ನೆಲದನಿ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ..?
- ರಂಗನಾಥ ಕಂಟನಕುಂಟೆ
“ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ, ಮನದಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲ ಸಂಗಮದೇವ.”
–ಬಸವಣ್ಣನವರ ವಚನಗಳು, ಬಸವರಾಜು ಎಲ್, ಪು.53
ಬಸವಣ್ಣನವರ ಈ ವಚನ ಬಹಳ ಜನಪ್ರಿಯ ಮತ್ತು ಬಹುಚರ್ಚಿತ. ಈ ವಚನವನ್ನು ‘ಮನುಶ್ಯತ್ವ’ದ ಇಲ್ಲವೇ ವ್ಯಕ್ತಿಯ ‘ಶುದ್ಧ’, ಐಡಿಯಲ್ ವ್ಯಕ್ತಿತ್ವದ ಅಭಾವದಲ್ಲಿ ‘ಮಾನವೀಯತೆ’ಯ ಹುಡುಕಾಟದ ಕುರುಹಾಗಿ ಚರ್ಚಿಸಲಾಗಿದೆ. ‘ಮನೆ’ ಎನ್ನುವುದನ್ನು ದೇಹವಾಚಿಯಾಗಿಸಿ ಅದರ ಒಳಹೊರಗೆ ಹುಲ್ಲು ರಜ ಹುಸಿ ವಿಶಯಗಳು ಬಿದ್ದಿರುವ ವಿವರಗಳ ಮೂಲಕ ಒಂದು ಪಾಳುಬಿದ್ದಿರುವ ಭಗ್ನಚಿತ್ರವನ್ನು ನೀಡಲಾಗಿದೆ.
ಮುಖ್ಯವಾಗಿ ಮನುಶ್ಯರ ಪ್ರಜ್ಞೆಯೊಳಗೆ ತುಂಬಿಕೊಂಡಿರುವ ಅಪಕಲ್ಪನೆಗಳು, ಕೇಡಿಗತನಗಳು, ಮೌಢ್ಯಗಳು, ಸ್ವಾರ್ಥ, ದ್ವೇಶ, ದುಶ್ಟತನ, ಭವಿತ್ವ ಮುಂತಾದ ಭಾವನೆಗಳಿಂದ ತುಂಬಿಹೋಗಿ ‘ಮನುಶ್ಯರು’ ಎಂದು ಕರೆದುಕೊಳ್ಳುವವರಲ್ಲಿ ‘ಮನುಶ್ಯತ್ವ’ವೇ ಇಲ್ಲದಿರುವ ಮೌಲ್ಯಹೀನ ಬದುಕಿನ ಬಗೆಯನ್ನು ಚರ್ಚಿಸಲು ಈ ವಚನವನ್ನು ಆಕರವಾಗಿ ಬಳಸಲಾಗಿದೆ. ದೇಹ ಮತ್ತು ಮನಸ್ಸುಗಳ ನಡುವಿನ ಬಿರುಕು; ಅಂತರಂಗ ಹಾಗೂ ಬಹಿರಂಗಗಳು ಗಬ್ಬೆದ್ದುಹೋಗಿರುವುದನ್ನು ಎತ್ತಿತೋರಿಸುವ ಬಗೆಯಾಗಿ ಓದಲಾಗಿದೆ.
ಅಲ್ಲದೆ ವ್ಯಕ್ತಿಯು ತನ್ನನ್ನು ತಾನು ಆತ್ಮಶೋಧನೆ ಮಾಡಿಕೊಳ್ಳುವ ಬಗೆಯಾಗಿಯೂ ವಿವರಿಸಿಕೊಳ್ಳಲಾಗಿದೆ. ಇದಕ್ಕೆ ವಚನದಲ್ಲಿಯೇ ಸೂಚನೆಯಿದೆ. ಮೊದಲ ಸಾಲಿನಲ್ಲಿ ‘ಮನೆ’ ಎಂದು ಸೂಚಿತವಾದುದು ನಾಲ್ಕನೆಯ ಸಾಲಿನಲ್ಲಿ ‘ತನು’ ಎಂದು ಸ್ಪಶ್ಟವಾಗುತ್ತದೆ. ಹಾಗಾಗಿಯೇ ಇದನ್ನು ದೇಹ ಮತ್ತು ಮನಸ್ಸುಗಳ ಆಂತರಿಕ ಸಂಬಂಧಗಳು ಮತ್ತು ಬಿರುಕುಗಳಿಗೆ, ಅಲ್ಲಿನ ಗಬ್ಬೆದ್ದುಹೋಗಿರುವ ಚಿತ್ರಕ್ಕೆ ಲಗತ್ತಿಸಿ ಚರ್ಚಿಸಲಾಗುತ್ತದೆ. ಇದನ್ನು ಸಮಸ್ಯೆ ಎಂದು ಭಾವಿಸಬೇಕಿಲ್ಲ.
ಸದ್ಯ ಈ ವಚನದಲ್ಲಿ ಬಳಕೆಗೊಂಡಿರುವ ಭಾಶಿಕ ಸೂಚನೆಗಳನ್ನು ಬಳಸಿ ವಚನವನ್ನು ಬೇರೊಂದು ಬಗೆಯಲ್ಲಿ ಓದಲು ಸಾಧ್ಯವಿದೆ. ‘ಮನೆ’ಯನ್ನು ದೇಹ, ವ್ಯಕ್ತಿ, ಮನುಶ್ಯರು ಎಂದು ಮಾತ್ರವಲ್ಲದೆ ಅದನ್ನು ಲೋಕ, ವಿಶ್ವ, ಜಗತ್ತು, ಪ್ರಪಂಚ, ಯೂನಿವರ್ಸ್ ಎನ್ನುವ ರೀತಿಯಲ್ಲಿ ಓದಿದರೆ ಆಗ ಈ ವಚನ ಯಾವ ತಿರುಳನ್ನು ಧ್ವನಿಸುತ್ತದೆ? ಹಾಗೆಯೆ ‘ಒಡೆಯ’ ಎಂಬುದನ್ನು ಈ ಲೋಕವನ್ನು ಸೃಶ್ಟಿಸಿರುವ ‘ಅತೀಂದ್ರಿಯ ಶಕ್ತಿ’, ‘ದೇವರು’ ಎಂದು ಗ್ರಹಿಸಿದರೆ ಆಗ ಯಾವ ಅರ್ಥ ಧ್ವನಿಸುತ್ತದೆ? ‘ಮನೆಯೊಳಗೆ ಮನೆಯೊಡೆನಿದ್ದಾನೋ ಇಲ್ಲವೋ?
