ಅಂತರಂಗ
ನಡುಪಂಥ ಅನ್ನುವ ಗುಳ್ಳೇನರಿ ಸಿದ್ದಾಂತ : ಭಾಗ -3
- ಲೋಕೇಶ್ ಪೂಜಾರಿ
ಒಬ್ಬ ನಡುಪಂಥೀಯ ನರಿ ಹೀಗೆ ಬರೆದುಕೊಳ್ಳುತ್ತಾನೆ. “ನಾನು ಬಿಲ್ಲವರ ಬಗ್ಗೆ ಬರೆದೆ ,ಅವರು ಜಗಳಕ್ಕೆ ಬಂದರು, ಬಂಟರ ಬಗ್ಗೆ ಮಾತಾಡಿದೆ ಅವರೂ ಜಗಳಕ್ಕೆ ನಿಂತರು, ಒಕ್ಕಲಿಗರ ಬಗ್ಗೆ ಬರೆದೆ ಅವರೂ ಯುದ್ದಕ್ಕೆ ಬಂದರು, ಲಿಂಗಾಯತ ರ ಬಗ್ಗೆ ಬರೆದೆ ಅವರೂ ಜಗಳಕ್ಕೆ ನಿಂತರು.
ಕೊನೆಗೆ ನಾನು ಬ್ರಾಹ್ಮಣರ ಬಗ್ಗೆ ಬರೆಯಲು ಶುರುಮಾಡಿದೆ ,ಅವರು ಮಾತ್ರ ನಾನು ಎಷ್ಟೇ ಬರೆದರೂ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ.
ಕೊನೆಗೆ ಯಾವುದು ಶ್ರೇಷ್ಠ ಎನ್ನುವ ನಿರ್ಧಾರಕ್ಕೆ ಬಂದೆ ” ಹೀಗೆ ಬರೆದುಕೊಂಡಾತ ಕೂಡಾ ಒಬ್ಬ ಬ್ರಾಹ್ಮಣ. ತನ್ನ ಮಗುವಿನ ವಿಸರ್ಜನೆ ಅದರ ಅಮ್ಮನಿಗೆ ಪರಿಮಳವೇ. ಅದನ್ನು ಮೊದಲು ಆತ ಅರಿತುಕೊಳ್ಳಬೇಕು.
ಮೊದಲನೇದಾಗಿ ವಿಷಯ ಇಲ್ಲದೇ ಜಾತಿ ವಿಚಾರ ಎತ್ತಿ ಬರೆಯಲು ಅವನ್ಯಾವ ದೊಣ್ಣೇ ನಾಯಕ?
ಮಹಾತ್ಮಾ ಗಾಂಧಿ ಕೇವಲ ಒಬ್ಬ ವ್ಯಕ್ತಿ ಅಲ್ಲ, ಅದೊಂದು ವಿಚಾರಮಂಟಪ. ಗಾಂಧೀ ಪೋಟೋ ಇಟ್ಟುಕೊಂಡು ಗೋಡ್ಸೆಯನ್ನು ಸಮರ್ಥನೆ ಮಾಡುವುದನ್ನು ನಾವು ಖಂಡಿತಾ ಪ್ರತಿಭಟಿಸುತ್ತೇವೆ. ಗಾಂಧಿ ಬದಲು ಗೋಡ್ಸೆ ಪೋಟೋ ನೇ ಇಟ್ಟುಕೊಂಡರೆ ಆತನ ಕರ್ಮ ಎಂದು ಸುಮ್ಮನೇ ಇರುತ್ತವೆ.
