ಅಂತರಂಗ

ಅರಿಮೆಯ ಅರಿವಿರಲಿ -60: ಮಾನಸ ಸರೋವರದಲ್ಲಿ ಶಿಶುವಿಹಾರ

Published

on

  • ಯೋಗೇಶ್ ಮಾಸ್ಟರ್

ಮಾನವ ಸಮಾಜವು ತನ್ನ ನೈಸರ್ಗಿಕವಾದ ಪಶುಪ್ರವೃತ್ತಿಯನ್ನು ತೊರೆದು ಸಂಘಜೀವಿಯಾಗಿ ಸಾಮುದಾಯಿಕವಾಗಿ ಬಾಳಿ ಬದುಕಲು ಕಂಡುಕೊಂಡ ಹಲವು ಮಾರ್ಗಗಳಲ್ಲಿ ಧರ್ಮವೂ ಒಂದು. ಮನುಷ್ಯ ತನ್ನೆಲ್ಲಾ ದುರ್ಗುಣ, ಗುಣದೋಷಗಳಿಂದ ಮುಕ್ತವಾಗಿ, ಪರಸ್ಪರ ಸಾಮರಸ್ಯದಿಂದ ಮೌಲ್ಯವೆಂದು, ಸದ್ಗುಣಗಳೆಂದು ಕರೆಯಲಾಗುವ ಒಪ್ಪಿತ ಗುಣಗಳನ್ನು ಅಳವಡಿಸಿಕೊಂಡು ಬದುಕಲು ಅದು ನೈತಿಕ ಚೌಕಟ್ಟನ್ನು ಕಟ್ಟಿಕೊಟ್ಟಿತು.

ಬೇರೆ ಬೇರೆ ಕಡೆಗಳಲ್ಲಿ ಅಲ್ಲಿನ ಪ್ರಾದೇಶಿಕ ಭಿನ್ನತೆಗಳಿಗೆ, ಸಾಂಸ್ಕೃತಿಕ ಹಿನ್ನೆಲೆಗಳಿಗೆ, ಸಾಮಾಜಿಕ ವ್ಯವಸ್ಥೆಗಳಿಗೆ, ಎದುರಿಸುತ್ತಿದ್ದಂತ ಸಮಸ್ಯೆಗಳಿಗೆ, ಎದೆಗೊಡಬೇಕಾಗಿದ್ದ ಸಂಘರ್ಷಗಳಿಗೆ ತಕ್ಕಂತೆ ಧರ್ಮಗಳು ರೂಪುಗೊಂಡವು. ಈ ಎಲ್ಲಾ ಭಿನ್ನತೆಯ ಹಿನ್ನೆಲೆಗಳನ್ನು ಹೊಂದಿದ್ದ ಧರ್ಮಗಳನ್ನು ಅನುಸರಿಸುವವರು ಆ ಪ್ರದೇಶದಲ್ಲಷ್ಟೇ ಅಲ್ಲದೇ ಇತರ ಕಡೆಗಳಿಗೂ ಕ್ರಮೇಣ ಚದುರಿದರು.

ಹಾಗಾಗಿ ಅವರ ಧಾರ್ಮಿಕತೆಯು ವಿಧಿಸಿದ ನೈತಿಕ ಚೌಕಟ್ಟುಗಳು ಭಿನ್ನ ಪ್ರದೇಶಗಳಿಗೆ ಒಂದಷ್ಟು ಒಗ್ಗುತ್ತಿದ್ದವು, ಮತ್ತೊಂದಷ್ಟು ಒಗ್ಗುತ್ತಿರಲಿಲ್ಲ. ಆದರೆ ಅವರೆಲ್ಲರೂ ಮೂಲಭೂತವಾಗಿ ಹೋಮೋ ಸೇಪಿಯನ್ಸ್ ತಳಿಯವರೇ ಆದ್ದರಿಂದ ಮೂಲಭೂತವಾಗಿ ಅನೇಕಾನೇಕ ವಿಷಯಗಳು ತಾಳೆಯಾಗುತ್ತವೆ. ರೂಢಿಗಳಲ್ಲಷ್ಟೇ ಬೇಧಗಳಿರುತ್ತವೆ.

