ಅಂತರಂಗ
ಅರಿಮೆಯ ಅರಿವಿರಲಿ-58 : ಶಿಶುಪ್ರಧಾನ ಸಮಾಜ
- ಯೋಗೇಶ್ ಮಾಸ್ಟರ್
ಮಾನವ ಸಮಾಜವು ಪ್ರಾರಂಭವಾಗಿ ಬಹಳ ಕಾಲವಾಯಿತು. ಆಗಿನ ಸಮಸ್ಯೆಗಳಿಗೆ, ಸಂಘರ್ಷಗಳಿಗೆ ಮತ್ತು ವೈಫಲ್ಯಗಳಿಗೆ ಪ್ರಾರಂಭಿಕ ಹಂತಗಳಲ್ಲಿನ ಪ್ರಯೋಗಗಳು ಮತ್ತು ಅನುಭವಗಳಿಗೆ ಇದ್ದಂತಹ ಸಂಪನ್ಮೂಲಗಳ ಕೊರತೆ ಎಂದು ಮನ್ನಿಸಬಹುದು.
ಮಾನವ ಸಮಾಜ ಹೊಂದಿರುವ ಅನುಭವದ ಸುದೀರ್ಘ ಅವಧಿಯನ್ನು ಗಣನೆಗೆ ತೆಗೆದುಕೊಂಡರೆ ಈ ಹೊತ್ತಿಗೆ ಇಡೀ ಮಾನವ ಜಗತ್ತು ಆರೋಗ್ಯ, ಸೌಹಾರ್ದ ಮತ್ತು ಆನಂದದಿಂದ ಇರಬೇಕಿತ್ತು. ಕನಿಷ್ಟ ಪಕ್ಷ ಸಮಸ್ಯೆ, ಸಂಘರ್ಷ ಮತ್ತು ವೈಫಲ್ಯಗಳು ಕ್ಷೀಣಿಸಿಬೇಕಿತ್ತು. ಆದರೆ ಇಂದು ನಾವು ಬದುಕುತ್ತಿರುವ ಸಮಾಜದಲ್ಲಿ ಎಲ್ಲವೂ ಸರಿಯಾಗಿಲ್ಲ.
ಇನ್ನೂ ತನ್ನ ಒಟ್ಟಾರೆಯ ಬದುಕಿನಲ್ಲಿ ಸ್ಥಿರತೆ ಕಂಡಿಲ್ಲ. ಆರ್ಥಿಕ ಸಮಸ್ಯೆ, ಮೂಲಭೂತ ಸೌಕರ್ಯಗಳ ಕೊರತೆ, ನಾಗರಿಕ ದಂಗೆ, ಯುದ್ಧ, ಸಾಮಾಜಿಕ ಅಸಮಾನತೆ, ಧಾರ್ಮಿಕ ಸಂಘರ್ಷ, ಜನಾಂಗೀಯ ದ್ವೇಷ, ಸೈದ್ಧಾಂತಿಕ ಸಮರ, ಶ್ರೇಷ್ಟತೆಯ ಪೈಪೋಟಿ, ಮೌಢ್ಯಾಚರಣೆಗಳು, ಪರಿಸರ ನಾಶ, ಜೀವನಮಟ್ಟದ ವೈಫಲ್ಯ, ಸಂಬಂಧಗಳ ಗೊಂದಲ ಮತ್ತು ಇನ್ನೂ ಅನೇಕ ಮನುಷ್ಯ ಕೇಂದ್ರಿತ ಸಮಸ್ಯೆಗಳು ತಾಜಾ ಬೆಂಕಿಯಂತೆಯೇ ಉರಿಯುತ್ತಿವೆ.