ಇವರುಗಳು ಎಷ್ಟು ಕುಟಿಲತನದ ಮನಸ್ಸು ಹೊಂದಿರುತ್ತಾರೆ ಎಂದರೆ, ಮೊದಲು ಶ್ರೀ ನಾರಾಯಣ ಗುರುಗಳ ಬಗ್ಗೆ ಪುಟಗಟ್ಟಲೆ ಬರೀತಾರೆ. ಅವರ ಕಾವ್ಯಗಳು ,ಪ್ರವಚನಗಳು ಆದ್ಯಾತ್ಮಿಕ ಜೀವನ ಇತ್ಯಾದಿ. ಜನರು ಈತನನ್ನು ಗುರುಗಳ ಬಗ್ಗೆ ಆದರಣೀಯ ಮನಸ್ಸು ಹೊಂದಿದ ಮನುಷ್ಯ ಎಂದು ತೀರ್ಮಾನಕ್ಕೆ ಬರುವ ತನಕ ಕಾಯುತ್ತಾರೆ. ಬಳಿಕ ಅಲ್ಲಿ ಅದ್ವೈತ ಬರುತ್ತದೆ. ಜೊತೆಗೆ ಶಂಕರಾಚಾರ್ಯರು ನುಸುಳುತ್ತಾರೆ. ಕೊನೆಗೆ ಶ್ರೀ ನಾರಾಯಣ ಗುರುಗಳ ಮಹಾನ್ ವ್ಯಕ್ತಿತ್ವಕ್ಕೆ ಶಂಕರಾಚಾರ್ಯರು ಕಾರಣ ಅನ್ನುವ ಸುಳ್ಳನ್ನು ಬಹಳ ಜನರ ಮೆದುಳಿಗೆ ತುಂಬಿಸುವುದರಲ್ಲಿ ಯಶಸ್ವಿಯಾಗುತ್ತಾರೆ.
ಗುರುಗಳು ಮಾಡಿದ್ದು ಬರೀ ಆಧ್ಯಾತ್ಮಿಕ ಕ್ರಾಂತಿ ಮಾತ್ರ ಅಲ್ಲ. ಅವರು ಶೈಕ್ಷಣಿಕ ಕ್ರಾಂತಿ ,ಸಾಮಾಜಿಕ ಕ್ರಾಂತಿ ,ಕೈಗಾರಿಕಾ ಕ್ರಾಂತಿ ಕೂಡಾ ಮಾಡಿದ್ದಾರೆ.
ಅವರ ಜೊತೆಗೆ ಬಹಳಷ್ಟು ಇತರರೂ ಇದ್ದರು.
ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಶಿಷ್ಯರೂ ಇದ್ದರು. ಕೊನೆಗೆ ತಮ್ಮ ಜೀವಿತಾವಧಿಯಲ್ಲಿ ಅವರು ಕೊಟ್ಟು ಹೋಗಿದ್ದ ದ್ಯೇಯವಾಕ್ಯಗಳು.
01. “ವಿದ್ಯೆಯಿಂದ ಸಂಪನ್ನರಾಗಿ ,ಸಂಘಟನೆಯಿಂದ ಬಲಯುತರಾಗಿ”.
ಇದರ ಬಗ್ಗೆ ನಡುಪಂಥೀಯ ನರಿ ಏನೂ ಬರೆಯುವುದಿಲ್ಲ.ಸಂಘಟನೆಗಳು ಶಂಕರಾಚಾರ್ಯರ ಮೂಲಭೂತ ವಾದದ ಕೆಳಗೇ ಕೆಳವರ್ಗದ ಜನರ ಸಹಕಾರದೊಂದಿಗೆ ಮೆಲ್ವರ್ಗದ ಜನರ ಒಳಿತಿಗೆ ಇರಲಿ ಎಂದು ಅದರ ಆಸೆ ಇರುತ್ತದೆ.
02. “ಒಂದೇ ಜಾತಿ, ಒಂದೇ ಮತ ,ಒಬ್ಬನೇ ದೇವರು.”
ಗುರುಗಳು ಸ್ಮಶಾನವಾಸಿ ಶಿವನ ಪೂಜೆ ಮಾಡಲು ಹೇಳಿದ ಕಾಲಘಟ್ಟದಲ್ಲಿ ಕೆಳಜಾತಿಯವರಿಗೆ ದೇವಸ್ಥಾನ ಪ್ರವೇಶ ಇರಲಿಲ್ಲ. ವೈದಿಕ ಮೋಸ ಅರ್ಥ ಮಾಡಿಕೊಳ್ಳಲು ವಿದ್ಯೆ ಇರಲಿಲ್ಲ. ಈಗ ಶಿವನ ಆರಾಧನೆಯ ಜೊತೆಗೆ , ಇತರ ದೇವಸ್ಥಾನಗಳ ಪೂಜೆಯ ಹಕ್ಕನ್ನೂ ಪಡೆದುಕೊಳ್ಳಬಹುದು.
