ಅಂತರಂಗ

ಧರ್ಮ ಮರ್ಮ-08 : ನವಸಮಾಜದ ಕನಸುಗಾರರು

Published

on

  • ಯೋಗೇಶ್ ಮಾಸ್ಟರ್

ಕ್ರಿಸ್ತನ ಮರಣಾನಂತರ ಪ್ರಾರಂಭಿಕ ಕ್ರೈಸ್ತರು ಮತ್ತು ಬಸವಣ್ಣನ ಗಡಿಪಾರಿನ ನಂತರ ಶರಣರು ಹೇಗೆ ಅಪಾರವಾದ ಕಿರುಕುಳ, ಹಿಂಸೆ ಮತ್ತು ಬಹಿಷ್ಕಾರಗಳನ್ನು ಅನುಭವಿಸಿದರು. ಅದು ಮುಸಲ್ಮಾನರಿಗೂ ತಪ್ಪಿದ್ದೇನಲ್ಲ. ಪ್ರವಾದಿ ಮಹಮದರ ಸಮಯದಲ್ಲಿಯೇ ಅವರಿಗೂ ಮತ್ತು ಅವರ ಅನುಯಾಯಿಗಳಿಗೆ ಭಯಾನಕ ಕಿರುಕುಳಗಳನ್ನು, ಹಿಂಸೆಗಳನ್ನು ನೀಡಲಾಗಿತ್ತು. ಅವರನ್ನು ತಡೆಯಲು ಅದೆಷ್ಟು ಸಾಧ್ಯವೋ ಅಷ್ಟು ಬಲಪ್ರಯೋಗಗಳಾಗುತ್ತಿದ್ದವು.

ಇದು ಯಾವುದೇ ಸತ್ಯಾನ್ವೇಷಕರಿಗೆ ಮತ್ತು ನವಸಮಾಜದ ಪ್ರತಿಪಾದಕರಿಗೆ ತಪ್ಪಿದ್ದೇನಲ್ಲ.
ಮುಸಲ್ಮಾನರ ಮೊದಲಿನ ಅಬ್ರಹಾಮನ ಧಾರ್ಮಿಕತೆಯ ಪರಂಪರೆಯನ್ನು ಗಮನಿಸುವುದಾದರೆ ಮೊದಲು ಈಜಿಪ್ಟಿನಲ್ಲಿ ಇಸ್ರೇಲರು ಈ ಕಿರುಕುಳಕ್ಕೆ ಒಳಗಾಗಿದ್ದರು. ಅವರನ್ನು ಐಗುಪ್ತ್ಯರ (ಈಜಿಪ್ಟಿನವರ) ಫರೋಹನು ಇಸ್ರೇಲಿನ ಹೀಬ್ರೂಗಳನ್ನು ತನ್ನ ದಾಸ್ಯದಲ್ಲಿರಿಸಿಕೊಂಡಿದ್ದರು. ಹಾಗೂ ಅವರ ಸಂತತಿಯು ಹೆಚ್ಚಾಗದಂತೆ ನೋಡಿಕೊಳ್ಳುತ್ತಿದ್ದನು. ಗಂಡು ಮಕ್ಕಳಾದರೆ ಕೊಲ್ಲುವ ಮತ್ತು ಹೆಣ್ಣು ಮಕ್ಕಳಾದರೆ ಮಾತ್ರ ಉಳಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಹಾಗೆ ಮಾಡಲು ಈಜಿಪ್ಟಿನ ಸೂಲಗಿತ್ತಿಯರಿಗೆ ಸೂಲಗಿತ್ತಿಯರಿಗೆ ಸೂಚನೆ ನೀಡಲಾಗಿತ್ತು. ಅವರು ಹಾಗೆ ಮಾಡಲಿಲ್ಲವೆನ್ನುವುದು ಬೇರೆ ವಿಚಾರ.