ಹೌದು, ಬೆಂಕಿಯ ಜ್ವಾಲೆಗಳಲ್ಲಿ ಹೊಸತು ಹಳತುಗಳಿಲ್ಲ. ಸಮಸ್ಯೆ, ಸಂಘರ್ಷ ಮತ್ತು ವೈಫಲ್ಯಗಳ ಬೆಂಕಿಯಲ್ಲಿ ಬೇಯುತ್ತಿರುವ ಮನುಷ್ಯನು ಇಷ್ಟು ಸುಧೀರ್ಘಕಾಲ ಸಾಮಾಜಿಕ ಜೀವನ ನಡೆಸಿದರೂ ಎಡವಿರುವುದು ಎಲ್ಲಿ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಅವನಿಗಿರುವ ಸಾಮಾಜಿಕ ಅನುಭವ ಇನ್ನೂ ಸಾಲದೇ? ಒಬ್ಬ ವ್ಯಕ್ತಿ, ಒಂದು ಕುಟುಂಬ, ಒಂದು ಸಮಾಜ, ಒಂದು ರಾಷ್ಟ್ರ ಮತ್ತು ಇರುವುದೊಂದೇ ಭೂಮಿ; ಆರೋಗ್ಯವಾಗಿ ಆನಂದದಿಂದ ಇರಲು ಇನ್ನೂ ಸಂಪೂರ್ಣ ಸಾಧಿಸಲು ಸಾಧ್ಯವಿಲ್ಲದಿರುವುದು ಮನುಷ್ಯ ತನ್ನ ಆದ್ಯತೆಯನ್ನು ಗುರುತಿಸಿಕೊಂಡಿಲ್ಲದೇ ಇರುವುದು ಎಂದು ನನ್ನ ಅಭಿಪ್ರಾಯ.
ಮಾನವ ಸಮಾಜದ ಆದ್ಯತೆಯ ವಿಷಯಗಳ ಪಟ್ಟಿಯನ್ನು ಪುನರ್ಪರಿಶೀಲನೆ ಮಾಡಬೇಕಿದೆ. ಇದರಿಂದ ಈಗ ಮತ್ತು ನಾಳೆ, ನಾವು ಹಾಗೂ ಮುಂದಿನ ಪೀಳಿಗೆಗಳು, ಕನಿಷ್ಟ ಪಕ್ಷ ಮನುಷ್ಯ ಮಾಡುವ ದುರಂತಗಳಿಂದಾದರೂ ಬಿಡುಗಡೆಯನ್ನು ಪಡೆಯಬಹುದು.
ಮಕ್ಕಳ ಪೋಷಣೆ ಮತ್ತು ಶಿಕ್ಷಣವನ್ನು ಆದ್ಯತೆಯ ಪಟ್ಟಿಯಲ್ಲಿ ಯಾವ ಕ್ರಮದಲ್ಲಿ ಸೂಚಿತವಾಗಿವೆ ಎನ್ನುವುದರ ಮೇಲೆ ಮಾನವ ಸಮಾಜದ ವರ್ತಮಾನದ ಮತ್ತು ಭವಿಷ್ಯದ ಬದುಕು ನಿರ್ಧರಿತವಾಗಿದೆ. ನಿನ್ನೆಗಳ ಸಂಘರ್ಷಗಳು, ಸಮಸ್ಯೆಗಳು, ಸಂಕಷ್ಟಗಳು, ಸಂಕಟಗಳು ಪ್ರಮಾದಗಳಾಗಿ ಇಂದಿನ ಮಕ್ಕಳ ಮನಸ್ಸಿನ ಮೇಲೆ, ಭಾವನೆಗಳ ಮೇಲೆ, ಪೋಷಣೆಯ ಮೇಲೆ ಮತ್ತು ಶಿಕ್ಷಣದ ಮೇಲೆ ಪ್ರಭಾವ ಬೀರಿದರೆ ನಾಳಿನ ಸಮಾಜವು ಅಸ್ಥಿರತೆಯಲ್ಲಿಯೇ ಇರುತ್ತದೆ. ಹಳೆಯ ಎಲ್ಲಾ ಸಂಕಟಗಳು ಹೊಸ ರೂಪಗಳಲ್ಲಿ ಜೀವಂತವಾಗಿಯೇ ಇರುತ್ತದೆ.
ಮಕ್ಕಳ ಮನಸ್ಸನ್ನು ರಕ್ಷಿಸಿದರೆ ಸಾಕು
ಯಾರ ಮಗುತನವನ್ನು ಜತನ ಮಾಡುತ್ತೇವೆಯೋ ಆ ವ್ಯಕ್ತಿಯ ತನ್ನತನವು ನೈತಿಕವಾಗಿಯೂ ಮತ್ತು ಬೌದ್ಧಿಕವಾಗಿಯೂ ಬಲಿಷ್ಟವಾಗಿರಲು ಸಾಧ್ಯ. ಹಾಗಾಗಿ ಶಿಶುವನ್ನು ಉಪಚರಿಸುವ ರೀತಿಯಲ್ಲಿ, ಸಂಸ್ಕರಿಸುವ ವಿಧಾನದಲ್ಲಿ ಮತ್ತು ಶಿಕ್ಷಣ ಕೊಡುವ ವಿಧಾನಗಳಲ್ಲಿ ಶಿಸ್ತು, ಸಂಯಮ ಮತ್ತು ಕ್ರಮವಂತೂ ಅಗತ್ಯವಾಗಿ ಬೇಕು.