ವಿವಿಧತೆಯಲ್ಲಿ ಏಕತೆ ಇದ್ದ ಹಾಗೆ. ಏಕತೆಯಲ್ಲಿ ವಿವಿಧತೆ ಕೂಡಾ ಆದ್ಯಾತ್ಮದ ಭಾಗ. ಆ ವಿಚಾರದಲ್ಲಿ ನಡುಪಂಥೀಯ ನರಿಗಳು ಗುರುಗಳ ವಿಚಾರಧಾರೆಯನ್ನು ಗೊಜಲು ಮಾಡುತ್ತಾರೆ.
ದಶಾವತಾರಗಳಲ್ಲಿ ಇರುವುದು ಒಬ್ಬ ದೇವ ಮಹಾವಿಷ್ಣು ಅಂತಾ ಪುರಾಣದಲ್ಲಿ ಇದ್ದರೂ..
ಕೃಷ್ಣ ನ ದೇವಸ್ಥಾನ, ರಾಮನ ದೇವಸ್ಥಾನ ,ನರಸಿಂಹ ದೇವಸ್ಥಾನ ,ಪರಶುರಾಮ ನ ದೇವಸ್ಥಾನ ಗಳು ಇಲ್ಲವೇ???
ಮನುಷ್ಯ ವಿವಿಧ ರೂಪಗಳಲ್ಲಿ ಪೂಜೆ ಮಾಡಬಹುದು.ದೇವನು ಭಾವಪ್ರಿಯನೇ ಹೊರತು, ಆಚರಣೆಗಳ ಪ್ರಿಯ ಅಲ್ಲ. ದೇವರಿಗೆ ಭಾಷೆಯ ವರ್ತುಲವೂ ಇಲ್ಲ. ಸಂಸ್ಕೃತ ಅಗತ್ಯ ಇಲ್ಲ. ಯಾವ ಅರ್ಚಕನಿಗೂ ದೇವರು ಒಲಿದ ಉದಾಹರಣೆನೇ ಇಲ್ಲ. ಪೂಜೆ ಎನ್ನುವುದು ವೈಧಿಕ ಅಲ್ಲವೇ ಅಲ್ಲ.
03. “ಶ್ರೀ ನಾರಾಯಣ ಗುರುಗಳು ಹೇಳಿದ್ದು
ಧಾರ್ಮಿಕ ಸಿದ್ದಾಂತಗಳು ವಾದಿಸಲಿಕ್ಕೂ ಅಲ್ಲ ,ವಾದಿಸಿ ಜಯಿಸಲಿಕ್ಕೂ ಅಲ್ಲ. ಅವು ಸರ್ವರ ಸಮನ್ವಯ ಜೀವನಕ್ಕೆ ಜೀವಾಳವಾಗಬೇಕು. ಮನುಷ್ಯನನ್ನು ಒಳ್ಳೆಯ ಮನುಷ್ಯನಾಗಿ ಮಾಡುವುದೇ ಎಲ್ಲಾ ಧರ್ಮಗಳ ಉದ್ದೇಶಗಳು. ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾಗರೆ ಸಾಕು”.
ನಡುಪಂಥ ದ ನರಿಗಳು ಯಾವ ಕಾರಣಕ್ಕೂ ಇದರ ಬಗ್ಗೆ ಹೇಳುವುದಿಲ್ಲ. ಪ್ರತಿಯೊಂದಕ್ಕೂ ಪುರಾಣವನ್ನೇ ಎಳೆದು ತರುತ್ತಾರೆ. ಒಟ್ಟಿನಲ್ಲಿ ಶೂದ್ರ ಮಂತ್ರ ಪಠನ ಮಾಡಿದರೆ ಆತನ ಕಿವಿಗೆ ಕಾದ ಸೀಸೆಯನ್ನು ಹುಯ್ಯಬೇಕು ಎಂದು ಹೇಳಿದ ಶಂಕರಾಚಾರ್ಯರನ್ನು
ಸುಧಾರಣಾವಾದದ ಶ್ರೀ ನಾರಾಯಣಗುರುಗಳ ನಡುವೆ ತರಬೇಕು.
