ಬಹಿರಂಗ

ಸಂವಿಧಾನ ಸಭೆಯಲ್ಲಿ ಅಂಬೇಡ್ಕರರು ಮಾಡಿದ ಸಮಾರೋಪ ಭಾಷಣ

Published

on

ಭಾರತದ ಸ್ವಾತಂತ್ರ್ಯಕ್ಕೆ ಏನಾಗಲಿದೆ? 26ನೇ ಜನವರಿ 1950ರಂದು, ಭಾರತವು ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗಲಿದೆ. ಆದರೆ ಅದರ ಸ್ವಾತಂತ್ರ್ಯಕ್ಕೆ ಏನಾಗಲಿದೆ? ಅದು ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲಿದೆಯೇ? ಅಥವಾ ಅದು ತನ್ನ ಸ್ವಾತಂತ್ರ್ಯವನ್ನು ಮತ್ತೊಮ್ಮೆ ಕಳೆದುಕೊಳ್ಳಲಿದೆಯೇ? ಇದು ನನ್ನ ಮನಸ್ಸಿನಲ್ಲಿ ಮೂಡಿದ ಮೊದಲ ವಿಷಯವಾಗಿರುತ್ತದೆ.

ಭಾರತವು ಹಿಂದೆಂದೂ ಸ್ವತಂತ್ರವಾಗಿರಲಿಲ್ಲವೆಂದು ಇದರ ಅರ್ಥವಲ್ಲ. ಅದು ತನ್ನ ಸ್ವಾತಂತ್ರ್ಯವನ್ನು ಮಧ್ಯೆ ಕಳೆದುಕೊಂಡಿತ್ತು. ಅದು ಎರಡನೆಯ ಬಾರಿಗೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತದೆಯೇ?
ಈ ಆಲೋಚನೆಯೇ ಭವಿಷ್ಯದ ಬಗ್ಗೆ ನನ್ನನ್ನು ಕಳವಳಗೊಳ್ಳು ವಂತೆ ಮಾಡಿದೆ. ಭಾರತವು ತನ್ನ ಸ್ವಾತಂತ್ರ್ಯವನ್ನು ಹಿಂದೊಮ್ಮೆ ಕಳೆದುಕೊಂಡಿತ್ತೆಂಬ ಸಂಗತಿಯು ನನ್ನ ಮನಸ್ಸಿನ ಕ್ಷೋಭೆಗೆ ಕಾರಣ. ತನ್ನವರದೇ ಆದ ವಿಶ್ವಾಸಘಾತುಕದಿಂದ ಹಾಗೂ ದೇಶದ್ರೋಹಿಗಳಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡಿತು ಎಂಬುವುದು ನನ್ನ ಮನಸ್ಸಿನ ಕ್ಷೋಭೆಗೆ ಮುಖ್ಯ ಕಾರಣವಾಗಿದೆ.

ಸಿಂಧ್ ಪ್ರಾಂತ್ಯದ ಮೇಲೆ ಮೊಹಮ್ಮದ್ ಬಿನ್ ಖಾಸಿಂ ದಂಡೆತ್ತಿ ಬಂದಾಗ ಅವನ ವಿರುದ್ಧ ಯುದ್ಧ ಘೋಷಣೆ ಮಾಡಬೇಕಿದ್ದ ಧಾರ್ ಅರಸನ ಸೈನಿಕ ಕಮಾಂಡರುಗಳು ಮೊಹಮದ್ ಬಿನ್ ಖಾಸಿಂ ಕಡೆಯ ಏಜೆಂಟರುಗಳು ಕೊಟ್ಟ ಲಂಚವನ್ನು ಸ್ವೀಕರಿಸಿ ರಾಜನ ಪರವಾಗಿ ಯುದ್ಧ ಮಾಡದೆ ಹೋದ ಉದಾಹರಣೆ ನನ್ನ ಮುಂದೆ ಇದೆ. ಭಾರತದ ಮೇಲೆ ಯುದ್ಧ ಮಾಡಲು ಮೊಹಮ್ಮದ್ ಘೋರಿ ಯನ್ನು ಭಾರತೀಯನೇ ಆಗಿದ್ದ ಜೈಚಂದರ್ ಎಂಬುವವನು ಸ್ವಾಗತಿ ಸಿದ್ದು, ಮತ್ತು ಪೃಥ್ವಿರಾಜನ ವಿರುದ್ಧ ಯುದ್ಧ ಮಾಡುವಂತೆ ಪ್ರೇರೇಪಿ ಸಿದ್ದು ಮತ್ತು ಆ ಯುದ್ಧದಲ್ಲಿ ತಾನು ಹಾಗೂ ಸೋಲಂಕಿಯ ರಾಜರು ಗಳು ಸಹಾಯ ಮಾಡುವುದಾಗಿ ಹೇಳಿದಂತಹ ಉದಾಹರಣೆಗಳು ನನ್ನ ಮುಂದೆ ಇವೆ.