ಒಂದು ದೊಡ್ಡದಾದ ಮರವು ತನ್ನ ಭೂತ ಕಾಲದಲ್ಲಿ ಸಣ್ಣ ಬೀಜವೇ ಆಗಿರುತ್ತದೆ. ಪ್ರಕೃತಿಯ ತೆಕ್ಕೆಯಲ್ಲಿರುವ ಮರವಾದರೂ ಒಮ್ಮೊಮ್ಮೆ ಯಾವ ವಿಶೇಷ ಉಪಚಾರ ಮತ್ತು ಸಂಸ್ಕರಣಗಳಿಲ್ಲದೇ ತನ್ನ ನೈಸರ್ಗಿಕ ಪ್ರಭಾವಕ್ಕೇ ತೆರೆದುಕೊಂಡು ವೃಕ್ಷವಾಗುವ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳಬಹುದು. ಮನುಷ್ಯನ ಸಮಾಜದಲ್ಲಿ ಎಳೆಯ ಸದಸ್ಯನಾಗಿರುವ ಮಗುವಿನ ವಿಚಾರದಲ್ಲಿ ಹಾಗಾಗುವುದಿಲ್ಲ.
ಮಗುವನ್ನು ಅದರ ನೈಸರ್ಗಿಕ ಗುಣಗಳಿಂದ ಬಿಡಿಸಿ ಸಾಮಾಜಿಕ ಪ್ರಾಣಿಯನ್ನಾಗಿಸುವ ತರಬೇತಿಯನ್ನು ಸಮಾಜದ ಹಿರಿಯ ಸದಸ್ಯರು ಕೊಡುತ್ತಾರೆ. ಈ ಮಗುವನ್ನು ಸ್ವತಂತ್ರ ಜೀವನಕ್ಕೆ ಸಜ್ಜುಗೊಳಿಸುವ, ಸಾಮಾಜಿಕ ಜೀವನಕ್ಕೆ ಒಗ್ಗಿಸುವ ಪ್ರಕ್ರಿಯೆಯಲ್ಲಿ ಬಲವನ್ನೂ, ಒಲವನ್ನೂ ಮತ್ತು ನಲಿವನ್ನೂ ರೂಢಿಸಬೇಕು. ಅದು ಹೊಣೆಗಾರಿಕೆಯೂ ಹೌದು ಮತ್ತು ಸವಾಲಿನದೂ ಹೌದು.
ಮಗುತನದ ಬಹುಮುಖ್ಯ ಗುಣಗಳೆಂದರೆ ಅದು ಎಳೆಯದಾಗಿ ಮೆದುವಾಗಿರುವುದು, ಗ್ರಹಿಸುವ ಸಾಮರ್ಥ್ಯದಲ್ಲಿ ಶಕ್ತಿಯಾಗಿರುವುದು ಮತ್ತು ಸ್ವೀಕರಿಸಿದ್ದನ್ನು ಹೆಚ್ಚಿಸುವ, ವಿಕಸಿಸುವ ಹಾಗೂ ಮರುಸೃಷ್ಟಿಸುವ ಫಲವತ್ತಿಕೆಯನ್ನು ಹೊಂದಿರುವುದು. ಆದ್ದರಿಂದ ಈ ಮಗುತನವನ್ನು ಬಹಳ ನೇಮ ನಿಷ್ಟೆಯಿಂದ ಜತನ ಮಾಡಬೇಕಾಗಿರುವುದು.
ಇಂತಹ ಮೆದುತನದ ಮತ್ತು ಫಲವಂತಿಕೆಯ ಮಗುತನವು ಯಾವುದ್ಯಾವುದೋ ಆಕ್ರಮಣಗಳಿಗೆ ಸಿಕ್ಕು ನಾಶವಾಗದಿರಲು ಪ್ರತಿಯೊಬ್ಬ ಹಿರಿಯನೂ, ಅಂದರೆ ಸಮಾಜದ ಹಿರಿಯ ಸದಸ್ಯನು ಕಿರಿಯ ಸದಸ್ಯನಿಗೆ ಕವಚವಾಗಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಸಂರಕ್ಷಿಸಲ್ಪಟ್ಟ ಶಿಶುತನದ ಸಸಿಯು ನಾಳೆ ಸಶಕ್ತವಾದ ತನ್ನತನವನ್ನು ಹೊಂದಿರುವ ವ್ಯಕ್ತಿಯಾಗಿ ರೂಪುಗೊಳ್ಳುವ ಸಾಧ್ಯತೆ ಇರುವುದು.