04. ನಾರಾಯಣ ಗುರುಗಳು ಹೇಳಿದ್ದು, ” ಹಿಂದುಳಿದ ಜನಾಂಗಳು ಅಂದಾನುಕರಣೆಗೆ ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು.ಮದುವೆ ಕೂಡಾ ಸರಳವಾಗಿ ನಡೆಯಬೇಕು”
ನಡುಪಂಥೀಯ ನರಿಗಳು ಜ್ಯೋತಿಷ್ಯ ದ ಬಗ್ಗೆ ಮಾತಾಡಿ ಅದು ಕೂಡಾ ಸನಾತನ ದ ಭಾಗ ಅಂತಾವೆ. ಗುರುಗಳು ಹೇಳಿದ್ದಕ್ಕೆ ಅದು ಸಂಪೂರ್ಣ ವ್ಯತಿರಿಕ್ತ. ನಾರಾಯಣ ಗುರುಗಳು ಆದ್ಯಾತ್ಮಿಕತೆಯನ್ನು ಸಾಮಾಜಿಕ, ಶೈಕ್ಷಣಿಕ ಕ್ರಾಂತಿಗೆ ಬಳಸಿಕೊಂಡರೆ, ಈ ನರಿಗಳು ಕಪಟ ಆದ್ಯಾತ್ಮಿಕತೆಯನ್ನು ನಟಿಸಿ
ಜನರೊಳಗೆ ಕೀಳರಿಮೆ ಮತ್ತು ಶ್ರೇಷ್ಠತೆ ಎರಡನ್ನೂ ಬಿತ್ತಿ ವಿಘಟನೆಗೆ ಕಾರಣವಾಗುತ್ತವೆ.
ಈ ನರಿಗಳು ಶ್ರೀ ನಾರಾಯಣ ಗುರುಗಳ ಹೆಸರನ್ನು ಬಳಸಿಕೊಳ್ಳುವುದೇ ಅವರ ಪುಕ್ಕಲು ತನಕ್ಕೆ ದೊಡ್ಡ ನಿದರ್ಶನ. ಇನ್ನು ಅಂಬೇಡ್ಕರ್ ವಿಚಾರಕ್ಕೆ ಬರುವುದಾದರೆ, ಅಂಬೇಡ್ಕರ್ ಭೌದ್ಧ ಧರ್ಮ ಸ್ವೀಕಾರ ಮಾಡಿದ ಬಗ್ಗೆ ಎಲ್ಲಾದರೂ ಬರೆದಿದ್ದಾರ ನೋಡಿ. ಡೋಂಗಿ ಆದ್ಯಾತ್ಮ ಸಿದ್ದಾಂತಿಗಳು ಶುರುಮಾಡಬೇಕಾಗಿರುವುದೇ ಅಲ್ಲಿಂದ.
ಅಂಬೇಡ್ಕರ್ ವಿಚಾರದಾರೆಗಳು ರಾಜಕೀಯ ಮತ್ತು ಸಾಮಾಜಿಕ ವಿಚಾರದ ಪಠ್ಯಗಳಾಗಿ ಭಾರತದಲ್ಲಿ ಜಾತಿವ್ಯವಸ್ಥೆ ಸಂಪೂರ್ಣ ನಿರ್ನಾಮ ಆಗುವ ತನಕ ಪ್ರತೀ ಮನುಷ್ಯನೂ ಓದಬೇಕಾಗಿರುವಂತಹದ್ದು.