ಶಿವಾಜಿ ಮಹಾರಾಜನು ಹಿಂದೂಗಳ ವಿಮೋಚನೆ ಗಾಗಿ ಯುದ್ಧ ಮಾಡುತ್ತಿದ್ದಾಗ, ಇತರೆ ಮರಾಠಾ ರಾಜರುಗಳು ಮತ್ತು ರಜಪೂತ್ ರಾಜರುಗಳು ಮೊಘಲ್ ಚಕ್ರವರ್ತಿಗಳ ಪರವಾಗಿ ಯುದ್ಧ ಮಾಡುತ್ತಿದ್ದರು. ಬ್ರಿಟಿಷರು ಸಿಖ್ ರಾಜರುಗಳ ಆಡಳಿತವನ್ನು ಧ್ವಂಸ ಮಾಡಬೇಕೆಂದು ಪ್ರಯತ್ನಿಸುತ್ತಿದ್ದಾಗ, ಸಿಖ್ ರಾಜರುಗಳ ಸೇನೆಯ ಮುಖ್ಯ ಕಮಾಂಡರ್ ಆದ ಗುಲಾಬ್‍ಸಿಂಗನು ಪ್ರೇಕ್ಷಕನಂತೆ ಮೌನ ವಹಿಸಿ ಕುಳಿತಿದ್ದನು. ಅವನು ಸಿಖ್ ಸಾಮ್ರಾಜ್ಯದ ರಕ್ಷಣೆಗಾಗಿ ಕಿಂಚಿತ್ತೂ ಸಹಾಯ ಮಾಡಲಿಲ್ಲ.

1857ರಲ್ಲಿ ಭಾರತದಾದ್ಯಂತ, ಬ್ರಿಟೀಷರ ವಿರುದ್ಧ, ಸ್ವಾತಂತ್ರ್ಯಕ್ಕಾಗಿ ಯುದ್ಧವನ್ನು ಘೋಸಿದಾಗ, ಸಿಖ್ ಸಮುದಾಯ ಆ ಘಟನೆಯನ್ನು ಕೇವಲ ಪ್ರೇಕ್ಷಕರಂತೆ ನಿಂತು ನೋಡಿದ ಉದಾಹರಣೆ ನನ್ನ ಮುಂದೆ ಇದೆ.

ಇತಿಹಾಸ ಮರುಕಳಿಸುತ್ತದೆಯೇ? ಈ ವಿಷಯವೇ ನನ್ನ ಕಳವಳಕ್ಕೆ ಮುಖ್ಯ ಕಾರಣವಾಗಿದೆ. ನಮ್ಮ ಹಿಂದಿನ ವೈರಿಗಳಾದ ಜಾತಿ-ಪಂಗಡ ಗಳ ಜೊತೆಗೆ ಇನ್ನು ಮುಂದೆ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಪಂಗಡಗಳು ಸೇರಿಕೊಳ್ಳಲಿವೆ. ಭಾರತೀಯರು ತಮ್ಮ ಜಾತಿ, ಪಂಗಡಗ ಳನ್ನು ಬದಿಗೊತ್ತಿ ರಾಷ್ಟ್ರ ಮುಖ್ಯ ಎನ್ನುವರೋ, ಅಥವಾ ರಾಷ್ಟ್ರವನ್ನು ಬದಿಗೊತ್ತಿ ಜಾತಿ-ಪಂಗಡಗಳು ಮುಖ್ಯ ಎನ್ನುವರೋ, ನನಗೆ ಗೊತ್ತಿಲ್ಲ. ಆದರೆ ಇಷ್ಟಂತೂ ಸತ್ಯ. ದೇಶದಲ್ಲಿನ ರಾಜಕೀಯ ಪಕ್ಷಗಳು ಜಾತಿ ಪಂಗಡಗಳನ್ನೇ ಪ್ರಧಾನವಾಗಿ ಮಾಡಿಕೊಂಡರೆ ದೇಶದ ಸ್ವಾತಂತ್ರ್ಯಕ್ಕೆ ಗಂಡಾಂತರ ಒದಗುತ್ತದೆ ಮತ್ತು ನಮ್ಮ ಸ್ವಾತಂತ್ರ್ಯವನ್ನು ಎರಡನೆಯ ಬಾರಿಗೆ ಮತ್ತು ಶಾಶ್ವತವಾಗಿ ಕಳೆದುಕೊಳ್ಳುವ ಪ್ರಸಂಗ ಒದಗಬಹುದು.

ಇಂತಹ ಸಂಭಾವ್ಯ ಘಟನೆಯ ವಿರುದ್ಧ ನಾವು ದೃಢಸಂಕಲ್ಪದಿಂದ ಎಚ್ಚರ ವಹಿಸಬೇಕು. ನಮ್ಮ ಕಟ್ಟ ಕಡೆಯ ರಕ್ತದ ತೊಟ್ಟನ್ನು ಹರಿಸಿಯಾ ದರೂ, ದೇಶದ ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ, ಎಂದು ನಾವು ಪ್ರತಿಜ್ಞೆಯನ್ನು ಕೈಗೊಳ್ಳಬೇಕಿದೆ.
26 ನೇ ಜನವರಿ 1950ರಂದು ಭಾರತವು ಸ್ವತಂತ್ರ ಗಣರಾಜ್ಯ ವಾಗಲಿದೆ. ಅಂದರೆ ಅದರ ಅರ್ಥ, ಆ ದಿನದಿಂದ ಭಾರತವು ತನ್ನ ಜನತೆುಂದ, ತನ್ನ ಜನರಿಗಾಗಿ, ತನ್ನ ಜನರಿಗೋಸ್ಕರ ಸರ್ಕಾರವನ್ನು ರೂಪಿಸಿಕೊಳ್ಳಲಿದೆ. ಇದೇ ವಿಷಯ ಮತ್ತೊಮ್ಮೆ ನನ್ನ ಮನಸ್ಸಿಗೆ ಬರುತ್ತಿದೆ. ಸಂವಿಧಾನವು ತನ್ನ ಪ್ರಜಾಸತ್ತಾತ್ಮಕ ಲಕ್ಷಣಗಳನ್ನು ಉಳಿಸಿ ಕೊಳ್ಳುತ್ತದೆಯೇ? ಅದು ಉಳಿಸಿಕೊಳ್ಳುತ್ತದೆಯೇ ಅಥವಾ ಮತ್ತೊಮ್ಮೆ ಕಳೆದುಕೊಳ್ಳುತ್ತದೆಯೇ? ಈ ಎರಡನೆಯ ವಿಚಾರವು ನನ್ನ ಮೊದಲನೆಯ ಪ್ರಶ್ನೆಯಷ್ಟೇ ನನಗೆ ಕಳವಳಕಾರಿಯಾಗಿದೆ.