ಹಾಗೆಯೇ ಭದ್ರತೆ ಅಥವಾ ರಕ್ಷಣೆಯ ನೆಪದಲ್ಲಿ ಮಗುವಿನ ಸ್ವಾತಂತ್ರ್ಯಹರಣ ಮಾಡುವುದಲ್ಲ. ಹಿರಿಯ ಸದಸ್ಯರ ಜೀವನಾನುಭವ, ಜೀವನ ಕೌಶಲ್ಯ ಮತ್ತು ಜೀವನ ಪಾಠಗಳು ತಮ್ಮ ಮುಂದಿರುವ ಮಗುವಿಗೆ ಒಂದು ಸರಿಯಾದ ಅನುಭವ ಕೊಡದಿದ್ದರೆ, ಕೌಶಲ್ಯವನ್ನು ಕಲಿಸದಿದ್ದರೆ, ತನ್ನ ಜೀವನವನ್ನು ತಾನು ಸಮರ್ಥವಾಗಿ ಪ್ರೀತಿಸಿಕೊಳ್ಳುತ್ತಾ ಎಲ್ಲರೊಡನೆ ಬದುಕಲು ಸಾಧ್ಯವಾಗದಿದ್ದರೆ; ಆ ಹಿರಿ ಬದುಕಿನ ಸಾರ್ಥಕತೆಯೇನು?
ಶಿಶುವೆಂಬ ಮಹಾಬಲ
ಮಗುವು ಆಕಾರದಲ್ಲಿ ಚಿಕ್ಕದೆಂದೂ, ಆಧಾರಕ್ಕೆ ನಮ್ಮನ್ನು ಅವಲಂಬಿಸಿದೆಯೆಂದೂ, ಆಹಾರವನ್ನು ನಾವೇ ನೀಡುತ್ತಾ, ಅಕ್ಷರವನ್ನೂ ಕಲಿಸುವುದರಿಂದ ನಾವೇ ಅದರ ಮಹಾಪೋಷಕರೂ, ಆಧಾರಸ್ತಂಭವೆಂದೂ ಹಿರಿಯರು ತಿಳಿದುಕೊಳ್ಳುವುದರಿಂದ ಎಷ್ಟೋ ಮಕ್ಕಳ ಸಾಮರ್ಥ್ಯ ಬೆಳೆಯುವುದಿಲ್ಲ, ಪ್ರತಿಭೆಗಳು ಅನಾವರಣಗೊಳ್ಳುವುದಿಲ್ಲ, ಮತ್ತು ಬದುಕಿನ ಸ್ಥಿರತೆ ಕಾಣುವುದಿಲ್ಲ. ಮಕ್ಕಳ ಎಳೆಯತನವನ್ನು ಬಲಗೊಳಿಸುತ್ತೇವೆ ಎಂಬ ಭ್ರಮೆಯಿಂದ ಅವರನ್ನು ದುರ್ಬಲಗೊಳಿಸುತ್ತೇವೆ.
ವಾಸ್ತವವಾಗಿ ನಮ್ಮ ಮಕ್ಕಳು ನಮಗಿಂತ ದೂರಗಾಮಿಗಳು, ಸಬಲರು ಮತ್ತು ವಿವೇಚನೆಯುಳ್ಳವರು. ಅವರ ಸಂವೇದನಾಶೀಲತೆಯನ್ನು ಕಂಡುಕೊಳ್ಳಲು ಬಿಡದೇ, ಸೃಜನಶೀಲತೆಯನ್ನು ಮತ್ತು ಕ್ರಿಯಾಶೀಲತೆಯನ್ನು ಪ್ರಯೋಗಕ್ಕೆ ಒಳಪಡಿಸಿಕೊಳ್ಳಲೂ ಬಿಡದೇ ನಮ್ಮ ಪ್ರಯೋಗಳ ಸಾಧನೆ ಮತ್ತು ವೈಫಲ್ಯಗಳನ್ನೇ ಅವರ ಪ್ರಯೋಗಳಿಗೂ ಮಾನದಂಡವಾಗಿಸುವುದರಿಂದ ಅವರ ನಿಜವಾದ ಬಲ ಸಂವರ್ಧನೆಯಾಗುವುದಿಲ್ಲ. ಎಷ್ಟೋ ಸಲ ಅನಾವರಣವೇ ಆಗುವುದಿಲ್ಲ.
