ಅಂತರಂಗ
ಧರ್ಮ ಮರ್ಮ-05 : ಸಂಪ್ರದಾಯ ಮತ್ತು ಪರಂಪರೆ
- ಯೋಗೇಶ್ ಮಾಸ್ಟರ್
ಗ್ರೀಸ್ ಮತ್ತು ಭಾರತದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪೌರಾಣಿಕ ವಿಚಾರಗಳಿಗೆ ಬಹಳ ಸಾಮ್ಯತೆ ಇದೆ. ಹೋಮರನ ಇಲಿಯಡ್ ಮತ್ತು ಒಡೆಸ್ಸಿ, ರಾಮಾಯಣ ಮತ್ತು ಮಹಾಭಾರತಗಳ ಮಹಾಕಾವ್ಯಗಳಲ್ಲೂ ಕೂಡ ಇಂತಹ ಸಾದೃಶ್ಯವನ್ನು ಗುರುತಿಸಬಹುದು.
ಗ್ರೀಸ್ ಮತ್ತು ಭಾರತ ದೇಶಗಳೆರಡೂ ಪ್ರಾಚೀನದಲ್ಲಿ ಮಾತೃಪ್ರಧಾನ ಸಂಸ್ಕೃತಿಯನ್ನೇ ಹೊಂದಿದ್ದು, ನಂತರ ಈ ಎರಡೂ ದೇಶಗಳೊಳಗೆ ಪಿತೃ ಪ್ರಧಾನ ಸಂಸ್ಕೃತಿಯನ್ನು ಹೊತ್ತು ತಂದವರು ಆರ್ಯರು. ಭೌಗೋಳಿಕ ಹಕ್ಕುದಾರಿಕೆಯೊಳಗೆ ಪ್ರವೇಶ ಮಾಡಿದರು. ಸಾಂಸ್ಕೃತಿಕವಾಗಿ ಮಿಲನಗೊಂಡರು. ಒಟ್ಟಾರೆ ಸಾಂಸ್ಕೃತಿಕ ಕ್ಷೇತ್ರವನ್ನು ವೈಭವದಿಂದ ವಿಜೃಂಭಿಸಿದರು.
ಆದರೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮೂಲನಿವಾಸಿಗಳನ್ನು ವಂಚಿಸುತ್ತಾ, ಒತ್ತರಿಸಿರುತ್ತಾ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಸಾಕಷ್ಟು ಹುನ್ನಾರಗಳನ್ನು ನಡೆಸಿದರು. ಪ್ರಭಾವ ಯಾವುದೇ ಆದರೂ ಸಾಂಸ್ಕೃತಿಕವಾಗಿ, ಕಲೆ ಮತ್ತು ಕರಕುಶಲತೆಗಳಲ್ಲಿ ಮಾನ್ಯತೆ ದೊರಕಿಬಿಡುತ್ತದೆ. ಏಕೆಂದರೆ ಸಂಗೀತ, ನೃತ್ಯಾದಿ ಲಲಿತಕಲೆ, ಕರಕುಶಲತೆ ಮತ್ತು ಚಿತ್ರ ಹಾಗೂ ವರ್ಣಕಲೆಗಳಲ್ಲಿ ಚುಂಬಕ ಶಕ್ತಿಯಿರುತ್ತದೆ. ಅದು ಸಹಜವಾಗಿ ಎಲ್ಲರನ್ನೂ ಸೆಳೆಯುತ್ತದೆ.
ಅಷ್ಟೇ ಅಲ್ಲದೇ ಅದನ್ನು ಅನುಕರಿಸುವ ಮತ್ತು ಅನುಸರಿಸುವ ಮೂಲಕ ತಮ್ಮ ಸಾಂಸ್ಕೃತಿಕ ಸಂಪದವನ್ನು ಹೆಚ್ಚಿಸಿಕೊಳ್ಳಲು ಅಥವಾ ವೈಭವೀಕರಿಸಿಕೊಳ್ಳಲು ಹಾತೊರೆಯುತ್ತಾರೆ. ಇದು ಗ್ರೀಸ್ ಮತ್ತು ಭಾರತ ಎರಡೂ ದೇಶಗಳಲ್ಲಾಯಿತು.
ಲಲಿತಕಲೆಗಳ ಪ್ರಭಾವ
ನಮ್ಮ ದೇಶದಲ್ಲೂ ಸಂಗೀತ, ನೃತ್ಯ, ಚಿತ್ರಕಲೆಗಳು, ಮೆಲೋಡ್ರಾಮ ಸಾಹಿತ್ಯಗಳು ಹಾಗೂ ರಂಗಭೂಮಿಯೂ ನೇರವಾಗಿ ಆರ್ಯರ ಅಥವಾ ಬ್ರಾಹ್ಮಣ್ಯದ ಮನಸ್ಥಿತಿಗಳನ್ನು ಗಟ್ಟಿಗೊಳಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ತನ್ನ ಕಾಣಿಕೆಗಳನ್ನು ನೀಡಿತು.
