ಅಂತರಂಗ

ಅರಿಮೆಯ ಅರಿವಿರಲಿ-54 : ಮನಸಿನ ಸುಳಿಯಲ್ಲಿ ಮೈ

Published

on

  • ಯೋಗೇಶ್ ಮಾಸ್ಟರ್

ಲೋಚನೆ, ಅದೇನು ಬರತ್ವೆ ಹೋಗತ್ವೆ ಚಲಿಸುವ ಮೋಡಗಳಂತೆ. ಇಷ್ಟೇ ಆಗಿದ್ದರೆ ಇಷ್ಟು ಬರೆಯುವ ಅಗತ್ಯವೇನಿರುತ್ತಿತ್ತು! ಅವುಗಳು ಸುಳಿಯುತ್ತವೆ, ಸುಳಿದಾಡುತ್ತವೆ, ಸುಳಿಯಾಗಿ ಮೈಯನ್ನೂ ಒಳಗೆಳೆದುಕೊಳ್ಳುತ್ತವೆ.

ಅಲೆಕ್ಸ್ ಪ್ರಸಂಗ

ಅದೊಂದು ಕ್ರೈಸ್ತ ಅಧ್ಯಯನ ಸಂಸ್ಥೆ. ಪಾದ್ರಿಯಾಗಲು ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಗಳು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆ ವಿದ್ಯಾರ್ಥಿಗಳಲ್ಲಿ ಅಲೆಕ್ಸ್ ಒಳ್ಳೆಯ ಕಟ್ಟುಮಸ್ತಾದ, ಹುರುಪುಗಟ್ಟಿದ ದೇಹದವನು. ಪ್ರತಿದಿನವೂ ಬೆಳಗ್ಗೆಯೇ ವ್ಯಾಯಾಮ ಮಾಡುತ್ತಿದ್ದ. ಅತ್ಯಂತ ಕಟ್ಟುನಿಟ್ಟಾಗಿ ಊಟದ ವಿಷಯದಲ್ಲಿ ಕ್ರಮವನ್ನು ಅನುಸರಿಸುತ್ತಿದ್ದ. ಎಂದಿಗೂ ಕಣ್ಣಿನ ಆಸೆಗೆ, ನಾಲಿಗೆಯ ಚಪಲಕ್ಕೆ ಮುಕ್ಕಿದವನೇ ಅಲ್ಲ. ಕಸ ತಿನ್ನುವ ಬದಲು ತುಸ ತಿನ್ನು ಎಂದು ತಿಳಿದವನು.

ಲಘನಂ ಪರಮೌಷಧಂ ಎನ್ನುವಂತೆ (ಉಪವಾಸವೇ ಉತ್ತಮ ಚಿಕಿತ್ಸೆ) ಅವರ ಉಪವಾಸ ಕಾಲವಿಲ್ಲದಿದ್ದರೂ (ಲೆಂಟ್ ಸೀಸನ್) ಕಾಲಕಾಲಕ್ಕೆ ಉಪವಾಸವನ್ನು ಮಾಡುತ್ತಿದ್ದ. ಆದರೆ ತಾನು ಎಂದಿಗೂ ಜ್ವರ ಬಂದು ಮಲಗೇ ಇಲ್ಲ, ಡಾಕ್ಟರ್ ಬಳಿಗೆ ಹೋಗುವುದೇ ಇಲ್ಲ ಎನ್ನುವ ಅವನ ಹೆಮ್ಮೆ ಅಥವಾ ನೋಡುಗರ ದೃಷ್ಟಿಯ ‘ಜಂಭ’ ಹಲವು ವಿದ್ಯಾರ್ಥಿ ಗೆಳೆಯರ ಅಣಕಿಸುತ್ತಿತ್ತು. ಅವನಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿದರು.

ಒಂದು ಬೆಳಗ್ಗೆ ಅಲೆಕ್ಸ್ ತನ್ನ ವ್ಯಾಯಾಮ ಶಾಲೆಯಿಂದ ಹೊರಗೆ ಬರುತ್ತಿದ್ದಂತೆ ಎದುರಾದ ಒಬ್ಬ ಸೋದರ ಕೇಳಿದ, “ಯಾಕೆ ಅಲೆಕ್ಸ್? ಒಂದು ತರಾ ಇದ್ದೀಯಾ?” ಎಂದು.