ಆದರೆ ತಾವೇ ಮನುಷ್ಯರಾಗಿರುವ ಅಂಶವಾಗಲಿ, ತಮ್ಮ ಜೈವಿಕ ಸಂತಾನವನ್ನು ಮುಂದುವರಿಸುವ ಮಕ್ಕಳ ವಿಷಯವಾಗಲಿ, ಪರಸ್ಪರ ಗೌರವ, ಪ್ರೀತಿ, ದಯೆಯೇ ಮೊದಲಾದ ಅಮೂರ್ತ ಮೂಲಭೂತ ಪರಿಕಲ್ಪನೆಗಳಲ್ಲಾಗಲಿ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ. ಎಲ್ಲಾ ಧರ್ಮದ, ಸಂಸ್ಕೃತಿಗಳ ರೂಢಿಯಿರುವವರನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಅಗತ್ಯಗಳು ಬೆಸೆಯುವಂತೆ ಮಾಡಿವೆ.

ವ್ಯಾಣಿಜ್ಯದಲ್ಲಿ, ವ್ಯಾವಹಾರಿಕವಾಗಿ ಮತ್ತು ರಾಜನೈತಿಕವಾಗಿ ಬೆರೆಯಲು ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳು ಕೊಂಡಿಗಳಾಗಿ ಕೆಲಸ ಮಾಡಿದರೂ ಮಾನುಷ ಸಂಬಂಧ ಮತ್ತು ಜೀವಪರ ಕಾಳಜಿಯು ಎಲ್ಲರಲ್ಲಿ ಸಾಮಾನ್ಯವಾಗಿಸಲು ಇರುವ ಒಂದು ಪ್ರತಿನಿಧಿಯೆಂದರೆ ಅದು ಮಗು.

ಶಿಶುಧರ್ಮ

ಮಗುವಿನ ಮಗುತನವು ಧರ್ಮಾತೀತವಾದದ್ದು. ಅದರ ಮೂಲಭೂತ ಅಗತ್ಯಗಳು ಸಾರ್ವತ್ರಿಕವಾದುದು. ಅದರ ಸಮಸ್ಯೆಗಳು ಸಾಮಾಜಿಕವಾದದ್ದು. ಹಾಗಾಗಿ, ಧರ್ಮದ ನೆಲೆಗಳಿಂದಲೂ ಮತ್ತು ಮಗುವಿನ ಮನೋವೈಜ್ಞಾನಿಕ ನೆಲೆಗಟ್ಟಿನಿಂದಲೂ ಸಮಾಜದ ಹಿರಿಯ ಸದಸ್ಯರು ಎಚ್ಚರಗೊಳ್ಳಬೇಕಿದೆ. ನಮ್ಮ ಯಾವುದೇ ಕಾರಣದ ಇಂದಿನ ಸಂಘರ್ಷಗಳು ಅವರಿಗೆ ನೆಮ್ಮದಿಯ ನಾಳೆ ನೀಡುವುದಿಲ್ಲವಲ್ಲ!

ಎಲ್ಲರೂ ನೆಮ್ಮದಿ ಮತ್ತು ಶಾಂತಿಯಿಂದ ಇರುವಂತಹ ಆದರ್ಶ ಸಮಾಜದ ಪರಿಕಲ್ಪನೆ ಬಹಳ ಹಳೆಯದು. ಹಲವಾರು ಸಾಮಾಜಿಕ ಸುಧಾರಕರು, ನಾಯಕರು ಮತ್ತು ನವಸಮಾಜದ ಹರಿಕಾರರು ನಾನಾ ಪ್ರಯೋಗಗಳನ್ನು ಮಾಡಿಕೊಂಡು ಬಂದಿದ್ದಾರೆ. ಸಾಮಾಜಿಕ ಸಂರಚನೆಯಲ್ಲಿ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಆಂದೋಲನಗಳು ನಡೆದಿವೆ ಮತ್ತು ಮಾದರಿಗಳನ್ನು ನಿರ್ಮಿಸಿವೆ. ಆದರೆ ಅವ್ಯಾವುವೂ ನಮ್ಮ ನೆಮ್ಮದಿಯ ಸಮಾಜವನ್ನು ಕಟ್ಟಿಕೊಡುವಲ್ಲಿ ಸಂಪೂರ್ಣ ಯಶಸ್ಸನ್ನು ಕಾಣಲಿಲ್ಲ.

