ಅಂತರಂಗ
ಫೇಲ್ ಅಥವಾ ಜಸ್ಟ್ ಪಾಸು ಅವಮಾನವಲ್ಲ ; ಪ್ರತಿಭೆಯ ಮಾನದಂಡವಲ್ಲ..!
- ಸುರೇಶ ಎನ್ ಶಿಕಾರಿಪುರ
ನಾ ಹೇಳ್ತೀನಿ, ಫೇಲಾಗಿರೊ ಮಕ್ಕಳು ಅಥವಾ ನಮ್ ಥರ ಜಸ್ಟ್ ಪಾಸಾಗಿರೊ ಮಕ್ಕಳೆ ಜೀವನ ಕಟ್ಕೊಳೋದು, ಜೀವನದ ಪರೀಕ್ಷೆಯಲ್ಲಿ ಸದಾ ಪಾಸಾಗೋದು ಅವರೇ. ಈಗಿರೋದು ಪ್ರತಿಭಾವಂತ ಮಕ್ಕಳ ಬೆರಳು ಕಿತ್ಕೊಳೊ ಶಿಕ್ಷಣ ವ್ಯವಸ್ಥೆ.
ಅಂಕ ಅಂಕ ಅಂಕ. ಅಂಕಕ್ಕಾಗಿ ಕೋಟಿ ಕೋಟಿ ಲೂಟಿ. ರ್ಯಾಂಕ್ ಪಟ್ಟಿ ಫೋಸ್ಟರ್ ಅಂಟಿಸಿ ವ್ಯಾಪಾರ ಮಾಡಲು ಸದಾ ಗಲ್ಲಾಪೆಟ್ಟಿಗೆ ತೆರೆದುಕೊಂಡು ಕುಂತಿರುವ ಖಾಸಗಿ ಶಿಕ್ಷಣ ವ್ಯಾಪಾರಿಗಳು. ಸಾಧನೆ ಅಂದರೆ ಅಂಕವಲ್ಲ. ಸಾಧನೆ ಎಂದರೆ ಯಶಸ್ವಿಯಾಗಿ ಬದುಕು ಕಟ್ಟಿಕೊಳ್ಳುವುದು. ಅದಕ್ಕೆ ಅಂಕದ ಅವಷ್ಯಕತೆ ಇಲ್ಲ. ಅದಕ್ಕೆ ಪ್ರತಿಭೆಯ ಅವಷ್ಯಕತೆ ಇದೆ. ಅಂಕ ಪ್ರತಿಭೆಯ ಮಾನದಂಡವಲ್ಲ. ಅದು ಶಿಕ್ಷಣ ವ್ಯಾಪಾರಿಗಳು ಹುಟ್ಟಿಸಿರುವ ಭ್ರಮೆ.
ನಮ್ಮ ಸಮಾಜದ ಬಹುಪಾಲು ಪೋಷಕರು ಹಗಲಿರುಳು ಬಿಡುವಿಲ್ಲದೆ ದುಡಿಯುವುದು ತಮ್ಮ ಮಕ್ಕಳ ಶಾಲೆಯ ಫೀಜು ತೆರಲು. ಮಕ್ಕಳು ಹುಟ್ಟುತ್ತಿದ್ದಂತೆ ಅವುಗಳನ್ನು ಯಾವ ಶಾಲೆಗೆ ಸೇರಿಸಬೇಕು? ಎಷ್ಟು ಫೀಸು ಕಟ್ಟಬೇಕು ಎಂಬ ಆತಂಕಿತ ಯೋಚನೆಯಲ್ಲೇ ಮಧ್ಯಮವರ್ಗದ ಪೋಷಕರು ದಿನ ಕಳೆಯುತ್ತಾರೆ. ಶ್ರೀಮಂತರಿಗೆ ಹಣದ ಚೆಲ್ಲುವ ಚಿಂತೆ ಭೀತಿಗಳೇ ಇರುವುದಿಲ್ಲ ಬಿಡಿ.
ಇದೆಲ್ಲ ಮಧ್ಯಮ ವರ್ಗದವರ ಪಾಡು. ಇದರ ಬದಲಿಗೆ ಸರ್ಕಾರಿ ಶಾಲೆಗೆ ಸೇರಿಸಿ, ಕಡಿಮೆ ಫೀಸು ಭರಿಸುವ ಯಾವುದಾದರೂ ಟ್ಯೂಷನ್ನಿಗೋ ಅಥವಾ ದಿನದ ಒಂದೆರೆಡು ಗಂಟೆ ಸ್ವತಃ ತಾವೇ ತಮ್ಮ ಮಕ್ಕಳ ಓದು ಬರೆಹದ ಕಡೆ ಗಮನ ಹರಿಸುವುದೋ ಮಾಡಿದರೆ ಖಂಡಿತಾ ಸಾಕು. ಬಹಳಷ್ಟು ಜನಕ್ಕೆ ಇದು ಆಗುವುದಿಲ್ಲ.