ಆದರೆ ಇದೇ ಬಗೆಯಲ್ಲಿ ದ್ವೇಷ ಮತ್ತು ಹಟದ ಸಾಧನೆಗಾಗಿ ಹುಟ್ಟುತ್ತಿದ್ದಂತೆ ಗಂಡು ಮಕ್ಕಳನ್ನು ಕೊಲ್ಲುವ ಪ್ರಕರಣಗಳನ್ನು ಹಲವು ಕಡೆ ಗಮನಿಸುತ್ತೇವೆ. ಅದಕ್ಕೆ ಎರಡು ಉದಾಹರಣೆಯೆಂದರೆ ಯೇಸುವಿನ ಜನನದ ಕಾಲದಲ್ಲಿ ಹೇರೋದನು ಯೆಹೂದ್ಯರ ಅರಸ ಹುಟ್ಟುವನು ಎಂಬ ಭವಿಷ್ಯವನ್ನು ನಂಬಿ ಆ ಸಮಯದಲ್ಲಿ ಹುಟ್ಟಿದ ಎಲ್ಲಾ ಗಂಡು ಮಕ್ಕಳನ್ನು ಕೊಲೆ ಮಾಡಲು ಆದೇಶಿಸಿದ್ದನು.

ಸುಳಿವು ತಿಳಿದ ಯೇಸುವಿನ ತಂದೆ ಜೋಸೇಫನು ತನ್ನ ಗರ್ಭಿಣಿ ಹೆಂಡತಿಯನ್ನು ಕರೆದುಕೊಂಡು ಈಜಿಪ್ಟಿಗೆ ಪಲಾಯನ ಮಾಡಬೇಕಾಯಿತು. ಅದೇ ರೀತಿ ಭಾರತದಲ್ಲಿ ಕೃಷ್ಣನ ಜನನದ ವಿಷಯದಲ್ಲಿಯೂ ಹೀಗೇ ಕಂಸನಿಂದ ಮಕ್ಕಳನ್ನು ಕೊಲ್ಲುವ ಕೆಲಸವಾಗಿತ್ತು. ಇದು ಖ್ಯಾತ ಮತ್ತು ಖ್ಯಾತವಲ್ಲದ ಅನೇಕಾನೇಕ ಸಾಮಾಜಿಕ ಮತ್ತು ಧಾರ್ಮಿಕ ಪರಂಪರೆಗಳ ಚರಿತ್ರೆಯಲ್ಲಿ ಗುರುತಿಸಬಹುದಾಗಿದೆ.

ಜನಾಂಗೀಯ, ಭಿನ್ನ ಸಂಸ್ಕೃತಿಗಳ, ಧರ್ಮಗಳ ಕಾರಣಗಳ, ರಾಜಕೀಯ ಸಂಘರ್ಷಗಳ ಕಾರಣಗಳಿಗೆ ಜನರ ಹತ್ಯಾಕಾಂಡಗಳಾಗಿವೆ. ಆದರೆ ಅವು ಕಾರಣಗಳಲ್ಲ, ನೆಪಗಳು. ಆದರೆ ನಿಜವಾದ ಕಾರಣ ತಮ್ಮ ಸಾರ್ವಭೌಮತ್ವವನ್ನು ಮತ್ತೊಬ್ಬರ ಮೇಲೆ ಹೇರುವುದು. ಇತರರನ್ನು ತಮ್ಮ ಅಧೀನದಲ್ಲಿ ಇರಿಸಿಕೊಳ್ಳುವುದು. ಕ್ಷಾಮ, ಸಾಂಕ್ರಮಿಕ ಕಾಯಿಲೆ, ಭೂಕಂಪ, ಪ್ರವಾಹ, ಜ್ವಾಲಾಮುಖಿ, ಹಿಮಪಾತಗಳಂತಹ ಅವಘಡಗಳಿಗಿಂತ ಹೆಚ್ಚು ಭೀಕರವಾಗಿ ಜನರನ್ನು ಕೊಂದಿಕ್ಕಿರುವುದು ಜನರಲ್ಲಿಯೇ ಇರುವ ಸಾರ್ವಭೌಮತ್ವದ ಅಹಂಕಾರದಿಂದ.

