ಅಂತರಂಗ

ಅರಿಮೆಯ ಅರಿವಿರಲಿ-52 : ಮಗುತನದಿಂದ ತನ್ನತನ

Published

on

  • ಯೋಗೇಶ್ ಮಾಸ್ಟರ್

ಹಂಕಾರವನ್ನೇ ಆತ್ಮಗೌರವ ಅಥವಾ ಸ್ವಾಭಿಮಾನವನ್ನಾಗಿ ಭಾವಿಸುವುದು ತನ್ನತನದ ಮೌಲ್ಯವನ್ನು ಗಟ್ಟಿಗೊಳಿಸುವುದೇನಲ್ಲ. ಬದಲಾಗಿ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತಾ ಹೋಗುವುದು. ಆದರೆ ತನ್ನತನದ ಪರಿಕಲ್ಪನೆ ಮತ್ತು ಸ್ವಾಭಿಮಾನದ ಘನತೆಯನ್ನು ನಾವು ಅರಿತುಕೊಳ್ಳುವುದರ ಜೊತೆಗೆ ಮಕ್ಕಳಿಗೆ ಪ್ರಾರಂಭದಿಂದಲೇ ರೂಢಿಗೊಳಿಸಿದರೆ, ಅಥವಾ ಅದರ ಬಗ್ಗೆ ಅರಿವು ಮೂಡಿಸಿದರೆ ಆತ್ಮಗೌರವದ ಬದುಕನ್ನು ಕಟ್ಟಿಕೊಳ್ಳಬಲ್ಲರು.

ಧೈರ್ಯ, ಹಟಮಾರಿತನ, ವಿನಯ, ಸಂಕೋಚ, ನಿಸ್ಸಂಕೋಚ, ಭಯ, ಮೌನ, ಮಾತು, ಕೆಲಸ, ನಿರ್ಗೆಲಸ; ಹೀಗೆ ಎಲ್ಲರೂ ಅಗತ್ಯವಿರುವಷ್ಟು ಹೊಂದಬಹುದು ಮತ್ತು ಉಪಯೋಗಿಸಬಹುದು.
ಇದನ್ನು ಬಹಳ ಗಂಭೀರವಾಗಿ ಗಮನಿಸೋಣ. ಯಾರೊಬ್ಬ ಎಲ್ಲದಕ್ಕೂ ಸಂಕೋಚ ಪಡುತ್ತಾನೋ ಅಥವಾ ಎಲ್ಲದಕ್ಕೂ ನಿರ್ಲಜ್ಜೆಯಿಂದ ಮುಂದಾಗುತ್ತಾನೋ, ಅವನಲ್ಲಿ ಮಾನಸಿಕ ಸಮಸ್ಯೆ ಇದೆ ಎಂದೇ ಅರ್ಥ.

ಅದೇ ಒಬ್ಬ ವ್ಯಕ್ತಿ ಕೆಲವೊಂದು ವಿಷಯಕ್ಕೆ ಸಹಜವಾಗಿ ನಾಚಿಕೆಪಟ್ಟುಕೊಳ್ಳುತ್ತಾನೆ. ಅಗತ್ಯವಿರುವ ಕೆಲವು ವಿಷಯಗಳಿಗೆ ಸಂಕೋಚವಿಲ್ಲದೇ ಮುಂದಾಗುತ್ತಾನೆ ಎಂದರೆ ಅವನು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಿರುವ ಲಕ್ಷಣವನ್ನು ತೋರುತ್ತಿದ್ದಾನೆಂದು ಅರ್ಥ.

ಆತ್ಮಗೌರವ ಅಥವಾ ಸೆಲ್ಫ್ ಎಸ್ಟೀಮ್ ಎಂಬುದು ವ್ಯಕ್ತಿತ್ವ ವಿಕಾಸ, ಸಾಮಾಜಿಕ ಮನಶಾಸ್ತ್ರ, ಚಿಕಿತ್ಸಕ (ಕ್ಲಿನಿಕಲ್) ಮನಶಾಸ್ತ್ರ, ಪುರೋಗಾಮಿತ್ವ (ಡೆವಲಪ್ ಮೆಂಟಲ್) ಮನಶಾಸ್ತ್ರ; ಹೀಗೆ ಹಲವು ಶಾಖೆಗಳಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.
ಇದು ತನ್ನತನದ ಪರಿಕಲ್ಪನೆಯ ಮೇಲೆಯೇ ಅವಲಂಬಿತವಾಗಿದ್ದು ರೋಸೆನ್‍ಬರ್ಗ್ (1965) ಎಂಬ ಮನಶಾಸ್ತ್ರಜ್ಞ ಹೇಳುವಂತೆ, ಸ್ವಾಭಿಮಾನ ಎಂದರೆ ಒಬ್ಬ ವ್ಯಕ್ತಿಯ ಸಮಗ್ರವಾದ ತನ್ನತನದ ಸಕಾರಾತ್ಮಕ ಮೌಲ್ಯಮಾಪನ. ಜೊತೆಗೆ ತನ್ನನ್ನು ತಾನು ಗೌರವಿಸಿಕೊಳ್ಳುವುದು ಮತ್ತು ತನ್ನನ್ನು ಸತ್ವಪೂರ್ಣ ವ್ಯಕ್ತಿ ಎಂದು ಪರಿಗಣಿಸಿಕೊಳ್ಳುವುದು.