ಈಗ ನಮ್ಮ ಈಗಿನ ಮತ್ತು ಮುಂದಿನ ಪೀಳಿಗೆಗಳು ನೆಮ್ಮದಿಯ ಬದುಕನ್ನು ಕಾಣಬೇಕಾದರೆ ಯಾವುದು ನಮ್ಮ ಸಮಾಜದ ಕೇಂದ್ರವಾಗಬೇಕು ಎಂಬ ಪ್ರಶ್ನೆಗೆ ಪ್ರಯೋಗಕ್ಕೆ ಸಾಧ್ಯತೆಗಳಿರುವ ಉತ್ತರವಿದೆ. ಅದು ಶಿಶು ಕೇಂದ್ರಿತ ಸಮಾಜ. ಶಿಶು ಕೇಂದ್ರಿತ ಸಮಾಜದ ಚಟುವಟಿಕೆಗಳು ಒಂದೊಂದು ಕುಟುಂಬವನ್ನೂ, ಒಟ್ಟಾರೆ ಸಮಾಜವನ್ನೂ ಮತ್ತು ಇಡೀ ರಾಷ್ಟ್ರವನ್ನು ನೆಮ್ಮದಿಯಿಂದಿಡಲು ಸಾಧ್ಯ. ನಮ್ಮ ಹಿರಿಯರ ಆದರ್ಶ ಸಮಾಜವನ್ನು ಕಟ್ಟುವ ಕನಸನ್ನು ಶಿಶುಪ್ರಧಾನ ಸಮಾಜ ಪ್ರಯೋಗವು ಒಂದಿಷ್ಟಾದರೂ ಯಶಸ್ವಿಗೊಳಿಸುವುದೇನೋ!

ಶಿಶುವರಳಿ ಹರೆಯವಾಗಿ

ಮಕ್ಕಳ ಮನಸ್ಸು ಮತ್ತು ಅವರ ಒಟ್ಟಾರೆ ಇರುವಿಕೆಯೇ ಬಹಳ ಸೂಕ್ಷ್ಮ ಮತ್ತು ಶಕ್ತಿಶಾಲಿಯಾದದ್ದು. ಪೋಷಕರಿಗೆ ಮತ್ತು ಶಿಕ್ಷಕರಿಗೆ ಮಕ್ಕಳ ಮನಸಿನ ಸೂಕ್ಷ್ಮತೆಯ ಮತ್ತು ಶಕ್ತಿಯ ಅರಿವಿದ್ದರೆ ಎಷ್ಟೋ ಅನಾಹುತಗಳನ್ನು ತಡೆಗಟ್ಟಬಹುದು. ಮಗುವಿನ ವ್ಯಕ್ತಿತ್ವದ ವಿಕಾಸಕ್ಕೆ ಮಹತ್ವಪೂರ್ಣವಾದ ಕಾಣ್ಕೆಗಳನ್ನು ಕೊಡಬಹುದು.

ಪೋಷಕರ ಮತ್ತು ಶಿಕ್ಷಕರ ತಪ್ಪು ನಿರ್ವಹಣೆಯಿಂದಾಗಿ ಮಕ್ಕಳು ಮುಂದೆ ವಯಸ್ಕರಾದಾಗ ಎಷ್ಟೋ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಪೋಷಕರು ನಮ್ಮ ಮಗುವನ್ನು ಬೆಳೆಸುವಲ್ಲಿ ನಾವೆಲ್ಲಿ ಎಡವಿದ್ದೇವೆ ಎಂದು ತಿಳಿಯದೇ ತಳಮಳಿಸುವಂತಾಗುತ್ತದೆ.

ಮೊಳಕೆಯಲ್ಲಿಯೇ ಬೆಳೆಯುವ ಪೈರಿನ ಜೋಪಾನ ಮಾಡುವ ಜಾಗೃತಿ ನಮ್ಮ ಪೋಷಕರಿಗೆ ಬೇಕಿದೆ. ಮಕ್ಕಳ ಪೋಷಣೆ ಮಕ್ಕಳಾಟವಲ್ಲ. ಇಂದಿನ ಪುಟ್ಟ ಮತ್ತು ಅಸಹಾಯಕ ಮುದ್ದು ಮಕ್ಕಳು ನಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರ; ಈ ಎಲ್ಲದರ ಬಹುಮುಖ್ಯವಾದ ಭಾಗವಾಗಿರುತ್ತಾರೆ. ಯಾವುದೇ ವಯಸ್ಕರ ಸಾಧನೆ, ವೇದನೆ, ಸಂವೇದನೆಗಳ ಮೂಲ ಅವರ ಬಾಲ್ಯದಲ್ಲಿ ಪಡೆದ ಅನುಭವಗಳು, ಗ್ರಹಿಕೆಗಳು, ಪ್ರಭಾವಗಳಲ್ಲಿರುತ್ತವೆ.

