ಲೈಫ್ ಸ್ಟೈಲ್
ಹಣೆಬರಹ ಪೂರ್ವ – ನಿಯೋಜಿತವೇ..?
ಸದಾ ಸ್ವರ್ಗ ಹಾಗೂ ನರಕದ ಆಮಿಷ ಹಾಗೂ ಭಯಕ್ಕೆ ಒಳಗಾಗಿ ಅತೀವ ಧಾರ್ಮಿಕತೆಗೆ ಒಳಗಾದ ಮಂದಿ ಜನರಲ್ ಆಗಿ ಒಪ್ಪುವ ಕಾಮನ್ ಸಂಗತಿಯೆಂದರೆ “ಹಣೆಬರಹ”. ನಾವು ಇಲ್ಲಿ ಹುಟ್ಟಿದ್ದು ನೆಪ ಮಾತ್ರ , ಎಲ್ಲವೂ ಅವನಾಡಿಸಿದಂತೆ ಆಡುವ ಆಟ. ಹೀಗೆ ಸದಾ ಜೀವನದಲ್ಲಿ ಈ ರೀತಿಯ ಯೋಚನೆಯಲ್ಲೇ ಅಥವ ಜಿಗುಪ್ಸೆಯನ್ನೇ ತುಂಬಿ ಬದುಕುವ ಮಂದಿ ಎಲ್ಲವೂ ಪೂರ್ವನಿಯೋಜಿತಗೊಂಡಂತೆ ನಮ್ಮ ಬದುಕಿನಲ್ಲಿ ನಡೆಯುತ್ತದೆ ಅದನ್ನು ತಪ್ಪಿಸಲು ಹಣೆಬರಹ ಬರೆದವನಿಂದಲೂ ಸಾಧ್ಯವಿಲ್ಲ ಎಂದು ಬಹಳ ಗಟ್ಟಿಯಾಗಿ ನಂಬುತ್ತಾರೆ.
ಇದಕ್ಕಾಗಿ ಪುರಾಣದ ಪುಟಗಳಿಂದ ಒಂದೆರಡು ಉದಾಹರಣೆಯಾಗಿ ಕಥೆಗಳನ್ನೂ ಉಲ್ಲೇಖ ಮಾಡುತ್ತಾರೆ. ಎಲ್ಲವೂ ಪೂರ್ವನಿಯೋಜಿತ ಹಾಗೂ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ “ಹಣೆಬರಹ”ವನ್ನೇ ಒಂದು ಸುತ್ತು ಹಾಕಿಕೊಂಡು ಬರೋಣ.
ನನಗೆ ಒಳ್ಳೆಯದಾಗಲಿ, ಕುಟುಂಬಕ್ಕೆ ಶ್ರೇಯಸ್ಸಾಗಲಿ, ವಿಧ್ಯಾರ್ಥಿಗಳಿಗೆ ಶ್ರೇಯಸ್ಸಾಗಲಿ (ನಮ್ಮ ವಿಟ್ಲದಲ್ಲಿ ಈಗ ವಿಧ್ಯಾರ್ಥಿಗಳ ಕ್ಷೇಮಕ್ಕಾಗಿ ಕಾಲೇಜಿನಲ್ಲೇ ಹೋಮ ನಡೆಯುವ ತಯಾರಿ ನಡೆಯುತ್ತಿದೆ), ದೋಷ ಕಳೆಯಲಿ, ದುಡ್ಡು ಬರಲಿ, ಲಾಸ್ ಆಗದಿರಲಿ, ಆರೋಗ್ಯ ವೃದ್ಧಿಸಲಿ, ಅಯಸ್ಸು ವೃದ್ಧಿಸಲಿ, ಮರಣದ ದವಡೆಯಿಂದ ತಪ್ಪಿಸಿಕೊಳ್ಳಲಿ, ನನ್ನ ವೈರಿ ಸಾಯಲಿ ಅಥವಾ ಹಾಳಾಗಿ ಹೋಗಲಿ ಎಂದು ಹರಕೆ, ಇತ್ಯಾದಿ ಬೇಡಿಕೆಗಳನ್ನಿಟ್ಟು ವಿಧ ವಿಧ ಬಗೆಯ ಆಚರಣೆ, ಪೂಜೆ, ಆರಾಧನೆಗಳೆಲ್ಲಾ ನಡೆಯುತ್ತದೆ. ಇದರ ಜೊತೆಗೆ ಮನೆಗಳಲ್ಲಿ ಶಾಂತಿ ನೆಲಸಲಿ ಎಂದು ಹೋಮ ಕೂಡಾ ಸೇರ್ಪಡೆಗೊಳಿಸಬಹುದು.
