ದಿನದ ಸುದ್ದಿ
ನುಡಿಯ ಒಡಲು – 16 | ವಿಚಾರ ಸಂವಹನ : ತೊಡಕುಗಳೆಂತಹವು..?
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ವಿಚಾರ ಎಂಬ ಪರಿಕಲ್ಪನೆಯ ಅರ್ಥ ವ್ಯಾಪ್ತಿ ದೊಡ್ಡದು. ಇದರ ತಾತ್ವಿಕ ಚೌಕಟ್ಟನ್ನು ಕುರಿತು ವಿಶ್ಲೇಷಣೆ ಮಾಡುವ ಬದಲಾಗಿ, ಈ ಪರಿಕಲ್ಪನೆಯ ತಾತ್ವಿಕ ಪರಿಣಾಮಗಳ ಬಗೆಗೆ ಮಾತ್ರ ಇಲ್ಲಿ ಚರ್ಚಿಸುತ್ತೇನೆ. ಏಕೆಂದರೆ ಬಹುತೇಕ ಸನ್ನಿವೇಶದಲ್ಲಿ ಓದುಗರನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕು ಎನ್ನುವ ಅಭಿಪ್ರಾಯಗಳನ್ನು ಕೇಳುತ್ತೇವೆ ಹಾಗೂ ಹೇಳುತ್ತಿರುತ್ತೇವೆ.
ಅಂದರೆ ಬರೆಯುವವರು ಮತ್ತು ಓದುವವರು ಬೇರೆ ಬೇರೆ ವರ್ಗಕ್ಕೆ ಸೇರಿದ್ದೇವೆ ಎಂಬ ಸಾಮಾನ್ಯ ತಿಳಿವಳಿಕೆ ಇಲ್ಲಿದೆ. ಇಂತಹದೊಂದು ನಿಲುವು ಯಾಕೇ ತಲೆಯೆತ್ತಿದೆ ಎಂದು ಕೇಳಿದರೆ, ಈ ಪ್ರಶ್ನೆಗೆ ಉತ್ತರಿಸುವುದು ದುಸ್ತರ. ಸಂವಹನ ನಡೆಸುವ ಪ್ರತೀ ಸಂದರ್ಭದಲ್ಲಿಯೂ ನಾವಾಡುವ ಮಾತುಕತೆ, ಭಾಷಣ, ಪ್ರವಚನ, ಸಂಭಾಷಣೆ ಹಾಗೂ ಬರೆಯುವ ಸಂಕಥನಗಳನ್ನು ಎರಡು ರೀತಿಯಲ್ಲಿ ವಿಂಗಡಿಸುತ್ತೇವೆ.
ಅಂದರೆ ಅರ್ಥ ಮಾಡಿಕೊಳ್ಳುವ ಬಗೆಗಳನ್ನು ಸಾಮಾನ್ಯವಾಗಿ ಸಂವಹನಶೀಲವಾಗಿದೆ ಎಂದು ಇಲ್ಲವೇ ಸಂವಹನ ಸಹಜವಾಗಿಲ್ಲವೆಂದು ಹೇಳುತ್ತಿರುತ್ತೇವೆ. ಸಂವಹನ ಪ್ರಕ್ರಿಯೆಯಲ್ಲಿ ಎದುರಾಗುವ ಬಿಕ್ಕಟ್ಟುಗಳಿಗೆ ಏನು ಕಾರಣಗಳಿರಬಹುದು ಎಂದು ಕೇಳಿದರೆ, ಆಯಾ ವ್ಯಕ್ತಿ ಬಳಸುವ ಭಾಷೆಯ ಸ್ವರೂಪ, ನಿರೂಪಣೆ ಮತ್ತು ವಾಕ್ಯಸರಣಿಗಳಲ್ಲಿಯೇ ತೊಡಕುಗಳಿವೆ ಎಂದು ಹೇಳುತ್ತೇವೆ. ಇಡಿಯಾಗಿ ಇದನ್ನು ಸಂಕೀರ್ಣ ಸ್ಥಿತಿಯೆಂದು ಗುರುತಿಸುತ್ತೇವೆ.
ಈ ಸಂಕೀರ್ಣತೆ ಭಾಷೆಗೆ ಸಂಬಂಧಿಸಿದ ಸಂಗತಿಯೋ? ಇಲ್ಲವೇ ವಿಚಾರಕ್ಕೆ ಸಂಬಂಧಿಸಿದ್ದೋ? ಎನ್ನುವುದರ ಬಗೆಗೆ ನಮಗೆ ಯಾವುದೇ ಖಚಿತತೆ ಇರುವುದಿಲ್ಲ. ಒಟ್ಟಾರೆ ಈ ಸ್ಥಿತಿಯನ್ನು ಸಂವಹನಶೀಲವಲ್ಲದ್ದು ಎಂದು ಭಾವಿಸುತ್ತೇವೆ. ಇದುವೇ ಸರಿಯಾದ ನಿಲುವು ಎಂದೂ ನಂಬಲಾಗುತ್ತದೆ. ಈ ನಿಲುವನ್ನು ಪರಿಶೀಲಿಸುವ ಬದಲಾಗಿ ಸರಿಯಾದುದು ಎಂದು ಒಪ್ಪಿಕೊಳ್ಳಲಾಗುತ್ತದೆ.