ಅತ್ಲಾಗೆ ಮಕ್ಕಳೂ ಅಲ್ಲ, ಇತ್ಲಾಗೆ ದೊಡ್ಡವರೂ ಅಲ್ಲ
ಮಗುತನ ಜತನದ ಬಾಧ್ಯತೆ ಮಕ್ಕಳು ಬೆಳೆದಂತೆ ಅವರು ಹದಿಹರೆಯಕ್ಕೆ ಬಂದಾಗಲೂ ಮುಂದುವರೆದಿರುತ್ತದೆ. ಈಗ ಅವರಲ್ಲಿ ದೈಹಿಕ, ಮಾನಸಿಕ ಮತ್ತು ಹಾರ್ಮೋನುಗಳ ಬದಲಾವಣೆಯೂ ಆಗಿದ್ದು, ಬಾಲ್ಯದಲ್ಲಿ ಕಾಣದಿದ್ದ ಎಷ್ಟೋ ವಿಷಯಗಳು ಹದಿಹರೆಯದಲ್ಲಿ ತೋರುತ್ತಾರೆ. ಎಷ್ಟೋ ಮಾನಸಿಕ ಸಮಸ್ಯೆಗಳು ಬಾಲ್ಯದಲ್ಲೇ ಇದ್ದರೂ ಕೂಡ ಮಗುತನದ ಮಿತಿಯಲ್ಲಿ ಅದರ ಸ್ವರೂಪವು ಎಷ್ಟೋ ಬಾರಿ ಹೊರನೋಟದಲ್ಲಿ ಗುರುತಿಸಲಾರದಷ್ಟು ಸೂಕ್ಷ್ಮವಾಗಿರುತ್ತವೆ. ಹಿಂದೆಂದಿಗಿಂತಲೂ ಅವರಿಗೆ ಆಪ್ತತೆ ಮತ್ತು ಮುಕ್ತತೆಯ ಅವಶ್ಯಕತೆ ಇರುತ್ತದೆ.

ಹದಿಹರೆಯದವರ ಸಮಸ್ಯೆ ಎಂದರೆ ಅವರು ಯೌವನಾವಸ್ಥೆಗೆ ಸಂಪೂರ್ಣ ಪ್ರಬುದ್ಧರಾಗಿಯೂ ಇರುವುದಿಲ್ಲ, ಮಕ್ಕಳಾಗಿಯೂ ಉಳಿದಿರುವುದಿಲ್ಲ. ಸಣ್ಣವರೂ ಅಲ್ಲದ, ದೊಡ್ಡವರೂ ಅಲ್ಲದ ಶಾರೀರಿಕ ಸ್ಥಿತಿ ಮಾತ್ರವಲ್ಲದೇ ಮಾನಸಿಕ ಸ್ಥಿತಿಗಳನ್ನೂ ಕೂಡಾ ಹಾಗೆಯೇ ಹದವಾಗಿ ಮತ್ತು ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ.

ಹೊಸ ಕನಸುಗಳು, ಹೊಸ ಯೋಜನೆಗಳು ಮತ್ತು ಹೊಸ ಸಹವಾಸಗಳು ಅವರ ಎಷ್ಟೋ ಹಳೆಯ ಆಸೆಗಳನ್ನು ಅಥವಾ ಸುಪ್ತ ಬಯಕೆಗಳನ್ನು ನೆರವೇರಿಸಿಕೊಳ್ಳುವ ಸಾಧ್ಯತೆಗಳನ್ನು ಹುಡುಕಿಕೊಳ್ಳುವ ವಯಸ್ಸಿನಲ್ಲಿ ಕುಟುಂಬದವರು ಮತ್ತು ಸಮಾಜದ ಇತರ ಹಿರಿಯ ಸದಸ್ಯರು ಬಹಳ ಎಚ್ಚರಿಕೆಯಿಂದಲೂ ಮತ್ತು ಆಪ್ತವಾಗಿಯೂ ವರ್ತಿಸುವ ಅಗತ್ಯವಿರುತ್ತದೆ.