ಭಕ್ತಿಗೀತೆಗಳು, ಭಜನೆಗಳು, ದೇವ ದೇವಿಯರ ಚಿತ್ರ ಮತ್ತು ಶಿಲ್ಪಗಳು, ಕರಕೌಶಲ್ಯದ ಕಲಾಕೃತಿಗಳು ಕೂಡ ಜನರ ಮನಸ್ಸಿನೊಳಗೆ ಪ್ರವೇಶಿಸಿದವು. ಅದೂ ಭಾವನಾತ್ಮಕವಾಗಿ ಪ್ರವೇಶಿಸಿಬಿಟ್ಟವು. ನಮಗೆ ನೆನಪಿರಬೇಕು, ಲಲಿತಕಲೆಗಳು ತಲೆಗೆ ಸಂಬಂಧಪಟ್ಟದ್ದಲ್ಲ. ಅದರ ಗುರಿ ಹೃದಯ. ಅದು ಸಮಾಜದೊಳಗೆ ಪ್ರವೇಶಿಸುವುದೇ ಸಾಂಸ್ಕೃತಿಕ ಪ್ರಭಾವಗಳ ಮೂಲಕ. ಯಾವ ಸಂಸ್ಕೃತಿಯು ನಮ್ಮ ನಿತ್ಯ ಬದುಕಿಗೆ, ಜೀವನಾಧಾರಕ್ಕೆ ಸೊಬಗನ್ನು ಮತ್ತು ಹಿತವನ್ನು ಕೊಡುವುದೋ ಅದನ್ನು ಆಪ್ತಗೊಳಿಸಿಕೊಳ್ಳುತ್ತಾ ಪೀಳಿಗೆ ಪೀಳಿಗೆಗಳೇ ಮುಂದುವರಿಯುತ್ತವೆ.
ಯಾವುದು ಸನಾತನ? ಯಾವುದು ಪುರಾತನ?
ಭಾರತೀಯ ಸಂಸ್ಕೃತಿಯ ಪ್ರತೀಕವೆಂದೇ ಬಿಂಬಿಸಲಾಗುತ್ತಿರುವ ಸೀರೆ ಮೂಲತಃ ಭಾರತದ್ದೇ ಅಲ್ಲ. ಅದು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಚಂದ್ರಗುಪ್ತನ ಗ್ರೀಸಿನ ಹೆಂಡತಿಯೊಡನೆ ಭಾರತವನ್ನು ಪ್ರವೇಶಿಸಿತು. ನಮ್ಮ ಸನಾತನ ಸಂಸ್ಕೃತಿ ಎಂದು ಗಂಟಲು ಹರಿದುಕೊಳ್ಳುವ ಸಂಸ್ಕೃತಿ ರಕ್ಷಕರು ಇದನ್ನು ತಿಳಿದುಕೊಳ್ಳುವುದಿರಲಿ, ಜುಬ್ಬ ಮತ್ತು ಪೈಜಾಮಗಳೂ ಭಾರತದ್ದಲ್ಲ ಪರ್ಶಿಯಾವೇ ಮೊದಲಾದ ಈಗಿನ ಇಸ್ಲಾಂ ನಾಡುಗಳ ಮೂಲದ್ದು ಎಂದೂ ಗೊತ್ತಿಲ್ಲ.
ಮಾರು ಮಾರು ಉದ್ದದ ಬಟ್ಟೆಗಳನ್ನು ತೊಟ್ಟುಕೊಳ್ಳುವುದು ಭಾರತದ ಪ್ರಾಚೀನ ಸಂಸ್ಕೃತಿಯದ್ದಾಗಿರದೇ ಬರಿಯ ಮುಂಡ ಮತ್ತು ತುಂಡು ವಸ್ತ್ರಗಳನ್ನು ಧರಿಸುತ್ತಿದ್ದರು. ಪ್ರೇಮದ ಸಂಕೇತವೆಂದು ಗುರುತಿಸುವ ಗುಲಾಬಿಯನ್ನು ಭಾರತಕ್ಕೆ ಮೊದಲ ಬಾರಿ ಪರ್ಶಿಯಾದಿಂದ ತಂದವನು ಬಾಬರ್. ಅವನೇ ದೇಶದಲ್ಲಿ ಮೊಟ್ಟಮೊದಲ ಗುಲಾಬಿ ತೋಟವನ್ನು ಮಾಡಿಸಿದ್ದು. ಪೋರ್ಜುಗೀಸ್ ಮೂಲದ ಇಡ್ಲಿ ನಮ್ಮ ದೇಶದ್ದಲ್ಲ. ಪರಂಗಿ ಹಣ್ಣು ಮತ್ತು ಟೊಮ್ಯಾಟೋ ಮೊದಲಾದ ಹಣ್ಣು ತರಕಾರಿಗಳು ನಮ್ಮ ಪ್ರಾಚೀನ ಭಾರತದಲ್ಲಿರಲಿಲ್ಲ.
