ಭಾವ ಭೈರಾಗಿ
ಕವಿತೆ | ಬುದ್ಧ ನಗುತ್ತಾನೆ..!
- ರಶ್ಮಿಪ್ರಸಾದ್ (ರಾಶಿ)
ಬೋಧಿವೃಕ್ಷದಡಿಯಲಿ ಕುಳಿತು
ಬೋಧನೆಯ ನೆಲೆಯಲಿ ನಿಂತರಷ್ಟೇ
ನಿನ್ನಂತಾಗುವೆವೆಂಬ ಮೌಢ್ಯವ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ಸಕಲವೈಭೋಗಗಳನೂ ತ್ಯಜಿಸಿ
ಮೋಹದಾ ಸೆಲೆಯನು ತೊರೆದರಷ್ಟೇ
ನಿನ್ನಂತಾಗುವೆವೆಂಬ ಭ್ರಮೆಯ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ಭೋಗ,ರಾಗದ ತತ್ವವಷ್ಟೇ ಅರಿತು
ತ್ಯಾಗ,ವಿರಾಗದ ಮಹತ್ವವನ್ನೇ ಮರೆತು
ನಿನ್ನಂತೆ ನಗುವುದಿಲ್ಲವೆಂಬ ಸತ್ಯವ ಕಂಡು
ಬುದ್ಧ ಇನ್ನೂ ಮುಗುಳ್ನಗುತ್ತಲೇ ಇದ್ದಾನೆ…
ನಿಜಕ್ಕೂ ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ನಿನ್ನ ಹೆಸರಷ್ಟೇ ಉಚ್ಛರಿಸುವೆವು ನಾವು
ನಿನ್ನ ತತ್ವಗಳ ಪಾಲಿಸಲೇ ಇಲ್ಲ ನಾವು
ನಿನ್ನ ಉಪದೇಶವ ಪಠಿಸಲಿಲ್ಲ ನಾವು
ನಿನ್ನ ವೇದಾಂತವೆಂದೂ ಅನುಸರಿಸಲಿಲ್ಲ ನಾವು
ನಿನ್ನಂತೆ ಎಂದಿಗೂ ಆಗಲೇ ಇಲ್ಲ ನಾವು.!
ಮತ್ತೇ ನೀನೇ ಹುಟ್ಟಿಬರಬೇಕು ಬುದ್ಧ
ನಮ್ಮೊಳಗೆ ಜ್ಞಾನೋದಯದ ಬೆಳಕು ಚೆಲ್ಲಲು
ನಮ್ಮೊಳಗೆ ಬೌದ್ಧತ್ವದ ಠಾವು ಮೂಡಲು
ನಮ್ಮೊಳಗೆ ಶಾಂತಿ ಮಂತ್ರದ ತಪನೆಯಾಗಲು
ನಮ್ಮೊಳಗೆ ನಮ್ಮನ್ನೇ ಕಂಡುಕೊಳ್ಳಲು.!
ಸುದ್ದಿದಿನ.ಕಾಂ|ವಾಟ್ಸಾಪ್|9980346243