ಬಹಿರಂಗ
ಡಾಕಿನಿ ಎಂದರೆ ಬೌದ್ಧ ಭಿಕ್ಕುಣಿ / ಬೌದ್ಧ ಯೋಗಿಣಿ
- ಪರಶುರಾಮ್. ಎ
ಭಾರತದ ಬಹುಭಾಗ ಇತಿಹಾಸ, ಇತಿಹಾಸವೇ ಅಲ್ಲ. ಹಾಗೆಂದರೆ ಭಾರತಕ್ಕೆ ಇತಿಹಾಸವಿಲ್ಲ ಎಂದಲ್ಲ. ಭಾರತದ ಪ್ರಾಚೀನ ಇತಿಹಾಸವನ್ನು ಬೇಕೆಂದೆ ಮನುವಾದಿಗಳು ತಿರುಚಿದ್ದಾರೆ. ಬುದ್ಧ ಮತ್ತು ಆರ್ಯರ ನಡುವೆ ನಡೆದ ಈ ಇತಿಹಾಸವನ್ನು ಬೇಕೆಂದೆ ಮರೆಮಾಚಿದ್ದಾರೆ. ಹಾಗೂ ಮಕ್ಕಳಿಗೆ ಮಹಿಳೆಯರಿಗೆ ಮನೋರಂಜನಾ ಕಥೆಗಳನ್ನಾಗಿ ಮಾಡಿದ್ದಾರೆ ಎಂದು ಡಾ.ಬಿ.ಆರ್ ಅಂಬೇಡ್ಕರರು ಹೇಳಿರುವುದು ಎಷ್ಟು ಸತ್ಯವೆಂಬುದನ್ನು ನಾವು ಈಗ ಗಮನಿಸೋಣ.
ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ ಒಂದು ಕಾಲದಲ್ಲಿ ಪ್ರಚಲಿತವಿದ್ದ ಬುದ್ಧ ಧರ್ಮವನ್ನು ಇತಿಹಾಸಕಾರರು ಬೇಕೆಂದೆ ನಿರ್ಲಕ್ಷಿಸಿದ್ದಾರೆ. ಮತ್ತು ತಿರಸ್ಕರಿಸಿದ್ದಾರೆ. ಇಂತಹ ಅದೆಷ್ಟೋ ನಿರ್ಲಕ್ಷಿತಗೊಂಡ ಬೌದ್ಧ ಇತಿಹಾಸವನ್ನು ಡಾ.ಬಿ.ಅಂಬೇಡ್ಕರರು ತಮ್ಮ ಅಪೂರ್ವ ಜ್ಞಾನ ಸಂಪತ್ತಿನಿಂದಾಗಿ ಬಯಲಿಗೆ ಎಳೆದಿದ್ದಾರೆ. ಅವರ ಪುಸ್ತಕ ಓದಿನ ದಾಹ ಇಂತಹ ಅಪೂರ್ವ ಇತಿಹಾಸದ ಮೇಲೆ ಬೆಳಕು ಚೆಲ್ಲಿದೆ. ಹಾಗೂ ಇತ್ತೀಚಿನ ಕೆಲವು ಸಂಶೋಧಕರು ಕೂಡಾ ಬೌದ್ಧ ಧರ್ಮಾವಲಂಬಿಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಬೆಳಕು ಚೆಲ್ಲಿದ್ದಾರೆ.
ಭಾರತದಲ್ಲಿ ಹುಟ್ಟಿದ ಬುದ್ಧ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ವಿದೇಶಿ ಬ್ರಾಹ್ಮಣ ಆರ್ಯರು ಬೇಕುಂತಲೇ ತುಚ್ಛೀಕರಿಸಿ, ದುಷ್ಟೀಕರಿಸಿ, ಭಯ ಮತ್ತು ಕ್ಷುದ್ರರೆಂಬಂತೆ ಬಿಂಬಿಸಿದ್ದಾರೆ. “ಭಾರತದ ದಾರ್ಶನಿಕ ಚರ್ಚೆಗಳಲ್ಲಿ ದರ್ಶನವು ಇನ್ನೊಂದರ ಬಗ್ಗೆ ತಾತ್ವಿಕ ಭಿನ್ನಮತಗಳು ಸೂಚಿಸುವುದು ಸಾಮಾನ್ಯ. ಈ ಭಿನ್ನಮತಗಳು ಕೆಲವೊಮ್ಮೆ ಯುದ್ಧರೂಪಿಯಾಗಿ ಇರುತ್ತವೆ. ತಾತ್ವಿಕ ಭಿನ್ನಮತವು ತಾನಾಗಿಯೇ 1 ದೊಡ್ಡ ಸಮಸ್ಯೆಯಲ್ಲ. ಆದರೆ ತಾನು ಒಪ್ಪದ ವಿಚಾರಧಾರೆಯಯೂ ಇರಬಾರದು ಎಂಬ ಹಗೆತನದಲ್ಲಿ ಮತ್ತೊಂದನ್ನು ದುಷ್ಟೀಕರಿಸುವುದು ಸಮಸ್ಯೆ.