ಹೇಳುವವರು, ಕೇಳುವವರು, ಬರೆಯುವವರು ಮತ್ತು ಓದುವವರು ಇವರೆಲ್ಲರಲ್ಲೂ ನುಡಿ ರಚನೆ ಮತ್ತು ಬಳಕೆಯ ನೆಲೆಗಳು ಸಮಾನವಾಗಿರುತ್ತವೆ. ನುಡಿಯ ಕಸುವನ್ನು ಪಡೆಯುವ ಬಗೆಯಲ್ಲಿ ಯಾವುದೇ ಏರುಪೇರುಗಳಿರುವುದಿಲ್ಲ. ಈ ನುಡಿ ಕಸುವು ಎನ್ನುವುದು ಎಲ್ಲರಲ್ಲೂ ಸಮಾನವಾಗಿಯೇ ನೆಲೆಗೊಂಡಿರುತ್ತದೆ. ಆದರೆ ಸಂವಹನದ ಮೂಲಕ ಮಾಡುವ ವಿಶ್ಲೇಷಣೆ, ವ್ಯಾಖ್ಯಾನ ಇಲ್ಲವೇ ನಿರ್ವಚಿಸುವ ಕ್ರಮಗಳಲ್ಲಿ ವ್ಯತ್ಯಾಸಗಳು ಏರ್ಪಡುವುದು ಸಹಜ.
ಏಕೆಂದರೆ, ಪ್ರತೀ ನುಡಿಯೊಳಗೆ ವಿಚಾರ ಸಂವಹನ ಮತ್ತು ಸಾಮಾನ್ಯ ಸಂವಹನವನ್ನು ಏರ್ಪಡಿಸುವ ಬಗೆಗಳನ್ನು ಸಜ್ಜುಗೊಳಿಸುವ ಜರೂರಿರುತ್ತದೆ. ಈ ವಿನ್ಯಾಸ ಸಾರ್ವತ್ರಿಕವಾಗಿ ಎಲ್ಲ ನುಡಿಗಳಲ್ಲಿಯೂ ಒಂದೇ ಬಗೆಯಲ್ಲಿ ಇರುವುದಿಲ್ಲ. ಹಾಗಾಗಿ ತಮ್ಮ ಬದುಕಿಗೆ ಸಂಬಂಧಿಸಿದ ‘ಅರಿವು’ ಮತ್ತು ‘ಅಭಿವ್ಯಕ್ತಿಶೀಲ’ ಚಟುವಟಿಕೆಗಳಲ್ಲಿ ಜನರು ಭಾಷೆ ಮತ್ತು ಭಾಷಿಕ ವಿದ್ಯಮಾನಗಳಿಗೆ ಸಂಬಂಧಿಸಿದ ಬಿಕ್ಕಟ್ಟುಗಳನ್ನು ನಿರಂತರವಾಗಿ ಎದುರಿಸುತ್ತಾರೆ.
ನಾವು ದಿನನಿತ್ಯ ಬದುಕಿನಲ್ಲಿ ಕೆಲವು ನಿರ್ದಿಷ್ಟ ರೂಢಿಗಳಲ್ಲಿಯೇ ಮುಳುಗಿರುತ್ತೇವೆ ಹಾಗೂ ಅಷ್ಟರಲ್ಲಿಯೇ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಇದೆಲ್ಲವೂ ಭಾಷೆಯ ಮೂಲಕ ನಡೆಯುತ್ತದೆ ದಿಟ. ಆದರೆ ಭಾಷೆಯು ಹಲವು ಬಗೆಯ ಸಂಜ್ಞೆ, ಸಂಕೇತಗಳನ್ನು ಬಳಸಿಕೊಳ್ಳುತ್ತದೆ. ಈ ಲೋಕದ ಎಲ್ಲ ವಿದ್ಯಮಾನಗಳನ್ನು ಅರಿಯಲು ಮತ್ತು ಅರ್ಥೈಸಲು ಈ ಸಂಜ್ಞಾ ವ್ಯಾಪಾರಗಳ ಮೂಲಕ ಪ್ರಯತ್ನಿಸುತ್ತೇವೆ.
ಇದೆಲ್ಲವೂ ಕೇವಲ ಭಾಷೆಯ ಮೇಲೆ ಮಾತ್ರ ಕೇಂದ್ರಿಕೃತವಾಗಿರುವುದಿಲ್ಲ. ಬದಲಾಗಿ ಭಾಷೆ ಅಮೂರ್ತ ವಿದ್ಯಮಾನವಾಗಿ ಹೊರಹೊಮ್ಮುತ್ತದೆ. ಸಾಮಾನ್ಯವಾಗಿ ಭಾಷೆಯು ಏಕಕಾಲಕ್ಕೆ ಪಾರದರ್ಶಕವೂ ಮತ್ತು ಅಗೋಚರವೂ ಆಗಿರುತ್ತದೆ. ಈ ಇಕ್ಕಟ್ಟಿನಲ್ಲಿಯೇ ನಾವು ಲೋಕದ ಎಲ್ಲ ವ್ಯವಹಾರಗಳನ್ನು ಗ್ರಹಿಸುತ್ತೇವೆ, ಅರ್ಥೈಸುತ್ತೇವೆ ಮತ್ತು ಅವುಗಳ ಬಗೆಗೆ ಮಾತ್ನಾಡುತ್ತೇವೆ. ಮಾತು, ಮಾತಿಗೆ ಸಂಬಂಧಿಸಿದ ವಿಷಯ ಮತ್ತು ವ್ಯಕ್ತಿಗಳ ನಡುವಣ ಸಂಬಂಧಗಳ ಮೂಲಕವೇ ನಮ್ಮ ಬಹುತೇಕ ಸಂವಹನ ಚಟುವಟಿಕೆಗಳು ಏರ್ಪಡುತ್ತವೆ.