ನಮ್ಮ ದೌರ್ಬಲ್ಯವನ್ನು ಅರಿಯುವಲ್ಲಿ ಅವರ ಸಾಮರ್ಥ್ಯವನ್ನು ಅರಿಯುವ ಸಾಧ್ಯತೆಯುಂಟು. ನಮ್ಮ ವೈಫಲ್ಯವನ್ನು ಗುರುತಿಸಿಕೊಳ್ಳುವುದರಲ್ಲಿ ಅವರ ಸಾಫಲ್ಯವಿರಬಹುದು. ನಮ್ಮ ಸಿದ್ಧ ಮಾದರಿಗಳನ್ನು ಮೀರುವುದರಲ್ಲಿ ಅವರ ಸಾಧನೆಯ ಹಾದಿಯು ವಿಸ್ತರಿಸುವ ಸಾಧ್ಯತೆಗಳಿರುತ್ತದೆ. ನಮ್ಮ ಹಿರಿಮೆ ಅವರ ಮುಂದೆ ವಿದೇಯವಾಗಬೇಕು. ನಮ್ಮ ಗುರಿ ಅವರ ಗುರಿಯಲ್ಲ. ಅವರ ದಾರಿಯಲ್ಲಿ ನಾವು ಅವರನ್ನು ಹೊತ್ತೊಯ್ಯಲಾಗದಿದ್ದರೂ ತೊಡಕಾದಿರುವಂತೆ ನಮ್ಮನ್ನು ನಾವು ನಿರ್ಬಂಧಿಸಿಕೊಂಡರೆ ಅವರು ತಮ್ಮ ಬಲವನ್ನು ತಾವು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮಗುವೆಂದರೆ ನಮ್ಮ ಅಧೀನದಲ್ಲಿರುವ ಅಧೀರನೆಂಬ ಭ್ರಮೆ ನಮ್ಮಿಂದ ತೊಲಗದ ತನಕ, ಮಗುವಿನ ಅಸಹಾಯಕತೆಗೆ ನಾನೇ ಔದಾರ್ಯದ ಮಹಾ ಸಹಾಯವೆಂಬ ಅಹಂಕಾರ ಕುಸಿಯುವ ತನಕ, ಮಗುವೆಂಬ ಮುಗ್ಧ ಜೀವಕ್ಕೆ ನಾವೇ ವಿಚಾರ ಮತ್ತು ಚಿಂತನೆಗಳನ್ನು ನೀಡಬೇಕು ಎಂಬ ಅವೈಜ್ಞಾನಿಕ ನಿಲುವನ್ನು ತೊರೆಯುವ ತನಕ ಮಗುವು ತನ್ನ ಬಲವನ್ನು ತಾನು ಸಾಕ್ಷಾತ್ಕರಿಸಿಕೊಳ್ಳಲು ನಮ್ಮ ಹಿರಿಯರು ಬಿಡುವುದಿಲ್ಲ.
ಶಿಶುವಿನ ಬಲವು ಹೊತ್ತಿಳಿಯುತ್ತಿರುವ ಹಿರಿಯರಿಗೆ ಬಲ ನೀಡುವುದು. ಈ ಸತ್ಯವನ್ನು ಅರಿಯುವ ಹಿರಿಯರು ಶಿಶುವಿನ ಪೋಷಣೆಯ ಮತ್ತು ಶಿಕ್ಷಣದ ವಿಷಯದಲ್ಲಿ ತಮ್ಮ ದಾರಿ ಮತ್ತು ಗುರಿಯನ್ನು ಸ್ಪಷ್ಟವಾಗಿಸಿಕೊಂಡಿರಲು ಸಾಧ್ಯ. ಶಿಶುಬಲವೇ ಸಮಾಜದ ಮಹಾಬಲ.