ಆಧುನಿಕ ರಾಜಕಾರಣದಲ್ಲಿ ಸೈದ್ಧಾಂತಿಕ ಗುಂಪುಗಳು ಹಗೆಗಳಾಗಿ ಕಾದಾಟ ಮಾಡುವಂತೆ ಚರಿತ್ರೆಯಲ್ಲಿ ಪಂಥಗಳು ಪರಸ್ಪರ ಸಂಘರ್ಷ ಮಾಡಿಸಿ ಭಾರತದ “ಅವೈದಿಕ” ಎನ್ನಲಾಗುವ ದಾರ್ಶನಿಕ ಧಾರೆ ಹಾಗೂ ಪಂಥಗಳನ್ನು ಏಕಕಾಲಕ್ಕೆ ವಿಶಾಲ ಸಮುದಾಯಗಳಿಂದ ಸ್ವೀಕಾರವನ್ನು ಸ್ಥಾಪಿತ ವರ್ಗದಿಂದ ವಿರೋಧವನ್ನು ಪಡೆದಿದ್ದವು. ವೈದಿಕ ಪುರಾಣಗಳು ತಮ್ಮ ವಿರೋಧಿಗಳನ್ನು ರಾಕ್ಷಸರನ್ನಾಗಿ ಚಿತ್ರಿಸುವಂತೆ ವೈದಿಕರು ದಾರ್ಶನಿಕರು ಕೂಡಾ “ಅವೈದಿಕ” ಭೌತವಾದಿ ದರ್ಶನ ಹಾಗೂ ಪಂಥಗಳನ್ನು ವಿಕೃತವಾಗಿ ಚಿತ್ರಿಸಲು ಇದನ್ನು ದಾರ್ಶನಿಕ ಅಮಾನುಷೀಕರಣ ಅಥವಾ ದುಷ್ಟೀಕರಣ ಎನ್ನಬಹುದು”. (ಕರ್ನಾಟಕ ನಾಥಪಂಥ- ರಹಮತ್ ತರೀಕೆರೆ. ಪುಟ 7).
ಹೀಗೇ ವಿರೋಧಿಗಳನ್ನು ವಿರೋಧಿಸುವ ಭರದಲ್ಲಿ ಉಪದ್ರವಿಗಳು, ರಾಕ್ಷಸರೆಂಬಂತೆ ಬಿಂಬಿತರಾದವರ ಸಾಲಿನಲ್ಲಿ ಬಹುತೇಕ ಬೌದ್ಧ ಅರಸರು, ಭಿಕ್ಕುಗಳು, ಭಿಕ್ಕುಣಿಗಳನ್ನು ಕಾಣಬಹುದು. ಈ ವೈದಿಕ ಧರ್ಮ ಕೇವಲ ದುಷ್ಟೀಕರಣವನ್ನು ಮಾತ್ರ ಮಾಡಿಲ್ಲ. ತಮ್ಮ ನಿಲುವುಗಳಿಗೆ ಹಿತಾಸಕ್ತಿ ಸ್ಥಾಪನೆಗೆ ಸಹಕರಿಸಿದ ವ್ಯಕ್ತಿಗಳು, ರಾಜರು, ಇತರರನ್ನು ದೈವತ್ವ ಮಟ್ಟಕ್ಕೆ ಸಹ ಏರಿಸಿದೆ. ಅದಕ್ಕೊಂದು ಉದಾಹರಣೆ “ಮಹಿಷಾಸುರ” ಒಂದು ಕಾಲದಲ್ಲಿ ಮಹಿಷನೂರು ಈಗ ಮೈಸೂರು ಆಗಿದೆ. ರಾಜನಾಗಿ ಆಳ್ವಿಕೆ ಮಾಡುತ್ತಿದ್ದ ಮಹಿಷಾಸುರನನ್ನು ವೈದಿಕರು ಉಪದೃವಿ ಕೇಡುಂಟು ಮಾಡುವ ರಾಕ್ಷಸನಂತೆ ಚಿತ್ರಿಸಿದ್ದಾರೆ.