ಹಾಗಾದರೆ, ಭಾಷೆಯನ್ನು ಪಾರದರ್ಶಕ ಮತ್ತು ಕ್ರಿಯಾಶೀಲ ವ್ಯಾಪಾರವನ್ನಾಗಿ ಗ್ರಹಿಸಲು ಹೇಗೆ ಸಾಧ್ಯ? ಏಕೆಂದರೆ ನುಡಿ ಕಸುವು ಪ್ರಕಟಗೊಳ್ಳುವ ಇಡೀ ಪ್ರಕ್ರಿಯೆಯಲ್ಲಿ ಕೇವಲ ಭಾಷಿಕ ವಿವರಗಳು ಮಾತ್ರ ಪಾಲ್ಗೊಳ್ಳುವುದಿಲ್ಲ. ಹೊರತಾಗಿ ಸಾಂಸ್ಕೃತಿಕ, ಮಾನಸಿಕ ಹಾಗೂ ಸಾಂಕೇತಿಕ ವಿದ್ಯಮಾನಗಳು ಸೇರಿರುತ್ತವೆ. ಯಾವುದೇ ಅಮೂರ್ತ ರೂಪ, ವಿದ್ಯಮಾನ, ವಸ್ತುಗಳನ್ನು ಗುರುತಿಸುವುದು ಮಾತ್ರ ಇದೇ ಭಾಷಿಕ ವ್ಯಾಪಾರಗಳಿಂದ. ಈ ಭಾಷಿಕ ವ್ಯವಹಾರಗಳನ್ನು ‘ಕ್ರಿಯೆ’ ಮತ್ತು ‘ರಚನೆ’ಗಳ ಸ್ವರೂಪದಲ್ಲಿ ಗುರುತಿಸಲಾಗುತ್ತೆ. ಆದ್ದರಿಂದ ಈ ಭಾಷಿಕ ವಿದ್ಯಮಾನಗಳನ್ನು ಅತ್ಯಂತ ಸಮಂಜಸವಾದ ನೆಲೆಗಳನ್ನಾಗಿ ಒಪಿಕೊಳ್ಳಲಾಗುತ್ತದೆ.
ನಾವು ಮಾತ್ನಾಡುವ, ಕೇಳುವ, ಯಾವುದೇ ಮಾತಿಗೆ ಪ್ರತಿಕ್ರಿಯಿಸುವ ಬಗೆಗಳು ‘ಸಂವಾದದಲ್ಲಿ ಮಾತಿಗೆ’ ತೊಡಗಿಕೊಳ್ಳುವ ಬಗೆಯಾಗಿದೆ. ಸಂವಾದ ಕೇವಲ ಭಾಷಿಕ ವ್ಯವಹಾರವಲ್ಲ. ಅದು ಸಾಮಾಜಿಕ, ಮಾನಸಿಕ ನಂಟುಗಳನ್ನು ಪಡೆದಿರುತ್ತದೆ. ಇಡೀ ಲೋಕಾನುಭವನ್ನು ಗ್ರಹಿಸುವ, ಅಭಿವ್ಯಕ್ತಿಸುವ ಸಾಮರ್ಥ್ಯವನ್ನು ನಾವು ಪ್ರತಿಭಾನ (ಇಂಟ್ಯೂಶನ್) ಹಾಗೂ ಬುದ್ಧಿವ್ಯಾಪಾರ (ರೀಸನ್)ಗಳಿಂದ ಪಡೆಯುತ್ತೇವೆ ಎಂಬ ವಾದವು ಪ್ರಬಲವಾಗಿದೆ. ಆದರೆ ಮನುಷ್ಯನ ಮಾನಸಿಕ ತಂತ್ರಗಾರಿಕೆಗೆ ಹೊರತಾದ ವಿಶೇಷ ಭಾಷಿಕ ಸಾಮರ್ಥ್ಯವು ಮನುಷ್ಯರಲ್ಲಿ ಅಂತಸ್ಥವಾಗಿದೆ. ಪರಿಣಾಮವಾಗಿ ಭಾಷೆಯ ಮೂಲ ವಿಷಯ ಹಾಗೂ ಅರ್ಥಗಳು, ಮಾನವನ ಆಲೋಚನಾಕ್ರಮಕ್ಕೆ ಆಳವಾದ ಅಂಶಗಳಾಗಿವೆ ಎನ್ನುವ ಚಿಂತನೆಗೆ ಬಲಬಂದಿದೆ.