ಶಿಶುಮನ
ಮಕ್ಕಳ ಮನಸ್ಸು ಬಹಳ ವಿಶಿಷ್ಟ ಸಂಯೋಜನೆಯಿಂದ ಕೂಡಿರುತ್ತದೆ. ಮೊದಲನೆಯದಾಗಿ ಅದು ಬಹಳ ಸಶಕ್ತವಾಗಿರುತ್ತದೆ. ಎರಡನೆಯದಾಗಿ ಗ್ರಹಿಕೆಯಲ್ಲಿ ಚುರುಕಾಗಿರುತ್ತದೆ. ಮೂರನೆಯದಾಗಿ ಅಗಾಧ ಫಲವತ್ತಿನ ಕ್ಷೇತ್ರವಾಗಿರುತ್ತದೆ. ನಾಲ್ಕನೆಯದಾಗಿ ಸಲಿಲತೆಯಿಂದ ಕೂಡಿರುತ್ತದೆ. ಐದನೆಯದಾಗಿ ಮುಗ್ಧವಾಗಿರುತ್ತದೆ. ಆರನೆಯದಾಗಿ ಸಂವೇದನೆಯಿಂದ ಕೂಡಿರುತ್ತದೆ. ಏಳನೆಯದಾಗಿ ಸೂಕ್ಷ್ಮವಾಗಿರುತ್ತದೆ. ಈ ಏಳೂ ಗುಣಗಳ ಕಾರಣದಿಂದ ಅವರ ಜೊತೆಗೆ ಹಿರಿಯರಾದವರು ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದಲೂ ಮತ್ತು ಜವಾಬ್ದಾರಿಯಿಂದಲೂ ವರ್ತಿಸಬೇಕು.
ಅವರ ಸಂಪರ್ಕದಲ್ಲಿರುವಾಗ ಮತ್ತು ಸಂವಹನ ನಡೆಸುವಾಗ ಹಿರಿಯರ ನಡವಳಿಕೆ ಬಹಳ ಸಂವೇದನೆಯಿಂದ ಕೂಡಿರಬೇಕು. ಸೂಕ್ಷ್ಮದೃಷ್ಟಿ ಮತ್ತುದೂರದೃಷ್ಟಿಯನ್ನು ಹೊಂದಿರದ ಹಿರಿಯರು ಮಕ್ಕಳ ಮನಸ್ಸನ್ನು ಘಾಸಿ ಮಾಡುವುದು ಮಾತ್ರವಲ್ಲದೇ, ತಪ್ಪಾಗಿ ತರಬೇತಿಗಳ ಮೂಲಕ ಪ್ರಮಾದಕರ ವ್ಯಕ್ತಿತ್ವಗಳನ್ನು ರೂಪಿಸುತ್ತಾರೆ.
ಶಕ್ತಿಶಾಲಿಯಾದ ಮನಸ್ಸಿರುವ ಕಾರಣದಿಂದ ಅವರಿಗೆ ಒಲ್ಲದ ಮತ್ತು ಒಗ್ಗದ ವಿಷಯಗಳಿಗೆ ಪ್ರತಿರೋಧವನ್ನು ಒಡ್ಡುತ್ತವೆ.
ಬಂಡಾಯವೇಳುತ್ತವೆ. ಗ್ರಹಣಶಕ್ತಿಯು ಚೆನ್ನಾಗಿರುವುದರಿಂದ ಬೋಧನೆಗಳನ್ನು ಮೀರಿದ ಮಾದರಿಗಳನ್ನು ಗ್ರಹಿಸಿ ತಮ್ಮದಾಗಿಸಿಕೊಳ್ಳುತ್ತವೆ. ಮನಸ್ಸು ಫಲವತ್ತಾದ ಕ್ಷೇತ್ರವಾದ್ದರಿಂದ ಒಳಿತನದೋ, ಕೆಡುಕಿನದೋ, ಬೇಕಾದ್ದೋ, ಬೇಡದ್ದೋ; ಯಾವುದೇ ರೀತಿಯ ಬಿತ್ತನೆಯಾದರೂ ಹುಲುಸಾಗಿ ಬೆಳೆದು ಫಲಕೊಡುತ್ತವೆ. ಸಲಿಲತೆಯು ಮಕ್ಕಳ ಮನಸ್ಸಿನ ಗುಣವಾದ್ದರಿಂದ ಯಾವುದೇ ವಾತಾವರಣದ ಗುಣಾವಗುಣಗಳಿಗೆ ಒಗ್ಗಿಕೊಂಡು ಆಯಾ ಪರಿಸರದ ಪ್ರಭಾವಗಳಿಂದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತವೆ.