ಭಾರತಕ್ಕೆ `ಪ್ರಜಾಪ್ರಭುತ್ವ’ ಎಂದರೆ ಏನು ಎಂಬುದು ತಿಳಿದಿರಲಿಲ್ಲ ಎಂದು ಹೇಳಲು ಬರುವುದಿಲ್ಲ. ಭಾರತವು ಒಂದಾನೊಂದು ಕಾಲಕ್ಕೆ ಅನೇಕ ಗಣರಾಜ್ಯಗಳನ್ನು ಹಾಗೂ ಅನೇಕ ರಾಜ-ಮಹಾರಾಜರುಗಳನ್ನು ಹೊಂದಿತ್ತು. ಇಂತಹ ಮಹಾರಾಜರುಗಳಲ್ಲಿ ಕೆಲವರು ಚುನಾಯಿತರಾಗು ತ್ತಿದ್ದರು ಅಥವಾ ಅವರು ಸೀಮಿತ ಅಧಿಕಾರ ಹೊಂದಿರುತ್ತಿದ್ದರು. ಆದರೆ ಅವರು ಎಂದೂ ನಿರಂಕುಶ ಪ್ರಭುಗಳಾಗಿರಲಿಲ್ಲ. ಭಾರತಕ್ಕೆ ಸಂಸತ್ತುಗಳು ಅಥವಾ ಸಂಸತ್ತುಗಳಲ್ಲಿ ನಡೆಯಬೇಕಾದ ವಿಧಿ ವಿಧಾನ ಗಳು ತಿಳಿದಿರಲಿಲ್ಲ ಎಂದಲ್ಲ.

ಬೌದ್ಧ ಭಿಕ್ಷು ಸಂಘಗಳ ರಚನೆಯನ್ನು ಅಧ್ಯಯನ ಮಾಡಿದರೆ, ನಮ್ಮಲ್ಲಿ ಸಂಘಗಳಿಗೆ ಪರ್ಯಾಯವಾಗಿ ಸಂಸತ್ತುಗಳು ಇದ್ದವು ಮತ್ತು ಅಂತಹ ಸಂಘಗಳು ಎಂದರೆ ಸಂಸತ್ತುಗಳೇ ಅಲ್ಲದೆ ಬೇರೆ ಏನೂ ಅಲ್ಲ ಎಂಬುದು ವೇದ್ಯವಾಗುತ್ತದೆ. ಅಂತಹ ಸಂಘಗಳು ಆಧುನಿಕ ಯುಗದಲ್ಲಿನ ಸಂಸತ್ತುಗಳು ಯಾವ ವಿಧಿ-ವಿಧಾನಗಳನ್ನು ಅನುಸರಿಸಿಕೊಂಡು ರಚನೆಯಾಗಿವೆಯೋ ಅಂತಹ ವಿಧಿ-ವಿಧಾನಗಳ ಮೇಲೆ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದವು. ಅವುಗಳಲ್ಲಿ ಆಸನಗಳ ಏರ್ಪಾಡು, ನಿರ್ಣಯಗಳನ್ನು ಕೈಗೊಳ್ಳಲು ಇದ್ದ ನಿಯಮಗಳು, ಕೋರಮ್, ಸಚೇತಕರು, ಮತಗಳ ಎಣಿಕೆ, ಮತ ಚೀಟಿಗಳ ಮೂಲಕ ಮತದಾನ, ಛೀಮಾರಿ ನಿರ್ಣಯ, ನಿಯಂತ್ರಿ ಸುವ ವಿಧಾನ, ಪೂರ್ವ ನ್ಯಾಯ ಇತ್ಯಾದಿ ಇದ್ದುದನ್ನು ನೋಡ ಬಹುದು. ಬುದ್ಧನು ಸಂಘಗಳ ಸಭೆಗಳ ನಿರ್ವಹಣೆಗಾಗಿ ಅನುಸರಿಸುತ್ತಿದ್ದ ಈ ಸಂಸದೀಯ ವಿಧಿ ವಿಧಾನಗಳನ್ನು, ತನ್ನ ಕಾಲಕ್ಕೆ ತನ್ನ ದೇಶದಲ್ಲಿದ್ದ ರಾಜಕೀಯ ಸಭೆಗಳಿಂದ ಅಥವಾ ರಾಜಕೀಯ ಪರಿಷತ್‍ಗಳಿಂದ, ತೆಗೆದುಕೊಂಡಿರಬೇಕೆಂದು ಕಂಡುಬರುತ್ತದೆ.