ಅವರೊಂದಿಗೆ ವರ್ತಿಸುವಾಗ, ಅವರತನದಲ್ಲಿ ಇಣುಕುವ ದೊಡ್ಡತನವನ್ನು ಮನ್ನಿಸುತ್ತಲೇ ಅವರು ಚಿಕ್ಕವರು ಎಂಬ ಅರಿವು ಇರಬೇಕು. ಹಾಗಾಗಿ ಅವರ ಕ್ರಿಯೆಗೆ ಪ್ರತಿಕ್ರಿಯೆ ನೀಡುವ ವಿಷಯದಲ್ಲಿ, ಅವರ ಹೊಸ ವರ್ತನೆಗೆ ನಮ್ಮ ಪ್ರತಿವರ್ತನೆಗಳನ್ನು ತೋರುವ ವಿಷಯದಲ್ಲಿ ಸಮತೋಲಿತ ಮನಸ್ಥಿತಿ ಹಿರಿಯರಿಗಿರಬೇಕು.

ಮಕ್ಕಳಾಗಿದ್ದಾಗ ಮುದ್ದಿಸುವ ಎಷ್ಟೋ ಹಿರಿಯರು ಅವರು ದೊಡ್ಡವರಾಗುತ್ತಾ ಬಂದಂತೆ ಮುದ್ದಿಸುವುದನ್ನು, ಅಪ್ಪುವುದನ್ನು, ಚುಂಬಿಸುವುದನ್ನು ನಿಲ್ಲಿಸಿಬಿಡುತ್ತಾರೆ.ಈಗಲೂ ನೀನೇನೂ ಮಗುವಾ ಮುದ್ದು ಮಾಡಲು? ಎಂಬ ಮಾತವರದು. ಆದರೆ ಮುದ್ದು ಮಾಡುವುದು ಮಕ್ಕಳಿಗೆ ಮಾತ್ರವೇ ಎಂಬ ಮಿಥ್ ಅನ್ನು ಸೃಷ್ಟಿಸಿದ್ದು ಯಾರೋ ಗೊತ್ತಿಲ್ಲ. ಮುದ್ದು ಮಾಡುವುದು, ಲಲ್ಲೆಗರೆಯುವುದು ಮನುಷ್ಯನಿಗೆ ಆಪ್ತತೆಯನ್ನು ನೀಡುವುದಲ್ಲದೇ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಭದ್ರತೆಯನ್ನು ಒದಗಿಸುತ್ತದೆ. ಅದು ಹದಿಹರೆಯದ ಮಕ್ಕಳಿಗೆ ಖಂಡಿತ ಬೇಕು.

ಯಾರೂ ಹುಟ್ಟಾ ಅಪರಾಧಿಗಳಲ್ಲ

ವಯಸ್ಕರ ವರ್ತನೆಗಳ ಸಮಸ್ಯೆ, ವೈವಾಹಿಕ ಜೀವನದಲ್ಲಿ ಕಾಣುವಂತಹ ಸಮಸ್ಯೆ, ಸಂಬಂಧಗಳಲ್ಲಿ ತೊಡಕುಗಳು, ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳು, ಭ್ರಷ್ಟಾಚಾರ, ಕೊಲೆ, ಸುಲಿಗೆ ಮತ್ತು ಅತ್ಯಾಚಾರಗಳಂತಹ ಅಪರಾಧಗಳು, ಸಮಾಜ ವಿದ್ರೋಹಿ ಚಟುವಟಿಕೆಗಳು, ಗುಂಪು ಘರ್ಷಣೆ, ಭೂಗತದ ಪಾತಕ ಕೃತ್ಯಗಳು, ವಿಕೃತ ಮತ್ತು ವಿಲಕ್ಷಣ ವರ್ತನೆಗಳು; ಇಂತವೆಲ್ಲಾ ಒಮ್ಮಿಂದೊಮ್ಮೆಲೆ ತಲೆದೋರುವುದಲ್ಲ. ಬಾಲ್ಯದಲ್ಲಿ ಗುರುತಿಸದೇ ಹೋದಂತಹ ಶಿಶುಮನದ ಮಹಾಮಾರಿಗಳು ವಯಸ್ಕರಾದಾಗ ತಮ್ಮ ರುದ್ರ ಪ್ರತಾಪವನ್ನು ತೋರುವಂತಹುದು.