ಮುಗ್ಧವಾಗಿರುವುದರಿಂದ ತಾರ್ಕಿಕವಾಗಿ ವಿಷಯಗಳನ್ನು ವಿಶ್ಲೇಷಿಸದೇ ಸುಳ್ಳು, ನಿಜ, ಅಗತ್ಯ, ಅನಗತ್ಯಗಳ ಪರಿವೇ ಇಲ್ಲದೇ, ಮನವೊಲಿಸುವ ಆಧಾರದ ಮೇಲೆ ಎಲ್ಲವನ್ನೂ ನಿಜವೆಂದೇ ಒಪ್ಪಿಕೊಳ್ಳುತ್ತವೆ. ಸಂವೇದನಾಶೀಲಗುಣವೂ ಮಕ್ಕಳ ಮನಸ್ಸಿನ ಸಹಜವಾದ ಗುಣವಾದ್ದರಿಂದ ಅವರಿಗೆ ನಿಲುಕದ, ತರಬೇತಿ ನೀಡಲಾಗದ, ಅರ್ಥ ಮಾಡಿಸಲಾಗದ ವಿಷಯಗಳೇನೂ ಇಲ್ಲ. ಆದರೆ ಅವುಗಳನ್ನು ಮುಟ್ಟಿಸುವ ಕ್ರಮದ ಬಗ್ಗೆ ಹಿರಿಯರಿಗೆ ಅರಿವಿರಬೇಕು. ಕೊನೆಯದಾಗಿ ಮಕ್ಕಳ ಮನಸ್ಸು ಸೂಕ್ಷ್ಮ. ತೆಳುವಾದ ಗಾಜಿನ ಪರೆಯಷ್ಟು ಸೂಕ್ಷ್ಮ. ಅದನ್ನು ಘಾಸಿಗೊಳಿಸಿದರೆ ಅದರ ಪರಿಣಾಮ ಎಷ್ಟು ದಾರುಣವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ.
ಮಕ್ಕಳ ಮನಸ್ಸಿನ ಸಮಸ್ಯೆ ಹಲವಾರು ಮೂಲಗಳು. ಕೆಲವು ಶಾರೀರಿಕ ಸಮಸ್ಯೆಯಾದರೆ, ಮತ್ತೆ ಕೆಲವಕ್ಕೆ ಕೌಟುಂಬಿಕ ಮತ್ತು ಸಾಮಾಜಿಕ ಕಾರಣಗಳು. ಆದರೆ ಅರಿತವರಿಗೆ ಪರಿಹಾರವಿದೆ.
ಶಿಶುತನ ವರ್ಸಸ್ ತನ್ನತನ
ಮಗುವೊಂದರ ಶಿಶುತನ ಮತ್ತು ವ್ಯಕ್ತಿಯೊಬ್ಬನ ತನ್ನತನಕ್ಕೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಶಿಶುತನವು ನೈಸರ್ಗಿಕವಾಗಿ ರೂಪುಗೊಂಡಿರುವುದು. ವ್ಯಕ್ತಿಯ ತನ್ನತನವು ತಾನೇ ರೂಪಿಸಿಕೊಳ್ಳುವುದು. ಮಗುವು ತನ್ನ ಶಿಶುತನದ ಸಹಜತೆಯಿಂದ ವರ್ತಿಸಿದರೆ, ವ್ಯಕ್ತಿಯು ತನ್ನತನವನ್ನು ತನ್ನ ವ್ಯಕ್ತಿತ್ವದ ಮೂಲಕ ಪ್ರಕಟಗೊಳಿಸಬೇಕಾಗುತ್ತದೆ. ಆದರೆ ಎರಡೂ ಸಂಸ್ಕಾರಕ್ಕೆ ಒಳಗಾಗುತ್ತಾ ತಮ್ಮ ಪ್ರಕಟಗೊಳ್ಳುವ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಹೊಂದುತ್ತಾ ಹೋಗುತ್ತದೆ. ಇದು ಅವುಗಳಿಗಿರುವ ಸಾಮ್ಯತೆ.