ವಿಮೋಚನಾ ಕಾಂಡ

ಐಗುಪ್ತ್ಯರು ಹೀಬ್ರೂಗಳನ್ನುದಾಸ್ಯದಲ್ಲಿಟ್ಟುಕೊಂಡು ತಮ್ಮಸಾರ್ವಭೌಮತ್ವವನ್ನು ಸಾಧಿಸಲು ಯತ್ನಿಸುತ್ತಿದ್ದರು. ಅವರ ಗಂಡು ಸಂತತಿ ಹೆಚ್ಚಿದರೆ ಬಲಿಷ್ಟರಾಗಿ ತಮ್ಮೊಡನೆ ಯುದ್ಧ ಮಾಡಿ ತಮ್ಮ ಸಾರ್ವಭೌಮತ್ವವನ್ನು ಮಣ್ಣುಗೂಡಿಸಬಹುದೆಂದು ಭಯ ಫರೋಹಗಳಿಗಿತ್ತು. ಇದನ್ನು ಸಾಕ್ಷೀಕರಿಸಿದವನು ಮೋಶೆ. ಹೀಬ್ರೂ ತಾಯಿಗೆ ಹುಟ್ಟಿದವನು, ಮಗುವನ್ನು ಕೊಲ್ಲುವವರೆಂದು ಅವನನ್ನು ಪೆಟ್ಟಿಗೆಯೊಂದರಲ್ಲಿ ಮಲಗಿಸಿ ನೈಲ್ ನದಿಯ ಅಂಚಿನ ಜಂಬುಹುಲ್ಲಿನ ಪೊದೆಯಲ್ಲಿ ಇಟ್ಟು ಅಡಗಿಕೊಂಡು ನೋಡುತ್ತಿರುತ್ತಾಳೆ.

ಫರೋಹನ ರಾಜಕನ್ನಿಕೆಯೊಬ್ಬಳು ಆ ಮಗುವಿನ ಮೇಲೆ ಕನಿಕರಪಟ್ಟು ತಾನೇ ಸಾಕುತ್ತಾಳೆ. ಅದಕ್ಕೆ ಮೊಲೆಯೂಡಲು ಅವನ ನಿಜವಾದ ತಾಯನ್ನೇ ಕರೆಯಿಸುವ ಕರುಣಾಜನಕ ಮತ್ತು ನಾಟಕೀಯವಾದಂತಹ ಕತೆ ಮೋಶೆಯ ಹುಟ್ಟು ಮತ್ತು ಬೆಳವಣಿಗೆಯದ್ದು. ಅದೇನೇ ಇರಲಿ, ಅವನು ರಾಜಮನೆತನದವನಾಗಿಯೇ ಬೆಳೆದರೂ ಅವನಿಗೆ ದಾಸ್ಯದಲ್ಲಿ ಹೀಬ್ರೂಗಳನ್ನು ನರಳಿಸುವುದು ಅವನಿಗೆ ಒಗ್ಗುತ್ತಿರಲಿಲ್ಲ. ಒಂದು ಸಂದರ್ಭದಲ್ಲಿ ಅವನಿಗೆ ತನ್ನ ಹುಟ್ಟಿನ ರಹಸ್ಯವೂ ತಿಳಿಯುತ್ತದೆ. ಒಟ್ಟಾರೆ ಅವನು ನಿರ್ಧರಿಸುವುದು ತನ್ನ ಜನರನ್ನು ದಾಸ್ಯದಿಂದ ಬಿಡಿಸಬೇಕೆಂಬುದು. ಇದೇ ವಿಮೋಚನಾ ಕಾಂಡ.

ಬಿಟ್ಟಿಚಾಕರಿ ಮಾಡುತ್ತಾ ದಾಸ್ಯದಲ್ಲಿ ನರಳುತ್ತಿದ್ದ ಹೀಬ್ರೂಗಳನ್ನು ಬಿಡಿಸಿದ ಮೋಶೆಯೂ ಮಾಡಿದ್ದೇನೆಂದರೆ ಅವರಿಗೆ ಬದುಕಲು ಒಂದು ಕ್ರಮವನ್ನು ಕೊಟ್ಟಿದ್ದು. ವಿಶ್ವಾಸಿಸಲು ಒಂದು ಪರಿಕಲ್ಪನೆಯನ್ನು ಕೊಟ್ಟಿದ್ದು. ಹತ್ತು ನಿಬಂಧನೆಗಳನ್ನು ಇತ್ತನು. ಸೀನಾಯಿ ಎಂದು ಕರೆಯಲ್ಪಡುವ ಬೆಟ್ಟವೊಂದರಲ್ಲಿ ಪೊದೆಯಲ್ಲಿ ಬೆಂಕಿಯಂತೆ ಕಾಣುವ ದೇವರು ಮೋಶೆ ತನ್ನ ಜನರು ನೇಮವಾಗಿ, ಶಿಸ್ತಿನಿಂದ ಮತ್ತು ಬದ್ಧತೆಯಿಂದ ನಡೆಯುವ ಅಗತ್ಯವಿರುವುದೆಂದು ಕಟ್ಟಳೆಗಳನ್ನು ನೀಡಿದನೆಂದು ಹೇಳಿಕೊಳ್ಳುವನು.