ಭಾರತದ ಮೂಲೆ ಮೂಲೆಗಳಲ್ಲಿ ಬೇಲಿಗಿಡಗಳಾಗಿ ಬೆಳೆದು ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳ ಎಷ್ಟೆಷ್ಟೋ ಸಂಸಾರಗಳಿಗೆ ಆಶ್ರಯತಾಣವಾಗಿದ್ದು, ನಮ್ಮ ನಾಯಿ ನರಿಗಳಿಗೆ ಔಷಧಿಯಾಗಿ ಅಗತ್ಯವಾಗಿ ಬೇಕಾಗಿರುವ ಲಾಂಟಾನದ ಗಿಡಗಳು ನಮ್ಮ ದೇಶದ್ದು ಸುತಾರಾಂ ಅಲ್ಲ. ಪೋರ್ಚುಗೀಸರ ನಾಡಿನಿಂದ ಸಸಿಯಾಗಿ ಬಂದಿದ್ದು. ಆದರೆ ಆ ಗಿಡಗಳಿಲ್ಲದ ಯಾವುದೇ ಹಳ್ಳಿಯನ್ನೂ ನೋಡಲು ಸಾಧ್ಯವಿಲ್ಲ! ಭಾರತದ ಸನಾತನ ಸಂಸ್ಕೃತಿಯೆಂದು ತೊಡುವ ಕಚ್ಚೆ, ಸೀರೆಗಳು ಗ್ರೀಸ್ ದೇಶದ್ದು.
ಅದೇನೇ ಇರಲಿ, ಹೇಳಲು ಹೊರಟಿದ್ದೇನೆಂದರೆ, ಯಾವುದೇ ಸಂಸ್ಕೃತಿಯ ಪ್ರಭಾವ ಮತ್ತು ಕೊಡುಗೆ ಹಿತವೆನಿಸಿದ್ದಲ್ಲಿ ಅವನ್ನು ಆಪ್ತವಾಗಿಸಿಕೊಳ್ಳುವ ಸಮಾಜವು ಅದನ್ನು ತನ್ನದಾಗಿಸಿಕೊಂಡು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು, ಅದನ್ನು ಅನುಕೂಲಕ್ಕೆ ತಕ್ಕಂತೆ ರೂಪಾಂತರಿಸಿಕೊಂಡು ನಡೆಯುತ್ತದೆ. ಮನುಷ್ಯನಿಗೆ ಕೊನೆಗೆ ಬೇಕಾಗಿರುವುದು ಅನುಕೂಲಕರವಾದ ಜೀವನ ಮತ್ತು ಅದರಿಂದ ದೊರಕುವ ನೆಮ್ಮದಿ.
ಹಾಗಾಗಿಯೇ ಸಮಾಜದಲ್ಲಿ ಅನೇಕಾನೇಕ ಹೊರಗಿನ ಪ್ರಭಾವಗಳನ್ನು ಪ್ರತಿರೋಧಿಸದೇ ತನ್ನ ವರ್ತುಲದೊಳಕ್ಕೆ ಬರಲುಬಿಡುವುದು ಮತ್ತು ಅಳವಡಿಸಿಕೊಳ್ಳುವುದು. ಇಲ್ಲಿ ಸರಿ ತಪ್ಪು ಎಂಬುವ ಚರ್ಚೆಯೇ ಬರುವುದಿಲ್ಲ. ಆದರೆ, ಸಾಹಿತ್ಯ, ಲಲಿತಕಲೆಗಳು ಪರೋಕ್ಷವಾಗಿ ಸಮೂಹಗಳಲ್ಲಿ ಪ್ರವೇಶಿಸುತ್ತಾ ವ್ಯಕ್ತಿಗತವಾಗಿ ಮನಸ್ಸುಗಳ ಮೇಲೆ ತಮ್ಮ ಶಾಶ್ವತ ಪ್ರಭಾವಗಳನ್ನು ಬೀರುವುದರ ಬಗ್ಗೆ ಪ್ರಶ್ನೆ ಎತ್ತಬೇಕಿದೆ.
