ದಿನದ ಸುದ್ದಿ

ನುಡಿಯ ಒಡಲು – 16 | ವಿಚಾರ ಸಂವಹನ : ತೊಡಕುಗಳೆಂತಹವು..?

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ವಿಚಾರ ಎಂಬ ಪರಿಕಲ್ಪನೆಯ ಅರ್ಥ ವ್ಯಾಪ್ತಿ ದೊಡ್ಡದು. ಇದರ ತಾತ್ವಿಕ ಚೌಕಟ್ಟನ್ನು ಕುರಿತು ವಿಶ್ಲೇಷಣೆ ಮಾಡುವ ಬದಲಾಗಿ, ಈ ಪರಿಕಲ್ಪನೆಯ ತಾತ್ವಿಕ ಪರಿಣಾಮಗಳ ಬಗೆಗೆ ಮಾತ್ರ ಇಲ್ಲಿ ಚರ್ಚಿಸುತ್ತೇನೆ. ಏಕೆಂದರೆ ಬಹುತೇಕ ಸನ್ನಿವೇಶದಲ್ಲಿ ಓದುಗರನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕು ಎನ್ನುವ ಅಭಿಪ್ರಾಯಗಳನ್ನು ಕೇಳುತ್ತೇವೆ ಹಾಗೂ ಹೇಳುತ್ತಿರುತ್ತೇವೆ.

ಅಂದರೆ ಬರೆಯುವವರು ಮತ್ತು ಓದುವವರು ಬೇರೆ ಬೇರೆ ವರ್ಗಕ್ಕೆ ಸೇರಿದ್ದೇವೆ ಎಂಬ ಸಾಮಾನ್ಯ ತಿಳಿವಳಿಕೆ ಇಲ್ಲಿದೆ. ಇಂತಹದೊಂದು ನಿಲುವು ಯಾಕೇ ತಲೆಯೆತ್ತಿದೆ ಎಂದು ಕೇಳಿದರೆ, ಈ ಪ್ರಶ್ನೆಗೆ ಉತ್ತರಿಸುವುದು ದುಸ್ತರ. ಸಂವಹನ ನಡೆಸುವ ಪ್ರತೀ ಸಂದರ್ಭದಲ್ಲಿಯೂ ನಾವಾಡುವ ಮಾತುಕತೆ, ಭಾಷಣ, ಪ್ರವಚನ, ಸಂಭಾಷಣೆ ಹಾಗೂ ಬರೆಯುವ ಸಂಕಥನಗಳನ್ನು ಎರಡು ರೀತಿಯಲ್ಲಿ ವಿಂಗಡಿಸುತ್ತೇವೆ.

ಅಂದರೆ ಅರ್ಥ ಮಾಡಿಕೊಳ್ಳುವ ಬಗೆಗಳನ್ನು ಸಾಮಾನ್ಯವಾಗಿ ಸಂವಹನಶೀಲವಾಗಿದೆ ಎಂದು ಇಲ್ಲವೇ ಸಂವಹನ ಸಹಜವಾಗಿಲ್ಲವೆಂದು ಹೇಳುತ್ತಿರುತ್ತೇವೆ. ಸಂವಹನ ಪ್ರಕ್ರಿಯೆಯಲ್ಲಿ ಎದುರಾಗುವ ಬಿಕ್ಕಟ್ಟುಗಳಿಗೆ ಏನು ಕಾರಣಗಳಿರಬಹುದು ಎಂದು ಕೇಳಿದರೆ, ಆಯಾ ವ್ಯಕ್ತಿ ಬಳಸುವ ಭಾಷೆಯ ಸ್ವರೂಪ, ನಿರೂಪಣೆ ಮತ್ತು ವಾಕ್ಯಸರಣಿಗಳಲ್ಲಿಯೇ ತೊಡಕುಗಳಿವೆ ಎಂದು ಹೇಳುತ್ತೇವೆ. ಇಡಿಯಾಗಿ ಇದನ್ನು ಸಂಕೀರ್ಣ ಸ್ಥಿತಿಯೆಂದು ಗುರುತಿಸುತ್ತೇವೆ.