ಅಂದರೆ ಈ ಲೋಕದಲ್ಲಿ ದೇವರಿದ್ದಾನೋ? ಇಲ್ಲವೋ ಎನ್ನುವ ಮೂಲಕ ಅನುಮಾನ ಸಂದಿಗ್ಧತೆ ಹುಡುಕಾಟ ತಾಕಲಾಟಗಳನ್ನು ವ್ಯಕ್ತಪಡಿಸುವ ವಚನವಾಗಿದೆ. ಕೊನೆಯಲ್ಲಿ ‘ಮನೆಯೊಳಗೆ ಮನೆಯೊಡೆಯನಿಲ್ಲ!’ ಎನ್ನುತ್ತದೆ. ಈ ನಿರ್ಣಾಯಕ ಮಾತನ್ನು ವ್ಯಕ್ತಪಡಿಸಿದಾಗ ಈ ಲೋಕದಲ್ಲಿ ಸೃಶ್ಟಿಕರ್ತನೆಂದು ಭಾವಿಸಿ ನಂಬಲಾಗಿರುವ ‘ಅತೀಂದ್ರಿಯ ಶಕ್ತಿ’, ‘ದೇವರು’ ಇತ್ಯಾದಿ ಶಕ್ತಿ ‘ಇಲ್ಲ’ ಎಂಬ ಅರ್ಥವೂ ಧ್ವನಿಸಬಹುದಲ್ಲವೇ? ‘ಮನೆಯೊಡೆಯನಿಲ’್ಲ ಎಂಬ ಮಾತಿನಲ್ಲಿ ‘ದೇವರು’ ಇಲ್ಲ ಎಂದೂ ಧ್ವನಿಸಬಹುದಲ್ಲವೇ? ಅವನಿಲ್ಲದ ಕಾರಣಕ್ಕಾಗಿಯೇ ಮಾನವರ ಸಮಾಜ ಅತ್ಯಂತ ಹೆಚ್ಚು ಬರ್ಬರವಾಗಿದೆ ಎಂದೂ ವಾದಿಸಬಹುದು. ಪ್ರಾಣಿಜಗತ್ತಿನಲ್ಲಿ ಮಾನವರು ‘ಪ್ರಚ್ಚನ್ನ’ ಪ್ರಾಣಿಗಳಾಗಿ ಬೇರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ವ್ಯವಸ್ಥಿತವಾಗಿ ಉದ್ದೇಶಪೂರ್ವಕವಾಗಿ ಹಿಂಸೆ ಕ್ರೌರ್ಯ ದಮನ ನರಮೇಧ ಮೋಸ ವಂಚನೆಗಳನ್ನು ನಡೆಸಿದ್ದಾರೆ ಮತ್ತು ನಡೆಸುತ್ತಿದ್ದಾರೆ.
ಇದರಿಂದ ಮಾನವರ ಕುಲ ಬೇರೆ ಪ್ರಾಣಿಗಳಿಂದ ಅತ್ಯಂತ ಹೆಚ್ಚು ಹಿಂಸೆಯನ್ನು ಅನುಭವಿಸಿದೆ. ಅಂದರೆ ಮನೆಯೊಡೆಯನಾದ ಆ ಶಕ್ತಿ ಮತ್ತು ಆ ಶಕ್ತಿರೂಪಿಯಾಗಿರುವ ‘ಅರಿವು’ ಮನುಶ್ಯರ ಅಂತರಂಗ ಬಹಿರಂಗಗಳಲ್ಲಿ ಆಚರಣೆಯಲ್ಲಿ ಇಲ್ಲದಿರುವುದೇ ಇಶ್ಟೆಲ್ಲಾ ದುರಂತಗಳಿಗೆ ಕಾರಣ. ಈ ಬಗೆಯ ಅನುಮಾನ ಬಸವಣ್ಣನಿಗೆ ಕಾಡಿರಬಹುದೇ? ಲೋಕದಲ್ಲಿರುವ ಮನುಶ್ಯತ್ವದ ಅಭಾವವೇ ಬಸವಣ್ಣನ ಒಳಗಿನ ತುಮುಲಕ್ಕೆ ಕಾರಣ. ಅದೇ ಇಂತಹ ವಚನದ ಹಿಂದಿನ ಪ್ರೇರಣೆಯಾಗಿದೆ.
ಇಲ್ಲಿನ ಮುಖ್ಯ ಪ್ರಶ್ನೆಯೆಂದರೆ, ಬಸವಣ್ಣನಿಗೆ ಈ ಲೋಕದಲ್ಲಿ ಮನೆಯೊಡೆಯ ಇಲ್ಲವೇ ಅತೀಂದ್ರಿಯ ಶಕ್ತಿ ಇದೆಯೋ ಇಲ್ಲವೋ ಎಂಬ ಅನುಮಾನ ಹುಟ್ಟಿರುವ ಸಾಧ್ಯತೆ ಇದ್ದಂತಿದೆ. ಆ ಮೂಲಕ ನಿರಂತರವಾಗಿ ಒಂದು ‘ಶಕ್ತಿ’ಯನ್ನು ಕಲ್ಪಿಸಿಕೊಳ್ಳುವ, ಹುಡುಕಿಕೊಳ್ಳುವ, ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾನೆ ಎನ್ನಿಸುತ್ತದೆ. ಹಾಗಾಗಿಯೇ ದೇವರು ಗುಡಿಯಲ್ಲಿದ್ದಾನೆ/ಇದ್ದಾಳೆ ಎಂದು ನಂಬಿಸುವ ಪುರೋಹಿತಶಾಹಿ ಕಲ್ಪನೆಗಿಂತ ಭಿನ್ನವಾಗಿ, ಆ ‘ಶಕ್ತಿ’ ಎಲ್ಲಿಯೋ ಇಲ್ಲ ಮತ್ತು ಅದು ನಮಗೆ ಪ್ರತ್ಯಕ್ಶವಾಗುವುದಿಲ್ಲ. ಅದೇನಿದ್ದರೂ ನಮ್ಮೊಳಗೆ ನಾವೇ ಕಂಡು ಕೊಳ್ಳಬೇಕಾದ ‘ಸತ್ಯ’ ಎಂದು ಭಾವಿಸಿದಂತಿದೆ. ಅದಕ್ಕಾಗಿಯೇ ಬಸವಣ್ಣ ‘ದೇಹವೇ ದೇಗುಲ, ಕಾಯವೇ ಕೈಲಾಸ’ ಎಂದಿರುವಂತಿದೆ. ದೇಹ ಮತ್ತು ಕಾಯಕಗಳು ಕಣ್ಣೆದುರಿನ ವಾಸ್ತವಗಳು.
