕಾಣಿಸುತ್ತದೆ. ಈ ಸೇವೆ ಮಾಡುವ ಜನರಿಗೆ ಬಸವಣ್ಣನಂತೆ ಆ ‘ಒಡೆಯನಿದ್ದಾನೋ ಇಲ್ಲವೋ?’ ಎಂಬ ಒಂದು ಸಣ್ಣ ಅನುಮಾನವನ್ನೂ ವ್ಯಕ್ತಪಡಿಸುವುದಿಲ್ಲ. ಆ ಶಕ್ತಿ ಎಂದೂ ಯಾರಿಗೂ ಪ್ರತ್ಯಕ್ಶವಾಗಿ ದರ್ಶನ ಕೊಟ್ಟಿಲ್ಲ. ಎಲ್ಲವೂ ಪುರಾಣಗಳಲ್ಲಿ ದಂತಕತೆಗಳಲ್ಲಿ ಕಟ್ಟಿರುವ ಪವಾಡದ ಕತೆಗಳಶ್ಟೇ.
ಆದರೂ ‘ಇದ್ದಾನೋ ಇಲ್ಲವೋ’ ಎಂಬ ಅನುಮಾನದೊಂದಿಗೆ ನಿರಂತರವಾಗಿ ಆ ಶಕ್ತಿಯನ್ನು ಕಾಣುವ ಪ್ರಯತ್ನವನ್ನು ಮಾಡದೆ ಕೇವಲ ಕುರುಡಾಗಿ ನಂಬಲಾಗುತ್ತಿದೆ. ಹಾಗಾಗಿ ಕೇವಲ ನಂಬಿಕೆಯ ಲೋಕ ದೈವಜ್ಞಾನಶಾಸ್ತ್ರ ಶಾಖೆಗೆ ಯಾವುದೇ ಹೊಸ ಕೊಡುಗೆ ನೀಡುವುದಿಲ್ಲ. ಬದಲಿಗೆ ಹೊಸ ಹೊಸ ಕುರುಡು ಆಚರಣೆಗಳನ್ನು ಸೃಶ್ಟಿಸಲಾಗುತ್ತದೆ. ಜ್ಯೋತಿಶಿಗಳೇ ಸರ್ವಾಂತರ್ಯಾಮಿಗಳೂ ಸರ್ವಜ್ಞಾನಿಗಳೂ ಆಗಿ ಲೋಕದೆದುರು ಕಾಣಿಸಿಕೊಳ್ಳುತ್ತಾರೆ. ಇಂತಹವರೇ ಹುಸಿ ಹುಲ್ಲು ರಜ ವಿಶಯಗಳನ್ನು ತುಂಬಿಕೊಂಡಿರುವ ಮಾನವರು!
ಇಂತಹವರಿಂದ ಪ್ರಭಾವಗೊಳ್ಳುವ ಜನರು, ‘ಭಕ್ತರು’, ಅರಿವಿನಿಂದ ದೂರವಾಗಿ ನಾಶವಾಗುತ್ತಾರೆ. ಮಜವೆಂದರೆ ಇಶ್ಟೆಲ್ಲವನ್ನೂ ಮತ್ತೆ ಆ ಶಕ್ತಿಯ ಹೆಸರಲ್ಲಿಯೇ ಮಾಡಲಾಗುತ್ತದೆ. ದೇವರ ಹೆಸರಿನಲ್ಲಿಯೇ ಅಕ್ರಮಗಳನ್ನು ನಡೆಸಲಾಗುತ್ತಿದೆ. ಈ ಸಮಸ್ಯೆಗಳಿಗೆ ಆ ಒಡೆಯ ಪರಿಹಾರ ಸೂಚಿಸಲಿಲ್ಲ. ಮತ್ತೆ ಜನರು ಈ ಸಮಸ್ಯೆಗಳ ಮನುಶ್ಯ ಮೂಲವನ್ನು, ಹುನ್ನಾರಗಳನ್ನು ಅರಿತು ಪರಿಹಾರವನ್ನು ಕಂಡುಕೊಳ್ಳಲು ಮುಂದಾಗುವುದಿಲ್ಲ.
ಹಾಗಾಗಿಯೇ ಮನುಶ್ಯರಿಗೆ ಅಂಟಿರುವ ಎಲ್ಲ ರೋಗಗಳು, ದುಶ್ಟತನಗಳು ಅದರಿಂದ ನಿತ್ಯವೂ ನಡೆಯುವ ಎಲ್ಲ ಬಗೆಯ ಕೇಡುಗಳಿಗೆ ಪರಿಹಾರವೇ ಇಲ್ಲದಂತಾಗಿದೆ. ಲೋಕ ಭೀಕರ ಕದನಗಳ, ಪೈಪೋಟಿಯ, ಹಿಂಸಾಭೂಮಿಯಾಗಿ ಪರಿವರ್ತನೆಯಾಗಿದೆ. ನಾಗರಿಕತೆಯ ಬಹುದೊಡ್ಡ ಸಮಸ್ಯೆಯಾಗಿ ಕಾಣಿಸುತ್ತಿದೆ. ಇದೇ ನಾಗರಿಕತೆಯ ‘ಕಾಲಿಗೆ ಕಟ್ಟಿದ ಗುಂಡು ಕೊರಳಿಗೆ ಕಟ್ಟಿರುವ ಬೆಂಡು’. ಅದು ವೇಗವಾಗಿ ಚಲಿಸಲು ಬಿಡುವುದಿಲ್ಲ. ಬದುಕಲೂ ಬಿಡುವುದಿಲ್ಲ ಸಾಯಲೂ ಬಿಡುವುದಿಲ್ಲ.