ಅಲೆಕ್ಸ್ ತಾನು ಸರಿಯಿದ್ದೇನೆ ಎಂದು ಮುಂದೆ ಹೋದ. ಆದರೆ ಅವನಿಗೆ ಎದುರಾದ ಮಿತ್ರರೆಲ್ಲಾ “ರಾತ್ರಿಯೆಲ್ಲಾ ನಿದ್ದೆ ಕೆಟ್ಟಾ?”, “ಮುಖವೇಕೆ ಬಾಡಿದೆ?”, “ಮೈ ಹುಷಾರಿಲ್ಲವಾ?”, “ಆರ್ ಯೂ ಆಲ್ ರೈಟ್?” ಇತ್ಯಾದಿ ಕೇಳುತ್ತಲೇ ಇದ್ದರು. ಸಂಜೆ ಐದೂವರೆಯ ಹೊತ್ತಿಗೆ ಅಲೆಕ್ಸ್‍ಗೆ ಹೈ ಟೆಂಪರೇಚರಲ್ಲಿ ಜ್ವರ ಬಂದಿತ್ತು.

ಸಾರಾ ಪ್ರಸಂಗ

ಸಾರಾ ಶಾಲೆಯೊಂದರಲ್ಲಿ ಉಪಾಧ್ಯಾಯಿನಿ. ಆಕೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಚಲಿಸುವ ಜೀಪಿನಿಂದ ಸ್ಟೆಪ್ನಿ ಟಯರೊಂದು ಕೆಳಗೆ ಬಿದ್ದು ಆಕೆಗೆ ಬಡಿದು ಅವಳನ್ನು ದೊಡ್ಡ ಹಳ್ಳಕ್ಕೆ ತಳ್ಳಿತ್ತು. ಇದರಿಂದ ಮೂರ್ಚಿತಳಾಗಿ ಬಿದ್ದ ಸಾರಾಗೆ ಕಾಲಿನ ಮೂಳೆ ವಿವಿಧ ಭಾಗಗಳಲ್ಲಿ ಮುರಿದಿತ್ತು. ಅವಳನ್ನು ಆಸ್ಪತ್ರೆಗೆ ಸೇರಿಸಿದರು. ಅಲ್ಲಿಯೇ ಒಳರೋಗಿಯಾಗಿ ಇದ್ದು ಕೆಲವು ಶಸ್ತ್ರಚಿಕಿತ್ಸೆಗೆ ಸಾರ ಒಳಗಾದಳು. ಸುಮಾರು ಆರು ತಿಂಗಳ ನಂತರ ಅವಳು ಕ್ಲಿನಿಕಲಿ ಫಿಟ್ ಎಂದು ಹೇಳಿ ಡಾಕ್ಟರ್ ಸರ್ಟಿಫೈ ಮಾಡಿದರೂ ಅವಳು ಎದ್ದು ನಡೆದಾಡಲು ಸಾಧ್ಯವಾಗಲಿಲ್ಲ. ಅವಳಿಗೆ ಒಂದು ಹೆಜ್ಜೆಯೂ ಇಡಲಾಗುತ್ತಿರಲಿಲ್ಲ.

ಸಾವಿತ್ರಮ್ಮ ಪ್ರಸಂಗ

ಸಾವಿತ್ರಮ್ಮ ಎಂಬ ಗೃಹಿಣಿ ಗರ್ಭಿಣಿಗೆ ತಪಾಸಣೆಯ ಸಮಯದಲ್ಲಿ ಮಗುವಿನ ಹೃದಯ ದುರ್ಬಲವಾಗಿದೆಯೆಂದೂ, ಸ್ಪಂದಿಸುತ್ತಿರುವುದು ಬರುಬರುತ್ತಾ ಕ್ಷೀಣವಾಗುತ್ತಿದೆಯೆಂದೂ, ಬಹುಶಃ ಉಳಿಯಲಾರದೆಂದೂ ಡಾಕ್ಟರ್ ಹೇಳಿದ್ದರು. ಆದರೆ ಒಂದು ದಿನದ ಕಾಲಾವಕಾಶ ಕೇಳಿದ ಸಾವಿತ್ರಮ್ಮ ತನ್ನ ಗುರುಗಳೋರ್ವರ (ಈ ಲೇಖನ ಬರೆದವನು) ಹತ್ತಿರ ಹೋಗಿ ವಿಷಯವನ್ನು ತಿಳಿಸಿದಳು.