ಈ ಸಂಕೀರ್ಣತೆ ಭಾಷೆಗೆ ಸಂಬಂಧಿಸಿದ ಸಂಗತಿಯೋ? ಇಲ್ಲವೇ ವಿಚಾರಕ್ಕೆ ಸಂಬಂಧಿಸಿದ್ದೋ? ಎನ್ನುವುದರ ಬಗೆಗೆ ನಮಗೆ ಯಾವುದೇ ಖಚಿತತೆ ಇರುವುದಿಲ್ಲ. ಒಟ್ಟಾರೆ ಈ ಸ್ಥಿತಿಯನ್ನು ಸಂವಹನಶೀಲವಲ್ಲದ್ದು ಎಂದು ಭಾವಿಸುತ್ತೇವೆ. ಇದುವೇ ಸರಿಯಾದ ನಿಲುವು ಎಂದೂ ನಂಬಲಾಗುತ್ತದೆ. ಈ ನಿಲುವನ್ನು ಪರಿಶೀಲಿಸುವ ಬದಲಾಗಿ ಸರಿಯಾದುದು ಎಂದು ಒಪ್ಪಿಕೊಳ್ಳಲಾಗುತ್ತದೆ.

ಹೇಳುವವರು, ಕೇಳುವವರು, ಬರೆಯುವವರು ಮತ್ತು ಓದುವವರು ಇವರೆಲ್ಲರಲ್ಲೂ ನುಡಿ ರಚನೆ ಮತ್ತು ಬಳಕೆಯ ನೆಲೆಗಳು ಸಮಾನವಾಗಿರುತ್ತವೆ. ನುಡಿಯ ಕಸುವನ್ನು ಪಡೆಯುವ ಬಗೆಯಲ್ಲಿ ಯಾವುದೇ ಏರುಪೇರುಗಳಿರುವುದಿಲ್ಲ. ಈ ನುಡಿ ಕಸುವು ಎನ್ನುವುದು ಎಲ್ಲರಲ್ಲೂ ಸಮಾನವಾಗಿಯೇ ನೆಲೆಗೊಂಡಿರುತ್ತದೆ. ಆದರೆ ಸಂವಹನದ ಮೂಲಕ ಮಾಡುವ ವಿಶ್ಲೇಷಣೆ, ವ್ಯಾಖ್ಯಾನ ಇಲ್ಲವೇ ನಿರ್ವಚಿಸುವ ಕ್ರಮಗಳಲ್ಲಿ ವ್ಯತ್ಯಾಸಗಳು ಏರ್ಪಡುವುದು ಸಹಜ.

ಏಕೆಂದರೆ, ಪ್ರತೀ ನುಡಿಯೊಳಗೆ ವಿಚಾರ ಸಂವಹನ ಮತ್ತು ಸಾಮಾನ್ಯ ಸಂವಹನವನ್ನು ಏರ್ಪಡಿಸುವ ಬಗೆಗಳನ್ನು ಸಜ್ಜುಗೊಳಿಸುವ ಜರೂರಿರುತ್ತದೆ. ಈ ವಿನ್ಯಾಸ ಸಾರ್ವತ್ರಿಕವಾಗಿ ಎಲ್ಲ ನುಡಿಗಳಲ್ಲಿಯೂ ಒಂದೇ ಬಗೆಯಲ್ಲಿ ಇರುವುದಿಲ್ಲ. ಹಾಗಾಗಿ ತಮ್ಮ ಬದುಕಿಗೆ ಸಂಬಂಧಿಸಿದ ‘ಅರಿವು’ ಮತ್ತು ‘ಅಭಿವ್ಯಕ್ತಿಶೀಲ’ ಚಟುವಟಿಕೆಗಳಲ್ಲಿ ಜನರು ಭಾಷೆ ಮತ್ತು ಭಾಷಿಕ ವಿದ್ಯಮಾನಗಳಿಗೆ ಸಂಬಂಧಿಸಿದ ಬಿಕ್ಕಟ್ಟುಗಳನ್ನು ನಿರಂತರವಾಗಿ ಎದುರಿಸುತ್ತಾರೆ.