ಏಕೆಂದರೆ ಇಂಥಾ ಲಲಿತಕಲೆಗಳನ್ನು ಬಲ್ಲವರು ತಮ್ಮ ಸಿದ್ಧಾಂತಗಳನ್ನು, ಧೋರಣೆಗಳನ್ನು ಹೇರುವುದಕ್ಕಷ್ಟೇ ಅಲ್ಲ, ಮರುಳು ಮಾಡಲು ಮತ್ತು ಅಧೀನದಲ್ಲಿಟ್ಟುಕೊಳ್ಳಲೂ ಬಳಸಿಬಿಟ್ಟರು. ಅದೇ ಈ ಲಲಿತಕಲಾಕ್ಷೇತ್ರದಲ್ಲಿ ಆದ ಬಹು ದೊಡ್ಡ ಎಡವಟ್ಟು. ಲಲಿತ ಕಲೆಗಳು ಧಾರ್ಮಿಕತೆಯ ಪ್ರಭಾವವನ್ನು ದಟ್ಟವಾಗಿ ಬೀರಿದವು.
ರಾಮ ಭಜನೆ, ಕೃಷ್ಣ ಗೀತೆ
ವ್ಯಕ್ತಿಗತವಾಗಿ ನಾನು ಪ್ರತಿಶತ ನಾಸ್ತಿಕನೇ (ಕಟ್ಟರ್ ಅಲ್ಲ) ಆದರೂ ದೇವರುಗಳಿಗೆ ಸಂಬಂಧಿಸಿದ ಕಲಾಕೃತಿಗಳನ್ನು ಉಡುಗೊರೆಗಳಾಗಿ ಪಡೆದಾಗ ಅವನ್ನು ನಿರಾಕರಿಸಲು ಮನಸ್ಸಾಗುವುದಿಲ್ಲ. ದೇವರನ್ನು ನಂಬದಿದ್ದರೇನಂತೆ ನಾನೊಬ್ಬ ಕಲೋಪಾಸಕ ಎಂಬ ವ್ಯಕ್ತಿಗತ ಒಲವು ಮತ್ತು ನಿಲುವುಗಳು ಗಟ್ಟಿಯಾಗಿರುವುದರಿಂದ ಯಾವ ದೇವರ ಕಲಾಕೃತಿಯನ್ನು ಮತ್ತು ಗೀತೆ ಹಾಗೂ ನೃತ್ಯಗಳನ್ನು ಅಲ್ಲಗಳೆದಿರುವುದು ಅಥವಾ ಖಂಡಿಸಿರುವುದು ನೆನಪೇ ಇಲ್ಲ.
ರಾಮಾಯಣದ ವಿಮರ್ಶೆ ಮಾಡಿದರೂ ಕೂಡ ತುಳಸೀದಾಸರ, ಕಬೀರರ ರಾಮನ ಭಜನೆಗಳನ್ನು ಹಾಡದೇ ಇರಲಾಗುವುದಿಲ್ಲ. ಕೃಷ್ಣನನ್ನು ಓರ್ವ ಬಿಂದಾಸ್ ಕೌಬಾಯ್ ಎಂಬಂತೆ ತಮಾಷೆ ಮಾಡಿದರೂ ಸೂರದಾಸ್, ಮೀರಾಬಾಯಿಯ ಕೃಷ್ಣನ ಭಜನೆಗಳನ್ನು ಹಾಡದೇ ಬಿಡುವುದಿಲ್ಲ. “ಪ್ರೇಮಮುದಿತ ಮನಸೆ ಕಹೋ, ರಾಮ ರಾಮ ರಾಮ್” ಎಂದು ಹಾಡುವಾಗ ಹೆಂಡತಿಯನ್ನು ಕಾಡಿಗಟ್ಟಿದ, ಶಂಭೂಕನನ್ನು ವಧಿಸಿದ, ಸುಗ್ರೀವನಿಗೆ ಶರಸಂಧಾನ ಮಾಡಿದ ರಾಮ ನೆನಪಿಗೇ ಬರುವುದಿಲ್ಲ. ರಾಮ ಎಂದು ವಿರಾಮ ನೀಡುವಂತಹ ಶಬ್ಧ ಅದಾಗಿರುತ್ತದೆ.