ಈ ಪ್ರಜಾಪ್ರಭುತ್ವ ಪದ್ದತಿಯನ್ನು ಭಾರತವು ಕಳೆದುಕೊಂಡಿತು. ಅದು ಎರಡನೇ ಬಾರಿಗೆ ಕಳೆದುಕೊಳ್ಳಲಿದೆಯೇ? ನನಗೆ ಗೊತ್ತಿಲ್ಲ. ಆದರೆ ಭಾರತದಂತಹ ದೇಶದಲ್ಲಿ ಪ್ರಜಾಪ್ರಭುತ್ವ ಪದ್ಧತಿಯು ಬಹಳ ಕಾಲದಿಂದ ಬಳಕೆಯಲ್ಲಿ ಇಲ್ಲದಿದ್ದ ಕಾರಣ ಈ ಪ್ರಜಾಪ್ರಭುತ್ವ ವ್ಯವಸ್ಥೆ ಹೊಸದೆನಿಸಬಹುದು ಮತ್ತು ಪ್ರಜಾಪ್ರಭುತ್ವ ಮರೆಯಾಗಿ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುವ ಅಪಾಯವುಂಟು. ಈಗ ಹೊಸದಾಗಿ ಜನ್ಮ ತಳೆದ ಪ್ರಜಾಪ್ರಭುತ್ವ ತನ್ನ ಸ್ವರೂಪವನ್ನು ಉಳಿಸಿಕೊಳ್ಳದೇ ಅದರ ಜಾಗದಲ್ಲಿ ಸರ್ವಾಧಿಕಾರಕ್ಕೆ ಅವಕಾಶ ಮಾಡಿಕೊಡುವ ಸಂಭವ ವುಂಟು. ರಾಜಕೀಯದಲ್ಲಿ ಇಂಥÀ ಭೂಕಂಪವೇನಾದರೂ ನಡೆದಿದ್ದೆಯಾ ದರೆ ನನ್ನ ಎರಡನೇ ಅನುಮಾನವು ವಾಸ್ತವವಾಗುವ ಸಾಧ್ಯತೆಯುಂಟು.

ಪ್ರಜಾಪ್ರಭುತ್ವವನ್ನು ಅದರ ಸ್ವರೂಪವನ್ನಷ್ಟೇ ಅಲ್ಕದೆ, ಅದರ ತತ್ವವನ್ನು ಉಳಿಸಿಕೊಳ್ಳಬೇಕಾದರೆ ನಾವು ಏನು ಮಾಡಬೇಕು? ನನ್ನ ಅಭಿಪ್ರಾಯದ ಪ್ರಕಾರ, ನಮ್ಮ ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗ ಳನ್ನು ಈಡೇರಿಸಿಕೊಳ್ಳಲು ಸಂವಿಧಾನದ ವಿಧಾನಗಳನ್ನೇ ಅನುಸರಿಸ ಬೇಕಾಗುತ್ತದೆ. ಅಂದರೆ ನಾವು ಕ್ರಾಂತೀಯ ರಕ್ತಪಾತ ಮಾರ್ಗವನ್ನು ಕೈಬಿಡಬೇಕಾಗುತ್ತದೆ. ಅಂದರೆ ನಾವು ಶಿಸ್ತುಭಂಗ, ಅಸಹಕಾರ ಮತ್ತು ಸತ್ಯಾಗ್ರಹ ಈ ಮಾರ್ಗಗಳನ್ನು ಬಿಡಬೇಕಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳ ಈಡೇರಿಕೆಗೆ ಸಂವಿಧಾನ ಸಮ್ಮತ ಮಾರ್ಗಗಳ ಅವಕಾಶವಿಲ್ಲದಿದ್ದ ಸಂದರ್ಭದಲ್ಲಿ ಸಂವಿಧಾನ ಬಾಹಿರವಾದ ಮಾರ್ಗ ಗಳನ್ನು ಅನುಸರಿಸುವುದು ಬಹಳಷ್ಟು ಸಮರ್ಥನೀಯವಾಗಿತ್ತು.