ಫ್ರೆಂಚ್ ತತ್ವಜ್ಞಾನಿಯ ರೆನೆ ಡೆಕಾರ್ಟಸ್ನ ‘ಐ ಥಿಂಕ್ ದೇರ್ಫೋರ್ ಐ ಆ್ಯಮ್’ ಎನ್ನುವ ಪ್ರಸಿದ್ಧ ಮಾತಿದೆ. ಇದು ಮನುಷ್ಯನ ಅಸ್ತಿತ್ವದ ಮೂಲ ಚಹರೆಯಾಗಿದೆ. ಮನುಷ್ಯ ಯೋಚಿಸಬಲ್ಲ ಎಂಬೀ ನೆಲೆಯೇ ಆತನ/ಅವಳ ಪ್ರಾಥಮಿಕ ಗುರುತಾಗಿದೆ. ಬುದ್ಧಿವ್ಯಾಪಾರ (ರೀಸನ್) ಮತ್ತು ವಿಜ್ಞಾನ (ಸೈಯನ್ಸ್) ಎಂಬ ಪರಿಕಲ್ಪನೆಗಳು ಮನುಷ್ಯನ ಚಿಂತನೆಯ ತಳಹದಿಯಾಗಿದೆ. ಈ ಇಡೀ ಆಲೋಚನಾ ಕ್ರಮವು ‘ವೈಚಾರಿಕ ಅನುಮಾನ’ (ರಾಡಿಕಲ್ ಡೌಟ್)ಎನ್ನುವ ತಾತ್ವಿಕ ಪರಿಕಲ್ಪನೆಯ ಆಧಾರದ ಮೇಲೆ ನಿಂತಿದೆ.
ಯಾವುದೇ ತಿಳಿವು ಒಂದು ಆತ್ಯಂತಿಕ ಸತ್ಯವೆಂದು ನಿರ್ದರಿಸಲು ಆಗುವುದಿಲ್ಲ ಎಂಬುದನ್ನು ಈ ಮಾತು ಸೂಚಿಸುತ್ತದೆ. ಕೇವಲ ಮನಸ್ಸು ಇಲ್ಲವೇ ಪ್ರಜ್ಞೆಯ ಮೂಲಕ ಮಾತ್ರ ಗ್ರಹಿಕೆಗಳನ್ನು ನಂಬುವ, ಅನುಮಾನಿಸುವ ನೆಲೆಯಿರುತ್ತದೆ. ಈ ಇಡೀ ನೆಲೆಯನ್ನು ಡೆಕಾರ್ಟಸ್ ‘ಐ ಥಿಂಕ್ ದೇರ್ಫೋರ್ ಐ ಆ್ಯಮ್’ ಎಂದು ಸೂತ್ರೀಕರಿಸಿದ್ದಾನೆ. ಇದನ್ನೇ ಇತಾಲಿಯ ಭಾಷಾ ಚಿಂತಕ ಆಂಡ್ರಿಯಾ ಮೋರೊ ‘ಐ ಸ್ಪೀಕ್ ದೇರ್ಫೋರ್ ಐ ಆ್ಯಮ್’ ಎಂದೂ ಗುರುತಿಸಿದ್ದಾನೆ.
ಮನಸ್ಸು (ಮೈಂಡ್) ಮತ್ತು ದೇಹ (ಬಾಡಿ) ಎರಡು ಭಿನ್ನ ಮತ್ತು ವಿಶಿಷ್ಟ ಘಟಕಗಳು ಎಂಬ ಪ್ರಮೇಯವನ್ನೂ ಡೆಕಾರ್ಟಸ್ ಮಂಡಿಸಿದನು. ಏಕೆಂದರೆ ದೇಹ ಮನಸ್ಸಿನಂತೆ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಘಟಕವಲ್ಲ. ಇಡೀ ಲೋಕವ್ಯವಹಾರವನ್ನು ಗ್ರಹಿಸುವುದು ಕೇವಲ ಮನಸ್ಸಿನಿಂದ ಮಾತ್ರ. ಮನಸ್ಸು ಇರುವುದರಿಂದಲೇ ದೇಹವನ್ನೂ ಗ್ರಹಿಸಲಾಗುತ್ತದೆ. ಇಲ್ಲಿ ದೇವರ ಅಸ್ತಿತ್ವವನ್ನು ನಿರಾಕರಿಸಿ ಮನಸ್ಸು ಮತ್ತು ಬುದ್ಧಿವ್ಯಾಪಾರಕ್ಕೆ ಮಾತ್ರ ಪ್ರಾಮುಖ್ಯತೆಯನ್ನು ನೀಡಲಾಯಿತು.