ಮಗುವು ಜೀವಂತವಾಗಿರುವುದಕ್ಕೆ ಮಾತ್ರವಲ್ಲದೇ, ಅದು ಆರೋಗ್ಯವಾಗಿರುವಂತೆ ಸಂಕಲ್ಪ ಮಾಡಿಕೊಂಡಳು. ಮರುದಿನ ಡಾಕ್ಟರ್ ಹತ್ತಿರ ಹೋದಾಗ ಮಗುವು ಸ್ಪಂದಿಸುತ್ತಿದೆಯೆಂದೂ, ಹೃದಯ ಬಡಿತವು ಸಾಮಾನ್ಯವಾಗಿದೆ ಎಂದೂ ತಿಳಿಯಿತು. ಆ ಮಗುವಿನ ಸುಖ ಪ್ರಸವವಾಯಿತು.

ಮಂಜು ಪ್ರಸಂಗ

ಮಂಜುಳಾಳ ವಿಷಯದಲ್ಲಿ ಗರ್ಭ ನಿರೋಧಕ ಔಷಧಿಯ ನಂತರ ಗರ್ಭಧಾರಣೆಯಾಗಿತ್ತು. ಕೆಲವರು ತಮ್ಮ ಅನುಭವ ಮತ್ತು ಸಾಕ್ಷೀಕರಿಸಿದ ಸಂಗತಿಗಳ ಪ್ರಕಾರ ಆ ಮಗುವಿಗೆ ಮೆದುಳಿನ ಅಥವಾ ನರಗಳ ಅಥವಾ ಯಾವುದಾದರೂ ಅಂಗಗಳ ನ್ಯೂನ್ಯತೆಗಳಿರುತ್ತವೆ ಎಂದೂ, ಅಥವಾ ಇನ್ನೇನಾದರೂ ಸಮಸ್ಯೆ ಇರುತ್ತದೆ ಎಂದೂ ಹೇಳಿದರು.

ಎಲ್ಲರೂ ಗರ್ಭಪಾತ ಮಾಡಿಸಲು ಸೂಚಿಸುತ್ತಿದ್ದರು. ತನ್ನ ಮೊದಲ ಗರ್ಭಧಾರಣೆಯಾದ ಕಾರಣದಿಂದ ಗರ್ಭಪಾತಕ್ಕೆ ಇಷ್ಟವಿಲ್ಲದ ಮಂಜು ಸಕಾರಾತ್ಮಕವಾಗಿ ಹೇಳುವ ಬೇರೊಂದು ವೈದ್ಯರಿಂದ ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳಲು ಯತ್ನಿಸುತ್ತಿದ್ದಳು. ಜೊತೆಗೆ ಅವಳಿಗೆ ತಂದೆ ಸಮಾನದಲ್ಲಿ ಅವಳೊಡನೆ ಬೆಂಬಲವಾಗಿದ್ದ ಗುರುಗಳ ಮೂಲಕ ಸಾವಿತ್ರಮ್ಮನ ಪ್ರಸಂಗದ ಜೀವಂತ ಉದಾಹರಣೆ ಕಣ್ಣ ಮುಂದಿತ್ತು.
ಗರ್ಭಕಟ್ಟಿದ, ಗರ್ಭನಿರೋಧಕ ಔಷಧಿಯನ್ನು ತೆಗೆದುಕೊಂಡ ಅವಧಿಗಳನ್ನೆಲ್ಲಾ ಕೂಲಂಕುಶವಾಗಿ ವಿಚಾರ ಮಾಡಿದ ಮತ್ತೊಬ್ಬ ವೈದ್ಯರು 50-50 ಎಂದರು.