ಆದರೆ ಎಲ್ಲಿ ಸಂವಿಧಾನದ ಸಮ್ಮತ ಮಾರ್ಗಗಳಿಗೆ ಅವಕಾಶವಿರುತ್ತದೆಯೋ, ಅಲ್ಲಿ ಸಂವಿಧಾನ ಬಾಹಿರವಾದ ಮಾರ್ಗಗಳಿಗೆ ಸಮರ್ಥನೆ ಇರುವು ದಿಲ್ಲ. ಈ ಮಾರ್ಗಗಳು ಅರಾಜಕತೆಯ ಧರ್ಮಗ್ರಂಥದ ನೀತಿ ಸೂತ್ರ ಗಳಾಗಿದ್ದು, ಇವುಗಳನ್ನು ಎಷ್ಟು ಬೇಗ ತೊರೆಯುತ್ತೇವೆಯೋ, ರಾಷ್ಟ್ರಕ್ಕೆ ಅಷ್ಟೂ ಕ್ಷೇಮ.
ಎರಡನೆಯದಾಗಿ ಜಾನ್ ಸ್ಪೋರಟ್ ಮಿಲ್ ಪ್ರಜಾಪ್ರಭುತ್ವವನ್ನು ಕುರಿತು ಹೇಳಿದ್ದ ಎಚ್ಚರಿಕೆ ಮಾತನ್ನು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಇರುವವರೆಲ್ಲರೂ ಗಮನಿಸಬೇಕಾಗುತ್ತದೆ. ಅಂದರೆ “ಎಂತಹ ಮಹಾನ್ ವ್ಯಕ್ತಿಯೇ ಆಗಿದ್ದರೂ ಅವನ ಪಾದದಡಿಯಲ್ಲಿ ತಮ್ಮ ಸ್ವಾತಂತ್ರ್ಯವನ್ನು ಎಸೆಯಬಾರದು. ಅಥವಾ ತಮ್ಮ ಯಾವುದೇ ಸಂಸ್ಥೆಗಳನ್ನು ಬುಡ ಮೇಲು ಮಾಡಲು ಅನುಕೂಲವಾಗುವ ಹಾಗೆ, ಅವರಿಗೆ ಅಧಿಕಾರವನ್ನು ಕೊಡಲೂಬಾರದು” ದೇಶಕ್ಕೆ ಜೀವಮಾನವೆಲ್ಲಾ ಸೇವೆ ಸಲ್ಲಿಸಿದ ಯಾವುದೇ ಮಹಾನ್ ವ್ಯಕ್ತಿಗೆ ಋಣಿಯಾಗಿರುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಋಣಿಯಾಗಿರುವುದಕ್ಕೂ ಕೆಲವು ಮಿತಿಗಳಿರುತ್ತವೆ.

ಐರಿಷ್ ರಾಷ್ಟ್ರಪ್ರೇಮಿಯಾದ ಡೇನಿಲ್ ಓ ಕನ್ನೋಲ್ ಎಂಬುವವನು ಹೇಳಿ ದಂತೆ, “ಯಾವೊಬ್ಬ ವ್ಯಕ್ತಿಯು ತನ್ನ ಗೌರವವನ್ನು ಕಳೆದು ಕೊಂಡು ಮತ್ತೊಬ್ಬನಿಗೆ ಋಣಿ ಯಾಗಿರಬಾರದು. ಯಾವೊಬ್ಬ ಮಹಿಳೆಯು ತನ್ನ ಪಾವಿತ್ರ್ಯತೆ ಯನ್ನು ಬಲಿಗೊಟ್ಟು ಕೃತಜ್ಞತೆಯನ್ನು ತೋರಿಸಬೇಕಿಲ್ಲ. ಅದೇ ರೀತಿಯಲ್ಲಿ ಯಾವ ರಾಷ್ಟ್ರವೂ ತನ್ನ ಸ್ವಾತಂತ್ರ್ಯವನ್ನು ಬಲಿಗೊಟ್ಟು ಕೃತಜ್ಞವಾಗಿರ ಬೇಕಿಲ್ಲ”. ಈ ಎಚ್ಚರಿಕೆಯ ಮಾತು, ಇತರೆ ಯಾವುದೇ ದೇಶಕ್ಕಿಂತ ಭಾರತದ ಸಂದರ್ಭದಲ್ಲಿ ಹೆಚ್ಚು ಅಗತ್ಯವಾಗಿರುತ್ತದೆ.

ಭಾರತದಲ್ಲಿ ಭಕ್ತಿಪಂಥ ಅಥವಾ ವ್ಯಕ್ತಿಪೂಜೆ ರಾಜಕೀಯದಲ್ಲಿ ಮಹತ್ವದ ಪಾತ್ರಗಳನ್ನು ವಹಿಸುತ್ತಿವೆ. ಈ ವಿಷಯದಲ್ಲಿ ಪ್ರಪಂಚದ ಯಾವುದೇ ರಾಷ್ಟ್ರವು ಇದಕ್ಕೆ ಸರಿಸಾಟಿಯಾಗಲಾರದು. ಧಾರ್ಮಿಕವಾಗಿ ಭಕ್ತಿಯು ಆತ್ಮದ ಮೋಕ್ಷಕ್ಕೆ ದಾರಿ ಮಾಡಿಕೊಡಬಹುದು. ಆದರೆ ರಾಜಕೀಯದಲ್ಲಿನ ಭಕ್ತಿ ಅಥವಾ ವ್ಯಕ್ತಿ ಪೂಜೆಯು, ಖಂಡಿತವಾಗಿಯೂ, ಅವನತಿಗೆ ಮತ್ತು ನಿರಂಕುಶ ಪ್ರಭುತ್ವದ ಉದಯಕ್ಕೆ, ದಾರಿ ಮಾಡಿ ಕೊಡುತ್ತದೆ.