ಮಹಿಷಾಸುರ ರಾಕ್ಷಸನಲ್ಲ ಈ ಭಾಗದ ಜನಪ್ರಿಯ ಜನಾನುರಾಗಿ ರಾಜ ಆತನೊಬ್ಬ ಬೌದ್ಧ ಧರ್ಮ ಪ್ರಚಾರಕನೂ ಕೂಡಾ ಹೌದು. ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಅತ್ಯಂತ ವಿಶಾಲವಾಗಿ ನಿರ್ಮಿಸಿ ನಿಲ್ಲಿಸಿರುವ ಮಹಿಷಾಸುರನ ಪ್ರತಿಮೆ ಈತನದ್ದೇ ಆಗಿದೆ. ಅವನು ನಿಜವಾಗಿ ದುಷ್ಟನಾಗಿದ್ದರೆ, ಮೈಸೂರಿನಂಥ ಸುಂದರ ನಗರಕ್ಕೆ ಅವನ ಹೆಸರು ಇಡಲು ಸಾಧ್ಯವಾಗುತ್ತಿತ್ತೆ? ಅತ್ಯಂತ ಕ್ರೂರಿಯಾದ ವ್ಯಕ್ತಿಯ ಹೆಸರನ್ನು ನರನಿಗಾಗಲಿ ಸ್ಥಳಕ್ಕಾಗಲಿ ಇಟ್ಟಿರುವ ನಿದರ್ಶನ ಎಲ್ಲಿಯಾದರೂ ಉಂಟೆ? ಬದಲಿಗೆ ಮಹಿಷ ಜನಾನುರಾಗಿ ಆದ್ದರಿಂದ, ಜನೋದ್ದಾರಕ ಕೆಲಸ ಮಾಡಿದ್ದರಿಂದ ಅವನ ಹೆಸರನ್ನು ಮೈಸೂರಿಗೆ ಕೃತಜ್ಞಾಪೂರ್ವಕವಾಗಿ ಇಡಲಾಗಿದೆ.
ಇದು ಎಂಥವರಿಗಾದರೂ ಹೊಳೆಯುವ ಸಾಮಾನ್ಯ ವಿಷಯ.
ಮಹಿಷಾಸುರ ರಾಕ್ಷಸನಲ್ಲ, ಅವನು ಬೌದ್ಧ ಭಿಕ್ಕು. ಅವನ ನಿಜವಾದ ಹೆಸರು ಮಹಾದೇವ. ಸಾಮ್ರಾಟ್ ಅಶೋಕನ ಕಾಲದಲ್ಲಿ, ಬೌದ್ಧ ಗುರು ಮೊಗ್ಗಲಿತಿಸ್ಸನ ಬುದ್ಧಧಮ್ಮ ಪ್ರಚಾರಕ್ಕಾಗಿ ತೇರಾ ಮಹಾದೇವನನ್ನು ಮಹಿಷಮಂಡಲಕ್ಕೂ, ತೇರಾ ರಕ್ಕಿತ ಎಂಬುವವನನ್ನು ಬನವಾಸಿಗೂ ಕಳುಹಿಸಿದ. (ನೋಡಿ; ಸಿದ್ಧಸ್ವಾಮಿಯವರ ಅಪರೂಪ ಮಾಹಿತಿಯುಳ್ಳ ಸಂಶೋಧನಾ ಕೃತಿ – ಪ್ರಾಚೀನ ಅಸುರ ರಾಷ್ಟ್ರ 2016. ಪುಟ. 27ಮತ್ತು 81-116)
ಮಹಿಷನಿಗೆ ಅಸುರ ಎಂಬ ಹೆಸರನ್ನು ಕಿತ್ತುಹಾಕಿ ಮಹಿಷ ಬೌದ್ಧ. ಮಹಿಷ ಗೌತಮ ಅಥವಾ ಭಿಕ್ಕು ಮಹಾದೇವ ಎಂಬ ಹೆಸರನ್ನು ಇಡಬೇಕು. ಅಸುರ ಎಂಬುದು ಆರೋಪಿತ ಹೆಸರು. ಬೈಗುಳ ಅದು – ಹೆಂಡ ಕುಡುಕ ಎಂದು! ಅಸುರ ಎಂದರೆ ಸುರೆಯನ್ನು ಕುಡಿಯದವನು ಎಂದು ಅರ್ಥ.