ಕೆಲವೊಮ್ಮೆ ಆ ಬಗೆಯ ಸಮಸ್ಯೆಗಳಾಗಬಹುದು. ಕೆಲವೊಮ್ಮೆ ಸಮಸ್ಯೆ ಆಗದಿರಲೂಬಹುದು ಎಂದರು. ಮಂಜು ಮಗುವಾಗಲಿ ಎಂದು ಬಯಸಿದಳು. ಆದುದ್ದಾಗಲಿ ನೋಡೇಬಿಡೋಣ ಎಂದು ಕಾದಳು. ಹೆಣ್ಣುಮಗು ಜನಿಸಿತು. ಆರೋಗ್ಯವಾಗಿತ್ತು. ಈಗ ಆ ಮಗು ಶಾಲೆಗೆ ಹೋಗುತ್ತಿದೆ. ಸುಂದರ ಮತ್ತು ಆರೋಗ್ಯವಾಗಿರುವ ಆ ಮಗು ನೃತ್ಯ ಕಲಿಯುತ್ತಿದೆ. ಮನೆಯವರೆಲ್ಲರ ಕಣ್ಮಣಿಯಾಗಿ ಬೆಳೆಯುತ್ತಿದೆ.

ಭಾಗ್ಯಮ್ಮನ ಪ್ರಸಂಗ

ಅದೊಂದು ತುಂಬು ಕುಟುಂಬ. ಭಾಗ್ಯಮ್ಮ ಹಿರಿಯ ಸೊಸೆ. ಬೆಳಗ್ಗಿನಿಂದ ರಾತ್ರಿಯವರೆಗೂ ಕೆಲಸ. ಗಂಡ, ಅತ್ತೆ, ಮಾವ, ಮೈದುನಂದಿರು, ವಾರಗಿತ್ತಿಯರು, ಎಲ್ಲರ ಮಕ್ಕಳು, ಮನೆಯ ಕೆಲಸದಾಳುಗಳು, ಮನೆಯ ವ್ಯವಹಾರ, ಅಂಗಡಿಗೆ ಹೋಗಿ ಸಾಮಾನುಗಳನ್ನು ತರುವುದರಿಂದ ಹಿಡಿದು ಅಡುಗೆ ಮಾಡಿ ಬಡಿಸುವವರೆಗೂ ಅವಳದೇ ಉಸ್ತುವಾರಿ, ಅವಳದೇ ಜವಾಬ್ದಾರಿ.

ಕಬ್ಬಿಣದ ಪೆಟ್ಟಿಗೆಯಲ್ಲಿ ಇಡುವ ಹಣ ಮತ್ತು ವಡವೆಗಳಿಂದ ಹಿಡಿದು, ಕೂಲಿಯವರಿಗೆ ಕೊಡುವ ಸಂಬಳ, ಮನೆಯವರಿಗೆ ವ್ಯವಹಾರಕ್ಕೆ ಕೊಡುವ ಹಣ, ವಾರಗಿತ್ತಿಯರಿಗೆ, ಮಕ್ಕಳಿಗೆ ಕೊಡುವ ಖರ್ಚು ಎಲ್ಲವೂ ಅವಳ ಸುಪರ್ದಿನಲ್ಲೇ ಇರುವುದು.

ಕೆಲವೊಮ್ಮೆ ಅವಳಿಗೆ ಜ್ವರ ಬರುವುದು. ಭಯಂಕರವಾಗಿ ಹುಷಾರು ತಪ್ಪುವುದು. ಹಾಸಿಗೆ ಹಿಡಿಯುವಳು. ಯಾವ ಡಾಕ್ಟರು ಎಷ್ಟು ನೋಡಿದರೂ, ಏನೇ ಔಷಧಿ ಕೊಟ್ಟರೂ ವಾಸಿಯಾಗುವುದಿಲ್ಲ. ಒಂದಷ್ಟು ಕಾಲ ಹಾಸುಗೆ ಹಿಡಿದೇ ಹಿಡಿಯುವಳು. ನಂತರ ತಾನಾಗಿಯೇ ವಾಸಿಯಾಗಿ ತನ್ನ ಜವಾಬ್ದಾರಿಯ ನೊಗಕ್ಕೆ ತನ್ನ ಹೆಗಲನ್ನು ಕೊಡುವಳು.

ಪ್ರಸಂಗಗಳ ವಿಶ್ಲೇಷಣೆ

ಅಲೆಕ್ಸ್ ಪ್ರಸಂಗದಲ್ಲಿ ತನ್ನ ಭೇಟಿಯಾಗುತ್ತಿದ್ದ ಒಬ್ಬೊಬ್ಬರೂ ಕೂಡಾ ನಿನಗೇನೋ ಆಗಿದೆ, ನೀನು ಹುಷಾರು ತಪ್ಪಿದಂತೆ ಕಾಣುತ್ತಿದ್ದೀಯಾ, ನಿನ್ನಲ್ಲಿ ಸಮಸ್ಯೆ ಇದೆ ಎಂದು ಒಂದೇ ಸಮನೆ ಹೇಳುತ್ತಿದ್ದರು. ಮೊದಮೊದಲು ನಿರಾಕರಿಸಿದ ಅಲೆಕ್ಸ್ ನಂತರ ಇಷ್ಟು ಜನ ಹೇಳುತ್ತಿರುವಾಗ ಬಹುಶಃ ನಿಜವೇ ಇರಬಹುದೆಂದು ನಂಬತೊಡಗಿದ. ತನಗೆ ಹುಷಾರು ತಪ್ಪಿದೆ ಎಂದು ಅನ್ನಿಸತೊಡಗಿದಾಗ, ಅದನ್ನು ನಂಬತೊಡಗಿದಾಗ ನಿಜವಾಗಿಯೇ ಹುಷಾರು ತಪ್ಪಿದ.

ತನಗೆ ನೀಡುತ್ತಿದ್ದ ನಕಾರಾತ್ಮಕ ಸೂಚನೆಗಳನ್ನು ತೆಗೆದುಕೊಂಡದಷ್ಟೇ ಅಲ್ಲದೇ ಅದನ್ನು ನಂಬಿದರಿಂದ ಅವನಿಗೆ ಅವನು ಸ್ವೀಕರಿಸಿದ ಸೂಚನೆಯ ಸ್ಥಿತಿಯನ್ನೇ ಪಡೆದ.

ಸಾರಾ ಪ್ರಸಂಗದಲ್ಲಿ, ಅವಳು ಸ್ಟೆಪ್ನಿ ಟಯರ್ ತಗುಲಿ ಹಳ್ಳಕ್ಕೆ ಬಿದ್ದು, ಮಲ್ಟಿಪಲ್ ಫ್ರಾಕ್ಚರ್ ಆದ ಮೇಲೆ ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ಸಾರಾ ಮೂರ್ಚಾವಸ್ಥೆಯಲ್ಲಿ ಇರುವಾಗ ನೆಲ ಸಾರಿಸುತ್ತಿದ್ದ ಇಬ್ಬರು ಹೆಂಗಸರು ಸಾರಾಳ ಸ್ಥಿತಿಗೆ ಮರುಗುತ್ತಾ, “ಪಾಪ, ಇಷ್ಟು ದೊಡ್ಡ ಪೆಟ್ಟಾಗಿ ಕಾಲು ಹೀಗೆ ಮುರಿದುಹೋಗಿದೆ. ಇನ್ನು ಮುಂದೆ ಎಂದಿಗೂ ಇವಳು ನಡೆಯಲಾರಳು” ಎಂಬರ್ಥದಲ್ಲಿ ಚರ್ಚಿಸಿದ್ದರು.

ಸಾರಾ ಜಾಗೃತವಾಗಿರದಿದ್ದರೂ ಅವಳ ಮನಸ್ಸಿನ ಸುಪ್ತಚೇತನ ಅದನ್ನು ಒಪ್ಪಿಬಿಟ್ಟಿತ್ತು. ಅದನ್ನು ಸತ್ಯವೆಂದು ನಂಬಿತ್ತು. ಹಾಗಾಗಿ ಅವಳು ಸಂಪೂರ್ಣ ಗುಣಮುಖಳಾಗಿದ್ದರೂ ಅವಳ ಒಳಮನಸ್ಸು ಅವಳಿಗೆ ನಡೆಯಲು ಬಿಟ್ಟಿರಲಿಲ್ಲ. ಮತ್ತೆ ಅವಳನ್ನು ಸಂಮೋಹನಕ್ಕೊಳಪಡಿಸಿ, ಸಮಾಲೋಚನೆಗಳಿಂದ ಅವಳಿಗೆ ನಡೆಯಲು ಸಾಧ್ಯವಿದೆ ಎಂದು ಮನವರಿಕೆ ಮಾಡಿಸಿದ ಮೇಲೆ ಎಂದಿನಂತೆ ನಡೆಯತೊಡಗಿದಳು.

ಸಾವಿತ್ರಮ್ಮನೋ, ಅವಳಿಗೆ ಅವಳ ಗುರುಗಳು ಹೇಳಿದ್ದರು. ತಮ್ಮ ದೇಹದ ಆರೋಗ್ಯ ಮತ್ತು ಗರ್ಭದೊಳಗಿನ ಶಿಶುವಿನ ಬೆಳವಣಿಗೆಯು ತಾಯಿಯ ಆಲೋಚನೆಯ ಮೇಲೆ ಅವಲಂಬಿಸಿರುತ್ತದೆ ಎಂದು. ಹಾಗಾಗಿ, ವೈದ್ಯರು ಮಗುವು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಾಗ, ಅವಳು ದಿನ ಪೂರ್ತಿ ಸುಮಧುರ ಸಂಗೀತವನ್ನು ಕೇಳುತ್ತಾ, ಗುರುಗಳು ನೀಡುತ್ತಿದ್ದ ಸಕಾರಾತ್ಮಕ ಸಂದೇಶಗಳನ್ನು ಕೇಳುತ್ತಾ ತನ್ನ ಮಗುವು ಆರೋಗ್ಯವಾಗಿಯೂ, ಜೀವಂತವಾಗಿಯೂ ತನ್ನ ಜೊತೆಯಲ್ಲಿರಬೇಕೆಂದು ಬಯಸಿದ್ದಳು.

ಅದೊಂದು ವೈದ್ಯಕೀಯ ಪವಾಡವೆಂದು ಡಾಕ್ಟರ್ ಉದ್ಗರಿಸುವಂತೆ ಮರುದಿನದ ತಪಾಸಣೆಯ ಸಂದರ್ಭದಲ್ಲಿ ಮಗುವು ಸ್ಪಂದಿಸುತ್ತಿತ್ತು.
ಅದೇ ರೀತಿ ಮಂಜು ಕೂಡಾ, 50-50 ಎಂದು ಹೇಳಿದ ವೈದ್ಯರ ಮಾತಲ್ಲಿ ತನಗೆ ಬೇಕಾದ ಸಮಸ್ಯೆ ಇಲ್ಲದ ಮಗುವು ಹುಟ್ಟುತ್ತದೆ ಎಂಬ ಮಾತನ್ನು ಮಾತ್ರ ಸ್ವೀಕರಿಸಿದಳು. ಅದರಂತೆಯೇ ತನ್ನ ಗರ್ಭದೊಳಗಿನ ಮಗುವು ಆರೋಗ್ಯವಾಗಿ, ಚೆನ್ನಾಗಿ ಇರುವುದರ ಚಿತ್ರಣವನ್ನು ಮನಸ್ಸಿನ ಪರದೆಯ ಮೇಲೆ ರೂಪಿಸಿಕೊಂಡು ಬಸುರಿನ ದಿನಗಳನ್ನು ಕಳೆದಳು. ಆರೋಗ್ಯವಾಗಿರುವ ಮಗುವು ಹುಟ್ಟಿತು.