ಮಗುತನದ ಹಂತಗಳು

ಮಗುವಿನ ಬಾಲ್ಯದಲ್ಲಿಯೇ ಗೌರವಪೂರ್ಣವಾದ ತನ್ನತನದ ಭಾವವನ್ನು ರೂಪುಗೊಳಿಸುವ ಜವಾಬ್ದಾರಿಯನ್ನು ಮಗುವನ್ನು ನೋಡಿಕೊಳ್ಳುವ ಹಿರಿಯರು ಹೊರಬೇಕು.

ಸೊನ್ನೆ ವರ್ಷದಿಂದ ಎರಡು ವರ್ಷಗಳ ವರೆಗೆ

1. ಮಗುವು ಸತತವಾದ ಗಮನವನ್ನು ಪಡೆಯುತ್ತಿದ್ದರೆ, ಅದಕ್ಕೆ ಪ್ರೀತಿಯಿಂದ ಕೂಡಿರುವ ಸಂಬಂಧದ ಅನುಭವವಾಗುತ್ತಿದ್ದರೆ, ಆ ಮಗುವು ಸಕಾರಾತ್ಮಕವಾದ ತನ್ನತನದ ಭಾವವನ್ನು ಹೊಂದುತ್ತದೆ.

2. ಮಗುವು ತನಗಾಗುತ್ತಿರುವ ಅನುಭವದ ಆಧಾರದಲ್ಲಿ ಆದ್ಯತೆಗಳನ್ನು ಕಂಡುಕೊಳ್ಳುತ್ತದೆ. ಯಾವುದು ಮೊದಲು ಮುಖ್ಯ, ಬೇಕಾದದ್ದು, ಹಿತ ನೀಡುವಂತದ್ದು; ಇಂತಹ ಅನುಭವಗಳನ್ನು ಆಧರಿಸಿರುವ ಆ ಆದ್ಯತೆಗಳಿಂದ ತನ್ನತನದ ಸಹಜವಾದ ಪ್ರಜ್ಞೆಯನ್ನು ರೂಪಿಸಿಕೊಳ್ಳುತ್ತದೆ.

3. ಅಂಬೆಗಾಲಿಡುವ ಶಿಶುವಿನ ಇತಿಮಿತಿಯನ್ನು ನಿಯಂತ್ರಿಸುವ ಕಟ್ಟಳೆ ಸುರಕ್ಷಿತ ಭಾವವನ್ನು ಒದಗಿಸುತ್ತದೆ. ಆದರೆ ಆ ಕಟ್ಟಳೆ ಮೃದುವಾಗಿಯೂ ಮತ್ತು ದೃಢವಾಗಿಯೂ ಇರಬೇಕು. ಉದಾಹರಣೆಗೆ, “ನೀನು ಗೇಟಿನ ಆಚೆ ಹೋಗಬಾರದು. ಹಾಗೆ ಹೋಗಲು ನಾನು ಬಿಡುವುದಿಲ್ಲ. ಅಲ್ಲಿ ಗಾಡಿಗಳು ಬರುತ್ತವೆ. ಅಪಾಯವಿದೆ” ಎಂಬ ನಿಯಂತ್ರಣವು ಇರಬೇಕು.

ಆದರೆ ಅದು, “ಹೋಗಬಾರದು ಎಂದರೆ ಹೋಗಬಾರದು. ಹೋದರೆ ಏಟು ಕೊಡ್ತೀನಿ. ಹೇಳಿದಷ್ಟು ಕೇಳು” ಎನ್ನುವ ಮಾತಿನ ಬಗೆಯು ಸಕಾರಾತ್ಮಕವಾದ ತನ್ನತನವನ್ನು ರೂಪಿಸುವ ಬದಲು ಅರಿಮೆಯನ್ನು ಹುಟ್ಟಿಸುವ ಅಥವಾ ದೌರ್ಬಲ್ಯಕ್ಕೆ ಎಡೆಮಾಡುವಂತಹ ನಕಾರಾತ್ಮಕ ಗುಣಗಳನ್ನು ರೂಢಿಸುತ್ತದೆ.