ದೇವರ ಹೆಸರಿನಲ್ಲಿ ತನ್ನ ಜನರು ದಾಸ್ಯದಿಂದ ಬಿಡುಗಡೆಯಾಗಿದ್ದು ಮತ್ತೆ ಪತನವಾಗದಿರಲೆಂಬ ಕಾಳಜಿಯಿಂದ ಅವನು ಒಂದು ದಾರಿಯನ್ನು ರೂಪಿಸಲು ಈ ಕಟ್ಟಳೆಗಳನ್ನು ವಿಧಿಸಿದನು. ಏಕೆಂದರೆ ಪಡೆದಿರುವಂತಹ ಸ್ವಾತಂತ್ರ್ಯವು ಫಲಪ್ರದವಾಗಬೇಕಾದರೆ ಅವರು ಆ ಸ್ವತಂತ್ರ ಕಾಲದಲ್ಲಿ ಮತ್ತು ಸ್ಥಿತಿಯಲ್ಲಿ ಸ್ವಶಿಸ್ತಿನಿಂದ ವರ್ತಿಸಬೇಕು. ಹಾಗೆಯೇ ತಿಳುವಳಿಗೆಯಿಂದ ಸ್ವಸ್ಥ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬೇಕು. ಅದು ಅವರ ಉದ್ದೇಶ. ಈ ನಿಬಂಧನೆಗಳು ದಾಸ್ಯಕ್ಕೊಳಿಸುವ ನಿರ್ಬಂಧವಲ್ಲ. ದಾಸ್ಯಕ್ಕೆ ಮರಳದಿರಲು ಬೇಕಾದ ಶಿಸ್ತು. ಶಿಸ್ತು ಕೂಡಾ ನಿಬಂಧನೆಯೇ. ಆದರೆ ಅದು ಕಾರ್ಯ ಸಾಧನೆಗೆ.

ಹತ್ತು ಕಟ್ಟಳೆಗಳು

ಮೋಶೆಯ ಹತ್ತು ಕಟ್ಟಳೆಗಳು ಅವರಲ್ಲಿದ್ದ ನ್ಯೂನ್ಯತೆಗಳನ್ನು ತೊಡೆಯುವ ದಿಕ್ಕಿನಲ್ಲಿಯೇ ಇದ್ದವು. ಮೂರ್ತಿ ಪೂಜೆಯನ್ನು ನಿರಾಕರಿಸಿತ್ತು. ಕಂಡಕಂಡ ವಸ್ತು ವ್ಯಕ್ತಿಗಳನ್ನೆಲ್ಲಾ ದೇವರೆಂದು ಒಪ್ಪಬಾರದಿತ್ತು. ಗ್ರೀಸ್ ಮತ್ತು ಈಜಿಪ್ಟಿನಲ್ಲಿ ಹಲವಾರು ದೇವತೆಗಳು, ಹಲವಾರು ಮೂಢ ನಂಬಿಕೆಗಳು ಬಹಳವಾಗಿತ್ತು. ಅದರ ಪ್ರಭಾವದಲ್ಲಿ ಇದ್ದ ಇವರು ಅದನ್ನೇ ಅನುಸರಿಸಬಾರದೆಂಬುದೂ ಆಗಿತ್ತು.