ಎಳೆವಯದಲ್ಲೇ ಮಾನಸಿಕ ಸಮಸ್ಯೆಗಳ ಮೂಲವನ್ನು ಗುರುತಿಸಲು ಸಾಧ್ಯ. ಪೋಷಕರು ಮತ್ತು ಶಿಕ್ಷಕರು ಜಾಗೃತರಾದರೆ ನಾಳಿನ ಎಷ್ಟೋ ಸಮಸ್ಯೆಗಳನ್ನು ಇಂದಿಗೇ ಕೊನೆಗಾಣಿಸಬಹುದು. ಮಕ್ಕಳು ಮುಗ್ಧರು ಹಟ ಮಾಡುತ್ತಾರೆ, ಸುಳ್ಳು ಹೇಳುತ್ತಾರೆ, ಹೈಪರ್ ಆ್ಯಕ್ಟೀವ್ ಇದ್ದಾರೆ, ಹಿಡಿಯಲಾಗುವುದಿಲ್ಲ; ಆದರೆ ದೊಡ್ಡವರಾಗುತ್ತಾ ಸರಿ ಹೋಗುತ್ತಾರೆ ಎಂಬುದು ಭ್ರಮೆ. ಗಿಡವಾಗಿ ಬಗ್ಗದ್ದು ಮರವಾದಾಗ ಬಗ್ಗದು. ಮಾನಸಿಕ ಸಮಸ್ಯೆಗಳನ್ನು ಗುರುತಿಸಬೇಕು. ಅದರಿಂದ ಮಕ್ಕಳನ್ನು ಪಾರು ಮಾಡಬೇಕು. ಅವರದನ್ನು ಗುರುತಿಸುವಾಗ ನಮ್ಮದೂ ನಮಗೆ ಗುರುತು ಹತ್ತುತ್ತದೆ. ಹೂವೂ ನಾರೂ ಎರಡೂ ಸ್ವರ್ಗ ಕಾಣಲಿ.

ಭೂತಬಾಧೆ ಇರದ ಮಕ್ಕಳು

ಶಿಶುವೆಂಬ ಚಿಗುರುತ್ತಿರುವ ಸಸಿಗೆ ಭೂತದ ಬಾಧೆಯಿಲ್ಲ ಭವಿಷ್ಯದ ಭ್ರಮೆಯಿರುವುದಿಲ್ಲ. ಅದು ಸದಾ ಹಿತವನ್ನು ಮತ್ತು ಮುದವನ್ನು ಬಯಸುತ್ತಿರುತ್ತದೆ. ತನಗೆ ದೊರಕುವ ಆಪ್ತತೆ ಮತ್ತು ಸಂತೋಷದ ಆಧಾರದಲ್ಲಿ ತಾನಿರುವ ಪರಿಸರವನ್ನು ಮತ್ತು ತನ್ನೊಡನೆ ಇರುವ ಜನರನ್ನು ಅಳೆಯುತ್ತದೆ. ಸಾಮಾನ್ಯವಾಗಿ ಅದರ ಮನಸ್ಸಿನಲ್ಲಿ ಖಿನ್ನತೆಗಳಿರುವುದಿಲ್ಲ, ಹೃದಯದಲ್ಲಿ ಭಾರವಿರುವುದಿಲ್ಲ. ಹಾಗಾಗಿ ಅದು ಹಗುರ ಹಾಗೂ ಮುಕ್ತ. ಅದರ ಮನಸ್ಸನ್ನು ಖಿನ್ನತೆಗೆ ದೂಡದೇ, ಹೃದಯಕ್ಕೆ ಭಾರವೆನಿಸುವಂತೆ ಮಾಡದೇ ಹಿರಿಯರು ಮಗುವಿರುವ ವಾತಾವರಣವನ್ನು ರೂಪಿಸಬೇಕು.