4. ಮಗುವು ಎರಡು ವರ್ಷದ ಹೊತ್ತಿಗೆ ಭಾವವನ್ನು ಮತ್ತು ಭಾಷೆಯನ್ನು ಗ್ರಹಿಸಲು ಆರಂಭಿಸಿದ್ದು ನಾನು ಎಂಬ ಭಾವವು ರೂಪುಗೊಳ್ಳುತ್ತಿರುತ್ತದೆ. ಅಲ್ಲಿಗೆ ತನ್ನತನದ ಸಂರಚನೆ ಪ್ರಾರಂಭವಾಯಿತೆಂದೇ ಅರ್ಥ. ಮಗುವಿನ ಗಿಲಕಿಯನ್ನೋ ಅಥವಾ ಅದು ನಿತ್ಯ ಬಳಸುವ ವಸ್ತುವನ್ನೋ ತೋರಿ, “ಇದು ಯಾರಿಗೆ ಬೇಕು?” “ಇದು ಯಾರದು?” ಎಂದರೆ, ನನಗೆ, ನನ್ನದು ಎಂಬ ಭಾವವನ್ನು ವ್ಯಕ್ತಪಡಿಸಲು ಅದಕ್ಕೆ ಸಾಧ್ಯವಾಗುತ್ತದೆ. ಅವುಗಳೆಲ್ಲಾ ತನ್ನತನದ ಆರಂಭಿಕ ಪ್ರಕಟಣೆಗಳೇ.

ಮೂರರಿಂದ ನಾಲ್ಕರವರೆಗೆ

1. ಮೂರು ಮತ್ತು ನಾಲ್ಕುವರ್ಷದ ಮಗುವು ತನ್ನನ್ನು ತಾನು ಪ್ರತ್ಯೇಕ ಮತ್ತು ಭಿನ್ನ ವ್ಯಕ್ತಿಗಳೆಂದು ನೋಡಿಕೊಳ್ಳಲು ಪ್ರಾರಂಭಿಸುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿರುವ ವಸ್ತುಗಳು, ಉಡುಪುಗಳು, ಬಂದವರು ಮಾತಾಡಿಸುವ ರೀತಿ; ಇವೆಲ್ಲವೂ ಬೇರೆ ಹಿರಿಯರದ್ದಕ್ಕಿಂತ ಭಿನ್ನ ಎಂಬುದನ್ನು ಗುರುತಿಸುತ್ತವೆ.

ತಮ್ಮದು ಯಾವುದು, ಇತರರದು ಯಾವುದು ಎಂದು ವಸ್ತುಗಳನ್ನು ಮಾತ್ರ ಗುರುತಿಸುವುದಲ್ಲ. ವ್ಯಕ್ತಿತ್ವವನ್ನೂ ಕೂಡಾ ಕಂಡುಕೊಳ್ಳುತ್ತಿರುತ್ತವೆ. ಆದರೆ ಅದಿನ್ನೂ ಬಿರಿಯುವ ಹಂತದಲ್ಲಿದ್ದರೂ ಪ್ರಕ್ರಿಯೆ ಅದಾಗಲೇ ಪ್ರಾರಂಭವಾಗಿದೆ ಎಂದೇ ಅರ್ಥ.

2. ತನ್ನತನದ ಬಗ್ಗೆ ಇರುವ ಅರಿವು ಬಹುಪಾಲು ಶಾಬ್ಧಿಕ ವರ್ಣನೆಯಾಗಿರುತ್ತದೆ. ತಾನು ಹೇಗೆ ಇದ್ದೇನೆ? ತಾನು ಏನು ಮಾಡುತ್ತೇನೆ? ತನಗೆ ಏನು ಬೇಕು? ಈ ರೀತಿ. ಆದರೆ ಅದು ನಾನು ಹೀಗೆ ಇರುವುದು, ನನಗೆ ಹೀಗಿರಬೇಕು; ಈ ರೀತಿಯ ಹಕ್ಕು ಅಥವಾ ಅಧಿಕಾರದ ತಳಹದಿಯದ್ದಾಗಿದ್ದು ತೀರ್ಮಾನ ತೆಗೆದುಕೊಳ್ಳುವಂತದ್ದಾಗಿರುವುದಿಲ್ಲ.

3. ಶಾಲೆಗೆ ಅಥವಾ ಬಾಲವಾಡಿಗೆ ಹೋಗ ವಯಸ್ಸಿಗೆ ಬರುವ ಮಕ್ಕಳಾಗಲೇ ಸ್ವತಂತ್ರವಾಗಿ ತಾವೇನು ಮಾಡಬಲ್ಲೆವು ಎಂಬುದರ ಬಗ್ಗೆ ಕುತೂಹಲವನ್ನು ಹೊಂದಿರುತ್ತಾರೆ ಮತ್ತು ಅವುಗಳ ಪ್ರಯೋಗಿಸಲು ಹಾತೊರೆಯುತ್ತಿರುತ್ತಾರೆ. ಅಂತಹ ಸಮಯದಲ್ಲಿ ತನ್ನತನದ ಸಾಮರ್ಥ್ಯ ಮತ್ತು ಚಿತ್ರಣವನ್ನು ಗುರುತಿಸಿಕೊಳ್ಳುವ ಆರಂಭವಾಗಿರುತ್ತದೆ.