ಇಲ್ಲಿ ಕುಡಿಯುವವರಿಗೇ ಗೌರವ! ಕುಡಿಯದವರಿಗೆ ಅವಮಾನ! ಎಂಥ ಅದ್ಭುತ ವ್ಯವಸ್ಥೆ ಬ್ರಾಹ್ಮಣ ಧರ್ಮದ್ದು ಭಲೇ! ಜನರ ಏಳಿಗೆಗೆ ಹೋರಾಡಿ ಚಾತುರ್ವರ್ಣ ವ್ಯವಸ್ಥೆಯನ್ನು ಧಿಕ್ಕರಿಸಿದ ಪ್ರಜಾಪ್ರೇಮಿಗಳನ್ನು ರಾಕ್ಷಸರೆಂದು ತೀರಾ ಕ್ರೂರಿಗಳನ್ನಾಗಿ ಪುರಾಣಗಳಲ್ಲಿ ಹಾರುವರು ಚಿತ್ರಿಸಿರುವುದು ಹಾರುವರೆಷ್ಟು ಮಹಾರಕ್ಕಸರೆಂದು ನಿಜಕ್ಕೂ ತಿಳಿಯುತ್ತದೆ.(ಹೆಚ್ಚಿನ ಓದಿಗಾಗಿ ಸಿದ್ಧಸ್ವಾಮಿಯವರ ಬೌದ್ಧ ರಾಜ ಮಹಿಷಾಸುರ ಪುಸ್ತಕ ಓದಿ). ಎಂದು ಕೆ.ಎಸ್ ಭಗವಾನ್ರವರು ರಾಮಮಂದಿರ ಏಕೆಬೇಡ? ಎಂಬ ತಮ್ಮ ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೆ ಜಮ್ನಾದಾಸ್ ಎಂಬುವವರು ತಿರುಪತಿಯ ವೆಂಕಟೇಶ್ವರ ಒಂದು ಬೌದ್ಧ ದೇವಾಲಯವೆಂದು ಸಂಶೋಧನಾ ಪುಸ್ತಕವನ್ನೇ ರಚಿಸಿದ್ದಾರೆ. ಇದು ಕನ್ನಡಕ್ಕೇ ಸಹ ಅನುವಾದಗೊಂಡಿದೆ.
ಇದೇ ರೀತಿಯಲ್ಲಿ ಇಲ್ಲಿನ ಸ್ಥಳೀಯ ದೇವತೆಗಳ ಹೆಸರುಗಳನ್ನು ಸಹ ಒಂದು ಕಾಲದಲ್ಲಿ ತಮ್ಮ ಮಕ್ಕಳಿಗೆ ಇಡುವ ಪದ್ಧತಿಯಿತ್ತು. ಆದರೆ ಅವುಗಳನ್ನು ಮನುಸ್ಮೃತಿಯಲ್ಲಿ ಭೀಕರ ಅಪಾಯವುಂಟುಮಾಡುವ ಕೆಡುಕನ್ನು ತರುವ ಹೆಸರುಗಳೆಂದು ಪಟ್ಟಿ ಮಾಡಿ ಅಂತಹ ಹೆಸರುಗಳನ್ನು ದುಷ್ಟರು ಎಂಬಂತೆ ಬಿಂಬಿಸ ತೊಡಗಿದರು. ಅಲ್ಲದೇ ಭೀಷಣವಾದ ಹೆಸರುಳ್ಳ ಹೆಣ್ಣುಗಳನ್ನು ಮದುವೆಯಾಗಬಾರದು ಎಂದಿದೆ ಮನುಸ್ಮೃತಿ.
ಮನುಸ್ಮೃತಿಯ 3ನೇ ಅಧ್ಯಾಯದ 9ನೇ ಸೂತ್ರವು ‘ನಕ್ಷತ್ರಗಳ, ವೃಕ್ಷಗಳ, ನದಿಗಳ, ಕಿರಾತ ಜಾತಿಗಳು ವಾಸಿಸುವ ಬೆಟ್ಟಗಳ, ಪಕ್ಷಿಗಳ, ಹಾವುಗಳ, ದಸ್ಯುಗಳ ಹೆಸರುಗಳನ್ನು ಹೊಂದಿದ ಹಾಗೂ ಕ್ರೂರವಾದ ಭೀಷಣ ಹೆಸರುಗಳುಳ್ಳ ಹೆಣ್ಣನ್ನು ಮದುವೆಯಾಗಬಾರದು’ ಎಂದಿದೆ. ಅಂದರೆ ಮನುಸ್ಮೃತಿಯ ಕಾಲದಲ್ಲಿ ಹಾಗೂ ಅದಕ್ಕೂ ಮೊದಲು ವಿವಿಧ ಬೌದ್ಧ ಭಿಕ್ಕುಗಳ-ಭಿಕ್ಕುಣಿಯರ, ನದಿ, ಪರ್ವತ, ಪಕ್ಷಿಗಳ ದೇವತೆಗಳ ಅಥವಾ ಕ್ಷುದ್ರ ರೆಂದು ವೈದಿಕರು ಬಗೆದ ವ್ಯಕ್ತಿಗಳ ಹೆಸರನ್ನು ಇಡುವ ಸಂಪ್ರದಾಯವೊಂದಿತ್ತು ಎಂಬುದು ಗಮನಿಸಬೇಕಾದ ವಿಚಾರವಾಗಿದೆ.