ಮೂರನೆಯದಾಗಿ ನಾವು ಮಾಡಬೇಕಾದುದು ಎಂದರೆ, ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ತೃಪ್ತಿ ಹೊಂದಿ ಸಮ್ಮನಾಗ ಬಾರದು. ನಾವು ನಮಗೆ ದೊರೆತ ಈ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾ ಜಿಕ ಪ್ರಜಾಪ್ರಭುತ್ವವನ್ನಾಗಿಯೂ ಮಾಡಬೇಕು. ರಾಜಕೀಯ ಪ್ರಜಾಪ್ರಭು ತ್ವಕ್ಕೆ ಸಾಮಾಜಿಕ ಪ್ರಜಾಪ್ರಭುತ್ವವು ಬುನಾದಿಯಾಗಿರದಿದ್ದರೆ ರಾಜಕೀಯ ಪ್ರಭುತ್ವಕ್ಕೆ ಉಳಿಗಾಲವಿಲ್ಲ. ಹಾಗಾದರೆ, ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಏನು? ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಅದೊಂದು ಜೀವನ ಪದ್ಧತಿ. ಸ್ವಾತಂತ್ರ್ಯ, ಸಮಾನತೆ ಮತ್ತು ಬ್ರಾತೃತ್ವ ಆದ ಈ ತ್ರಿವಳಿಗಳಲ್ಲಿ ಒಂದೊಂದನ್ನು ಪ್ರತ್ಯೇಕವೆಂದು ಪರಿಗಣಿಸು ವಂತಿಲ್ಲ. ಅವು ಒಂದಕ್ಕೊಂದು ಪೂರಕವಾಗಿರುತ್ತವೆ. ಅವುಗಳನ್ನು ಪ್ರತ್ಯೇಕಿಸುವು ದೆಂದರೆ ಪ್ರಜಾಪ್ರಭುತ್ವದ ಉದ್ದೇಶವು ವಿಫಲವಾಗುತ್ತದೆ.

ಸ್ವಾತಂತ್ರ್ಯ ವನ್ನು, ಸಮಾನತೆಯಿಂದ ಪ್ರತ್ಯೇಕಿಸಲು ಬರುವುದಿಲ್ಲ. ಸಮಾನತೆಯನ್ನು ಸ್ವಾತಂತ್ರ್ಯದಿಂದ ಪ್ರತ್ಯೇಕಿಸಲು ಬರುವುದಿಲ್ಲ. ಹಾಗೆಯೇ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು, ಭ್ರಾತೃತ್ವದಿಂದ ಪ್ರತ್ಯೇಕಿಸಲೂ ಬರುವುದಿಲ್ಲ. ಸ್ವಾತಂತ್ರ್ಯತೆ ಇಲ್ಲದ ಸಮಾನತೆಯು ವ್ಯಕ್ತಿಗತ ಸ್ವಾತಂತ್ರ್ಯವನ್ನು ನಾಶ ಗೊಳಿಸುತ್ತದೆ.
ಭ್ರಾತೃತ್ವವಿಲ್ಲದೆ ಸ್ವಾತಂತ್ರ್ಯ ಮತ್ತು ಸಮಾನತೆಗಳು ಸುಸೂತ್ರವಾಗಿ ನಡೆಯುವಂತಿಲ್ಲ. ಇವುಗಳನ್ನು ಜಾರಿಗೆ ತರಲು ಬಲಪ್ರಯೋಗ ಅಗತ್ಯವಾದೀತು! ಭಾರತೀಯ ಸಮಾಜದಲ್ಲಿ ಈ ಎರಡೂ ಸಂಗತಿಗಳು ಸಂಪೂರ್ಣ ಅಭಾವವಿದೆ ಎಂಬ ವಾಸ್ತವವನ್ನು ನಾವು ಒಪ್ಪಿಕೊಳ್ಳ ಬೇಕು. ಅಂತಹ ಎರಡು ಸಂಗತಿಗಳಲ್ಲಿ ಸಮಾನತೆ ಎಂಬುವುದೂ ಒಂದು. ಸಾಮಾಜಿಕ ಸ್ಥರದ ಮಟ್ಟಿಗೆ ಹೇಳಬೇಕಾದರೆ, ಭಾರತದಲ್ಲಿ ಸಾಮಾಜಿಕ ವ್ಯವಸ್ಥೆಯು ಅಸಮಾನತೆಯ ಶ್ರೇಣಿಗಳ ಮೇಲೆ ನಿಂತಿದೆ. ಅಂದರೆ ಕೆಲವರು ಮೇಲು ಮತ್ತು ಕೆಲವರು ಕೀಳು ಎಂಬ ಅರ್ಥದಲ್ಲಿ. ಆರ್ಥಿಕ ಸ್ಥರದಲ್ಲಿ ಹೇಳಬೇಕೆಂದರೆ, ನಮ್ಮ ಸಮಾಜದಲ್ಲಿ ಹೆಚ್ಚಿನ ಜನ ಕಡು ಬಡತನದಲ್ಲಿದ್ದರೆ, ಕೆಲವರಲ್ಲಿ ಮಾತ್ರ ಶ್ರೀಮಂತಿಕೆ ತುಂಬಿದೆ.

ಜನೆವರಿ 26, 1950ರಂದು ನಾವು ಇಂತಹ ಪರಸ್ಪರ ವೈರುಧ್ಯಗಳಿರುವ ಒಂದು ಹೊಸ ವ್ಯವಸ್ಥೆಗೆ ಪ್ರವೇಶಿಸುತ್ತಿದ್ದೇವೆ. ರಾಜ ಕೀಯ ಜೀವನದಲ್ಲಿ ನಾವು ಸಮಾನತೆಯನ್ನು ಹೊಂದಿದ್ದೇವೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ನಾವು ಅಸಮಾನತೆಯನ್ನು ಹೊಂದಲಿದ್ದೇವೆ. ರಾಜಕೀಯದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ಮತ್ತು ಒಂದು ಮತದ ಮೌಲ್ಯ ಒಂದು ಎಂಬ ತತ್ವವನ್ನು ಸ್ವೀಕರಿಸಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆುಂದಾಗಿ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಮತ, ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸಿದ್ದೇವೆ.