ಭಾಷೆಯಲ್ಲಿಯೂ ಬೇರೆ ಬೇರೆ ಪದಗಳನ್ನು ಸಂಯೋಜಿಸಿಕೊಂಡು ವಿಶಿಷ್ಟ ಅರ್ಥಗಳನ್ನು ರೂಪಿಸುವ ಸಾಮರ್ಥ್ಯವೂ ಇದೇ ಮನಸ್ಸಿನಲ್ಲಿ ಅಂತಸ್ಥವಾಗಿರುವ ನುಡಿ ಕಸುವಿನಿಂದ ಮಾತ್ರ. ಆದರೆ ಈ ಸಾಮರ್ಥ್ಯವನ್ನು ಸಾಂಸ್ಕೃತಿಕ ಪರಿಣತಿಯನ್ನಾಗಿ ರೂಪಿಸಿಕೊಳ್ಳುವ ಅವಶ್ಯಕತೆಯಿದೆ. ಈ ಪರಿಣತಿಯನ್ನು ಪಡೆಯದ ಮನುಷ್ಯನು ಕೂಡ ನುಡಿಯನ್ನು ಅರಿಯದ ಇಲ್ಲವೇ ನುಡಿಯದ ಮೂರ್ಖನೂ ಅಲ್ಲ ಮತ್ತು ಶತದಡ್ಡನೂ ಅಲ್ಲ. ಹಾಗಾಗಿ ನುಡಿಯ ಮೂಲಕ ಪ್ರಕಟಗೊಳ್ಳುವ ಎಲ್ಲ ವ್ಯಾಪಾರಗಳನ್ನು ಗ್ರಹಿಸುವ ಪ್ರಾಥಮಿಕ ಸಾಮರ್ಥ್ಯ ಪ್ರತೀ ಮನುಷ್ಯರಲ್ಲಿ ಅಂತಸ್ಥವಾಗಿದೆ.
ಅದರೆ ವೈಚಾರಿಕ ವಿನ್ಯಾಸಗಳನ್ನು ಗ್ರಹಿಸುವಲ್ಲಿ ತೊಡಕುಗಳು ಎದುರಾಗುತ್ತವೆ. ಏಕೆಂದರೆ ಎಲ್ಲ ಬಗೆಯ ಜ್ಞಾನ/ವಿಚಾರದ ಸಮರ್ಥನೆಗಳು ವೈಜ್ಞಾನಿಕ ಮತ್ತು ಸಾರ್ವತ್ರಿಕವಾಗಿರುವುದಿಲ್ಲ. ನುಡಿಯ ಜೊತೆಗೆ ಸಾಂಸ್ಕೃತಿಕ, ವೈಜ್ಞಾನಿಕ ಇತ್ಯಾದಿ ವಿಶೇಷ ಪರಿಣತಿಯನ್ನು ಮನುಷ್ಯರು ರೂಪಿಸಿಕೊಂಡಾಗ ಮಾತ್ರ ಗ್ರಹಿಕೆಗೆ ಯಾವುದೇ ತೊಡಕುಗಳಿರುವುದಿಲ್ಲ. ಅದರೆ ಹೇಳುವ ಇಲ್ಲವೇ ಬರೆಯುವ ಸನ್ನಿವೇಶದಲ್ಲಿ ಇಂತಹದೊಂದು ಬಿಕ್ಕಟ್ಟು ಏರ್ಪಡುವುದಿಲ್ಲ. ವ್ಯಕ್ತಿ ತಾನಾಡುವ ಮಾತುಗಳಿಗೆ ಖಚಿತ ಅರ್ಥಗಳನ್ನು ಕಲ್ಪಿಸಿಕೊಂಡು ಹೇಳುತ್ತಾನೆ/ಳೆ ಮತ್ತು ಬರೆಯುತ್ತಾಳೆ/ನೆ. ತಾನಾಡುವ ಮಾತು/ಬರಹಗಳ ಅರ್ಥ ನಿರ್ದಿಷ್ಟತೆಯನ್ನು ಗ್ರಹಿಸದೇ ಹೋದರೆ ಏನೆಲ್ಲ ಅಪಾಯಗಳು ಉಂಟಾಗಬಹುದು ಎಂಬ ನೆನಪಿನಲ್ಲಿಯೇ ಅಪಾಯಗಳಿವೆ ಅಲ್ಲವೇ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ
ಸುದ್ದಿದಿನ,ದಾವಣಗೆರೆ:ವಯೋಸಹಜವಾಗಿ ಕಂಡುಬರುವ ಮೊಣಕಾಲು, ಸೊಂಟ, ಭುಜ ಮತ್ತು ಕ್ರೀಡಾ ಸಂಬಂಧಿತ ಸಂಧಿ ಸಮಸ್ಯೆಗಳಿಗೆ ಸಮಯೋಚಿತ ಚಿಕಿತ್ಸೆ ಮತ್ತು ನೂತನ ಶಸ್ತ್ರಚಿಕಿತ್ಸಾ ತಂತ್ರಜ್ಞಾನಗಳು ಹೇಗೆ ಸಹಾಯವಾಗುತ್ತಿವೆ ಹಾಗೂ ಈ ಚಿಕಿತ್ಸೆಗಳು ನೋವು ಕಡಿಮೆ ಮಾಡುವುದರ ಜೊತೆಗೆ, ರೋಗಿಗಳು ಮತ್ತೆ ಸ್ವತಂತ್ರವಾಗಿ ನಡೆಯಲು, ದಿನನಿತ್ಯದ ಚಟುವಟಿಕೆಗಳಿಗೆ ಮರಳಲು ಮತ್ತು ಆತ್ಮವಿಶ್ವಾಸದಿಂದ ಬದುಕಲು ನೆರವಾಗುತ್ತಿವೆ ಎಂದು ಮಣಿಪಾಲ್ ಆಸ್ಪತ್ರೆಯ ಮೂಳೆ ಮತ್ತು ಕೀಲು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಲೋಕೇಶ್ ಎ. ವೀರಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು
‘ಆರೋಗ್ಯಕರ ವಯೋವೃದ್ಧತೆ: ಅಸ್ತಿ ಸಮಸ್ಯೆಗಳ ನಿರ್ವಹಣೆ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು ಕುರಿತು ಮೂಳೆ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದರು.