ನಾದಮಯವಾಗಿ, ಸ್ವರಸಂಚಾರ ಮಾಡುತ್ತಾ ಸುಲಲಿತವಾಗಿ ನಮ್ಮ ಹೃದಯವನ್ನು ಪ್ರವೇಶಿಸುವ ಸಂಗೀತ ಅದಾಗಿರುತ್ತದೆ. “ಮೇರೆ ತೋ ಗಿರಿಧರ ಗೋಪಾಲ, ದೂಸರೋನ ಕೋಯಿ” ಎಂದು ಮೀರಾಳೊಂದಿಗೆ ಜೊತೆಯಾಗಿ ನಾವೂ ನನಗೆ ಗಿರಿಧರ ಗೋಪಾಲ ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ದನಿಗೂಡಿಸಿಬಿಡುತ್ತೇವೆ. ಆದರೆ ಇದರರ್ಥ ನಾವು ರಾಮನಾರಾಧಕರೋ ಅಥವಾ ಕೃಷ್ಣನಾರಾಧಕರೋ ಆದೆವೆಂದಲ್ಲ.
ಕಬೀರ ಮತ್ತು ತುಳಸೀದಾಸರೇ ಮೊದಲಾದ ಸಂತರು ರಾಮನನ್ನು ತಮ್ಮ ಶ್ರದ್ಧೆಯ ಕುರುಹನ್ನಾಗಿಸಿಕೊಂಡಿದ್ದು, ಸೂರದಾಸ್, ಮೀರಾಬಾಯಿ ಕೃಷ್ಣನಿಗೆ ಶರಣು ಹೋಗಿದ್ದು, ನಾಮದೇವ್, ಚೋಕಾಮೇಲಾ, ತುಕಾರಾಂ, ಜ್ಞಾನದೇವ, ಸಕ್ಕೂಬಾಯಿ, ಸಾವರಿಯೇ ಮೊದಲಾದ ಸಂತರು ಅಚಲವಾದ ಭಕ್ತಿಯನ್ನು ವಿಠಲನಲ್ಲಿ ನೆಲೆಗೊಳಿಸಿದ್ದು, ಸೂಫಿಗಳು ಅಲ್ಲಾಹನಿಗೆ, ಕ್ರೈಸ್ತ ಸಂತರು ಟ್ರಿನಿಟಿ ಪರಿಕಲ್ಪನೆಗೆ ಶರಣಾಗುವುದು ಯಾವುದೂ ತಪ್ಪೆಂದೋ, ಸರಿಯೆಂದೋ ಚರ್ಚಿಸುವ ಅಗತ್ಯವೇ ಇಲ್ಲ. ಏಕೆಂದರೆ ಶರಣರ ಪರಿಕಲ್ಪನೆಯಂತೆ ದೇವರನ್ನು ಕಾಣುವುದಲ್ಲ, ಕಂಡುಕೊಳ್ಳುವುದು.
ಇಷ್ಟದೈವವೆಂಬುದು ಬಸವಣ್ಣನಿಗೆ ಕೂಡಲ ಸಂಗಮನಾಗಿದ್ದರೆ, ಅಕ್ಕನಿಗೆ ಚನ್ನಮಲ್ಲಿಕಾರ್ಜುನ, ಸೂಳೆ ಸಂಕವ್ವಳಿಗೆ ನಿರ್ಲಜ್ಜೇಶ್ವರನಾಗಿರುತಿತ್ತು. ಆದರೆ ಅವರೆಲ್ಲರ ಒಲವು, ನಿಲುವು ಮತ್ತು ಧೋರಣೆಗಳು ಪ್ರಾಮಾಣಿಕವಾಗಿದ್ದವು, ಮುಕ್ತವಾಗಿದ್ದವು, ಮುಗ್ಧವಾಗಿದ್ದವು ಎಂಬುದಷ್ಟೇ ಅಲ್ಲಿ ತೋರುವುದು. ಅವಕ್ಕಷ್ಟೇ ಅಲ್ಲಿ ಮಾನ್ಯತೆ. ಹಾಗಾಗಿಯೇ ಗಿರಿಧರ ಗೋಪಾಲ, ರಾಮ, ಕೂಡಲಸಂಗಮದೇವ, ವಿಠಲರು ಮುಖ್ಯವಾಗದೇ ಮೀರಾ, ಕಬೀರ, ಬಸವ, ತುಕಾರಾಂ ಮುಖ್ಯವಾಗಿರುತ್ತಾರೆ.