ಆದರೆ ಅಂತಹ ಒಂದು ಶಕ್ತಿಯಿಲ್ಲದೆ ಈ ಜಗತ್ತು ಸೃಶ್ಟಿಗೊಳ್ಳಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯೂ ಕಾಡಿರುವಂತಿದೆ. ಅಂತಹ ಕಾಡುವಿಕೆಯಿಂದಲೇ ‘ಶಕ್ತಿ’ಯಾದ ಕೂಡಲಸಂಗಮನ ಹುಡುಕಾಟ ಮಾಡಲಾಗಿದೆ. ಎಲ್ಲ ವಚನಕಾರರು ಸಂತರು ಇದನ್ನೇ ಮಾಡಿದ್ದಾರೆ. ಅಕ್ಕ ಪ್ರಿಯಕರ ಮಲ್ಲಿಕಾರ್ಜುನನನ್ನು ಹುಡುಕುವ ಪರಿಯನ್ನು ಗಮನಿಸಿದರೆ ಇದರ ತೀವ್ರತೆಯ ಅರಿವಾಗುತ್ತದೆ. ಬಸವಣ್ಣನಲ್ಲಿ ‘ಶಕ್ತಿ’ಯ ನಿರಂತರ ಹುಡುಕಾಟವಿದೆಯೇ ಹೊರತು ಆತ್ಯಂತಿಕ ನಿರ್ಣಯವಿಲ್ಲ.
ಇಂತಹ ಹುಡುಕಾಟದಲ್ಲಿಯೇ ‘ದೇವರು’ ಜೀವಂತವಾಗಿ ಕಾಣಿಸಿಕೊಂಡಿದ್ದಾನೆ. ಇಂತಹ ಹುಟುಕಾಟ ನಡೆಸಿದ ಬುದ್ಧ ಕೊನೆಗೆ ಮೌನವಹಿಸುತ್ತಾನೆ. ದೇವರನ್ನು ಜಡಶಿಲೆಗೊಳಿಸಿರುವ ಕಡೆಗಳಲ್ಲಿ ದೇವರು ಪ್ರಚ್ಚನ್ನ ಮೌಢ್ಯದ ಅವತಾರವೆತ್ತಿದ್ದಾನೆ. ಅಲ್ಲಿ ಹಿಂಸಾಮಯಿ ಕೂಡ ಆಗಿರುವುದನ್ನು ಕಾಣಬಹುದು. ಉಳಿದೆಡೆ ಚಲನಶೀಲತೆಯ ಅರಿವಿನ ಸ್ವರೂಪವಾಗಿ ಕಾಣಿಸುತ್ತದೆ.
ಆದರೆ ಇಂದು ಬಸವಾನುಯಾಯಿಗಳಲ್ಲಿ, ಮಠಾಧೀಶರಲ್ಲಿ, ಸ್ವಾಮೀಜಿಗಳಲ್ಲಿ, ಪಾದ್ರಿಗಳು ಮುಲ್ಲಾಗಳು ಹಾಗೂ ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಅನುಯಾಯಿಗಳಲ್ಲಿ ಆ ಶಕ್ತಿಯಿದೆ ಎಂಬ ಆತ್ಯಂತಿಕ ನಿಲುವಿದೆ. ಅಂತಹ ನಂಬಿಕೆಯನ್ನು ಬಲವಾಗಿ ಬೆಳೆಸಲಾಗಿದೆ. ಅಲ್ಲಿ ಯಾವುದೇ ಹುಡುಕಾಟವಿರುವುದಿಲ್ಲ. ಬಸವಣ್ಣನಿಗಿರುವಂತೆ ಆ ‘ಶಕ್ತಿ’ ಇದೆಯೋ ಇಲ್ಲವೋ ಎಂಬ ಅನುಮಾನ ಸಂಶಯ ಸಂದಿಗ್ಧತೆಗಳೇ ಕಾಡುವುದಿಲ್ಲ. ಆ ಶಕ್ತಿಯನ್ನು ಕಾಣಬೇಕು ಎಂಬ ತವಕ ತಲ್ಲಣ ಅಚಲ ಅದಮ್ಯ ಬಯಕೆಗಳೂ ಇರುವುದಿಲ್ಲ.
ಅದೇನಿದ್ದರೂ ಕೇವಲ ಕುರುಡು ನಂಬಿಕೆ ಮಾತ್ರ. ಆ ನಂಬಿಕೆಯಾಚೆಗೆ ಆ ಶಕ್ತಿಗೆ ಯಾವ ಅಸಿತ್ವವೂ ಇಲ್ಲ. ಅರ್ಥವೂ ಇಲ್ಲ. ಆ ಶಕ್ತಿಯ ಬಗೆಗೆ ಪ್ರಾಮಾಣಿಕ ಜಿಜ್ಞಾಸೆಯೂ ಇರುವುದಿಲ್ಲ. ಮತೀಯ ಕುರುಡುತನದ ನಂಬಿಕೆಗಳ ಹುದುಲಿನಲ್ಲಿ ಆ ‘ಶಕ್ತಿ’ಯನ್ನು ಹೂತುಹಾಕಿ ಅದರ ಮೇಲೆ ಸಾಮ್ರಾಜ್ಯಗಳನ್ನು, ಧರ್ಮಗಳನ್ನು ದಂತಗೋಪುರಗಳನ್ನು ಕಟ್ಟಲಾಗಿದೆ.