ಮುಂದಿನ ಪೀಳಿಗೆಗಳನ್ನು ಗಮನಿಸಿಕೊಂಡು, ಅವರ ಹಿತವನ್ನು ಕಾಯುವ ದೂರದೃಷ್ಟಿಯನ್ನು ಇಟ್ಟುಕೊಂಡು ತಾನು ಇಂದು ತಪ್ಪು ಮಾಡಬಾರದೆಂದಾಗಿತ್ತು. ದೇವರ ಹೆಸರನ್ನು ತನ್ನ ಸ್ವಾರ್ಥದ ಅಥವಾ ಕೆಟ್ಟ ಕೆಲಸಗಳಿಗೆ ಬಳಸಬಾರದು. ಹಗಲು ಇರುಳು ಎನ್ನದೇ ಬಿಟ್ಟಿ ಚಾಕರಿ ಮಾಡಿಕೊಂಡಿದ್ದ ಅವರು ಕೆಲಸದ ಮಧ್ಯೆ ವಿರಾಮವನ್ನೂ ಮತ್ತು ತಮ್ಮ ಕುಟುಂಬಗಳಿಗೆ ಸಮಯವನ್ನು ಕೊಡಲು ವಾರದ ಏಳನೆಯ ದಿನವಾದ ಸಬ್ಬತ್ ದಿನದಂದು ಏನೂ ಕೆಲಸ ಮಾಡಬಾರದೆಂದು ಇತ್ತು.

ತನ್ನ ಸ್ವಾರ್ಥಕ್ಕಾಗಿ ತಂದೆ, ತಾಯಿಯೇ ಮೊದಲ್ಗೊಂಡು ಸಂಬಂಧಗಳನ್ನು ಲೆಕ್ಕಿಸದಂತಹ ಪ್ರಕರಣಗಳನ್ನು ನೋಡಿದ್ದ ಮೋಶೆ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಂಡರೆ ದೇವರಿಂದ ಅನುಗ್ರಹಿತವಾದ ಈ ಭೂಮಿಯಲ್ಲಿ ಚೆನ್ನಾಗಿ ಬಾಳುವೆ ಎಂದು ಆಶೆ ಇರಿಸಿದನು. ವಯಸ್ಸಾದ ತಂದೆ ತಾಯಿಯರು ಮಕ್ಕಳ ಕಾಲದಲ್ಲಿ ಸಂಕಷ್ಟಕ್ಕೆ ಒಳಗಾಗದಿರಲು ಮೋಶೆ ಮನಗಂಡಿದ್ದನು.

ಹೀಗೇ ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮತ್ತೊಬ್ಬರ ಮನೆಯ ಜನರನ್ನಾಗಲಿ, ವಸ್ತುಗಳನ್ನಾಗಲಿ, ಪಶುಗಳನ್ನಾಗಲಿ ವಶಪಡಿಸಿಕೊಳ್ಳಲು ಬಯಸಬಾರದು. ಬಿಟ್ಟಿಚಾಕರಿ ಮಾಡುತ್ತಾ ಗುಲಾಮಗಿರಿಯಲ್ಲಿದ್ದ ಜನರಿಗೆ ಸ್ವಾತಂತ್ರ್ಯವು ಸಿಕ್ಕಿದಾಗ, ಅವರಿಗೆಂದು ಒಂದು ಭೂಮಿಯು ಬಾಳ್ವೆಗೆ ದೊರಕಿದಾಗ ತಾವು ಇನ್ನೊಬ್ಬರನ್ನು ದಾಸ್ಯಕ್ಕೆ ಒಳಮಾಡಬಾರದೆಂಬ ಮಮಕಾರ, ಕಾರುಣ್ಯ ಮೋಶೆಯಲ್ಲಿತ್ತು.