ಅವರು ಪ್ರಾಮಾಣಿಕವಾಗಿ ಕಂಡುಕೊಂಡ ಶ್ರದ್ಧೆ ಮತ್ತು ಬದ್ಧತೆಗಳ ಪರಿಕಲ್ಪನೆಯೋ ಅಥವಾ ಕುರುಹುಗಳೋ ಅಥವಾ ಪ್ರೇಮವೋ ಆದಂತಹ ಅವರ ದೈವಗಳೂ ಅವರ ಮೂಲಕ ನಮ್ಮ ಗೌರವಕ್ಕೆ, ಆದರಕ್ಕೆ ಪ್ರಾಪ್ತರಾಗುತ್ತಾರೆ. ಧಾರ್ಮಿಕತೆಯು ಮುಗ್ಗರಿಸಿದ್ದೇ ಸಂಕೇತಗಳನ್ನು ಆರಾಧಿಸುವಲ್ಲಿ ಮತ್ತು ಆ ಸಂಕೇತಗಳನ್ನು ದಾಟದೇ ಹೋದಲ್ಲಿ.
ಪೂಜಾರಿಗಳು ಸಂತರಲ್ಲ
ಹತ್ತಾರು ವರ್ಷಗಳಿಂದ ಸಂಪ್ರದಾಯಬದ್ಧವಾಗಿ ಪೂಜಿಸುತ್ತಾ, ನೇಮ ನಿಷ್ಟೆಗಳಿಂದ ನೈವೇದ್ಯ ಇಡುತ್ತಿದ್ದ ಪೂಜಾರಿಯಿಂದ ಒಂದಗುಳನ್ನೂ ಸೇವಿಸದ ಶಿವ ಲಿಂಗವೊಡೆದು ಬಂದು ಕೋಳೂರಿನ ಕೊಡಗೂಸು ತರುವ ಅನ್ನಕ್ಕೆ ಕೈ ಚಾಚುತ್ತಾನೆ. ಅವಳಿಂದ ಪ್ರಸಾದ ಸೇವಿಸುವ ಕಥೆ ರೂಪಕವೇ ಆದರೂ ಒಂದು ಬಹುದೊಡ್ಡ ಧ್ವನಿಯನ್ನು ಎತ್ತುತ್ತದೆ, ಸಂಪ್ರದಾಯದ ಚೌಕಟ್ಟುಗಳನ್ನು ಒಡೆದು ಬನ್ನಿ ಎಂದು.
ವಿಶೇಷವೆಂದರೆ ಆ ಸಾಂಪ್ರದಾಯಿಕವಾದಂತಹ ಸರಪಳಿಗಳನ್ನು ಕಡಿದುಕೊಳ್ಳುವುದೂ ವೈಚಾರಿಕತೆಯಿಂದ ಅಲ್ಲ, ಮುಗ್ಧತೆಯಿಂದ. ಭಾವುಕತೆಯಿಂದ. ಆಮೇಲೆ ಯಾವಾಗ ಸಂಪ್ರದಾಯದ ನೇಮಮುರಿದ ಸಂಗತಿ ಜನಪ್ರಿಯತೆಯನ್ನೂ ಪಡೆಯುವುದೋ ನಂತರ ಅದೂ ಕೂಡ ಸಂಪ್ರದಾಯದ ಮುಂದುವರಿಕೆಯ ಮತ್ತೊಂದು ಭಾಗವಾಗುತ್ತದೆ. ಅದೊಂದು ದುರಂತ.
ಸಂಪ್ರದಾಯವು ಧರ್ಮವನ್ನು ಕೊಲ್ಲುತ್ತದೆ. ಪರಂಪರೆಯು ಧರ್ಮವನ್ನು ಬೆಳೆಸುತ್ತದೆ. ಬಹಳಷ್ಟು ಜನರಿಗೆ ಸಂಪ್ರದಾಯ ಮತ್ತು ಪರಂಪರೆಯ ವ್ಯತ್ಯಾಸಗಳು ತಿಳಿದಿರುವುದಿಲ್ಲ. ಪರಂಪರೆ ಎಂದು ಮಾತಾಡುತ್ತಾರೆ. ಆದರೆ ಅದರ ಕುರಿತಾದ ಸ್ಪಷ್ಟತೆಗಳು ಇರುವುದಿಲ್ಲ. ಸಂಪ್ರದಾಯಗಳು ಚೌಕಟ್ಟುಗಳನ್ನು ನಿರ್ಮಿಸುತ್ತವೆ. ಅದನ್ನು ಮೀರಿ ಹೋಗದಿರಲು ನಿರ್ಬಂಧವಿಧಿಸುತ್ತದೆ. ಆದರೆ ಪರಂಪರೆಗಳು ಇಂತಹ ಚೌಕಟ್ಟುಗಳಲ್ಲ. ಅವು ಮಾರ್ಗ.