ಇವೆಲ್ಲವೂ ಅಕ್ರಮ ಮತ್ತು ಅನೈತಿಕ ನೆಲೆಯ ಮೇಲೆಯೇ ಸ್ಥಾಪನೆಗೊಂಡಿವೆ. ಇವುಗಳ ಸ್ಥಾಪಕರಿಗೆ ದೇವರು ಒಂದು ಸಂಕೇತನಾಮ ಮಾತ್ರ. ಅಂತಹ ಸಂಕೇತನಾಮವನ್ನು ಭರ್ಜರಿಯಾಗಿ ವ್ಯಾಪಾರ ಮಾಡಲಾಗುತ್ತದೆ. ಎಲ್ಲ ಧರ್ಮಗಳು ಇಂತಹ ವ್ಯಾಪಾರದಲ್ಲಿ ತೊಡಗಿವೆ. ಅವು ಮಾನವರ ಅಂತರಂಗವನ್ನು ಶುದ್ಧಗೊಳಿಸುತ್ತಿಲ್ಲ. ಮತ್ತಶ್ಟು ಕಲುಶಿತಗೊಳಿಸುತ್ತಿವೆ. ಮತ್ತು ಅಂತಹ ಶಕ್ತಿಯನ್ನು ಒಂದು ಅನುಭವವಾಗಿ, ಅರಿವಾಗಿ ಅಂತರಂಗಕ್ಕೆ ತೆಗೆದುಕೊಳ್ಳುವುದಿಲ್ಲ. ಬಹಿರಂಗದಲ್ಲಿ ಜೀವನ ಮೌಲ್ಯವಾಗಿ ಯಾವ ಧರ್ಮೀಯರೂ ಆಚರಿಸುವುದಿಲ್ಲ. ಆ ಮೂಲಕ ಲೋಕವನ್ನು ಶುಚಿಯಾಗಿಡುವುದಿಲ್ಲ.
ಬದಲಿಗೆ ಶಿಲುಬೆ, ಲಿಂಗ, ಹಸ್ತ-ನಕ್ಶತ್ರ, ಓಂ ಇತ್ಯಾದಿಗಳನ್ನು ಸಂಕೇತಗಳಾಗಿ ಬಳಸಲಾಗುತ್ತದೆ. ಗುಡಿ ಚರ್ಚು ಮಸೀದಿ ಮಂದಿರಗಳನ್ನು ಕಟ್ಟಲಾಗುತ್ತದೆ. ಅವುಗಳನ್ನು ಜನರ ಎದೆಯ ಮೇಲೆ ಹೊರಿಸಿ ಅರಿವನ್ನು ನಾಶ ಮಾಡಲಾಗುತ್ತದೆ. ನಂಬಿಕೆಯ ಕೋಟೆಯ ಸುತ್ತ ಕುರುಡುತನ, ಮೌಢ್ಯದ ಆಚರಣೆಗಳ ಬೇಲಿ ನಿರ್ಮಿಸಲಾಗುತ್ತದೆ. ಅಲ್ಲಿ ಅವೈಚಾರಿಕತೆ ಹುಟ್ಟಿಕೊಳ್ಳುವುದೇ ಹೊರತು ಯಾವುದೇ ಅರಿವು ಹುಟ್ಟುವುದಿಲ್ಲ. ಹಾಗಾಗಿಯೇ ಬಸವಣ್ಣ ಹೇಳಿರುವಂತೆ ಲೋಕದ ಅಂತರಂಗ ಬಹಿರಂಗಗಳಲ್ಲಿ ಹುಸಿ ರಜ ವಿಶಯಗಳು ತುಂಬಿ ಈ ಜಗತ್ತು ಭಗ್ನಗೊಂಡಿದೆ ಇಲ್ಲವೇ ಪಾಳುಬಿದ್ದಂತಿದೆ. ‘ಪ್ರಚ್ಛನ್ನ ಪಶುತ್ವ’ದ ಕ್ರೌರ್ಯ ಅನಾವರಣಗೊಳ್ಳುತ್ತಲೇ ಇದೆ.
ದೇವರ ಇರುವಿಕೆಯ ಬಗೆಗೆ ಅನುಮಾನ ವ್ಯಕ್ತಪಡಿಸಿ ಅದನ್ನು ಕಾಣುವ ತವಕ ತಲ್ಲಣಗಳಿಂದ ಬೆಂದ ಭಕ್ತರಲ್ಲಿ ಸಂತರಲ್ಲಿ ಮಾತ್ರ ದೇವರು ಮತ್ತೆ ಮತ್ತೆ ಹುಟ್ಟಿದ್ದಾನೆ. ಅಲ್ಲಿಯೇ ಇಂದಿಗೂ ಆ ಶಕ್ತಿ ಜೀವಂತವಾಗಿರುವುದು. ಮತ್ತು ಅಂತಹ ಕಡೆಯಲ್ಲಿ ಹೊಸ ತಿಳುವಳಿಕೆ ಹುಟ್ಟಿದೆ. ಇದಕ್ಕೆ ಸ್ವತಃ ಬಸವಣ್ಣನೇ ಉದಾಹರಣೆ. ನಂತರ ಅಲ್ಲಮ ಅಕ್ಕ ಕಬೀರ ಮೀರಾ ಕುವೆಂಪು ಇತ್ಯಾದಿ. ಅಂತಹ ಕಡೆಗೆ ಮಾತ್ರ ಮಾನವರು ತಮ್ಮ ಬದುಕನ್ನು ಹಸನಾಗಿಡುವ ಮೂಲಕ ಜೀವನದ ಪಥವನ್ನು ಶುದ್ಧವಾಗಿಟ್ಟುಕೊಳ್ಳುವ ಪಾರದರ್ಶಕ ನುಡಿಯನ್ನು ರೂಪಿಸುವ ಕೆಲಸ ಮಾಡಿದ್ದಾರೆ.