ನಾವು ದಿನನಿತ್ಯ ಬದುಕಿನಲ್ಲಿ ಕೆಲವು ನಿರ್ದಿಷ್ಟ ರೂಢಿಗಳಲ್ಲಿಯೇ ಮುಳುಗಿರುತ್ತೇವೆ ಹಾಗೂ ಅಷ್ಟರಲ್ಲಿಯೇ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಇದೆಲ್ಲವೂ ಭಾಷೆಯ ಮೂಲಕ ನಡೆಯುತ್ತದೆ ದಿಟ. ಆದರೆ ಭಾಷೆಯು ಹಲವು ಬಗೆಯ ಸಂಜ್ಞೆ, ಸಂಕೇತಗಳನ್ನು ಬಳಸಿಕೊಳ್ಳುತ್ತದೆ. ಈ ಲೋಕದ ಎಲ್ಲ ವಿದ್ಯಮಾನಗಳನ್ನು ಅರಿಯಲು ಮತ್ತು ಅರ್ಥೈಸಲು ಈ ಸಂಜ್ಞಾ ವ್ಯಾಪಾರಗಳ ಮೂಲಕ ಪ್ರಯತ್ನಿಸುತ್ತೇವೆ.

ಇದೆಲ್ಲವೂ ಕೇವಲ ಭಾಷೆಯ ಮೇಲೆ ಮಾತ್ರ ಕೇಂದ್ರಿಕೃತವಾಗಿರುವುದಿಲ್ಲ. ಬದಲಾಗಿ ಭಾಷೆ ಅಮೂರ್ತ ವಿದ್ಯಮಾನವಾಗಿ ಹೊರಹೊಮ್ಮುತ್ತದೆ. ಸಾಮಾನ್ಯವಾಗಿ ಭಾಷೆಯು ಏಕಕಾಲಕ್ಕೆ ಪಾರದರ್ಶಕವೂ ಮತ್ತು ಅಗೋಚರವೂ ಆಗಿರುತ್ತದೆ. ಈ ಇಕ್ಕಟ್ಟಿನಲ್ಲಿಯೇ ನಾವು ಲೋಕದ ಎಲ್ಲ ವ್ಯವಹಾರಗಳನ್ನು ಗ್ರಹಿಸುತ್ತೇವೆ, ಅರ್ಥೈಸುತ್ತೇವೆ ಮತ್ತು ಅವುಗಳ ಬಗೆಗೆ ಮಾತ್ನಾಡುತ್ತೇವೆ. ಮಾತು, ಮಾತಿಗೆ ಸಂಬಂಧಿಸಿದ ವಿಷಯ ಮತ್ತು ವ್ಯಕ್ತಿಗಳ ನಡುವಣ ಸಂಬಂಧಗಳ ಮೂಲಕವೇ ನಮ್ಮ ಬಹುತೇಕ ಸಂವಹನ ಚಟುವಟಿಕೆಗಳು ಏರ್ಪಡುತ್ತವೆ.

ಹಾಗಾದರೆ, ಭಾಷೆಯನ್ನು ಪಾರದರ್ಶಕ ಮತ್ತು ಕ್ರಿಯಾಶೀಲ ವ್ಯಾಪಾರವನ್ನಾಗಿ ಗ್ರಹಿಸಲು ಹೇಗೆ ಸಾಧ್ಯ? ಏಕೆಂದರೆ ನುಡಿ ಕಸುವು ಪ್ರಕಟಗೊಳ್ಳುವ ಇಡೀ ಪ್ರಕ್ರಿಯೆಯಲ್ಲಿ ಕೇವಲ ಭಾಷಿಕ ವಿವರಗಳು ಮಾತ್ರ ಪಾಲ್ಗೊಳ್ಳುವುದಿಲ್ಲ. ಹೊರತಾಗಿ ಸಾಂಸ್ಕೃತಿಕ, ಮಾನಸಿಕ ಹಾಗೂ ಸಾಂಕೇತಿಕ ವಿದ್ಯಮಾನಗಳು ಸೇರಿರುತ್ತವೆ. ಯಾವುದೇ ಅಮೂರ್ತ ರೂಪ, ವಿದ್ಯಮಾನ, ವಸ್ತುಗಳನ್ನು ಗುರುತಿಸುವುದು ಮಾತ್ರ ಇದೇ ಭಾಷಿಕ ವ್ಯಾಪಾರಗಳಿಂದ. ಈ ಭಾಷಿಕ ವ್ಯವಹಾರಗಳನ್ನು ‘ಕ್ರಿಯೆ’ ಮತ್ತು ‘ರಚನೆ’ಗಳ ಸ್ವರೂಪದಲ್ಲಿ ಗುರುತಿಸಲಾಗುತ್ತೆ. ಆದ್ದರಿಂದ ಈ ಭಾಷಿಕ ವಿದ್ಯಮಾನಗಳನ್ನು ಅತ್ಯಂತ ಸಮಂಜಸವಾದ ನೆಲೆಗಳನ್ನಾಗಿ ಒಪಿಕೊಳ್ಳಲಾಗುತ್ತದೆ.