ಆದರೆ ನಡುಪಂಥೀಯ ನರಿಗಳಿಗೆ ಸಂವಿಧಾನದ ರಚನೆಯಲ್ಲಿ ಭಾಗಿಯಾದ ತಮ್ಮ ಕುಲಸ್ಥರು, ಅಂಬೇಡ್ಕರ್ ರ ಜೀವನದಲ್ಲಿ ಅದ್ಯಾಪಕರಾಗಿ
ಬಂದ ತಮ್ಮ ಕುಲಸ್ಥರು.ಅಂಬೇಡ್ಕರ್ ರ ವೈವಾಹಿಕ ಜೀವನ ಇವನ್ನೇ ಮುಂದಿಟ್ಟು ಪುಟಗಟ್ಟಲೆ ಬರೀಬೇಕು ಅನ್ನಿಸುತ್ತದೆ.
ಅಂಬೇಡ್ಕರ್ ಜೊತೆಗೆ ಕಮ್ಯುನಿಸ್ಟ್ ಪಕ್ಷ ಕ್ಕೆ, ಕಾಂಗ್ರೆಸ್ ಗೆ ಜಗಳ ಇತ್ತು ಎಂದು ತೋರಿಸುವ ಆಸೆ ಇರುತ್ತದೆ.ಪ್ರಸ್ತುತ ಬಿಳಿಮಲೆಯವರೂ ಅಮೀನರೂ ಮೀನು ಗಸಿ ಒಳ್ಳೇದ ,ಅಥವಾ ನಾಟಿ ಕೋಳಿಯ ಅಂತಾ ತಮಾಷೆಗೆ ಚರ್ಚೆ ಮಾಡಿದರೂ ,ಅವರಿಬ್ಬರ ನಡುವೆ ಸಿದ್ದಾಂತಿಕ ಬಿನ್ನತೆ ಇತ್ತು ಎಂದು ನೂರಾರು ಸುಳ್ಳು ಗಳನ್ನು ಹಣೆದು ಬರೆಯುವ ಜಾಣತನ ಅವರಿಗೆ.
ತಾನು ಬರೆಯುವುದನ್ನು ಬೇರೆಯವರು ಮೆಚ್ಚಿಕೊಳ್ಳದೇ ಇದ್ದರೆ ತನಗೇನು, ತನ್ನ ಹೆಂಡತಿ ಮಕ್ಕಳು ,ನೆರೆಹೊರೆಯವರು ವಿರೋಧ ತೋರಿಸದೇ ಇದ್ದರೆ ಸಾಕು ಎಂದು ನಾಚಿಕೆ ಇಲ್ಲದೇ ಬರೆದುಕೊಳ್ಳುವ ಮನುಷ್ಯ ನಿಗೆ ತಾನು ಬರೆವ ಸುಳ್ಳು ಗಳಿಂದಾಗಿ ಎಡ ಬಲ ಎರಡೂ ಪಂಥದ ಬಹುದೊಡ್ಡ ಪಾಲೋವರ್ಸ್ ನ ಸೆಳೀತೇನೇ ಎನ್ನುವ ಹುಚ್ಚು ಆಸೆ.
ಬ್ರಾಹ್ಮಣರನ್ನು ಬೈದರೆ ಸುಮ್ಮನೇ ಇರುತ್ತಾರೆ ಎಂದು ಪದೇ ಪದೇ ಜಾತಿ ಹೆಸರೆತ್ತಿ ಮಾತಾಡುವ ಅವನಿಗೆ ನನ್ನ ಪ್ರಶ್ನೆ ಏನೆಂದರೆ ತಪ್ಪು ಮಾಡಿದಾಗ ಬೈದರೆ ಸುಮ್ಮನಿರದೇ ಏನು ಕೀಳುತ್ತಾರೆ ಅನ್ನುವುದು?
ಹೆಚ್ಚೆಂದರೆ ,ಬಿಲ್ಲವರು ಬೈದಾಗ ಬಂಟರನ್ನು, ಬಂಟರು ಬೈದಾಗ ಮೊಗವೀರರನ್ನು ,ಎಲ್ಲರೂ ಸೇರಿ ಬೈದಾಗ ಇನ್ಯಾರನ್ನೋ ಅಪ್ಪಿಕೊಂಡು ಪರಸ್ಪರ ಜಗಳ ಹತ್ತಿಸಿ ತನ್ನ ರಕ್ಷಣೆ ಮಾಡಿಕೊಳ್ಳಬಹುದಷ್ಟೇ.