ಬಸವಣ್ಣನ ಈ ವಚನವನ್ನು ಬ್ರೆಕ್ಟನ ಕವಿತೆಯ ಜೊತೆಗೆ ಓದಬಹುದೆನಿಸುತ್ತದೆ. ಬ್ರೆಕ್ಟ್ ಹೇಳುವಂತೆ, ‘ಹಂದಿಗಳು ತಾವು ಮಲಗುವ ಜಾಗವನ್ನು ಹೇಲು ಉಚ್ಚೆಗಳಿಂದ ಅಧ್ವಾನಗೊಳಿಸಿಕೊಂಡಂತೆ ಜರ್ಮನಿ ತನ್ನ ನಾಡನ್ನು ಮಲಿನ ಮಾಡಿಕೊಂಡಿದೆ’ ಎನ್ನುತ್ತಾನೆ. ಅವನ ಮತ್ತು ಬಸವಣ್ಣನ ಮಾತನ್ನು ಸಮೀಕರಿಸಿ ಹೇಳುವುದಾದರೆ, ‘ಮಾನವರು’ ತಮ್ಮ ಇಡೀ ಮನುಕುಲವನ್ನು ದ್ವೇಶ, ಹಿಂಸೆ, ಕೊಲೆ, ಸುಲಿಗೆ, ಕ್ರೌರ್ಯ, ಸ್ವಾರ್ಥ, ಅಧಿಕಾರದ ಮದ ಮತ್ತು ಭ್ರಶ್ಟ ಗುಣಗಳಿಂದ ಇಡೀ ಭೂಮಂಡಲವನ್ನು ಸ್ಮಶಾನದಂತೆ, ಕಸಾಯಿಖಾನೆಯಂತೆ ಮಾಡಿದ್ದಾರೆ. ಇಲ್ಲಿ ಆಗಿಹೋಗಿರುವ ಜನಾಂಗಿಯ ಕಲಹಗಳು, ಯುದ್ಧಗಳು, ಧಾರ್ಮಿಕ ಸಂಘರ್ಶಗಳು ವರ್ಣ ಜಾತಿ ದ್ವೇಶದ ಕಗ್ಗೊಲೆಗಳನ್ನು ಗಮನಿಸಿದರೆ ಇದರ ಭೀಕರತೆ ತೀವ್ರತೆಗಳು ಅರ್ಥವಾಗುತ್ತವೆ. ಇದರಿಂದ ನದಿಗಳಲ್ಲಿ ನೀರಿಗಿಂತಲೂ ಹೆಚ್ಚು ರಕ್ತಹರಿದಿದೆ. ಚರಿತ್ರೆಯ ಪುಟಗಳೇ ಇದನ್ನೇ ಸಾಬೀತುಪಡಿಸುತ್ತಿದೆ. ಹಿಟ್ಲರನ ಜರ್ಮನಿ ಇಡೀ ಜಗತ್ತನ್ನು ರಕ್ತಸಿಕ್ಕಗೊಳಿಸಿತ್ತು. ಕಲ್ಯಾಣವೂ ಕೂಡ ನೆತ್ತರಿನಲ್ಲಿ ನೆಂದೇ ನಾಶವಾಗಿದ್ದು ಸುಳ್ಳಲ್ಲ.
ಇಂದು ಜಗತ್ತಿನ ಕೆಲವು ದೇಶಗಳು ಈ ದಾರಿಯಲ್ಲಿ ಹೆಜ್ಜೆಹಾಕುತ್ತಿವೆಯೇ ಎಂಬ ಭಯ ಮೂಡುತ್ತಿದೆ. ಈಗಾಗಲೇ ಅದರ ದಟ್ಟ ವಾಸನೆ ವಿಶ್ವದಲ್ಲಿರುವ ಜಾಗೃತ ಮೂಗುಗಳಿಗೆ ಬಡಿಯುತ್ತಿದೆ. ಬಂಡವಾಳಶಾಹಿ ಸಾಮ್ರಾಜ್ಯಗಳನ್ನು ಕಟ್ಟಲು, ಧರ್ಮವನ್ನು ಸ್ಥಾಪಿಸಲು ಮತ್ತು ಜಾತಿ ವರ್ಣಗಳ ಭದ್ರಕೋಟೆಗಳನ್ನು ಸ್ಥಾಪಿಸಲು ಕೋಟ್ಯಂತರ ಜನರನ್ನು ಬಲಿಕೊಡಲಾಗಿದೆ. ಅದರ ಮುಂದುವರಿದ ಅಧ್ಯಾಯ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಆರಂಭವಾಗಿರುವಂತೆ ಕಾಣುತ್ತದೆ.
ಹೀಗೇ ತಮ್ಮದೇ ಸಂತತಿಯವರನ್ನು ಬಲಿಕೊಟ್ಟು ಸಾಮ್ರಾಜ್ಯವನ್ನು ಧರ್ಮಗಳನ್ನು ಸ್ಥಾಪಿಸಿದ ‘ಪ್ರಾಣಿ’ ಪ್ರಪಂಚವಿಲ್ಲ. ಅಂದರೆ ಬ್ರೆಕ್ಟ್ ಹೇಳಿದ ಮಾತು ಕೇವಲ ಜರ್ಮನಿಗೆ ಸೀಮಿತವಲ್ಲ. ಬಸವಣ್ಣ ಹೇಳಿದ ಹುಸಿ ವಿಚಾರಗಳು ಕೇವಲ ವ್ಯಕ್ತಿಗೆ, ಕಲ್ಯಾಣಕ್ಕೆ ಸಂಬಂಧಿಸಿದವು ಮಾತ್ರವಲ್ಲ. ಅವು ಇಡೀ ಮಾನವರ ಕುಲವನ್ನು ಕುರಿತ ವಿಚಾರಗಳು. ಅಂದರೆ ಅವರಿಬ್ಬರ ಮಾತುಗಳು ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾಗಿ ಕಾಣಿಸುತ್ತಿವೆ.