ಇಂದಿನ ದಿನಗಳಲ್ಲಿ ಮೊಣಕಾಲು, ಸೊಂಟ ಮತ್ತು ಭುಜ ಸಂಧಿ ಸಮಸ್ಯೆಗಳು, ವಿಶೇಷವಾಗಿ ವಯೋವೃದ್ಧರಲ್ಲಿ ಹೆಚ್ಚುತ್ತಿವೆ. ‘ಇಂದು ಜನರು ಕೇವಲ ನೋವು ನಿವಾರಣೆಯನ್ನು ಮಾತ್ರ ಬಯಸುವುದಿಲ್ಲ. ಅವರು ಸುಲಭವಾಗಿ ನಡೆಯಲು, ಮೆಟ್ಟಿಲೇರಲು, ಮತ್ತೆ ಕೆಲಸಕ್ಕೆ ಹೋಗಲು, ಪ್ರವಾಸ ಮಾಡಲು ಮತ್ತು ಚುರುಕಿನ ಜೀವನವನ್ನು ಮುಂದುವರಿಸಲು ಬಯಸುತ್ತಾರೆ,” ಎಂದು ಹೇಳಿದರು.
“ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಟೆಂಟ್ ಶಸ್ತ್ರಚಿಕಿತ್ಸೆ ಅಸ್ತಿ ಚಿಕಿತ್ಸೆಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ರೋಗಿಯ ದೇಹರಚನೆಗೆ ಅನುಗುಣವಾಗಿ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ಯೋಜಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ಇದರಿಂದ ಇಂಪ್ಲಾಂಟ್ಗಳ ಸರಿಯಾದ ಅಳವಡಿಕೆ, ಉತ್ತಮ ಜಾಯಿಂಟ್ ಅಲೈನ್ಮೆಂಟ್ ಮತ್ತು ಸಹಜ ಚಲನೆಯ ಸಾಧ್ಯತೆ ಹೆಚ್ಚುತ್ತದೆ. ರೋಗಿಗಳಿಗೆ ಕಡಿಮೆ ರಕ್ತಸ್ರಾವ, ಕಡಿಮೆ ಶಸ್ತ್ರಚಿಕಿತ್ಸೆತರ ನೋವು, ವೇಗವಾದ ಚೇತರಿಕೆ ಹಾಗೂ ಬೇಗನೆ ಸಾಮಾನ್ಯ ಜೀವನಕ್ಕೆ ಮರಳುವ ಅವಕಾಶ ದೊರೆಯುತ್ತದೆ. ಮೊಣಕಾಲು ಮತ್ತು ಸೊಂಟದ ಸಂಪೂರ್ಣ ಅಥವಾ ಭಾಗಶಃ ಜಾಯಿಂಟ್ ಬದಲಾವಣೆ (TKR/PKR) ಶಸ್ತ್ರ ಚಿಕಿತ್ಸೆಗಳಲ್ಲಿ ಈ ತಂತ್ರಜ್ಞಾನ ಉತ್ತಮ ಫಲಿತಾಂಶ ನೀಡುತ್ತಿದೆ,” ಎಂದರು.
“ಇದರ ಜೊತೆಗೆ ಭುಜದ ಆರ್ಥೋಸ್ಕೋಪಿ ಅಥವಾ ‘ಕೀಹೋಲ್ ಸರ್ಜರಿ’ಯಂತಹ ಅತ್ಯಾಧುನಿಕ ಚಿಕಿತ್ಸೆಗಳಲ್ಲಿಯೂ ಉತ್ತಮ ಫಲಿತಾಂಶಗಳನ್ನು ಕಾಣುತ್ತಿದ್ದೇವೆ. ಭುಜದ ಡಿಪ್ಲೊಕೇಶನ್ (ಭುಜದ ಕೀಲಿನ ಸರಿತ) ರೋಟೇಟರ್ ಕಫ್ (ಹರಿದ ಭುಜದ ಮಾಂಸ ಖಂಡ) ಗಾಯಗಳು, ಫೋಜನ್ ಶೋಲ್ಡರ್ (ಭುಜದ ಬಿಗಿತ) ಮೊದಲಾದ ಸಮಸ್ಯೆಗಳು ಬಹಳ ಸಾಮಾನ್ಯವಾಗಿದ್ದು, ಸಮಯಕ್ಕೆ ಚಿಕಿತ್ಸೆ ಪಡೆಯದೇ ಇದ್ದರೆ ದೈನಂದಿನ ಚಟುವಟಿಕೆಗಳ ಮೇಲೆಯೇ ಪರಿಣಾಮ ಬೀರುತ್ತವೆ. ಈಗ ಮಿನಿಮಲ್ಲಿ ಇನ್ನೇಸಿವ್ ಸರ್ಜರಿಸ್ ಅಂದರೆ ಅತಿ ಸಣ್ಣ ಕಟ್ ಮೂಲಕ ಮಾಡುವ ಈ ಶಸ್ತ್ರಚಿಕಿತ್ಸೆಗಳು ರೋಗಿಗಳಿಗೆ ಕಡಿಮೆ ನೋವು ಹಾಗೂ ವೇಗವಾದ ಚೇತರಿಕೆಯನ್ನು ನೀಡುತ್ತಿವೆ, ಎಂದು ತಿಳಿಸಿದರು.