ಬುದ್ಧನ ಕಾಲದಲ್ಲಿ ಬೌದ್ಧ ಸಂನ್ಯಾಸಿ, ಭಿಕ್ಕು -ಭಿಕ್ಕುಣಿಯಾಗಿದ್ದವರನ್ನು ಮುಂದೆ ಅವರನ್ನು ರಾಕ್ಷಸ- ರಾಕ್ಷಸಿ ಉಪದ್ರವಿಗಳೆಂಬಂತೆ ಬಿಂಬಿತರಾದವರಲ್ಲಿ ‘ಡಾಕಿನಿ’ ಎಂಬ ಬೌದ್ಧ ಭಿಕ್ಕುಣಿಯು ಸಹ ಒಬ್ಬಳು. 2020ರ ಅಕ್ಟೋಬರ್ ಸಂವಾದ ಮಾಸಪತ್ರಿಕೆಯಲ್ಲಿ ಪ್ರೊ. ಶಿವಗಂಗಾ ರುಮ್ಮಾ ಎಂಬುವವರು “ಡಾಕಿಣಿ ಬೌದ್ಧ ಯೋಗಿಣಿ” ಎಂಬ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಈ ಪ್ರಬಂಧದ ಉದ್ದಕ್ಕೂ ‘ಡಾಕಿನಿ’ ಎಂಬ ಬೌದ್ಧ ಬಿಕ್ಕುಣಿ ಹೇಗೆ ಪಿಶಾಚಿ, ರಾಕ್ಷಸಿ ರೂಪ ಪಡೆದು ನಂತರದ ಕಾಲದಲ್ಲಿ ಉಪದ್ರವಿ ಎಂಬಂತೆ ಚಿತ್ರಿತವಾದಳು ಎಂದು ನಿರೂಪಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ನಿಘಂಟು ಡಾಕಿನಿಯು ಹೆಣ್ಣು ದೆವ್ವಗಳಲ್ಲಿ ಒಂದು ಬಗೆಯ ಹೆಣ್ಣು ಪಿಶಾಚಿ ಎಂದು ಹೇಳುತ್ತದೆ. ಡಾಕಿನಿ ಎಂದರೆ ರಕ್ಕಸಿಯ ಖಡ್ಗ ಕಾಳಿ ದೇವಿಯ ಪರಿಚಾರಿಕೆಯರ ಒಂದು ವರ್ಗಕ್ಕೆ ಸೇರಿದವಳೆಂದೆ ಹೇಳುತ್ತದೆ. ಸುರಂಗ ಕವಿಯ ವೀರಭದ್ರ ಲೀಲಾರತ್ನ ಕೃತಿಯಲ್ಲಿ ಡಾಕಿನಿಯ ಉಲ್ಲೇಖ ಹೀಗೆ ಇದೆ;
ಅಗ್ಗದ ಯೋಗಿಣಿ ಚಂಡಿ ಭೈರವಿ
ಕಾಳಿ ದುರ್ಗಿ ಡಾಕಿನಿ ಪ್ರೇತಶ್ವಿನಿಯು
ಉಗ್ರದ ಹ್ರೂಂಕಾರಿ ಮಹಾಭೂತವೇತಾಳರೊಗ್ಗಿದಲುಋಬಿ ಕಾಳಗಕೆ” ಸುಮಾರು 16ನೇಯ ಶತಮಾನಕ್ಕಾಗಲೇ ಈ ಎಲ್ಲಾ ಹೆಣ್ಣು ದೈವಗಳು ಕೀಳು ದೈವಗಳಾಗಿ ಪರಿವರ್ತಿತವಾದವು.