ಮಾರ್ಗದಲ್ಲಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಘನವೆತ್ತ ನಡಿಗೆ ಪರಂಪರೆಯದ್ದಾಗಿರುತ್ತದೆ. ತುಂಬಾ ಸರಳವಾದ ಉದಾಹರಣೆ ನೀಡಬೇಕೆಂದರೆ, ಒಂದು ದೇವರನ್ನು ಹೀಗೇ ಪೂಜಿಸಬೇಕು, ಹೀಗೇ ನಡೆದುಕೊಳ್ಳಬೇಕು, ಇದನ್ನು ಹೊರತಾಗಿ ಬೇರೊಂದು ಹೊಸತನ್ನು ಮಾಡಬಾರದು ಎಂದು ಚೌಕಟ್ಟಿನಲ್ಲಿರುವುದು ಸಂಪ್ರದಾಯವಾದರೆ. ದೇವರನ್ನು ಕಂಡುಕೊಳ್ಳಲು, ಅವನನ್ನು ಆರಾಧಿಸಲು ಸಂತರು, ಸಾಧುಗಳು, ಶರಣರು, ಭಕ್ತರು, ಸೂಫಿಗಳು ತಮ್ಮದೇ ಆದಂತಹ ಮಾರ್ಗವನ್ನು ಹುಡುಕಿಕೊಂಡರು.
ಅವರು ದೈವ ಸಾಕ್ಷಾತ್ಕಾರದ, ಜೀವ ಪ್ರೇಮದ ವಿಷಯಗಳನ್ನು ತಮ್ಮ ನಡೆ ನುಡಿಗಳಲ್ಲಿ, ಆಚಾರ ವಿಚಾರಗಳಲ್ಲಿ ತಮ್ಮದೇ ನೆಲೆಗಟ್ಟಿನ ಪ್ರಭಾವದಲ್ಲಿಯೇ ಪ್ರಾಮಾಣಿಕವಾಗಿ ಅನುಷ್ಟಾನಕ್ಕೆ ತರುತ್ತಿದ್ದರು. ಯಾವುದೇ ಹಿನ್ನೆಲೆಯವರಾದರೂ ಅವರೆಲ್ಲರೂ ದೈವೀ ಸಾಕ್ಷಾತ್ಕಾರದ, ಜೀವಪ್ರೇಮದ ವಿಷಯವನ್ನು ಎತ್ತಿ ಹಿಡಿವ ಪರಂಪರೆಗೆ ಸೇರಿದವರಾಗುತ್ತಾರೆ.
ಯಾವುದೋ ಒಬ್ಬ ಸಂಪ್ರದಾಯಸ್ಥ ಪೂಜಾರಿ, ದೇವಸ್ಥಾನ ಪುರೋಹಿತ ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರದ ಪರಂಪರೆಯಲ್ಲಿ ತನ್ನ ಗುರುತನ್ನು ಮೂಡಿಸಲಾರ. ಆದರೆ ಸಂಪ್ರದಾಯವನ್ನು ಮುರಿದ, ತಮ್ಮ ಶ್ರದ್ಧಾ ಭಕ್ತಿಗಳಿಗೆ, ಒಲವು ನಿಲುವುಗಳಿಗೆ ಬದ್ಧವಾಗಿದ್ದ ಕ್ರಾಂತಿಕಾರರೆಲ್ಲಾ ಪರಂಪರೆಯಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸಿರುತ್ತಾರೆ.
ಆದರೆ ಅವರು ತಮ್ಮ ಜೀವಿತಾವಧಿಯಲ್ಲಿ ನೆಮ್ಮದಿಯಾಗೇನೂ ಇರುವುದಿಲ್ಲ. ಅವರು ಪಡುವ ಪಡಿಪಾಟಲುಗಳಿಗೆ ಅವರು ಸೊರಗಿರುತ್ತಾರೆ. ಹೆಚ್ಚಿನ ಪಾಲು ಅದರಲ್ಲೇ ಭೌತಿಕವಾಗಿ ನಾಶವೂ ಆಗುತ್ತಾರೆ. ಆದರೆ ಅವರ ಚೈತನ್ಯ ಮತ್ತು ಪರಂಪರೆಯಲ್ಲಿ ಉಳಿಸಿದ ಹೆಜ್ಜೆಗುರುತು ಮಾತ್ರ ಸರ್ವಕಾಲಿಕ ಗೌರವಕ್ಕೆ ಪಾತ್ರವಾಗಿಬಿಡುತ್ತದೆ. ಆದರೆ, ಇಲ್ಲೊಂದು ದೊಡ್ಡ ವಿಷಯವಿದೆ. ಇವರನ್ನೆಲ್ಲಾ ತಮ್ಮ ಪ್ರಭಾವದೊಳಕ್ಕೆ ಜನರನ್ನು ಮೂಢರನ್ನಾಗಿಸಿ ಸೆಳೆದುಕೊಳ್ಳುವುದಕ್ಕೆ ಬಳಸಿಕೊಳ್ಳುವುದೂ ಕೂಡ ಮೂಲಭೂತವಾದಿಗಳೇ.