ಇದೇ ವೇಳೆ, ಸಂಕೀರ್ಣ ಪೆಲ್ವಿಕ್ ಟ್ರಾಮಾ ಶಸ್ತ್ರಚಿಕಿತ್ಸೆಗಳು, ‘ಕಪ್ ಅಂಡ್ ಬಾಲ್’ ಜಾಯಿಂಟ್ ಸಂಬಂಧಿತ ಪ್ರೊಸೀಜರ್ಗಳು, ಹಾಗು ಮೊಣಕಾಲು, ಅಂಕಲ್ ಮತ್ತು ಮೊಣಕೈಗೆ ಸಂಬಂಧಿಸಿದ ಮಿನಿಮಲಿ ಇನ್ನೇಸಿವ್ ಕೀಹೋಲ್ ಶಸ್ತ್ರಚಿಕಿತ್ಸೆಗಳ ಕುರಿತು ಕೂಡ ಅವರು ಮಾಹಿತಿ ಹಂಚಿಕೊಂಡರು.
ಇವುಗಳ ಪ್ರಮುಖ ಉದ್ದೇಶ ರೋಗಿಗಳ ಚಲನವಲನವನ್ನು ಪುನಃಸ್ಥಾಪಿಸಿ, ಅವರನ್ನು ಆತ್ಮವಿಶ್ವಾಸದಿಂದ ದಿನನಿತ್ಯದ ಬದುಕಿಗೆ ಮರಳಿಸುವುದಾಗಿದೆ ಎಂದು ಹೇಳಿದರು.
ಸಂವಾದದ ವೇಳೆ ವೈದ್ಯರು, ದಾವಣಗೆರೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಅನೇಕ ರೋಗಿಗಳು ಸಂಕೀರ್ಣ ಅಸ್ಥಿ ಚಿಕಿತ್ಸೆಗಳು ಹಾಗೂ ಅತ್ಯಾಧುನಿಕ ಜಾಯಿಂಟ್ ಕೇರ್ಗಾಗಿ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ನಿರಂತರವಾಗಿ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.
ಈ ದೀರ್ಘಕಾಲದ ವಿಶ್ವಾಸವನ್ನು ಗುರುತಿಸಿಕೊಂಡಿರುವ ಆಸ್ಪತ್ರೆ, ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳು, ವಿಶೇಷ ಅಸ್ಥಿ ತಜ್ಞರ ಸೇವೆಗಳು ಮತ್ತು ಪುನಶ್ವೇತನ ಚಿಕಿತ್ಸೆಯನ್ನು ಮಧ್ಯ ಕರ್ನಾಟಕದ ಜನರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಬದ್ಧತೆಯನ್ನು ಪುನರುಚ್ಛರಿಸಿತು. “ನಮ್ಮ ಉದ್ದೇಶ ಕೇವಲ ಶಸ್ತ್ರಚಿಕಿತ್ಸೆ ನಡೆಸುವುದಲ್ಲ; ಜನರು ಮತ್ತೆ ಸ್ವತಂತ್ರವಾಗಿ ನಡೆಯಲು, ತಮ್ಮ ಜೀವನಶೈಲಿಗೆ ಮರಳಲು ಮತ್ತು ಸುಖಕರ ವಯೋವೃದ್ಧತೆಯನ್ನು ಅನುಭವಿಸಲು ಸಹಾಯ ಮಾಡುವುದಾಗಿದೆ,” ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ
ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಜಿಎಂಕೆ ಎಡು ಟೆಕ್ ರಾಜ್ಯದ ಸಮಸ್ತ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಣ ಕ್ಷೇತ್ರದ ಆಸಕ್ತರಿಗಾಗಿ ನಾಳೆ (ಮೇ22) ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ “ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026″ ಎಂಬ ವಿಶಿಷ್ಟ ಮತ್ತು ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಕೊಟ್ರೇಶ್ ಅವರು ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳು ಹಾಗೂ ಆಡಳಿತಾತ್ಮಕ ಸವಾಲುಗಳಿಗೆ ಪರಿಹಾರ ಮತ್ತು ಕಾನೂನುಬದ್ದ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಕಡ್ಡಾಯ ಭೂ-ಪರಿವರ್ತನೆ, ಕಟ್ಟಡ ಮತ್ತು ಅಗ್ನಿ ಸುರಕ್ಷತಾ ನಿಯಮಗಳು, RTE ಸಂಬಂಧಿತ ವಿಷಯಗಳು, ಶಾಲಾ ಕಟ್ಟಡಗಳಿಗೆ ಆಸ್ತಿ ತೆರಿಗೆ, ESI, PF, GRATUITY, LWF ಹಾಗೂ ಕಾರ್ಮಿಕ ಕಾನೂನುಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುತ್ತದೆ ಎಂದರು.