ಬಹಳ ಜನ ಮಧ್ಯಮ ವರ್ಗದ ಪೋಷಕರು ಒಂದು ದಿನವೂ ಸಂಜೆ ಐದು ಗಂಟೆಯಿಂದಲೇ ಒಂದಾದಮೇಲೆ ಒಂದರಂತೆ ಪ್ಲೇ ಆಗುವ ತಮ್ಮ ಮೆಚ್ಚಿನ ಸರಣಿ ಧಾರಾವಾಹಿಗಳನ್ನು ಯಾವ ಕಾರಣಕ್ಕು ತಪ್ಪಿಸಿಕೊಳ್ಳಲಾರರು. ಅನ್ನ ತರಕಾರಿ ಬೆಂದಾಗ ಕುಕ್ಕರ್ ಕೂಗಿ ಸಿಗ್ನಲ್ ಕೊಡುತ್ತದೆ. ಹತ್ತು ಹತ್ತುವರೆಯ ಕೊನೆಯ ಧಾರಾವಾಹಿ ನೋಡಿ ಪೂರೈಸಿದ ಬಳಿಕವೇ ಊಟ. ಬಹುಪಾಲು ಹೀಗೇ ಆಗುತ್ತಿದೆ.
ಮಕ್ಕಳ ಓದು ಬರೆಹದ ಕಡೆಗೆ ನಾವೆಷ್ಟು ಗಮನ ಹರಿಸುತ್ತಿದ್ದೇವೆ ಎಂದು ಪೋಷಕರೂ ಈ ನಿಟ್ಟಿನಲ್ಲಿ ಯೋಚಿಸಬೇಕಲ್ಲವೇ? ತಮ್ಮ ಬದುಕಿನ ಈ ಸೂಕ್ಷ್ಮವನ್ನು ಸ್ವಲ್ಪವೇ ಸ್ವಲ್ಪ ಅರ್ಥ ಮಾಡಿಕೊಂಡರೂ ಮಕ್ಕಳನ್ನು ಎಷ್ಟು ನಿರಾಯಾಸವಾಗಿ ಸರ್ಕಾರಿ ಶಾಲೆಯಲ್ಲೇ ಓದಿಸಬಹುದು. ಅವುಗಳನ್ನು ಬದುಕುವ ಮಕ್ಕಳನ್ನಾಗಿ ಪ್ರಕೃತಿಯ ಮಕ್ಕಳನ್ನಾಗಿ, ಸಧೃಡ ಮನಸ್ವಿಗಳನ್ನಾಗಿ, ಸಂಕೀರ್ಣ ವ್ಯಕ್ತಿತ್ವಗಳನ್ನಾಗಿ, ಅವರೆಲ್ಲ ನೈಸರ್ಗಿಕ ಅವಕಾಶ ಹಕ್ಕುಗಳಿಗೆ ವಂಚನೆಯಾಗದಂತೆ ಬೆಳೆಸಬಹುದಲ್ಲವೇ?
ಹೆಚ್ಚು ಅಂಕ ತೆಗೆದು ಸಂಭ್ರಮಿಸುತ್ತಿರುವ ಮಕ್ಕಳನ್ನು ಅವರ ಪೋಷಕರನ್ನು ಅಭಿನಂದಿಸೋಣ. ಆದರೆ ಹೆಚ್ಚು ಅಂಕ ತೆಗೆಯದ, ಜಸ್ಟ್ ಪಾಸಾದ, ಅಥವಾ ಫೇಲ್ಡ್ ಆದ ಮಕ್ಕಳ ಪರವಾಗಿಯೇ ನಿಲ್ಲೋಣ. ಎಸ್ ಎಸ್ ಎಲ್ ಸಿ, ಸೆಕೆಂಡ್ ಪಿಯುಸಿ ಪಾಸು ಫೇಲು ರ್ಯಾಂಕುಗಳೇ ನಮ್ಮ ಜೀವನದ ಎಲ್ಲವನ್ನೂ ನಿರ್ಧರಿಸಲಾರವು.
ಓದಿ ಉದ್ಯೋಗಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುವ ಯುವಕರಿಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿ ಕಡೆಗೆ ಪಕೋಡಾ ಮಾರಿ ಜೀವಿಸಲು ಅಧ್ಬುತ ಸಲಹೆ ನೀಡಿದ ನಾಯಕರುಗಳೂ ಇದ್ದಾರೆ ಎನ್ನುವುದು ಎಲ್ಲರ ಎಚ್ಚರದಲ್ಲಿರಬೇಕು. ಅಂಕ ಬೆನ್ನಟ್ಟಿ ಹೋದವರಿಗೆ ಜೀವನ ಮಾರ್ಗಗಳು ಅತ್ಯಂತ ಸೀಮಿತ. ಟಾರ್ಗೆಟ್ ಇಟ್ಟುಕೊಂಡೇ ಓದಿರುತ್ತಾರೆ ಅಥವಾ ಪೋಷಕರು ಓದಿಸಿರುತ್ತಾರೆ. ಅವರಿಗೆ ಟಾರ್ಗೆಟ್ ರೀಚಾಗದಿದ್ದಾಗ ಬೇರೆ ಮಾರ್ಗಗಳು ಅಪರಿಚಿತ, ಕಠಿಣ ಕವಲು ದಾರಿಗಳು. ನಮ್ಮ ಉಂಡಾಡಿ ಜಸ್ಟ್ ಪಾಸು ಫೇಲುಗಳಿಗೆ ದಾರಿ ನೂರಿವೆ ಬದುಕಿನರಮನೆಗೆ… ಅವು ಗಾಳಿಯಂತೆ ನೀರಿನಂತೆ ಎಲ್ಲಿ ಬೇಕಾದರೂ ನುಸುಳಿ ಬದುಕು ಜಯಿಸಬಲ್ಲವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243