ಇದನ್ನು ಗಮನಿಸಿದರೆ ಈ ಲೋಕದಲ್ಲಿ ಆ ‘ಒಡೆಯ’ನಿಲ್ಲ ಎಂಬ ಅನುಮಾನ ಮೂಡುತ್ತದೆ. ಅದರ/ಅವನ/ಅವಳ ಗೈರುಹಾಜರಿ ಎದ್ದುಕಾಣಿಸುತ್ತದೆ. ಇಂತಹದೇ ಅನುಮಾನವನ್ನು ಬಸವಣ್ಣ ಈ ವಚನದಲ್ಲಿ ವ್ಯಕ್ತಪಡಿಸಿರುವಂತೆ ಅನ್ನಿಸುತ್ತದೆ. ಆ ಶಕ್ತಿಯಿದ್ದಿದ್ದರೆ ಇಶ್ಟೊಂದು ರಕ್ತಪಾತ, ಮೋಸ, ವಂಚನೆ ದುಶ್ಟಕೂಟಗಳ ಅಟ್ಟಹಾಸ ನಡೆಯುತ್ತಿರಲಿಲ್ಲ. ಅದರ ಸಹಸ್ರಬಾಹುಗಳು ತಡೆಯುತ್ತಿದ್ದವೇನೋ? ಆ ಶಕ್ತಿಯ ಸಂಕೇತಗಳಲ್ಲಿ ಪ್ರಾಮಾಣಿಕ ನಂಬಿಕೆಯಿಟ್ಟವರೂ ಕ್ರೌರ್ಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ದೇವರ ಹೆಸರು ದುರ್ಬಳಕೆಯಾಗುತ್ತಿರಲಿಲ್ಲ.
ಇಂದು ದೇವರ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಲೋಕವನ್ನು ವಂಚಿಸುವ ಮಟ್ಟಿಗೆ ಹುಸಿತನಗಳು ವಿಶಯಗಳು ಹುಲ್ಲು ರಜಗಳು ಜನರಲ್ಲಿ ಮತ್ತು ಆಳುವವರಲ್ಲಿ ಹುಟ್ಟಿವೆ. ಅಂದರೆ ಆ ‘ಒಡೆಯ’ನಲ್ಲಿ ನಂಬಿಕೆಯಿಟ್ಟವರೂ ಕ್ರೌರ್ಯದಲ್ಲಿ ವಂಚನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲವೇ ಕುರುಡಾಗಿ ಆ ಶಕ್ತಿಯನ್ನು ನಂಬಿ ತಮ್ಮ ಎಲ್ಲ ಹೀನ ಕೃತ್ಯಗಳನ್ನು ಎಸಗಲಾಗುತ್ತಿದೆ. ಮಾನವರು ಸೃಶ್ಟಿಸಿಕೊಂಡಿರುವ ಈ ಸಮಸ್ಯೆಗಳಿಗೆ ಯಾವುದೇ ‘ದೈವನ್ಯಾಯ’ ದೊರೆತ ಉದಾಹರಣೆಗಳಿಲ್ಲ. ಆದರೆ ಜನರು ಮಾತ್ರ ಆ ದೇವರು ನೋಡಿಕೊಳ್ಳುತ್ತಾನೆ. ಅವನಲ್ಲಿ ಎಲ್ಲ ಲೆಕ್ಕವಿರುತ್ತದೆ ಎಂದು ಸಮಾಧಾನ ಮಾಡಿಕೊಳ್ಳುತ್ತಾರೆಯಶ್ಟೇ.
ಇದನ್ನು ಚನ್ನಾಗಿ ಬಲ್ಲ ಲೋಕದ ಪುರೋಹಿತಶಾಹಿ ವ್ಯವಸ್ಥೆ ಜನರನ್ನು ವ್ಯವಸ್ಥಿತವಾಗಿ ವಂಚಿಸಿ ಸಮಾಜದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ದುರಂತವೆಂದರೆ ಈ ಬಗೆಯ ವಂಚನೆಯನ್ನು ಜನರು ಅರಿಯುವಲ್ಲಿ ಸೋಲುತ್ತಿದ್ದಾರೆ. ಅವರೂ ಕೂಡ ಅರಿವುಗೇಡಿಗಳಾಗಿ ಬಹಳ ಸುಲಭವಾಗಿ ವಂಚಕರಿಗೆ ಬಲಿಯಾಗಿ ಪುರೋಹಿತಶಾಹಿಯ ಸೇವೆ ಮಾಡಲು ಮುಂದಾಗುತ್ತಾರೆ.
ಅಂದರೆ ಜಿಂಕೆಗಳೆಲ್ಲವೂ ಸೇರಿ ಹುಲಿಯನ್ನು ಸ್ತುತಿಸಿದಂತೆ, ಪೂಜಿಸಿದಂತೆ ನಿತ್ಯ ಅದರ ಪಾದಕ್ಕೆರಗಿ ನಮಸ್ಕರಿಸುವಂತೆ ಕಾಣಿಸುತ್ತದೆ. ಈ ಸೇವೆ ಮಾಡುವ ಜನರಿಗೆ ಬಸವಣ್ಣನಂತೆ ಆ ‘ಒಡೆಯನಿದ್ದಾನೋ ಇಲ್ಲವೋ?’ ಎಂಬ ಒಂದು ಸಣ್ಣ ಅನುಮಾನವನ್ನೂ ವ್ಯಕ್ತಪಡಿಸುವುದಿಲ್ಲ. ಆ ಶಕ್ತಿ ಎಂದೂ ಯಾರಿಗೂ ಪ್ರತ್ಯಕ್ಶವಾಗಿ ದರ್ಶನ ಕೊಟ್ಟಿಲ್ಲ. ಎಲ್ಲವೂ ಪುರಾಣಗಳಲ್ಲಿ ದಂತಕತೆಗಳಲ್ಲಿ ಕಟ್ಟಿರುವ ಪವಾಡದ ಕತೆಗಳಶ್ಟೇ.