ಸಂಸ್ಕೃತಿ ರಕ್ಷಕರೆಂದು ಬಿಂಬಿಸಿಕೊಳ್ಳುವ ರೋಗಗ್ರಸ್ಥ, ಸಂಕುಚಿತ ಮನಸ್ಥಿತಿಯವರೇ. ಅವರು ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ ಬಳಸಿಕೊಳ್ಳುವ ವಿಷಯಗಳನ್ನು ಪ್ರಗತಿಪರರೆಸಿಕೊಳ್ಳುವವರು, ಜಾತ್ಯಾತೀತ ಮನೋಭಾವದವರು ಹಿಂದೊಮ್ಮೆ ತಮ್ಮಂತೆಯೇ ಕ್ರಾಂತಿಯನ್ನು ಬೆಂಬಲಿಸುತ್ತಿದ್ದ ಚೈತ್ಯನ್ಯಗಳನ್ನು ನಿರಾಕರಿಸಿಬಿಡುತ್ತಾರೆ. ಇದರಿಂದ ಅವರೇ ಒಂದು ಕ್ರಾಂತಿಮುಖವಾದ ಪರಂಪರೆಯನ್ನು ಧಿಕ್ಕರಿಸಿ, ‘ನಿರಾಕರಿಸುವಂತಹ’ ಒಂದು ಸಂಪ್ರದಾಯಕ್ಕೆ ಬದ್ಧವಾಗಿಬಿಡುತ್ತಾರೆ.
ಬಹಳಷ್ಟು ಜಾತ್ಯಾತೀತ ಮತ್ತು ಮೌಢ್ಯವಿರೋಧಿಗಳ ಮನಸ್ಥಿತಿ ಇದು. ಸಂಪ್ರದಾಯಸ್ಥರ ಆಕ್ರಮಣ, ಅತಿಕ್ರಮಣ ಮತ್ತು ಬಂಧನಗಳನ್ನು ನಿರಾಕರಿಸುವ ಭರದಲ್ಲಿ ಪ್ರಾಮಾಣಿಕವಾಗಿ ಕ್ರಾಂತಿಯ ಪರಂಪರೆಯಲ್ಲಿ ಮೂಡಿರುವ ಚೈತನ್ಯದ ಹೆಜ್ಜೆಗಳನ್ನೂ ತಳ್ಳಿಹಾಕಿಬಿಡುತ್ತಾರೆ. ಇದರಿಂದ ಪ್ರಗತಿಪರ ಶಕ್ತಿಗಳು ಮತ್ತು ಜಾತ್ಯಾತೀತ ಧೋರಣೆಗಳು ಬೃಹತ್ ಸಮಾಜದ ಯಾವುದೋ ಮೂಲೆಯೊಂದರಲ್ಲಿ ಗೊಣಗುವ ದುರ್ಬಲ ದನಿಗಳಾಗುವವೇ ಹೊರತು ಭಾವನಾತ್ಮಕವಾಗಿ ಜನರನ್ನು ಒಳಗೊಳ್ಳುವುದಿಲ್ಲ. ಸಾಮಾಜಿಕ ಕ್ರಾಂತಿಯ ಹೋರಾಟಕ್ಕೆ ಇದೊಂದು ಪೆಟ್ಟು.
ಏನೇ ಆಗಲಿ, ಪ್ರಾಚೀನ ಗ್ರೀಸ್ ಮತ್ತು ಭಾರತದಲ್ಲಿ ಮಿಥಿಕಗಳು ಮೂಡಿದ ವಿಷಯಗಳಾಗಲಿ, ಮಹಾಕಾವ್ಯಗಳು ಅರಳಿದ ವಿಷಯಗಳಾಗಲಿ, ಮಾತೃಪ್ರಾಧಾನ್ಯತೆ ನಶಿಸುತ್ತಾ ಪಿತೃ ಪ್ರಾಧಾನ್ಯತೆಯು ನುಸುಳುತ್ತಾ ಬಂದಂತಹ ವಿಷಯಗಳಾಗಲಿ ಸಾಧಾರಣವಲ್ಲ. ಅಲಕ್ಷಿಸುವಂತಿಲ್ಲ. ಅವು ನಮ್ಮ ಇಂದಿನ ಸಾಂಸ್ಕೃತಿಕ ರಾಜಕಾರಣವನ್ನು ತಿಳಿದುಕೊಳ್ಳಲು ಅತ್ಯಂತ ಅಗತ್ಯವಾಗಿವೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243