ಡಾಕಿನಿ ಕೂಡಾ ಇಲ್ಲಿ ಅಗ್ಗದ ಮತ್ತು ಉಗ್ರ ಕೀಳು ದೈವಗಳಾಗಿದ್ದಾಳೆ. ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಕೂಡಾ ಸುಧನ್ವ ಹಾಗೂ ಅರ್ಜುನನ ನಡುವೆ ನಡೆದ ಕಾಳಗದಲ್ಲಿ ರಣರಂಗದಲ್ಲಿ ಭೀಕರ ದೃಶ್ಯವನ್ನು ಲಕ್ಷ್ಮೀಶನಹೀಗೆ ಚಿತ್ರಿಸುತ್ತಾನೆ.
“ಕಾಕ ಬಕ ಗೋಮಯ ಸಂತತಿಗಳಿಂ
ಡಾಕಿನಿ ಪಿಶಾಚಿ ವೇತಾಳ ಭೂತಂಗಳಿಂ ಭೀಕರದೊಳಂ ಜನಿಸಿದುವಾರ್ದು ರಿಂಗಣಗುಣಿವ ಕಲಿಗಳ ಕಪಾಲಂಗಳು” ಹೀಗೆ ಡಾಕಿನಿಯು ಇಲ್ಲಿಯೂ ಕೂಡಾ ಕ್ಷುದ್ರ ದೇವತೆಯಾಗಿ ಭೀಭತ್ಸ ರೂಪದಲ್ಲಿ ಚಿತ್ರಿತಗೊಂಡಿದ್ದಾಳೆ.
ಮರಾಠಿಯಲ್ಲಿ ಡಾಕಿನಿಗೆ ಡಂಕಿಣಿ ಎನ್ನುತ್ತಾರೆ. ಡಾಳಕಿ ಎಂಬ ಇನ್ನೊಂದು ಪದವು ಕೂಡಾ ಡಾಕಿನಿಯಿಂದಲೇ ಬಂದಿದೆ. ಡಾಳಕಿ ಎಂದರೆ ಗಯ್ಯಾಳಿ, ಮೋಸಗಾತಿ, ಎಂಬ ಅರ್ಥಗಳಿವೆ. ‘ಸಗ್ಗಂಬಡೆದು ಬಂದ ಪ್ರತ್ಯಕ್ಷಮಿಲ್ಲೆನಬಹುದು ಈ ಡಾಳಕಿ’. ಇಲ್ಲಿ ಮೋಸಗಾತಿ ಎಂಬ ಅರ್ಥವೇ ಇದೆ. ಹೀಗೆ ಡಾಕಿನಿ ಪದವು ಕೀಳು, ಕ್ಷುದ್ರ, ಉಗ್ರ, ರುದ್ರ, ಋಣಾತ್ಮಕ ವ್ಯಕ್ತಿತ್ವವಾಗಿಯೇ ಕನ್ನಡ ಸಾಹಿತ್ಯದಲ್ಲಿ ಚಿತ್ರಿತಗೊಂಡಿದೆ.
ಇನ್ನೂ ವಿಚಿತ್ರವೆಂದರೆ ಗ್ರಾಮದೇವತೆಯ ಮೇಲೆ ವಿಶೇಷ ಅಧ್ಯಯನವನ್ನು ನಡೆಸಿದ ಸಿದ್ಧಲಿಂಗಯ್ಯನವರ “ಗ್ರಾಮದೇವತೆಗಳು” ಪುಸ್ತಕವು ಈ ನೆಲದ ಎಲ್ಲಾ ತಳಸಮುದಾಯದ ದೇವತೆಗಳನ್ನು ಕುರಿತು ಹೇಳುತ್ತವೆಯಾದರೂ ಅಲ್ಲೆಲ್ಲಿಯೂ ಈ ಡಾಕಿನಿಯೆಂಬ ದೇವತೆಯ ಅಸ್ತಿತ್ವವಿಲ್ಲವೆಂದೇ ಹೇಳಬೇಕಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕ ಜನಪದ ಸ್ತ್ರೀ ದೈವಗಳೂ ಸಾಂಸ್ಕೃತಿಕ ಪದಕೋಶದಲ್ಲಿಯೂ ಈ ಡಾಕಿನಿಯ ಪ್ರಸ್ತಾಪವಿಲ್ಲ.