ವಿಮೋಚನೆಗೆ ದಾರಿ ತೋರಿದ್ದ ಮೋಶೆಯು ಮತ್ತೊಬ್ಬರನ್ನು ದಾಸ್ಯಕ್ಕೆ ಒಳಪಡಿಸಬಾರದೆಂಬ ಪ್ರಜ್ಞೆಯ ತರಬೇತಿ ಕೊಡಲು ದೇವರ ಹೆಸರು ಎತ್ತಿದ್ದ, ಹತ್ತು ನಿಬಂಧನೆಗಳನ್ನು ನೀಡಿದ್ದ. ನಿಜಕ್ಕೂ ಆತ ಧೀರನೂ ಹೌದು, ಕರುಣಾಳುವೂ ಹೌದು.
ಆದರೆ ದಶಾಜ್ಞೆಗಳು ಅಥವಾ ಹತ್ತು ನಿಬಂಧನೆಗಳನ್ನು ಹೀಬ್ರೂ ಜನರು ಒಂದಷ್ಟು ಕಾಲವಷ್ಟೇ ತನ್ನ ಮಾನ್ಯತೆಯನ್ನು ಪ್ರಾಮಾಣಿಕವಾಗಿ ಉಳಿಸಿಕೊಂಡಿದ್ದು. ನಂತರ ಅದನ್ನೇ ಮುಂದಿಟ್ಟುಕೊಂಡು ಪುರೋಹಿತರು ಮತ್ತೆ ಜನರನ್ನು ತಮ್ಮದೇ ಜನರನ್ನು ಶೋಷಿಸತೊಡಗಿದ್ದರು.

ಸಾಲದಕ್ಕೆ ತಮ್ಮ ಸ್ವಾರ್ಥ ಸಾಧನೆಗೆ ಬೇಕಾದಂತೆ ಅವನ್ನು ಬಳಸಿಕೊಳ್ಳಲೂ ತೊಡಗಿದ್ದರು. ಮತ್ತೆ ಗುಲಾಮರಂತಾಗಿದ್ದರು. ಅಂತಹ ಸಮಯದಲ್ಲಿ ಮೂಡಿದ ಮೋಶೆಯಂತೆಯೇ ಮತ್ತೊಬ್ಬ ಸಮಾಜ ಸುಧಾರಕ, ಆದರ್ಶ ಸಮಾಜದ ಕನಸುಗಾರ ಯೇಸು. ಸಾಂಪ್ರದಾಯಕವಾಗಿ ಬಂದಿರುವ ಧರ್ಮಶಾಸ್ತ್ರವನ್ನು ತಾನು ಕಡೆಗಣಿಸಲು ಅಥವಾ ತಿರಸ್ಕರಿಸಲು ಬಂದಿಲ್ಲ, ಬದಲಾಗಿ ಅವನ್ನು ಸರಿಯಾದ ರೀತಿಯಲ್ಲಿ ನೆರವೇರಿಸಲೆಂದೇ ಬಂದವನು ತಾನು ಎಂದೇ ಯೇಸು ನೀಡಿದ್ದ ಸ್ಪಷ್ಟತೆ.

ಆದರೆ ಯೇಸುವೂ ಕೂಡಾ ತನ್ನ ಜನರು ಮೌಢ್ಯ ಮತ್ತು ಕಂದಾಚಾರಗಳಿಂದ ಮುಕ್ತರಾಗಿ ಸಂಪೂರ್ಣ ಗುಣಮಟ್ಟದ ಜೀವನವನ್ನು ನಡೆಸಲು ತಾತ್ವಿಕವಾಗಿ ಮತ್ತು ಧಾರ್ಮಿಕವಾಗಿ ಮಾದರಿಯಾಗಿದ್ದೇ ಮಿತಿಯಲ್ಲಿರುವುದಾದರೂ ತಮ್ಮ ಚಿಲ್ಲರೆ ಸಾರ್ವಭೌಮತ್ವಕ್ಕೆ ಪೆಟ್ಟಾಗದಿರಲು ಯೇಸುವಿಗೇ ಪೆಟ್ಟುಕೊಟ್ಟರು. ಶಿಲುಬೆಯ ಪಟ್ಟಿಗಳಿಗೆ ಯೇಸುವನ್ನು ಜಡಿದು ಕೊಂದ ಮೇಲೆ ಕ್ರೈಸ್ತರಿಗೆ ಕೂಡಾ ಕಿರುಕುಳಗಳಾದವು.