ಎಲ್ಲವೂ ನಿಮ್ಮ ನಿಮ್ಮ ಧಾರ್ಮಿಕ ನಂಬಿಕೆ. ಅದರಲ್ಲಿ ಎರಡು ಮಾತಿಲ್ಲ, ಆದರೆ ಇಲ್ಲಿ ಪ್ರಶ್ನೆ ಏನೆಂದರೆ, ಈ ಎಲ್ಲಾ ಆಚರಣೆ, ಆರಾಧನೆ, ಪೂಜೆ ನಡೆಸುವ ಉದ್ದೇಶದ ಬಗ್ಗೆ? ಇದನ್ನೆಲ್ಲಾ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಅಥವಾ ಕೆಟ್ಟದಾಗುವುದು ಬೇಡ ಎಂಬುದೊಂದೇ ಉದ್ದೇಶವಲ್ಲವೆ? ಲೋಕಕಲ್ಯಾಣಕ್ಕಾಗಿ ಎಂಬ ಹಣೆಪಟ್ಟಿಹೊತ್ತು ನಡೆಸುವ ಆಚರಣೆಗಳಲ್ಲೂ ನಾನು, ನೀವು ಆ ಲೋಕದಲ್ಲಿ ಸೇರ್ಪಡೆಗೊಂಡಿದ್ದೇವೆ ಎಂಬುದೂ ಸತ್ಯವಲ್ಲವೆ?
ಈಗ ಹಣೆಬರಹಕ್ಕೆ ಬರೋಣ. ಎಲ್ಲವೂ ಪೂರ್ವನಿಯೋಜಿತ, ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಅದು ಸೃಷ್ಟಿಕರ್ತನ ನಿಯಮ ಎನ್ನುವುದನ್ನೂ ನೀವು ನಂಬುವುದಾದರೆ, ಈ ಒಳ್ಳೆಯದಾಗಲಿ, ಕೆಟ್ಟದಾಗುವುದು ಬೇಡ ಎಂಬ ಆಸೆ, ಆತಂಕಕ್ಕೆ ಒಳಗಾಗಿ ಪೂಜೆ, ಆಚರಣೆ ನಡೆಸುವ ಅಗತ್ಯವಾದರೂ ಏನು? ನೀವು ಹುಟ್ಟಿದಾಗಲೇ ನಿಮ್ಮ ಸ್ಕ್ರಿಪ್ಟ್ ತಯಾರಾಗಿಯೇ ಬಂದಿದ್ದಲ್ಲವೆ? (ನನ್ನ ಪ್ರಕಾರವಲ್ಲ ನಿಮ್ಮ ಪ್ರಕಾರವೇ ಈ ಮಾತು). ಹಣೆಬರಹವನ್ನು ತಿದ್ದಲು, ಬದಲಾಯಿಸಲು ಸಾಧ್ಯವಿಲ್ಲವೆಂದರೆ ಈ ಪೂಜೆ, ಆಚರಣೆ, ಪ್ರಾರ್ಥನೆಗಳಿಂದ ನಿಮಗೆ ಒಳ್ಳೆಯದು ಹೇಗಾಗುತ್ತದೆ? ನಿಮಗೆ ಏನಾಗಬೇಕೋ ಅದು ಈಗಾಗಲೇ ಫಿಕ್ಸ್ ಆಗಿದೆ ಎಂದ ಮೇಲೆ ನಿಮಗೆ ಅನಗತ್ಯ ಚಿಂತೆ ಯಾಕೆ? ಈ ಗ್ರಹಣ ಸಂಧರ್ಭವನ್ನೂ ಸೇರಿಸಿಕೊಳ್ಳಿ, ಆ ರಾಶಿಯವನಿಗೆ ಹಾಗಾಗುತ್ತದೆ, ಈ ರಾಶಿ, ನಕ್ಷತ್ರದವನಿಗೆ ಹೀಗಾಗುತ್ತದೆ ಎಂದು ದೇವಸ್ಥಾನದಲ್ಲಿ ಕ್ಯೂ ನಿಂತು ನೂರೈವತ್ತರಿಂದ ಐನೂರು ಸಾವಿರದವರೆಗೂ ದುಡ್ಡು ಎಣಿಸಿ ಪೂಜೆ, ಅಭಿಷೇಕ ಮಾಡುವುದರಿಂದ ನಿಮ್ಮ ಹಣೆಬರಹ ಬದಲಾಗಿ ನಿಮಗೆ ಒಳ್ಳೆಯದಾಗುವು ದಾದರೂ ಹೇಗೆ?
ಒಂದೋ ಹಣೆಬರಹ ಅನ್ನೋದೇ ಸುಳ್ಳು. ಇಲ್ಲ ಹಣೆಬರಹ ಎಡಿಟ್ ಮಾಡುವುದು ಸಾಧ್ಯವಿಲ್ಲ, ಅಥವಾ ಎಡಿಟ್ ಮಾಡಬಹುದು.