ಬಹಳಷ್ಟು ಪೋಷಕರು ಅದನ್ನು ನಿಯಂತ್ರಿಸಲು ಹಾತೊರೆಯುತ್ತಾರೆ. ಗಮನಿಸಬೇಕು, ನಿಯಂತ್ರಣದಲ್ಲೂ ಇಡಬೇಕು. ಆದರೆ ಆ ನಿಯಂತ್ರಣವು ಸಕಾರಣವಾಗಿರಬೇಕು. ನನಗೆ ಇಷ್ಟವಿಲ್ಲ ಮಾಡಬೇಡ. ಸುಮ್ಮನೆ ಅದೆಲ್ಲಾ ಯಾಕೆ? ಈಗ ಸುಮ್ಮನೆ ಕೂತ್ಕೊಂಡಿದ್ರೆ ಸರಿ ಹೋಯ್ತು. ನನಗೆ ಮುಂಚೆನೇ ತಲೆ ಸರಿ ಇಲ್ಲ, ಇನ್ನು ನೀನು ಬೇರೆ ರೇಗಿಸಬೇಡ; ಈ ಬಗೆಯ ಹಲವು ಕಾರಣಗಳಿಂದ ಮಕ್ಕಳನ್ನು ನಿಯಂತ್ರಿಸಲು ಹೋಗಬಾರದು.

4. ಬಹಳಷ್ಟು ಪೋಷಕರು ತಮ್ಮ ದೌರ್ಬಲ್ಯದ ಕಾರಣದಿಂದ ಮಕ್ಕಳ ಸಾಮರ್ಥ್ಯವನ್ನು ಕಡೆಗಣಿಸುತ್ತಾರೆ. ತಮಗಿರುವ ದುರ್ಬಲ ತನ್ನತನದ ಚಿತ್ರಣದಿಂದಾಗಿ ಮಕ್ಕಳು ರೂಪಿಸಿಕೊಳ್ಳಬಹುದಾದ ಬಲವಾದ ಮತ್ತು ಸುಂದರವಾದ ಮಗುತನದ ಚಿತ್ರಣವನ್ನು ಹಾಳುಗೆಡವುತ್ತಾರೆ.

ಐದರಿಂದ ಆರರವರೆಗೆ

1. ಗುತನವು ವಿಸ್ತಾರಗೊಳ್ಳುವ, ಬದಲಾಗುವ ಹಂತವಿದು. ಸ್ಥಿತ್ಯಂತರದ ಮಜಲಿದು ‘ನಾನು’ ಇಂದ ‘ನಾವು’, ‘ನನ್ನ’ ಇಂದ ‘ನಮ್ಮ’. ನಮ್ಮ ಅಗತ್ಯಗಳೇನು, ನಾವು ಎಂಬ ಗುಂಪಿಗೆ ಏನು ಬೇಕು, ಅದು ಹೇಗಿರಬೇಕು ಎಂಬ ಆಸಕ್ತಿಗಳು ಮೊಳೆಯುವುದು ಈ ವಯಸ್ಸುಗಳಲ್ಲಿ.

2. ಬಾಲವಾಡಿಯಲ್ಲಿ ಮಕ್ಕಳಿಗೆ ತಮಗೆ ಏನು ಬೇಕು, ಯಾವುದನ್ನು ಆಸೆ ಪಡುತ್ತೇವೆ, ಭಾವಿಸುವುದು ಎಂದರೇನು ಎಂದೆಲ್ಲಾ ಸಂವಹನದ ಮೂಲಕ ಮನದಟ್ಟು ಮಾಡುತ್ತಾರೆ.

3. ಐದಾರು ವರ್ಷದ ಮಕ್ಕಳು ಭಾಷೆಯಲ್ಲಿ ತಮ್ಮನ್ನೂ ಮತ್ತು ತಮ್ಮವರ ಸಂಬಂಧ ಮತ್ತು ಗುರುತುಗಳನ್ನೂ ವಿವರಿಸುವಷ್ಟರ ಮಟ್ಟಿಗೆ ಮುಂದುವರೆದಿರುತ್ತಾರೆ.

ಬಾಲ್ಯಾವಸ್ಥೆಯ ಮಧ್ಯಕಾಲ

ಬಾಲ್ಯದ ಮಧ್ಯಕಾಲ ಎನ್ನಬಹುದಾದ ಏಳರಿಂದ ಹನ್ನೊಂದು ವರ್ಷದ ಅವಧಿಯಲ್ಲಿ ಸಾಮಾಜಿಕವಾಗಿ ತಮ್ಮನ್ನು ಮಕ್ಕಳು ಗುರುತಿಸಿಕೊಳ್ಳಲಾರಂಭಿಸುತ್ತಾರೆ. ಇತರರೊಂದಿಗೆ ಹೇಗಿರಬೇಕು, ಅವರೊಂದಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬ ಸಾಮರ್ಥ್ಯವೂ ಈ ಹಂತಕ್ಕಾಗಲೇ ರೂಢಿಯಾಗತೊಡಗುತ್ತಿರುತ್ತದೆ. ತಮ್ಮನ್ನು ಇತರರು ಹೇಗೆ ಕಾಣುತ್ತಾರೆ ಎಂದೂ ಅವರು ಗಮನಿಸುತ್ತಿರುತ್ತಾರೆ.