ಸಮಾಜದಲ್ಲಿ ಇಂತಹ ವೈರುಧ್ಯಗಳನ್ನು ಒಳಗೊಂಡ ಜೀವನವನ್ನು ನಾವು ಎಲ್ಲಿಯ ವರೆಗೆ ಮುಂದುವರೆಸಲು ಸಾಧ್ಯ? ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಎಲ್ಲಿಯ ವರೆಗೂ ನಾವು ಸಮಾನತೆಯನ್ನು ನಿರಾಕರಿಸಲು ಸಾಧ್ಯ? ನಾವು ಈ ನಿರಾಕರಣೆಯನ್ನು ಹೀಗೆಯೇ ಮುಂದುವರೆಸಿದ್ದಾ ದರೆ ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. ನಾವು ಈ ವೈರುಧ್ಯಗಳನ್ನು ಆದಷ್ಟು ಬೇಗ ನಿವಾರಿಸಬೇಕಿರುತ್ತದೆ. ಇಲ್ಲವಾದರೆ ಯಾರು ಅಸಮಾನತೆಯಿಂದ ನರಳುತ್ತಿರುವರೋ ಅವರು, ಯಾವ ಪ್ರಜಾಪ್ರಭುತ್ವಕ್ಕಾಗಿ ಈ ಸಂವಿಧಾನ ಸಭೆ ಪ್ರಯತ್ನಿಸಿತೋ, ಆ ರಾಜಕೀಯ ಪ್ರಜಾಪ್ರಭುತ್ವದ ಕಟ್ಟಡವನ್ನೇ ಧ್ವಂಸಗೊಳಿಸುತ್ತಾರೆ.

ನಾವು ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಒಂದು ರಾಷ್ಟ್ರವಾಗಿಲ್ಲ ಎಂಬುದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳು ತ್ತೇವೆಯೋ ಅಷ್ಟೂ ಒಳ್ಳೆಯದು. ಆಗ ಮಾತ್ರ ನಾವು ರಾಷ್ಟ್ರವಾಗುವ ಅಗತ್ಯತೆಯನ್ನು ಕಂಡುಕೊಳ್ಳುತ್ತೇವೆ ಹಾಗೂ ಅಂತಹ ಒಂದು ಉದ್ದೇಶದ ಈಡೇರಿಕೆಗಾಗಿ ನಾವು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಗಂಭೀರವಾಗಿ ಯೋಚಿಸುತ್ತೇವೆ. ಈ ಗುರಿಯ ಈಡೇರಿಕೆಯು ಅಷ್ಟು ಸುಲಭದ್ದಾಗಿರುವುದಿಲ್ಲ. ಅಮೇರಿಕಾ ಸಂಸ್ಥಾನಕ್ಕಿಂತ ಭಾರತದಲ್ಲಿ ಅಸಂಖ್ಯಾತ ಜಾತಿಗಳು ಇವೆ. ಜಾತಿಗಳು ರಾಷ್ಟ್ರದ ಕಲ್ಪನೆಗೆ ವಿರೋಧ ವಾದವುಗಳು. ಮೊದಲನೆಯದಾಗಿ ಸಾಮಾಜಿಕ ಜೀವನದಲ್ಲಿ ಇವು ಪ್ರತ್ಯೇಕತೆಯನ್ನು ತರುತ್ತವೆ. ಇವು ರಾಷ್ಟ್ರ ವಿರೋಧಿಗಳೂ ಕೂಡ. ಯಾಕೆಂದರೆ ಜಾತಿ ಮತ್ತು ಜಾತಿಗಳ ನಡುವೆ ಅಸೂಯೆ ಮತ್ತು ದ್ವೇಷ ಭಾವನೆಗಳನ್ನು ಉಂಟು ಮಾಡುತ್ತವೆ.

ನಾವು ವಾಸ್ತವವಾಗಿ ಒಂದು ರಾಷ್ಟ್ರವಾಗಬೇಕೆಂದು ಬಯಸುವುದಾದರೆ ಈ ಎಲ್ಲಾ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಒಂದು ರಾಷ್ಟ್ರ ಎಂಬುದು ಅಸ್ತಿತ್ವದಲ್ಲಿದ್ದರೆ, ಭ್ರಾತೃತ್ವವು ವಾಸ್ತವವಾಗುತ್ತದೆ. ಭ್ರಾತೃತ್ವವಿಲ್ಲದೆ ಸಮಾನತೆ ಮತ್ತು ಸ್ವಾತಂತ್ರ್ಯ ಎಂಬುವುದು ಕೇವಲ ಬಣ್ಣ ಬಳಿದಂತೆಯೇ.