ಆದರೂ ‘ಇದ್ದಾನೋ ಇಲ್ಲವೋ’ ಎಂಬ ಅನುಮಾನದೊಂದಿಗೆ ನಿರಂತರವಾಗಿ ಆ ಶಕ್ತಿಯನ್ನು ಕಾಣುವ ಪ್ರಯತ್ನವನ್ನು ಮಾಡದೆ ಕೇವಲ ಕುರುಡಾಗಿ ನಂಬಲಾಗುತ್ತಿದೆ. ಹಾಗಾಗಿ ಕೇವಲ ನಂಬಿಕೆಯ ಲೋಕ ದೈವಜ್ಞಾನಶಾಸ್ತ್ರ ಶಾಖೆಗೆ ಯಾವುದೇ ಹೊಸ ಕೊಡುಗೆ ನೀಡುವುದಿಲ್ಲ. ಬದಲಿಗೆ ಹೊಸ ಹೊಸ ಕುರುಡು ಆಚರಣೆಗಳನ್ನು ಸೃಶ್ಟಿಸಲಾಗುತ್ತದೆ. ಜ್ಯೋತಿಶಿಗಳೇ ಸರ್ವಾಂತರ್ಯಾಮಿಗಳೂ ಸರ್ವಜ್ಞಾನಿಗಳೂ ಆಗಿ ಲೋಕದೆದುರು ಕಾಣಿಸಿಕೊಳ್ಳುತ್ತಾರೆ. ಇಂತಹವರೇ ಹುಸಿ ಹುಲ್ಲು ರಜ ವಿಶಯಗಳನ್ನು ತುಂಬಿಕೊಂಡಿರುವ ಮಾನವರು!
ಇಂತಹವರಿಂದ ಪ್ರಭಾವಗೊಳ್ಳುವ ಜನರು, ‘ಭಕ್ತರು’, ಅರಿವಿನಿಂದ ದೂರವಾಗಿ ನಾಶವಾಗುತ್ತಾರೆ. ಮಜವೆಂದರೆ ಇಶ್ಟೆಲ್ಲವನ್ನೂ ಮತ್ತೆ ಆ ಶಕ್ತಿಯ ಹೆಸರಲ್ಲಿಯೇ ಮಾಡಲಾಗುತ್ತದೆ. ದೇವರ ಹೆಸರಿನಲ್ಲಿಯೇ ಅಕ್ರಮಗಳನ್ನು ನಡೆಸಲಾಗುತ್ತಿದೆ. ಈ ಸಮಸ್ಯೆಗಳಿಗೆ ಆ ಒಡೆಯ ಪರಿಹಾರ ಸೂಚಿಸಲಿಲ್ಲ. ಮತ್ತೆ ಜನರು ಈ ಸಮಸ್ಯೆಗಳ ಮನುಶ್ಯ ಮೂಲವನ್ನು, ಹುನ್ನಾರಗಳನ್ನು ಅರಿತು ಪರಿಹಾರವನ್ನು ಕಂಡುಕೊಳ್ಳಲು ಮುಂದಾಗುವುದಿಲ್ಲ.
ಹಾಗಾಗಿಯೇ ಮನುಶ್ಯರಿಗೆ ಅಂಟಿರುವ ಎಲ್ಲ ರೋಗಗಳು, ದುಶ್ಟತನಗಳು ಅದರಿಂದ ನಿತ್ಯವೂ ನಡೆಯುವ ಎಲ್ಲ ಬಗೆಯ ಕೇಡುಗಳಿಗೆ ಪರಿಹಾರವೇ ಇಲ್ಲದಂತಾಗಿದೆ. ಲೋಕ ಭೀಕರ ಕದನಗಳ, ಪೈಪೋಟಿಯ, ಹಿಂಸಾಭೂಮಿಯಾಗಿ ಪರಿವರ್ತನೆಯಾಗಿದೆ. ನಾಗರಿಕತೆಯ ಬಹುದೊಡ್ಡ ಸಮಸ್ಯೆಯಾಗಿ ಕಾಣಿಸುತ್ತಿದೆ. ಇದೇ ನಾಗರಿಕತೆಯ ‘ಕಾಲಿಗೆ ಕಟ್ಟಿದ ಗುಂಡು ಕೊರಳಿಗೆ ಕಟ್ಟಿರುವ ಬೆಂಡು’. ಅದು ವೇಗವಾಗಿ ಚಲಿಸಲು ಬಿಡುವುದಿಲ್ಲ. ಬದುಕಲೂ ಬಿಡುವುದಿಲ್ಲ ಸಾಯಲೂ ಬಿಡುವುದಿಲ್ಲ.
ಹಾಗಾದರೆ ಇದಕ್ಕೆ ಪರಿಹಾರವೇನು? ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ. ಇದಕ್ಕೆ ಬಸವಣ್ಣನ ಇತರೆ ವಚನಗಳಲ್ಲಿಯೇ ಉತ್ತರವಿದೆ. ನಡೆನುಡಿಗಳು ಒಂದಾಗಿರಬೇಕಾದ ಆಚಾರ ವಿಚಾರಗಳು ಕೂಡಬೇಕಾದ ಸಲಹೆಗಳಿವೆ. ಹಾಗೆಯೇ ಇತರೆ ಶರಣರಲ್ಲಿ ಉತ್ತರವಿದೆ. ಬುದ್ಧನಲ್ಲಿ ಉತ್ತರವಿದೆ. ಗಾಂಧಿ ಅಂಬೇಡ್ಕರ್ ಅವರಲ್ಲಿ ಉತ್ತರವಿದೆ. ಮಾನವರು ತಮ್ಮ ಅಂತರಂಗವನ್ನು ತಾವೇ ಶೋಧಿಸಿಕೊಂಡು ಅದರೊಳಗೆ ಅರಿವಿನ ಒಡೆಯನನ್ನು ಕಟ್ಟಿಕೊಳ್ಳುವ ಕೆಲಸ ಮಾಡಬೇಕಿದೆ. ಜಡಶಿಲೆಯ ಒಡೆಯನನ್ನಲ್ಲ.