ಹಾಗೆಯೇ ಇತರರ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಮನೆಯವರಲ್ಲದ ಇತರರ ಬಗ್ಗೆ ಆಸಕ್ತಿ ತೋರುತ್ತಾರೆ. ಕೆಲವರನ್ನು ಇಷ್ಟಪಡುವುದಿಲ್ಲ. ಕೆಲವರನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಹಂತದಲ್ಲಿ ಸಾಮಾನ್ಯವಾಗಿ ತಮ್ಮನ್ನು ಇತರರೊಂದಿಗೆ ಮತ್ತು ತಮ್ಮ ಸ್ಥಿತಿಗತಿಗಳನ್ನು ಇತರರ ಸ್ಥಿತಿಗತಿಗಳೊಂದಿಗೆ ಹೋಲಿಸಿಕೊಂಡು ನೋಡುವ ಸಾಮರ್ಥ್ಯವೂ ಈ ಮಧ್ಯಕಾಲದ ಬಾಲ್ಯದಲ್ಲಿ ಬೆಳವಣಿಗೆಯಾಗುತ್ತದೆ.

ಮುಂದೆ ವಯಸ್ಕರಾಗುವ ಮಕ್ಕಳ ಗ್ರಹಿಕೆ ಮತ್ತು ಅನುಭವಗಳ ಈ ಹಂತವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಹಂತದ ಮಗುತನವು ಎಚ್ಚರಿಕೆಯಿಂದ ರೂಪುಗೊಂಡರೆ ಮುಂದೆ ವ್ಯಕ್ತಿಯ ತನ್ನತನವೂ ಅದಕ್ಕೆ ಪೂರಕವಾಗಿ ರೂಪುಗೊಳ್ಳುತ್ತದೆ. ಮಗುತನವೇ ವ್ಯಕ್ತಿಯ ತನ್ನತನವಾಗಿ ರೂಪಾಂತರಗೊಳ್ಳುವುದೆಂಬ ಸ್ಪಷ್ಟ ಅರಿವು ಮಗುವನ್ನು ಪಾಲಿಸುವ ಹಿರಿಯರಿಗೆ ಇರಬೇಕು.

ಮಗುತನದ ರೂಪಾಂತರ

ಮಗುತನವು ತನ್ನತನವಾಗಿ ಸಹಜವಾಗಿ ರೂಪಾಂತರಗೊಳ್ಳುತ್ತಿದ್ದರೆ ಕೆಲವು ಲಕ್ಷಣಗಳನ್ನು ಗುರುತಿಸಬಹುದು.

1. ಹೆಚ್ಚು ಸಮತೋಲದ ಮನಸ್ಥಿತಿಯನ್ನು ಹೊಂದಿರುತ್ತಾರೆ. ತಮ್ಮ ಬಗ್ಗೆ ವಿವರಿಸಿಕೊಳ್ಳುವುದು ಕಡಿಮೆಯಾಗಿರುತ್ತದೆ. ಕೆಲವೊಮ್ಮೆ ವಿವರಿಸಿಕೊಳ್ಳಲೇ ಹೋಗುವುದಿಲ್ಲ. ಕೆಲವರು ಎಷ್ಟೋ ದೊಡ್ಡವರಾಗಿರುತ್ತಾರೆ. ದೊಡ್ಡದೊಡ್ಡ ಲೇಖಕರು, ಸಂಗೀತಗಾರರು, ಕಲಾವಿದರಾಗಿರುತ್ತಾರೆ. ಕೆಲವೊಮ್ಮೆ ಸಾಮಾನ್ಯ ಮನೆವಾರ್ತೆಯ ಮಹಿಳೆಯೋ, ಉದ್ಯೋಗಸ್ಥ ಪುರುಷನೋ ಆಗಿರುತ್ತಾರೆ.

ಆದರೆ ಅವರು ಬಾಯಿ ಬಿಟ್ಟರೇನೇ ತಮ್ಮ ಬಗ್ಗೆ ವಿವರಣೆ. ಇದು ಎಷ್ಟೋ ಬಾರಿ ಸಂದರ್ಭಾನುಸಾರವಾಗಿರುವುದೇ ಇಲ್ಲ. ವರ್ತಮಾನದ ಸಂಗತಿಗಳನ್ನು ತಮ್ಮ ಭೂತಕಾಲದ ಅನುಭವಗಳಿಗೆ ಮತ್ತು ತಮ್ಮ ಮನೆಯವರ ಕುರಿತಾದ ವಿಷಯಗಳಿಗೆ ಕೊಂಡಿ ಬೆಸೆಯುತ್ತಾರೆ.