ಇಷ್ಟೆಲ್ಲಾ ಹೇಳುವ ಕಾರಣವೇನೆಂದರೆ ಒಂದು ಕಾಲದಲ್ಲಿ ಬೌದ್ಧ ಯೋಗಿನಿಯಾಗಿ ಪೂಜೆಗೊಂಡ ಡಾಕಿನಿಯು ನಂತರದ ಕಾಲಘಟ್ಟದಲ್ಲಿ ಇಂತಹ ಕ್ಷುದ್ರ ದೇವತೆಯಾಗಿ ಅವಗಣನೆಗೆ ಅಪಹಾಸ್ಯಕ್ಕೆ ಒಳಗಾದಳು. ಎಂಬುದು ತುಂಬಾ ಕುತೂಹಲಕರವಾದ ಸಂಗತಿಯಾಗಿದೆ. ವೈದಿಕರು ಬೌದ್ಧ ವ್ಯಕ್ತಿಗಳನ್ನು ಇತಿಹಾಸದಲ್ಲಿ ಚಿತ್ರಿಸುವಾಗ ಚಾರಿತ್ರಿಕ ಹಂತಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ ಎನ್ನಲು ಇದಕ್ಕಿಂತ ಸಾಕ್ಷಿ ಬೇಕೆ?!
ಈ ಮೇಲಿನದು ಒಂದು ಸಾಕ್ಷಿಯಾದರೆ25 ನೇ ಡಿಸೆಂಬರ್ 1954ರಲ್ಲಿ ಪೂನಾದ ಹತ್ತಿರ ದೇಹು ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ ಬುದ್ಧ ವಿಹಾರದಲ್ಲಿ ಸ್ಥಾಪಿಸಿರುವ ಒಂದು ಬುದ್ಧ ಪ್ರತಿಮೆಯನ್ನು ಅನಾವರಣಗೊಳಿಸುತ್ತಾ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರರು ಅಲ್ಲಿದ್ದ ಸಭಿಕರಿಗೆ, “ಪಂಡರಾಪುರದಲ್ಲಿರುವ ವಿಠೋಬಾ ನಿಜಕ್ಕೂ ಬುದ್ಧನ ವಿಗ್ರಹವೇ ಆಗಿದೆ. ಪಾಂಡುರಂಗ ಎಂಬ ಹೆಸರು ಪುಂಡಲೀಕ ಶಬ್ದದ ನಿಷ್ಪತ್ತಿಯಾಗಿದೆ ಎನ್ನುತ್ತಾ.
ಪುಂಡಲೀಕ ಅಂದರೆ ಕಮಲ ಮತ್ತು ಪಾಳಿ ಭಾಷೆಯಲ್ಲಿ ಕಮಲವನ್ನು ಪಾಂಡುರಂಗ ಎನ್ನುತ್ತಾರೆ ಆದ್ದರಿಂದ ಪಾಂಡುರಂಗ ಎಂದರೆ ಬುದ್ಧನಲ್ಲದೇ ಬೇರೆ ಯಾರೂ ಅಲ್ಲ. ಬುದ್ಧನೇ ಆಗಿದ್ದಾನೆ. ಪಂಡರಾಪುರದ ಪಂಢರಿನಾಥನ ಬಗ್ಗೆ ಸಂಶೋಧನೆ ನಡೆದಿದೆ. ಪಂಡರಿನಾಥ ದೇವಾಲಯ ಬುದ್ಧನ ದೇವಾಲಯವೆಂದು ನಾನು ಸಿದ್ಧ ಮಾಡಿಕೊಡುವೆ ಎಂದರು.
ಪುಂಡಲೀಕ ಶಬ್ದವೇ ಪಾಂಡುರಂಗವೆಂದು ಪರಿವರ್ತಿತ ಹೊಂದಿದೆ. ಪುಂಡಲೀಕ ಎಂದರೆ ಕಮಲ. ಬುದ್ಧರಲ್ಲಿ ಮೂರ್ತಿ ಪೂಜೆ ಇಲ್ಲ. ಪಾಲಿ ಭಾಷೆಯಲ್ಲಿ ಕಮಲಕ್ಕೆ ಪಾಂಡುರಂಗವೆಂದು ಹೇಳುತ್ತಾರೆ. ಜನರಿಗೆ ಮೋಸ ಮಾಡಲು ಬುದ್ಧನ ಹೆಸರು ತಪ್ಪಿಸಲಾಯಿತು”. ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಬಹುಶಃ ಡಾ.ಅಂಬೇಡ್ಕರರು ಆರೋಗ್ಯ ಸರಿಯಿದ್ದು ಇನ್ನಷ್ಟು ವರ್ಷಗಳು ಕಾಲ ಜೀವಿಸಿದ್ದರೆ ಈ ದೇಶದಲ್ಲಿನ ದೇವಾಲಯದಲ್ಲಿರುವ ಬೌದ್ಧ ಇತಿಹಾಸವನ್ನು ಹಾಗೂ ದೇವರೆಂದು, ರಾಕ್ಷಸರೆಂದು ಪರಿಗಣಿಸಲ್ಪಟ್ಟ ಬೌದ್ಧ ಭಿಕ್ಕು, ಭಿಕ್ಕುಣಿಯರ ಹೆಸರುಗಳನ್ನು ಬಯಲಿಗೆ ಎಳೆಯುತ್ತಿದ್ದರು. ಈ ಕಾರ್ಯ ಮಾಡುವ ಮೊದಲೇ ಅವರು ಅಸ್ತಂತಗರಾದರು.