ನಾವು ಮಾತ್ನಾಡುವ, ಕೇಳುವ, ಯಾವುದೇ ಮಾತಿಗೆ ಪ್ರತಿಕ್ರಿಯಿಸುವ ಬಗೆಗಳು ‘ಸಂವಾದದಲ್ಲಿ ಮಾತಿಗೆ’ ತೊಡಗಿಕೊಳ್ಳುವ ಬಗೆಯಾಗಿದೆ. ಸಂವಾದ ಕೇವಲ ಭಾಷಿಕ ವ್ಯವಹಾರವಲ್ಲ. ಅದು ಸಾಮಾಜಿಕ, ಮಾನಸಿಕ ನಂಟುಗಳನ್ನು ಪಡೆದಿರುತ್ತದೆ. ಇಡೀ ಲೋಕಾನುಭವನ್ನು ಗ್ರಹಿಸುವ, ಅಭಿವ್ಯಕ್ತಿಸುವ ಸಾಮರ್ಥ್ಯವನ್ನು ನಾವು ಪ್ರತಿಭಾನ (ಇಂಟ್ಯೂಶನ್) ಹಾಗೂ ಬುದ್ಧಿವ್ಯಾಪಾರ (ರೀಸನ್)ಗಳಿಂದ ಪಡೆಯುತ್ತೇವೆ ಎಂಬ ವಾದವು ಪ್ರಬಲವಾಗಿದೆ. ಆದರೆ ಮನುಷ್ಯನ ಮಾನಸಿಕ ತಂತ್ರಗಾರಿಕೆಗೆ ಹೊರತಾದ ವಿಶೇಷ ಭಾಷಿಕ ಸಾಮರ್ಥ್ಯವು ಮನುಷ್ಯರಲ್ಲಿ ಅಂತಸ್ಥವಾಗಿದೆ. ಪರಿಣಾಮವಾಗಿ ಭಾಷೆಯ ಮೂಲ ವಿಷಯ ಹಾಗೂ ಅರ್ಥಗಳು, ಮಾನವನ ಆಲೋಚನಾಕ್ರಮಕ್ಕೆ ಆಳವಾದ ಅಂಶಗಳಾಗಿವೆ ಎನ್ನುವ ಚಿಂತನೆಗೆ ಬಲಬಂದಿದೆ.