ಹಾಗಾದರೆ ಇದಕ್ಕೆ ಪರಿಹಾರವೇನು? ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ. ಇದಕ್ಕೆ ಬಸವಣ್ಣನ ಇತರೆ ವಚನಗಳಲ್ಲಿಯೇ ಉತ್ತರವಿದೆ. ನಡೆನುಡಿಗಳು ಒಂದಾಗಿರಬೇಕಾದ ಆಚಾರ ವಿಚಾರಗಳು ಕೂಡಬೇಕಾದ ಸಲಹೆಗಳಿವೆ. ಹಾಗೆಯೇ ಇತರೆ ಶರಣರಲ್ಲಿ ಉತ್ತರವಿದೆ. ಬುದ್ಧನಲ್ಲಿ ಉತ್ತರವಿದೆ. ಗಾಂಧಿ ಅಂಬೇಡ್ಕರ್ ಅವರಲ್ಲಿ ಉತ್ತರವಿದೆ. ಮಾನವರು ತಮ್ಮ ಅಂತರಂಗವನ್ನು ತಾವೇ ಶೋಧಿಸಿಕೊಂಡು ಅದರೊಳಗೆ ಅರಿವಿನ ಒಡೆಯನನ್ನು ಕಟ್ಟಿಕೊಳ್ಳುವ ಕೆಲಸ ಮಾಡಬೇಕಿದೆ. ಜಡಶಿಲೆಯ ಒಡೆಯನನ್ನಲ್ಲ.
ಅಂತರಂಗವೇ ಕಾಯಕದ ಅರಿವಿನ ಮನೆಯಾಗಿ ಅದೇ ಸ್ವರ್ಗವಾಗಬೇಕಿದೆ. ಅಂತಹ ಕಡೆ ಹುಸಿತನ ರಜಭಾವಗಳು ವಿಶಯಗಳ ಕ್ರೌರ್ಯ ಯಾವುದೂ ಇರಬಾರದು. ಅಂದರೆ ಎಲ್ಲ ದುರಂತಗಳಿಗೂ ಮನುಶ್ಯರೇ ನೇರ ಕಾರಣವಾಗಿರುವುದರಿಂದ ಇದಕ್ಕೆ ಮಾನವರೇ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕೆ ಯಾವ ‘ದೈವಿಕ ಪರಿಹಾರ’ಗಳೂ ಇಲ್ಲ. ಇದು ದುಶ್ಟಕೂಟಕ್ಕೆ ಚನ್ನಾಗಿ ತಿಳಿದಿದೆ. ಸದ್ಯ ದುಶ್ಟರಕೂಟಗಳು ಎಲ್ಲ ದೇಶಗಳಲ್ಲಿಯೂ ಅಧಿಕಾರದ ಗದ್ದುಗೆಗೇರಿರುವುದರಿಂದ ಮಾನವರ ಸಮಾಜ ನಿತ್ಯವೂ ಕ್ಶೋಭೆಗಳಲ್ಲಿ ಬೇಯುತ್ತಿದೆ. ಇದುವರೆಗಿನ ಪ್ರಪಂಚದ ಚರಿತ್ರೆಯನ್ನು ಗಮನಿಸಿದರೆ ಅಲ್ಲಿ ಇಂತಹ ದುಶ್ಟಕೂಟಗಳೇ ಆಳ್ವಿಕೆ ನಡೆಸಿರುವುದು.