ಹೇಳ್ತಾರೆ, ಹೇಳ್ತಾರೆ, ಹೇಳ್ತಾನೇ ಇರ್ತಾರೆ; ತಮ್ಮ ತಂದೆ ತಾಯಿ, ಅದ್ಯಾವುದೋ ಅಂಗಡಿ, ಅಲ್ಲಿ ಸಾಮಾನುಗಳನ್ನು ತರುತ್ತಿದ್ದದ್ದು, ತಮ್ಮ ಗುರುಗಳು, ತಾವು ಮದುವೆಯಾದಾಗ ಏನಾಯ್ತು; ಯಾವ ವಿಷಯವಾದರೂ ಪ್ರಸ್ತುತ ವಿಷಯಕ್ಕೆ ತಗುಲಿಕೊಳ್ಳಬಹುದು. ಕೇಳುವವರಿಗೆ ಅವುಗಳನ್ನು ಕೇಳುವ ಯಾವ ಅಗತ್ಯವೂ ಇರುವುದಿಲ್ಲ. ಆದರೂ ಕೇಳಲೇಬೇಕಾಗುತ್ತದೆ.

“ಓ, ಹಾಗಾ? ಸರಿ, ಆಮೇಲೆ?” ಇತ್ಯಾದಿ ತಾವು ಕೇಳುತ್ತಿದ್ದೇವೆಂಬ ಸೂಚನೆ ನೀಡಲು ಹುಸಿ ಆಸಕ್ತಿ ತೋರುತ್ತಿರುತ್ತಾರೆ. ಕೇಳುಗರಿಗೆ ಅವರ ಮಾತನ್ನು ಎಲ್ಲಿ ತುಂಡರಿಸಬೇಕೆಂದೂ ತಿಳಿಯುವುದಿಲ್ಲ. ಕೆಲವೊಮ್ಮೆ ತೀರಾ ಅನಾಮತ್ತಾಗಿ ಮಾತಿನ ಸರಣಿಯನ್ನು ತುಂಡರಿಸಿ ಮುಂದೆ ಹೋಗಬೇಕಾಗುತ್ತದೆ.

ಒಂದು ವೇಳೆ ಹಾಗೆ ಮಾತಾಡುತ್ತಿರುವವರೊಡನೆ ಸ್ನೇಹ ಮತ್ತು ಸಲುಗೆ ಇದ್ದಲ್ಲಿ “ಮಾತು ನಿಲ್ಲಿಸು” ಎಂದು ನೇರವಾಗಿ ಹೇಳಬಹುದಾಗಿರುತ್ತದೆ. ಇಲ್ಲವಾದರೆ, ಯಾರಿಗಾದರೂ ‘ನನಗೆ ಫೋನ್ ಮಾಡು’ ಎಂದು ಮೆಸೇಜ್ ಮಾಡಿ, ಫೋನ್ ಬಂದಾದ ಮೇಲೆ, ‘ಓ, ಅರ್ಜೆಂಟ್ ಕಾಲ್. ನನಗೆ ಏನೋ ಕೆಲಸವಿದೆ. ಮತ್ತೆ ಸಿಗೋಣ. ನೀವು ಹೇಳುತ್ತಿದ್ದದ್ದು ತುಂಬಾ ಇಂಟರೆಸ್ಟಿಂಗ್’ ಅಂತ ರೀಲ್ ಬಿಟ್ಟು ಓಡುತ್ತಾರೆ.

ಅವರಿಗೆ ಅವರ ಬದುಕು, ಸಂಬಂಧಗಳು, ನೋವು ನಲಿವುಗಳು, ನೆನಪುಗಳು, ಹೆಮ್ಮೆ ಅಪಮಾನಗಳೆಲ್ಲಾ ನಿಜಕ್ಕೂ ಆಪ್ತವೂ, ಮಹತ್ತರವೂ ಆಗಿರುತ್ತದೆ. ಆದರೆ, ಸಮಯಾಸಮಯದ ಪ್ರಜ್ಞೆ ಇಲ್ಲದೇ ಹೇಳುವುದರಿಂದ ಅವು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ. ಇನ್ನೂ ಕೆಲವೊಮ್ಮೆ ನಿಷ್ಟುರವಾಗಿಯೇ ಗಮನಿಸಬೇಕು. ನಮಗೆ ನಮ್ಮ ಅನುಭವಗಳಾಗಲಿ, ನೆನಪುಗಳಾಗಲಿ ಮುಖ್ಯವೂ ಮಹತ್ವದ್ದೂ ಆಗಿರುತ್ತದೆ.