ಫ್ರೆಂಚ್ ತತ್ವಜ್ಞಾನಿಯ ರೆನೆ ಡೆಕಾರ್ಟಸ್‍ನ ‘ಐ ಥಿಂಕ್ ದೇರ್ಫೋರ್ ಐ ಆ್ಯಮ್’ ಎನ್ನುವ ಪ್ರಸಿದ್ಧ ಮಾತಿದೆ. ಇದು ಮನುಷ್ಯನ ಅಸ್ತಿತ್ವದ ಮೂಲ ಚಹರೆಯಾಗಿದೆ. ಮನುಷ್ಯ ಯೋಚಿಸಬಲ್ಲ ಎಂಬೀ ನೆಲೆಯೇ ಆತನ/ಅವಳ ಪ್ರಾಥಮಿಕ ಗುರುತಾಗಿದೆ. ಬುದ್ಧಿವ್ಯಾಪಾರ (ರೀಸನ್) ಮತ್ತು ವಿಜ್ಞಾನ (ಸೈಯನ್ಸ್) ಎಂಬ ಪರಿಕಲ್ಪನೆಗಳು ಮನುಷ್ಯನ ಚಿಂತನೆಯ ತಳಹದಿಯಾಗಿದೆ. ಈ ಇಡೀ ಆಲೋಚನಾ ಕ್ರಮವು ‘ವೈಚಾರಿಕ ಅನುಮಾನ’ (ರಾಡಿಕಲ್ ಡೌಟ್)ಎನ್ನುವ ತಾತ್ವಿಕ ಪರಿಕಲ್ಪನೆಯ ಆಧಾರದ ಮೇಲೆ ನಿಂತಿದೆ.

ಯಾವುದೇ ತಿಳಿವು ಒಂದು ಆತ್ಯಂತಿಕ ಸತ್ಯವೆಂದು ನಿರ್ದರಿಸಲು ಆಗುವುದಿಲ್ಲ ಎಂಬುದನ್ನು ಈ ಮಾತು ಸೂಚಿಸುತ್ತದೆ. ಕೇವಲ ಮನಸ್ಸು ಇಲ್ಲವೇ ಪ್ರಜ್ಞೆಯ ಮೂಲಕ ಮಾತ್ರ ಗ್ರಹಿಕೆಗಳನ್ನು ನಂಬುವ, ಅನುಮಾನಿಸುವ ನೆಲೆಯಿರುತ್ತದೆ. ಈ ಇಡೀ ನೆಲೆಯನ್ನು ಡೆಕಾರ್ಟಸ್ ‘ಐ ಥಿಂಕ್ ದೇರ್ಫೋರ್ ಐ ಆ್ಯಮ್’ ಎಂದು ಸೂತ್ರೀಕರಿಸಿದ್ದಾನೆ. ಇದನ್ನೇ ಇತಾಲಿಯ ಭಾಷಾ ಚಿಂತಕ ಆಂಡ್ರಿಯಾ ಮೋರೊ ‘ಐ ಸ್ಪೀಕ್ ದೇರ್ಫೋರ್ ಐ ಆ್ಯಮ್’ ಎಂದೂ ಗುರುತಿಸಿದ್ದಾನೆ.

ಮನಸ್ಸು (ಮೈಂಡ್) ಮತ್ತು ದೇಹ (ಬಾಡಿ) ಎರಡು ಭಿನ್ನ ಮತ್ತು ವಿಶಿಷ್ಟ ಘಟಕಗಳು ಎಂಬ ಪ್ರಮೇಯವನ್ನೂ ಡೆಕಾರ್ಟಸ್ ಮಂಡಿಸಿದನು. ಏಕೆಂದರೆ ದೇಹ ಮನಸ್ಸಿನಂತೆ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಘಟಕವಲ್ಲ. ಇಡೀ ಲೋಕವ್ಯವಹಾರವನ್ನು ಗ್ರಹಿಸುವುದು ಕೇವಲ ಮನಸ್ಸಿನಿಂದ ಮಾತ್ರ. ಮನಸ್ಸು ಇರುವುದರಿಂದಲೇ ದೇಹವನ್ನೂ ಗ್ರಹಿಸಲಾಗುತ್ತದೆ. ಇಲ್ಲಿ ದೇವರ ಅಸ್ತಿತ್ವವನ್ನು ನಿರಾಕರಿಸಿ ಮನಸ್ಸು ಮತ್ತು ಬುದ್ಧಿವ್ಯಾಪಾರಕ್ಕೆ ಮಾತ್ರ ಪ್ರಾಮುಖ್ಯತೆಯನ್ನು ನೀಡಲಾಯಿತು.