ಪ್ರೇಷಿತರ ಮತ್ತು ಇತರ ಅನೇಕಾನೇಕ ಕ್ರಿಸ್ತನ ಅನುಯಾಯಿಗಳ ತ್ಯಾಗ ಬಲಿದಾನದ ನಂತರ ಕ್ರೈಸ್ತ ಧರ್ಮವು ಒಡಮೂಡಿತ್ತು. ಅದೂ ಕೂಡಾ ಕ್ರಮೇಣ ಪುರೋಹಿತ ಮತ್ತು ಪ್ರಭುತ್ವದವರ ಬಳಕೆಗೆ ಸಲಕರಣೆಯಾಗಿಬಿಟ್ಟಿತು. ಅರೇಬಿಯಾದ ಮಕ್ಕಾದಲ್ಲಿರುವ ಕಾಬಾ ಮಂದಿರದ ಮೇಲೆ ಕ್ರೈಸ್ತ ಅರಸರ ದಾಳಿಯ ಯೋಜನೆ ಇದಕ್ಕೊಂದು ನಿದರ್ಶನ.

ಅರಬರಲ್ಲಿನ ಅವ್ಯವಸ್ಥೆ

ಅರಬರಲ್ಲಿಯೇ ಹೊಂದಾಣಿಕೆ ಇರಲಿಲ್ಲ. ಭಿನ್ನ ಕುಲಗಳ ಮತ್ತು ಬುಡಕಟ್ಟುಗಳ ನಡುವೆ ಸಂಘರ್ಷ ತುಂಬಾ ಸಾಮಾನ್ಯವಾಗಿತ್ತು. ಮೂರ್ತಿ ಪೂಜೆಗಳು ವ್ಯಾಪಕವಾಗಿದ್ದವು. ಮೌಢ್ಯವೋ ಮುಗಿಲು ಮುಟ್ಟಿತ್ತು. ಯಾವ ನೈತಿಕತೆಯೂ ಇಲ್ಲದೇ ಜನರು ಕುಲಗಳ ನೆಪದಲ್ಲಿ, ಗೋತ್ರಗಳ ನೆಪದಲ್ಲಿ ಒಗ್ಗೂಡಿಕೊಂಡು ಬಡಿದಾಡಿಕೊಂಡು ಇದ್ದರು. ಹಿಂದೆ ಹೆಣ್ಣು ಮಕ್ಕಳನ್ನು ಉಳಿಸಿ, ಮುಂದೆ ಗಟ್ಟಿಗರಾದಾಗ ಹೋರಾಡಬಹುದೆಂದು ಗಂಡುಮಕ್ಕಳ ಹತ್ಯೆಗಳನ್ನು ಮಾಡುತ್ತಿದ್ದರು.

ಆದರೆ, ಆಗ ಅರೇಬಿಯಾದಲ್ಲಿ ಹೆಣ್ಣು ಮಕ್ಕಳನ್ನೂ ಕೂಡಾ ಜೀವಂತವಾಗಿ ಹೂಳುವಷ್ಟು ನೈತಿಕವಾಗಿ ಅವನತಿಯನ್ನು ಹೊಂದಿದ್ದರು. ಇಂತಹ ಸಮಯದಲ್ಲಿ ನವಸಮಾಜದ ನಿರ್ಮಾಪಕ ಬೇಕಾಗಿತ್ತು. ನೈತಿಕ ತಳಹದಿಯ ಮೇಲೆ ಆದರ್ಶ ಸಮಾಜದಲ್ಲಿ ಬಾಳುವುದಕ್ಕೆ ಮತ್ತೆ ಒಂದು ಧರ್ಮವನ್ನು ಅಥವಾ ಕ್ರಮವನ್ನು ರೂಪಿಸಬೇಕಿತ್ತು. ಬರೀ ಲೌಕಿಕವಾಗಿ ಮೇಲಿನ ಸ್ತರದಲ್ಲಿಯೇ ತಮ್ಮ ಬಾಳ್ವೆಗಳನ್ನು ಪೊಳ್ಳಾಗಿಸಿಕೊಂಡಿದ್ದು, ತಮ್ಮ ಸಹಜೀವಿಗಳಿಗೆ ಪೀಡೆಗಳಾಗುತ್ತಿದ್ದವರನ್ನು ಸರಿದಾರಿಗೆ ತರಲು ಅರಿವನ್ನು ನೀಡಬೇಕಿತ್ತು. ಆ ಕೆಲಸಕ್ಕೆ ನಿಂತವರು ಪ್ರವಾದಿ ಮುಹಮ್ಮದ್.