ಅಂತರಂಗವೇ ಕಾಯಕದ ಅರಿವಿನ ಮನೆಯಾಗಿ ಅದೇ ಸ್ವರ್ಗವಾಗಬೇಕಿದೆ. ಅಂತಹ ಕಡೆ ಹುಸಿತನ ರಜಭಾವಗಳು ವಿಶಯಗಳ ಕ್ರೌರ್ಯ ಯಾವುದೂ ಇರಬಾರದು. ಅಂದರೆ ಎಲ್ಲ ದುರಂತಗಳಿಗೂ ಮನುಶ್ಯರೇ ನೇರ ಕಾರಣವಾಗಿರುವುದರಿಂದ ಇದಕ್ಕೆ ಮಾನವರೇ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕೆ ಯಾವ ‘ದೈವಿಕ ಪರಿಹಾರ’ಗಳೂ ಇಲ್ಲ. ಇದು ದುಶ್ಟಕೂಟಕ್ಕೆ ಚನ್ನಾಗಿ ತಿಳಿದಿದೆ. ಸದ್ಯ ದುಶ್ಟರಕೂಟಗಳು ಎಲ್ಲ ದೇಶಗಳಲ್ಲಿಯೂ ಅಧಿಕಾರದ ಗದ್ದುಗೆಗೇರಿರುವುದರಿಂದ ಮಾನವರ ಸಮಾಜ ನಿತ್ಯವೂ ಕ್ಶೋಭೆಗಳಲ್ಲಿ ಬೇಯುತ್ತಿದೆ. ಇದುವರೆಗಿನ ಪ್ರಪಂಚದ ಚರಿತ್ರೆಯನ್ನು ಗಮನಿಸಿದರೆ ಅಲ್ಲಿ ಇಂತಹ ದುಶ್ಟಕೂಟಗಳೇ ಆಳ್ವಿಕೆ ನಡೆಸಿರುವುದು.
ಇದನ್ನೂ ಓದಿ |ಖಾಸಗಿ ವಾಹನಗಳ ನಿರ್ವಾಹಕ-ಕ್ಲೀನರ್ ನೋಂದಣಿಗೆ ಅರ್ಜಿ ಆಹ್ವಾನ
ಹಾಗಾಗಿ ಪ್ರಭುತ್ವ ಎಂದರೇನೆ ದುಶ್ಟಕೂಟಗಳ ಐಕ್ಯತೆಯ ಚರಿತ್ರೆಯೂ ಆಗಿದೆ. ಇದನ್ನು ಮಾನವೀಯಗೊಳಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಆದರೆ ಇಂತಹ ಪ್ರಯತ್ನಗಳನ್ನು ಹತ್ತಿಕ್ಕಲಾಗಿದೆ. ದುಶ್ಟಕೂಟಕ್ಕೆ ಲಜ್ಜೆಯಿಲ್ಲ. ಪ್ರಜ್ಞಾವಂತರಿಗೆ ಸದಾ ಲಜ್ಜೆಯಿರುತ್ತದೆ. ಅವರು ಅಂಜುತ್ತಾರೆ. ಆದ್ದರಿಂದ ಇದಕ್ಕೆ ದುಶ್ಟಕೂಟದಿಂದ ಪರಿಹಾರ ಸಾಧ್ಯವಿಲ್ಲ. ಆ ಎಲ್ಲ ದುಶ್ಟತನಗಳ ಬಗೆಗೆ ಎಚ್ಚರವಿರುವ ಜಾಗೃತ ಜನರು ಸಂಘಟಿತರಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಅದು ಮಾತ್ರವೇ ಮನೆಯನ್ನೂ ಮನವನ್ನೂ ಅಂತರಂಗವನ್ನೂ ಬಹಿರಂಗವನ್ನೂ ಶುದ್ಧಗೊಳಿಸಬಲ್ಲದು.
ಬುದ್ಧ ಅಂತಹ ಕೆಲಸಕ್ಕೆ ಕೈಹಾಕಿ ಸಮಾಜವನ್ನು ಕೊಂಚ ದೂರ ನಡೆಸಿಕೊಂಡು ಬಂದಿದ್ದ. ಇಂದು ಆತನ ಅನುಯಾಯಿಗಳು ಕೂಡ ಜನಾಂಗಗಳನ್ನು ನಿರ್ಮೂಲಿಸುವ ಕೆಲಸದಲ್ಲಿ ನಿರತರು. ಇಂತಹ ಪ್ರಮಾದಗಳನ್ನು ಅರಿತು ಚರಿತ್ರೆಯಿಂದ ಪಾಠ ಕಲಿತು ಸಾಧ್ಯವಾದಶ್ಟು ಮಾನವರ ಕುಲದ ಕಶ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅಂತಹ ಪರಿಹಾರದ ದಾರಿಗಳಲ್ಲಿ ದೇವರು ಸಂಕೇತನಾಮವಾಗದೆ ಅರಿವಿನ ಮಾರ್ಗವಾಗಬೇಕಿದೆ.
ಸ್ವತಃ ಅರಿವೇ ಆಗಬೇಕಿದೆ. ‘ಮನೆಯೊಡೆಯನಿದ್ದಾನೋ ಇಲ್ಲವೋ? ಎಂಬ ತಾಕಲಾಟಗಳಲ್ಲಿ ಪ್ರಾಮಾಣಿಕತೆಯ ಹಾದಿಯಲ್ಲಿ ಅಂತರಂಗದ ಶೋಧದಲ್ಲಿ ಸಾಗಿದರೆ ಸಮಸ್ಯೆಯಿಲ್ಲ. ಅದಿಲ್ಲದೆ ಕೇವಲ ಜಡಶಿಲೆಗೊಳಿಸಿ ದೇವರ ಹೆಸರಿನಲ್ಲಿ ಮೌಢ್ಯಾಚರಣೆಗಳ ಹುತ್ತ ಬೆಳೆಸಿ ಸ್ತುತಿಪಠಣಗಳನ್ನು ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಆಗ ಕೊನೆಗೂ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಎಂಬ ಸಂಶಯ ಉಳಿದೇ ಇರುತ್ತದೆ. ಈ ಸಂಶಯವನ್ನು ಶಾಶ್ವತವಾಗಿ ಇಲ್ಲವಾಗಿಸುವ ಬಗೆಹರಿಸುವ ಉತ್ತರಿಸುವ ‘ಬುದ್ಧಶಕ್ತಿಗಳು’ ಇನ್ನೂ ಉದಯಿಸಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ
- ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ
ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.
ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.
ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು
ಬದುಕಿಸುವುದು ಇತ್ಯಾದಿ..
ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.
ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.
ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;
“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”
ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.
ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.
ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;
“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”
ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;
“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”
ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;
“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”
ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;
“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”
ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ
ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.
ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.
ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.
ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.
ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.
ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.
ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.
ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ್ಮಿಕ ಜಗತ್ತಿನಲ್ಲಿ ಸರ್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು