ಅಂತರಂಗ

ಧರ್ಮ ಮರ್ಮ – 07 : ಕ್ರಿಸ್ತನೆಂಬ ಮೀನು ಬಸವಣ್ಣನೆಂಬ ಎತ್ತು

Published

on

  • ಯೋಗೇಶ್ ಮಾಸ್ಟರ್

ಇಕ್ತ್ಯುಸ್ ಎಂದರೆ ಪ್ರಾಚೀನ ಗ್ರೀಕ್ ಪದ. ಅದರ ಅರ್ಥ ಮೀನು. ಎರಡು ವಕ್ರರೇಖೆಗಳ ತುಂಡುಗಳು ಒಂದನ್ನೊಂದು ಹಾದು (ಇಂಗ್ಲೀಷಿನ ಎಕ್ಸ್ ಅಕ್ಷರದಂತೆ) ಎರಡರ ತುದಿಗಳು ಮಾತ್ರ ಒಂದು ಬಿಂದುವಲ್ಲಿ ಸೇರಿದರೆ ಅದು ಮೀನಿನ ಆಕೃತಿಯಲ್ಲಿ ಕಾಣುತ್ತದೆ. ಇದು ಹಿಂದೊಮ್ಮೆ ಕ್ರೈಸ್ತರ ರಹಸ್ಯ ಚಿಹ್ನೆಯಾಗಿತ್ತು.

ಕ್ರಿಸ್ತನ ಜೀವನದಲ್ಲಿ ಮತ್ತು ಬೋಧನೆಗಳಲ್ಲಿ ಮೀನು ಲೌಕಿಕವಾಗಿ, ತಾತ್ವಿಕವಾಗಿ ಮತ್ತು ಸಾಂಕೇತಿಕವಾಗಿ ತನ್ನ ಕುರುಹುಗಳನ್ನು ತೋರಿಸುತ್ತದೆ. ಕ್ರಿಸ್ತನೇ ಮೀನು ಹಿಡಿಯುತ್ತಾನೆ, ಮೀನು ಹಿಡಿಯುವವರ ಜೊತೆಗಾರನಾಗಿರುತ್ತಾರೆ, ಹೆಚ್ಚು ಮೀನುಗಳನ್ನು ಹಿಡಿಯುವ ಎಡೆ ತೋರುತ್ತಾನೆ, ಅಷ್ಟೇಕೆ ಯೇಸುವನ್ನು ಮಾನವರ ಕ್ರಿಸ್ತನೆಂದೂ (ಮಾರ್ಕ್ 1:17) ಕರೆಯುತ್ತಾರೆ.

ಮ್ಯಾಥ್ಯೂ, ಮಾರ್ಕ್, ಲೂಕ್, ಜಾನ್; ಈ ಎಲ್ಲರ ಬರಹಗಳಲ್ಲೂ ಸಾವಿರಾರು ಜನರಿಗೆ ಮೀನನ್ನು ಮತ್ತು ರೊಟ್ಟಿಯನ್ನು ಪವಾಡ ಸದೃಶವಾಗಿ ಉಣಬಡಿಸಿದ ಪ್ರಸಂಗವಿದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಗ್ರೀಕ್ ವರ್ಣಮಾಲೆಯ ಅನುಸಾರವಾಗಿ ಇಕ್ತ್ಯುಸ್ ಎನ್ನುವ ಪದದಲ್ಲಿ ಒಂದೊಂದು ಅಕ್ಷರಗಳು ‘ಯೇಸುವು ಅಭಿಷಕ್ತ ದೇವರ ಮಗ – ರಕ್ಷಕ’ ಎಂದು ಹೇಳುತ್ತದೆ.

ಕ್ರೈಸ್ತರ ಮತ್ತು ಶರಣರ ಕ್ರಾಂತಿಯ ದಿನಗಳು

ಯೇಸುವನ್ನು ಶಿಲುಬೆಗೆ ಏರಿಸಿ ಕೊಂದ ನಂತರದ ದಿನಗಳು ಕರ್ನಾಟಕದ ಶರಣರ ಕ್ರಾಂತಿಯ ದಿನಗಳನ್ನು ಹೋಲುತ್ತವೆ. ಯೇಸುವಿನ ಅನುಯಾಯಿಗಳು ರೋಮನ್ನರ ದಾಳಿ ಮತ್ತು ಹಿಂಸೆಯಿಂದ ತಪ್ಪಿಸಿಕೊಳ್ಳಬೇಕಾಗಿತ್ತು. ತಾವು ಯೇಸುವಿನ ಅನುಯಾಯಿಗಳು ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಿರಲಿಲ್ಲ. ಅದೇ ರೀತಿ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಧಾರ್ಮಿಕ ಚಳವಳಿಯು ಪ್ರಬಲವಾಗುತ್ತಿತ್ತು.

ವೈದಿಕ ಮತ್ತು ಇನ್ನಿತರ ವರ್ಣಾಶ್ರಮಧರ್ಮವನ್ನು ಪ್ರತಿಪಾದಿಸುತ್ತಿದ್ದ ಸಂಪ್ರದಾಯವಾದಿಗಳು ಬಸವಣ್ಣ ಕಟ್ಟಿದ ಸಮಾಜೋಧಾರ್ಮಿಕ ಚಳವಳಿಯು ಗಟ್ಟಿಯಾಗಿ ತಳವೂರುವ ಲಕ್ಷಣಗಳನ್ನು ತೋರುತ್ತಿದ್ದ ಸಮಯದಲ್ಲಿಯೇ ಬಿಜ್ಜಳರಾಜನು ತನ್ನ ಎರಡನೆಯ ಮಗನಾದ ಸೋವೀದೇವನಿಗೆ ಪಟ್ಟ ಕಟ್ಟಿದ್ದನು.

ಹಾಗಾಗಿ ಅವನ ಇತರ ಮಕ್ಕಳಲ್ಲಿ ಮತ್ತು ಬಂಧುಗಳಲ್ಲಿ ತಿಕ್ಕಾಟ ಪ್ರಾರಂಭವಾಗಿತ್ತು. ಆಗಲೇ ಬಸವಣ್ಣನವರ ನೇತೃತ್ವದಲ್ಲಿ ಪ್ರೇಮವಿವಾಹ ಮಾತ್ರವಲ್ಲದೇ, ವರ್ಗಾಂತರವಿರುವ ಮತ್ತು ವರ್ಣಾಂತರವಾದ ವಿವಾಹವೂ ಇದಾಗಿತ್ತು. ಬಸವಣ್ಣನ ಚಳವಳಿಯನ್ನು ದಮನಿಸಲು ಯತ್ನಿಸುತ್ತಿದ್ದ ಆಸ್ಥಾನದ ಸಂಪ್ರದಾಯವಾದಿಗಳು ಆಗ ಹುಟ್ಟಿದ ರಾಜಕೀಯ ಆತಂಕವನ್ನು ಬಳಸಿಕೊಂಡರು.

ಇದರಿಂದ ಬಸವಣ್ಣ ತಮ್ಮ ಮಂತ್ರಿಪದವಿಯನ್ನು ತ್ಯಜಿಸಿ ಕಲ್ಯಾಣವನ್ನು ತೊರೆಯಬೇಕಾಯ್ತು. ಈ ಸಮಯವನ್ನು ಬಳಸಿಕೊಂಡು ವೈದಿಕರು ಮತ್ತು ವರ್ಣಾಶ್ರಮ ಸಂಪ್ರದಾಯಸ್ಥರು ವರ್ಣಾಂತರ ವಿವಾಹವಾದ ಮತ್ತು ಅದಕ್ಕೆ ಕಾರಣರಾದ ಹರಳಯ್ಯ, ಮಧುವರಸ ಮತ್ತು ಅವರ ಮಕ್ಕಳಿಗೆಲ್ಲಾ ಕಣ್ಣುಗಳನ್ನು ಕೀಳಿಸಿ ಆನೆಯ ಕಾಲಿಗೆ ಕಟ್ಟಿ ಎಳೆಸಿ ಕೊಲ್ಲುವಂತ ಶಿಕ್ಷೆ ಕೊಟ್ಟರು. ಕಂಡಕಂಡಲ್ಲಿ ಶರಣರ ಕಗ್ಗೊಲೆಗಳಾಗ ತೊಡಗಿದವು.

ಈ ಸಮಯದಲ್ಲಿ ವಚನ ಸಾಹಿತ್ಯವನ್ನು ರಕ್ಷಿಸುವ, ಶರಣರನ್ನು ರಕ್ಷಿಸುವ ಮಹತ್ತರ ಕೆಲಸದಲ್ಲಿ ಅನೇಕ ತ್ಯಾಗ ಬಲಿದಾನಗಳಾದವು. ಆಗಲೇ ಬಿಜ್ಜಳನ ಕೊಲೆಯಾಯಿತು. ರಾಜಕೀಯ ಸಂಘರ್ಷದಲ್ಲಿ ಬಲವುಳ್ಳವರ ಪರವಹಿಸುವ ಆಸ್ಥಾನಿಕರು ಕೊಲೆಗೆ ಕಾರಣ ಯಾರೇ ಆಗಿದ್ದರೂ ಅದನ್ನು ಶರಣರ ತಲೆಗೆ ಕಟ್ಟಲಾಯಿತು. ಪಾಲ್ಕುರಿಕೆ ಸೋಮನಾಥನು ರಚಿಸಿರುವ ಪುರಾಣದಲ್ಲಿ ಮಲ್ಲೆಬೊಮ್ಮ ಮತ್ತು ಜಗದೇವ ಎಂಬ ವೀರರು ಬಿಜ್ಜಳನ ಕೊಂದರೆಂದು ಹೇಳಿದರೆ, ಶಾಸನಗಳನ್ನು ಅನುಸರಿಸಿದರೆ ಸಿಗುವ ಮಾಹಿತಿಗಳಲ್ಲಿ ವ್ಯತ್ಯಾಸಗಳಿವೆ.

ಶಾಸನಗಳು ಮತ್ತು ಪುರಾಣಗಳನ್ನು ಆಧರಿಸಿಯೇ ಅಂದಿನ ಇತಿಹಾಸ ರಚಿಸಬೇಕಾಗಿರುವುದರಿಂದ ಅನೇಕ ವ್ಯತ್ಯಾಸಗಳಿವೆ. ಆದರೆ ಅಲ್ಲೊಂದು ಸಮಾಜೋಧಾರ್ಮಿಕ ಸಂಘರ್ಷ, ರಾಜಕೀಯ ಕೋಲಾಹಲಗಳು ನಡೆದು ವಚನ ಚಳವಳಿ ಮತ್ತು ಶರಣ ಸಂಸ್ಕೃತಿಗಳು ರೂಪುಗೊಂಡವು.

ಅದೆಲ್ಲಾ ಏನಾದರಾಗಲಿ ಬಸವಣ್ಣನ ಗಡಿಪಾರಿನ ನಂತರ, ಶರಣರ ತಲೆದಂಡದ ತರುವಾಯ ಮತ್ತು ಬಿಜ್ಜಳನ ಕೊಲೆಯ ಬೆನ್ನಲ್ಲೇ ಶರಣರು ಚದುರಲೇ ಬೇಕಾದ ಅನಿವಾರ್ಯ ಒದಗಿತ್ತು. ಅವರ ಕಗ್ಗೊಲೆಗಳಾಗತೊಡಗಿತ್ತು. ಬಸವಣ್ಣನ ಅನುಯಾಯಿಗಳು ಅಂದು ರೋಮನ್ನರಿಂದ ತಲೆಮರೆಸಿಕೊಳ್ಳಬೇಕಾದ ಅನಿವಾರ್ಯತೆಯುಳ್ಳ ಯೇಸುವಿನ ಅನುಯಾಯಿಗಳ ಸ್ಥಿತಿಯನ್ನೇ ಅನುಭವಿಸಿದ್ದರು.

ಅಂದಿನ ದಿನಗಳಲ್ಲಿ ರಸ್ತೆಯಲ್ಲೋ ಅಥವಾ ಇನ್ನೆಲ್ಲಾದರೂ ಅಪರಿಚಿತ ಕ್ರೈಸ್ತರು ಭೇಟಿಯಾದರೆ, ‘ತಾನು ಕ್ರಿಸ್ತನ ಅನುಯಾಯಿ, ನೀನು?’ ಎಂದು ಕೇಳಬೇಕಾದರೆ ಧೂಳಿನ ಮೇಲೋ, ಮಣ್ಣಿನ ಮೇಲೋ ಒಂದು ವಕ್ರರೇಖೆಯನ್ನು ಒಬ್ಬ ಎಳೆಯುತ್ತಿದ್ದ. ಮತ್ತೊಬ್ಬನು ಅದೇ ವಕ್ರರೇಖೆಗೆ ತನ್ನ ವಕ್ರರೇಖೆಯನ್ನು ಎಳೆದು ಮೀನಿನ ಆಕೃತಿ ಮೂಡಿಸಿದರೆ ಅವರು ಕ್ರಿಸ್ತಾನುಯಾಯಿಗಳು ಎಂದು ತಮ್ಮ ಸಂಗಾತಿತನವನ್ನು ದೃಢಪಡಿಸಿಕೊಳ್ಳುತ್ತಿದ್ದರು.

ತಾವು ಕ್ರಿಸ್ತನಲ್ಲಿ ಶ್ರದ್ಧೆ ಮತ್ತು ವಿಶ್ವಾಸವುಳ್ಳವರು ಎಂಬುದನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದರು. ಇದನ್ನು ತಾವು ರಹಸ್ಯ ಸಭೆ ನಡೆಸುವ ಜಾಗಗಳಿಗೂ ಗುರುತಿಗೆ ಉಪಯೋಗಿಸುತ್ತಿದ್ದರು. ಮುಂದೆ ರೋಮನ್ನರ ಚಕ್ರಾಧಿಪತ್ಯವನ್ನು ವಿರೋಧಿಸುವ ಸಂಕೇತವಾಗಿಯೂ ಕೂಡಾ ಅಲೆಕ್ಸಾಂಡ್ರಿಯಾದ ನಾಣ್ಯಗಳಲ್ಲಿ ಮೂಡಿರುವ ದಾಖಲೆಗಳಿವೆ.
ಆರಂಭದಲ್ಲಿ ಕ್ರೈಸ್ತರಾದವರೂ ಯಹೂದ್ಯರೇ. ಅವರಿಗೆ ಸಮಸ್ಯೆಗಳು ತಪ್ಪಿರಲಿಲ್ಲ. ಹನ್ನೆರಡು ಮಂದಿ ಪ್ರೇಷಿತರು ಎಂದು ಕರೆಯಿಸಿಕೊಳ್ಳುವ ಶಿಷ್ಯರು ಯೇಸುವಿನ ಬೋಧನೆಗಳನ್ನು ಧರ್ಮಸಭೆಯ ಸ್ಥಾಪನೆಯ ಉದ್ದೇಶದಿಂದ ಪ್ರಚಾರ ಮಾಡತೊಡಗಿದರು.

ಬಹಿರಂಗವಾಗಿ ಪೇತ್ರ ಮತ್ತು ಯೊವಾನ್ನರು ಪ್ರವಚನಗಳನ್ನು ಮಾಡುವಾಗಲೇ ಯಹೂದ್ಯರ ಕೆಂಗಣ್ಣಿಗೆ ಗುರಿಯಾದರು. ಪ್ರೇಷಿತರಿಗೆ ಚಾಟಿಗಳಿಂದ ಹೊಡೆಯುವುದು, ವಿವಿಧ ಬಗೆಯ ಅವಮಾನಗಳನ್ನು ಮಾಡುವುದು ಮುಂದುವರೆದಿತ್ತು. ಆದರೂ ಇವರು ಆಡುತ್ತಿರುವ ಮಾತುಗಳಲ್ಲಿ ವಿಶ್ವಾಸವನ್ನು ಕಂಡವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಏಳು ಜನ ಸಹಾಯಕರನ್ನು ಆಯ್ದುಕೊಂಡರು. ಅವರಲ್ಲಿ ಸ್ತೇಫನ ತುಂಬಾ ಶಕ್ತಿಭರಿತವಾಗಿ ಮಾತಾಡುತ್ತಿದ್ದ. ಅವನು ಮಾಡುತ್ತಿದ್ದ ಪ್ರವಚನ ಮತ್ತು ಬೋಧನೆ ಬಹಳ ಪರಿಣಾಮಕಾರಿಯಾಗಿದ್ದು, ನ್ಯಾಯಸಭೆಗಳು ಥರಗುಟ್ಟಿದವು.

ವಿಚಾರಣೆ ಮಾಡುವಾಗಲೂ ಸ್ತೇಫನ ಹಿಂಜರಿಯಲಿಲ್ಲ, ಧೃತಿಗೆಡಲಿಲ್ಲ. ತನ್ನ ಸತ್ಯವಿಶ್ವಾಸದ ಮಾತುಗಳನ್ನು ಆಡಿಯೇ ತೀರಿದನು. “ನೀವು ನಿಮ್ಮ ಹಳೆಯ ಸಂಪ್ರದಾಯಸ್ಥ ಪೂರ್ವಜರಂತೆಯೇ ಹಟಕ್ಕೆ ಬಿದ್ದು ಕಠಿಣ ಹೃದಯದವರಾಗಿದ್ದೀರಿ ಮತ್ತು ಹಿಂದಿನ ಎಲ್ಲಾ ಪ್ರವಾದಿಗಳನ್ನೂ ನೀವು ಹಿಂಸೆ ಕೊಟ್ಟಿರುವರೇ ಆಗಿದ್ದೀರಿ” ಎಂದು ಧೈರ್ಯವಾಗಿ ಹೇಳುತ್ತಿದ್ದನು. ನ್ಯಾಯಸಭೆಯ ಸದಸ್ಯರು ಸ್ತೇಫನಿಗೆ ಕಲ್ಲು ಹೊಡೆದು ಕೊಂದರು.

ಆಗ ಸ್ತೇಫನ, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ” ಎಂದು ಪ್ರಾರ್ಥಿಸಿದ್ದಲ್ಲದೇ, “ಪ್ರಭೂ, ಈ ಪಾಪವನ್ನು ಇವರ ಮೇಲೆ (ತನ್ನ ಮೇಲೆ ಕಲ್ಲು ಹೊಡೆಯುತ್ತಿರುವವರ ಮೇಲೆ) ಹೊರಿಸಬೇಡಿ” ಎಂದು ಪ್ರಾಣಬಿಟ್ಟನು.

ಧರ್ಮ ಎನ್ನುವುದು ಸ್ಥಾಪಕರೊಬ್ಬರ ಕ್ರಮವನ್ನು ಅನುಸರಿಸುವುದೆಂದರೆ ಹೀಗೆಯೇ. ಕ್ರಿಸ್ತನು ತನ್ನ ಸಾವಿನಲ್ಲೂ ಸೇಡನ್ನು ಹೊಂದದೇ ಕ್ಷಮಿಸಿದಂತೆ ಸ್ತೇಫನೂ ಕೂಡಾ ಹಾಗೇ ಮಾಡಿದನು. ಅವನು ಸತ್ತ ದಿನ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. ಪ್ರೇಷಿತರ ಹೊರತು ಇತರ ವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದುರಿಹೋದರು. ಆಗ ಮನೆಮನೆಗೂ ನುಗ್ಗಿ ಹೆಂಗಸರು ಗಂಡಸರು ಎಂದು ನೋಡದೇ ಯೇಸುವಿನ ವಿಶ್ವಾಸಿಗಳನ್ನು ಎಳೆದು ತಂದು ಸೆರೆಮನೆಗೆ ತಳ್ಳುತ್ತಿದ್ದರು.

ಅಂತಹ ಸನ್ನಿವೇಶಗಳನ್ನು ಎದುರಿಸುತ್ತಿದ್ದ ಯೇಸುವಿನ ವಿಶ್ವಾಸಿಗಳು ತಮ್ಮ ಧರ್ಮಸಭೆಗಳನ್ನು ರಹಸ್ಯವಾಗಿಯೇ ಮಾಡಬೇಕಿತ್ತು. ಆಗ ಇಕ್ತ್ಯುಸ್ ಎಂಬ ಮೀನಿನ ಗುರುತನ್ನು ತಮ್ಮ ರಹಸ್ಯ ಚಿಹ್ನೆಯಾಗಿಸಿಕೊಂಡಿದ್ದರು.

ಚದುರಿದ ಶರಣರು

ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿಯೂ ಕೂಡಾ ಆಗಿನ ಜೆರೂಸಲೇಮಿನ ಪರಿಸ್ಥಿತಿ ಉಂಟಾಗಿತ್ತು. ಚದುರಿದ ಶರಣರು ಉಳವಿ, ಶ್ರೀಶೈಲವೇ ಮೊದಲಾದ ಸ್ಥಳಗಳಿಗೆ ಹೊರಟು ಹೋದರು. ಅಲ್ಲಿ ಯೇಸು ಎದುರಿಸಿದ್ದ ಸಂಪ್ರದಾಯವಾದಿಗಳ ಆರೋಪ ಮತ್ತು ರಾಜಾಡಳಿತದ ತಲೆದಂಡವನ್ನು ಇಲ್ಲಿ ಬಸವಣ್ಣ ಎದುರಿಸಬೇಕಾಗಿತ್ತು. ಏಕೆಂದರೆ ಅಲ್ಲಿ ಯೇಸು ಸಮಾಜದ ತಳವರ್ಗದವರನ್ನು ತನ್ನ ಸಾಂಗತ್ಯದಲ್ಲಿ ಆಪ್ತಗೊಳಿಸಿಕೊಂಡಂತೆ ಇಲ್ಲಿ ಬಸವಣ್ಣನ ಮಹಾಮನೆಯಲ್ಲಿ ಮೇಲ್ವರ್ಗ ಮತ್ತು ಸವರ್ಣೀಯರು ಕೀಳಾಗಿ ಕಂಡವರೆಲ್ಲಾ ಮೌಲ್ಯವನ್ನು ಕಂಡುಕೊಂಡಿದ್ದರು. ಎರಡೂ ಕಡೆಯೂ ಸಮಾಜೋಧಾರ್ಮಿಕ ಆಂದೋಲನವು ಸಂಪ್ರದಾಯವಾದಿಗಳ, ಯಥಾಸ್ಥಿತಿವಾದಿಗಳನ್ನು ಕೆರಳಿಸಿತ್ತು. ರಾಜಕೀಯವನ್ನು ಬಳಸಿಕೊಂಡರು. ಅತ್ತ ಪ್ರೇಷಿತರು ಮತ್ತು ಯೇಸುವಿನ ವಿಶ್ವಾಸಿಗಳು ಕಿರುಕುಳ ಮತ್ತು ಹಿಂಸೆ ಅನುಭವಿಸುತ್ತಾ ಚದುರಿದರು. ಇತ್ತ ಶರಣರು ಹಾಗೂ ಇತರ ಬಸವಾನುಯಾಯಿಗಳು ಅದೇ ರೀತಿ ಚದುರಿದರು.

ಕುಂಬಾರಣ್ಣನ ಮಡದಿ ಕಡಗಾದ ಕೈಯಿಕ್ಕಿ
ಕೊಡದ ಮ್ಯಾಲೇನ ಬರೆದಾಳ ಕಲ್ಯಾಣದ
ಶರಣಬಸವಣ್ಣನ ನಿಲಿಸ್ಯಾಳ.

ಕ್ರಿಸ್ತನ ಅನುಯಾಯಿಗಳು ರೇಖೆಗಳಿಂದ ಇಕ್ತ್ಯುಸ್ ರಚಿಸಿ ತಾವು ಕ್ರಿಸ್ತನ ವಿಶ್ವಾಸಿಗಳು ಎಂದು ಗುಪ್ತಸಂದೇಶವನ್ನು ರವಾನೆ ಮಾಡುತ್ತಿದ್ದಂತೆ ಚದುರಿದ ಶರಣರು ಮತ್ತೆ ತಮ್ಮ ಶರಣ ಪರಂಪರೆಯನ್ನು ಮತ್ತು ಲಿಂಗಾಯತ ಧರ್ಮವನ್ನು ಪುನರುತ್ಥಾನ ಮಾಡುವ ಸಲುವಾಗಿ ಒಂದಾಗಲು ಶ್ರಮಿಕ ವರ್ಗದ ಕಾಯಕ ಯೋಗಿಗಳು ಹಾತೊರೆಯುತ್ತಿದ್ದರದು ಆಶ್ಚರ್ಯವೇನಿರಲಿಲ್ಲ.

ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ ಎನ್ನುತ್ತಿದ್ದ ಶರಣರು ಮತ್ತೊಬ್ಬ ಶರಣರನ್ನು ಗುರುತಿಸಲು ವಿವಾದಕ್ಕೆ ಒಳಗಾಗಿದ್ದ ಬಸವಣ್ಣನ ಹೆಸರೆತ್ತುವ ಬದಲು ಹೊಲದಲ್ಲಿನ ದುಡಿಮೆಯ ಬಸವನನ್ನು ಸಂಕೇತಿಸುತ್ತಿದ್ದರೂ ಆಶ್ಚರ್ಯವೇನಿಲ್ಲ. ಈ ದಿಕ್ಕಿನಲ್ಲಿ ಒಂದಷ್ಟು ಅಧ್ಯಯನ ಮತ್ತು ಆಲೋಚನೆಗಳನ್ನು ಮಾಡಬೇಕಿದೆ.

ನಾನು ಸಣ್ಣವನಿದ್ದಾಗಿನಿಂದಲೂ ಲಿಂಗಾಯತರ ರುದ್ರಭೂಮಿಯಲ್ಲಿ ಬಹುಪಾಲು ಸಮಾಧಿಗಳ ಮೇಲೆ ಲಿಂಗಕ್ಕಿಂತಲೂ ಹೆಚ್ಚಿನ ಕೋಡಿನ ಬಸವಣ್ಣನ ವಿಗ್ರಹಗಳನ್ನು ನೋಡುತ್ತಿದ್ದೆ. ಹಿರಿಯರೊಬ್ಬರಲ್ಲಿ ವಿಚಾರಿಸಿದಾಗ ಅದು ಶಿವನ ಮುಂದಿನ ನಂದಿ ಎಂದರು. ಅದು ತಾರ್ಕಿಕವಾಗಿ ಖಂಡಿತವಾಗಿ ಸಮ್ಮತವಾಗಿರಲಿಲ್ಲ. ಏಕೆಂದರೆ ಕೈಲಾಸದ ಶಿವನನ್ನೇ ಪರಿಗಣಿಸಿ, ಆತನ ವಾಹನವಾದ ನಂದಿಯೆಂದೇ ಗುರುತಿಸಿದರೂ, ಶಿವನ ಗುರುತೇ ಸುಲಭವೂ ಮತ್ತು ಉನ್ನತವೂ ಆಗಿರುವಾಗ ಬಿಡಿಸುವಲ್ಲಿ ಅಥವಾ ಕೆತ್ತುವಲ್ಲಿ ಲಿಂಗಕ್ಕಿಂತ ಕ್ಲಿಷ್ಟವಾಗಿರುವ ನಂದಿಯೇಕೇ ಎಂದು ವಿಚಾರಿಸುತ್ತಿದ್ದೆ.

ಆದರೆ, ನನಗೆ ಕ್ರಮೇಣ ತೋರತೊಡಗಿದ್ದು, ಅದು ಶಿವನ ವಾಹನ ನಂದಿಯಲ್ಲ, ಉಳುವ ಎತ್ತಿನ ಬಸವ ಎಂದು. ಹಾಗಾದರೆ, ಕೃಷಿಕರಲ್ಲದ, ಅಂತಹ ಎತ್ತಿನ ಜೊತೆಗೆ ಕಾಯಕದಲ್ಲಿ ಏನೂ ಸಂಬಂಧ ಹೊಂದಿಲ್ಲದ ನನ್ನ ಸಂಬಂಧಿಕರು ಬರೀ ಲಿಂಗಾಯತರು ಎಂಬ ಕಾರಣದಿಂದ ಬಸವನನ್ನು ಹೊಂದುವ ಕಾರಣವೇನು ಎಂಬುದು ದೀರ್ಘಕಾಲದ ಜಿಜ್ಞಾಸೆಯಾಗಿತ್ತು.

ಮುಂಜಾನೆದ್ದು ಕುಂಬಾರಣ್ಣದಂತಹ ಕೆಲವು ಜಾನಪದ ಗೀತೆಗಳಲ್ಲಿ ಕಲ್ಯಾಣದ ಶರಣಬಸವಣ್ಣನ ನಿಲ್ಲಿಸುವುದು ಅಥವಾ ಮೂಡಿಸುವುದರ ಉಲ್ಲೇಖವಿದೆ. ರಹಸ್ಯವಾಗಿ ಇಕ್ತ್ಯುಸ್ ಮೂಲಕ ಯೇಸುವನ್ನು ಸಂಕೇತಿಸುವ ಕ್ರಿಸ್ತಾನುಯಾಯಿಗಳಂತೆ ಕೋಡಿನ ಬಸವನ ಮೂಲಕ ಬಸವಣ್ಣನ ಅನುಯಾಯಿ ನಾನು ಎಂದು ಸಂಕೇತಿಸುವ ಚಿಹ್ನೆ ಇದಾಗಿದ್ದಿರಬಹುದೆಂದು ತೋರಿತು.

ಹಲವಾರು ಜಾನಪದ ಕಲಾಕೃತಿಗಳಲ್ಲಿ, ವಾದ್ಯಗಳ ಮೇಲಿನ ಕುಸುರಿ ಕೆಲಸಗಳಲ್ಲಿ, ಬಟ್ಟೆಗಳಲ್ಲಿ ವಿಭೂತಿ ಧರಿಸಿರುವ ಕೋಡಿನ ಬಸವ ಮತ್ತು ಅದರ ಡುಬ್ಬದ ಮೇಲೆ ಲಿಂಗ, ಕೆಲವೊಮ್ಮೆ ಡುಬ್ಬವನ್ನೇ ಲಿಂಗದಂತೆ ರೂಪಿಸುವ ಚಿತ್ರಗಳನ್ನು ಗುರುತಿಸಬಹುದು. ಕುಂಬಾರ, ನೇಯ್ಕಾರರಂತಹ ಶ್ರಮಿಕ ವರ್ಗಗಳು ಬಸವಣ್ಣನನ್ನು ತಮ್ಮ ಸಂಕೇತಗಳಲ್ಲಿ ಬಸವನ ರೂಪಿಸಿರಲು ಸಾಧ್ಯ.
ಆ ಸಾಂಕೇತಿಕತೆಯ ಮುಂದುವರಿಕೆಯ ಭಾಗವಾಗಿ ಅರಿವಿಲ್ಲದೆಯೇ ಇಂದಿಗೂ ಬಸವ ಜಯಂತಿಯ ದಿನ ಕೋಡಿನ ಬಸವನ ಪೂಜೆ ಮಾಡುವ ಸಂಪ್ರದಾಯವನ್ನು ಕೆಲವರು ಇಟ್ಟುಕೊಂಡಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ನಮ್ಮಲ್ಲಿ ವಾಸ್ತವವನ್ನು ಬಿಟ್ಟು ಸಂಕೇತಕ್ಕೇ ಅಂಟಿಕೊಳ್ಳುವುದು ಒಂದು ಹಳೆಯ ರೂಢಿ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version