ಅಬ್ರಹಾಮನ ಸಮಾಜೋಧಾರ್ಮಿಕ ಪರಂಪರೆಯನ್ನು ಅವಲೋಕಿಸಿದ್ದ ಮುಹಮ್ಮದರಿಗೆ ಮೋಶೆಯ ಕಟ್ಟಳೆಯೂ ತಿಳಿದಿತ್ತು, ಯೇಸುವಿನ ಬಲಿದಾನದ ಅರಿವೂ ಇತ್ತು. ಅವುಗಳೆಲ್ಲವೂ ಅವರ ನಂತರದ ಕಾಲದಲ್ಲಿ ಹೇಗೆ ಹಳ್ಳ ಹಿಡಿಯಲಾರಂಭಿಸಿದ್ದವು ಎಂಬುದರ ಬಗ್ಗೆಯೂ ತಿಳುವಳಿಕೆ ಸ್ಪಷ್ಟವಾಗಿಯೇ ಇತ್ತು. ಇಷ್ಟು ನಮಗೆ ಅರ್ಥವಾಗಬೇಕು. ಮೋಶೆಯ ನಿಬಂಧನೆಗಳು ಪ್ರಾಮಾಣಿಕವಾಗಿ ಮತ್ತು ತಾತ್ವಿಕವಾಗಿ ಯಶಸ್ವಿಯಾಗಿದ್ದರೆ ಯೇಸುವಿನ ಅಗತ್ಯವಿರಲಿಲ್ಲ.

ಹೋಗಲಿ ಯೇಸುವಿನ ಬಲಿದಾನವನ್ನು ಮುಂದಿಟ್ಟುಕೊಂಡು ಮಹೋದ್ದೇಶದಿಂದ ಪೌಲನೇ ಮೊದಲಾದ ತ್ಯಾಗವೀರರು ರೂಪಿಸಿದ ಕ್ರೈಸ್ತ ಧರ್ಮವು ಪುರೋಹಿತ ಮತ್ತು ಪ್ರಭುತ್ವದ ಸ್ವಾರ್ಥಕ್ಕೆ ಬಳಕೆಯಾಗದಿದ್ದರೆ ಪ್ರವಾದಿ ಮುಹಮ್ಮದರೂ ಮತ್ತವರ ಪೂರ್ವಜರು ದೀನ್ ಎಂಬುದನ್ನು ಕನವರಿಸುವ ಅಗತ್ಯವಿರುತ್ತಿರಲಿಲ್ಲ. ಸತ್ಯವು ಯಾವುದೆಂದು ಅಂತರಂಗದಿಂದಲೇ ಅರಿತು ವಿದೇಯವಾಗುವುದು ಮತ್ತು ಅದನ್ನು ತಪ್ಪದಂತೆ ರೂಪಿಸಿಕೊಳ್ಳುವ ಕ್ರಮ ಅಥವಾ ದಾರಿಯನ್ನೇ ದೀನ್ ಎಂದು ಅರ್ಥೈಸಿಕೊಳ್ಳೋಣ.

ಮುಹಮ್ಮದ್ ಅವರ ಕಾಲದ ಸಮಾಜೋಧಾರ್ಮಿಕ ಅವ್ಯವಸ್ಥೆಗಳು ಮತ್ತು ಮನುಷ್ಯರ ಬಾಳ್ವೆಗೆ ಮಾರಕವಾಗಿರುವಂತಹ ಅತ್ಯಂತ ಕೆಟ್ಟ ಮತ್ತು ಕ್ರೂರವಾದಂತಹ ಸಂಘರ್ಷಗಳು ಅವರನ್ನು ಮತ್ತೊಮ್ಮೆ ನವಸಮಾಜವನ್ನು ಕನವರಿಸುವಂತಾಯಿತು. ಎಲ್ಲಾ ಅಸಮಾನತೆ, ವೈಪರಿತ್ಯ, ಅಭದ್ರತೆ, ತಾರತಮ್ಯ, ಕ್ರೂರವಾದ ಮೌಢ್ಯ; ಇತ್ಯಾದಿಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತು ಜನರಿಗೆ ದಾರಿಯನ್ನು ತೋರಲು ಸಿದ್ಧವಾದರು. ಅದೇ ಕುರಾನಿನ ಅವತರಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version