ಭಾಗ್ಯಮ್ಮನ ಪ್ರಸಂಗದಲ್ಲಿ, ದಿನನಿತ್ಯವೂ ಇಡೀ ಸಂಸಾರದ ನೊಗಕ್ಕೆ ಹೆಗಲುಗೊಟ್ಟು ದುಡಿವ ಅವಳಿಗೆ ಮನೆಯಲ್ಲಿ ಯಾರೊಬ್ಬರಿಗೂ ನೀನು ಹೇಗಿದ್ದೀಯಾ? ಉಂಡೆಯಾ? ಕುಡಿದೆಯಾ? ಸ್ನಾನ ಆಯಿತಾ? ಯಾವ ಬಟ್ಟೆ ಹಾಕಿಕೊಳ್ಳುತ್ತಿದ್ದೀಯಾ? ಎಂದು ಕೇಳುವವರು, ಉಪಚರಿಸುವವರು ಯಾರೂ ಇರುತ್ತಿರಲಿಲ್ಲ. ಹಾಗೆ ಉಪಚರಿಸಬಾರದೆಂದೇನೂ ಯಾರಿಗೂ ಇಲ್ಲ ಆದರೆ, ಅವಳೇ ಉಪಚಾರ ಮಾಡುವವಳಾಗಿದ್ದಳು.

ಎಲ್ಲರನ್ನೂ ನೋಡಿಕೊಳ್ಳುವ ಅವಳನ್ನು ನೋಡಿಕೊಳ್ಳಬೇಕೆಂಬ ಅಗತ್ಯ ಇದೆ ಎಂದು ಯಾರಿಗೂ ಅನ್ನಿಸಿಯೇ ಇರಲಿಲ್ಲ. ಹೀಗೆ ಯಾವುದಾದರೂ ಕಾರಣಕ್ಕೆ ಸಣ್ಣ ಜ್ವರ ಬಂದರೆ, ಪುಟ್ಟದಾಗಿ ಹುಷಾರು ತಪ್ಪಿದರೂ ಅವಳು ಗಂಭೀರವಾಗಿ ಮಲಗಿಬಿಡುತ್ತಿದ್ದಳು. ತನ್ನ ಜ್ವರವನ್ನು ವಾಸಿ ಮಾಡಿಕೊಳ್ಳಲು ಬಿಡುತ್ತಿರಲಿಲ್ಲ. ಅವಳು ಮಲಗಿದರೆ ಎಲ್ಲರೂ ಅವಳ ಉಪಚಾರಕ್ಕೆ ಮುಂದಾಗುತ್ತಿದ್ದರು.

ಹಣ್ಣು ಹಂಪಲು ಕೊಡುವುದು, ಹಣ್ಣಿನ ರಸ ಮತ್ತು ಔಷಧಿಯನ್ನು ಕುಡಿಸುವುದು, ಹೇಗಿದೆ? ಹೇಗನಿಸುತ್ತಿದೆ? ಬೇಗ ಹುಷಾರಾಗು ಎಂದು ನೋಡಿಕೊಳ್ಳುವುದೆಲ್ಲಾ ಆಗುತ್ತಿತ್ತು. ಈ ಬಗೆಯ ಪ್ರೀತಿಯ ಮತ್ತು ಕಾಳಜಿಯ ಕ್ಷಣಗಳನ್ನು ಅನುಭವಿಸಲು, ಆನಂದಿಸಲು ಭಾಗ್ಯಮ್ಮ ತನ್ನ ಜ್ವರವನ್ನು ಹೋಗಗೊಡುತ್ತಿರಲಿಲ್ಲ. ತನ್ನ ಜ್ವರದಿಂದ ಸಿಗುವಂತಹ ಸೆಕೆಂಡರಿ ಬೆನಿಫಿಟ್ ಅವಳಿಗೆ ತುಂಬಾ ಮುಖ್ಯ ಅನ್ನಿಸುತ್ತಿತ್ತು.

ಈ ಪ್ರಸಂಗಗಳನ್ನೆಲ್ಲಾ ಗಮನಿಸಿದರೆ, ಮಾಡುವ ಆಲೋಚನೆ, ಹೊಂದುವ ಚಿಂತನೆಗಳು, ರೂಪಿಸಿಕೊಳ್ಳುವ ಚಿತ್ರಣಗಳು ಜೈವಿಕವಾದಂತಹ ಪರಿಣಾಮವನ್ನು ಬೀರುತ್ತವೆ ಎಂದು ಅನಿಸುತ್ತದೆ, ಅಲ್ಲವೇ?

(ಮುಂದುವರಿಯುವುದು)

  • ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version