ಶಿಶುತನದ ಪ್ರಕಟಣೆ ಅನೈಚ್ಛಿಕವಾದ ಪ್ರಕ್ರಿಯೆಯಾದರೆ, ತನ್ನತನ ಐಚ್ಛಿಕ. ಶಿಶುತನದ ಪ್ರಕಟಣೆಯಲ್ಲಿ ಮುಗ್ಧತೆ ಇದ್ದರೆ, ತನ್ನತನದಲ್ಲಿ ಪ್ರಜ್ಞಾವಂತಿಕೆ ಇರುತ್ತದೆ. ಶಿಶುತನದ ಸೌಂದರ್ಯವು ಮುದ ತರುವ ಕಾರಣವೇ ಅದು ಸಹಜವಾಗಿ ಸೂಸುವ ಮುಗ್ಧತೆ. ತನ್ನತನದ ಪ್ರಕಟಣೆಯು ಮೂರ್ಖತೆಯಿಂದಲೂ ಕೂಡಿರಬಹುದು. ಏಕೆಂದರೆ ಅದು ತರ್ಕ, ಲೆಕ್ಕಾಚಾರ, ಉದ್ಧೇಶಿತ ಶ್ರದ್ಧೆ ಮತ್ತು ನಂಬಿಕೆಗಳಿಂದ ಕೂಡಿರುತ್ತದೆ. ಅದು ನಿರ್ಬಂಧಕ್ಕೆ ಒಳಗಾಗಿರುತ್ತದೆ.
ಆದರೆ ಶಿಶುತನಕ್ಕೆ ನಿರ್ಬಂಧವಿರುವುದಿಲ್ಲ. ಯಾವುದೇ ಬಗೆಯ ಪೂರ್ವಾಗ್ರಹಗಳಿರುವುದಿಲ್ಲ. ಸೈದ್ಧಾಂತಿಕ ಅಥವಾ ತಾತ್ವಿಕ ನೆಲೆಗಟ್ಟಿರುವುದಿಲ್ಲ. ಬರಿಯ ಹಿತ ಮತ್ತು ಆನಂದದ ಅಪೇಕ್ಷೆಯಿರುವ ಮಗುವಿಗೆ ಯಾವ ಗೊಂದಲಗಳು ಇರುವುದಿಲ್ಲ. ಅದೇ ಅವರಿಗೆ ವರ. ಹಾಗಾಗಿಯೇ ಯೇಸುಕ್ರಿಸ್ತ ಹೇಳುವುದು. “ನೀವು ಮಕ್ಕಳಂತಾಗದಿದ್ದರೆ ನಿಮಗೆ ಸ್ವರ್ಗಸಾಮ್ರಾಜ್ಯವು ಇರುವುದಿಲ್ಲ.”
ಶಿಶುತನವು ಪಶುತನದಂತೆಯೇ ಪ್ರಕೃತಿಯಲ್ಲಿ ನೈಸರ್ಗಿಕ. ಅವನನ್ನು ಸಾಮಾಜಿಕವಾಗಿ ಸಂಘ ಜೀವನಕ್ಕೆ ಒಳಪಡಿಸುವಾಗ ಆ ಶಿಶುತನದ ಲಾಲಿತ್ಯ ಮತ್ತು ಸೌಂದರ್ಯಕ್ಕೆ ಧಕ್ಕೆಯಾಗದ ಹಾಗೆ ಎಚ್ಚರಿಕೆ ವಹಿಸುವುದರಲ್ಲಿ ಹಿರಿಯರ ಕೌಶಲ್ಯವಿದೆ.
ಹಿರಿಯರ ಸಮಸ್ಯೆ ಎಂದರೆ ರೂಢಿಸಿಕೊಂಡ ಅಥವಾ ರೂಪಿಸಿಕೊಂಡ ತಮ್ಮತನದ ಪ್ರಭಾವದಲ್ಲಿ ತಾವು ದಾಟಿ ಬಂದ ಶಿಶುತನವನ್ನು ಮರೆತಿರುತ್ತಾರೆ. ಆ ವಿಸ್ಮೃತಿಯೇ ತಮ್ಮ ಜೊತೆಗಿರುವ ಮಕ್ಕಳ ಶಿಶುತನದ ನಾಶಕ್ಕೆ ಹಲವು ಕಾರಣಗಳಲ್ಲೊಂದು. ಶಿಶುತನವೆಂಬುದರ ಸೌಂದರ್ಯ, ಪ್ರಾಮಾಣಿಕತೆ, ಮುಗ್ಧತೆ ಮತ್ತು ಸೂಕ್ಷ್ಮತೆಯನ್ನು ತಮ್ಮತನದಲ್ಲಿ ಜೀವಂತವಾಗಿರಿಸಿಕೊಂಡಾಗಲೇ ನಿಜವಾದ ಆನಂದ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243