ಆದರೆ ನನ್ನೆದುರಿನ ವ್ಯಕ್ತಿಗೇನಾಗಬೇಕು ಅವುಗಳನ್ನು ಕಟ್ಟಿಕೊಂಡು? ಸಂದರ್ಭಾನುಸಾರವೋ ಅಥವಾ ಕೋರಿಕೆಯ ಮೇರೆಗೋ ಅಥವಾ ಉದಾಹರಣೆಯ ಸಲುವಾಗಿಯೋ ಹಂಚಿಕೊಳ್ಳಬೇಕು. ಅದೂ ಚಿಕ್ಕದಾಗಿ. ಇಲ್ಲದಿದ್ದರೆ ಆ ವ್ಯಕ್ತಿಗಳು ಫೋನ್ ಮಾಡಿದರೆ ಇತರರು ಕರೆ ಸ್ವೀಕರಿಸಲು ಹೆದರುತ್ತಾರೆ, ಏಕೆಂದರೆ, ‘ಒಂದೆರಡು ನಿಮಿಷ ಮಾತಾಡಬಹುದಾ?’ ಎಂದೂ ಕೇಳುವುದಿಲ್ಲ. ಸುಮ್ಮನೆ ಮಾತಾಡಲು ಪ್ರಾರಂಭಿಸಿ ಅದು ಗಂಟೆಗಟ್ಟಲೆ ಹೋಗುತ್ತದೆ. ಕರೆ ಸ್ವೀಕರಿಸಿದವರ ಸಮಯ ಭಯಂಕರವಾಗಿ ಹಾಳಾಗಿರುತ್ತದೆ. ಸಮಯ ವ್ಯರ್ಥವಾಯಿತೆಂದರೆ ಅಷ್ಟು ಜೀವನವೇ ವ್ಯರ್ಥವಾಯಿತೆಂದು.

ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಬದುಕು. ಹಾಗಾಗಿ ಬದುಕು ಮತ್ತು ಸಮಯ ಎರಡೂ ಸಮಾನಾರ್ಥಕ ಪದಗಳು. ಸಮಯವನ್ನು ಕೊಟ್ಟರೆಂದರೆ ಅವರ ಜೀವನದ ಒಂದು ಭಾಗವನ್ನೇ ಕೊಟ್ಟಿದ್ದಾರೆಂದು ಅರ್ಥ. ಹಾಗಾಗಿ ನಾವು ನಮ್ಮ ಸಮಯವನ್ನೂ ಮತ್ತು ಇತರರ ಸಮಯವನ್ನೂ ಗೌರವಿಸುವುದರ ಮೂಲಕ ಜೀವನಪ್ರೀತಿಯನ್ನು ಅಭಿವ್ಯಕ್ತಿಸಬೇಕು.

ಮಗುತನವು ಸ್ವಾಸ್ಥ್ಯಪೂರ್ಣವಾದ ತನ್ನತನಕ್ಕೆ ಬದಲಾಗಿರುವುದರ ಸ್ಪಷ್ಟ ಲಕ್ಷಣವೇ ತನ್ನ ಸಮಯ ಮತ್ತು ಇತರರ ಸಮಯವನ್ನು ಜೀವನದ ಮೌಲಿಕ ಕ್ಷಣಗಳನ್ನಾಗಿ ರೂಪಿಸಿಕೊಳ್ಳುವುದು.
ಮಗುವು ತನ್ನ ಬಾಲ್ಯದಲ್ಲಿಯೇನಾದರೂ ತನ್ನ ತಾನು ವಿವರಿಸಿಕೊಂಡು ಸುಧೀರ್ಘವಾಗಿ ಮಾತಾಡುತ್ತಲೇ ಇರುವ ಲಕ್ಷಣಗಳನ್ನು ತೋರಿದರೆ ಎಚ್ಚರವಹಿಸಬೇಕು. ಅವರ ಮಗುತನವು ತನ್ನತನಕ್ಕೆ ರೂಪಾಂತರಗೊಳ್ಳುವ ಅವಧಿಯಲ್ಲಿಯೇ ಅವರಿಗೆ ಅದರ ರೂಢಿ ತಪ್ಪಿಸಬೇಕು.

2. ಭ್ರಾಮಕವಾದ ಆದರ್ಶದ ತನ್ನತನದ ಪ್ರತಿಮೆಗೂ ಮತ್ತು ತನ್ನ ನಿಜವಾಗಿರುವ ತನ್ನತನಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತಿಳಿಯುತ್ತಾರೆ.
ತಾನು, ತನ್ನ ಸಾಮರ್ಥ್ಯ, ದೌರ್ಬಲ್ಯ, ಸಂಪನ್ಮೂಲಗಳು, ಸಾಧ್ಯತೆಗಳು; ಇತ್ಯಾದಿಗಳನ್ನು ಅರಿತುಕೊಂಡು ಅವುಗಳ ಆಧಾರದಲ್ಲಿ ತನ್ನ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಹೋಗುವುದು ತನ್ನತನದ ಸಾಕ್ಷಾತ್ಕಾರವಾಗಿರುವವರಿಗೆ ಸಾಧ್ಯ. ಇಲ್ಲವಾದರೆ ಭ್ರಾಮಕವಾದ ಆದರ್ಶದ ಅಥವಾ ಹಗಲುಗನಸಿನ ಗೋಪುರಗಳಲ್ಲಿ ತಮ್ಮನ್ನು ಕಂಡುಕೊಂಡು ವಾಸ್ತವದ ಬದುಕಿನಲ್ಲಿ ಅವರು ತಮ್ಮತನವನ್ನು ಕಾಣುವುದೇ ಇಲ್ಲ.