ನಮ್ಮ ಮುಂದಿರುವ ಕರ್ತವ್ಯಗಳ ಸಂಬಂಧದಲ್ಲಿ ಇವು ನನ್ನ ಚಿಂತನೆಗಳಾಗಿರುತ್ತವೆ ಅಷ್ಟೇ. ಕೆಲವರಿಗೆ, ಇವಾವು ಸಂತೋಷವನ್ನು ಉಂಟು ಮಾಡಿರಲಿಕ್ಕಿಲ್ಲ. ಆದರೆ ನಮ್ಮ ದೇಶದಲ್ಲಿ ರಾಜಕೀಯ ಅಧಿಕಾರ ಬಹಳ ಕಾಲದಿಂದ ಕೆಲವರ ಸ್ವತ್ತಾಗಿದ್ದು ಬಹುಸಂಖ್ಯಾತರು ಪ್ರಾಣಿಗಳಂತೆ ಹಾಗೂ ಪಶುಗಳಂತೆ ಜೀವಿಸುತ್ತಿದ್ದಾರೆ ಎಂಬುವುದನ್ನು ಒತ್ತಿ ಹೇಳಬೇಕಿಲ್ಲ. ಅಧಿಕಾರವು ಕೆಲವೇ ಕೆಲವರ ಸ್ವತ್ತಾಗಿರುವ ಕಾರಣ ಬಹು ಸಂಖ್ಯಾತರಿಗೆ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಅವಕಾಶವು ಇಲ್ಲದಂತಾಗಿದೆ. ಇಷ್ಟೇ ಅಲ್ಲದೇ ಜೀವನದ ಮಹತ್ವದ ಬಗೆಗಿನ ಅವರ ಆಸಕ್ತಿಯು ಉಡುಗಿ ಹೋಗುವಂತಾಗಿದೆ.

ತುಳಿತಕ್ಕೆ ಒಳಗಾದ ಈ ಜನರು ಇವರ ಆಡಳಿತಕ್ಕೆ ಬೇಸತ್ತಿದ್ದಾರೆ ಮತ್ತು ತಮ್ಮನ್ನು ತಾವೇ ಆಳಿಕೊಳ್ಳುವ ತವಕದಲ್ಲಿದ್ದಾರೆ. ದಲಿತ ವರ್ಗಗಳಲ್ಲಿ ಆತ್ಮಾವಲೋಕನದ ಸಲುವಾಗಿ ಉಮ್ಮಳಿಸುತ್ತಿರುವ ಉತ್ಕಟವಾದ ಆಕಾಂಕ್ಷೆಯು ವರ್ಗ ಸಂಘರ್ಷದಲ್ಲಿ ಪರಿಣಮಿಸದಂತೆ ನಾವು ಎಚ್ಚರ ವಹಿಸಬೇಕಾಗುತ್ತದೆ. ಹಾಗೇನಾದರೂ ಆಗಿದ್ದೆ ಆದರೆ, ರಾಷ್ಟ್ರ ಇಬ್ಬಾಗವಾದಂತೆಯೇ. ಅಂತಹದೊಂದು ದಿನ ಬಂದಿದ್ದೇ ಆದರೆ ಅದು ಘೋರ ದುರಂತ ದಿನವಾಗುತ್ತದೆ. ಯಾಕೆಂದರೆ ಅಬ್ರಹಾಂ ಲಿಂಕನ್ ಹೇಳಿರುವ ಹಾಗೆ ಯಾವ ಮನೆ ಇಬ್ಭಾಗವಾಗುತ್ತದೋ ಆ ಮನೆಗೆ ಉಳಿಗಾಲವಿಲ್ಲ.

ಸ್ವಾತಂತ್ರ್ಯವು ವಾಸ್ತವಾಗಿ ಸಂತೋಷ ಉಂಟು ಮಾಡುವ ಸಂಗತಿ. ಆದರೆ ಈ ಸ್ವಾತಂತ್ರ್ಯವು ನಮ್ಮ ಮೇಲೆ ಹೆಚ್ಚು ಜವಾಬ್ದಾರಿಗ ಳನ್ನು ಹೊರೆಸಿದೆ ಎಂಬುವುದನ್ನು ಮರೆಯದಿರೋಣ. ಸ್ವಾತಂತ್ರ್ಯದ ಮೂಲಕ, ಪ್ರತಿಯೊಂದು ತಪ್ಪು ಎಸಗಿದಾಗ ಬ್ರಿಟೀಷರ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದಂತಹ ಅವಕಾಶವನ್ನು ಕಳೆದುಕೊಂಡಿದ್ದೇವೆ. ಇನ್ನು ಮುಂದೆ ಏನಾದರೂ ತಪ್ಪಾದಾಗ ನಾವು ನಮ್ಮನ್ನು ಬಿಟ್ಟು ಬೇರೆ ಯಾರನ್ನೂ ಆಪಾದಿಸಿ ಹೇಳುವಂತಿಲ್ಲ. ತಪ್ಪುಗಳು ಸಂಭವಿಸುವ ಬಹು ದೊಡ್ಡ ಅಪಾಯವಿದೆ.

ಡಾ. ಬಿ.ಆರ್.ಅಂಬೇಡ್ಕರ್

(ಸಂವಿಧಾನ ಸಭೆಯಲ್ಲಿ ಡಾ. ಅಂಬೇಡ್ಕರರು ಮಾಡಿದ ಸಮಾರೋಪ ಭಾಷಣದ ಆಯ್ದ ಭಾಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version