ಒಟ್ಟಾರೆ ಭಾರತದಲ್ಲಿ ದೇವರೆಂದು ಪೂಜಿಸಲ್ಪಟ್ಟಿದ್ದ ಕೆಲವು ದೆವ್ವ, ಪಿಶಾಚಿ, ರಾಕ್ಷಸರೆಂಬಂತೆ ದುಷ್ಟೀಕರಿಸಲ್ಪಟ್ಟವರು ಬೌದ್ಧ ಭಿಕ್ಕುಗಳು- ಭಿಕ್ಕುಣಿಯರು ಆಗಿದ್ದರೆಂಬುದನ್ನು ಅರಿಯಬಹುದು. ಹಾಗೂ ವೈದಿಕರು ಬೇಕೆಂದೆ ಇವರುಗಳನ್ನು ದುಷ್ಟೀಕರಿಸಿ, ರೌದ್ರಾವತಾರಿಗಳನ್ನಾಗಿ ಮಾಡಿರುವುದು ಸಾಬೀತಾಗುತ್ತದೆ.
ಒಂದು ಕಾಲದಲ್ಲಿ ರಾಜರು ಬೌದ್ಧ ಭಿಕ್ಕು ಭಿಕ್ಕುಣಿಯರಾಗಿದ್ದ ಅದೆಷ್ಟೊ ವ್ಯಕ್ತಿಗಳು ನಮ್ಮ ಕಣ್ಣ ಮುಂದೆಯೇ ದೈಹಿಕವಾಗಿ ವಿರೂಪಗೊಳಿಸಿ, ಚಾರಿತ್ರಿಕವಾಗಿ ಖಳರನ್ನಾಗಿಸಿ, ಕ್ರೂರ, ಕೇಡುಂಟು ಮಾಡುವ ವಿಕೃತರನ್ನಾಗಿಸಿ ದೆವ್ವ ಪಿಶಾಚಿಗಳೆಂಬಂತೆ ಬಿಂಬಿಸಲಾಗಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಇಂತಹ ವ್ಯಕ್ತಿಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಸುವುದು ಅವಶ್ಯಕವಿದೆ. ಇನ್ನಾದರೂ ಎಚ್ಚೆತ್ತುಕೊಂಡು ಬಹುಜನರು ಜಾಗೃತರಾಗಲಿ. ವೈದಿಕರ ಕಟ್ಟುಕತೆಗಳನ್ನು ನಂಬದೇ ಸಂಶೋಧಾನಾತ್ಮಕ ದೃಷ್ಟಿಯಿಂದ ಮುಂದುವರೆಯಲಿ ಎಂದು ಆಶೀಸುತ್ತೇನೆ.
ಆಕರ ಗ್ರಂಥಗಳು
- ಸಂವಾದ. ಮಾಸ ಪತ್ರಿಕೆ. ಅಕ್ಟೋಬರ್. 2020.
- ರಾಮಂದಿರ ಏಕೆ ಬೇಡ?. ಲೇಖಕರು; ಕೆ.ಎಸ್.ಭಗವಾನ್. ಪುಟ 18-19.
- ಕರ್ನಾಟಕ ನಾಥ ಪಂಥ. ಲೇಖಕರು; ರಹಮತ್ ತರೀಕೆರೆ. ಪುಟ-7.
- ಡಾ.ಬಿ.ಆರ್ ಅಂಬೇಡ್ಕರ್ ಭಾಷಣ ಬರಹ. ಸಂಪುಟ–7. ಪುಟ 18.
- ವಿಜಯಕ್ಕನ ವಿಚಾರ ಲಹರಿ. ಲೇಖಕಿ; ಶ್ರೀಮತಿ,ವಿಜಯಾ ಮಹೇಶ್. ಪ್ರಬುದ್ದ ಪ್ರಕಾಶನ 2017.
ಸುದ್ದಿದಿನ.ಕಾಂ|ವಾಟ್ಸಾಪ್|9980346243