3. ತನ್ನ ಸಾಮರ್ಥ್ಯವನ್ನು ಮುಂದಿಡುವುದು, ತಾನು ಹೇಗಿದ್ದೇನೆಂದು ಮುಂದಿಡುವುದಲ್ಲ.
ಕೆಲವು ವ್ಯಕ್ತಿಗಳನ್ನು ಗಮನಿಸಿ. ತಾನೆಷ್ಟು ಭಾವುಕವಾದ ವ್ಯಕ್ತಿ, ತಾನೆಷ್ಟು ಮರುಗುತ್ತೇನೆ, ತನಗೆ ಖುಷಿಯಾದರೆ ಹೇಗೆ ವರ್ತಿಸುತ್ತೇನೆ, ತನಗೆ ಅಪಮಾನವಾದರೆ ಹೇಗೆ ತಡೆದುಕೊಳ್ಳಲಾರದೇ ತಳಮಳಿಸುತ್ತೇನೆ, ತಾನು ಹೇಗೆ ವ್ಯಕ್ತಿಗಳನ್ನು ಹಚ್ಚಿಕೊಳ್ಳುತ್ತೇನೆ; ಇಂತಹ ತಮ್ಮ ವರ್ತನೆಗಳ ಬಗ್ಗೆಯೇ ಮಾತಾಡುತ್ತಾರೆ.

ಅದನ್ನೇ ಹೇಳುತ್ತಿರುತ್ತಾರೆ. ಆದರೆ, ಅವರ ತನ್ನತನವು ಸರಿಯಾಗಿ ರೂಪಾಂತರವಾಗಿದ್ದ ಪಕ್ಷದಲ್ಲಿ, ‘ತಾನು ಯಾವ ಕೆಲಸ ಮಾಡಬಲ್ಲೆ? ತನ್ನ ಸಾಮರ್ಥ್ಯವೇನು? ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯ ಕೇಳುಗರ ಯಾವ ಕೆಲಸಕ್ಕೆ ಉಪಯೋಗಕ್ಕೆ ಬರಬಲ್ಲದು? ಇತ್ಯಾದಿಗಳನ್ನು ತಮ್ಮ ಕೇಳುಗರಿಗೆ ಮನವರಿಕೆ ಮಾಡಿಕೊಡುತ್ತಾರೆ.

ನಾನು ಹೇಗೆ ವರ್ತಿಸುತ್ತಿದ್ದೇನೆ, ನನ್ನ ಅಂಟಿಕೆ, ವ್ಯಾಮೋಹಗಳೇನು ಎಂದು ನನಗೆ ನನ್ನತನವನ್ನು ರೂಪಿಸಿಕೊಳ್ಳುವ ಅಥವಾ ಬದಲಿಸಿಕೊಳ್ಳುವ ದಿಕ್ಕಿನಲ್ಲಿ ಬೇಕಾಗಿರುವುದು. ಇತರರಿಗೆ ಅದನ್ನು ವಿವರಿಸುವ ಅಗತ್ಯವಿಲ್ಲ. ಅವರಿಗೆ ತಿಳಿಯಬೇಕಾಗಿರುವುದು ತನ್ನ ಸಾಮರ್ಥ್ಯ. ಉಳಿದದ್ದು ಅವರೇ ನೋಡುತ್ತಾರಲ್ಲಾ, ಅನುಭವಿಸುತ್ತಾರಲ್ಲಾ!

4. ತನ್ನತನದಲ್ಲಿ ಮೂಡುವ ವ್ಯಕ್ತಿಗತವಾದ ಭಾವ

ನಾನು ಎಂಬ ಭಾವವು ತನ್ನತನ ಎಂಬ ಅರಿವಿನ ಜೊತೆಗೆ ಒಂದಾಗಿ ಕೆಲಸ ಮಾಡುವುದು. ಇದರಿಂದ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸಂಬಂಧಗಳನ್ನು ಕುರಿತು ಗೊಂದಲಗಳನ್ನು ಸೃಷ್ಟಿಸಿಕೊಳ್ಳದೇ ಹದವಾದ ಮತ್ತು ಮಧುರವಾದ ವಾತಾವರಣವನ್ನು ತಮಗೂ ಸೃಷ್ಟಿಸಿಕೊಳ್ಳಲು ಸಾಧ್ಯ, ಇತರರಿಗೂ ಆ ಅನುಭವ ನೀಡಲು ಸಾಧ್ಯ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version