ಅದನ್ನು ಬಿಟ್ಟು ಬೇರೇನೂ ಮಾಡುವ ನೈತಿಕ ಹಕ್ಕಿಲ್ಲ.
ಬಹುದೊಡ್ಡ ಮಠದ ಸ್ವಾಮೀಜಿ ಹೆಣ್ಣಿನ ಸಂಗ ಮಾಡಿ , ಅದು ಕೋರ್ಟ್ ನಲ್ಲಿ ಸಾಬೀತು ಆದರೆ.
ಸನ್ಯಾಸ ಕಳೆದು ಕೊಂಡ ಆತ ಪೀಠತ್ಯಾಗ ಮಾಡು ಅಂತಾ ಬೈದರೆ ಏನು ಮಾಡ್ತಾನೆ.
ಸಂಸಾರಿಯಾದರೂ ಮಠಾದೀಶನಾಗಿ ಇರಬಹುದು
ಎಂದು ವಾದ ಮಾಡಬೇಕು ಅಥವಾ ಸುಮ್ಮನೇ ಬಿದ್ದುಕೊಳ್ಳಬೇಕು.
ನಂದಳಿಕೆ ನಿರಂಜನ ಭಟ್ಟನಿಗೆ ,ಯಾಕಪ್ಪಾ ಉದ್ಯಮಿ ಬಾಸ್ಕರ ಶೆಟ್ಟಿ ಯವರನ್ನು ಕೊಂದು ಶವ ಕತ್ತರಿಸಿ ಹೋಮ ಕುಂಡಕ್ಕೆ ಹಾಕಿದೆ ಎಂದು ಕೇಳಿದರೆ ಏನು ಉತ್ತರ ಕೊಡುತ್ತಾನೆ? ಆದಿತ್ಯರಾವ್ ಗೆ ಯಾಕಪ್ಪಾ ಬಾಂಬ್ ಇಟ್ಟೆ ಎಂದು ಕೇಳಿದರೆ ಏನು ಉತ್ತರ ಕೊಡುತ್ತಾನೆ?
ತಪ್ಪು ಮಾಡಿ ಸಿಕ್ಕಿಬಿದ್ದ ಮೇಲೆ ಟೀಕೆ ಮಾಡಿದರೆ,
ಸುಮ್ಮನೇ ಇರುವುದೇ ಸಾತ್ವಿಕ ಗುಣ ಅಂತಾ ಬಡಕೊಳ್ಳುವ ನಡುಪಂಥೀಯ ನರಿಗೆ ,ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ತಾಖತ್ ಇದೆಯೇ?
ಸೂಲಿಬೆಲೆಗೆ ತಾನು ಮಾಡಿದ ಭಾಷಣಗಳೆಲ್ಲವೂ ಸತ್ಯ ಎಂದು ತೆರೆದ ವೇದಿಕೆ ಮುಂದೆ ಪುರಾವೆ ಸಮೇತ ವಿವರಿಸಲು ಹೇಗೆ ಸಾದ್ಯ ಇಲ್ಲವೋ..ಅದೇ ರೀತಿ ಚೊಕ್ಕವಾಗಿ ಕಪೋಲಕಲ್ಪಿತ ಕತೆಗಳನ್ನು ಬರೆದು ಸತ್ಯವನ್ನು ಅಡಿಗೆ ಹಾಕಿ ಕೂತವನಿಗೂ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕ ಸ್ಥೈರ್ಯ ಇರದ ಕಾರಣದಿಂದನೇ ಬಾಗಿಲು ಹಾಕಿ ಒಳಗೆ ಕೂತಿರುವುದು. ಸುಳ್ಳುಗಳನ್ನು ಪುರಾವೆ ಸಮೇತ ನಿರೂಪಿಸುವುದು ಹೇಗೆ.?
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243