ಭಾಷೆಯಲ್ಲಿಯೂ ಬೇರೆ ಬೇರೆ ಪದಗಳನ್ನು ಸಂಯೋಜಿಸಿಕೊಂಡು ವಿಶಿಷ್ಟ ಅರ್ಥಗಳನ್ನು ರೂಪಿಸುವ ಸಾಮರ್ಥ್ಯವೂ ಇದೇ ಮನಸ್ಸಿನಲ್ಲಿ ಅಂತಸ್ಥವಾಗಿರುವ ನುಡಿ ಕಸುವಿನಿಂದ ಮಾತ್ರ. ಆದರೆ ಈ ಸಾಮರ್ಥ್ಯವನ್ನು ಸಾಂಸ್ಕೃತಿಕ ಪರಿಣತಿಯನ್ನಾಗಿ ರೂಪಿಸಿಕೊಳ್ಳುವ ಅವಶ್ಯಕತೆಯಿದೆ. ಈ ಪರಿಣತಿಯನ್ನು ಪಡೆಯದ ಮನುಷ್ಯನು ಕೂಡ ನುಡಿಯನ್ನು ಅರಿಯದ ಇಲ್ಲವೇ ನುಡಿಯದ ಮೂರ್ಖನೂ ಅಲ್ಲ ಮತ್ತು ಶತದಡ್ಡನೂ ಅಲ್ಲ. ಹಾಗಾಗಿ ನುಡಿಯ ಮೂಲಕ ಪ್ರಕಟಗೊಳ್ಳುವ ಎಲ್ಲ ವ್ಯಾಪಾರಗಳನ್ನು ಗ್ರಹಿಸುವ ಪ್ರಾಥಮಿಕ ಸಾಮರ್ಥ್ಯ ಪ್ರತೀ ಮನುಷ್ಯರಲ್ಲಿ ಅಂತಸ್ಥವಾಗಿದೆ.

ಅದರೆ ವೈಚಾರಿಕ ವಿನ್ಯಾಸಗಳನ್ನು ಗ್ರಹಿಸುವಲ್ಲಿ ತೊಡಕುಗಳು ಎದುರಾಗುತ್ತವೆ. ಏಕೆಂದರೆ ಎಲ್ಲ ಬಗೆಯ ಜ್ಞಾನ/ವಿಚಾರದ ಸಮರ್ಥನೆಗಳು ವೈಜ್ಞಾನಿಕ ಮತ್ತು ಸಾರ್ವತ್ರಿಕವಾಗಿರುವುದಿಲ್ಲ. ನುಡಿಯ ಜೊತೆಗೆ ಸಾಂಸ್ಕೃತಿಕ, ವೈಜ್ಞಾನಿಕ ಇತ್ಯಾದಿ ವಿಶೇಷ ಪರಿಣತಿಯನ್ನು ಮನುಷ್ಯರು ರೂಪಿಸಿಕೊಂಡಾಗ ಮಾತ್ರ ಗ್ರಹಿಕೆಗೆ ಯಾವುದೇ ತೊಡಕುಗಳಿರುವುದಿಲ್ಲ. ಅದರೆ ಹೇಳುವ ಇಲ್ಲವೇ ಬರೆಯುವ ಸನ್ನಿವೇಶದಲ್ಲಿ ಇಂತಹದೊಂದು ಬಿಕ್ಕಟ್ಟು ಏರ್ಪಡುವುದಿಲ್ಲ. ವ್ಯಕ್ತಿ ತಾನಾಡುವ ಮಾತುಗಳಿಗೆ ಖಚಿತ ಅರ್ಥಗಳನ್ನು ಕಲ್ಪಿಸಿಕೊಂಡು ಹೇಳುತ್ತಾನೆ/ಳೆ ಮತ್ತು ಬರೆಯುತ್ತಾಳೆ/ನೆ. ತಾನಾಡುವ ಮಾತು/ಬರಹಗಳ ಅರ್ಥ ನಿರ್ದಿಷ್ಟತೆಯನ್ನು ಗ್ರಹಿಸದೇ ಹೋದರೆ ಏನೆಲ್ಲ ಅಪಾಯಗಳು ಉಂಟಾಗಬಹುದು ಎಂಬ ನೆನಪಿನಲ್ಲಿಯೇ ಅಪಾಯಗಳಿವೆ ಅಲ್ಲವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version