ಈ ಮೂರರಲ್ಲಿ ಯಾವುದಾದರೂ ಒಂದು ನಿಲುವು ನಿಮ್ಮದಾಗಿರಬೇಕು. ನಿಮ್ಮ ನಂಬಿಕೆ ಪ್ರಕಾರ ಎಡಿಟಿಂಗ್ ಸಾಧ್ಯವೇ ಇಲ್ಲ. ಹಾಗಿದ್ದೂ ಈ ಎಡಿಟಿಂಗ್ ಮಾಡುವುದಕ್ಕೆ ಪೂಜೆ, ಅಭಿಷೇಕ ಎಲ್ಲಾ ಮಾಡೋ ಅಗತ್ಯವಾದರೂ ಏನು? ಇಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ತಕರಾರಿಲ್ಲ, ಆದರೆ ಪ್ರಶ್ನೆ, ನಿಮ್ಮಲ್ಲಿರುವ ಗೊಂದಲದ ಬಗ್ಗೆ ಅಥವಾ ದ್ವಂದ್ವ ನೀತಿಯ ಬಗ್ಗೆ. ಹಾಗೊಂದು ವೇಳೆ ದೇವರು ಮನಸ್ಸು ಮಾಡಿದರೆ ಹಣೆಬರಹ ಬದಲಾಗುತ್ತದೆ ಎನ್ನುವುದಾದರೆ ಅದನ್ನು ಅಪ್ರೋಚ್ ಮಾಡುವ ಬಗೆ ಹೇಗೆ?
ಹೀಗೆ ಪೂಜೆ, ಅಭಿಷೇಕ ಮಾಡುವುದರಿಂದ, ಅಂದರೆ ಥ್ರೂ ಪರ್ಟಿಕುಲರ್ ಪರ್ಸನ್ , ದೇವರಿಗೆ ಅವಹಾಲು ಸಲ್ಲಿಸುವುದರಿಂದ ನಿಮ್ಮ ಹಣೆಬರಹ ಎಡಿಟಿಂಗ್ ಮಾಡಬಹುದೇ? ಕನ್ಫರ್ಮ್ ಆಗುತ್ತದೆ ಎಂದಾದರೆ ದೇಶದಲ್ಲಿ ದಾರಿದ್ರ್ಯ ಅನ್ನೋದೇ ಇರಬಾರದಿತ್ತಲ್ಲವೇ? ಕಷ್ಟದಲ್ಲಿರುವವರ ಹಣೆಬರಹ ಎಡಿಟ್ ಮಾಡಿ ಅವರಿಗೂ ಒಂದು ನಿಮ್ಮದಿಯ ಬಾಳು ಕೊಡಬಹುದಿತ್ತಲ್ಲವೆ? ಒಬ್ಬ ಕಷ್ಟ ಅನಿಭವಿಸುವಾಗ ಒಂದೇ ಉಸಿರಲ್ಲಿ ಅದು ಅವನ ಹಣೆಬರಹ ಅಂತ ಷರಾ ಬರೆಯುವ ನೀವು ಅವನ ಹಣೆಬರಹವನ್ನು ತಿದ್ದಲು ಯಾಕೆ ಅಹವಾಲು ನೀಡಬಾರದು?
ಹಣೆಬರಹ ಎಂಬ ಭ್ರಮೆಯಲ್ಲಿ ತೇಲಾಡುವ ಮಂದಿ ಕನಿಷ್ಟ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ನಿಮ್ಮ ನೆಮ್ಮದಿಯ ಬದುಕನ್ನು ನಂಬಿಕೆಯ ಹೆಸರಲ್ಲಿ ಕಿತ್ತು ತಿನ್ನುವ ಅನಾಗರಿಕ ಜನರ ಬಗ್ಗೆ ಜಾಗ್ರತರಾಗಿ. ಇದೆಲ್ಲಾ ಹಿಂದಿನಿಂದಲೂ ಬಂದದ್ದು ಎನ್ನುವವರಲ್ಲಿ ನನ್ನ ಚರ್ಚೆಯಿಲ್ಲ. ಆದರೆ ಕನಿಷ್ಟ ತಮ್ಮ ಬಗ್ಗೆಯಾದರೂ ಪ್ರಜ್ಞೆಯಿಂದ ಯೋಚಿಸುವ ಮಂದಿಗೆ ವಿಮರ್ಷೆ ಮಾಡಲು ಸಹಕಾರಿಯಾದರೆ ಅಷ್ಟೇ ಸಾಕು. ನನ್ನನ್ನು ವಿರೋಧಿಸಲು, ಅಥವಾ ಅನ್ಯಧರ್ಮೀಯರಿಗೆ ಕಾಂಪಿಟೇಷನ್ ಕೊಡಲೆಂದೇ ಮೌಢ್ಯಕ್ಕೆ ಶರಣಾಗುವವರ ಬಗ್ಗೆ ನನ್ನ ತಕರಾರಿಲ್ಲ. ಕೀಪ್ ಕಂಟಿನ್ಯೂ.
– ಭಾಸ್ಕರ್ ವಿಟ್ಲ
ಪ್ರಾಧ್ಯಾಪಕರು
ಮಾನಸಿಕ ತಜ್ಞರು