ಆ ವಾತಾವರಣದಲ್ಲಿ ಅವರು ವಿಹರಿಸಬೇಕು. ತಾವು ತಮ್ಮ ವಿಚಾರ, ಧೋರಣೆ, ದೃಷ್ಟಿ, ನಿರೀಕ್ಷೆಗಳನ್ನು ಅವರ ಮೇಲೆ ಹೇರಿ ಅವರ ಮನಸ್ಸನ್ನು, ಹೃದಯವನ್ನು ಭಾರಗೊಳಿಸದಿರುವಂತಹ ಎಚ್ಚರಿಕೆಯನ್ನು ಹಿರಿಯರಾದವರು ವಹಿಸಲೇ ಬೇಕು. ಶಿಶುವು ಎಲ್ಲೆಲ್ಲಿ ಇರುವುದೋ ಅಲ್ಲೆಲ್ಲಾ ಅದು ವಿಹರಿಸುವಂತಾದರೆ ಆ ವಾತಾವರಣದಲ್ಲಿರುವ ಹಿರಿಯಲೆಲ್ಲರೂ ತಮ್ಮ ಜೈವಿಕ ಮತ್ತು ಭಾವನಾತ್ಮಕ ಚೈತನ್ಯವನ್ನು ಪಡೆದುಕೊಳ್ಳುವರು. ಅವರ ಮಾನಸಿಕ ಆರೋಗ್ಯವು ವೃದ್ಧಿಸುವುದು.

ಹೊರತಾಗಿ ಹಾರಾಡಬಹುದಾದ ಹಕ್ಕಿಯ ರೆಕ್ಕೆಗಳನ್ನು ಕಟ್ಟಿ ಬಂಧಿಸಿಟ್ಟರೆ ಅದರ ಬಂಧನದ ಆಕ್ರಂದನ ಇಡೀ ವಾತಾವರಣವನ್ನು ಸೂತಕದ ಗಾಢತೆಗೆ ಒಳಮಾಡುತ್ತದೆ. ಮಕ್ಕಳು ಕಲಿಯುವ ಎಡೆಯಲ್ಲಾಗಲಿ, ನಲಿಯುವ ಕಡೆಯಾಗಲಿ, ನುಡಿಯುವಲ್ಲಿ, ನಡೆಯುವಲ್ಲಿ, ಕಲಿಯುವಲ್ಲಿ, ಬೆಳೆಯುವಲ್ಲಿ ಅವರು ವಿಹರಿಸುವಂತಹ ಶಿಶುಸ್ನೇಹಿ ಪರಿಸರವಿದ್ದಲ್ಲಿ ವರ್ತಮಾನ ಮತ್ತು ಭವಿಷ್ಯದ ಸಂಗತಿಗಳು ಪ್ರಫುಲ್ಲವಾಗಿರುತ್ತವೆ.

ಮಕ್ಕಳಿರುವ ಮನೆ, ಕಲಿಯುವ ಶಾಲೆ, ಆಡುವ ಅಂಗಳ ಎಲ್ಲವೂ ಶಿಶುವಿಹಾರವಾಗಿರಬೇಕು. ಮಕ್ಕಳು ವಿಹರಿಸುವ ಯಾವುದೇ ಜಾಗಗಳಲ್ಲಿ ಹಿರಿಯರು ಒತ್ತಾಸೆ ನೀಡುವ ಅಂಶಗಳೇ ಹೊರತು, ಮಕ್ಕಳ ಇರುವಿಕೆಯೊಂದು ಹಿರಿಯರಿರುವ ಎಡೆಯ ಸಣ್ಣ ಪ್ರಮಾಣದ ಭಾಗವಲ್ಲ.

ಶಿಶುತನದ ಮುಗ್ಧತೆಯ ಸ್ವಭಾವ ವ್ಯಕ್ತಿಯ ಮನದ ಸರಳತೆಯಾದರೆ ಆತನೂ ಕೂಡಾ ಶಿಶುವಿನಂತೆ ಈ ಲೋಕದಲ್ಲಿ ನಲಿಯಬಲ್ಲ. ತನ್ನದೇ ಆದ ಮಾನಸ ಸರೋವರದಲ್ಲಿ ವಿಹರಿಸಬಲ್ಲ. ಶಿಶುವೊಂದು ನಿರ್ಭಯವಾಗಿ, ಸುಖವಾಗಿ, ಹಿತವಾಗಿ, ಆರೋಗ್ಯವಾಗಿ, ಆನಂದವಾಗಿ ವಿಹರಿಸುವಂತಹ ಎಡೆಯಾಗಲಿ ಈ ಜಗ. ಆ ಕಂದಮ್ಮಗಳ ಆನಂದದ ಕಾರುಣ್ಯದಲ್ಲಿ ಹಿರಿಯರೆಲ್ಲರಿಗೂ ನೆಮ್ಮದಿಯಾಗಲಿ. ಲೋಕವೆಲ್ಲವೂ ಹಿತವಾಗಿರಲಿ.

(ಮುಗಿಯಿತು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version