ಇದನ್ನೂ ಓದಿ |ಖಾಸಗಿ ವಾಹನಗಳ ನಿರ್ವಾಹಕ-ಕ್ಲೀನರ್ ನೋಂದಣಿಗೆ ಅರ್ಜಿ ಆಹ್ವಾನ
ಹಾಗಾಗಿ ಪ್ರಭುತ್ವ ಎಂದರೇನೆ ದುಶ್ಟಕೂಟಗಳ ಐಕ್ಯತೆಯ ಚರಿತ್ರೆಯೂ ಆಗಿದೆ. ಇದನ್ನು ಮಾನವೀಯಗೊಳಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಆದರೆ ಇಂತಹ ಪ್ರಯತ್ನಗಳನ್ನು ಹತ್ತಿಕ್ಕಲಾಗಿದೆ. ದುಶ್ಟಕೂಟಕ್ಕೆ ಲಜ್ಜೆಯಿಲ್ಲ. ಪ್ರಜ್ಞಾವಂತರಿಗೆ ಸದಾ ಲಜ್ಜೆಯಿರುತ್ತದೆ. ಅವರು ಅಂಜುತ್ತಾರೆ. ಆದ್ದರಿಂದ ಇದಕ್ಕೆ ದುಶ್ಟಕೂಟದಿಂದ ಪರಿಹಾರ ಸಾಧ್ಯವಿಲ್ಲ. ಆ ಎಲ್ಲ ದುಶ್ಟತನಗಳ ಬಗೆಗೆ ಎಚ್ಚರವಿರುವ ಜಾಗೃತ ಜನರು ಸಂಘಟಿತರಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಅದು ಮಾತ್ರವೇ ಮನೆಯನ್ನೂ ಮನವನ್ನೂ ಅಂತರಂಗವನ್ನೂ ಬಹಿರಂಗವನ್ನೂ ಶುದ್ಧಗೊಳಿಸಬಲ್ಲದು.
ಬುದ್ಧ ಅಂತಹ ಕೆಲಸಕ್ಕೆ ಕೈಹಾಕಿ ಸಮಾಜವನ್ನು ಕೊಂಚ ದೂರ ನಡೆಸಿಕೊಂಡು ಬಂದಿದ್ದ. ಇಂದು ಆತನ ಅನುಯಾಯಿಗಳು ಕೂಡ ಜನಾಂಗಗಳನ್ನು ನಿರ್ಮೂಲಿಸುವ ಕೆಲಸದಲ್ಲಿ ನಿರತರು. ಇಂತಹ ಪ್ರಮಾದಗಳನ್ನು ಅರಿತು ಚರಿತ್ರೆಯಿಂದ ಪಾಠ ಕಲಿತು ಸಾಧ್ಯವಾದಶ್ಟು ಮಾನವರ ಕುಲದ ಕಶ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅಂತಹ ಪರಿಹಾರದ ದಾರಿಗಳಲ್ಲಿ ದೇವರು ಸಂಕೇತನಾಮವಾಗದೆ ಅರಿವಿನ ಮಾರ್ಗವಾಗಬೇಕಿದೆ.
ಸ್ವತಃ ಅರಿವೇ ಆಗಬೇಕಿದೆ. ‘ಮನೆಯೊಡೆಯನಿದ್ದಾನೋ ಇಲ್ಲವೋ? ಎಂಬ ತಾಕಲಾಟಗಳಲ್ಲಿ ಪ್ರಾಮಾಣಿಕತೆಯ ಹಾದಿಯಲ್ಲಿ ಅಂತರಂಗದ ಶೋಧದಲ್ಲಿ ಸಾಗಿದರೆ ಸಮಸ್ಯೆಯಿಲ್ಲ. ಅದಿಲ್ಲದೆ ಕೇವಲ ಜಡಶಿಲೆಗೊಳಿಸಿ ದೇವರ ಹೆಸರಿನಲ್ಲಿ ಮೌಢ್ಯಾಚರಣೆಗಳ ಹುತ್ತ ಬೆಳೆಸಿ ಸ್ತುತಿಪಠಣಗಳನ್ನು ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಆಗ ಕೊನೆಗೂ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಎಂಬ ಸಂಶಯ ಉಳಿದೇ ಇರುತ್ತದೆ. ಈ ಸಂಶಯವನ್ನು ಶಾಶ್ವತವಾಗಿ ಇಲ್ಲವಾಗಿಸುವ ಬಗೆಹರಿಸುವ ಉತ್ತರಿಸುವ ‘ಬುದ್ಧಶಕ್ತಿಗಳು’ ಇನ್ನೂ ಉದಯಿಸಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoನಕಲಿ ಜಿ.ಎಸ್.ಟಿ ಬಿಲ್ಲುಗಳ ಮೂಲಕ ಅವ್ಯವಹಾರ | ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಪ್ರೊ.ಪೂರ್ಣಾನಂದ, ಎ.ನಾರಾಯಣ, ಸತೀಶ್ ಆಚಾರ್ಯ ಸೇರಿದಂತೆ ಹಲವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
-
ದಿನದ ಸುದ್ದಿ7 days agoಇದೇ 11 ರಂದು ಜಿಎಂ ವಿಶ್ವವಿದ್ಯಾಲಯದಲ್ಲಿ ಪ್ರಥಮ ಘಟಿಕೋತ್ಸವ : ಕುಲಪತಿ ಡಾ. ಎಸ್.ಆರ್. ಶಂಕಪಾಲ್
-
ದಿನದ ಸುದ್ದಿ3 days agoತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
-
ದಿನದ ಸುದ್ದಿ4 days agoಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ
-
ದಿನದ ಸುದ್ದಿ4 days agoಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