ಇದಲ್ಲದೆ, ರಾಜ್ಯದಲ್ಲಿ ಯಶಸ್ವಿಯಾಗಿ 10 ವರ್ಷ ಹಾಗೂ 25 ವರ್ಷ ಪೂರೈಸಿರುವ ಖಾಸಗಿ ಶಾಲೆಗಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದ ಹೊಸ ತಂತ್ರಜ್ಞಾನಗಳು, ಆಡಳಿತಾತ್ಮಕ ಪರಿಹಾರಗಳು, ಕಾನೂನು ಸಲಹೆಗಳು ಹಾಗೂ ಶಿಕ್ಷಣ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದ್ದು, ರಾಜ್ಯದ ಎಲ್ಲಾ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಣಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ Ours ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮೊಹಮ್ಮದ್ ಮುಕ್ತಿಯಾರ್ ಬಿನ್ ಎಸ್. ಆರ್ ಸಮೀವುಲ್ಲ ಇವರ ಮಗ ಮೊಹಮ್ಮದ್ ಮುಬಾರಕ್ @ ಮುಬಾರಕ್ ಈತ ಮತ್ತು ನಿಸಾರ್ ಅಹಮದ್ ಬಿನ್ ಮಹಮ್ಮದ್ ಅಬಿದ್ ಮತ್ತು ಇನ್ನೊಬ್ಬರು, ಬೇತೂರು ರೋಡ್, ಸಿದ್ಧರಾಮೇಶ್ವರ ಬಡಾವಣೆ ಇವರು ತಮ್ಮ ಮಗ ತಾಜು @ ತಾಜುದ್ದೀನ್ ಇವರು ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡುವ ಸಂಧರ್ಭದಲ್ಲಿ ಮರಣ ಹೊಂದಿರುತ್ತಾರೆ.
ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 4ನೇ ಎದುರುದಾರರಾದ ಸದಾನಂದ ವಗಲೆ ಹಾಗೂ 1 ರಿಂದ 3ನೇ ಎದುರುದಾರರ ವಿರುದ್ಧ, ತಮ್ಮ ಸೇವೆಯಲ್ಲಿನ ನಿರ್ಲಕ್ಷತೆಯಿಂದ ಘಟನೆ ಸಂಭವಿಸಿದ್ದು ಎಂಬ ತೀರ್ಮಾನಕ್ಕೆ ಆಯೋಗವು ಬಂದಿದ್ದು, ಈಗಾಗಲೇ, 1 ರಿಂದ 3ನೇ ಎದುರುದಾರರು, ದೂರುದಾರರಿಗೆ ರೂ.500,000/- ಲಕ್ಷವನ್ನು ಪರಿಹಾರವಾಗಿ ಈಗಾಗಲೆ ಕೊಟ್ಟಿದ್ದು, ಆದ್ದರಿಂದ 1 ರಿಂದ 3ನೇ ಎದುರುದಾರರ ವಿರುದ್ಧ ಪ್ರಕರಣವನ್ನು ವಜಾ ಮಾಡಿದೆ.
4ನೇ ಎದುರುದಾರರಾದ ಸದಾನಂದ ವಗಲೆ, ಕಾಂಟ್ರಕ್ಟರ್, ಇವರು ಈ ಎರಡು ಪ್ರಕರಣದ ದೂರುದಾರರಿಗೆ ಆದೇಶಿಸಿದ ದಿನದಿಂದ ಒಂದು ತಿಂಗಳೊಳಗೆ ಆದೇಶದ ಪ್ರಕಾರ ಪಾವತಿಸುವಂತೆ ಮೇ.19 ರಂದು ಆದೇಶಿಸಿ ರೂ. 5 ಲಕ್ಷಗಳನ್ನು ಶೇಕಡಾ 6 ವಾರ್ಷಿಕ ಬಡ್ಡಿಯೊಂದಿಗೆ ಹಾಗೂ ದೂರು ಖರ್ಚು ಹಾಗೂ ಮಾನಸಿಕ ಯಾತನೆಗೆ ತಲಾ ರೂ.5 ಸಾವಿರದಂತೆ, ಒಟ್ಟು ರೂ.10,000/-ಗಳನ್ನು ಪರಿಹಾರ ರೂಪವಾಗಿ ದೂರುದಾರರಿಗೆ ನೀಡುವಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್.ಮೀನಾ ಮತ್ತು ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಆದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
-
ಅಂಕಣ5 days agoನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
-
ದಿನದ ಸುದ್ದಿ5 days agoಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?
-
ದಿನದ ಸುದ್ದಿ7 days ago‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
-
ದಿನದ ಸುದ್ದಿ5 days agoಕೆ. ಶಿವರಾಜಕುಮಾರ್ ಅವರಿಗೆ ಪಿಎಚ್ ಡಿ ಪದವಿ
-
ದಿನದ ಸುದ್ದಿ4 days agoಶಿಕ್ಷಕರು, ವಾರ್ಡನ್ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ
-
ದಿನದ ಸುದ್ದಿ3 days agoಲೋಕಾಯುಕ್ತ ಪೋಲಿಸ್ ಇನ್ಸ್ಪೆಕ್ಟರ್ ಪ್ರಭು ಬಿ. ಸೂರಿನ ಅವರಿಂದ ಕಾನೂನು ಅರಿವು

